Saturday, December 24, 2011
ಗೆಳೆಯ ಕುಂಟಿನಿ ಬರೆದ ಮುನ್ನುಡಿ
ಪ್ರತಿಭಾ ನಂದಕುಮಾರ್ ಪ್ರೀತಿಗೆ ಕೃತಜ್ಞನಾಗುತ್ತಾ...
Jogi, one of the most read contemporary writers, intrigues by saying that his latest book has ‘stories that are not stories’
Ever wondered why some writers have a large fan following and some don’t? Ask Girish Rao Hatwar, who writes under the pen name Jogi and is one of the most read contemporary writers, and he shrugs with a ‘I don’t know’ look.
But his contribution to the Kannada literary world is indisputably among those of the greatest significance in recent times. Hence, readers (also writers) extend unconditional love and affection to him.
There is something about Jogi that makes him stand out among his colleagues, many of them hungry for fame, in the current Kannada scene.
He is described as a ‘writing machine’ though he has published only 22 books, unlike some of the ‘pop’ writers who publish ‘a novel a month’ and still remain unread. “Despite penning only six novels, six collections of short stories and nine collections of column writings, which is not a huge number, people have this feeling that I write a lot.
“Maybe because most of my columns are picked up and republished or the link is given in other blogs as well. My blog Jogi Mane (which has now become jogeemane) has a good number of loyal readers. My column in a popular weekly gets posted in several portals. Hence, people think I write a lot.”
The way Jogi, and his colleague/friend Udaya Marakini, brought about a change in Sunday supplements is fit for analysis. Jogi turned the dull and dreary content of supplements to trendy, crisp, contemporary and introduced many new talents, which brought in new readers. His eye for the extraordinary has never failed him.
He has written the story, screenplay and dialogues for 12 daily soaps for Kannada TV channels. Starting with Yashwanth Chital’s Shikari, the then most popular Guptagamini and Preeti Illada Mele, he brought in a fresh outlook to TV serials. His stories create a warm world in the minds of the readers and his characters seem familiar. I always feel Jogi understands contemporary women better than anybody else, at least in Kannada.
His story Kada Beladingalu was made into a film by Lingadevaru and got the state award for best story and screenplay. When Jogi switched from writing to the visual media, everybody thought that he would create wonders in that field too.
However, they were disappointed. “The visual media does not need a writer. I felt I was not needed there and immediately quit. I returned to the world of the written words where I feel at home.”
Jogi has written novels, short stories, scripts and various columns, but what about poems?
“I am a fan of poetry but not a poet,” he says with a smile.
Ask him what ails the current Kannada literary scene, he is quick to point out that “nobody reads the works of others. Nobody writes about other writers. Each one is engrossed in his or her own world. Earlier, writers used to read, write and discuss other writers. Even the write-ups one sees in newspapers and magazines are typically journalistic in nature.
“They write about the book launch, but never about the contents of the book. When did you last read an in depth analysis of a book? Forget analytical writing, there are no introductions to a book. Literary appreciation is fast becoming a rare thing.”
This Sunday, his new book FACEBOOK.COM/Manasa Joshi (publisher: Ankita Pustaka) is being released. “I am experimenting with the story form. You can call them stories that are not stories,” he says.
It has raised expectations like few books have in recent times. If you want to be among the first to know what he has come up with this time, be at the Indian Institute of World Culture on Sunday at 10.30 am.
(PRATHIBHA NANDAKUMAR Poet, writer, playwright and documentary filmmaker)
Jogi’s new book FACEBOOK.COM/Manasa Joshi will be released on Sunday
Saturday, March 12, 2011
ಪತ್ತೇದಾರ ಪುರುಷೋತ್ತಮ (ಒಂದು ಕತೆ)
ಎಂ ಎಸ್ ಪುಟ್ಟಣ್ಣಯ್ಯ `ಮಾಡಿದ್ದುಣ್ಣೋ ಮಹಾರಾಯ’, `ಮುಸುಕು ತೆಗೆಯೇ ಮಾಯಾಂಗನೆ’ ಮುಂತಾದ ಕಾದಂಬರಿಗಳನ್ನು ಬರೆದು ಅಜರಾಮರರಾದರು. ಕಾದಂಬರಿ ಪ್ರಕಾರದ ಹರಿಕಾರರೆಂದು ಹೆಸರಾದರು. ಆ ನಂತರ ಅನೇಕರು ಕಾದಂಬರಿ ಪ್ರಕಾರಕ್ಕೆ ನೀರೆರೆದು ಬೆಳೆಸಿದರು. ಬೇರೆ ಬೇರೆ ಪ್ರಕಾರದ ಕಾದಂಬರಿಗಳು ಬಂದವು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಪತ್ತೇದಾರಿ, ರೋಮಾಂಚಕ, ಪ್ರಣಯ- ಹೀಗೆ ಒಂದೊಂದು ಪ್ರಕಾರಗಳಲ್ಲಿ ಒಬ್ಬೊಬ್ಬರು ಅತ್ಯುತ್ತಮವಾದ ಸಾಧನೆ ಮಾಡಿ ಹೆಸರಾದರು.
ಕನ್ನಡದ ಓದುಗರನ್ನು ಆ ಕಾಲಕ್ಕೆ ಸೆಳೆದವರು ಅನೇಕರು. ತ್ರಿವೇಣಿ, ಎಂಕೆ ಇಂದಿರಾ, ಟಿಕೆ ರಾಮಾರಾವ್, ಭಾರತೀಪ್ರಿಯ, ಭಾರತೀಸುತ, ಕೆ.ಟಿ ಗಟ್ಟಿ ಮುಂತಾದ ಲೇಖಕರು ಒಂದಕ್ಕಿಂತ ಒಂದು ಸೊಗಸಾದ ಕಾದಂಬರಿಗಳನ್ನು ಬರೆದುಕೊಟ್ಟು ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದರು.
ಇವರ ಮಧ್ಯೆ ಎಸ್ ಎಲ್ ಭೈರಪ್ಪ, ಶಿವರಾಮ ಕಾರಂತ ಮುಂತಾದವರು ತಮ್ಮದೇ ಮಾರ್ಗದಲ್ಲಿ ನಡೆದು, ತಮ್ಮದೇ ಶೈಲಿಯ ಕಾದಂಬರಿಗಳನ್ನು ಬರೆದು ಓದುಗರ ತಿಳುವಳಿಕೆಗೂ ಭಾವಶ್ರೀಮಂತಿಕೆಗೂ ಕಾರಣರಾದರು. ಅನೇಕ ಅನುವಾದಿತ ಕಾದಂಬರಿಗಳೂ ಬಂದವು. ಇಂಗ್ಲಿಷ್, ಫ್ರೆಂಚ್, ಐರಿಷ್, ಝೆಕ್- ಹೀಗೆ ಹಲವು ದೇಶಭಾಷೆಯ ಕಾದಂಬರಿಗಳೂ ಕನ್ನಡಕ್ಕೆ ಬಂದವು. ಇಷ್ಟೆಲ್ಲ ಬಂದರೂ ಓದುಗರ ಹಸಿವು ಹಿಂಗಿದಂತೆ ಕಾಣಲಿಲ್ಲ. ಪ್ರತಿಯೊಂದು ಹೊಸ ಕಾದಂಬರಿಯೂ ಸಾವಿರಾರು ಪ್ರತಿ ಮಾರಾಟವಾಗುತ್ತಿತ್ತು. ತರಾಸು, ರಾಮಮೂರ್ತಿ ಮುಂತಾದ ಲೇಖಕರು ಲಕ್ಷಾಂತರ ಪ್ರತಿಗಳನ್ನು ಮಾರಿದ್ದೂ ಇದೆ. ಕನ್ನಡದ ಓದುಗರ ಮನಸ್ಸಿನಲ್ಲಿ ನೆಲೆಸಿದ್ದೂ ಆರಂಭದ ದಿನಗಳಲ್ಲಿ ಬಂದ ಕಾದಂಬರಿಗಳೇ. ಇವತ್ತಿಗೂ ಕಾದಂಬರಿಕಾರ ಎಂದರೆ ಥಟ್ಟನೆ ನೆನಪಾಗುವುದು ಶಿವರಾಮ ಕಾರಂತರು. ಇವತ್ತಿಗೂ ಬರೆಯುತ್ತಿರುವವರ ಪೈಕಿ ಭೈರಪ್ಪನವರು. ಅಕ್ಷರ ಪ್ರೀತಿ ಇರುವ ಎಲ್ಲರೂ ಭೈರಪ್ಪನವರ, ಕಾರಂತರ ಒಂದೊಂದು ಕಾದಂಬರಿಯನ್ನಾದರೂ ಓದಿಯೇ ಇರುತ್ತಾರೆ.
ಧಾರಾವಾಹಿಗಳ ಜನಪ್ರಿಯತೆಯನ್ನು ಕಂಡ ಪತ್ರಿಕೆಗಳು ಧಾರಾವಾಹಿಯನ್ನು ಪ್ರಕಟಿಸತೊಡಗಿದವು. ಎಲ್ಲ ಜನಪ್ರಿಯ ಲೇಖಕರ ಕಾದಂಬರಿಗಳೂ ಧಾರಾವಾಹಿಯಾಗಿ ಪ್ರಕಟಗೊಂಡವು. ವಾರಪತ್ರಿಕೆಗಳಲ್ಲಿ ಕಂತುಕಂತಾಗಿ ಪ್ರಕಟವಾಗುತ್ತಿದ್ದ ಕಾದಂಬರಿಗಳನ್ನು ಓದಲು ಓದುಗರು ಮುಗಿಬಿದ್ದರು. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳಂತೂ ಮಾರಾಟದಲ್ಲಿ ದಾಖಲೆ ನಿರ್ಮಿಸಿದವು
ಈ ಮಧ್ಯೆ ಓದುವುದಕ್ಕೆ ಆಗಷ್ಟೇ ಆರಂಭಿಸಿದವರನ್ನು ಸೆಳೆದದ್ದು ಪತ್ತೇದಾರಿ ಕಾದಂಬರಿಗಳು.. ಪತ್ರೇದಾರಿ ಕಾದಂಬರಿ ಎಂದಾಗ ನೆನಪಾಗುವ ಮೊದಲ ಹೆಸರು ಎನ್. ನರಸಿಂಹಯ್ಯ. ಅವರು ಮುನ್ನೂರೋ ನಾನ್ನೂರೋ ಕಾದಂಬರಿಗಳನ್ನು ಬರೆದು ಪ್ರಖ್ಯಾತಿ ಪಡೆದರು. ಅವರ ಜೊತೆಗೇ ಜಿಂದೆ ನಂಜುಂಡಸ್ವಾಮಿ, ಸುದರ್ಶನ ದೇಸಾಯಿ ಮುಂತಾದವರೂ ರೋಚಕ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಎಚ್ ಕೆ. ಅನಂತರಾಮ್ ರಾಜಕೀಯದ ಸ್ಪರ್ಶವಿರುವ ಕಾದಂಬರಿಗಳಿಂದ ಮನೆಮಾತಾದರು. ಇವರೆಲ್ಲರನ್ನು ಓದುತ್ತಿದ್ದ ಕನ್ನಡದ ಓದುಗವರ್ಗದ ಅಭಿರುಚಿಯನ್ನು ಬದಲಾಯಿಸುವಂಥ ಘಟನೆಗಳು ತೊಂಬತ್ತರ ದಶಕದಲ್ಲಿ ನಡೆದವು.
೧೯೯೦ರ ಸುಮಾರಿಗೆ ಕನ್ನಡ ಜನಪ್ರಿಯ ಸಾಹಿತ್ಯಲೋಕಕ್ಕೆ ಯಂಡಮೂರಿ ವೀರೇಂದ್ರನಾಥ್ ಕಾಲಿಟ್ಟರು. ವಾರಪತ್ರಿಕೆಗಳು ಯಂಡಮೂರಿ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸತೊಡಗಿದವು. ತೆಲುಗಿನಲ್ಲಿ ದಂಡಿಯಾಗಿ ಬರೆಯುತ್ತಿದ್ದ ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳು ಯಾವ ಮಟ್ಟದ ಜನಪ್ರಿಯತೆ ಗಳಿಸಿತು ಎಂದರೆ ಉಳಿದೆಲ್ಲ ಲೇಖಕರು ಒಂದೇ ಏಟಿಗೆ ಮೂಲೆಗುಂಪಾಗಿ ಹೋದರು.
ಯಂಡಮೂರಿ ವೀರೇಂದ್ರನಾಥರ ಜೊತೆಗೇ ಮಲ್ಲಾದಿ ವೆಂಕಟಕೃಷ್ಣ, ಅಬಿದ್ ಸುರತಿ ಮುಂತಾದವರು ಬರೆಯಲು ಆರಂಭಿಸಿದರು. ಆ ಹೊತ್ತಿಗಾಗಲೇ ಟಿಕೆ ರಾಮರಾವ್ ಕಣ್ಮರೆಯಾಗಿದ್ದರು. ಉಳಿದ ಲೇಖಕರು ಕ್ರಮೇಣ ಮಾಸುತ್ತಾ ಹೋದರು. ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ರೋಚಕತೆಯನ್ನು ಕಾಯ್ದಿರಿಸುವ ಮೂಲಕ ಅವರು ಇನ್ನಿಲ್ಲದ ಜನಪ್ರಿಯತೆಯನ್ನು ಸಂಪಾದಿಸಿದರು. ಪ್ರಕಾಶನ ಸಂಸ್ಥೆಗಳು ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳಿಗೆ ಮುಗಿಬಿದ್ದರು. ಅವರ ನಂತರದ ದಿನಗಳಲ್ಲಿ ಆ ಮಟ್ಟಿನ ಜನಪ್ರಿಯತೆಯನ್ನು ಗಳಿಸಿದ್ದು ರವಿ ಬೆಳಗೆರೆ ಕಾದಂಬರಿಗಳೇ ಅನ್ನಬೇಕು.
ಯಾವಾಗ ಯಂಡಮೂರಿ ಬರೆಯಲು ಆರಂಭಿಸಿದರೋ, ಆ ಹೊತ್ತಿಗೆ ಕೇವಲ ಲೇಖಕರು ಮಾತ್ರ ನಿರುದ್ಯೋಗಿಗಳಾಗಲಿಲ್ಲ. ಕೆಲಸ ಕಳೆದುಕೊಂಡು ಸುತ್ತಾಡುತ್ತಿದ್ದ, ಹೊಸ ಕೆಲಸಕ್ಕಾಗಿ ಹಾತೊರೆಯುತ್ತಿದ್ದ, ತಮ್ಮ ಪ್ರತಿಭೆಯ ಪ್ರದರ್ಶನಕ್ಕಾಗಿ ಕಾಯುತ್ತಿದ್ದವರ ಪಟ್ಟಿಯಲ್ಲಿ ಇನ್ನೂ ಕೆಲವರಿದ್ದಾರೆ. ಅವರ ಹೆಸರು ಅರಿಂಜಯ ಮತ್ತು ಪುರುಷೋತ್ತಮ.
-೨-
ಸುಮಾರು ನೂರಕ್ಕೂ ಹೆಚ್ಚು ಕೊಲೆ ಪ್ರಕರಣಗಳನ್ನು ಬೇದಿಸಿದ, ಸಾವಿರಾರು ಅಪರಾಧಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಅಪ್ರತಿಮ ಧೈರ್ಯಶಾಲಿ ಪುರುಷೋತ್ತಮ ಖಿನ್ನನಾಗಿ ಕೂತಿದ್ದ. ತನಗೆ ಇಂಥದ್ದೊಂದು ಸ್ಥಿತಿ ಬರುತ್ತದೆ ಅನ್ನುವ ಸಣ್ಣ ಕಲ್ಪನೆಯೂ ಅವನಿಗಿರಲಿಲ್ಲ. ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿತ್ತು. ದಿನಕ್ಕೆ ನೂರಾರು ಮಂದಿ ವಿವಿಧ ಕಾರಣಗಳಿಗೋಸ್ಕರ ಕೊಲೆಯಾಗುತ್ತಿದ್ದವು. ಹೆಂಡತಿಯನ್ನು ಗಂಡ ಕೊಲೆ ಮಾಡುತ್ತಿದ್ದ. ಗಂಡನನ್ನು ಹೆಂಡತಿ ಕೊಲೆ ಮಾಡುತ್ತಿದ್ದಳು. ಮಾಲೀಕನನ್ನು ಉದ್ಯೋಗಿ ಕೊಲೆ ಮಾಡುತ್ತಿದ್ದ. ಯಾವುದೇ ಸುಳಿವಿಲ್ಲದೆ ಹರೆಯದ ಹೆಣ್ಣೊಬ್ಬಳು ಕಣ್ಮರೆಯಾಗುತ್ತಿದ್ದಳು.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ಪುರುಷೋತ್ತಮ ನೋಡುತ್ತಿದ್ದ. ಎಷ್ಟೋ ಪ್ರಸಂಗಗಳನ್ನು ಅವನು ತನ್ನ ಕುತೂಹಲಕ್ಕೆಂಬಂತೆ ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದ. ಆಗೆಲ್ಲ ಅವನಿಗೆ ಅಪರಾಧಿ ಯಾರೆಂಬುದು ಅರಿವಿಗೆ ಬರುತ್ತಿತ್ತು. ಅದನ್ನು ಪೊಲೀಸರಿಗೆ ಹೇಳಬೇಕು ಅಂತ ಎಷ್ಟೋ ಸಲ ಅಂದುಕೊಳ್ಳುತ್ತಿದ್ದ. ಆದರೆ ಪೊಲೀಸರು ತಮಗೆ ಅದರಲ್ಲಿ ಆಸಕ್ತಿಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದರು. ಒಂದು ಸಲ ಫೋನ್ ಮಾಡಿದಾಗ ಇನ್ಸ್ಪೆಕ್ಟರ್ ಒಬ್ಬ ರೇಗಿದ್ದ: ನಮಗೆ ಖಾಸಗಿ ಪತ್ತೇದಾರರು ಬೇಕಾಗಿಲ್ಲ. ಯಾವುದಾದರೂ ಸೆಕ್ಯೂರಿಟಿ ಏಜೆನ್ಸಿ ತೆರೆಯಿರಿ. ಅದೇ ನಿಮ್ಮ ಯೋಗ್ಯತೆ’ ಎಂದಿದ್ದ. ಆವತ್ತಿನಿಂದ ಪುರುಷೋತ್ತಮ ಪೊಲೀಸರಿಗೆ ಫೋನು ಮಾಡುವುದನ್ನು ಬಿಟ್ಟುಬಿಟ್ಟಿದ್ದ.
ಕೊಲೆಯಾದವರ ಸಂಬಂಧಿಕರು ಕೂಡ ಪುರುಷೋತ್ತಮನನ್ನು ಸಂಪರ್ಕಿಸುತ್ತಿರಲಿಲ್ಲ. ಅವನ ಆಫೀಸು ಅದೇ ಜಾಗದಲ್ಲಿ ಆದೇ ಸ್ಥಿತಿಯಲ್ಲಿದ್ದರೂ ಅದರೊಳಗೆ ಯಾರೂ ಕಾಲಿಡುತ್ತಿರಲಿಲ್ಲ. ಹಾಗಾದಾಗ ಎಷ್ಟೋ ಸಲ ಅವನಿಗೆ ಅನುಮಾನ ಬರುತ್ತಿತ್ತು. ಹೆಂಡತಿ ಕೊಲೆಯಾದಾಗ ಗಂಡ, ಮಗ ಕೊಲೆಯಾದಾಗ ಅಪ್ಪ ತನ್ನನ್ನು ಸಂಪರ್ಕಿಸಬೇಕಾಗಿತ್ತು. ಕೊಲೆಗಾರನನ್ನು ಹಿಡಿದುಕೊಡಿ ಎಂದು ಕೇಳಿಕೊಳ್ಳಬೇಕಾಗಿತ್ತು. ಆದರೆ ಅಂಥ ಯಾವ ಉತ್ಸಾಹವೂ ಬದುಕಿರುವವರಲ್ಲಿ
ಯಾಕಿಲ್ಲ ಎಂದು ಅಚ್ಚರಿಗೊಳ್ಳುತ್ತಿದ್ದ. ಅವನು ನೋಡಿದ ಪ್ರಕಾರ, ಈ ಕಾಲದಲ್ಲಿ ಅತ್ಯಂತ ಹೆಚ್ಚು ಜಾಣ್ಮೆಯಿಂದ ಕೊಲೆಗಳನ್ನು ಅಪರಾಧಗಳನ್ನು ಪತ್ತೆ ಮಾಡುತ್ತಿದ್ದವನು ಪತ್ತೇದಾರ ಅಲ್ಲ, ಒಬ್ಬ ವಕೀಲ. ಸಿ ಎಸ್ ಪಿ ಎಂಬ ವಕೀಲ ಮಾತ್ರ ಅಪರಾಧಗಳನ್ನು ಪತ್ತೆ ಹಚ್ಚುವ ಕಲೆಯಲ್ಲಿ ನಿಷ್ಣಾತನಾದಂತೆ ಕಾಣಿಸುತ್ತಿದ್ದ. ಅವನನ್ನೂ ಪೊಲೀಸರು ಬಳಸಿಕೊಳ್ಳುತ್ತಿರಲಿಲ್ಲ. ರಾಜಕಾರಣಿಗಳು ಅವನ ವಿರೋಧಿಗಳಾಗಿದ್ದರು. ಸಹಜವಾಗಿ ಪೊಲೀಸರಿಗೂ ಅವನ ಮೇಲೆ ಸಿಟ್ಟಿತ್ತು. ಒಮ್ಮೊಮ್ಮೆ ಪೊಲೀಸ್ ಅಧಿಕಾರಿಗಳ ಭ್ರಷ್ಟತೆಯನ್ನೂ ಅವನು ಬಯಲಿಗೆಳೆಯುತ್ತಿದ್ದ.
ಇವೆಲ್ಲವನ್ನೂ ನೋಡುತ್ತಿದ್ದಂತೆ ಪುರುಷೋತ್ತಮನಿಗೊಂದು ಅನುಮಾನ ಕಾಡುತ್ತಿತ್ತು. ಕೇವಲ ತನ್ನನ್ನು ಮಾತ್ರ ಈ ನಿರುದ್ಯೋಗ ಕಾಡುತ್ತಿದೆಯಾ ಅಥವಾ ಬೇರೆ ಪತ್ತೇದಾರರೂ ಹೀಗೇ ಕಷ್ಟ ಅನುಭವಿಸುತ್ತಿದ್ದಾರಾ ಎಂದು ತಿಳಿದುಕೊಳ್ಳುವ ಆಸೆಯಾಯಿತು. ಹಾಗೆ ಹುಡುಕುತ್ತಾ ಹೋದವ ಹೇಗೋ ಮಾಡಿ ಪತ್ತೇದಾರ ಅರಿಂಜಯನ ಪತ್ತೆ ಮಾಡಿ, ಅವನನ್ನು ಒಂದು ದಿನ ಭೇಟಿಯಾದ.
ಅವನ ಪರಿಸ್ಥಿತಿಯೂ ಪುರುಷೋತ್ತಮನದಕ್ಕಿಂತ ಉತ್ತಮವಾಗೇನೂ ಇರಲಿಲ್ಲ. ಅವನಿಗೂ ಕೇಸು ಬರದೇ ವರ್ಷಗಳೇ ಆಗಿದ್ದವು. ಅವನೂ ಕೂಡ ಪುರುಷೋತ್ತಮ ಕೇಳಿಕೊಂಡಂಥ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಕೂತಿದ್ದ. ಅವರಿಬ್ಬರ ಮಧ್ಯೆ ಒಂದಷ್ಟು ಮಾತಾಯಿತು:
ಪುರುಷೋತ್ತಮ: ಕೊಲೆಯಾಯಿತು, ರಕ್ತಪಾತವಾಯಿತು ಎಂಬ ವಿಚಾರದಲ್ಲಿ ಇರುವಷ್ಟು ಆಸಕ್ತಿ, ಯಾರು ಕೊಲೆ ಮಾಡಿದರು, ಯಾಕೆ ಕೊಲೆ ಮಾಡಿದರು, ಕೊಲೆಗಾರನಿಗೆ ಶಿಕ್ಷೆಯಾಯಿತೇ ಎಂದು ತಿಳಿದುಕೊಳ್ಳುವ ವಿಚಾರದಲ್ಲಿ ಇಲ್ಲ.
ಅರಿಂಜಯ: ನಾನೂ ಗಮನಿಸಿದ್ದೇನೆ. ಈಗಿನ ಮಂದಿಗೆ ಕೊಲೆಗಾರ ಮುಖ್ಯವೇ ಅಲ್ಲ.
ಪುರುಷೋತ್ತಮ: ಕೊಲೆಯ ರೋಚಕತೆ, ಅಪರಾಧದ ರೋಚಕತೆಯನ್ನಷ್ಟೇ ಅವರು ನೋಡುತ್ತಾರೆ. ಆಮೇಲೇನಾಯಿತು ಎಂದು ಅವರು ಗಮನಿಸುವುದಕ್ಕೆ ಹೋಗುವುದೇ ಇಲ್ಲ.
ಅರಿಜಂಯ: ನಾನೂ ನೋಡ್ತಾ ಇದ್ದೆ. ಸಿಕ್ಕಾಪಟ್ಟೆ ಕೊಲೆಗಳು, ಕಳ್ಳತನಗಳು, ದರೋಡೆಗಳು ನಡೆಯುತ್ತಿವೆ. ನಮಗೆ ಕೈತುಂಬ ಕೆಲಸ ಸಿಗುತ್ತದೆ ಅಂತ ಸಣ್ಣ ಸಂತೋಷವೂ ಇತ್ತು. ಆದರೆ ಈಗ ನಿರಾಸೆಯಾಗಿದೆ.
ಪುರುಷೋತ್ತಮ: ಈಗ ಕೊಲೆಯಾಗುವುದು ಅಂಥ ಬೆಚ್ಚಿಬೀಳಿಸುವ ಸಂಗತಿ ಅಲ್ಲವೇ ಅಲ್ಲ. ಅದೊಂದು ಸಹಜ ವ್ಯಾಪಾರ. ಕೊಲೆಗಾರ ಯಾರು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಅದು ಗೊತ್ತಿದ್ದ ಮೇಲೆ ಪತ್ತೆ ಮಾಡುವಂಥದ್ದೇನಿದೆ. ನಮ್ಮ ವರದಿ, ತನಿಖೆ ಯಾರಿಗೆ ಬೇಕು.
ಅರಿಂಜಯ: ಈಗ ನಾವೇನು ಮಾಡಬಹುದು ಅಂತ ನಿನಗನ್ನಿಸುತ್ತದೆ.
ಪುರುಷೋತ್ತಮ: ಯಾವ ಸಮಾಜದಲ್ಲಿ ಕೆಲವೇ ಕೆಲವು ಅಪರಾಧಿಗಳಿರುತ್ತಾರೋ, ಎಲ್ಲಿ ಶಿಕ್ಷೆಯ ಬಗ್ಗೆ ಭಯ ಇರುತ್ತದೋ, ಎಲ್ಲಿ ಮಂದಿಗೆ ಅವಮಾನ ಆಗುತ್ತದೋ ಅಲ್ಲಿ ನಮಗೂ ಕೆಲಸ ಇರುತ್ತೆ. ಆದರೆ ಈ ಕಾಲದಲ್ಲಿ ಬಹುತೇಕರು ಅಪರಾಧಿಗಳೇ, ಶಿಕ್ಷೆಯ ಭಯ ಯಾರಿಗೂ ಇಲ್ಲ, ಅಪರಾಧಿ ಎಂದು ಸಾಬೀತಾದರೂ ಯಾರಿಗೂ ಅವಮಾನ ಆಗುವುದಿಲ್ಲ. ಅಂದ ಮೇಲೆ ನಮಗೆ ಕೆಲಸ ಇಲ್ಲ.
ಅರಿಂಜಯ: ನಮಗೇ ಇಲ್ಲವೆಂದ ಮೇಲೆ ನಮ್ಮ ಸೃಷ್ಟಿಕರ್ತನಿಗೆ.
-೩-
ಎನ್ . ನರಸಿಂಹಯ್ಯನವರು ಪತ್ತೇದಾರಿ ಕಾದಂಬರಿ ಬರೆಯುವುದನ್ನು ನಿಲ್ಲಿಸಿ ವರ್ಷಗಳೇ ಆಗಿವೆ.
Sunday, November 28, 2010
ಕಾರ್ನಾಡರನ್ನು ಪ್ರೀತಿಸುತ್ತಾ...
ಸಿನಿಮಾ ನಿರ್ದೇಶಕರನ್ನೂ ಪತ್ರಕರ್ತರು ಹಾಗಂತ ಕೇಳುವುದುಂಟು. ನಿಮ್ಮ ಸಿನಿಮಾದ ಸಂದೇಶ ಏನು. ಸಮಾಜಕ್ಕೆ ಏನು ಸಂದೇಶ ಕೊಡುತ್ತೀರಿ, ಈ ಸಿನಿಮಾ ಕೆಟ್ಟ ಸಂದೇಶ ನೀಡುವುದಿಲ್ಲವೇ –ಹೀಗೆ ಸಾಗುತ್ತದೆ ಪ್ರಶ್ನೆಗಳ ಸರಮಾಲೆ. ಸಂದೇಶ ಕೊಡುವುದಕ್ಕೆ ಸಿನಿಮಾ ಪ್ರನಾಳಿಕೆಯೋ ಒಡಂಬಡಿಕೆಯೋ ಅಲ್ಲವಲ್ಲ. ಅದು ಬದುಕಿನ ಪ್ರತಿಬಿಂಬ ಮಾತ್ರ.ಒಂದು ಜೀವ ನಮ್ಮೆದುರು ಬದುಕಿದ್ದನ್ನು ನೋಡುವಾಗ ನಮಗೆ ಅದರಿಂದ ಏನು ಹುಟ್ಟುತ್ತದೆಯೋ ಅದಷ್ಟೇ ಸಂದೇಶ. ಏನೂ ಹುಟ್ಟದೇ ಹೋಗುವ ಸಾಧ್ಯತೆಯೂ ಉಂಟು. ಅದು ಆ ಜೀವದ ಸೋಲಂತೂ ಅಲ್ಲ. ಯಾಕೆಂದರೆ ಯಾರೂ ಸಂದೇಶ ಕೊಡುವುದಕ್ಕೆಂದೇ ಬದುಕುವುದಿಲ್ಲ.
ಮೊನ್ನೆ ಹೀಗಾಯಿತು. ಗಿರೀಶ್ ಕಾರ್ನಾಡರ ನಾಟಕಗಳ ಮಾತು ಬಂತು. ನಮ್ಮನ್ನು ಈಗಲೂ ಸೆಳೆಯುವ ನಾಟಕಕಾರ ಗಿರೀಶ್. ಅವರ ನಾಟಕಗಳ ಪಾತ್ರಗಳು ಜೀವಂತವಾಗಿರುತ್ತವೆ. ಹಲವು ವ್ಯಕ್ತಿತ್ವಗಳನ್ನು ಒಳಗೊಂಡಿರುತ್ತವೆ. ಸಂಕೀರ್ಣವಾಗಿರುತ್ತವೆ. ಸರಿತಪ್ಪುಗಳಾಚೆಗೂ ಬದುಕಬಲ್ಲ ತೀವ್ರತೆ ಇರುತ್ತವೆ. ಹೀಗೆಲ್ಲ ಮಾತಾಡುತ್ತಾ ತುಘಲಕ್ ಬಗ್ಗೆ ಮಾತಾಡುತ್ತಿರಬೇಕಾದರೆ `ತುಘಲಕ್ ನಾಟಕದ ಸಂದೇಶ ಏನು ಹೇಳು ನೋಡೋಣ’ ಎಂಬ ಸವಾಲು ಎದುರಾಯಿತು.
ಕೆಲವೊಮ್ಮೆ ವಿಚಿತ್ರ ಮುಜುಗರಗಳಾಗುತ್ತವೆ. ಸಾಹಿತ್ಯ ಕೃತಿಗಳನ್ನು ಹೀಗೇ ಅಂತ ವಿವರಿಸುವುದು ಕಷ್ಟ. ಅದು ಪ್ರೀತಿಯ ಹಾಗೆ. ನೀನು ಅವಳನ್ನೇ ಯಾಕೆ ಪ್ರೀತಿಸುತ್ತೀಯಾ ಎಂಬ ಪ್ರಶ್ನೆಗೆ ಇನ್ನೊಬ್ಬರಿಗೆ ಒಪ್ಪಿಗೆಯಾಗುವಂಥ ಉತ್ತರ ಕೊಡುವುದಂತೂ ಸಾಧ್ಯವೇ ಇಲ್ಲ. ಯಾಕೆಂದರೆ ನಾವು ಯಾಕೆ ಪ್ರೀತಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಂಡಿರುವುದಿಲ್ಲ. ವಿಮರ್ಶೆ ಮತ್ತು ಮೆಚ್ಚುಗೆಗೆ ಇರುವ ವ್ಯತ್ಯಾಸ ಅದೇ. ವಿಮರ್ಶೆ ತಾರ್ಕಿಕ ನಿಲುವುಗಳನ್ನು ಬೇಡುತ್ತದೆ. ಮೆಚ್ಚುಗೆ ಬದುಕಿನಿಂದ ಹುಟ್ಟಿದ್ದಾಗಿರುತ್ತದೆ. ಸಾಹಿತ್ಯ ಜೀವಿಸುವುದು ಮೆಚ್ಚುಗೆಯಲ್ಲೇ ಹೊರತು, ವಿಮರ್ಶೆಯಲ್ಲಿ ಅಲ್ಲ.
ತುಘಲಕ್ ಕೂಡ ಹಾಗೆ ಅಕಾರಣವಾಗಿ ಪ್ರೀತಿಸಬಲ್ಲಂಥ ಕೃತಿ. ಗಿರೀಶ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕ ಲೇಖಕರು ಅವರು ಕೇವಲ ನಾಟಕ ಬರೆದವರಲ್ಲವೇ? ನಾಟಕ ಬರೆದದ್ದಕ್ಕೆ ಜ್ಞಾನಪೀಠ ಪ್ರಶಸ್ತಿ ಕೊಡುವುದು ಸರಿಯೇ ಎಂದೆಲ್ಲ ಗೊಣಗಿಕೊಂಡಿದ್ದರು. ಇವತ್ತೂ ಆ ಪ್ರಶ್ನೆಯನ್ನು ಕೇಳುವ ಯುವ ಲೇಖಕರಿದ್ದಾರೆ.
ಅದಕ್ಕೊಂದು ಕಾರಣವೂ ಇದೆ. ನಾಟಕ ಓದಿಕೊಳ್ಳುವ ಸಾಹಿತ್ಯ ಪ್ರಕಾರ ಅಲ್ಲ. ಅದು ರಂಗಕ್ರಿಯೆಯಲ್ಲಿ ಮೈತಳೆಯಬೇಕಾದದ್ದು. ಹಾಗೆ ರಂಗದ ಮೇಲೆ ಪ್ರದರ್ಶಿತಗೊಳ್ಳುವ ಸೌಭಾಗ್ಯ ಎಲ್ಲ ನಾಟಕಗಳಿಗೂ ಸಿಗುವುದಿಲ್ಲ. ಮತ್ತು ಪ್ರದರ್ಶಿತಗೊಂಡ ನಾಟಕಗಳನ್ನು ನೋಡುವ ಅವಕಾಶ ಎಲ್ಲ ಪ್ರದೇಶದ ಮಂದಿಗೂ ಲಭ್ಯವಾಗುವುದಿಲ್ಲ. ಹೀಗಾಗಿ ರಾಜಧಾನಿಯಲ್ಲಿ ತುಂಬ ಜನಪ್ರಿಯತೆ ಗಳಿಸಿದ ನಾಟಕ, ಗ್ರಾಮೀಣ ಪ್ರದೇಶಗಳ ಮಂದಿಗೆ ಗೊತ್ತೇ ಇರುವುದಿಲ್ಲ. ಕಾರ್ನಾಡರ ವಿಚಾರದಲ್ಲಿ ಆದದ್ದೂ ಅದೇ, ಅವರ ಅತ್ಯಂತ ಜನಪ್ರಿಯ ನಾಟಕಗಳು ನಮ್ಮೂರಿನ ಮಂದಿಗೆ ಗೊತ್ತಿಲ್ಲ. ಕಾರಂತರ ಕಾದಂಬರಿಗಳ ಹಾಗೆ ಅವು ಓದಿಸಿಕೊಳ್ಳಲಿಲ್ಲ. ಕುವೆಂಪು ಕವಿತೆಗಳ ಹಾಗೆ ಹಾಡಿಗೆ ಸಿಲುಕಲಿಲ್ಲ. ಮಾಸ್ತಿಯವರ ಕತೆಗಳಂತೆಯೋ ಅನಂತಮೂರ್ತಿಯವರ ಮಾತು-ಕೃತಿಗಳಂತೆಯೋ ಬೇಂದ್ರೆಯವರ ಕಾವ್ಯದ ಹುಚ್ಚಿನಂತೆಯೋ ಕಾರ್ನಾಡರು ಎಲ್ಲರಿಗೂ ಒದಗಲಿಲ್ಲ.
ಅವರ ಕುರಿತಾದರೂ ಯಾರಿಗೆ ಗೊತ್ತಿತ್ತು ಹೇಳಿ. ಉಡುಪಿ ಕುಂದಾಪುರದ ನಡುವಿರುವ ಕಾರ್ನಾಡು, ಗಿರೀಶರ ಊರು ಎಂದೇ ಅನೇಕರು ಭಾವಿಸಿದ್ದೆವು. ಕಾರ್ನಾಡು ಸದಾಶಿವರಾಯರು ಗಿರೀಶರ ಸಂಬಂಧಿ ಎಂದುಕೊಂಡಿದ್ದೆವು. ಗಿರೀಶ ಕಾರ್ನಾಡರು ಯಾವತ್ತೂ ತನ್ನ ಬಗ್ಗೆ ಹೇಳಿಕೊಂಡವರೂ ಅಲ್ಲ, ಬರೆದುಕೊಂಡವರೂ ಅಲ್ಲ. ವಿವೇಕ ಶಾನುಭಾಗರ ಕೃಪೆಯಿಂದ ಅವರ ಆತ್ಮಚರಿತ್ರೆಯ ಎರಡು ಅಧ್ಯಾಯಗಳು ಓದಲಿಕ್ಕೇ ಸಿಕ್ಕಿದುವಲ್ಲ, ಆಗಲೇ ಅವರ ಬಾಲ್ಯ ಯೌವನಗಳ ಕುರಿತು ನಮಗೊಂದಷ್ಟು ವಿವರಗಳು ಸಿಕ್ಕಿದ್ದು.
ಅದಕ್ಕೂ ಮುಂಚೆ ಕಾರ್ನಾಡರು ಪರಿಚಿತರಾದದ್ದು ಅವರ ನಾಟಕ, ಸಿನಿಮಾಗಳ ಮೂಲಕ. ಒಂದಾನೊಂದು ಕಾಲದಲ್ಲಿ, ಕಾಡು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಅವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯಂತೆ ಉಳಿದದ್ದು ಪ್ರಾಣೇಶಾಚಾರ್ಯರ ಪಾತ್ರದಲ್ಲಿ. ನಾರಣಪ್ಪ ಸತ್ತನೆಂದು ಗೊತ್ತಾದ ತಕ್ಷಣ ಊಟವನ್ನು ಹಾಗೇ ಬಿಟ್ಟು ಆಪೋಶನ ತೆಗೆದುಕೊಂಡು ಏಳುವ ಚಿತ್ರವೊಂದು ಇವತ್ತಿಗೂ ನನ್ನ ಮನಸ್ಸಿನಲ್ಲಿದೆ. ಆಮೇಲೆ ಆನಂದಭೈರವಿ ಎಂಬ ಚಿತ್ರದಲ್ಲಿ ಕಾರ್ನಾಡರು ನಾಟ್ಯಾಚಾರ್ಯರಾಗಿ ನಟಿಸಿದ್ದರು. ಆ ಪಾತ್ರವೂ ಕಣ್ಮುಂದೆ ಹಸಿರು.
ಮೂಲತಃ ಪತ್ರಕರ್ತರಾದ ನಮಗೆಲ್ಲ ಕಾರ್ನಾಡರ ಮೇಲೆ ಸಿಟ್ಟು. ಅವರು ಯಾವತ್ತೂ ಹೇಳಿಕೆಗಳನ್ನು ಕೊಟ್ಟವರಲ್ಲ. ಸಾಹಿತ್ಯ ಸಮ್ಮೇಳನದ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಕೇಳಿದರೆ ನೋ ಕಾಮೆಂಟ್ಸ್ ಎಂದು ಹೇಳಿ ಫೋನಿಟ್ಟುಬಿಡುತ್ತಿದ್ದರು. ಎಷ್ಟೋ ಸಾರಿ ಫೋನಿಗೂ ಸಿಗುತ್ತಿರಲಿಲ್ಲ. ಯಾವುದಾದರೂ ಸಮಾರಂಭಕ್ಕೆ ಕರೆದರೆ ಕಠೋರವಾಗಿ ನಿರಾಕರಿಸುತ್ತಿದ್ದರು. ಏನನ್ನಾದರೂ ಬರೆದುಕೊಡಿ ಎಂದರೆ ನಾನು ಬೇರೇನೋ ಮಾಡುತ್ತಿದ್ದೇನೆ ಬಿಡುವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಅವರ ದನಿಯಲ್ಲಿ ದ್ವಂದ್ವವನ್ನು ನಾನಂತೂ ಕಂಡೇ ಇಲ್ಲ. ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆದರೂ ಅವರದು ಅದೇ ಉತ್ತರ. ನಾನು ಬರುವುದಕ್ಕಾಗುವುದಿಲ್ಲ. ಮತ್ತೆ ಫೋನಿಸುವ ಅಗತ್ಯವಿಲ್ಲ. ನಮಸ್ಕಾರ. ಹೀಗಾಗಿ ಅವರು ಸಾಹಿತ್ಯ ಜಗತ್ತಿನಿಂದ ಹೊರಗೇ ಉಳಿಯಲು ಬಯಸುತ್ತಾರೆ ಎಂದು ನಾವೆಲ್ಲ ಅವರನ್ನು ಅಸೂಯೆ ಮತ್ತು ಸಿಟ್ಟಿನಿಂದ ನೋಡುತ್ತಿದ್ದೆವು.
ಚಿತ್ರರಂಗದ ಮಿತ್ರರೂ ಅವರ ಬಗ್ಗೆ ಕತೆ ಹೇಳುತ್ತಿದ್ದರು. ವಿಪರೀತ ಸಂಭಾವನೆ ಕೇಳುತ್ತಾರೆ ಎಂಬುದು ಅಂಥ ಅಪಾದನೆಗಳಲ್ಲಿ ಪ್ರಮುಖವಾದದ್ದು. ಕನ್ನಡ ನಿರ್ಮಾಪಕರ ರೀತಿನೀತಿಗಳು ತಿಳಿದ ನಂತರ ಕಾರ್ನಾಡರು ಸರಿ ಎಂಬ ತೀರ್ಮಾನಕ್ಕೆ ನಾವು ಬರದೇ ಬೇರೆ ದಾರಿಯೇ ಇರಲಿಲ್ಲ.
ನಿರ್ಮಾಪಕರೊಬ್ಬರು ಒಂದು ಟೀವಿ ಸೀರಿಯಲ್ಲು ಆರಂಭಿಸಿದ ದಿನಗಳಲ್ಲಿ ಅದರಲ್ಲಿ ಪ್ರಮುಖ ಪಾತ್ರವಾಗಿ ನಟಿಸಲು ಕಾರ್ನಾಡರು ಒಪ್ಪಿದ್ದರು. ಅವರನ್ನು ಆಗ ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಕಾರ್ನಾಡರು ತಮ್ಮ ಎಂದಿನ ಗಡಸು ದನಿಯಲ್ಲಿ ತಮ್ಮ ಸಂಭಾವನೆಯನ್ನು ಸೂಚಿಸಿದ್ದರು. ನಾವು ಕತೆ ಹೇಳಲು ಯತ್ನಿಸಿದಾಗ, ಅದೇನೂ ಬೇಕಾಗಿಲ್ಲ. ಒಂಬತ್ತು ಗಂಟೆಗೆ ಬರುತ್ತೇನೆ. ನಿಮ್ಮ ವಸ್ತ್ರವಿನ್ಯಾಸಕನಿಗೆ ಬಂದು ಬಟ್ಟೆಯ ಅಳತೆ ತೆಗೆದುಕೊಂಡು ಹೋಗಲು ಹೇಳಿ ಎಂದಿದ್ದರು. ಕತೆ ಹೇಗಿರಬೇಕು ಎಂದು ಕೇಳಿದ್ದಕ್ಕೆ ಅದು ನಿಮ್ಮ ಜವಾಬ್ದಾರಿ, ನಾನೇ ಕತೆ ಹೇಗಿರಬೇಕು ಎಂದು ಹೇಳುವುದಾದರೆ, ನಾನೇ ಸೀರಿಯಲ್ ಮಾಡುತ್ತಿದ್ದೆ ಎಂದು ನಕ್ಕಿದ್ದರು. ಅದರ ನಿರ್ಮಾಪಕರಿಗೆ ಕಾರ್ನಾಡರ ಕುರಿತು ಏನೇನೂ ಗೊತ್ತಿರಲಿಲ್ಲ. ದೊಡ್ಡ ಮೊತ್ತದ ಸಂಭಾವನೆ ಕೊಟ್ಟ ಕಾರಣಕ್ಕೆ ಮೊದಲ ದಿನವೇ ಅವರು ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರ ತನಕ ಮೂರು ನಾಲ್ಕು ಪುಟಗಳ ಐದೋ ಆರೋ ದೃಶ್ಯಗಳನ್ನು ಚಿತ್ರೀಕರಿಸಿ ಕಾರ್ನಾಡರನ್ನು ಸುಸ್ತುಮಾಡಿಬಿಟ್ಟಿದ್ದರು. ಆವತ್ತು ಶೂಟಿಂಗಿನಿಂದ ಮರಳಿದವರು ಮತ್ತೆ ಆ ಸೆಟ್ಟಿನ ಕಡೆ ತಲೆ ಹಾಕಲಿಲ್ಲ. ನಿರ್ಮಾಪಕರನ್ನು ಕರೆದು ತೆಗೆದುಕೊಂಡ ಮುಂಗಡಹಣವನ್ನು ವಾಪಸ್ಸು ಕೊಟ್ಟು ಸುಮ್ಮನಾದರು. ಮತ್ತೆಂದೂ ಸೀರಿಯಲ್ಲು ಜಗ್ತತ್ತಿಗೆ ಕಾಲಿಡುವುದಿಲ್ಲ ಎಂದು ಆವತ್ತೇ ಅವರು ನಿರ್ಧಾರ ಮಾಡಿರಬೇಕು.
ಕಾರ್ನಾಡರ ಗೆಳೆಯರು ಯಾರು, ಆಪ್ತರು ಯಾರು, ಅವರು ಏನು ಓದುತ್ತಾರೆ, ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಾರೆ ಎಂಬುದು ಇವತ್ತಿಗೂ ನಿಗೂಢ. ಹೊಸ ಗೆಳೆಯರನ್ನು ಅವರು ಸಂಪಾದಿಸಿದಂತಿಲ್ಲ. ಹಳೆ ಗೆಳೆಯರ ಜೊತ ಜಗಳ ಕಾದ ಸುದ್ದಿಯೂ ಇಲ್ಲ. ಅವರು ಫೇಸ್ ಬುಕ್ಕಿನಲ್ಲಾಗಲೀ, ಆರ್ಕುಟ್ನಲ್ಲಾಗಲೀ ಸಿಗುವುದಿಲ್ಲ.
ಅವರಾಗೇ ಫೋನ್ ಮಾಡಿ ಮಾತಾಡುತ್ತಿದ್ದವರು ವೈಎನ್ಕೆ. ನಾನು ಗಿರೀಶ್ ಎಂದು ಮಾತು ಶುರು ಮಾಡುತ್ತಿದ್ದ ಗಿರೀಶರ ಪ್ರತಿಭೆಯ ಕುರಿತು ವೈಯೆನ್ಕೆ ಬಾಯ್ತುಂಬ ಮಾತಾಡುತ್ತಿದ್ದರು. ಅವರು ಹೇಳಿದ ಗಿರೀಶರ ಗುಣಗಳಲ್ಲಿ ಗಮನಾರ್ಹವಾದದ್ದು ಕಾರ್ನಾಡರಿಗಿರುವ ಏಕಾಗ್ರತೆ. ತುಂಬ ತನ್ಮಯರಾಗಿ ಅವರು ಮಾಡಬೇಕಾದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ಅದರ ಕಡೆಗೇ ಫೋಕಸ್ ಆಗಿರುತ್ತಾರೆ. ಬೇರೆ ದಿಕ್ಕಿಗೆ ಅವರ ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿಯೇ ಅವರು ಅಷ್ಟೊಂದು ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಿದ್ದರು ವೈಯೆನ್ಕೆ.
ಒಮ್ಮೆ ಕಾರ್ನಾಡರ ಮನೆಗೆ ಹೋದಾಗ ಅವರ ಪುಟ್ಟ ಆಫೀಸು ಗಮನ ಸೆಳೆದಿತ್ತು. ಒಂದು ಫೋನು, ಫ್ಯಾಕ್ಸು, ಪ್ರಿಂಟರ್ ಮತ್ತು ಕಂಪ್ಯೂಟರ್ ಇಟ್ಟುಕೊಂಡು ಓದುತ್ತಿದ್ದ ಪುಸ್ತಕಗಳನ್ನು ಪಕ್ಕದಲ್ಲಿಟ್ಟುಕೊಂಡು ಗಿರೀಶ್ ಕೂತಿದ್ದರು. ನಾವು ಯಾವುದೋ ವಿಶೇಷಾಂಕಕ್ಕೆ ಕತೆ ಕೇಳಲು ಹೋಗಿದ್ದೆವು. ವೈಯೆನ್ಕೆ ಆ ಕುರಿತು ಮೊದಲೇ ಮಾತಾಡಿದ್ದರಿಂದ ನಮಗೆ ಒಳಗೆ ಪ್ರವೇಶ ಸಿಕ್ಕಿತ್ತು. ಬರೆದಿಟ್ಟ ಕತೆಯನ್ನು ಕೊಟ್ಟು ಅವರು ಹೋಗಿ ಬನ್ನಿ ಅಂದಿದ್ದರು.
ಕಾರ್ನಾಡರ ಐವತ್ತು ವರ್ಷಗಳ ಲೇಖನಗಳ ಸಂಕಲನ ಆಗೊಮ್ಮೆ ಈಗೊಮ್ಮೆ. ಅದನ್ನು ಎರಡನೆ ಸಲ ಓದಿದಾಗ ಅಚ್ಚರಿಯಾಯಿತು. ಸ್ಪಷ್ಟ ಚಿಂತನೆಯ, ಅನ್ನಿಸಿದ್ದನ್ನು ತುಂಬ ಸರಳವಾಗಿ ಸರಾಗವಾಗಿ ಮತ್ತು ಗೊಂದಲವೇ ಇಲ್ಲದಂತೆ ಹೇಳುವ ಕಾರ್ನಾಡರ ಪರಿಚಯವನ್ನು ಈ ಸಂಕಲನ ಮಾಡಿಕೊಡುತ್ತದೆ. ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಅವರು ನಾಗರಿಕ ಮತ್ತು ಸೈನಿಕ ಪರಿಕಲ್ಪನೆಯ ಕುರಿತು ಮಾತಾಡಿದ್ದಾರೆ. ಅಲ್ಲಿ ಅವರ ನಿಲುವು ಅತ್ಯಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರು ಎಂಥ ಮಾನವತಾವಾದಿ ಎನ್ನುವುದನ್ನೂ ಆ ಭಾಷಣ ಹೇಳುತ್ತದೆ. ಅಲ್ಲಿರುವ ನಾಲ್ಕು ಸಾಲುಗಳನ್ನು ನೋಡಿ-
ಸೈನಿಕನಂತೆ ವರ್ತಿಸುವುದರಿಂದ ನಾಗರಿಕನಿಗೆ ಸಿಗುವ ಅತಿದೊಡ್ಡ ಮಾನಸಿಕ ತೃಪ್ತಿಯೆಂದರೆ ಅವನು ಎಲ್ಲ ಸಾಮಾಜಿಕ, ನೈತಿಕ ಜವಾಬುದಾರಿಗಳಿಂದ ಪಾರಾಗುತ್ತಾನೆ. ಮನುಷ್ಯತ್ವದ ಅತ್ಯಂತ ಮಹತ್ವದ ಕುರುಹು ಎಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ. ನನ್ನ ನೈತಿಕ ಮೌಲ್ಯಗಳನ್ನು ನಾನು ನನ್ನ ಅಂತರಂಗದಿಂದ ಸೃಷ್ಟಿಸಬೇಕು.
ಸಂದರ್ಶನ, ಲೇಖನ, ಕತೆ, ನಾಟಕದ ಕುರಿತು ಅನಿಸಿಕೆ ಇವೆಲ್ಲ ತುಂಬಿರುವ `ಆಗೊಮ್ಮೆ ಈಗೊಮ್ಮೆ’ ಕಳೆದ ಎರಡು ವಾರಗಳಿಂದ ನನ್ನನ್ನು ಹಿಡಿದಿಟ್ಟಿದೆ. ಕಾರ್ನಾಡರನ್ನು ಬೇರೆಯೇ ಆಗಿ ನೋಡುವುದನ್ನು ಕಲಿಸಿದೆ. ಗೆಳೆಯರಾದ ಸುರೇಂದ್ರನಾಥ್ ಅಚ್ಚರಿಯಿಂದ ಹೇಳುತ್ತಿರುತ್ತಾರೆ- ನನಗೆ ಕಾರ್ನಾಡರೂ ಶ್ರೀನಿವಾಸ ವೈದ್ಯರೂ ಮಾತಾಡುವುದನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ. ನೀನು ಅವನು ಅಂತ ಏಕವಚನದಲ್ಲಿ ಧಾರವಾಡ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿರುತ್ತಾರೆ. ಅಂಥ ಹಿರಿಯರಿಬ್ಬರು ಹಾಗೆ ಮಾತಾಡುವುದನ್ನು ನೋಡುವುದೇ ಒಂದು ಚಂದ.
ಕಾರ್ನಾಡರೂ ಹಿರಿಯರಾ? ಹುಡುಕಿದರೆ ಗೊತ್ತಾದದ್ದು ಕಾರ್ನಾಡರಿಗೆ ಎಪ್ಪತ್ತೆರಡು.
Sunday, November 21, 2010
ಬೇಡ
ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು. ದೇವಸ್ಥಾನದ ಮುಂದೆ ಸಿಗರೇಟು ಸೇದಬಾರದು. ಒಳಾಂಗಣದಲ್ಲಿ ಕಾಲು ಇಳಿಬಿಟ್ಟು ಕೂರಬಾರದು. ಅಂಗಿ ಬನೀನು ಹಾಕಿಕೊಂಡು ಗರ್ಭಗುಡಿಯನ್ನು ಪ್ರವೇಶಿಸಬಾರದು. ಸತ್ಯನಾರಾಯಣ ಪೂಜೆ ಪ್ರಸಾದ ನಿರಾಕರಿಸಬಾರದು. ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಕುರಿಕೋಳಿ ತಿನ್ನಬಾರದು. ರಾಘವೇಂದ್ರಸ್ವಾಮಿ ಭಕ್ತರು ಗುರುವಾರ ಊಟ ಮಾಡಬಾರದು. ಚೌಡೇಶ್ವರಿ ಆರಾಧಕರು ಶನಿವಾರ ಕುಡೀಬಾರದು. ಮನೆಬಿಟ್ಟು ಹೋಗುವಾಗ ಎಲ್ಲಿಗೆ ಅಂತ ಕೇಳಬಾರದು. ಹೆಣ್ಮಕ್ಕಳು ಬೋಳುಹಣೆಯಲ್ಲಿ ಇರಬಾರದು. ರಾತ್ರಿ ತಲೆ ಬಾಚಬಾರದು. ಬಟ್ಟೆ ಹೊಲಿಯಬಾರದು....
ನೂರೆಂಟು ರಾಮಾಯಣ. ಎಲ್ಲಿಗೆ ಹೋದರೂ ಇಂಥದ್ದೆ ನಿಯಮ, ನೀತಿ. ಒಂದಲ್ಲ ಎರಡಲ್ಲ. ಕೆಲವು ಕಾನೂನು ಕೊಟ್ಟದ್ದು, ಕೆಲವು ಪರಂಪರೆ ಬಿಟ್ಟದ್ದು, ಕೆಲವು ಅಂಧಶ್ರದ್ಧೆ ಇಟ್ಟದ್ದು.
ಆಕಾಶವಾಣಿ ಕೇಳುತ್ತಿದ್ದರೆ ಮತ್ತೊಂದಷ್ಟು ಸಲಹೆ. ಹಿಂದೆ ನೋಡಿ ಮುಂದೆ ನೋಡಿ, ಮೇಲಕ್ಕೂ ಕೆಳಕ್ಕೂ ನೋಡಿ, ಅಪರಿಚಿತರಿಗೆ ಮನೆ ಕೊಡಬೇಡಿ, ನೀರು ಪೋಲು ಮಾಡಬೇಡಿ, ಎರಡೇ ಮಕ್ಕಳು ಮಾಡಿ, ಕುಡಿದು ವಾಹನ ಓಡಿಸಬೇಡಿ, ದೊಡ್ಡ ದನಿಯಲ್ಲಿ ಮಾತಾಡಬೇಡಿ, ಸಜ್ಜನಿಕೆಯಿಂದ ವರ್ತಿಸಿ, ನಮ್ಮ ದೇಶದ ಮಾನ ಉಳಿಸಿ, ಕರೆಂಟು ಉಳಿಸಿ, ಕಾಡು ಉಳಿಸಿ, ಪ್ರಾಣಿಗಳನ್ನು ಹಿಂಸಿಸಬೇಡಿ.
ಇಷ್ಟೇ ಅಲ್ಲ. ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ, ತನ್ನ ಬಣ್ಣಿಸಬೇಡ ಎಂಬುದರಿಂದ ಹಿಡಿದು ಹುಲ್ಲಿನ ಮೇಲೆ ನಡೆಯಬೇಡಿ, ಕಂಡಕಂಡಲ್ಲಿ ಉಗುಳಬೇಡಿ, ಹೆಂಡತಿಯನ್ನು ಹೊಡೆಯಬೇಡಿ, ಹೆತ್ತವರನ್ನು ಕಡೆಗಣಿಸಬೇಡಿ, ಪರಭಾಷಾ ಸಿನಿಮಾ ನೋಡಬೇಡಿ, ಇಂಗ್ಲಿಷ್ ಕಲಿಯಬೇಡಿ, ಕನ್ನಡ ಮರೆಯಬೇಡಿ, ಆಫೀಸಿಗೆ ರಜೆ ಹಾಕಬೇಡಿ, ದುಡಿಯಲು ಸೋಮಾರಿತನ ಮಾಡಬೇಡಿ, ಹಾದರ ಮಾಡದಿರಿ, ಜವಾಬ್ದಾರಿಯಿಂದ ತಪ್ಪಿಸಿಕೊಂಡು ಓಡದಿರಿ, ಮಹಿಳೆಯರನ್ನು ಕಾಡದಿರಿ, ಕೋತಿಗಳಿಗೆ ತಿಂಡಿತಿನಿಸು ನೀಡದಿರಿ...
ಎಷ್ಟೆಲ್ಲ ಬೇಡಗಳ ಮಧ್ಯೆ ಬದುಕುತ್ತಿದ್ದೇವೆ ಎನ್ನಿಸುತ್ತಿದೆ ಅಲ್ಲವೇ? ಪ್ರಶ್ನೆ ಅದಲ್ಲ. ನಮಗೆ ಇಷ್ಟೊಂದು ಕಟ್ಟುಪಾಡುಗಳು ಬೇಕಾ? ಇದನ್ನೆಲ್ಲ ನಿರ್ಧಾರ ಮಾಡುವವರು ಯಾರು? ಕಾನೂನೇ, ವ್ಯವಸ್ಥೆಯೇ, ಧರ್ಮವೇ, ಜಾತಿಯೇ, ಆಚಾರವೇ, ಮಾನವೀಯತೆಯೇ? ನಾವು ನಿಜಕ್ಕೂ ಅಷ್ಟೊಂದು ಮೂರ್ಖರೇ?
ಸುತ್ತ ನೋಡುತ್ತಿದ್ದರೆ ಗಾಬರಿಯಾಗುತ್ತದೆ. ಬಹುಶಃ ನಾವು ಅತ್ಯಂತ ನಾಗರಿಕರಂತೆ ನಟಿಸುತ್ತಿದ್ದೇವೋ ಏನೋ? ಸಹಾನುಭೂತಿ, ಅನುಕಂಪ, ಕರುಣೆಯ ಮಾತು ಹಾಗಿರಲಿ. ರಸ್ತೆಯಲ್ಲಿ ಎಲ್ಲರಿಗೂ ತೊಂದರೆ ಆಗುವಂತೆ ವಾಹನ ನಿಲ್ಲಿಸಬಾರದು ಎನ್ನುವ ಕನಿಷ್ಟ ತಿಳುವಳಿಕೆಯನ್ನು ನೀಡುವುದಕ್ಕೂ ಕಾನೂನೇ ಬೇಕಾ? ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ಕೊಟ್ಟದ್ದೇನು? ಸಂಸ್ಕಾರ ಅನ್ನುವ ಮಾತಿಗೆ ಅರ್ಥವೇನು? ಮೊದಲ ಗುರು ತಾಯಿ, ನಂತರದ ಗುರು ತಂದೆ, ಆಮೇಲಿನ ಗುರು ಆಚಾರ್ಯ, ಇದರೊಟ್ಟಿಗೇ ರಕ್ತಗತವಾಗಿ ಬಂದಿದೆ ಎಂದು ನಂಬಲಾಗುತ್ತಿರುವ ಉತ್ತಮ ಸಂಸ್ಕಾರ- ಇವೆಲ್ಲವನ್ನೂ ಮೀರಿದ್ದು ಮೂಲಪ್ರವೃತ್ತಿಯಲ್ಲವೇ?
ಹಾಗಿದ್ದರೆ ಮೂಲಪ್ರವೃತ್ತಿ ಏನು? ಆಹಾರ, ನಿದ್ರೆ, ಮೈಥುನ. ಅಷ್ಟೇ ಸಾಕೆಂದಿದ್ದವರಿಗೆ ಹೊಸದಾಗಿ ಶುರುವಾಗಿದೆ ಬೇಸರ. ಮತ್ತೆಲ್ಲಿಗೋ ಹೋಗುವ, ಮತ್ತೇನನ್ನೋ ಮುಟ್ಟುವ ಆಸೆ. ಅನನ್ಯವಾಗುವ, ವಿಭಿನ್ನವಾಗುವ, ಬೇರೆಯೇ ಆಗುವ ಹೆಬ್ಬಯಕೆ. ಹೀಗೆ ಬೇರೆಯೇ ಆಗುವ ಆಸೆಗೆ ನೂರೆಂಟು ಹುನ್ನಾರ.
ಎಲ್ಲರೂ ಸಮಾನರು ಎಂದು ನಾವೆಷ್ಟೇ ಹೇಳಿಕೊಂಡರೂ ಅಸಾಮಾನ್ಯನಾಗುವ ಆಸೆ ಬಿಡುವುದಿಲ್ಲ. ಕುರಿಮಂದೆಯಲ್ಲಿ ನೂರು ಕುರಿಯಿರುತ್ತದೆ ಅಂತಿಟ್ಟುಕೊಳ್ಳಿ. ಪ್ರತಿಯೊಂದು ಕುರಿಗೂ ತಾನು ಕುರಿಯೆಂಬುದು ಗೊತ್ತು. ಅದು ಕುರಿಯಂತೆಯೇ ವರ್ತಿಸುತ್ತದೆ. ಕುರಿಯ ಹಾಗೇ ತಲೆತಗ್ಗಿಸಿ ನಡೆಯುತ್ತದೆ. ತುಪ್ಪಳ ಬೆಳೆಸಿ ಅದನ್ನು ಸವರಿ ಮಾರಿದರೂ ಅದಕ್ಕೆ ಆ ಕುರಿತು ಹೆಮ್ಮೆಯೂ ಇಲ್ಲ, ಬೇಸರವೂ ಇಲ್ಲ. ನಾವೂ ಅಷ್ಟೇ, ಹೆಚ್ಚು ತುಪ್ಪಳವನ್ನು ಕೊಡುವ ಕುರಿಯನ್ನು ಹೆಚ್ಚು ಗೌರವದಿಂದ ಕಾಣುತ್ತೇವಾ? ಅದೂ ಇಲ್ಲ. ಅದು ಕೂಡ ಒಂದು ಕುರಿ ಅಷ್ಟೇ.
ನಾವು ಹಾಗಲ್ಲ. ಎಲ್ಲರಿಗೂ ಮಾತು ಬರುತ್ತದೆ. ಕೆಲವರು ಚೆನ್ನಾಗಿ ಮಾತಾಡುತ್ತಾರೆ. ಎಲ್ಲರೂ ಬರೆಯುತ್ತಾರೆ, ಕೆಲವರು ಚೆನ್ನಾಗಿ ಬರೆಯುತ್ತಾರೆ. ಎಲ್ಲರೂ ಮನುಷ್ಯರೇ, ಆದರೆ ಕೆಲವರು ಸುಂದರವಾಗಿರುತ್ತಾರೆ. ಹೀಗೆ ನಮ್ಮನ್ನು ಒಡೆಯುವುದಕ್ಕೆ ಪ್ರತಿಭೆ, ಸಂಪತ್ತು, ಸೌಂದರ್ಯ, ಜಾತಿ, ಅಧಿಕಾರ ಎಂಬ ಐದು ಕೊಡಲಿಗಳು ಕಾದು ಕೂತಿವೆ. ಇವುಗಳಲ್ಲಿ ಯಾವ ಕೊಡಲಿಯನ್ನು ಕೈಗೆತ್ತಿಕೊಂಡರೂ ಸಾಕು, ಅವು ಮಾನವ ಸರಪಳಿಯನ್ನು ತುಂಡರಿಸುತ್ತವೆ. ಕ್ರಮೇಣ ಈ ಐದರ ಪೈಕಿ ಒಂದು ಗುಣ ಗುಲಗಂಜಿ ತೂಕ ಹೆಚ್ಚಿದ್ದರೂ ಕೂಡ, ಅಂಥವನು ಎತ್ತರದಲ್ಲಿ ನಿಲ್ಲುತ್ತಾನೆ. ತನ್ನವರು ತುಂಬ ಕೆಳಗಿದ್ದಾರೆ ಎಂದು ಭಾವಿಸುತ್ತಾನೆ.
ಈ ವೈಚಿತ್ರ್ಯವನ್ನು ಗಮನಿಸಿದ್ದು ಕಾಮರಾಜ ಮಾರ್ಗ’ ಕಾದಂಬರಿಯ ಪುಟಗಳನ್ನು ತಿರುವಿಹಾಕುತ್ತಾ ಹೋದಾಗ. ತುಂಬ ನಿರ್ಬಿಢೆಯಿಂದ ಸಾಗುವ ಕಾದಂಬರಿಗೆ ವಿಷಾದದ ತೆಳುವಾದ ಲೇಪವೂ ಇದ್ದಂತಿದೆ. ಅಲ್ಲಿ ತನ್ನ ಚೆಲುವನ್ನು ಬಳಸುವ ಸುಂದರಿಯರಿದ್ದಾರೆ. ಹಾಗೇ, ತನ್ನ ದೇಹವನ್ನು ಬೇರೊಬ್ಬರು ಬಳಸಿಕೊಂಡಾಗ ನರಳುವವರೂ ಎದುರಾಗುತ್ತಾರೆ. ಅಧಿಕಾರಕ್ಕೆ ಸಮೀಪ ಇರುವ ಸಲುವಾಗಿ ಸೌಂದರ್ಯ, ಜಾತಿ, ಪ್ರತಿಭೆ ಮತ್ತು ಸಂಪತ್ತನ್ನು ಒತ್ತೆಯಿಟ್ಟವರೂ ಕಾಣಸಿಗುತ್ತಾರೆ. ಅವರೆಲ್ಲರೂ ಅಂತಿಮವಾಗಿ ಸಾಧಿಸಹೊರಟಿದ್ದಾದರೂ ಏನನ್ನು ಎಂಬ ಪ್ರಶ್ನೆಯನ್ನು ಕಾಮರಾಜಮಾರ್ಗ’ ಮತ್ತೆ ಮತ್ತೆ ಕೇಳಿಕೊಳ್ಳುತ್ತದೆ.
ಏರುವ ಆಸೆ, ಜಾರುವ ಭಯ, ಆಳ ತಿಳಿಯದೆ ಧುಮುಕುವ ಹುಂಬತನ ಮತ್ತು ಸಾಹಸೀ ಪ್ರವೃತ್ತಿ, ಗೆಲ್ಲುವುದು ತನಗಷ್ಟೇ ಗೊತ್ತಿದೆ ಎಂಬ ಹಮ್ಮು, ನೀನು ಗೆದ್ದದ್ದೂ ಸುಳ್ಳು ಎಂಬಂತೆ ನಗುವ ಕನ್ನಡಿ. ಬದುಕಿಗೆ ಸೀಮೆಯಿಲ್ಲ, ಅದು ನಿಸ್ಸೀಮವೂ ಅಲ್ಲ. ಹೊಸಿಲಾಚೆಗೆ ಏನಿದೆ ಈಚೆಗೇನಿದೆ ಅನ್ನುವುದು ಹೊಸಿಲು ದಾಟುವ ಧಾವಂತದಲ್ಲಿ ನಮಗೆ ಗೊತ್ತಾಗುವುದೇ ಇಲ್ಲ. ಎಷ್ಟೋ ವರ್ಷಗಳ ನಂತರ ತಿರುಗಿ ನೋಡಿದರೆ ನಾವು ದಾಟಿದ್ದೇ ತಪ್ಪೇನೋ ಅನ್ನಿಸಿ ಬೇಸರವಾಗುತ್ತದೆ. ಆ ಕ್ಷಣದ ಜಿಗಿದು ದಾಟುವ ಹುರುಪು, ದಾಟಿದ ಹೆಮ್ಮೆ ಇವೆರಡನ್ನೂ ನೆನಪಿಸಿಕೊಳ್ಳುತ್ತಾ ಕಾಲ ಕಳೆಯುವುದಷ್ಟೇ ಉಳಿದಿರುತ್ತದೆ.
*********
ದೇವನೂರು ಮಹಾದೇವ ಕೂಡ `ಬೇಡ’ ಅಂದರು. ಕನ್ನಡದಲ್ಲಿ ಶಿಕ್ಷಣ ಕೊಡುವ ತನಕ ನೃಪತುಂಗ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಪತ್ರ ಬರೆದರು. ಅವರು ಹೇಳಿದ್ದು ಇಷ್ಟೇ:
ಅದೇನೂ ಸರ್ಕಾರಕ್ಕೆ ಆಗದ ಕೆಲಸವೇನೂ ಆಗಿರಲಿಲ್ಲ. ಪರಿಷತ್ತು ಕೂಡ ಸಾಹಿತ್ಯ ಸಮ್ಮೇಳನ ಮಾಡುವುದಿಲ್ಲ ಎಂದು ಸುಮ್ಮನಿರಬಹುದಾಗಿತ್ತು. ಆದರೆ ಪರಿಷತ್ತು ಕೂಡ ಸರ್ಕಾರವನ್ನು ಅರ್ಥ ಮಾಡಿಕೊಂಡಿದೆ. ಸಮ್ಮೇಳನ ನಡೆಸುವುದಿಲ್ಲ ಎಂದರೆ ಸರ್ಕಾರ ಬೇಡ ಬಿಡಿ’ ಎನ್ನಬಹುದು. ಒಂದು ವರ್ಷ ನಡೆಯದೇ ಹೋದರೆ ಮತ್ತೆಂದೂ ನಡೆಯದೇ ಇರಬಹುದು. ಅಲ್ಲಿಗೆ ಅನೇಕರು ನಿರುದ್ಯೋಗಿಗಳಾಗುತ್ತಾರೆ. ಕೋಟ್ಯಂತರ ರುಪಾಯಿಯ ವಹಿವಾಟು ನಿಂತುಹೋಗುತ್ತದೆ.
ಅದೆಲ್ಲವನ್ನು ಬದಿಗಿಟ್ಟು ನೋಡಿದರೂ ಬೇಸರ. ದೇವನೂರು ಮಹಾದೇವ ಅವರ ಹೇಳಿಕೆಗ ಸಾಹಿತ್ಯ ಜಗತ್ತಿನಲ್ಲಿ ದೊಡ್ಡ ಮಾನ್ಯತೆ ಸಿಗುತ್ತದೆ. ಸಾಹಿತಿಗಳೆಲ್ಲ ಒಗ್ಗೂಡುತ್ತಾರೆ. ಮಹಾದೇವ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡು ಸರ್ಕಾರದ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿದರೆ, ಬೇಸರ ಕಾದಿದೆ. ಅಂಥದ್ದೇನೂ ಆಗಿಲ್ಲ. ಬೇಡವಾದರೆ ತಗೋಬೇಡಿ ಎಂದು ಪರಿಷತ್ತು ಪ್ರಶಸ್ತಿಯನ್ನು ಸಿಪಿಕೆಯವರಿಗೆ ಕೊಟ್ಟು ಸುಮ್ಮನಾಗಿದೆ. ದೇವನೂರರ ಜೊತೆಗಿದ್ದ ಕ್ರಾಂತಿಕಾರಿಗಳೂ, ಬಂಡಾಯಗಾರರೂ, ಸೈಜುಗಲ್ಲು ಹೊತ್ತೋರೂ ಸುಮ್ಮನಿದ್ದಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಬಿಡಿ, ಒಂದು ಹೇಳಿಕೆಯೂ ಹೊರಬರಲಿಲ್ಲ. ಸರ್ಕಾರದ ಹಂಗಿನಲ್ಲಿ ಹೇಗೆ ಮಾತು ಉಡುಗಿ ಹೋಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ.
ದೇವನೂರರು ಕೂಡ ಎಲ್ಲರಂತೆ ಪ್ರಶಸ್ತಿ ಸ್ವೀಕರಿಸಿ ವಿನಯವಂತಿಕೆ ಪ್ರದರ್ಶಿಸಬಹುದಾಗಿತ್ತು. ಭಾಷೆಯ ಪ್ರಸ್ತಾಪ ಮಾಡುವ ಅಗತ್ಯ ಅವರಿಗೇನೂ ಇರಲಿಲ್ಲ. ಅವರು ಮಹಾ ಶ್ರೀಮಂತರೇನೂ ಅಲ್ಲ. ಅವರ ಹೇಳಿಕೆ, ನಿಲುವು ಮತ್ತು ದಿಟ್ಟತನ ಒಂದು ಹೋರಾಟವನ್ನೇ ಹುಟ್ಟುಹಾಕಬಹುದಾಗಿತ್ತು.
ಮಾತು ಸೋತ ಭಾರತ ಎಂಬ ಅನಂತಮೂರ್ತಿಯವರ ರೂಪಕ ನಿಜವಾಗುತ್ತಿದೆ.
Friday, October 22, 2010
ನೀ ತಿರುಗಿ ನೋಡದಿರು ಇತ್ತ, ಮುಂದಿನದು ದೇವರ ಚಿತ್ತ
ನಡೆಯುತ್ತಿದ್ದೆ. ಇಳಿಬಿಸಿಲಿನ ಸಂಜೆ. ಆಗಷ್ಟೇ ಮಳೆ ನಿಂತಿತ್ತು. ತುಂತುರು ಹನಿ ಗಾಳಿಗೆ ಓರೆಯಾಗಿ ಮೈಯನ್ನು ತಬ್ಬುತ್ತಿತ್ತು. ಅಕಾಲದಲ್ಲಿ ತಬ್ಬುವ ಪ್ರೇಮದಂತೆ. ಪೂರ್ತಿ ತೋಯಿಸದೇ, ಒಣಗಿರುವುದಕ್ಕೂ ಬಿಡದೇ ಒದ್ದೆಯಾಗಿಸುವ ಪ್ರೀತಿ. ಬೆಳ್ಳಗಿನ ಶರಟಿನ ತುಂಬ ಹನಿಹನಿ ಕವನ.
ಇಳಿವಯಸ್ಸಲ್ಲಿ ಹುಟ್ಟುವ ಪ್ರೀತಿಯ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಗೆಳೆಯರ ಪೈಕಿ ಅನೇಕರು ಮದುವೆಯಾಗಿಲ್ಲ. ಅವರ ಬಿಡುಬೀಸು ಬದುಕು ನಮ್ಮನ್ನು ರೋಮಾಂಚಗೊಳಿಸುತ್ತಿತ್ತು. ಅವರ ಕಟ್ಟುಪಾಡುಗಳಿಲ್ಲದ ಹಗಲು, ಕರ್ತವ್ಯರಹಿತ ರಾತ್ರಿ ಮತ್ತು ಸಮಯಪ್ರಜ್ಞೆ ಬಯಸದ ಮುಂಜಾನೆಗಳು ನಮ್ಮ ಬಾಲ್ಯವನ್ನು ನೆನಪಿಸುತ್ತಿದ್ದವು. ಅಂಥ ಪುಣ್ಯಾತ್ಮರು ತಾರುಣ್ಯದ ದಿವಸಗಳನ್ನು ವಿಸ್ತರಿಸಿಕೊಂಡವರಂತೆ ಕಾಣಿಸುತ್ತಿದ್ದರು.
ಅವರ ಮಧ್ಯೆ ಮದುವೆ ಮುರಿದುಕೊಂಡವರಿದ್ದರು. ಜೊತೆಗಿರೋಕೆ ಆಗೋಲ್ಲ ಅನ್ನಿಸ್ತು, ಬಿಟ್ಟು ಬಂದೆ ಅಂತ ನೇರಾನೇರ ಹೇಳಿಕೊಳ್ಳುತ್ತಾ ಅದೊಂದು ದೊಡ್ಡ ಸಂಗತಿಯೇ ಅಲ್ಲವೆಂಬಂತೆ ಅವರೆಲ್ಲ ಓಡಾಡುತ್ತಿದ್ದರು. ಕಳಚಿಕೊಂಡ ಖುಷಿ ಅವರ ಕಣ್ಣಲ್ಲಿ ಪ್ರತಿಫಲಿಸದೇ ಇದ್ದರೂ, ಅದೊಂದು ಬಿಡುಗಡೆ ಎಂಬ ನಿಟ್ಟುಸಿರನ್ನಂತೂ ಕೇಳಬಹುದಾಗಿತ್ತು. ಎಷ್ಟೋ ಸಲ ತುಂಬ ಅನ್ಯೋನ್ಯವಾಗಿದ್ದಾರೆ ಎಂದು ನಾನು ಕಲ್ಪಿಸಿಕೊಂಡ ಸಾಂಗತ್ಯದಲ್ಲಿ ಕೂಡ ಅಪಸ್ವರ ಮೂಡುತ್ತಿತ್ತು. ಲೆಕ್ಕಾಚಾರ ಎಲ್ಲಿ ತಪ್ಪಾಗಿದೆ ಎನ್ನುವುದು ಅರ್ಥವೇ ಆಗುತ್ತಿರಲಿಲ್ಲ.
ಅರ್ಥ ಮಾಡಿಕೊಳ್ಳುವುದು, ಹೊಂದಿಕೊಂಡು ಬಾಳುವುದು ಕಷ್ಟ, ಅನಿವಾರ್ಯ. ಹೊಂದಿಕೊಳ್ಳುವುದು ಎಂದರೆ ಹೊಂದಾಣಿಕೆ ಮಾಡಿಕೊಳ್ಳುವುದಲ್ಲ. ಎಷ್ಟೋ ಸಲ ಇಬ್ಬರ ಅಭಿರುಚಿ, ಆಸಕ್ತಿ, ಕ್ಷೇತ್ರ ಒಂದೇ ಆಗಿರುತ್ತದೆ. ಹಾಗಿದ್ದರೂ ಪರಸ್ಪರರಲ್ಲಿ ಹೊಂದಿಕೆ ಇರುವುದಿಲ್ಲ. ವಿಭಿನ್ನ ಅಭಿರುಚಿಯ ಮಂದಿ ಎಷ್ಟೋ ಸಲ ಒಟ್ಟಿಗೆ ಬಾಳುತ್ತಾರೆ. ಈ ವಿಚಿತ್ರಕ್ಕೆ ಅರ್ಥವೇನು ಎಂದು ಹುಡುಕಹೊರಟರೆ ಸಿಗುವುದು ಮತ್ತಷ್ಟು ಪ್ರಶ್ನೆಗಳು.
ಒಳತೋಟಿಯೇ ಬೇರೆ. ಕನಸುಗಳೇ ಬೇರೆ, ಹುಡುಕಾಟವೇ ಬೇರೆ. ಎಷ್ಟೋ ಸಂಜೆಗಳು ವಿನಾಕಾರಣ ಖುಷಿಕೊಡುತ್ತವೆ. ಹಾಗೆ ಖುಷಿಕೊಟ್ಟ ಸಂಜೆಗಳೇ ಎಷ್ಟೋ ಸಲ ನೀರಸ ಅನ್ನಿಸುತ್ತವೆ. ಪ್ರಕೃತಿಗೂ ಮನಸ್ಸಿಗೂ ಸಂಬಂಧ ಇದೆ ಎಂದು ಹುಡುಕಿಕೊಂಡು ಹೊರಟರೆ ಎದುರಾಗುವುದು ಮತ್ತದೇ ಪ್ರಶ್ನೆ. ಆ ಸಂಜೆ ಯಾಕೆ ಹಾಗೆ, ಈ ಸಂಜೆಯ ಪಾಡೇಕೆ ಹೀಗೆ?
ಮಧುರವಾದದ್ದು ರುಚಿಯೆನ್ನಿಸಿದ್ದು ಸದಾ ರುಚಿಯಾಗಿಯೇ ಉಳಿಯುತ್ತದೆ ಎಂಬ ನಂಬಿಕೆ ಕೂಡ ಸುಳ್ಳಾಗುವುದುಂಟು. ಅದನ್ನು ಸುಳ್ಳಾಗಿಸುವವರೂ ನಾವೇ. ನಮ್ಮ ನಿರ್ಧಾರಗಳ ಹಿಂದಿರುವುದು ನಮ್ಮ ವಿವೇಕ ಅಲ್ಲ, ಹೃದಯ ಅಲ್ಲ. ಹಂಬಲ ಮಾತ್ರ. ಹಂಬಲದ ಬೆನ್ನಿಗೆ ಬಿದ್ದರೆ ಅಪಾಯ ಖಾತ್ರಿ ಎಂದು ಗೊತ್ತಿದ್ದೂ ಹಾಗೊಂದು ಹುಚ್ಚು ಹುದಲಿಗೆ ಮನಸ್ಸು ಕಾಲು ಹಾಕುತ್ತದೆ. ಮುಂದಿನದು ದೇವರ ಚಿತ್ತ!
ದೇವರು ಅಂದಾಕ್ಷಣ ವಿಲಕ್ಷಣ ನೆನಪು. ಯಾರ ಮುಂದೆ ಎಲ್ಲರೂ ಸಾಯಬೇಕೋ ಸಾಯಬಹುದೋ ಸಾಯುತ್ತಾರೋ ಅವರು ದೇವರು ಎಂದರು ಲಕ್ಷ್ಮೀಶ ತೋಳ್ಪಾಡಿ. ಯಾವುದರ ಮುಂದೆ ಎಲ್ಲರೂ ಬೇಯುತ್ತಾರೋ ಬೇಯಬಹುದೋ ಬೇಯಬೇಕೋ ಅದು ಹಂಬಲ ಎನ್ನಬೇಕೆನಿಸಿತು. ನಮ್ಮ ಆರು ವೈರಿಗಳ ಪಟ್ಟಿಯಲ್ಲಿ, ಕಾಮ,ಕ್ರೋಧ, ಮದ, ಲೋಭ, ಮೋಹ, ಮಾತ್ಸರ್ಯಗಳಿವೆ. ಹಂಬಲ ಇಲ್ಲ. ಹಾರಿ ಹಾರೈಸುವೆ, ಹಲವ ಹಂಬಲಿಸುವೆ, ತೋರಯ್ಯ ಕರುಣಾ ಎಂದು ಕಂಬಾರರು ಹಾಡಿದ್ದು ನೆನಪಾದಾಗೆಲ್ಲ ಹಂಬಲವೂ ಕಣ್ಮುಂದೆ ಹಾಯುತ್ತದೆ.
ಹಂಬಲಕ್ಕೆ ಸುದೀರ್ಘ ಆಯಸ್ಸಿಲ್ಲ, ಪ್ರೇಮದ ಹಾಗೆ ಅದು ನಿರಂತರ ಕಾಡುವುದಿಲ್ಲ. ವಿರಹದ ಹಾಗೆ ವಿಪರೀತ ಬಾಧಿಸುವುದಿಲ್ಲ. ಹಳಹಳಿಕೆಯ ಹಾಗೆ ಮತ್ತೆ ಮತ್ತೆ ಸುಳಿಯುವುದಿಲ್ಲ, ಅವಮಾನದಂತೆ ಅಪರಾತ್ರಿಯಲ್ಲೆಲ್ಲ ಹೆಡೆಯೆತ್ತಿ ನಿಂತು ಹಂಗಿಸುವುದಿಲ್ಲ. ಸಂಜೆಯಾಕಾಶದ ಹಾಗೆ, ಆ ಕೆಂಪಿನ ಹಾಗೆ ಕೊಂಚ ಹೊತ್ತು ಇದ್ದು ಹೊರಟು ಹೋಗುತ್ತದೆ. ಹಾಗಿದ್ದು ಹೋದ ಗಳಿಗೆಯಲ್ಲಿ ಏನೂ ಮಾಡದೇ ಸುಮ್ಮನಿದ್ದರೆ?
ಹಂಬಲ ಹಾಗೆ ಸುಮ್ಮನಿರಗೊಡುವುದಿಲ್ಲ. ಒಂದು ಅರ್ಥದಲ್ಲಿ ಅದು ಟೆಂಪ್ಟೇಶನ್ನು. ಲಾಲಸೆಯ ಹಾಗೆ ಹಂಬಲಕ್ಕೂ ಮೈತುಂಬ ನಿಮಿರು. ಅದರ ಆಯಸ್ಸು ಕಡಿಮೆ ಎಂದು ನಿಟ್ಟುಸಿರಿಟ್ಟವರು, ನಂತರದ ದಿನಗಳಲ್ಲಿ ಅದರಿಂದ ಪಾಡುಪಟ್ಟ ಉದಾಹರಣೆಗಳಿವೆ. ಅದರ ಆಯಸ್ಸು ಕಡಿಮೆ ನಿಜ. ಆದರೆ ಅದು ಮರುಕಳಿಸುತ್ತಿರುತ್ತದೆ. ವೈರಲ್ ಜ್ವರದ ಹಾಗೆ. ಬೆಳಗ್ಗೆ ಮೈ ಬೆಚ್ಚಗೆ, ಮಧ್ಯಾಹ್ನ ಎಲ್ಲ ತಹಬಂದಿಗೆ, ಸಂಜೆ ಹೊತ್ತಿಗೆ ಮತ್ತೆ ಮೈಬಿಸಿ. ಅದಕ್ಕೆ ಮದ್ದೇ ಇಲ್ಲ, ಕಾಲಕ್ರಮೇಣ ಕಡಿಮೆ ಆಗುತ್ತದೆ ಎನ್ನುವುದು ಬುದ್ಧಿವಂತರ ಸಿದ್ಧ ಉತ್ತರ.
********
ಅಂಥ ಹಂಬಲದ ಸುಳಿಗೆ ಸಿಕ್ಕವರಿಗೆ ಇಳಿಹೊತ್ತಲ್ಲಿ ಪ್ರೇಮೋದಯವಾಗುವುದಂತೆ. ಒಟ್ಟಿಗೇ ನೆಟ್ಟ ಮಂದಾರದ ಗಿಡಗಳ ಪೈಕಿ ಕೆಲವು ನಿಧಾನವಾಗಿ ಹೂ ಬಿಡುತ್ತವೆ. ಪ್ರೇಮ ಹುಟ್ಟುವುದಕ್ಕೆ ಯಾವ ವಯಸ್ಸಾದರೇನಂತೆ. ಅಷ್ಟಕ್ಕೂ ಪ್ರೇಮದ ಆಯಸ್ಸೆಷ್ಟು?
ಪ್ರೀತಿ ಹೆಚ್ಚೆಂದರೆ ಆರೋ ಎಂಟೋ ವರ್ಷ ಬದುಕಿರಬಹಲ್ಲದು. ಕ್ರಮೇಣ ಅದು ಚಟವಾಗಿ ಬದಲಾಗುತ್ತದೆ. ಐ ಲವ್ ಯೂ ಅಂತ ಎಷ್ಟು ಸಲ ಹೇಳಬೇಕು ಜೀವನದಲ್ಲಿ, ಒಂದೇ ಒಂದು ಸಲ ಹೇಳಿದರೆ ಸಾಲದಾ ? ಮತ್ತೆ ಮತ್ತೆ ಹೇಳಬೇಕು ಅಂತ ನಿರೀಕ್ಷಿಸುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಹಾಗೆ ಹೇಳುವುದು ಕೂಡ ನಮಸ್ಕಾರ, ಚೆನ್ನಾಗಿದ್ದೀರಾ?’ ಎಂದಷ್ಟೇ ಯಾಂತ್ರಿಕವಾಗಿಬಿಟ್ಟರೆ?
ಅವಳು ಪ್ರೀತಿಸುತ್ತಿಲ್ಲ ಎಂಬ ಅನುಮಾನ ಅವನಿಗೆ. ವಯಸ್ಸಾಗುತ್ತಾ ಆಗುತ್ತಾ ಆ ಅನುಮಾನ ಮತ್ತಷ್ಟು ದೃಢವಾಗುತ್ತಾ ಹೋಗುತ್ತದೆ. ದೃಢವಾಗುತ್ತಾ ಹೋಗುವುದು ಅನುಮಾನವೇ ಅಂದ ಮೇಲೆ ನಮ್ಮ ಸುಳ್ಳನ್ನು ನಾವು ನಂಬುತ್ತಿದ್ದೇವೆ ಎಂದೇ ಅರ್ಥ. ಮೊನ್ನೆ ಲಕ್ಷ್ಮೀಶ ತೋಳ್ಪಾಡಿ ಮಾತಾಡುತ್ತಾ ಮತ್ತೊಂದು ಸಂಗತಿ ಹೇಳಿದರು:
ಅರ್ಜುನನಲ್ಲಿ ಉಂಟಾದ ವಿಷಾದ, ತನ್ನವರನ್ನು ಕೊಲ್ಲಬೇಕಲ್ಲ ಎಂಬ ಸಂಕಟ ಅವನಲ್ಲಿ ನಿಜವಾಗಿಯೂ ಹುಟ್ಟಿದ್ದಲ್ಲ. ಅಂಥ ಸಂಕಟ ಹುಟ್ಟುವಂತೆ ಮಾಡಿದವನು ದುರ್ಯೋಧನ. ಅವನ ತಂತ್ರ ಅದು. ಆದರೆ ಅಂಥ ಭಾವನೆ ಹುಟ್ಟಿಸಿದ್ದು ಬೇರೆಯವರ ತಂತ್ರವೇ ಆಗಿದ್ದರೂ, ಅರ್ಜುನ ಪ್ರಾಮಾಣಿಕವಾಗಿ ವಿಷಾದಕ್ಕೆ ಒಳಗಾಗಿದ್ದರೆ ಅವನು ಗೆಲ್ಲುತ್ತಾನೆ. ಪ್ರೀತಿಯಲ್ಲೂ ಅಷ್ಟೇ. ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಅವಳನ್ನು ಅವನು ಕಪಟದಿಂದ ನಂಬಿಸಲು ಯತ್ನಿಸಿದರೂ ಕೂಡ, ಅವನ ಪ್ರೀತಿ ಪ್ರಾಮಾಣಿಕವಾದದ್ದೇ ಆಗಿದ್ದರೆ ಅವನು ಗೆಲ್ಲುತ್ತಾನೆ. ಅಷ್ಟಕ್ಕೂ ಪ್ರೀತಿಯಲ್ಲಿ ಗೆಲ್ಲುತ್ತಾ ಹೋಗುವುದು ಅಂದರೇನು?
ಮತ್ತೆ ಇಳಿವಯಸ್ಸಿನ ಪ್ರೀತಿಗೆ ಬಂದರೆ ಮನಸ್ಸು ಕಂಗಾಲು. ಐವತ್ತಮೂರು ದಾಟಿದ ಗೆಳೆಯನೊಬ್ಬ ಪ್ರೀತಿಸಲು ಹೊರಟು ಅದು ನಿಜವಾದ ಪ್ರೀತಿಯೆಂದೇ ನಂಬಿ, ಅವಳೂ ಕೂಡ ಹಾಗಂತ ನಂಬಿಸಿ, ಮೊನ್ನೆ ಮೊನ್ನೆ ಅದು ಹಾಗಲ್ಲ ಎಂದು ಗೊತ್ತಾಗಿ ನಿಟ್ಟುಸಿರಿಟ್ಟ. ಆ ನಿಟ್ಟುಸಿರಿನಲ್ಲಿ ಹಂಬಲ ಇರಲಿಲ್ಲ, ವಿರಹ ಇರಲಿಲ್ಲ, ಪಾರಾಗಿ ಬಂದ ಸಂತೋಷವೂ ಇರಲಿಲ್ಲ. ಅವಳ ಕುರಿತು ಸಿಟ್ಟೂ ಇರಲಿಲ್ಲ. ತಾನು ಮಾಡಿದ್ದು ತಪ್ಪು ಎಂಬ ವಿಷಾದವೂ ಇರಲಿಲ್ಲ. ತುಂತುರು ಮಳೆಗೆ ಮೈಯೊಡ್ಡಿಕೊಂಡು ಕೊಂಚ ದೂರ ನಡೆಯುತ್ತಿದ್ದಂತೆ ಮಳೆ ನಿಂತು, ಬಿಸಿಲು ಶುರುವಾಗಿ ಮತ್ತೆ ಮೈ ಒಣಗಿ ಬೆಚ್ಚಗಾದ ಹಾಗೆ. ಮತ್ತೊಂದು ತುಂತುರು ಮಳೆಗೆ ಮನಸ್ಸು ಹಾತೊರೆಯುತ್ತದಾ? ಹಾತೊರೆದು, ಕಾದು ಕಾದು ಬರುವ ತುಂತುರು
ಮಳೆಗಿಂತ ಸುಳಿವು ಕೊಡದೇ ಬರುವ ಮಳೆಯೇ ಆಪ್ಯಾಯಮಾನ.
ಅವನು ಹೆಂಡತಿಯ ಜೊತೆ ಬೇಟೆಗೆ ಹೋಗಿದ್ದಾನೆ. ಜೊತೆಗೆ ಹೆಂಡತಿಯ ಪ್ರಿಯಕರನೂ ಇದ್ದಾನೆ. ಆ ಪ್ರಿಯಕರನನ್ನು ಕಾಡಿನಲ್ಲಿ ಕೊಲ್ಲಬೇಕು ಎನ್ನುವುದು ಅವನ ಸಂಚು. ಆದರೆ ಅವನು ಪುಕ್ಕಲ ಎಂಬುದು ಅವನಿಗೂ ಅವನ ಹೆಂಡತಿಗೂ ಪ್ರಿಯಕರನಿಗೂ ಗೊತ್ತು. ಸಿಟ್ಟನ್ನು ಒಳಗೆ ಅದುಮಿಟ್ಟುಕೊಂಡು ಒಂದಲ್ಲ ಒಂದು ಕ್ಷಣ ಹೆಂಡತಿಗೆ ತಾನೂ ಶೂರ ಎಂದು ತೋರಿಸುವ ಆಸೆ ಹೊತ್ತವನು ಅವನು.
ಅವರು ಕಾಡಲ್ಲಿ ನಡೆಯುತ್ತಾ ಹೋಗುತ್ತಿದ್ದಂತೆ ಇದ್ದಕ್ಕಿದ್ದಂತೆ ಹುಲಿಯೊಂದು ಎದುರಾಗುತ್ತದೆ. ಪ್ರೇಮಿ ಕೋವಿ ಎತ್ತಿ ಗುರಿಯಿಡುತ್ತಾನೆ. ಗುರಿ ತಪ್ಪು ಗುಂಡು ಹುಲಿಯ ಬಾಲ ಸವರಿಕೊಂಡು ಹೋಗುತ್ತದೆ. ಆಕೆ ಥತ್ ಎಂದು ನಿಟ್ಟುಸಿರಿಟ್ಟು ಪ್ರೇಮಿಯನ್ನು ಹೀನಾಯವಾಗಿ ನೋಡುತ್ತಾಳೆ. ಹುಲಿ ಬೆದರದೆ, ಮುಂಗಾಲು ಮುಂದಕ್ಕೂರಿ ಜಿಗಿಯಲು ಸಿದ್ಧವಾಗುತ್ತದೆ. ಆಗ ಗಂಡ ತನ್ನ ಕೋವಿ ಎತ್ತಿಕೊಂಡು ಹುಲಿಯೆದುರು ನಿಂತು ಜಿಗಿಯುವ ಹುಲಿಯ ಗುಂಡಿಗೆ ಸೀಳುತ್ತಾನೆ.
ಆ ಕ್ಷಣವೇ ಮತ್ತೊಂದು ಗುಂಡು ಅವನ ಬೆನ್ನು ಸೀಳುತ್ತದೆ.
ಗುಂಡು ಹಾರಿಸಿದಾಕೆ ಅವನ ಹೆಂಡತಿ. ಅವಳಿಗೆ ಗಂಡ ವೀರನೆಂದು ಒಪ್ಪಿಕೊಳ್ಳಲಾಗುತ್ತಿಲ್ಲ. ಹುಲಿಯನ್ನು ಸಾಯಿಸಿದ ನಂತರದ, ತಾನು ಸಾಯುವ ಮೊದಲಿನ ಒಂದೇ ಒಂದು ಕ್ಷಣ ಅವನ ಬದುಕಿನ ಅತ್ಯಂತ ರೋಚಕ ಗಳಿಗೆ. ಅವನು ಪ್ರೇಮಿಯೆದುರು ಗೆದ್ದಿದ್ದಾನೆ. ಹೆಂಡತಿಯ ಅಭಿಪ್ರಾಯ, ಭಾವನೆ ಸುಳ್ಳಾಗುವಂತೆ ಮಾಡಿದ್ದಾನೆ. ಅವಳ ಕಣ್ಣ ಮನೆ ಮಾಡಿರುವ ದಿಗ್ಬ್ರಮೆಯನ್ನು ಅವನು ತಿರುಗಿ ನೋಡಬೇಕು ಅನ್ನುವಷ್ಟರಲ್ಲಿ ಅವನು ಸಾಯುತ್ತಾನೆ.
ಅಂಥ ಒಂದು ಕ್ಷಣ ಎಲ್ಲರ ಬದುಕಲ್ಲೂ ಬರುತ್ತದೆ. ಹಾಗಾದಾಗ ಅವನು ಪ್ರೇಮಿಯಾಗಿದ್ದರೂ ಗಂಡನಾಗಿದ್ದರೂ ಗೆಳೆಯನಾಗಿದ್ದರೂ ಏನೂ ಆಗಿರದೇ ಇದ್ದರೂ ಗೆಲ್ಲುತ್ತಾನೆ. ಆ ಕ್ಷಣವನ್ನು ವಿಸ್ತರಿಸಲು ಯತ್ನಿಸಿದರೆ ಮತ್ತೆ ಅದೇ ಮೆಚ್ಚುಗೆಯ ಮಾತು, ಅವನಿಗಿಂತ ವೀರ ಸಿಕ್ಕಾನೆಂಬ ನಿರೀಕ್ಷೆ, ಅವನು ಅಂಥ ವೀರತ್ವವನ್ನು ಮುಂದುವರಿಸಬೇಕು ಎಂಬ ಆಶೆ...
ಬದುಕು ಬೇರೆಯೇ ತಿರುವು ಪಡೆದುಕೊಳ್ಳುತ್ತದೆ. ನಿರಂತರತೆ ಎಲ್ಲವನ್ನೂ ನಾಶ ಮಾಡುತ್ತದೆ. ಹೀಗೇ ಇರಬೇಕು ಎಂಬುದು ಸೃಜನಶೀಲತೆಯನ್ನು ಕೊಲ್ಲುತ್ತದೆ. ತನ್ನ ಓದುಗರನ್ನು ಕಳೆದುಕೊಳ್ಳಲು ಇಚ್ಚಿಸದ ಲೇಖಕ ಕ್ರಮೇಣ ನಾಶವಾಗಿ ಹೋಗುತ್ತಾನೆ. ಹಳೆಯ ಓದುಗರನ್ನು ಕಳೆದುಕೊಳ್ಳದ ಹೊರತು, ಹೊಸ ಓದುಗರು ಸಿಗುವುದಿಲ್ಲ. ಎಲ್ಲಾ ಕಲಾವಿದರ ವಿಚಾರದಲ್ಲೂ ಇದು ನಿಜ.
ಆದರೆ ಹಳಬರನ್ನು ಕಳೆದುಕೊಂಡು ಹೊಸಬರನ್ನು ಪಡೆದುಕೊಳ್ಳುವ ಪೊರೆ ಕಳಚುವ ಸಮಯ ಮಾತ್ರ ಹಿಂಸೆಯದ್ದು. ಆ ಹಿಂಸೆಗೆ ಒಡ್ಡಿಕೊಳ್ಳದೇ ಹೊಸ ಮೈ ಮೈಗೂಡದು.
********
Tuesday, September 28, 2010
ಬಸ್ಸು ಕೆಟ್ಟು ನಿಂತ ಹನ್ನೆರಡು ಗಂಟೆ
ಸಂಜೆಯಾಗುತ್ತಿತ್ತು. ನಾವು ಹೋಗುತ್ತಿದ್ದ ಬಸ್ಸು ಕೆಟ್ಟುನಿಂತು ಮೂರೋ ನಾಲ್ಕೋ ಗಂಟೆಯಾಗಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ಬಸ್ಸೂ ಬರುವುದಿಲ್ಲ ಎಂದು ಕಂಡಕ್ಟರ್ ಆತಂಕದಲ್ಲಿದ್ದ. ಬಸ್ಸಿನಲ್ಲಿದ್ದ ಮೂವತ್ತೋ ಮೂವತ್ತೈದೋ ಪ್ರಯಾಣಿಕರ ಪೈಕಿ ಅನೇಕರು ಕಂಗಾಲಾಗಿದ್ದರು. ಥರಹೇವಾರಿ ಮಂದಿ. ದೂರಪ್ರಯಾಣಕ್ಕೆ ಹೊರಟವರು. ಸಿಗರೇಟು ಸೇದಲು ಹಂಬಲಿಸುವವರು. ಸಂಜೆ ತಿಂಡಿ ತಿಂದು ಔಷಧಿ ತೆಗೆದುಕೊಳ್ಳಬೇಕಾದವರು. ಯಾರನ್ನೋ ಸೇರಲು ಹೊರಟವರು. ಯಾರನ್ನೋ ಕರೆದುಕೊಂಡು ಹೊರಟವರು. ಮಾರನೆಯ ದಿನ ಪರೀಕ್ಷೆ ಬರೆಯಬೇಕಾದವರು. ವಿನಾಕಾರಣ ಬೇಗನೇ ಊರು ಸೇರಲೆಂದು ಹಂಬಲಿಸುವವರು. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ವ್ಯಾಪಾರ. ಒಂದೊಂದು ನಿರೀಕ್ಷೆ.
ಬಸ್ಸು ಕೆಟ್ಟು ನಿಂತ ತಕ್ಷಣ ಆ ತಾಯಿಮಗು ಹಸಿರಿಗೆ ಹೊರಟು ಬಿಟ್ಟಿದ್ದರು. ಅವರಿಗೆ ಎಲ್ಲಿಗೂ ಹೋಗುವ ನಿರೀಕ್ಷೆ ಇದ್ದಂತಿರಲಿಲ್ಲ. ಬಸ್ಸು ಕೆಟ್ಟಿತೆಂಬ ಬೇಸರವೂ ಇದ್ದಂತೆ ಕಾಣಲಿಲ್ಲ. ಬಸ್ಸು ಬೇಗ ಹೊರಡಲಿ ಎಂಬ ಆತುರವೂ ಅವರಲ್ಲಿ ಕಾಣಿಸುತ್ತಿರಲಿಲ್ಲ. ಬಸ್ಸು ನಿಂತ ತಕ್ಷಣ, ಅದು ತಮಗೋಸ್ಕರವೇ ಕೆಟ್ಟು ನಿಂತಿದೆ ಎಂಬಂತೆ, ಹಾಗೆ ಕೆಟ್ಟು ನಿಂತದ್ದೇ ವರವೆಂಬಂತೆ ಬಯಲಿಗೆ ಹೋಗು ಆಡುತ್ತಾ ಕೂತಿದ್ದರು. ಅವರದೇ ಲೋಕ ಅದು ಎಂಬಂತೆ.
ಯಾರೋ ಸಿಗರೇಟು ಸೇದಿದರು. ಯಾರೋ ಕೆಮ್ಮಿದರು, ಮತ್ಯಾರೋ ಸರ್ಕಾರವನ್ನು ಬೈದರು. ಸಾರಿಗೆ ಸಚಿವರ ಹೆಸರು ಗೊತ್ತಿದ್ದವರು ಅವರ ಜನ್ಮ ಜಾಲಾಡಿದರು. ಮತ್ಯಾರೋ ಡ್ರೈವರ್ ಜೊತೆ ವಾದಕ್ಕಿಳಿದಿದ್ದರು. ಅವನು ಬೇಸತ್ತು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದ. ಅವನ ಕೈಲೂ ಮೊಬೈಲು. ಅವನಂತೆ ಹಲವರು ಸಿಗದ ನೆಟ್ವರ್ಕ್ನ ನಿರೀಕ್ಷೆಯಲ್ಲಿ ಅತ್ತಿತ್ತ ಅಲೆದಾಡುತ್ತಾ ಫೋನ್ ಆನ್ ಮಾಡುತ್ತಾ ಆಫ್ ಮಾಡುತ್ತಾ ಮತ್ತೊಬ್ಬರ ನೆಟ್ವರ್ಕ್ ಹೇಗಿದೆ ಎಂದು ಪರೀಕ್ಷಿಸುತ್ತಾ ಚಡಪಡಿಸುತ್ತಿದ್ದರು.
ಹುಡುಗನ ಕೈಗೆ ಚೆಂಡು ಬಂದಿತ್ತು. ಹಳದಿ ಚೆಂಡು ಹಸಿರು ಬಯಲಲ್ಲಿ ಓಡುತ್ತಾ ಓಡುತ್ತಾ ಹೋಯ್ತು. ಹುಡುಗ ಅದನ್ನು ಹಿಂಬಾಲಿಸಿದ. ಅಮ್ಮನ ಕಣ್ಣಲ್ಲಿ ಪುಟ್ಟ ಕಂದ ಓಡುತ್ತಿರುವ ಖುಷಿ ತುಳುಕುತ್ತಿತ್ತು. ಜೊತೆಗೊಂದು ಹನಿ ಆತಂಕ. ಹುಲ್ಲಿನ ಮೇಲೆ ಹುಡುಗ ತೊಪ್ಪನೆ ಬಿದ್ದ. ತಿರುಗಿ ನೋಡಿದರೆ ಅಮ್ಮನ ಮುಖದಲ್ಲಿ ನೋವು. ಹುಡುಗ ಕಿಲಕಿಲ ನಕ್ಕ. ಎದ್ದು ನಿಂತು ಮತ್ತೊಮ್ಮೆ ಬಿದ್ದ. ಏಳುವುದು ಬೀಳುವುದೇ ಆಟವಾಯಿತು. ಚೆಂಡು ಕಣ್ಮರೆಯಾಗಿತ್ತು.
ದೂರದಲ್ಲೆಲ್ಲೋ ನವಿಲು ಕೇಕೆ ಹಾಕಿತು. ಹುಡುಗ ಬೆಚ್ಚಿಬಿದ್ದು ನೋಡಿದ. ತಾಯಿಯೂ ಕಿವಿಯಾನಿಸಿ ಕೇಳಿದಳು. ಕೂಗಿದ್ದು ನವಿಲು ಹೌದೋ ಅಲ್ಲವೋ ಎಂಬ ಅನುಮಾನ. ಅದು ನವಿಲು ಮಗೂ ಅಂತ ತಾಯಿ ಹೇಳಿದ್ದು ಅಸ್ಪಷ್ಟವಾಗಿ ಗಾಳಿಯಲ್ಲಿ ಬಂದು ತೇಲಿತು. ಅವಳಿಗೆ ಯಾವುದೋ ಹಳೆಯ ನೆನಪು. ನವಿಲಿನ ಕೂಗಿಗೆ ಅವಳ ಕಂಗಳು ಹೊಳಪಾದವು. ಅದೇ ಮೊದಲ ಬಾರಿಗೆ ನವಿಲಿನ ಕೇಕೆ ಕೇಳಿದ ಮಗು ಬೆಚ್ಚಿ ಅಮ್ಮನನ್ನು ತಬ್ಬಿಕೊಂಡಿತು. ತಾಯಿ ಮಗುವನ್ನು ಅವಚಿಕೊಂಡಳು.
ನಾವು ಕೂಡ ಸುತ್ತ ಹಬ್ಬಿದ ಬೆಟ್ಟವನ್ನು ಅದು ಸಂಜೆ ಬಿಸಿಲಲ್ಲಿ ಮಿರುಗುವುದನ್ನು ನೋಡುತ್ತಾ ಕೂತೆವು. ಅಂಥ ಸಂಜೆಯನ್ನು ಕಣ್ತುಂಬಿಕೊಂಡು ಎಷ್ಟೋ ದಿನವಾಗಿತ್ತು. ಅದರ ಪರಿವೆಯೇ ಇಲ್ಲವೆಂಬಂತೆ ಯಾರೋ ಕಿರುಚಿಕೊಳ್ಳುತ್ತಿದ್ದರು. ಬಸ್ಸು ಕೆಟ್ಟು ನಿಂತದ್ದು ಕೂಡ ಒಂದು ಸೌಭಾಗ್ಯ ಎಂದು ಭಾವಿಸಬೇಕು ಎಂದು ನಾವು ಮಾತಾಡಿಕೊಂಡೆವು.
ಹಾಗೆ ಎಲ್ಲರೂ ಅಂದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ನಮಗೂ ಗೊತ್ತಾಗಿತ್ತು. ಯಾರೋ ನೀರು ಬೇಕು ಎಂದು ಕಿರುಚುತ್ತಿದ್ದರು. ಮತ್ಯಾರೋ ಒಂದು ಬಾಟಲಿ ನೀರು ತಂದುಕೊಟ್ಟರು. ಮತ್ಯಾರಿಗೋ ಮಾರನೇ ದಿನ ಯಾವುದೋ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಕೆಟ್ಟು ನಿಂತ ಬಸ್ಸು ಅವರ ಅದೃಷ್ಟವನ್ನೇ ಬದಲಾಯಿಸಬಹುದಿತ್ತು. ಸಿಗಬಹುದಾಗಿದ್ದ ಕೆಲಸ ಸಿಗದೇ ಹೋಗಿ ಮತ್ತೊಂದು ಬಾಗಿಲು ಮತ್ತೆಲ್ಲೋ ತೆರೆದುಕೊಳ್ಳಬಹುದೇನೋ ಎಂಬ ನಿರೀಕ್ಷೆ ಕೂಡ ಇಲ್ಲದವರಂತೆ ಅವರು ಚಡಪಡಿಸುತ್ತಿದ್ದರು. ಮತ್ತೊಂದು ಬಾಗಿಲಿನ ನಿರೀಕ್ಷೆಯೇ ಇಲ್ಲದೆ ಬದುಕುವುದು ಕಷ್ಟವೇ.
ದೂರದಲ್ಲೆಲ್ಲೋ ಬಸ್ಸು ಬಂದ ಸದ್ದು. ಎಲ್ಲರ ಕಿವಿಯೂ ಚುರುಕಾಯಿತು. ಆ ಬಸ್ಸಿನಲ್ಲಿ ಹತ್ತಿ ಹೋಗೋಣ ಎಂದುಕೊಂಡು ಅನೇಕರು ಲಗೇಜು ಕೆಳಗಿಳಿಸಿ ಕಾದರು. ಬಸ್ಸು ಕೆಟ್ಟು ನಿಲ್ಲುವುದು, ಜನ ಕಾಯುವುದು ಹೊಸತೇನಲ್ಲ ಎಂಬಂತೆ ಆ ಬಸ್ಸು ಯಾರ ಮೇಲೂ ಕರುಣೆ ತೋರದೇ ಹೊರಟು ಹೋಯಿತು. ಮುಂದಿನ ಊರಿಗೆ ಹೋಗಿ ಫೋನ್ ಮಾಡಿ ಬೇರೆ ಬಸ್ಸು ತರಿಸುತ್ತೇನೆ ಎಂದು ಡ್ರೈವರ್ ಕೂಡ ಆ ಬಸ್ಸು ಹತ್ತಿ ಹೊರಟೇ ಬಿಟ್ಟ.
ಒಂಟಿಯಾಗಿ ಉಳಿದ ಕಂಡಕ್ಚರಿಗೆ ಸಹಸ್ರನಾಮಾರ್ಚನೆಯಾಯಿತು. ಆ ಬಸ್ಸಿನಲ್ಲಿ ಬಂದದ್ದೇ ತಪ್ಪು ಎಂದು ಅನೇಕರು ಅವನ ಮೇಲೆ ಹರಿಹಾಯ್ದರು. ಮತ್ಯಾರೋ ಪ್ರಾಣ ಹೋಗುತ್ತೆ ಎಂದು ಹಸಿವಿನಿಂದ ಚಡಪಡಿಸುತ್ತಾ ತಿನ್ನುವುದಕ್ಕೆ ಏನಾದರೂ ಕೊಡಿ ಎಂದು ಸಿಕ್ಕಸಿಕ್ಕವರನ್ನು ಕೇಳತೊಡಗಿದರು. ಅವರಿಗೆ ಡಯಾಬಿಟೀಸು ಎಂದು ಯಾರೋ ಹೇಳಿ ಅವರ ಕರುಣಾಜನಕ ಸ್ಥಿತಿಯನ್ನು ಮತ್ತಷ್ಟು ಕರುಣಾಮಯಿಯಾಗಿಸಿದರು.
ಎಷ್ಟು ಹೊತ್ತಾದರೂ ಬಸ್ಸು ಬರಲಿಲ್ಲ. ಅದು ಬಂದರೆ ಬಂತು ಬರದಿದ್ದರೆ ಇಲ್ಲ ಎಂಬಂತೆ ಆ ತಾಯಿ ಮಗು ಆಟವಾಡುತ್ತಲೇ ಇದ್ದರು. ಅವರನ್ನು ಬೆಳಗುತ್ತಿದ್ದ ಸಂಜೆ ಬಿಸಿಲು ಕ್ರಮೇಣ ಹೊಳಪು ಕಳಕೊಳ್ಳುತ್ತಿತ್ತು. ತಣ್ಣನೆ ಗಾಳಿ ಬೀಸತೊಡಗಿ ಎಲ್ಲರಿಗೂ ಹಿತವೆನ್ನಿಸಿತು. ಮೈಮನಗಳು ತಣ್ಣಗಾಗುತ್ತಿದ್ದಂತೆ ಹಲವರು ನಿಂತಲ್ಲೇ ಅಡ್ಡಾದರು. ಕೆಲವರು ರಸ್ತೆ ಬದಿಯಲ್ಲೇ ನಿದ್ದೆ ಹೋದರು.
ನಾವು ನೋಡುತ್ತಿದ್ದ ಹಾಗೆ ತಾಯಿ ಮಗು ಕತ್ತಲಲ್ಲಿ ಕರಗಿಹೋಗಿ ಅವರ ಮಾತಷ್ಟೇ ಕೇಳಿಸುತ್ತಿತ್ತು. ತಾಯಿ ಮಗನಿಗೇನೋ ಗುಟ್ಟುಹೇಳುವಂತೆ ಮಾತಾಡುತ್ತಿದ್ದಳು. ಮಗ ಇಡೀ ಜಗತ್ತಿಗೇ ಕೇಳುವಂತೆ ಕಿರುಚಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿಗೆಲ್ಲ ಮತ್ತಷ್ಟು ಕತ್ತಲು ಹಬ್ಬಿ ನಾವು ಕೂತ ಜಾಗದಿಂದ ಏನೇನೂ ಕಾಣಿಸುತ್ತಿರಲಿಲ್ಲ. ಬರೀ ತಾಯಿ ಮಗುವಿ.ನ ಮಾತುಗಳು ಬೀಸುತ್ತಿದ್ದ ತಂಗಾಳಿಯಲ್ಲಿ ಆಗಾಗ ಬಂದು ಕಿವಿಗೆ ತಾಕುತ್ತಿದ್ದವು.
ಅದು ಮುಗಿಯದ ರಾತ್ರಿಯಂತೆ ಭಾಸವಾಗುತ್ತಿತ್ತೇನೋ. ಅಷ್ಟರಲ್ಲಿ ಚಂದ್ರ ಮೂಡಿದ. ಚಂದಿರನ ತಂಬೆಳಕಲ್ಲಿ ಇಡೀ ಜಗತ್ತು ವಿಚಿತ್ರ ಹೊಳಪಿನಿಂದ ಕಂಗೊಳಿಸುತ್ತಿತ್ತು. ತಾಯಿ ಈಗ ಮಗುವಿಗೆ ಮೂಡುತ್ತಿದ್ದ ಚಂದ್ರನನ್ನು ತೋರಿಸುತ್ತಿದ್ದಳು. ಚಂದಿರನನ್ನು ನೋಡಿದ ಮಗು ನಗುತ್ತಿತ್ತು. ಅಮ್ಮನಿಲ್ಲದ ತಬ್ಬಲಿ ಚಂದಿರನೂ ನಗುತ್ತಿದ್ದ.
ನಾವು ಎಲ್ಲವನ್ನೂ ನೋಡುತ್ತಾ ಕೂತು ಬಿಟ್ಟೆವು. ಅಲ್ಲೆಲ್ಲೋ ಮತ್ತೆ ನವಿಲು ಕೂಗಿತು. ರಸ್ತೆಯ ಒಂದು ಬದಿಯಲ್ಲಿ ಆಳದ ಕಣಿವೆ. ದೂರದಲ್ಲಿ ಎಲ್ಲೋ ಮಳೆಯಾಗಿರಬೇಕು ಎಂದು ನಾವು ಊಹಿಸುತ್ತಿದ್ದಂತೆ ದೂರದಲ್ಲೆಲ್ಲೋ ಜಲಪಾತದ ಸದ್ದು ಕೇಳಿಸಿತು. ಇಷ್ಟು ಹೊತ್ತೂ ಆ ಸದ್ದು ನಮ್ಮ ಕಿವಿಗೆ ಬಿದ್ದಿರಲೇ ಇಲ್ಲವಲ್ಲ ಎಂದು ನಾವು ಅಚ್ಚರಿಪಟ್ಟೆವು.
ತಾಯಿ ಆ ಕತ್ತಲಲ್ಲೇ ರಸ್ತೆ ಪಕ್ಕದ ಗಿಡದಲ್ಲಿ ಅರಳಿದ ಹೂವು ಕೀಳುತ್ತಿದ್ದಳು. ಮಗು ಅಂಥ ಒಂದಷ್ಟು ಹೂವನ್ನು ಕೈಯಲ್ಲಿಟ್ಟುಕೊಂಡು ದೇವಲೋಕದಿಂದ ಇಳಿದ ಕಂದನಂತೆ ಕಾಣಿಸುತ್ತಿತ್ತು. ಅದೇ ಕತ್ತಲೆಯಲ್ಲಿ ತಾಯಿ ಬಸ್ಸಿಗೆ ಹತ್ತಿ ಪುಟ್ಟದೊಂದು ಬ್ಯಾಗು ತಂದು ಮಗುವಿಗೆ ಹಾಲು ಕುಡಿಸಿದಳು. ಮಗುವಿನ ತುಟಿಯ ಇಕ್ಕೆಲದಲ್ಲಿ ಇಳಿದ ಹಾಲನ್ನು ಸೆರಗಿನಿಂದ ಒರೆಸಿದಳು.
ಇನ್ನೇನು ಅವಳ ಸಹನೆ ಕೆಡುತ್ತದೆ. ಅವಳು ಕಿರುಚುತ್ತಾಳೆ. ಕನಿಷ್ಟ ಮುಖ ಕಿವಿಚುತ್ತಾಳೆ. ಮಗುವಿನ ಮೇಲೆ
ರೇಗುತ್ತಾಳೆ ಎಂದು ನಾವು ಕಾದೆವು. ಅವಳ ಮುಖದಲ್ಲಿ ಹಾಗಿದ್ದರೂ ಮಂದಹಾಸವೇ ಇತ್ತು. ಆ ಬೆಳಕಿನಲ್ಲಿ ಅದು ತನ್ನ ಪ್ರಭೆಯನ್ನು ಹೆಚ್ಚಿಸಿಕೊಂಡು ಚಂದಿರನ ಜೊತೆ ಸ್ಪರ್ಧೆಗಿಳಿದಂತೆ ಕಾಣಿಸುತ್ತಿತ್ತು.
ಇದ್ದಕ್ಕಿದ್ದಂತೆ ತಣ್ಣನೆ ಗಾಳಿ ಬೀಸಿತು. ಆ ಗಾಳಿ ಮಗುವಿನ ಕಿವಿ ಹೊಕ್ಕಿರಬೇಕು. ಮಗು ಕೇಕೆ ಹಾಕಿತು. ನವಿಲಿನ ಕೇಕೆಗಿಂತ ಇದೇ ಚೆಂದ ಅನ್ನಿಸಿತು. ಆ ಕ್ಷಣ ಮಗು ಕೂಡ ನಮಗೆ ನವಿಲಿನ ಹಾಗೆ ಕಾಣಿಸಿತು. ಅದನ್ನು ನೋಡುತ್ತಾ ನಾವು ನಮ್ಮೊಳಗೇ ನಕ್ಕೆವು.
ಬಸ್ಸುಗಳ ಓಡಾಟ ಶುರುವಾಗಿತ್ತು. ಒಂದೆರಡು ಬಸ್ಸುಗಳು ಪ್ರಖರ ಬೆಳಕು ಚೆಲ್ಲುತ್ತಾ ನಮ್ಮನ್ನು ಹಾದು ಹೋದವು. ಅವಕ್ಕೆ ಕೈ ಅಡ್ಡ ಹಿಡಿದು ಕಾಡಿ ಬೇಡಿ ಕೆಲವರು ಬಸ್ಸು ಹತ್ತಿಕೊಂಡು ಹೊರಟು ಹೋದರು. ಹೋದವರನ್ನು ನೋಡುತ್ತಾ ಅನೇಕರು ಅವರ ಅದೃಷ್ಟ ತಮಗಿಲ್ಲವಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದರು.
ಹೀಗೆ ಕಾಯುತ್ತಾ ಎಷ್ಟೊ ಹೊತ್ತು ಕಳೆದಿರಬೇಕು. ಮಗು ತಾಯಿಯ ಮಡಿಲಲ್ಲಿ ನಿದ್ದೆ ಮಾಡುತ್ತಿತ್ತು. ಆ ಮಗುವಿನ ಸಿಹಿನಿದ್ದೆಯೇ ತನ್ನ ಏಕೈಕ ಕಾಯಕ ಎಂಬಂತೆ ತಾಯಿ ಅದನ್ನು ಅವಚಿಕೊಂಡಿದ್ದಳು. ಎಲ್ಲರ ತಾಳ್ಮೆಯೂ ಕೆಟ್ಟು ನಾವೂ ಕೂಡ ಸಿಟ್ಟನ್ನು ಹೊರಹಾಕುವ ಸ್ಥಿತಿಗೆ ಬಂದು ತಲುಪಿದ್ದೆವು. ಇನ್ನೇನು ಕಂಡಕ್ಟರ್ ಮೇಲೆ ನಮ್ಮ ಸಿಟ್ಟು ವ್ಯಕ್ತವಾಗಬೇಕು ಅನ್ನುವಷ್ಟರಲ್ಲಿ ಡ್ರೈವರ್ ಮತ್ತೊಂದು ಬಸ್ಸಿನೊಂದಿಗೆ ಹಾಜರಾದ.
ಎಲ್ಲರೂ ಹೊಸ ಜೀವ ಬಂದಂತೆ ಎದ್ದು ಆ ಬಸ್ಸು ಹತ್ತಿದರು. ನಾವೂ ಬಸ್ಸು ಹತ್ತಿ ಕೂತೆವು. ಎಲ್ಲರ ಅವಸರ ಮುಗಿದ ನಂತರ ಆ ತಾಯಿ ಮಗುವನ್ನು ಅವಚಿಕೊಂಡು ಬಸ್ಸು ಹತ್ತಿ ಕೂತಳು. ಅವಳ ತುಟಿಯ ಮಂದಹಾಸ ಕಿಂಚಿತ್ತೂ ಮಾಸಿರಲಿಲ್ಲ.
ಬಸ್ಸು ಹೊರಡುತ್ತಿದ್ದಂತೆ ನಾವು ನಿದ್ದೆ ಹೋದೆವು. ಕಣ್ಣು ಬಿಡುವ ಹೊತ್ತಿಗೆ ಬೆಳಕಾಗಿತ್ತು. ಹಿಂತಿರುಗಿ ನೋಡಿದರೆ ಅಲ್ಲಿ ಆ ತಾಯಿ ಮತ್ತು ಮಗು ಮತ್ತೆ ಆಟವಾಡುತ್ತಾ ಕೂತಿದ್ದರು. ಮಗು ತಾಯಿಯ ಮುಂಗುರಳನ್ನು ತೀಡುತ್ತಿತ್ತು. ತಾಯಿ ಕಿಲಕಿಲ ನಗುತ್ತಿದ್ದಳು.
ಬೆಳಗಾಯಿತು.

