Tuesday, September 28, 2010

ಬಸ್ಸು ಕೆಟ್ಟು ನಿಂತ ಹನ್ನೆರಡು ಗಂಟೆ

ಹಬ್ಬಿದಾ ಮಲೆ. ಎಲ್ಲೆಲ್ಲೂ ಹಸಿರು. ಹಸಿರು ಬಯಲಲ್ಲಿ ಉಸಿರುಬಿಗಿಹಿಡಿದು ಓಡುತ್ತಿರುವ ಪುಟ್ಟ ಹುಡುಗ. ಅವನ ಹಿಂದೆ ಏದುಸಿರು ಬಿಟ್ಟುಕೊಂಡು ಓಟ ಕಿತ್ತಿರುವ ತಾಯಿ.
ಸಂಜೆಯಾಗುತ್ತಿತ್ತು. ನಾವು ಹೋಗುತ್ತಿದ್ದ ಬಸ್ಸು ಕೆಟ್ಟುನಿಂತು ಮೂರೋ ನಾಲ್ಕೋ ಗಂಟೆಯಾಗಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ಬಸ್ಸೂ ಬರುವುದಿಲ್ಲ ಎಂದು ಕಂಡಕ್ಟರ್ ಆತಂಕದಲ್ಲಿದ್ದ. ಬಸ್ಸಿನಲ್ಲಿದ್ದ ಮೂವತ್ತೋ ಮೂವತ್ತೈದೋ ಪ್ರಯಾಣಿಕರ ಪೈಕಿ ಅನೇಕರು ಕಂಗಾಲಾಗಿದ್ದರು. ಥರಹೇವಾರಿ ಮಂದಿ. ದೂರಪ್ರಯಾಣಕ್ಕೆ ಹೊರಟವರು. ಸಿಗರೇಟು ಸೇದಲು ಹಂಬಲಿಸುವವರು. ಸಂಜೆ ತಿಂಡಿ ತಿಂದು ಔಷಧಿ ತೆಗೆದುಕೊಳ್ಳಬೇಕಾದವರು. ಯಾರನ್ನೋ ಸೇರಲು ಹೊರಟವರು. ಯಾರನ್ನೋ ಕರೆದುಕೊಂಡು ಹೊರಟವರು. ಮಾರನೆಯ ದಿನ ಪರೀಕ್ಷೆ ಬರೆಯಬೇಕಾದವರು. ವಿನಾಕಾರಣ ಬೇಗನೇ ಊರು ಸೇರಲೆಂದು ಹಂಬಲಿಸುವವರು. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ವ್ಯಾಪಾರ. ಒಂದೊಂದು ನಿರೀಕ್ಷೆ.
ಬಸ್ಸು ಕೆಟ್ಟು ನಿಂತ ತಕ್ಷಣ ಆ ತಾಯಿಮಗು ಹಸಿರಿಗೆ ಹೊರಟು ಬಿಟ್ಟಿದ್ದರು. ಅವರಿಗೆ ಎಲ್ಲಿಗೂ ಹೋಗುವ ನಿರೀಕ್ಷೆ ಇದ್ದಂತಿರಲಿಲ್ಲ. ಬಸ್ಸು ಕೆಟ್ಟಿತೆಂಬ ಬೇಸರವೂ ಇದ್ದಂತೆ ಕಾಣಲಿಲ್ಲ. ಬಸ್ಸು ಬೇಗ ಹೊರಡಲಿ ಎಂಬ ಆತುರವೂ ಅವರಲ್ಲಿ ಕಾಣಿಸುತ್ತಿರಲಿಲ್ಲ. ಬಸ್ಸು ನಿಂತ ತಕ್ಷಣ, ಅದು ತಮಗೋಸ್ಕರವೇ ಕೆಟ್ಟು ನಿಂತಿದೆ ಎಂಬಂತೆ, ಹಾಗೆ ಕೆಟ್ಟು ನಿಂತದ್ದೇ ವರವೆಂಬಂತೆ ಬಯಲಿಗೆ ಹೋಗು ಆಡುತ್ತಾ ಕೂತಿದ್ದರು. ಅವರದೇ ಲೋಕ ಅದು ಎಂಬಂತೆ.
ಯಾರೋ ಸಿಗರೇಟು ಸೇದಿದರು. ಯಾರೋ ಕೆಮ್ಮಿದರು, ಮತ್ಯಾರೋ ಸರ್ಕಾರವನ್ನು ಬೈದರು. ಸಾರಿಗೆ ಸಚಿವರ ಹೆಸರು ಗೊತ್ತಿದ್ದವರು ಅವರ ಜನ್ಮ ಜಾಲಾಡಿದರು. ಮತ್ಯಾರೋ ಡ್ರೈವರ್ ಜೊತೆ ವಾದಕ್ಕಿಳಿದಿದ್ದರು. ಅವನು ಬೇಸತ್ತು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದ. ಅವನ ಕೈಲೂ ಮೊಬೈಲು. ಅವನಂತೆ ಹಲವರು ಸಿಗದ ನೆಟ್‌ವರ್ಕ್‌ನ ನಿರೀಕ್ಷೆಯಲ್ಲಿ ಅತ್ತಿತ್ತ ಅಲೆದಾಡುತ್ತಾ ಫೋನ್ ಆನ್ ಮಾಡುತ್ತಾ ಆಫ್ ಮಾಡುತ್ತಾ ಮತ್ತೊಬ್ಬರ ನೆಟ್‌ವರ್ಕ್ ಹೇಗಿದೆ ಎಂದು ಪರೀಕ್ಷಿಸುತ್ತಾ ಚಡಪಡಿಸುತ್ತಿದ್ದರು.
ಹುಡುಗನ ಕೈಗೆ ಚೆಂಡು ಬಂದಿತ್ತು. ಹಳದಿ ಚೆಂಡು ಹಸಿರು ಬಯಲಲ್ಲಿ ಓಡುತ್ತಾ ಓಡುತ್ತಾ ಹೋಯ್ತು. ಹುಡುಗ ಅದನ್ನು ಹಿಂಬಾಲಿಸಿದ. ಅಮ್ಮನ ಕಣ್ಣಲ್ಲಿ ಪುಟ್ಟ ಕಂದ ಓಡುತ್ತಿರುವ ಖುಷಿ ತುಳುಕುತ್ತಿತ್ತು. ಜೊತೆಗೊಂದು ಹನಿ ಆತಂಕ. ಹುಲ್ಲಿನ ಮೇಲೆ ಹುಡುಗ ತೊಪ್ಪನೆ ಬಿದ್ದ. ತಿರುಗಿ ನೋಡಿದರೆ ಅಮ್ಮನ ಮುಖದಲ್ಲಿ ನೋವು. ಹುಡುಗ ಕಿಲಕಿಲ ನಕ್ಕ. ಎದ್ದು ನಿಂತು ಮತ್ತೊಮ್ಮೆ ಬಿದ್ದ. ಏಳುವುದು ಬೀಳುವುದೇ ಆಟವಾಯಿತು. ಚೆಂಡು ಕಣ್ಮರೆಯಾಗಿತ್ತು.
ದೂರದಲ್ಲೆಲ್ಲೋ ನವಿಲು ಕೇಕೆ ಹಾಕಿತು. ಹುಡುಗ ಬೆಚ್ಚಿಬಿದ್ದು ನೋಡಿದ. ತಾಯಿಯೂ ಕಿವಿಯಾನಿಸಿ ಕೇಳಿದಳು. ಕೂಗಿದ್ದು ನವಿಲು ಹೌದೋ ಅಲ್ಲವೋ ಎಂಬ ಅನುಮಾನ. ಅದು ನವಿಲು ಮಗೂ ಅಂತ ತಾಯಿ ಹೇಳಿದ್ದು ಅಸ್ಪಷ್ಟವಾಗಿ ಗಾಳಿಯಲ್ಲಿ ಬಂದು ತೇಲಿತು. ಅವಳಿಗೆ ಯಾವುದೋ ಹಳೆಯ ನೆನಪು. ನವಿಲಿನ ಕೂಗಿಗೆ ಅವಳ ಕಂಗಳು ಹೊಳಪಾದವು. ಅದೇ ಮೊದಲ ಬಾರಿಗೆ ನವಿಲಿನ ಕೇಕೆ ಕೇಳಿದ ಮಗು ಬೆಚ್ಚಿ ಅಮ್ಮನನ್ನು ತಬ್ಬಿಕೊಂಡಿತು. ತಾಯಿ ಮಗುವನ್ನು ಅವಚಿಕೊಂಡಳು.
ನಾವು ಕೂಡ ಸುತ್ತ ಹಬ್ಬಿದ ಬೆಟ್ಟವನ್ನು ಅದು ಸಂಜೆ ಬಿಸಿಲಲ್ಲಿ ಮಿರುಗುವುದನ್ನು ನೋಡುತ್ತಾ ಕೂತೆವು. ಅಂಥ ಸಂಜೆಯನ್ನು ಕಣ್ತುಂಬಿಕೊಂಡು ಎಷ್ಟೋ ದಿನವಾಗಿತ್ತು. ಅದರ ಪರಿವೆಯೇ ಇಲ್ಲವೆಂಬಂತೆ ಯಾರೋ ಕಿರುಚಿಕೊಳ್ಳುತ್ತಿದ್ದರು. ಬಸ್ಸು ಕೆಟ್ಟು ನಿಂತದ್ದು ಕೂಡ ಒಂದು ಸೌಭಾಗ್ಯ ಎಂದು ಭಾವಿಸಬೇಕು ಎಂದು ನಾವು ಮಾತಾಡಿಕೊಂಡೆವು.
ಹಾಗೆ ಎಲ್ಲರೂ ಅಂದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ನಮಗೂ ಗೊತ್ತಾಗಿತ್ತು. ಯಾರೋ ನೀರು ಬೇಕು ಎಂದು ಕಿರುಚುತ್ತಿದ್ದರು. ಮತ್ಯಾರೋ ಒಂದು ಬಾಟಲಿ ನೀರು ತಂದುಕೊಟ್ಟರು. ಮತ್ಯಾರಿಗೋ ಮಾರನೇ ದಿನ ಯಾವುದೋ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಕೆಟ್ಟು ನಿಂತ ಬಸ್ಸು ಅವರ ಅದೃಷ್ಟವನ್ನೇ ಬದಲಾಯಿಸಬಹುದಿತ್ತು. ಸಿಗಬಹುದಾಗಿದ್ದ ಕೆಲಸ ಸಿಗದೇ ಹೋಗಿ ಮತ್ತೊಂದು ಬಾಗಿಲು ಮತ್ತೆಲ್ಲೋ ತೆರೆದುಕೊಳ್ಳಬಹುದೇನೋ ಎಂಬ ನಿರೀಕ್ಷೆ ಕೂಡ ಇಲ್ಲದವರಂತೆ ಅವರು ಚಡಪಡಿಸುತ್ತಿದ್ದರು. ಮತ್ತೊಂದು ಬಾಗಿಲಿನ ನಿರೀಕ್ಷೆಯೇ ಇಲ್ಲದೆ ಬದುಕುವುದು ಕಷ್ಟವೇ.
ದೂರದಲ್ಲೆಲ್ಲೋ ಬಸ್ಸು ಬಂದ ಸದ್ದು. ಎಲ್ಲರ ಕಿವಿಯೂ ಚುರುಕಾಯಿತು. ಆ ಬಸ್ಸಿನಲ್ಲಿ ಹತ್ತಿ ಹೋಗೋಣ ಎಂದುಕೊಂಡು ಅನೇಕರು ಲಗೇಜು ಕೆಳಗಿಳಿಸಿ ಕಾದರು. ಬಸ್ಸು ಕೆಟ್ಟು ನಿಲ್ಲುವುದು, ಜನ ಕಾಯುವುದು ಹೊಸತೇನಲ್ಲ ಎಂಬಂತೆ ಆ ಬಸ್ಸು ಯಾರ ಮೇಲೂ ಕರುಣೆ ತೋರದೇ ಹೊರಟು ಹೋಯಿತು. ಮುಂದಿನ ಊರಿಗೆ ಹೋಗಿ ಫೋನ್ ಮಾಡಿ ಬೇರೆ ಬಸ್ಸು ತರಿಸುತ್ತೇನೆ ಎಂದು ಡ್ರೈವರ್ ಕೂಡ ಆ ಬಸ್ಸು ಹತ್ತಿ ಹೊರಟೇ ಬಿಟ್ಟ.
ಒಂಟಿಯಾಗಿ ಉಳಿದ ಕಂಡಕ್ಚರಿಗೆ ಸಹಸ್ರನಾಮಾರ್ಚನೆಯಾಯಿತು. ಆ ಬಸ್ಸಿನಲ್ಲಿ ಬಂದದ್ದೇ ತಪ್ಪು ಎಂದು ಅನೇಕರು ಅವನ ಮೇಲೆ ಹರಿಹಾಯ್ದರು. ಮತ್ಯಾರೋ ಪ್ರಾಣ ಹೋಗುತ್ತೆ ಎಂದು ಹಸಿವಿನಿಂದ ಚಡಪಡಿಸುತ್ತಾ ತಿನ್ನುವುದಕ್ಕೆ ಏನಾದರೂ ಕೊಡಿ ಎಂದು ಸಿಕ್ಕಸಿಕ್ಕವರನ್ನು ಕೇಳತೊಡಗಿದರು. ಅವರಿಗೆ ಡಯಾಬಿಟೀಸು ಎಂದು ಯಾರೋ ಹೇಳಿ ಅವರ ಕರುಣಾಜನಕ ಸ್ಥಿತಿಯನ್ನು ಮತ್ತಷ್ಟು ಕರುಣಾಮಯಿಯಾಗಿಸಿದರು.
ಎಷ್ಟು ಹೊತ್ತಾದರೂ ಬಸ್ಸು ಬರಲಿಲ್ಲ. ಅದು ಬಂದರೆ ಬಂತು ಬರದಿದ್ದರೆ ಇಲ್ಲ ಎಂಬಂತೆ ಆ ತಾಯಿ ಮಗು ಆಟವಾಡುತ್ತಲೇ ಇದ್ದರು. ಅವರನ್ನು ಬೆಳಗುತ್ತಿದ್ದ ಸಂಜೆ ಬಿಸಿಲು ಕ್ರಮೇಣ ಹೊಳಪು ಕಳಕೊಳ್ಳುತ್ತಿತ್ತು. ತಣ್ಣನೆ ಗಾಳಿ ಬೀಸತೊಡಗಿ ಎಲ್ಲರಿಗೂ ಹಿತವೆನ್ನಿಸಿತು. ಮೈಮನಗಳು ತಣ್ಣಗಾಗುತ್ತಿದ್ದಂತೆ ಹಲವರು ನಿಂತಲ್ಲೇ ಅಡ್ಡಾದರು. ಕೆಲವರು ರಸ್ತೆ ಬದಿಯಲ್ಲೇ ನಿದ್ದೆ ಹೋದರು.
ನಾವು ನೋಡುತ್ತಿದ್ದ ಹಾಗೆ ತಾಯಿ ಮಗು ಕತ್ತಲಲ್ಲಿ ಕರಗಿಹೋಗಿ ಅವರ ಮಾತಷ್ಟೇ ಕೇಳಿಸುತ್ತಿತ್ತು. ತಾಯಿ ಮಗನಿಗೇನೋ ಗುಟ್ಟುಹೇಳುವಂತೆ ಮಾತಾಡುತ್ತಿದ್ದಳು. ಮಗ ಇಡೀ ಜಗತ್ತಿಗೇ ಕೇಳುವಂತೆ ಕಿರುಚಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿಗೆಲ್ಲ ಮತ್ತಷ್ಟು ಕತ್ತಲು ಹಬ್ಬಿ ನಾವು ಕೂತ ಜಾಗದಿಂದ ಏನೇನೂ ಕಾಣಿಸುತ್ತಿರಲಿಲ್ಲ. ಬರೀ ತಾಯಿ ಮಗುವಿ.ನ ಮಾತುಗಳು ಬೀಸುತ್ತಿದ್ದ ತಂಗಾಳಿಯಲ್ಲಿ ಆಗಾಗ ಬಂದು ಕಿವಿಗೆ ತಾಕುತ್ತಿದ್ದವು.
ಅದು ಮುಗಿಯದ ರಾತ್ರಿಯಂತೆ ಭಾಸವಾಗುತ್ತಿತ್ತೇನೋ. ಅಷ್ಟರಲ್ಲಿ ಚಂದ್ರ ಮೂಡಿದ. ಚಂದಿರನ ತಂಬೆಳಕಲ್ಲಿ ಇಡೀ ಜಗತ್ತು ವಿಚಿತ್ರ ಹೊಳಪಿನಿಂದ ಕಂಗೊಳಿಸುತ್ತಿತ್ತು. ತಾಯಿ ಈಗ ಮಗುವಿಗೆ ಮೂಡುತ್ತಿದ್ದ ಚಂದ್ರನನ್ನು ತೋರಿಸುತ್ತಿದ್ದಳು. ಚಂದಿರನನ್ನು ನೋಡಿದ ಮಗು ನಗುತ್ತಿತ್ತು. ಅಮ್ಮನಿಲ್ಲದ ತಬ್ಬಲಿ ಚಂದಿರನೂ ನಗುತ್ತಿದ್ದ.
ನಾವು ಎಲ್ಲವನ್ನೂ ನೋಡುತ್ತಾ ಕೂತು ಬಿಟ್ಟೆವು. ಅಲ್ಲೆಲ್ಲೋ ಮತ್ತೆ ನವಿಲು ಕೂಗಿತು. ರಸ್ತೆಯ ಒಂದು ಬದಿಯಲ್ಲಿ ಆಳದ ಕಣಿವೆ. ದೂರದಲ್ಲಿ ಎಲ್ಲೋ ಮಳೆಯಾಗಿರಬೇಕು ಎಂದು ನಾವು ಊಹಿಸುತ್ತಿದ್ದಂತೆ ದೂರದಲ್ಲೆಲ್ಲೋ ಜಲಪಾತದ ಸದ್ದು ಕೇಳಿಸಿತು. ಇಷ್ಟು ಹೊತ್ತೂ ಆ ಸದ್ದು ನಮ್ಮ ಕಿವಿಗೆ ಬಿದ್ದಿರಲೇ ಇಲ್ಲವಲ್ಲ ಎಂದು ನಾವು ಅಚ್ಚರಿಪಟ್ಟೆವು.
ತಾಯಿ ಆ ಕತ್ತಲಲ್ಲೇ ರಸ್ತೆ ಪಕ್ಕದ ಗಿಡದಲ್ಲಿ ಅರಳಿದ ಹೂವು ಕೀಳುತ್ತಿದ್ದಳು. ಮಗು ಅಂಥ ಒಂದಷ್ಟು ಹೂವನ್ನು ಕೈಯಲ್ಲಿಟ್ಟುಕೊಂಡು ದೇವಲೋಕದಿಂದ ಇಳಿದ ಕಂದನಂತೆ ಕಾಣಿಸುತ್ತಿತ್ತು. ಅದೇ ಕತ್ತಲೆಯಲ್ಲಿ ತಾಯಿ ಬಸ್ಸಿಗೆ ಹತ್ತಿ ಪುಟ್ಟದೊಂದು ಬ್ಯಾಗು ತಂದು ಮಗುವಿಗೆ ಹಾಲು ಕುಡಿಸಿದಳು. ಮಗುವಿನ ತುಟಿಯ ಇಕ್ಕೆಲದಲ್ಲಿ ಇಳಿದ ಹಾಲನ್ನು ಸೆರಗಿನಿಂದ ಒರೆಸಿದಳು.
ಇನ್ನೇನು ಅವಳ ಸಹನೆ ಕೆಡುತ್ತದೆ. ಅವಳು ಕಿರುಚುತ್ತಾಳೆ. ಕನಿಷ್ಟ ಮುಖ ಕಿವಿಚುತ್ತಾಳೆ. ಮಗುವಿನ ಮೇಲೆ
ರೇಗುತ್ತಾಳೆ ಎಂದು ನಾವು ಕಾದೆವು. ಅವಳ ಮುಖದಲ್ಲಿ ಹಾಗಿದ್ದರೂ ಮಂದಹಾಸವೇ ಇತ್ತು. ಆ ಬೆಳಕಿನಲ್ಲಿ ಅದು ತನ್ನ ಪ್ರಭೆಯನ್ನು ಹೆಚ್ಚಿಸಿಕೊಂಡು ಚಂದಿರನ ಜೊತೆ ಸ್ಪರ್ಧೆಗಿಳಿದಂತೆ ಕಾಣಿಸುತ್ತಿತ್ತು.
ಇದ್ದಕ್ಕಿದ್ದಂತೆ ತಣ್ಣನೆ ಗಾಳಿ ಬೀಸಿತು. ಆ ಗಾಳಿ ಮಗುವಿನ ಕಿವಿ ಹೊಕ್ಕಿರಬೇಕು. ಮಗು ಕೇಕೆ ಹಾಕಿತು. ನವಿಲಿನ ಕೇಕೆಗಿಂತ ಇದೇ ಚೆಂದ ಅನ್ನಿಸಿತು. ಆ ಕ್ಷಣ ಮಗು ಕೂಡ ನಮಗೆ ನವಿಲಿನ ಹಾಗೆ ಕಾಣಿಸಿತು. ಅದನ್ನು ನೋಡುತ್ತಾ ನಾವು ನಮ್ಮೊಳಗೇ ನಕ್ಕೆವು.
ಬಸ್ಸುಗಳ ಓಡಾಟ ಶುರುವಾಗಿತ್ತು. ಒಂದೆರಡು ಬಸ್ಸುಗಳು ಪ್ರಖರ ಬೆಳಕು ಚೆಲ್ಲುತ್ತಾ ನಮ್ಮನ್ನು ಹಾದು ಹೋದವು. ಅವಕ್ಕೆ ಕೈ ಅಡ್ಡ ಹಿಡಿದು ಕಾಡಿ ಬೇಡಿ ಕೆಲವರು ಬಸ್ಸು ಹತ್ತಿಕೊಂಡು ಹೊರಟು ಹೋದರು. ಹೋದವರನ್ನು ನೋಡುತ್ತಾ ಅನೇಕರು ಅವರ ಅದೃಷ್ಟ ತಮಗಿಲ್ಲವಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದರು.
ಹೀಗೆ ಕಾಯುತ್ತಾ ಎಷ್ಟೊ ಹೊತ್ತು ಕಳೆದಿರಬೇಕು. ಮಗು ತಾಯಿಯ ಮಡಿಲಲ್ಲಿ ನಿದ್ದೆ ಮಾಡುತ್ತಿತ್ತು. ಆ ಮಗುವಿನ ಸಿಹಿನಿದ್ದೆಯೇ ತನ್ನ ಏಕೈಕ ಕಾಯಕ ಎಂಬಂತೆ ತಾಯಿ ಅದನ್ನು ಅವಚಿಕೊಂಡಿದ್ದಳು. ಎಲ್ಲರ ತಾಳ್ಮೆಯೂ ಕೆಟ್ಟು ನಾವೂ ಕೂಡ ಸಿಟ್ಟನ್ನು ಹೊರಹಾಕುವ ಸ್ಥಿತಿಗೆ ಬಂದು ತಲುಪಿದ್ದೆವು. ಇನ್ನೇನು ಕಂಡಕ್ಟರ್ ಮೇಲೆ ನಮ್ಮ ಸಿಟ್ಟು ವ್ಯಕ್ತವಾಗಬೇಕು ಅನ್ನುವಷ್ಟರಲ್ಲಿ ಡ್ರೈವರ್ ಮತ್ತೊಂದು ಬಸ್ಸಿನೊಂದಿಗೆ ಹಾಜರಾದ.
ಎಲ್ಲರೂ ಹೊಸ ಜೀವ ಬಂದಂತೆ ಎದ್ದು ಆ ಬಸ್ಸು ಹತ್ತಿದರು. ನಾವೂ ಬಸ್ಸು ಹತ್ತಿ ಕೂತೆವು. ಎಲ್ಲರ ಅವಸರ ಮುಗಿದ ನಂತರ ಆ ತಾಯಿ ಮಗುವನ್ನು ಅವಚಿಕೊಂಡು ಬಸ್ಸು ಹತ್ತಿ ಕೂತಳು. ಅವಳ ತುಟಿಯ ಮಂದಹಾಸ ಕಿಂಚಿತ್ತೂ ಮಾಸಿರಲಿಲ್ಲ.
ಬಸ್ಸು ಹೊರಡುತ್ತಿದ್ದಂತೆ ನಾವು ನಿದ್ದೆ ಹೋದೆವು. ಕಣ್ಣು ಬಿಡುವ ಹೊತ್ತಿಗೆ ಬೆಳಕಾಗಿತ್ತು. ಹಿಂತಿರುಗಿ ನೋಡಿದರೆ ಅಲ್ಲಿ ಆ ತಾಯಿ ಮತ್ತು ಮಗು ಮತ್ತೆ ಆಟವಾಡುತ್ತಾ ಕೂತಿದ್ದರು. ಮಗು ತಾಯಿಯ ಮುಂಗುರಳನ್ನು ತೀಡುತ್ತಿತ್ತು. ತಾಯಿ ಕಿಲಕಿಲ ನಗುತ್ತಿದ್ದಳು.
ಬೆಳಗಾಯಿತು.

Monday, September 20, 2010

ಬಂಡಾಯ; ಮಳೆ ನಿಂತರು ಮರದ ಹನಿಬಿಡದು ಎಂಬಂತೆ

ಬಂಡಾಯ ಸಾಹಿತ್ಯಕ್ಕೆ ಮೂವತ್ತು ವರ್ಷ. ಮೂವತ್ತೆಂದರೆ ದಂಗೆಯೇಳುವ ವಯೋಮಾನ ದಾಟಿ, ಮನಸ್ಸು ಹದಗೊಳ್ಳುವ ಕಾಲಾವಧಿ. ಬಂಡಾಯ ಚಳವಳಿ ಕೂಡ ಹೆಚ್ಚೂಕಮ್ಮಿ ಅದೇ ಸ್ಥಿತಿಯಲ್ಲಿದೆ. ಕೆಲವೊಮ್ಮೆ ಎಲ್ಲವನ್ನೂ ಒಪ್ಪಿಕೊಳ್ಳುವಂತೆ, ಮತ್ತೆ ಕೆಲವೊಮ್ಮೆ ಸಕಲವನ್ನು ಧಿಕ್ಕರಿಸುವಂತೆ ನಟಿಸುತ್ತಿದ್ದ ಬಂಡಾಯ ಮನೋಧರ್ಮವನ್ನು ಒಂದು ಅವಧಿಯಲ್ಲಿ ನಮ್ಮ ರಾಜಕಾರಣ ಕೈ ಹಿಡಿದು ನಡೆಸಿತ್ತು. ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದ ಅನೇಕರು ಸರ್ಕಾರದ ಆಪ್ತವಲಯದಲ್ಲಿ ಕಾಣಿಸಿಕೊಂಡಿದ್ದರು. ಅನೇಕರು ಈಗಲೂ ಅದೇ ಮೊಗಸಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾಜಕೀಯ ಅವರ ಕೈ ಹಿಡಿದು ನಡೆಸಿತೋ, ಅವರು ರಾಜಕಾರಣದ ಕೈ ಹಿಡಿದು ನಡೆಸಿದರೋ ಎಂಬುದು ಸ್ಪಷ್ಟವಿಲ್ಲ. ಇಬ್ಬರು ಪರಸ್ಪರ ಕೈ ಕೈ ಹಿಡಿದುಕೊಂಡು ನಡೆಯುವುದನ್ನು ದೂರದಿಂದ ನೋಡಿದವರಿಗೆ, ನಡೆಯುವವರು ಯಾರು, ನಡೆಸುತ್ತಿರುವವರು ಯಾರು ಎಂಬುದು ಸ್ಪಷ್ಟವಾಗುವುದಿಲ್ಲ.
ನವ್ಯಕ್ಕೂ ಬಂಡಾಯಕ್ಕೂ ಅಂಥ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ನವ್ಯ ಚಳವಳಿಯಲ್ಲಿ ಎಲ್ಲರೂ’ ಇದ್ದರು. ಬಂಡಾಯ ಚಳವಳಿ ಆರಂಭಿಸಿದಾಗ ಅಲ್ಲಿದ್ದವರು ಕೆಲವರು’ ಮಾತ್ರ. ಆ ಕೆಲವರಿಗೂ ನವ್ಯದ ಜೊತೆ ಅಂಥ ಜಗಳವೇನೂ ಇರಲಿಲ್ಲ. ಬಂಡಾಯದ ಧಾಟಿಗೂ ನವ್ಯ ಶೈಲಿಗೂ ಅಂಥ ಎದ್ದು ಕಾಣುವ ವ್ಯತ್ಯಾಸವೂ ಇರಲಿಲ್ಲ. ಕ್ರಮೇಣ ಬಂಡಾಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ದಲಿತ ಸಾಹಿತ್ಯವನ್ನೂ ತನ್ನ ಒಂದು ಕವಲು ಎಂಬಂತೆ ಭಾವಿಸಿದ್ದೂ ಇದೆ.
ನವ್ಯಚಳವಳಿಯನ್ನು ಪತ್ರಿಕೆಗಳೂ ಲೇಖಕರೂ ಪೋಷಿಸಿದಷ್ಟು ಬಂಡಾಯ ಚಳವಳಿಯನ್ನು ಪೋಷಿಸಲಿಲ್ಲ ಅನ್ನುವುದೂ ಸತ್ಯ. ಹೀಗಾಗಿ ಅದು ಕೇವಲ ತನ್ನ ಸತ್ವದಿಂದಾಗಿಯೇ ಉಳಿಯಬೇಕಾಗಿತ್ತು. ನವ್ಯಕ್ಕೆ ತನ್ನ ರೂಪರೇಷೆಗಳನ್ನು ಅಭಿವ್ಯಕ್ತಿ ವಿಧಾನಗಳನ್ನು ವಿಮರ್ಶೆಯ ಪರಿಭಾಷೆಗಳನ್ನು ಯುರೋಪ್ ಮತ್ತು ಇಂಗ್ಲಿಷ್ ಸಾಹಿತ್ಯದಿಂದ ಪಡೆದುಕೊಂಡು ತನ್ನ ಮೂಸೆಯಲ್ಲಿ ಅದನ್ನು ಬಡಿದು ಕಾಯಿಸಿ ಹೊಸ ಆಭರಣವೆಂಬಂತೆ ಧರಿಸಿಕೊಂಡಿತು. ನವ್ಯ ಕಾವ್ಯದ ಲಯಬದ್ಧತೆ, ರೂಪಕ, ಅಭಿವ್ಯಕ್ತಿಗಳಲ್ಲಿ ಇಂಗ್ಲಿಷ್ ಕವಿಗಳ, ಕಾದಂಬರಿಕಾರರ, ವಿಮರ್ಶಕರ ನೆರಳಿತ್ತು. ಬಂಡಾಯ ಆ ಹೊತ್ತಿಗೆ, ದೇಸಿ ಅಭಿವ್ಯಕ್ತಿಯಂತೆ ಕಾಣಿಸಿದ್ದಂತೂ ನಿಜ. ನಮ್ಮ ಜನಪದ, ನಮ್ಮ ನೋವು, ನಮ್ಮವರ ಶೋಷಣೆಗಳನ್ನು ಹೊತ್ತ ಕತೆ, ಕವಿತೆಗಳು ಆರಂಭದಲ್ಲಿ ಬಂಡಾಯ ಚಳವಳಿಯನ್ನು ಮುನ್ನಡೆಸಿದವು.
ಒಂದು ವಿಚಿತ್ರ ತಲ್ಲಣದೊಂದಿಗೇ ಬಂಡಾಯ ಚಳವಳಿ ಆರಂಭವಾಯಿತು ಎನ್ನಬೇಕು. ಅದಕ್ಕೆ ನವ್ಯದ ತೆಕ್ಕೆಯಿಂದ ಬಿಡಿಸಿಕೊಳ್ಳುವ ಅನಿವಾರ್ಯತೆಯಿತ್ತು. ನವ್ಯ ಸಾಹಿತ್ಯ ಅರ್ಥಪೂರ್ಣತೆಯತ್ತ ತುಡಿಯುತ್ತ, ಶ್ರೇಷ್ಠತೆಯ ವ್ಯಾಮೋಹಕ್ಕೆ ಒಳಗಾಗುತ್ತಾ ಓದುಗರಿಂದ ದೂರವಾಗುವ ಹಂತ ತಲುಪಿತ್ತು. ಕನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಕಳಕೊಂಡದ್ದು ನವ್ಯದ ಅವಧಿಯಲ್ಲೇ. ಬಂಡಾಯ ಚಳವಳಿ ಆ ಓದುಗರನ್ನು ಮರಳಿಸಲಿಲ್ಲ. ಬದಲಾಗಿ, ಹೊಸ ಓದುಗರನ್ನು ದೊರಕಿಸಿಕೊಟ್ಟಿತು.
ಆ ಹುಮ್ಮಸ್ಸಿನಲ್ಲೇ ಬಂಡಾಯ ಚಳವಳಿ, ನವ್ಯಕ್ಕಿಂತ ವಿಸ್ತಾರವೂ ವ್ಯಾಪಕವೂ ಆಗುತ್ತದೆ ಎಂದು ಆರಂಭದ ದಿನಗಳಲ್ಲಿ ನಂಬಿದವರಿದ್ದರು. ಹಾಗೆ ನೋಡಿದರೆ ಬಂಡಾಯ ಮತ್ತು ನವ್ಯ ಚಳವಳಿಗಳು ಜೊತೆಜೊತೆಯಾಗಿಯೇ ಸಾಗಬಹುದಾಗಿತ್ತೋ ಏನೋ? ಯಾಕೆಂದರೆ ನವ್ಯ ಕೂಡ ಒಂದು ಅರ್ಥದಲ್ಲಿ ಬಂಡಾಯವೇ ಆಗಿತ್ತು. ಅಲ್ಲಿ ನವೋದಯದ ವಿರುದ್ಧ ಬಂಡಾಯ ಎದ್ದ ಸೂಚನೆಯಿತ್ತು. ನವೋದಯ ಮತ್ತು ನವ್ಯದ ನಡುವಣ ಅವಧಿಯಲ್ಲಿ ಬರೆದ ಪ್ರಗತಿಶೀಲರು, ನವ್ಯ ಮತ್ತು ಬಂಡಾಯ ಎರಡರ ಸತ್ವವನ್ನೂ ತಮ್ಮೊಳಗೆ ಅವಿತಿಟ್ಟುಕೊಂಡಂತಿದ್ದರು.
ನಾಯಕರಿಲ್ಲದೇ ಹೋದರೆ ಒಂದು ಚಳವಳಿ ಹೇಗೆ ಮಾಸುತ್ತಾ ಹೋಗುತ್ತದೆ ಎನ್ನುವುದಕ್ಕಿಂತ, ಕಾಲಕ್ರಮೇಣ ಹೇಗೆ ಸಾಹಿತ್ಯದ ಆದ್ಯತೆ ಬೇರೆಯಾಗುತ್ತಾ ಹೋಗುತ್ತವೆ ಎನ್ನುವುದನ್ನು ನೋಡಬೇಕು. ಪ್ರಗತಿಶೀಲ ಲೇಖಕರು ಕೂಡ ಅಭಿವೃದ್ಧಿಯನ್ನು ಪೋಷಿಸುತ್ತಾ, ಮೂಢನಂಬಿಕೆ, ಕಂದಾಚಾರ, ಜಾತೀಯತೆಯ ವಿರುದ್ಧ ಸಿಡಿದೆದ್ದವರೇ ಆಗಿದ್ದರು. ನವ್ಯ ಅವೆಲ್ಲವನ್ನೂ ಮೀರಿದ್ದು ವ್ಯಕ್ತಿಯ ಅಂತರಂಗದ ತುಮುಲ, ತೊಳಲಾಟ. ಆ ತೊಳಲಾಟಕ್ಕೆ ಸಾಮಾಜಿಕ ಸ್ಥಿತಿಗತಿಯಷ್ಟೇ ಕಾರಣವಲ್ಲ. ವ್ಯಕ್ತಿಯ ಒಳಗಣ ತಲ್ಲಣ ಎನ್ನುವುದನ್ನು ಪ್ರತಿಪಾದಿಸುತ್ತಿರುವಂತೆ ಕಾಣಿಸಿತು. ಬಂಡಾಯ ಸಾಹಿತ್ಯಕ್ಕೆ ನೆರವಾದದ್ದು ಇದೇ.
ಬಹುಶಃ ೧೯೭೯ರಲ್ಲಿರಬೇಕು. ಧರ್ಮಸ್ಥಳದಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅದೇ ದಿನ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಬಂಡಾಯ ಮತ್ತು ನವ್ಯ ಎರಡು ವಿಭಿನ್ನ ದಿಕ್ಕುಗಳನ್ನು ಪ್ರತಿನಿಧಿಸುತ್ತಿದೆ ಎಂಬುದಕ್ಕೆ ಕಾರಣವಾದದ್ದು ಇದೇ ಅಂಶ. ಹಾಗೆ ನೋಡಿದರೆ, ದಂಗೆಯೇಳುತ್ತಲೇ ಇರಬೇಕಾಗುತ್ತದೆ ಪ್ರತಿಯೊಬ್ಬನೂ.. ಎಂದು ಮೊಟ್ಟಮೊದಲು ಬರೆದವರು ಅಡಿಗರೇ. ಅವರು ಅಂತರಂಗದ ದಂಗೆಗೆ ಒತ್ತು ಕೊಟ್ಟಿದ್ದರು. ಬಂಡಾಯ ಸಾಮಾಜಿಕ ನೆಲೆಗಟ್ಟಿನಲ್ಲಿ ಹೆಚ್ಚು ಮೂರ್ತರೂಪದಲ್ಲಿ ಪ್ರಕಟಗೊಂಡಿತು.
ಹಾಗೆ ನೋಡಿದರೆ ಬಂಡಾಯ ಒಂದು ಸಾಹಿತ್ಯ ಸಂಘಟನೆಯಾಗಿ ಆರಂಭವಾಗಲಿಲ್ಲ. ಅದು ಒಂದು ಸಾಮಾಜಿಕ ಚಳವಳಿಯೆಂಬಂತೆ ಶುರುವಾಯಿತು. ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ವಿಚಾರಧಾರೆಗಳನ್ನು ಅಂಗೀಕರಿಸಿಕೊಂಡು ಅಳವಡಿಸಿಕೊಂಡು ಬಲವಾದ ತಾತ್ವಿಕ ನೆಲೆಗಟ್ಟಿನೊಂದಿಗೆ ಬೆಳೆಯತೊಡಗಿತು. ಇದೇ ಸಂದರ್ಭದಲ್ಲಿ ನಡೆದ ಮತ್ತೊಂದು ಘಟನೆ, ಬಂಡಾಯದ ದಿಕ್ಕನ್ನು ಕೊಂಚ ಬದಲಾಯಿಸಿತು ಎನ್ನಬೇಕು.
೧೯೯೦ರಲ್ಲಿ ಆರ್ ಸಿ ಹಿರೇಮಠ್ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಅದನ್ನು ವಿರೋಧಿಸಿ ಬೆಂಗಳೂರಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಬಂಡಾಯ ಮತ್ತು ನವ್ಯ ಲೇಖಕರು ಒಟ್ಟಾದರು. ಇದ್ದಕ್ಕಿದ್ದ ಹಾಗೆ ಸಾಹಿತ್ಯದಲ್ಲಿ ಬೇರೆಲ್ಲದಕ್ಕಿಂತ ಶ್ರೇಷ್ಠತೆಯೇ ಮುಖ್ಯ ಎಂದು ಅನೇಕರು ವಾದಿಸಿದರು. ಆಗ ಶ್ರೇಷ್ಠತೆಯನ್ನು ಒಂದು ವ್ಯಸನ ಎಂದು ಕರೆದವರು ಕೆ ವಿ ಸುಬ್ಬಣ್ಣ ಒಬ್ಬರೇ. ಆ ಅವಧಿಯಲ್ಲಿ ಶ್ರೇಷ್ಠತೆಯ ವಾದ ಎಷ್ಟೊಂದು ಚರ್ಚೆಗಳಿಗೆ ಕಾರಣವಾಯಿತು ಎಂದರೆ ಸಾಹಿತ್ಯದ ಬೇರೆಲ್ಲ ಚಳವಳಿಗಳೂ ಶ್ರೇಷ್ಠತೆಯ ಚಳವಳಿಯೊಳಗೆ ಕರಗಿಹೋಗುತ್ತವೆ ಎಂಬ ಭಾವನೆ ಹುಟ್ಟುವಂತಿತ್ತು.
**********
ಮೂವತ್ತು ವರ್ಷಗಳ ನಂತರ ತಿರುಗಿ ನೋಡಿದರೆ ಬಂಡಾಯದ ಹುರುಪು, ಹುಮ್ಮಸ್ಸು, ಆರಂಭದ ದಿನಗಳಲ್ಲಿ ಬಂದ ಮೈ ನವಿರೇಳಿಸುವ ಕತೆ, ಕವಿತೆಗಳೆಲ್ಲ ಕಣ್ಮುಂದೆ ಸುಳಿಯುತ್ತವೆ. ಬರಗೂರು, ಚನ್ನಣ್ಣ ವಾಲೀಕಾರ, ಕಾಳೇಗೌಡ ನಾಗವಾರ, ಕುಂವೀ, ಚಂದ್ರಶೇಖರ ಪಾಟೀಲ, ಬೆಸಗರಹಳ್ಳಿ ರಾಮಣ್ಣ, ಬೊಳುವಾರು, ಗೀತಾ ನಾಗಭೂಷಣ, ಬಿಟಿ ಲಲಿತಾ ನಾಯಕ, ಸುಧಾಕರ- ಥಟ್ಟನೆ ನೆನಪಾಗುವ ಈ ಹೆಸರುಗಳ ಜೊತೆ ಇನ್ನಷ್ಟು ಮಂದಿ ಬಂಡಾಯ ಸಾಹಿತ್ಯ ಎಂಬ ಹಣೆಪಟ್ಟಿ ಇಲ್ಲದೆಯೂ ಮತ್ತೆ ಮತ್ತೆ ಓದಬಹುದಾದಂಥ ಕತೆ, ಕವಿತೆ, ಕಾದಂಬರಿಗಳನ್ನು ಕೊಟ್ಟರು. ಸಾಮಾಜಿಕ ಕಾಳಜಿಯ ಜೊತೆಗೆ ವೈಯಕ್ತಿಕ ಹಸಿವೂ ಇವರಲ್ಲಿದ್ದುದರಿಂದ ಅದು ಸಾಧ್ಯವಾಯಿತೆನ್ನಬೇಕು. ಅಲ್ಲದೇ, ಒಂದು ಚಳವಳಿಯನ್ನು ಕಟ್ಟಿ ಬೆಳೆಸುವ ಕಾಳಜಿ ಮತ್ತು ಬದ್ಧತೆಯೂ ಅವರಲ್ಲಿತ್ತು. ಆರಂಭದ ದಿನಗಳ ಕಸುವು, ಫಲವತ್ತತೆ ಮತ್ತು ಜೀವಂತಿಕೆಯನ್ನು ಅದು ನಂತರದ ದಿನಗಳಲ್ಲೂ ಉಳಿಸಿಕೊಂಡಿದ್ದರೆ ಬಂಡಾಯ ಚಳವಳಿ ತನ್ನ ಬಿಸುಪನ್ನು ಇವತ್ತೂ ಉಳಿಸಿಕೊಂಡಿರುತ್ತಿತ್ತೋ ಏನೋ?
ಮೂವತ್ತು ವರ್ಷದ ನಂತರವೂ ಬಂಡಾಯ ಸಾಹಿತ್ಯ ಎಂದರೆ ಬರಗೂರು, ವಾಲೀಕಾರ, ನೀರಮಾನ್ವಿ, ವೀರಭದ್ರ, ಕಾಳೇಗೌಡ, ಬೆಸಗರಹಳ್ಳಿ, ಪಾಟೀಲ ಮುಂತಾದವರೇ. ಆರಂಭದ ದಿನಗಳಲ್ಲಿ ಅವರು ಕೊಟ್ಟ ಸತ್ವಯುತ ಸಾಹಿತ್ಯ ಮತ್ತು ಚಳವಳಿಯನ್ನು ಪ್ರಭಾವಿಸಿದ ರೀತಿ ಅನನ್ಯ. ನಂತರದ ದಿನಗಳಲ್ಲಿ ಬಂಡಾಯ ಸಾಹಿತ್ಯಕ್ಕೆ ಅಷ್ಟೇ ತೀವ್ರತೆಯಿಂದ ಫಲವತ್ತು ಕೊಡುಗೆಯನ್ನು ನೀಡುವವರು ಬರಲಿಲ್ಲ. ಆನಂತರ ಬಂದ ಬಹುತೇಕ ಲೇಖಕರು ಈ ತಮ್ಮ ತಮ್ಮ ಸ್ವಂತ ನೆಲೆಯನ್ನು ಕಂಡುಕೊಳ್ಳುವಲ್ಲಿ ಉತ್ಸಾಹ ತೋರಿದರೇ ಹೊರತು, ಒಂದು ಚಳವಳಿಗೆ ನಿಷ್ಠರಾಗುವ ಆಸಕ್ತಿಯನ್ನೂ ಹೊಂದಿರಲಿಲ್ಲ. ಹೀಗಾಗಿ ಬಂಡಾಯ ಎನ್ನುವುದು ನವ್ಯ ಮತ್ತು ಪ್ರಗತಿಶೀಲದ ಹಾಗೆ ಒಂದು ಕಾಲದ ಪ್ರಖರ ಪ್ರತಿಭೆಯಂತೆ ಕಾಣಿಸುತ್ತಿದೆಯೇ ಹೊರತು, ಇವತ್ತು ಚಲಾವಣೆಯಲ್ಲಿರುವ ನಾಣ್ಯದಂತೆ ಕಾಣಿಸುತ್ತಿಲ್ಲ. ನೆನಪುಗಳ ಜೋಕಾಲಿಯಲ್ಲಿ ಅದು ಹಿಂದಕ್ಕೂ ಮುಂದಕ್ಕೂ ತನ್ನನ್ನು ಜೀಕಿಕೊಳ್ಳುತ್ತಾ, ಆ ಓಡಾಟದಲ್ಲೇ ಎರಡೂ ಕಾಲಗಳನ್ನೂ ಸ್ಪರ್ಶಿಸುವುದಕ್ಕೆ ಹಂಬಲಿಸುತ್ತಿರುವಂತೆ ತೋರುತ್ತದೆ.
**********
ಹಾಗಿದ್ದರೆ ಇವತ್ತಿನ ಸಾಹಿತ್ಯದ ನಿಲುವುಗಳೇನು? ರಹಮತ್ ತರೀಕೆರೆಯಂಥ ವಿಮರ್ಶಕರು ತಾತ್ವಿಕತೆ, ಸಾಮಾಜಿಕ ಬದ್ಧತೆಯನ್ನು ಮುಂದಿಟ್ಟುಕೊಂಡು ಸಾಹಿತ್ಯಕೃತಿಯನ್ನೂ ಲೇಖಕರನ್ನೂ ಪರಿಭಾವಿಸುವ ಉತ್ಸಾಹ ತೋರುತ್ತಿದ್ದಾರೆ. ಮತ್ತೊಂದು ಕಡೆ ವಿಚಾರವಾದ, ಬೌದ್ಧಿಕತೆ ಎರಡನ್ನೂ ಒಳಗೊಂಡ ಬರಹಗಳನ್ನು ಮೆಚ್ಚುವ ವಿಮರ್ಶಕರು ಕಾಣಿಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿ ವಿಮರ್ಶೆಯ ಹೆಸರಲ್ಲಿ ಹೊರಗಿನಿಂದ ಮತ್ತೊಂದಷ್ಟು ವಿಚಾರಗಳು ಹರಿದು ಬರುತ್ತಿವೆ. ನೋಮ್ ಚಾಮ್‌ಸ್ಕಿಯಂಥವರನ್ನು ಹಿಡಿದು ತಂದು, ನಮ್ಮ ಪರಿಸರಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಯತ್ನಗಳು ಸೋಲು ಕಂಡಿವೆ. ಇದ್ದಕ್ಕಿದ್ದ ಹಾಗೆ ಮೌಖಿಕ ಪರಂಪರೆಯೂ ಆ ಪರಂಪರೆಗೆ ನಿಷ್ಠರಾದವರೂ ಹಲವರಿಗೆ ಶ್ರೇಷ್ಠರಾಗಿ ಕಾಣಿಸುತ್ತಿದ್ದಾರೆ. ಈ ಮಧ್ಯೆ ಅಭಿಜಾತ ಸಾಹಿತ್ಯಕ್ಕಷ್ಟೇ ತನ್ನ ಮಾನ್ಯತೆ ಎನ್ನುವ ವಿಮರ್ಶಕರೂ ಇದ್ದಾರೆ. ಹಿರಿಯ ವಿಮರ್ಶಕರ ಗಡಿಯಾರ ನಿಂತು ಹೋಗಿ ದಶಕಗಳೇ ಕಳೆದಿವೆ. ಸಾಮಾಜಿಕ ಬದ್ಧತೆಗೆ ತನ್ನನ್ನು ತೆತ್ತುಕೊಂಡಂತೆ ಬರೆಯಬೇಕು ಎನ್ನುವ ಹುಸಿ ಅಪೇಕ್ಷೆಗಳನ್ನು ಹೊಂದಿದ ವಿಮರ್ಶಕರೂ ಆಗೀಗ ಎದುರಾಗುತ್ತಾರೆ.
ಇವೆಲ್ಲದರ ಮಧ್ಯೆ ಓದುಗರು ನಿಜಕ್ಕೂ ಯಾವುದರ ಪರವಾಗಿದ್ದಾರೆ? ಓದುಗರ ಪ್ರಸ್ತಾಪ ಮಾಡಿದರೆ ಸಂಸ್ಕೃತಿ ವಿಮರ್ಶೆ ಮಾಡುವವರಿಗೆ ಸಿಟ್ಟು ಬರುತ್ತದೆ. ಅವರಿಗೆ ಓದುಗರ ಸಂಖ್ಯೆ ಮಾನದಂಡವಲ್ಲ. ಟಾಪ್‌ಟೆನ್ ಪಟ್ಟಿಯಲ್ಲಿ ಒಂದು ಕೃತಿ ಕಾಣಿಸಿಕೊಂಡರೆ ಅದು ಕಳಪೆ ಕೃತಿ ಎಂಬ ಏಕಾಏಕಿ ತೀರ್ಮಾನಕ್ಕೆ ಅವರು ಬಂದುಬಿಡುತ್ತಾರೆ. ಆದರೆ ಅತ್ಯಂತ ಹೆಚ್ಚು ಓದುಗರನ್ನು ಹೊಂದಿದ್ದ ತೇಜಸ್ವಿಯವರ ವಿಚಾರದಲ್ಲಿ ಅದು ನಿಜವಲ್ಲ ಎನ್ನುವುದನ್ನೂ ಅವರೇ ಒಪ್ಪುತ್ತಾರೆ. ಈ ದ್ವಂದ್ವದಲ್ಲಿ ಹುಟ್ಟುವ ಎಡಬಿಡಂಗಿ ತಾತ್ವಿಕತೆ, ಹುಸಿ ಸಾಮಾಜಿಕ ಬದ್ಧತೆ ಮತ್ತು ಯುವ ಲೇಖಕರನ್ನು ಕಂಗಾಲುಮಾಡುವ ದೇಶಕಾಲ ಚಿಂತನೆಯಲ್ಲಿ ಇವತ್ತಿನ ಸಾಹಿತ್ಯಜಗತ್ತು ಡೋಲಾಯಮಾನವಾಗಿದೆ. ಏನೇ ಮಾತಾಡಿದರೂ ಬಸವಣ್ಣ, ಬುದ್ಧ ಮತ್ತು ಅಲ್ಲಮರನ್ನು ಎಳೆದು ತಂದು ಕೆಕ್ಕರಿಸಿ ನೋಡುವವರ ಪಡೆ ಒಂದು ದಿಕ್ಕಿನಲ್ಲಿದೆ. ಮತ್ತೊಂದು ಕಡೆ ಅಷ್ಟೇ ಅಪಾಯಕಾರಿಯಾದ, ಪ್ರಗತಿಶೀಲತೆಯನ್ನೂ ಬಂಡಾಯವನ್ನೂ ಸ್ತ್ರೀಸ್ವಾತಂತ್ರ್ಯವನ್ನೂ ಜಾತ್ಯತೀತ ನಿಲುವನ್ನೂ ಪ್ರಶ್ನಿಸುವ ನಿಲುವು ಕೂಡ ವ್ಯಕ್ತವಾಗುತ್ತಿದೆ. ಈ ಕವಲು-ದಾರಿಯಲ್ಲಿ ನಿಂತ ಓದುಗ ಕಕ್ಕಾಬಿಕ್ಕಿಯಾಗುವಷ್ಚರ ಮಟ್ಟಿಗೆ ಅವನನ್ನು ಗೊಂದಲಗೊಳಿಸುವುದಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಸಾಹಿತ್ಯದ ಹೊಸ ವಿದ್ಯಾರ್ಥಿಗಳಂತೂ ಯಾರನ್ನು ಓದಬೇಕು ಎನ್ನುವ ಕುರಿತು ನಿಜವಾದ ಗೊಂದಲದಲ್ಲಿ ತೊಳಲಾಡುತ್ತಿರುವಂತಿದೆ.
ಇಂಥ ಹೊತ್ತಲ್ಲಿ ಮೂವತ್ತರ ಹೊಸಿಲಲ್ಲಿರುವ ಬಂಡಾಯದ ಕೈಯಲ್ಲಿ ಕೆಂಪುಗುಲಾಬಿ ಕೂಡ ಬಣ್ಣ
ಕಳಕೊಂಡಂತೆ ಕಾಣುತ್ತಿದೆ.

Wednesday, September 15, 2010

ಕರ್ಣನ ನೆನೆನೆನೆದು..

ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು ಹೆಸರಾದವಳು. ಅವಳು ತೇಲಿಸಿದ ಕರ್ಣನಿಗೆ ಕೊನೆಗೂ ದಕ್ಕಿದ್ದು ಕೌಂತೇಯ, ರಾಧೇಯ, ಸೂತಪುತ್ರ ಎಂಬ ಹೆಸರು ಮಾತ್ರ.
ಎಂಥ ವಿಚಿತ್ರ ಸನ್ನಿವೇಶದಲ್ಲಿ ಕರ್ಣ ಸಿಲುಕಿಹಾಕಿಕೊಂಡ ಎನ್ನುವುದನ್ನು ನೆನೆಯಿರಿ. ಕುಂತಿ ನಿರ್ಭಾವದಿಂದ ತೊರೆದ ಕರ್ಣ, ರಥಿಕನೊಬ್ಬನ ಕೈಸೇರಿ, ತನ್ನ ಉತ್ಸಾಹ ಮತ್ತು ತೀವ್ರತೆಗೋಸ್ಕರ ಬಿಲ್ವಿದ್ಯೆ ಕಲಿತು, ದ್ರೋಣರಿಂದ ಶಾಪಗ್ರಸ್ತನಾಗಿ ಆ ಶಾಪವನ್ನು ಮೀರಬಲ್ಲೆ ಎಂಬ ಹುಮ್ಮಸ್ಸಿನಲ್ಲಿ ಬದುಕಿ, ಕೌರವನ ಆಸ್ಥಾನ ಸೇರಿ, ಅವನಿಗೂ ಪ್ರಿಯಮಿತ್ರನಾಗಿ ಬದುಕಿನಲ್ಲಿ ನೆಲೆ ಕಂಡುಕೊಂಡದ್ದು ಒಂದು ರೋಚಕ ಕತೆ. ಅವನ ಬಾಲ್ಯದ ಬಗ್ಗೆ ವಿವರಗಳೇ ಇಲ್ಲ. ಅಂಥವನ್ನು ಆ ಬಡವ ಹೇಗೆ ಬೆಳೆಸಿದ, ಕರ್ಣ ಏನೇನು ಕೇಳುತ್ತಿದ್ದ, ಏನು ಬೇಡುತ್ತಿದ್ದ, ಹೇಗೆ ಮಾತಾಡುತ್ತಿದ್ದ, ತನ್ನ ತಂದೆ ತಾಯಿ ಯಾರೆಂದು ಅವನು ಕೇಳಲೇ ಇಲ್ಲವೇ, ಅವನ ಕರ್ಣಕುಂಡಲ ಮತ್ತು ಕವಚದ ಬಗ್ಗೆ ಅವನಿಗೆ ಬೆರಗು ಮತ್ತು ಹೆಮ್ಮೆ ಇತ್ತಾ, ಅದನ್ನು ನೋಡಿದಾಗಲಾದರೂ ದ್ರೋಣನಿಗೆ ಅನುಮಾನ ಬರಲಿಲ್ಲವಾ?
ಮತ್ತೆ ನೆನಪಾಗುತ್ತಾನೆ ಭಗ್ನಪ್ರೇಮಿ ಕರ್ಣ. ಅವನು ಯಾರನ್ನು ಪ್ರೀತಿಸಿದ್ದ? ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? ಕೌರವನಂಥ ಕೌರವನಿಗೆ ಕರ್ಣನ ಸ್ನೇಹ ಯಾತಕ್ಕೆ ಬೇಕಿತ್ತು? ಕರ್ಣನ ಶೌರ್ಯವನ್ನು ನೋಡಿ ಕೌರವ ಅವನನ್ನು ಮೆಚ್ಚಿಕೊಂಡಿದ್ದನಾ? ಸ್ನೇಹ ಹುಟ್ಟುವುದು ಮೆಚ್ಚುಗೆಯಿಂದ ಅಲ್ಲ. ಅಭಿಮಾನಿಯಾಗಿದ್ದವನು ಗೆಳೆಯನಾಗಲಾರ. ಮೆಚ್ಚಿಕೊಳ್ಳುವವರು ಎತ್ತರದಲ್ಲಿರುತ್ತಾರೆ, ಮೆಚ್ಚಿಕೆಗೆ ಒಳಗಾದವರು ಕೊನೆಯ ಮೆಟ್ಟಿಲಲ್ಲಿ ನಿಂತಿರುತ್ತಾರೆ. ಗೆಳೆಯರ ನಡುವಿನ ಮೆಚ್ಚುಗೆಯಲ್ಲಿ ಮೆಚ್ಚಿಸಲೇಬೇಕೆಂಬ ಹಟವಿಲ್ಲ. ಮೆಚ್ಚಿಸುವುದು ಅನಿವಾರ್ಯವೂ ಅಲ್ಲ.
ಕರ್ಣನ ಕುರಿತು ಪ್ರೇಮ ಕತೆಗಳಿಲ್ಲ. ಹಾಗಿದ್ದರೂ ಅವನೊಬ್ಬ ಭಗ್ನಪ್ರೇಮಿಯಾಗಿದ್ದನೇನೋ ಅನ್ನಿಸುತ್ತದೆ. ಹಸ್ತಿನಾವತಿಯ ಅರಮನೆಯ ಆವರಣದಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿದ್ದ ಕರ್ಣ ಬೇರೊಬ್ಬರ ಜೊತೆ ಆಪ್ತವಾಗಿ ಮಾತಾಡಿದ ಪ್ರಸ್ತಾಪ ಕೂಡ ಮಹಾಭಾರತದಲ್ಲಿ ಇಲ್ಲ. ಅವನದೇನಿದ್ದರೂ ಏಕಾಂತವಾಸ. ಕೌರವ ಬಿಟ್ಟರೆ ಮತ್ಯಾರೂ ತನ್ನವರಲ್ಲ ಎಂದು ನಂಬಿದವನಂತೆ ಬಾಳಿ ಕರ್ಣ ಎಲ್ಲ ಸೈನಿಕರ ಹಾಗೆ ಬಾಳುತ್ತಿದ್ದ. ಅವನಿಗೂ ಮದುವೆಯಾಗಿ, ಮಕ್ಕಳಾದರು. ಕರ್ಣನಿಗೆ ಹಳೆಯದರ ನೆನಪಿರಲಿಲ್ಲ. ತನ್ನ ಹುಟ್ಟಿನ ಕುರಿತು ಜಿಜ್ಞಾಸೆಯೂ ಇರಲಿಲ್ಲ. ಅಪರಾತ್ರಿಗಳಲ್ಲಿ ಅವನು ಹಾಸಿಗೆಯಲ್ಲಿ ಎದ್ದು ಕೂತು ಏನನ್ನೋ ಹಂಬಲಿಸುವವನಂತೆ ಆಕಾಶದತ್ತ ನೋಡುತ್ತಿದ್ದ ಎಂಬುದು ಕರ್ಣನನ್ನು ಪ್ರೀತಿಸುವ ನನ್ನ ಊಹೆ ಮಾತ್ರ.
ಸೂರ್ಯ ಇದನ್ನೆಲ್ಲ ನೋಡುತ್ತಿದ್ದ. ಅವನಿಗೆ ಯಾವತ್ತೂ ಕರ್ಣನನ್ನು ಮಗನೆಂದು ಒಪ್ಪಿಕೊಳ್ಳುವ ಅಗತ್ಯ ಬರಲಿಲ್ಲ. ಅವನ ಪಾಲಿಗೆ ಕರ್ಣ ಮಗನಾದರೂ ಮಗನಲ್ಲ. ಅವನು ತಾನು ಕೊಟ್ಟ ವರ. ತನ್ನನ್ನು ಓಲೈಸಿದ, ಆರಾಧಿಸಿದ, ಸಂತೋಷಪಡಿಸಿದ ಕಾರಣಕ್ಕೆ ಮುನಿ ಕುಮಾರಿ ಕುಂತಿಗೆ ಕೊಟ್ಟ ಮಂತ್ರಕ್ಕಷ್ಟೇ ಅವನು ಬಂಧಿ. ಮಂತ್ರದ ಅಪ್ಪಣೆ ಇಷ್ಚೇ: ಕೇಳಿದಾಗ ಈ ಕುಮಾರಿಗೆ ವರ ಕರುಣಿಸು. ಅದರಾಚೆಗಿನ ಹೊರೆ, ಹೊಣೆ, ಅನುಕಂಪ ಮತ್ತು ಅಕ್ಕರೆಗೆ ಅಲ್ಲಿ ಜಾಗವಿಲ್ಲ. ಮುಂದಿನ ಮಾತುಗಳಿಗೆ ಅವನು ಕಿವುಡ. ಹೀಗಾಗಿ ಕರ್ಣ ಏನು ಮಾಡಿದರೂ ಅದು ಅವನದೇ ಜವಾಬ್ದಾರಿ. ಕುಂತಿ ಅವನನ್ನು ಗಂಗೆಯಲ್ಲಿ ತೇಲಿ ಬಿಟ್ಟಾಗಲೂ ಸೂರ್ಯ ಮೂಕಪ್ರೇಕ್ಷಕ.
ಇಂಥ ಕರ್ಣನನ್ನು ಸಂದಿಗ್ಧ ಕಾಡುವುದು ಕೇವಲ ಒಮ್ಮೆ. ಕೌರವರ ಪರವಾಗಿ ಹೋರಾಡಲು ಹೊರಟ ಕರ್ಣನನ್ನು ಕೃಷ್ಣ ಭೇಟಿಯಾಗುತ್ತಾನೆ. ಅವನಿಗೆ ಜನ್ಮರಹಸ್ಯ ಹೊತ್ತು. ಹುಟ್ಟಿನ ಗುಟ್ಟು ಬಲ್ಲವನು ಏನು ಬೇಕಾದರೂ ಮಾಡಬಲ್ಲ ಎಂದು ನಂಬಿದ್ದ ಕಾಲವಿರಬೇಕು ಅದು. ಆ ಗುಟ್ಟನ್ನು ಬಿಚ್ಚಿಟ್ಟು ಅವನು ಕರ್ಣನನ್ನು ಕಾಣುತ್ತಾನೆ.
ಕರ್ಣ ಆಗೇನು ಮಾಡಬೇಕಾಗಿತ್ತು?
ಯಾಕೋ ಕರ್ಣ ಕೊಂಚ ಮೆದುವಾದನೇನೋ ಅನ್ನಿಸುತ್ತದೆ. ಕರ್ಣ-ಕೃಷ್ಣರ ನಡುವೆ ಏನೇನು ಮಾತಾಯಿತು ಎನ್ನುವುದು ನಿಗೂಢ. ಕವಿ ಹೇಳಿದ್ದರೂ ಅದು ಅನೂಹ್ಯವೇ. ಅವರಿಬ್ಬರೂ ಏನೇನು ಮಾತಾಡಿರಬಹುದು ಎಂದು ಯೋಚಿಸುತ್ತಾ ಕೂತರೆ ನಮ್ಮ ನಮ್ಮ ಅನುಭವ ಮತ್ತು ಭಾವನೆಗೆ ತಕ್ಕಂತೆ ಉತ್ತರಗಳು ಹೊಳೆಯುತ್ತಾ ಹೋಗುತ್ತವೆ. ಕೃಷ್ಣ ನೀನೇ ಪಾಂಡವರಲ್ಲಿ ಹಿರಿಯವನು. ರಾಜ್ಯ ನಿನ್ನದೇ ಎಂದು ಕರೆಯುತ್ತಾನೆ. ಕರ್ಣ ಹೋಗಿದ್ದರೆ ಅವನಿಗೆ ರಾಜ್ಯ ಸಿಗುತ್ತಿತ್ತಾ? ಆ ಕ್ಷಣವೇ ಕರ್ಣ ಸೋಲುತ್ತಿದ್ದ. ಹೋಗದೇ ಸತ್ತ ಕರ್ಣ ಗೆದ್ದವನಂತೆ ಕಾಣುತ್ತಾನೆ. ಈ ಜಗತ್ತಿನಲ್ಲಿ ಆಮಿಷಗಳಿಗೆ ಬಲಿಯಾಗದವರೇ ನಮಗೆ ದೇವರಂತೆ ಕಾಣಿಸುತ್ತಾರೆ. ಟೆಂಪ್ಟೇಷನ್‌ಗಳನ್ನು ಮೆಟ್ಟಿನಿಲ್ಲುವುದೇ ಸಾಧನೆಯಾದರೆ, ಅಂಥ ಟೆಂಪ್ಟೇಷನ್ನುಗಳನ್ನು ಹುಟ್ಟುಹಾಕುವ ನಮ್ಮ ಮನಸ್ಸಿಗೇನು ಹೇಳೋಣ. ಆಮಿಷಗಳನ್ನು ಸೃಷ್ಟಿಸುವುದು ಮನಸ್ಸು, ಮೀರಲೆತ್ನಿಸುವುದೂ ಮನಸ್ಸು. ಮನಸೇ ಮನಸಿನ ಮನಸ ನಿಲ್ಲಿಸುವುದು.
ಕರ್ಣನನ್ನು ಕೃಷ್ಣ ಒಲಿಸುವ ರೀತಿ ವಿಚಿತ್ರವಾಗಿದೆ. ಅವನಿಗೆ ರಾಜ್ಯದ ಆಮಿಷ ಒಡ್ಡುತ್ತಾನೆ ಅವನು. ಜೊತೆಗೇ, ಧರ್ಮರಾಯ, ಭೀಮ, ಅರ್ಜುನರಂಥವರು ಸೇವೆಗೆ ನಿಲ್ಲುತ್ತಾರೆ ಎನ್ನುತ್ತಾನೆ. ಕರ್ಣನ ಮನಸ್ಸಿನಲ್ಲಿ ದ್ರೌಪದಿ ಸುಳಿದುಹೋಗಿರಬಹುದೇ ಎಂಬ ತುಂಟ ಅನುಮಾನವೊಂದು ಸುಮ್ಮನೆ ಸುಳಿಯುತ್ತದೆ; ದ್ರೌಪದಿಯ ಮನಸ್ಸಿನಲ್ಲಿ ಕರ್ಣನ ನೆರಳು ಹಾದು ಹೋದಹಾಗೆ. ಕರ್ಣನಿಗೆ ಅವೆಲ್ಲವನ್ನೂ ಧಿಕ್ಕರಿಸುವಂಥ ಧೀಮಂತ ಶಕ್ತಿ ಬಂದದ್ದಾದರೂ ಎಲ್ಲಿಂದ? ಕೌರವನ ಸ್ನೇಹದ ಬಲದಿಂದಲೇ? ಅಥವಾ ತಾನು ಕೌಂತೇಯ, ಕುಂತಿಯ ಮಗ, ಸೂರ್ಯನ ಮಗ ಎಂದು ಗೊತ್ತಾದ ನಂತರ ಕರ್ಣ ಗಟ್ಟಿಯಾಗುತ್ತಾ ಹೋದನೇ?
ಕೊನೆಗೂ ಕರ್ಣ ಅವನಿಗೊಂದು ಮಾತು ಕೊಡುತ್ತಾನೆ: ನಿನ್ನಯ ವೀರರೈವರ ನೋಯಿಸೆನು. ಈ ಮಾತನ್ನು ಕರ್ಣನಿಂದ ಹೊರಡಿಸುವಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಕೃಷ್ಣ. ಅಲ್ಲಿಗೆ ಕೌರವರ ಪಾಲಿಗೆ ಕರ್ಣ ನಿರುಪಯೋಗಿ. ಸೈನಿಕರನ್ನಷ್ಟೇ ಕೊಲ್ಲುತ್ತೇನೆ, ಪಾಂಡವರನ್ನು ಮುಟ್ಟುವುದಿಲ್ಲ ಎಂದು ಮಾತುಕೊಟ್ಟರೂ ಕೃಷ್ಣನಿಗೆ ಸಮಾಧಾನ ಇಲ್ಲ. ಅವನು ಮತ್ತೆ ಕುಂತಿಯನ್ನು ಕರ್ಣನೆಡೆಗೆ ಕಳುಹಿಸುತ್ತಾನೆ. ಕರ್ಣ ಜೀವನದ ಕರುಣಾಜನಕ ಸನ್ನಿವೇಶ ಅದು.
ಕುಮಾರವ್ಯಾಸ ನುರಿತ ಚಿತ್ರಕತೆಗಾರನಂತೆ ಆ ದೃಶ್ಯವನ್ನು ವರ್ಣಿಸುತ್ತಾನೆ. ಗಂಗಾತೀರದಲ್ಲಿ ಕರ್ಣ, ತಂದೆ ಸೂರ್ಯನ ಉಪಾಸನೆಯಲ್ಲಿರುವ ಹೊತ್ತಿಗೆ ಔದಾರ್ಯದ ಕಲ್ಪವೃಕ್ಷದಂತಿದ್ದ ಕುಂತಿ ಅಲ್ಲಿಗೆ ಬರುತ್ತಾಳೆ ಎನ್ನುವಲ್ಲಿ ಕುಮಾರವ್ಯಾಸನ ವ್ಯಂಗ್ಯ ಮೆರೆಯುತ್ತದೆ. ಕುಂತಿ ಬಂದದ್ದು ತಾನು ಹುಟ್ಟಿದ ತಕ್ಷಣವೇ ನೀರಲ್ಲಿ ತೇಲಿಬಿಟ್ಟ ಕರ್ಣನನ್ನು ಕೊಲಿಸುವುದಕ್ಕಲ್ಲವೇ?
ಅಲ್ಲಿ ಮತ್ತೊಂದು ವಿಚಿತ್ರವೂ ನಡೆಯುತ್ತದೆ. ಕುಂತಿಯನ್ನು ಕಂಡದ್ದೇ ತಡ, ಗಂಗೆ ನೀರಿನಿಂದೆದ್ದು ಬಂದು ನಿನ್ನ ಮಗನನ್ನು ನಾನು ಇಷ್ಟು ದಿನ ಕಾಪಾಡಿದೆ. ಈಗ ನಿನಗೆ ಒಪ್ಪಿಸುತ್ತಿದ್ದೇನೆ. ನೀನು ನನಗೆ ಕೊಟ್ಟ ಭಾಷೆಯನ್ನು ಉಳಿಸಿಕೊಂಡಿದ್ದೇನೆ ಎಂದು ಕರ್ಣನನ್ನು ಕುಂತಿಗೆ ಒಪ್ಪಿಸಿಹೋಗುತ್ತಾಳೆ. ಹೆತ್ತತಾಯಿ, ಪೊರೆದ ತಾಯಿ ಮತ್ತು ಆಕಾಶದಲ್ಲಿ ಹುಟ್ಟಿಸಿದ ತಂದೆ. ಈ ತ್ರಿಕೋನದ ನಡುವೆ ಏಕಾಂಗಿ ಕರ್ಣ. ಸೂರ್ಯನೂ ಆ ಕ್ಷಣ ಕರ್ಣನ ಬಳಿಗೆ ಬಂದು, ನಿಮ್ಮಮ್ಮನನ್ನು ನಂಬಬೇಡ, ಆಕೆ ಬಂದದ್ದು ನಿನ್ನ ಅಳಿವಿಗಾಗಿಯೇ ಹೊರತು, ಪ್ರೀತಿಯಿಂದಲ್ಲ ಅನ್ನುತ್ತಾನೆ. ಕರ್ಣನಿಗೆ ಪ್ರತಿಯೊಂದು ಮಾತೂ ಕರ್ಣಕಠೋರ.
ಕುಂತಿ ಕರ್ಣನನ್ನು ತನ್ನ ಜೊತೆಗೆ ಬಾ ಎಂದು ಕರೆದಾಗ ಕರ್ಣ ಹೇಳುವ ಮಾತು ಮಾರ್ಮಿಕವಾಗಿದೆ: ಇಂದೇನೋ ನಾನು ನಿನ್ನ ಮಗ ಎಂದು ನನಗೆ ಗೊತ್ತಾಯಿತು. ಆದರೆ ಇದ್ಯಾವುದೂ ಗೊತ್ತಿಲ್ಲದ ದಿನಗಳಲ್ಲಿ ನನ್ನನ್ನು ಕೌರವ ಸಲಹಿದ್ದಾನೆ. ಸ್ನೇಹಹಸ್ತ ಚಾಚಿದ್ದಾನೆ. ಅವನು ನನ್ನ ಕುಲ ನೋಡಲಿಲ್ಲ. ಅವನ್ನು ನಾನು ಬಿಟ್ಟು ಬರುವುದಿಲ್ಲ ಎನ್ನುತ್ತಾನೆ.
ಕುಂತಿ ಕೊನೆಗೂ ಕರ್ಣನಿಗೆ ಹೋದ ಬಾಣದ ಮರಳಿ ತೊಡದಿರು, ನನ್ನ ಐವರು ಮಕ್ಕಳನ್ನು ಕಾಪಾಡು’ ಎಂದು ಕೇಳಿಕೊಳ್ಳುತ್ತಾಳೆ. ಆರನೆಯ ಮಗನ ಹತ್ತಿರ ಐವರು ಮಕ್ಕಳನ್ನು ಕಾಪಾಡು ಎನ್ನುವ ಕುಂತಿಯ ಕ್ರೌರ್ಯವನ್ನು ಕೂಡ ಕರ್ಣ ಅನುಮಾನದಿಂದ ನೋಡುವುದಿಲ್ಲ. ಕರ್ಣ ನಿಜಕ್ಕೂ ನಿಷ್ಠುರನಾಗಿದ್ದರೆ? ಅವನಿಗೆ ದಾನಶೂರ ಎನ್ನಿಸಿಕೊಳ್ಳುವ ಹಂಬಲವೇ ಬಲವಾಗಿತ್ತಾ? ಕೇಳಿದ್ದನ್ನೆಲ್ಲ ಕೊಡುವುದು ಸದ್ಗುಣ ನಿಜ. ಅದು ಸದ್ಗುಣ ಎನ್ನಿಸಿಕೊಳ್ಳುವುದು ಕೇಳುವವರು ಯೋಗ್ಯರಾಗಿರುವ ತನಕ ಮಾತ್ರ. ಹಾಗಿಲ್ಲದೇ ಹೋದಾಗ ಕೊಡುವುದು ಕೊಡದಿರುವುದಕ್ಕಿಂತ ದೊಡ್ಡ ತಪ್ಪು.
ಒಮ್ಮೊಮ್ಮೆ ಹುಂಬನಂತೆ, ಮತ್ತೊಮ್ಮೆ ದಾರಿ ತಪ್ಪಿದವನಂತೆ, ಕೆಲವೊಮ್ಮೆ ಸೊರಗಿದವನಂತೆ, ಪ್ರೀತಿಗಾಗಿ ಕಾತರಿಸಿದವನಂತೆ, ಅಸಹಾಯಕನಂತೆ, ಅಬ್ಬೇಪಾರಿಯಂತೆ, ಒಳ್ಳೆಯ ಗೆಳೆಯನಂತೆ ಕಾಣಿಸುವ ಕರ್ಣ ಉದ್ದಕ್ಕೂ ತಪ್ಪುಗಳನ್ನು ಮಾಡುತ್ತಲೇ ಹೋದ. ನಿರಾಕರಿಸುವ ಶಕ್ತಿ ಕಳಕೊಂಡವನು ನಿರುಪಯುಕ್ತ ಅನ್ನಿಸುವುದು ಹೀಗೆ.
ವ್ಯಾಸರು ಸೃಷ್ಟಿಸಿದ ಪಾತ್ರಗಳ ಪೈಕಿ ಜಾಣತನ, ಕುಯುಕ್ತಿ ಇಲ್ಲದ ಬೋಳೇಸ್ವಭಾವದ ವ್ಯಕ್ತಿ ಕರ್ಣ. ಒಮ್ಮೊಮ್ಮೆ ಧರ್ಮರಾಯ ಕೂಡ ಅಧರ್ಮಿಯಂತೆ, ಸುಳ್ಳುಗಾರನಂತೆ ವರ್ತಿಸುತ್ತಾನೆ. ಕರ್ಣನೊಬ್ಬನೇ ನಮ್ಮಲ್ಲಿ ಅನುಕಂಪ ಮತ್ತು ಪ್ರೀತಿ ಉಕ್ಕಿಸುತ್ತಾನೆ.