Friday, March 26, 2010

ಪೇಜಾವರ

ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನನ್ನು ನಾನು ನೆನಪಿಸ್ಕೋತೇನೆ’ ಅಂತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಹೇಳಿದ್ದು ಮಾರನೆಯ ದಿನ ಪತ್ರಿಕೆಗಳಲ್ಲೂ ವರದಿಯಾಯಿತು. ಅವರು ಹೇಳಿದ ಸದಾಶಿವ ಯಾರು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವ ಆಸಕ್ತಿ ಇಂಗ್ಲಿಷ್ ಪತ್ರಿಕೆಯ ವರದಿಗಾರರಿಗೆ ಇರಲಿಲ್ಲ. ಕನ್ನಡ ಪತ್ರಿಕೆಗಳ ವರದಿಗಾರರು ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅಷ್ಟಕ್ಕೂ ಅವರಲ್ಲಿ ಅನೇಕರಿಗೆ ಇಬ್ಬರೂ ಸದಾಶಿವರಿರುವ ವಿಚಾರವೇ ಗೊತ್ತಿರಲಿಲ್ಲ.
ಆ ಸುದ್ದಿ ಪತ್ರಿಕೆಯಲ್ಲಿ ಬಂದ ದಿನವೇ, ಪೇಪರ್ ಓದುತ್ತಾ ರಸ್ತೆ ದಾಟುತ್ತಿದ್ದ ಸಾಹಿತ್ಯಾಸಕ್ತನೊಬ್ಬನ್ನು ಅಪರಿಚಿತ ವಾಹನವೊಂದು ತಡವಿಕೊಂಡು ಹೋಯಿತು. ಕೈಯಲ್ಲಿ ಪೇಪರ್ ಹಿಡಿದುಕೊಂಡೇ ಅವನು ಪ್ರಾಣಬಿಟ್ಟಿದ್ದ. ಪತ್ರಿಕೆ ಓದುತ್ತಾ ಕನ್ನಡ ಸರಸ್ವತಿಯ ಸೇವೆ ಮಾಡುತ್ತಾ ಪ್ರಾಣಬಿಟ್ಟದ್ದರಿಂದ ಅವನಿಗೆ ತಕ್ಷಣವೇ ಸ್ವರ್ಗಕ್ಕೆ ಪ್ರವೇಶ ಸಿಕ್ಕಿತು. ಪತ್ರಿಕೆ ಕಂಕುಳಲ್ಲಿಟ್ಟುಕೊಂಡೇ ಆ ಸಾಹಿತ್ಯಾಸಕ್ತ ಸ್ವರ್ಗಕ್ಕೆ ಕಾಲಿಟ್ಟ. ಅಲ್ಲಿನ ಸೊಬಗನ್ನು ನೋಡಿ ಬೆರಗಾಗುತ್ತಾ, ಪತ್ರಿಕೆಯನ್ನು ಅಲ್ಲಿದ್ದ ಅಮೃತಶಿಲೆಯ ಹಾಸಿನ ಮೇಲಿಟ್ಟು ಸ್ವರ್ಗದಲ್ಲೊಂದು ಸುತ್ತು ಹಾಕಲು ಹೊರಟ.
ಆ ಕಲ್ಲುಹಾಸಿನ ಮೇಲೆ ವಾಕಿಂಗ್ ಮುಗಿಸಿ ಬಂದ ಜಿಎಸ್ ಮತ್ತು ಕೆ ಎಸ್ ಆಸೀನರಾದರು. ಎಂದಿನಂತೆ ನವ್ಯ ಸಾಹಿತ್ಯ ಕ್ರಮೇಣ ನಶಿಸುತ್ತಿದೆ, ಬಂಡಾಯಕ್ಕೆ ಮೊದಲಿನ ದಮ್ಮಿಲ್ಲ, ದಲಿತ ಸಾಹಿತ್ಯದಲ್ಲಿ ಹೊಸ ಭರವಸೆಯ ಲೇಖಕರು ಹುಟ್ಟುತ್ತಿಲ್ಲ. ನಾನೀಗ ಅಲ್ಲಿದ್ದರೆ ಒಂದು ಅದ್ಭುತವಾದ ಕಾದಂಬರಿ ಬರೆಯುತ್ತಿದ್ದೆ ಎಂದು ಕೆಎಸ್ ಉತ್ಸಾಹದಲ್ಲಿ ಮಾತಾಡುತ್ತಿದ್ದರು. ಜಿಎಸ್ ಕೇಳಿಸಿಕೊಳ್ಳುತ್ತಿದ್ದರು.
ಅಷ್ಟು ಹೊತ್ತಿಗೆ ಜಿಎಸ್ ಕೈಗೆ ಸಾಹಿತ್ಯಾಸಕ್ತ ಬಿಟ್ಟು ಹೋಗಿದ್ದ ಪತ್ರಿಕೆ ಸಿಕ್ಕಿತು. ಅದನ್ನೆತ್ತಿಕೊಂಡು ಓದುತ್ತಾ, ಕೆಎಸ್ ಮಾತಿನ ದಾಳಿಯಿಂದ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಂತೆ ಅವರಿಗೆ ಅನಂತಮೂರ್ತಿಯವರ ಹೇಳಿಕೆ ಕಾಣಿಸಿತು. ಅದನ್ನು ಓದುತ್ತಲೇ ಖುಷಿಯಾಗಿ ಜಿಎಸ್ ನೋಡೋ ಇಲ್ಲಿ, ಅನಂತಮೂರ್ತಿ ನನ್ನ ಬಗ್ಗೆ ಹೇಳಿದ್ದಾನೆ’ ಅಂದರು ಜಿಎಸ್.
ಕೆಎಸ್ ಪತ್ರಿಕೆಯನ್ನು ಕಸಿದುಕೊಂಡು ಓದತೊಡಗಿದರು. ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಮಾತಾಡಿದ್ದು ವರದಿಯಾಗಿತ್ತು. ಈ ಬರಹಗಳು ತುಂಬಾ ಚೆನ್ನಾಗಿವೆ. ಇವನ್ನು ಓದುತ್ತಿದ್ದರೆ ನನಗೆ ಸದಾಶಿವ ನೆನಪಾಗುತ್ತಾನೆ. ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನು ನನ್ನ ಮೆಚ್ಚಿನ ಲೇಖಕ ಎಂದು ಅನಂತಮೂರ್ತಿ ಹೇಳಿದರು’ ಎಂದು ವರದಿಗಾರ ಬರೆದಿದ್ದ. ಕೆಎಸ್ ಅದನ್ನು ಓದಿ ಗಹಗಹಿಸಿ ನಕ್ಕರು. ಏನಾಯಿತು ಎಂಬಂತೆ ಜಿಎಸ್ ತಲೆಯೆತ್ತಿ ನೋಡಿದರು.
ಮೂರ್ತಿ ಹೇಳಿದ್ದು ನನ್ನ ಬಗ್ಗೆ’ ಅಂದರು ಕೆಎಸ್.
ಇಲ್ಲ, ನನ್ನ ಬಗ್ಗೆ ಹೇಳಿದ್ದು. ನಿನ್ನನ್ನು ಅವರು ಮರೆತು ಯಾವ ಕಾಲವಾಯಿತೋ ಏನೋ?’ ಎಂದು ಜಿಎಸ್ ಗಂಭೀರವಾಗಿ ಹೇಳಿದರು.
ನಾನೂ ಅನಂತೂ ಎಂಥಾ ಸ್ನೇಹಿತರು ಗೊತ್ತೇನೋ ನಿಂಗೆ. ನಾವು ಜೊತೆಗೇ ಕತೆ ಬರೀತಿದ್ದವರು. ನನ್ನ ಬಹಳಷ್ಟು ಕತೆಗಳನ್ನು ಅವನು ಪ್ರಿಂಟಾಗುವ ಮೊದಲೇ ಓದಿದ್ದ. ನಿನ್ನ ನೆನಪಿರೋ ಚಾನ್ಸೇ ಇಲ್ಲ’ ಕೆಎಸ್ ಹಳೆಯ ಸ್ನೇಹವನ್ನು ನೆನಪಿಸಿಕೊಂಡರು.
ಸರಿ ಅಂತ ಸುಮ್ಮನಾಗಲು ಹೊರಟ ಜಿಎಸ್, ಇದ್ದಕ್ಕಿದ್ದ ಹಾಗೆ ವಾದಿಸುವ ಹುರುಪು ಬಂದವರ ಹಾಗೆ ಮಾತು ಶುರುಮಾಡಿದರು. ಸಾಧ್ಯವೇ ಇಲ್ಲ, ನನ್ನ ಬಗ್ಗೇನೇ ಬರೆದದ್ದು. ನಾವಿಬ್ಬರೂ ಮೈಸೂರಲ್ಲಿ ಕಾಫಿ ಹೌಸಲ್ಲಿ ಕೂತು ಕತೆ ಬಗ್ಗೆ ಮಾತಾಡ್ತಿದ್ದೆವು. ನನ್ನ ಎಷ್ಟೋ ಕತೆಗಳನ್ನು ಅನಂತು ತುಂಬಾ ಹೊಗಳ್ತಿದ್ದ’.
ಹೀಗೆ ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. ಜಿಎಸ್ ತಾನು ಸಿಕ್ಕು’ ಕತೆ ಬರೆದ ಸಂದರ್ಭವನ್ನೂ ಅದನ್ನು ಸಿನಿಮಾ ಮಾಡಲು ಹೋರಾಡಿದ್ದನ್ನೂ ಹೇಳಿಕೊಂಡರು. ಅಪಘಾತ’ ಕತೆ ಬರೆದದ್ದು ಒಂದು ಸತ್ಯಘಟನೆ ಆಧರಿಸಿಯೇ ಅಂದರು. ಚಪ್ಪಲಿಗಳು ಕತೆ ಬರೆಯಲು ವೈಎನ್‌ಕೆ ಕಥಾವಸ್ತು ಕೊಟ್ಟದ್ದು, ಅದನ್ನೇ ಇಟ್ಟುಕೊಂಡು ಲಂಕೇಶ್ ನಾನಲ್ಲ’ ಅನ್ನೋ ಕತೆ ಬರೆದಿದ್ದು. ತನ್ನ ಕತೆಯೇ ಅತ್ಯುತ್ತಮ ಎಂದು ವೈಎನ್‌ಕೆ, ಅನಂತಮೂರ್ತಿ ಎಲ್ಲರೂ ಹೇಳಿದ್ದು- ಹೀಗೆ ಜಿಎಸ್ ಮತ್ತಷ್ಟು ಘಟನೆಗಳನ್ನು ನೆನಪು ಮಾಡಿಕೊಟ್ಟರು.
ಕೆಎಸ್ ಸುಮ್ಮನಿರಲಿಲ್ಲ. ನನ್ನ ಸಮಗ್ರ ಕತೆಗಳಿಗೆ ಅನಂತು ಒಂದು ಟಿಪ್ಪಣಿ ಬರೆದಿದ್ದಾನೆ, ಓದಿದ್ದೀಯಾ? ನಾವಿಬ್ರೂ ಸೇರಿ ಏನೇನು ಆಟ ಆಡಿದ್ದೀವಿ ಗೊತ್ತೇನೋ ನಿಂಗೆ. ಇಬ್ಬರೂ ಆ ಕಾಲಕ್ಕೆ ಬಡವರಾಗಿದ್ವಿ. ಆದರೆ ಬಡತನ ತೋರಿಸಿಕೊಳ್ತಿರಲಿಲ್ಲ. ಕ್ಷ್ವಾರ ಮಾಡಿಸೋದಕ್ಕೆ ಇಬ್ಬರೂ ಜೊತೆಗೇ ಹೋಗ್ತಿದ್ವಿ. ಒಂದ್ಸಾರಿ ನಾನು ತಮಾಷೆ ಮಾಡೋದಕ್ಕೆ ಅಂತ ನನ್ನ ತಮ್ಮ ಇವನು, ಸಣ್ಣದಾಗಿ ಕಟ್ಟಿಂಗ್ ಮಾಡು’ ಅಂದಿದ್ದೆ. ಕಟ್ಟಿಂಗ್ ಮುಗಿಸಿ ಹೊರಡ್ತಾ ದುಡ್ಡು ನಮ್ಮಣ್ಣನ ಹತ್ರ ತಗೊಳ್ಳಿ’ ಅಂತ ಅನಂತು ಹೇಳಿ ಹೊರಟು ಹೋಗಿದ್ದ. ಅಂಥಾ ತರಲೆಗಳು ನಾವು. ಯಾರಾದ್ರೂ ಬಕ್ಕತಲೆಯವರು ಕಂಡ್ರೆ ಇದ್ದಕ್ಕಿದ್ದ ಹಾಗೆ ಅನಂತು ನಿನ್ನ ಟೋಫನ್‌ಗೆ ಎಷ್ಟು ಕೊಟ್ಟೆ’ ಅಂತ ಕೇಳ್ತಿದ್ದ. ನಂದು ಟೋಫನ್ ಅಂತ ಇಬ್ಬರೂ ಸೇರಿ ಅವನನ್ನು ನಂಬಿಸಿಬಿಡ್ತಿದ್ವಿ.’
ಆದ್ರೆ ನೀನು ಪತ್ರಕರ್ತರು ಬರೆಯೋ ವರದಿ ಥರದ ಕತೆ ಬರೀತಿ ಅಂತ ಅನಂತು ನಿನ್ನ ತಿರಸ್ಕಾರದಿಂದ ಕಾಣ್ತಿದ್ದ’ ಅಂದರು ಜಿಎಸ್.
ಅದು ಆರಂಭದಲ್ಲಿ. ಆದ್ರೆ ನಾನು ನಲ್ಲಿಯಲ್ಲಿ ನೀರು ಬಂದದ್ದು’ ಬರೆದ ನಂತರ ತುಂಬಾ ದೊಡ್ಡ ಕತೆಗಾರ ಅಂತ ಮೆಚ್ಕೊಂಡಿದ್ದ. ನಿನ್ನ ಕತೆಗಳನ್ನು ಅವನು ಏಕಾಂತದಲ್ಲಿ ಮೆಚ್ಕೋತಿದ್ದ, ಅದೂ ಅನುಕಂಪದಿಂದ’
ಜಿಎಸ್‌ಗೆ ಸಿಟ್ಟು ಬಂತು. ನಿನ್ನ ರಾಮನ ಸವಾರಿ ಸಂತೆಗೆ ಹೋದದ್ದು’ ಸಿನಿಮಾ ಆಗಬೇಕು ಅಂತ ಆಶೆಯಿತ್ತು ನಿಂಗೆ. ಆಗಲಿಲ್ಲ. ನನ್ನ ಸಿಕ್ಕು’ ಸಿನಿಮಾ ಆಯ್ತು. ಅದಕ್ಕೇ ನಿಂಗೆ ಹೊಟ್ಟೆಕಿಚ್ಚು’ ಎಂದು ಕೋಪದಿಂದ ಹೇಳಿದರು. ಸಿನಿಮಾ ಆದ್ರೇನಂತೆ. ರಿಲೀಸ್ ಆಗಿಲ್ಲವಲ್ಲ’ ಎಂದು ಕೆಎಸ್ ಕೊಂಚ ಜೋರಾಗಿಯೇ ಗೊಣಗಿಕೊಂಡರು. ಮತ್ತೆ ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನೇ ಕೂತರು.
ಹೋಗ್ಲಿ ಬಿಡೋ, ಯಾರ ಬಗ್ಗೆ ಹೇಳಿದ್ರೆ ಏನಂತೆ? ಅದಕ್ಕೋಸ್ಕರ ನಾವು ಜಗಳ ಆಡೋದು ಬೇಡ ಬಿಡು. ನಿನ್ನ ಬಗ್ಗೇನೇ ಹೇಳಿದ್ದು ಅಂತಿಟ್ಕೋ. ಐ ವಿತ್‌ಡ್ರಾ’
ಅಷ್ಟು ಹೇಳಿ ಜಿ ಎಸ್ ಸುಮ್ಮನಾದರು. ಕೆ ಎಸ್‌ಗೆ ಸಮಾಧಾನವಾದಂತೆ ಕಾಣಲಿಲ್ಲ. ಎದ್ದು ಹೋಗಿ, ಸ್ವರ್ಗದ ಅಂಚಲ್ಲಿ ನಿಂತು ಕೆಳಗೆ ನೋಡಿದರು. ತಮಗೆ ಗೊತ್ತಿದ್ದವರು ಯಾರಾದರೂ ಕಾಣಿಸುತ್ತಾರೇನೋ ಎಂದು ಹುಡುಕಾಡಿದರು. ಯಾರೂ ಕಾಣಿಸಲಿಲ್ಲ. ಯಾವುದೋ ಬೀದಿಯಲ್ಲಿ ಒಂದಷ್ಟು ಮಂದಿ ಹೆಂಗಸರು ಬಿಂದಿಗೆ ಹಿಡಕೊಂಡು ನಲ್ಲಿಯಲ್ಲಿ ನೀರು ಬರಲಿಲ್ಲ ಎಂದು ಗೊಣಗುತ್ತಿದ್ದರು. ತಾನು ಕತೆ ಬರೆದು ಇಷ್ಟು ವರ್ಷಗಳಾದರೂ ಸಮಸ್ಯೆ ನೀಗಿಲ್ಲವಲ್ಲ ಎಂದುಕೊಂಡು ಮತ್ತೊಂದು ದಿಕ್ಕಿಗೆ ತಿರುಗಿ ಕಣ್ಣು ಹಾಯಿಸಿದರೆ ರಾಮನ ಸವಾರಿ ಸಂತೆಗೆ ಹೊರಟಿತ್ತು. ಮತ್ತದೇ ಕತೆ ಎಂದು ಗೊಣಗಿಕೊಂಡು ಬಂದು ಪೇಪರ್ ಕೈಗೆತ್ತಿಕೊಂಡು ಜಿಎಸ್ ಮುಖ ನೋಡಿದರು. ಅದು ಸಿಕ್ಕುಗಟ್ಟಿತ್ತು. ಇದ್ದಕ್ಕಿದ್ದಂತೆ ಕೆ. ಎಸ್. ದೊಡ್ಡದನಿಯಲ್ಲಿ ಇಲ್ನೋಡೋ’ ಅಂತ ಕೂಗಿಕೊಂಡರು. ಮತ್ತದೇ ರಗಳೆ ಎತ್ತುತ್ತಾನೆ ಅಂದುಕೊಂಡು ಜಿಎಸ್ ಪ್ರತಿಕ್ರಿಯಿಸಲಿಲ್ಲ. ನೋಡೋ ಇಲ್ಲಿ, ನಾಡಿಗ, ಚಿಮೂ, ಎನ್ನೆಸ್ಸೆಲ್ ನಾಮರ್ದಗಳು ಅಂತ ಪೇಪರಲ್ಲಿ ಬರೆದಿದ್ದಾರೆ. ಚಂಪಾ ಮಾತಾಡ್ತಾ ಹಾಗಂದಿದ್ರಂತೆ’ ಅಂತ ಕೆಎಸ್ ಹೇಳಿದರೂ ಜಿಎಸ್‌ಗೆ ಉತ್ಸಾಹ ಬರಲಿಲ್ಲ. ಏನಾದ್ರೂ ಬರ್ಕೊಳ್ಳಲಿ ಬಿಡೋ’ ಅಂತ ಜಿ ಎಸ್ ಮತ್ತೆ ಹಳೇ ಭಂಗಿಗೆ ಮರಳಿದರು.
ಹಾಗಂದ್ರೆ ಹೇಗೋ ಆಗತ್ತೆ. ಇಲ್ನೋಡೀಗ, ಎನ್ನೆಸ್ಸೆಲ್ ಅಂತ ಬರೆದಿದ್ದಾರೆ, ನಾಡಿಗ ಅಂತ ಬರೆದಿದ್ದಾರೆ. ಅವರು ಯಾರೂ ಅಂತ ಎಲ್ಲರಿಗೂ ಹೇಗೋ ಗೊತ್ತಾಗುತ್ತೆ. ನಮ್ಮದು ಇದೇ ಕೇಸು. ಸುಮ್ಮನೆ ಸದಾಶಿವ ಅಂತ ಹೇಳಿಬಿಟ್ರೆ ನೀನೋ ನಾನೋ ಅಂತ ಎಲ್ಲರಿಗೂ ಗೊತ್ತಾಗೋದು ಹೇಗೆ? ಇದನ್ನು ಸುಮ್ನೆ ಬಿಡಬಾರದು’ ಎಂದರು ಕೆಎಸ್. ಅವರು ಅದನ್ನು ಇತ್ಯರ್ಥ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬಂದಂತಿತ್ತು. ಜಿಎಸ್ ಅದನ್ನು ಮರೆಯಲು ನಿರ್ಧರಿಸಿದ್ದರು.
ಅದಾಗಿ ಒಂದು ವಾರಕ್ಕೆ ದಂತಗೋಪುರದಲ್ಲಿ ಕೂತು ಜಿಎಸ್ ದಣಿವಾರಿಸಿಕೊಳ್ಳುತ್ತಿದ್ದರು. ಅಷ್ಟು ಹೊತ್ತಿಗೆ ಕೆಎಸ್ ಓಡೋಡಿ ಬರುತ್ತಿರುವುದು ಕಾಣಿಸಿತು. ಬಂದವರೇ ಏದುಸಿರು ಬಿಡುತ್ತಾ, ಬೇಗ ಬಾ, ಒಂದು ತಮಾಷೆ ತೋರಿಸ್ತೀನಿ’ ಅಂದರು ಕೆಎಸ್. ಏನು ಅಂತ ಕೇಳುವುದರೊಳಗೆ ಜಿಎಸ್ ಕೈ ಹಿಡಕೊಂಡು ಹೊರಟೇ ಬಿಟ್ಟರು.
ಇಬ್ಬರೂ ಸ್ವರ್ಗದ ಅಂಚಿಗೆ ಬಂದು ನಿಂತರು. ಯಾರಿಗಾದ್ರೂ ನಮಗೆ ಬಂದ ಅನುಮಾನ ಬರುತ್ತೇನೋ ಅಂತ ಕಾದೆ. ಎಲ್ಲರೂ ಹಾಳುಬಿದ್ದುಹೋಗಿದ್ದಾರೆ ಕಣಯ್ಯ. ಒಬ್ಬರಿಗೂ ಸಾಹಿತ್ಯದಲ್ಲಿ ನಿಜವಾದ ಆಸಕ್ತಿ ಇಲ್ಲ. ಅನಂತು ಹಾಗೆ ಹೇಳಿದ್ದು ಯಾರ ಬಗ್ಗೆ ಅಂತ ತಿಳ್ಕೊಳ್ಳೋ ಆಸಕ್ತಿಯೂ ಇಲ್ಲ. ಅದಕ್ಕೇ ಒಂದು ಉಪಾಯ ಮಾಡಿದ್ದೀನಿ. ಅಲ್ನೋಡು, ಅಲ್ಲಿ, ನೀಲಿ ಶರ್ಟು ಹಾಕ್ಕೊಂಡಿದ್ದಾನಲ್ಲ, ಅವನ ತಲೆಯೊಳಗೆ ಈ ಪ್ರಶ್ನೆ ಬಿಟ್ಟಿದ್ದೇನೆ. ಅವನು ಅನಂತು ಮನೆಗೇ ಹೋಗ್ತಿದ್ದಾನೆ. ಈಗ ಗೊತ್ತಾಗತ್ತೆ ತಡಿ, ನೀನೋ ನಾನೋ ಅಂತ’ ಎಂದು ಹುರುಪಿನಿಂದ ಜಿಎಸ್ ಮುಖ ನೋಡಿದರು. ಜಿಎಸ್ ನಿರುತ್ಸಾಹದಿಂದ ಸುಮ್ಮನೆ ನಿಂತಿದ್ದರು.
ನೀಲಿ ಶರಟಿನ ವ್ಯಕ್ತಿ ಅನಂತಮೂರ್ತಿಯವರ ಮನೆಗೆ ಬಂದು ತನ್ನನ್ನು ಸಾಹಿತ್ಯದ ಆಸಕ್ತಿ ಇರುವ ಪತ್ರಕರ್ತ ಎಂದು ಪರಿಚಯಿಸಿಕೊಂಡಿತು. ತಪ್ಪುತಪ್ಪಾಗಿ ವರದಿ ಮಾಡ್ತೀರಯ್ಯ ನೀವೆಲ್ಲ’ ಎಂದು ಬೈಸಿಕೊಂಡಿತು. ಕೊನೆಗೆ ಧೈರ್ಯಮಾಡಿ ಪ್ರಶ್ನೆ ಕೇಳಿಯೇ ಬಿಟ್ಟಿತು.
ಸರ್, ಆವತ್ತು ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನೀವು ಸದಾಶಿವ ತುಂಬ ಒಳ್ಳೆಯ ಬರಹಗಾರ ಅಂದಿದ್ರಿ. ನೀವು ಹೇಳಿದ್ದು ಯಾವ ಸದಾಶಿವ ಬಗ್ಗೆ ಅಂತ ಗೊತ್ತಾಗ್ಲಿಲ್ಲ. ಯಾರ ಬಗ್ಗೆ ಅಂತ ಹೇಳ್ತೀರಾ?’ ಎಂದು ಕೇಳಿ ಉತ್ತರಕ್ಕಾಗಿ ಕಾದು ಕೂತಿತು.
ಜಿಎಸ್ ಸದಾಶಿವ ಮತ್ತು ಕೆ ಸದಾಶಿವ ಕಿವಿ ನಿಮಿರಿಸಿಕೊಂಡು ಉತ್ತರಕ್ಕಾಗಿ ಕಾದರು.
ಪೇಜಾವರ ಸದಾಶಿವ. ತುಂಬ ಒಳ್ಳೇ ಪದ್ಯ ಬರೀತಿದ್ದ, ನಾಟ್ಯೋತ್ಸವ ಅಂತ ಒಂದು ....’
ನೀಲಿ ಶರಟು ಮಾತ್ರ ಹುಸಿ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿತ್ತು.

Tuesday, March 9, 2010

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮುಂಗಡ ಪತ್ರ

ಟೀವಿಯಲ್ಲಿ ಆತ ಅವಸರವಸರವಾಗಿ ಏನೋ ಓದುತ್ತಿದ್ದರು. ಇನ್ಯಾರೋ ಕಿರುಚುತ್ತಿದ್ದರು. ಮತ್ಯಾರೋ ಹಿಂದೆ ನಿಂತುಕೊಂಡು ಕಿರುಚಾಡುತ್ತಿದ್ದರು. ಮತ್ತೊಂದೆಡೆ ಯಾರೋ ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೂತಿದ್ದರು. ಎಲ್ಲರಿಗೂ ಧಾವಂತ ಇನ್ನೊಬ್ಬರಿಗಿಂತ ತಾವೇ ಮೊದಲು ಪ್ರಶ್ನೆ ಕೇಳಿಬಿಡುವ ಆತುರ.
ಮೊನ್ನೆ ಮೊನ್ನೆ ತನಕ ಒದ್ದಾಟದಲ್ಲಿದ್ದ, ಎಲ್ಲೆಲ್ಲೋ ಓಡಾಡುತ್ತಿದ್ದ, ಚಿಂತಾಕ್ರಾಂತನಾಗಿ ಅಲೆದಾಡುತ್ತಿದ್ದ ವ್ಯಕ್ತಿ ಅಷ್ಟು ಬೇಗ ಇಡೀ ರಾಜ್ಯದ ಆಯವ್ಯಯ ಲೆಕ್ಕಾಚಾರವನ್ನು ಹಿಡಿದಿಡಲು ಸಾಧ್ಯವಾಗುತ್ತದಾ ಎಂದು ಯೋಚಿಸುತ್ತಿದ್ದೆ. ಅದಕ್ಕೋಸ್ಕರ ಆತ ಎಷ್ಟು ಗಂಟೆ ವ್ಯಯಿಸಿರಬಹುದು. ಆತನ ಸಹಾಯಕರು ಯಾವ ಮಾನದಂಡಗಳನ್ನು ಬಳಸಿರಬಹುದು. ಸುಲಭವಾಗಿ ಸಿಗುವ ಆದಾಯವನ್ನು ಬಾಚಿಕೊಂಡು, ಮುಂದಿನ ಚುನಾವಣೆಗೆ ನೆರವಾಗುವುದಕ್ಕೆ ಒಂದಷ್ಟು ರಿಯಾಯಿತಿ ತೋರಿಸಿ, ಅರ್ಥ ಪಂಡಿತರು ಹೇಳಿದ ಕೆಲವೊಂದು ಸಂಗತಿಗಳನ್ನು ಅಳವಡಿಸಿಕೊಂಡು, ಧರ್ಮಭೀರು ಅನ್ನಿಸಿಕೊಳ್ಳುವುದಕ್ಕೆ ವಿವಿಧ ಮಠಮಾನ್ಯಗಳಿಗೆ ದಾನ, ಅನುದಾನ ಕೊಟ್ಟು, ಪತ್ರಕರ್ತರ ಕಣ್ಣೊರೆಸಿದಂತೆ ಮಾಡಿ....
ಇಡೀ ರಾಜ್ಯವನ್ನು ಕಣ್ಮುಂದೆ ತಂದುಕೊಂಡು ಆತ ಕನಿಷ್ಠ ಒಂದು ಗಂಟೆ ಧ್ಯಾನಿಸಿರಬಹುದೇ? ಯಾರೋ ಯಾವತ್ತೋ ಸಿದ್ಧಮಾಡಿಟ್ಟು ಹೋದ ಒಂದು ಕೋಷ್ಠಕವನ್ನು ತುಂಬುವ ಕೆಲಸ ಮಾತ್ರ ಆಗುತ್ತಿದೆ ಎಂದು ಇವತ್ತಿನ ಬಜೆಟ್ ನೋಡಿದ ಯಾರಿಗಾದರೂ ಅನ್ನಿಸದೇ ಇರದು. ಕಾರು, ಪೆಟ್ರೋಲು, ಸಿಗರೇಟು, ಬಂಗಾರ, ಮದ್ಯ ತುಟ್ಟಿ. ಕಂಪ್ಯೂಟರ್ರು, ಮೊಬೈಲ್ ಅಗ್ಗ. ಅದ್ಯಾವುದ್ಯಾವುದೋ ಊರಿಗೆ ಎಕ್ಸ್‌ಪ್ರೆಸ್ ಹೈವೇ. ಚತುಷ್ಪಥ ರಸ್ತೆ. ಇಂಥದ್ದೇ ತುಂಬಿಕೊಂಡು ಹೊಸದಾಗಿ ಚಿಂತಿಸಲೂ ಆಗದ ಹಳೆಯ ತಲೆ.
ತುಂಬ ಮೆಲೋಡ್ರಾಮಾಟಿಕ್ ಆಗದೇ ಯೋಚಿಸಲು ಯತ್ನಿಸೋಣ. ಇತ್ತೀಚೆಗೆ ನಾವೊಂದಷ್ಟು ಸ್ನೇಹಿತರು ಯಾವುದೋ ಕಾರ್ಯನಿಮಿತ್ತ ಊರೂರು ಸುತ್ತುತ್ತಿದ್ದೆವು. ಚಿಕ್ಕಪುಟ್ಟ ಹಳ್ಳಿಗಳನ್ನೆಲ್ಲ ಸವರಿಕೊಂಡು ಹೋಗುತ್ತಿದ್ದೆವು. ಸೋಮನಮನೆ ಎಂಬ ಉತ್ತರ ಕನ್ನಡದ ಹಳ್ಳಿಯಿಂದ ರಾತ್ರೋ ರಾತ್ರಿ ಹೊರಟು, ಎಷ್ಟೋ ದೂರ ಸವೆಸಿದ ಮೇಲೆ ನಮಗೊಂದು ಪುಟ್ಟ ಅಂಗಡಿ ಸಿಕ್ಕಿತು. ರಾತ್ರಿ ಒಂಬತ್ತಾದರೂ ತೆರೆದೇ ಇದ್ದ ಆ ಅಂಗಡಿಯಲ್ಲಿ ಆತ ಮಾರುತ್ತಿದ್ದದ್ದು ಏನು ಎಂದು ನೋಡಿದರೆ ಆಶ್ಚರ್ಯ ಕಾದಿತ್ತು. ಮನೆಯಲ್ಲಿ ಮಾಡಿ ತಂದಿದ್ದ ಇಡ್ಲಿಗಳನ್ನು ಆತ ಒಂದಕ್ಕೆ ಒಂದು ರುಪಾಯಿಯಂತೆ ಮಾರುತ್ತಿದ್ದ. ಅಲ್ಲಿಗೆ ಇಡ್ಲಿ ತಿನ್ನುವುದಕ್ಕೆ ಬರುವವರಲ್ಲಿ ಹೆಚ್ಚಿನವರು ತೋಟದಲ್ಲಿ ಕೆಲಸ ಮಾಡುವವರು. ಅವರು ವಾರಕ್ಕೊಮ್ಮೆ ಅವನಿಗೆ ದುಡ್ಡು ಕೊಡುತ್ತಾರೆ. ಆ ಹುಡುಗರು ಅಲ್ಲೇಕೆ ಬಂದು ತಿನ್ನುತ್ತಾರೆ ಎಂದು ಯೋಚಿಸುತ್ತಿದ್ದೆ.
ಹಳ್ಳಿಗಳಲ್ಲಿ ರಾತ್ರಿಯೂಟವನ್ನು ಹೊಟೆಲ್ಲಿನಲ್ಲಿ ಮಾಡುವ ಸಂಪ್ರದಾಯವೇ ಇರಲಿಲ್ಲ. ಕೆಲಸಕ್ಕೆ ಹೋಗುವ ಕೂಲಿಯಾಳುಗಳು ಕೂಡ ಗಡಂಗಿಗೆ ಹೋಗಿ ಒಂದೆರಡು ಗ್ಲಾಸು ಶೇಂದಿ ಏರಿಸಿಕೊಂಡು ಹಾಡುತ್ತಾ ಮನೆಯ ಹಾದಿ ಹಿಡಿಯುತ್ತಿದ್ದರು. ಮನೆಯಲ್ಲಿ ಗಂಜಿ ಮತ್ತು ಮೀನಿನ ಚಟ್ನಿ ತಿಂದು ಮಲಗುತ್ತಿದ್ದರು. ಆದರೆ ಈ ಮಂದಿಯೇಕೆ ಇಲ್ಲಿಗೆ ಬರುತ್ತಿದ್ದಾರೆ ಎಂದು ವಿಚಾರಿಸಿದಾಗ, ಅವರ ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಯಾರೂ ಇಲ್ಲ ಎಂದು ಗೊತ್ತಾಯಿತು.
ಅವರಲ್ಲಿ ಬಹಳಷ್ಟು ಮಂದಿಗೆ ಮದುವೆ ಆಗಿರಲಿಲ್ಲ. ಅನೇಕರಿಗೆ ಮದುವೆಯಾಗುವ ವಯಸ್ಸು ದಾಟಿತ್ತು. ಕೂಲಿ ಕಾರ್ಮಿಕರನ್ನು ಯಾರು ತಾನೇ ಮದುವೆ ಆಗ್ತಾರೆ ಅಂತ ಅಂಗಡಿಯಾತ ಬೇಸರದಿಂದ ನಕ್ಕ. ಅವನಿಗೆ ಐವತ್ತೋ ಐವತ್ತಾರೋ ಇರಬೇಕು. ನಮ್ಮ ಮದುವೆ ಆಗಿ ಹೋಗಿದ್ದು ಪುಣ್ಯ. ಈಗಿನ ಹುಡುಗರ ಅವಸ್ಥೆ ನೋಡಿ ಅಂತ ತೋರಿಸಿದ.
ಹುಡುಗರು ಇಡ್ಲಿ ತಿಂದು, ನೀರು ಕುಡಿದು ಬೀಡಿ ಸೇದುತ್ತಾ ಮಧ್ಯರಾತ್ರಿಯ ತನಕ ಅಲ್ಲೇ ಕೂತಿದ್ದರು. ಎಷ್ಟು ದಿನ ಅಂತ ಹೀಗೇ ಬದುಕ್ತಾರೆ ಹೇಳಿ, ಒಂಚೂರು ತಲೆಕೆಟ್ಟರೆ ಕೋವಿ ಹಿಡೀತಾರೆ. ಆಮೇಲೆ ಅವರನ್ನು ಹುಡುಕೋದಕ್ಕೆ ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತೆ. ಅದರ ಬದಲು ಈಗಲೇ ಇವರಿಗೇನಾದರೂ ಮಾಡೋದಕ್ಕಾಗಲ್ವಾ ಅಂದರು. ಆ ಕ್ಷಣಕ್ಕೆ ನಮಗೆಲ್ಲ ಅದೊಂದು ಸರಳವಾದ, ಆಗದ ಹೋಗದ ಮಾತಿನಂತೆ ಕಂಡಿತ್ತು.
ಗ್ರಾಮಗಳು, ಹಳ್ಳಿಗಳೂ ಹೇಗೆ ನಗರದಿಂದ ಹೊರಗೆ ಉಳಿಯುತ್ತಲಿವೆ ಎಂದು ಯೋಚಿಸಿ. ಎಲ್ಲರೂ ಚತುಷ್ಪಥ ರಸ್ತೆಯ ಬಗ್ಗೆ ಯೋಚಿಸುತ್ತಿದ್ದಾರೆ. ಖೇಣಿಯಂಥವರು ರಸ್ತೆ ಮಾಡಿ ಅದಕ್ಕೆ ಎರಡೂ ಬದಿಯಲ್ಲಿ ಬೇಲಿ ಹಾಕಿ, ಆ ರಸ್ತೆಗೆ ಹಳ್ಳಿಯ ಮಂದಿ ಕಾಲಿಡದ ಹಾಗೆ ಮಾಡುತ್ತಾರೆ. ಇವತ್ತು ಇಲ್ಲಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಹೋಗಿ ಬರಬೇಕು ಅಂದರೆ ಇನ್ನೂರು ರುಪಾಯಿ ಟೋಲ್ ಫೀ ಕಟ್ಟಬೇಕು. ಮಂಗಳೂರು ರಸ್ತೆಯಲ್ಲಿ ವೈಷ್ಣೋದೇವಿ ಸೇತುವೆಗೆ ಶತಮಾನಗಳಿಂದ ಸುಂಕ ವಸೂಲಿ ಮಾಡುತ್ತಲೇ ಇದ್ದಾರೆ.
ಒಳ್ಳೆಯ ರಸ್ತೆಗೆಂದು ಮುಂಗಡ ಪತ್ರ ಅದೆಷ್ಟೋ ಲಕ್ಷ ಕೋಟಿ ರುಪಾಯಿಗಳನ್ನು ಎತ್ತಿಡುತ್ತದೆ. ರಸ್ತೆಯೂ ನಿರ್ಮಾಣ ಆಗುತ್ತದೆ. ಆ ರಸ್ತೆಗೆ ಮತ್ತೆ ನಾವು ಟೋಲ್ ಫೀ ಕೊಟ್ಟೇ ಓಡಾಡಬೇಕು. ಬಸ್ಸುಗಳಲ್ಲಿ ಹೋದರೂ ಟಿಕೆಟ್ಟಿಗೆ ಎರಡು ರುಪಾಯಿ ಟೋಲ್ ಫೀ.
ಮೊನ್ನೆ ಕಾರ್ಕಳ ಎಂಬ ಪುಟ್ಟ ಊರಿಗೆ ನಡುರಾತ್ರಿ ಕಳೆದ ನಂತರ ತಲುಪಿದರೆ, ಅಲ್ಲಿ ಸರ್ಕಲ್ಲಿನಲ್ಲೊಬ್ಬ ಹಿರಿಯರು ಆಮ್ಲೆಟ್ಟು ಟೀ ಮಾರುತ್ತಾ ಕೂತಿದ್ದರು. ಬ್ರೆಡು, ಆಮ್ಲೆಟ್ಟು, ಟೀ ಧಾರಾಳವಾಗಿ ಸಿಗುತ್ತಿತ್ತು. ಬೆಳಗಿನ ತನಕ ದುಡಿಯುತ್ತಾರೆ ಅಂತ ಯಾರೋ ಹೇಳಿದರು. ಅಲ್ಲೇ ಪಕ್ಕದಲ್ಲಿ ಒಂದು ಟಾಟ ಸುಮೋ ನಿಂತಿತ್ತು. ಅದರೊಳಗಿನಿಂದ ನಾಲ್ಕಾರು ಕಾಲೇಜು ಹುಡುಗರು, ಒಬ್ಬಳು ಹುಡುಗಿ ಕೆಳಗಿಳಿದರು. ಅವರು ಕಾರಲ್ಲೇ ಕುಳಿತು ಕುಡಿದು ಮುಗಿಸಿದಂತಿತ್ತು. ಅವರ ಜೊತೆಗಿದ್ದ ಹುಡುಗಿ, ಒಂದು ಬ್ರೆಡ್ಡು ಆಮ್ಲೆಟ್ಟು ತಿಂದು ರಸ್ತೆ ಪಕ್ಕ ನಿಂತಿದ್ದಳು. ಸ್ವಲ್ಪ ಹೊತ್ತಿಗೆ ಅದೇ ಟಾಟಾ ಸುಮೋ ಮರಳಿ ಬಂತು. ಅದರಲ್ಲಿ ಮತ್ತೊಂದಷ್ಟು ಹುಡುಗರು ಬಂದಿದ್ದರು. ಆಕೆಯನ್ನು ಹತ್ತಿಸಿಕೊಂಡ ಸುಮೋ ಕತ್ತಲ ರಸ್ತೆಯಲ್ಲಿ ಮರೆಯಾಯಿತು.
ನಾನಿಲ್ಲಿ ರಾತ್ರಿ ಪೂರ ದುಡಿಯುತ್ತೇನೆ. ನನ್ನ ಮಗ ಬೆಳಗ್ಗೆ ಜಬರದಸ್ತು ಮಾಡಿ ನೂರೋ ಇನ್ನೂರೋ ಕಿತ್ತುಕೊಂಡು ಹೋಗುತ್ತಾನೆ. ಅವನೂ ಹೀಗೆಯೇ ಈ ಹುಡುಗರ ಜೊತೆ ಸೇರಿ ಹಾಳಾಗಿದ್ದಾನೆ. ನಾವು ಹಳ್ಳಿಗಳು ಇದ್ದದ್ದರಲ್ಲಿ ಒಳ್ಳೇದು ಅಂತೀವಿ. ಈಗ ಹಾಗೇನಿಲ್ಲ’ ಅಂತ ತುಂಬ ಹೊತ್ತು ಅಲ್ಲೇ ಕೂತಿದ್ದ ನಮ್ಮ ಜೊತೆ ಆ ಅಂಗಡಿಯ ಹಿರಿಯರು ಹೇಳಿದರು.
ಕಾರ್ಕಳದ ರಸ್ತೆಯಲ್ಲಿ ನಿಂತು ನೋಡಿದರೆ ಕುದುರೆಮುಖದ ಇನ್ನೊಂದು ಬದಿ ಹಬ್ಬಿ ನಿಂತದ್ದು ಕಾಣಿಸುತ್ತದೆ. ಕತ್ತಲಲ್ಲಿ ಆ ಆಕಾರ ನಿಗೂಢವಾಗಿ ಕಂಡು ಹಾಗೇ ನೋಡುತ್ತಾ ನಿಲ್ಲುವ ಆಸೆಯಾಗುತ್ತದೆ. ಆ ಬೆಟ್ಟಗಳಿಗೆ ಬೇಸಗೆಯಲ್ಲಿ ಕಾಡ್ಗಿಚ್ಚು ಹತ್ತಿಕೊಂಡು ಹವಳದ ಹಾರ ತೊಡಿಸಿದಂತೆ ಕಾಣುತ್ತದೆ. ಆ ಹಿರಿಯರ ಮಾತುಗಳನ್ನು ಕೇಳಿದಾಗ ಅದನ್ನೆಲ್ಲ ನೋಡಬೇಕು ಅನ್ನಿಸಲಿಲ್ಲ. ಕೆ ಎಸ್ ನ ತುಂಬ ಹಿಂದೆ ಬರೆದ ನಾಲ್ಕು ಸಾಲುಗಳು ನೆನಪಾದವು:
ಬತ್ತಿದ ಕೆರೆಯಂಗಳದಲಿ
ಹಾಡು ಹಕ್ಕಿ ಸತ್ತಿದೆ
ಅದರ ಕತೆಯ ಕೇಳಲಿಕ್ಕೆ
ಯಾರಿಗೆ ಪುರುಸೊತ್ತಿದೆ?
*********
ಸುಮ್ಮನೆ ಯೋಚಿಸುತ್ತಿದ್ದೆ. ನಾವು ಹೇಗೆ ಬದಲಾಗುತ್ತಾ ಬಂದಿದ್ದೇವೆ. ಬಡತನವನ್ನು ಮೀರುತ್ತಾ, ದಾಟುತ್ತಾ, ಆಧುನಿಕರಾಗುತ್ತಾ, ವೈಜ್ಞಾನಿಕವಾಗಿ ಮುಂದುವರಿಯುತ್ತಾ, ಗಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲಿ ಓಡುವ ಕಾರುಗಳಲ್ಲಿ ಓಡಾಡುತ್ತಾ, ರಸಗ್ರಹಣ ಶಕ್ತಿಯನ್ನು ಮಾತ್ರ ಕಳೆದುಕೊಂಡಿದ್ದೇವೆ. ಯೂಜಿ ಕೃಷ್ಣಮೂರ್ತಿ ಹೇಳುತ್ತಿದ್ದರು. ಅಮೆರಿಕನ್ ಮಹಿಳೆ ಎಂಥ ದಡ್ಡಿಯೆಂದರೆ ಗೋಡಂಬಿ ತುಂಬಿದ ಡಬ್ಬವನ್ನು ಅಂಗಡಿಯಿಂದ ತಂದಾಗ, ಆ ಡಬ್ಬದ ಮೇಲೆ ಅದನ್ನು ತೆರೆಯುವುದು ಹೇಗೆ ಅನ್ನುವುದನ್ನೂ ಬರೆದಿರಬೇಕಾಗುತ್ತದೆ. ಇನ್‌ಸ್ಟ್ರಕ್ಷನ್ಸ್ ಟು ಓಪನ್- ಇಲ್ಲದೇ ಹೋದರೆ ಅವಳಿಗೆ ಡಬ್ಬ ತೆರೆಯುವುದು ಹೇಗೆ ಅಂತಲೂ ಗೊತ್ತಾಗುವುದಿಲ್ಲ. ಅದನ್ನೇ ಕೋತಿಯ ಕೈಗೆ ಕೊಟ್ಟರೆ ಸುಲಭವಾಗಿ ಮುಚ್ಚಳ ತೆಗೆಯುತ್ತದೆ.
ನಮಗೀಗ ಸೂಚನೆಗಳು ಬೇಕು, ಸಲಹೆ ಕೊಡುವವರು ಬೇಕು. ದಿನ ಬೆಳಗಾಗೆದ್ದು ಅರ್ಧ ಗಂಟೆ ನಡೆಯಿರಿ ಎಂದು ಹೇಳುವುದಕ್ಕೊಬ್ಬ ಡಾಕ್ಟರ್, ಎರಡು ಇಡ್ಲಿ ಜೊತೆಗೆ ಮೂರು ಕ್ಯಾರಟ್ ತುಂಡು ತಿನ್ನಿ ಎಂದು ಹೇಳುವುದಕ್ಕೆ ಒಬ್ಬ ಡಯಟೀಷಿಯನ್, ಯಾವ ಬಣ್ಣದ ಅಂಗಿ ಹಾಕಿಕೊಂಡು ಹೋಗಬೇಕು ಎಂದು ಹೇಳುವುದಕ್ಕೊಬ್ಬ ಜ್ಯೋತಿಷಿ, ಏನು ಕೆಲಸ ಮಾಡಬೇಕು ಎಂದು ಹೇಳುವುದಕ್ಕೊಬ್ಬ ಬಾಸ್, ಏನು ಕುಡಿಯಬೇಕು ಎಂದು ಹೇಳುವುದಕ್ಕೊಬ್ಬ ಬಾರ್‌ಮನ್, ಎಷ್ಟು ವೇಗದಲ್ಲಿ ಕಾರು ಓಡಿಸಬೇಕು ಎಂದು ಸೂಚಿಸುವ ಸೈನ್‌ಬೋರ್ಡ್, ಎಷ್ಟು ಗಂಟೆಗೆ ಮಲಗಬೇಕು ಎಂದು ಹೇಳುವುದಕ್ಕೆ ಒಂದು ವೆಬ್‌ಸೈಟು...
ಸತ್ಯಂ, ಶಿವಂ, ಸುಂದರಂ..