Saturday, December 24, 2011

ಗೆಳೆಯ ಕುಂಟಿನಿ ಬರೆದ ಮುನ್ನುಡಿ


ನನಗೆ ಮಾತ್ರ ಗೊತ್ತಿರುವ
ಜೋಗಿ ಕಥೆಗಳು


ಯಾರನ್ನೂ ನೋಯಿಸೋದಿಲ್ಲ.ತಾನೇ ಒಬ್ಬನೇ ಕುಳಿತು ಜೋರಾಗಿ ಅತ್ತುಬಿಟ್ಟಾನು.ನೋವನ್ನು ನುಂಗಿ ಸುಮ್ಮನೇ ನಕ್ಕಾನು.ಏನಾಯಿತೋ ಎಂದರೆ ಮತ್ತೆ ಅದೇ ತುಂಟ ತುಂಟ ನಗೆ.
ಅದು ಜೋಗಿ.
ಜೋಗಿಯೊಳಗೊಬ್ಬ ಕಥೆಗಾರ ಅಥವಾ ಕವಿ ಅಥವಾ ವಿಮರ್ಶಕನನ್ನು ನೀವು ಕಂಡರೆ ಅದು ಆ  ಮೂಲದ ನೆಲೆಯಿಂದ ಬಂದದ್ದು.ಅದನ್ನು ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ,ನನ್ನ ಅಡ್ಡಿ ಇಲ್ಲ.
ಜೋಗಿ ತಡವಾಗಿ ಹುಟ್ಟಿದವನು.ಅವನ ಅಣ್ಣನಿಗಿಂತ ಎಷ್ಟೋ ವರ್ಷ ಚಿಕ್ಕವನು.ಅವನು ಹುಟ್ಟಿದ್ದು ಮೈಸೂರಿನ ಆಸ್ಪತ್ರೆಯೊಂದರಲ್ಲಿ.ಅವನಿನ್ನೂ ಅಂಬೆಗಾಲಿಡುತ್ತಿದ್ದಾಗ ಓರ್ವ ಅವಧೂತ ಜೋಗಿ ಮನೆಗೆ ಭಿಕ್ಷೆ ಕೇಳಿ ಬಂದಿದ್ದ.ಅಂಬೆಗಾಲಿಡುತ್ತಿದ್ದ ಮಗುವನ್ನು ನೋಡಿ ಅಮ್ಮ ಶಾರದೆ ಬಳಿ ಅವಧೂತ ಹೇಳಿದ್ದನಂತೆ,
ಅಮ್ಮಾ ಈ ಹುಡುಗ ಈ ನಾಡಿಗೆ ಕೀರ್ತಿ ತರುತ್ತಾನೆ.
"ಹಾಗಂದರೆ ಏನು?" ಎಂದು ಕೇಳಿದ್ದರು ಶಾರದಮ್ಮ.
ಅವಧೂತ ಹೇಳಿದ್ದು ಒಂದೇ ಮಾತು,"ಇವನು ಬರವಣಿಗೆಯಲ್ಲಿ ಅಚ್ಚರಿ ಮೂಡಿಸುತ್ತಾನೆ."
ಬಹಳ ಕಾಲ ಆ ತಾಯಿ ತನ್ನ ಮಗ ಲೆಕ್ಕಪತ್ರ ಬರೆಯುವ ದೊಡ್ಡ ಗುಮಾಸ್ತನಾಗುತ್ತಾನೆ ಎಂದೇ ನಂಬಿದ್ದರು.
ಅವಧೂತ ಹೇಳಿದ ಮಾತು ಸತ್ಯವಾಗಿ ದಶಕವೇ ಸಂದಿದೆ.
ಜೋಗಿ ಮೂಲತಃ ಸಮುದ್ರ ದಂಡೆಯವನು.ಮಂಗಳೂರು ಸಮೀಪದ ಕೂಳೂರಿನ ಸಮುದ್ರದ ಕಿನಾರೆಯಿಂದ ಹೊರಟದ್ದು ಅವನ ಕುಟುಂಬ.ಅಪ್ಪ ಅಮ್ಮ ಹೊಟ್ಟೆಪಾಡಿಗೆ ಬದುಕನ್ನು ಹುಡುಕುತ್ತಾ ಸಾಗಿದರು.ಹಾಗೇ ಬಂದವರು ನೆಲೆಯಾದದ್ದು ಉಪ್ಪಿನಂಗಡಿಯಲ್ಲಿ.
ಅದು ನನ್ನ ಹುಟ್ಟೂರು.ನಾನು ಹುಟ್ಟಿದ್ದು, ಬೆಳೆದದ್ದು, ಮತ್ತು ಈಗಲೂ ಬದುಕುತ್ತಿರುವ ಊರು.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರೆ ನದಿಗಳು ಮಿಲನಗೊಂಡು ಧಾವಂತದಿಂದ ಸಾಗುವುದು ಮೂವತ್ತು ಮೈಲಿ ದೂರದ ಸಮುದ್ರದ ಬಳಿಗೆ.ಉಪ್ಪಿನಂಗಡಿ ಮಳೆಗಾಲದಲ್ಲಿ ಪ್ರಕೃತಿಯ ಪರಮವೈಭವ ನಾಡು.ತುಂಬಿ ಹರಿಯುವ ನದಿಗಳೆರಡು ವಿವಶವಾಗಿ ಅಪ್ಪಿಕೊಂಡು ಸಾಗುವ ಚಿತ್ರ ನಮ್ಮಿಬ್ಬರಿಗೆ ಇಂದಿಗೂ ಸವಾಲು.
ಜೋಗಿಯ ಬರಹಗಳಲ್ಲಿ ಈಗಲೂ ಕಾಣುವುದು ಆ ನದಿಗಳು ನಮಗೆ ಹಾಕಿದ ಸವಾಲುಗಳೇ.
ಜೋಗಿ ನಮ್ಮ ಸಂಗಮಕ್ಷೇತ್ರದ ಸ್ಕೂಲಿಗೆ ಬಂದು ಕುಳಿತದ್ದೇ ನನ್ನ ಬಳಿ.ಆ ಕ್ಷಣದಿಂದ ಶುರುವಾದ ನಮ್ಮ ಗೆಳೆತನಕ್ಕೆ ಬಿಡುವಿಲ್ಲ.
ಗೋಪಾಲ ಮತ್ತು ಗಿರೀಶ ಎಂಬ ಇಬ್ಬರು ಹುಡುಗರು ನಾವು ಆ ಕ್ಷಣಕ್ಕೇ ಸಿದ್ಧಗೊಂಡಿದ್ದೆವು. ಕಪ್ಪು ಬಣ್ಣದ ಚಡ್ಡಿ ಮತ್ತು ಬಿಳಿಗೀಟಿನ ಅವನ ಟೆರ್ರಿಕಾಟನ್ ಶರಟು ಇಂದಿಗೂ ನನ್ನನ್ನು ಬಿಟ್ಟುಹೋಗಿಲ್ಲ.
ಸಂಜೆ ಸ್ಕೂಲು ಬಿಟ್ಟೊಡನೆ ಆ ಮೊದಲ ದಿನ ಆ ಮಳೆಗಾಲದಲ್ಲೂ ನನ್ನನ್ನು ಚಿಣ್ಣಮಾಮರ ಕೋಲ್ಡ್ ಹೌಸಿಗೆ ಕರೆದೊಯ್ದು ಲಾಲಿಪಾಪ್ ಕೊಡಿಸಿದ್ದ.
ಅದಕ್ಕೆ ಪ್ರತಿಯಾಗಿ ನಾನು ಅವನಿಗೆ ಇಂದಿಗೂ ಏನೂ ಕೊಟ್ಟಿಲ್ಲ.ಏಕೆಂದರೆ ಜೋಗಿಯ ಪ್ರೀತಿ ಮುಂದೆ ಯಾರು ಏನು ಕೊಟ್ಟರೂ ಅದು ಸಂದಾಯ ಆಗೋದೇ ಇಲ್ಲ.
ಜೋಗಿ ಭಯಂಕರ ತುಂಟ.ಶಾಲೆಯಲ್ಲಿ ಅವನ ಕಿತಾಪತಿಗಳಿಗೆ ಲೆಕ್ಕವಿಲ್ಲ.ಅಬ್ಬೇಪಾರಿ ಮೇಸ್ತರುಗಳ ತರಗತಿಗಳಿಂದ ಗೆಟ್‌ಔಟ್ ಆಗುವುದಕ್ಕೆ  ಆಯಾ ದಿನಗಳಲ್ಲಿ ಏನು ಬೇಕೋ ಅದನ್ನೆಲ್ಲಾ ಮಾಡುತ್ತಿದ್ದ.ನಾವು ಓದುತ್ತಿದ್ದುದು ಕನ್ನಡ ಶಾಲೆಗಳಲ್ಲಿ.ಸರಕಾರಿ ಶಾಲೆಗಳ ಕಾಲವದು.ಮೇಸ್ತರುಗಳು ಎಂದರೆ ನಮಗೆ ಅರ್ಧ ತಮಾಶೆ,ಹೈಸ್ಕೂಲಿನಲ್ಲಿರುವಾಗಲೇ ನಮಗೆ ಈ ಮೇಸ್ತರರು ನಮ್ಮ ಲೆವೆಲ್‌ಗೆ ಇಲ್ಲ ಎಂದು ಮೊದಲ ಬಾರಿಗೆ ನನಗೆ ಪಾಠ ಮಾಡಿದ್ದ.ಪಿಯುಸಿಗೆ ಬರುವಾಗ ನಮ್ಮ ಮುಂದೆ ಇದ್ದ ಕೋರ್ಸು ಎರಡೇ,ಒಂದು ಕಾಮರ್ಸ್ ಮತ್ತೊಂದು ಆರ್ಟ್ಸ್.ಕಾಮರ್ಸ್ ತೆಗೊಳ್ಳೋಣ.ಏಕೆಂದರೆ ನಾವು ಸಿ.. ಮಾಡಿ ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು ಎಂದು ನನ್ನಲ್ಲಿ ಆಸೆ ಹುಟ್ಟಿಸಿದ.ಪಿಯು ಸೇರಿದ ಮೂರನೇ ದಿನಕ್ಕೇ ಡೆಬಿಟ್ ವಾಟ್ ಕಮ್ಸ್ ಇನ್ ಅಂತ ರೆಡ್ಡಿ ಮಾಸ್ತರ ಪೆದ್ದು ಪೆದ್ದಾಗಿ ಗಿಳಿಪಾಠ ಹೇಳುತ್ತಿದ್ದಾಗ ನಾನು ಸಿಕ್ಕಿ ಬಿದ್ದೆ ಎಂದು ಅವನಲ್ಲಿ ಗೋಗರೆದರೆ,ಜೋರಾಗಿ ನಕ್ಕು(ಈಗಲೂ ಆಗೊಮ್ಮೆ ಈಗೊಮ್ಮೆ ಜೋಗಿ ಆ ನಗು ನಗುವುದು ಇದೆ ನೋಡಿ)ಇದೆಲ್ಲಾ ಸುಮ್ಮನೇ ಮಾರಾಯ.ನಮಗೆ ಕಾಲೇಜಿಗೆ ಬರೋ ನೆಪ ಅಷ್ಟೇ.ಐದು ವರ್ಷ ಹೀಗೆ ಕಳೆಯೋಣ.ನಾವು ಕಲಿಯೋದು ಬೇರೇನೇ ಇದೆ ಎಂದು ಸಂತೈಸಿದ.
ಆ ಮಾತು ನಿಜವಾಯಿತು.ಪಠ್ಯ ಒಂದನ್ನು ಬಿಟ್ಟು ನಾವು ಬದುಕನ್ನು ಕಲಿತೆವು.ಕಾವ್ಯ ಓದಿದೆವು,ಕಾದಂಬರಿ ತಂದು ಮುಗಿಸಿದೆವು.ಕಾಡು ಅಲೆದೆವು,ಹೊಳೆಯಲ್ಲಿ ಈಜಾಡಿದೆವು.ಮಾವಿನ ತೋಟ ಮಾಡಿದೆವು,ಬತ್ತದ ಗದ್ದೆ ಉತ್ತು ಕೊಯ್ಲು ಮಾಡಿದೆವು.
ಜೋಗಿ ಬರೆದ ಮೊದಲ ಕಥೆ,ಜೋಗಿ ಬರೆದ ಮೊದಲ ಕವಿತೆ,ಜೋಗಿ ಮಾಡಿದ ಮೊದಲ ಭಾಷಣ,ಜೋಗಿ ಪ್ರೀತಿಸಿದ ಮೊದಲ ಹುಡುಗಿ,..ಎಲ್ಲದಕ್ಕೂ ನಾನೊಬ್ಬನೇ ಸಾಕ್ಷಿ.ಆ ಮಟ್ಟಿಗೆ ನಾನು ಧನ್ಯ.ಇಂದಿಗೂ ಅವನ ಒಳನೋಟ,ಅವನ ಅಂತರ್ಯಗಳು,ಅವನ ಒಳಗಿನ ಲಹರಿ ನನಗೆ ಮಾತ್ರಾ ಅರ್ಥವಾಗುತ್ತದೆ.ಇದನ್ನು ಅರ್ಧ ಅಹಂಕಾರ ಮತ್ತು ಅರ್ಧ ವಿನಯದಿಂದ ಹೇಳುತ್ತೇನೆ.ಅವನು ಮತ್ತು ನಾನು ಬಿಚ್ಚಿಕೊಳ್ಳದ ಸತ್ಯಗಳಿಲ್ಲ.ನಾವು ಮುಚ್ಚಿಟ್ಟ ವಿಚಾರಗಳೇ ಇಲ್ಲ.ಇದನ್ನು ಕಂಡ ಅವನ ಜ್ಯೋತಿ ಅನೇಕ ಬಾರಿ ಅಸೂಯೆಪಟ್ಟಿದ್ದಾಳೆ.
ಜೋಗಿ ಕತೆಗಾರನಾಗುತ್ತಾನೆ ಎಂದು ಮೊದಲ ಬಾರಿಗೆ ನನಗೆ ಹೇಳಿದವನು ನನ್ನ ಅಪ್ಪ.ಅವನು ಜೋಗಿಯನ್ನು ಏಕೋ ಬಹುವಚನದಲ್ಲೇ ಕರೆಯುತ್ತಿದ್ದ.ನಾವು ಹೈಸ್ಕೂಲಿನಲ್ಲಿ ಇದ್ದಾಗ ನಾವಿಬ್ಬರೂ ಜಿದ್ದಿಗೆ ಬಿದ್ದವರಂತೆ ಕತೆ ಬರೆಯತ್ತಿದ್ದೆವು.ನೂರು ಪುಟದ ನೋಟ್ಸ್ ಬುಕ್ಕು ನಮ್ಮ ಸಂಕಲನ.ಅವನ ಕಥಾಸಂಕಲನಕ್ಕೆ ಕೊನೆ ಪುಟದಲ್ಲಿ ನನ್ನ ವಿಮರ್ಶೆ.ನನ್ನ ಸಂಕಲನಕ್ಕೆ ಅವನದ್ದು.ಎರಡನ್ನೂ ನಾವು ನಮ್ಮ ಕ್ಲಾಸಿನ ಸುಂದರಾಂಗಿಯರಿಗೆ ಕೊಟ್ಟು ಓದಿಸಿ,ಅವರೂ ನಮ್ಮದೇ ವಾಕ್ಯಗಳನ್ನು ಕದ್ದು ವಿಮರ್ಶೆ ಬರೆಯುತ್ತಿದ್ದುದು ಈಗಲೂ ಮರೆತಿಲ್ಲ.
ಹಾಗೇ ಅವನ ಕಥೆಗಳನ್ನು ನನ್ನ ಅಪ್ಪ ಓದುತ್ತಿದ್ದ.ಗಿರೀಶ ದೊಡ್ಡವ ಕತೆಗಾರ ಆಗುತ್ತಾನೆ ಎಂದು ಹೇಳುತ್ತಿದ್ದ.ಬರೆದರೆ ಗಿರೀಶನ ಥರ ಬರೆಯಬೇಕಯ್ಯಾ ಎಂದು ಚಪ್ಪರಿಸುತ್ತಿದ್ದ.ಅಪ್ಪ ಹಾಗೇ ಹೊಗಳಿದ ಎಂದು ನಾನು ಜೋಗಿಗೆ ಹೇಳಿದಾಗ ಅದನ್ನು ಸ್ವತಃ ಕೇಳಿಸಿಕೊಳ್ಳಲು ಜೋಗಿ ನಮ್ಮ ಮನೆಗೆ ಬಂದು ಅಪ್ಪನ ಎದುರು ಕುಳಿತರೆ ನನ್ನ ಅಪ್ಪ ಕುಮಾರವ್ಯಾಸ ಭಾರತವನ್ನು ಏರು ಸ್ವರದಲ್ಲಿ ಮಧ್ಯ ರಾತ್ರಿ ತನಕ ಜೋಗಿ ಮುಂದೆ ಅರ್ಥಸಹಿತ ಪಾರಾಯಣ ಮಾಡಿ ಅವನಿಗೆ ಸಾಕೋ ಸಾಕೋ ಮಾಡಿದ್ದ.
ಜೋಗಿ ಅವನ ಕಿತ್ತು ತಿನ್ನುವ ಬಡತನವನ್ನು ಮೀರಲು ಎಂದೂ ಸಾಹಿತ್ಯವನ್ನು ಆಶ್ರಯಿಸಲಿಲ್ಲ.ಅವನಿಗೆ ಕತೆ,ಕಾವ್ಯ,ಓದು ಬರಹ ಅವನೆಂದೂ ನಂಬದ ದೈವದತ್ತವಾಗಿಯೇ ಬಂದಿತ್ತು.ನಾವು ಚಾರ್ಮಾಡಿ,ಶಿರಾಡಿ ಘಾಟಿಗಳ ತಿರುವುಗಳಲ್ಲಿ ಲ್ಯಾಂಬಿ ಸ್ಕೂಟರ್ ಪಾರ್ಕ್ ಮಾಡಿ,ಕಾಡೊಳಗೆ ಹೊಕ್ಕೆವು ಎಂದರೆ ಹೊರಗೆ ಬರೋವಾಗ ಮೂರು ದಿನಗಳೇ ಕಳೆಯುತ್ತಿದ್ದೆವು.ಕಾಡಿನಲ್ಲಿ ನಾವು ಗಂಟೆಗಟ್ಟಲೆ ಮೌನವಾಗಿ ಕುಳಿತು ಯಾವ ಯಾವ ಹಕ್ಕಿಗಳು ಹೇಗೆ ಹೇಗೆ ಕೂಗುತ್ತವೆ ಎಂದು ಧ್ಯಾನಸ್ಥರಾಗುತ್ತಿದ್ದುದು ಜೋಗಿ ಓರ್ವ ತಪಸ್ವೀಯಾಗಲು ಕಾರಣ ಮಾಡಿತು ಎಂದು ಈಗ ನನಗೆ ಅನಿಸುತ್ತಿದೆ.ಅವನೊಳಗಣ ಆ ತಪಸ್ವೀ ಈಗಲೂ ಅವನ ಕಮರ್ಶಿಯಲ್ ಸೀರಿಯೆಲ್ಲುಗಳಲ್ಲೂ ಎದ್ದೆದ್ದು ಕಾಣಿಸುತ್ತಿದೆ.
ಒಮ್ಮೆ ಬೆಳ್ತಂಗಡಿ ಸಮೀಪದ ಗಡಾಯಿಕಲ್ಲು ಏರಿದ್ದೆವು.ಆ ಪಯಣವನ್ನು ಆಯೋಜಿಸಿದವನು ಜೋಗಿಯೇ.ಕಾರಣ ಕಾವ್ಯಶಕ್ತಿಯನ್ನು ಪ್ರಕೃತಿಯ ಆಸರೆಯಲ್ಲಿ ಪಡೆಯುವುದು.ಎರಡೇ ಎರಡು ಬಾಟಲಿ ಬಿಯರ್ ಮತ್ತು ಒಂದು ಕ್ಯಾನು ನೀರು ಮಾತ್ರಾ ನಮ್ಮ ಜೊತೆಗಿತ್ತು.ಆ ರಾತ್ರಿ ಇಡೀ ಗಡಾಯಿಕಲ್ಲಿನ ನೆತ್ತಿಯಲ್ಲಿ ಕುಳಿತದ್ದು,ಕಾವ್ಯ ಶಕ್ತಿಯನ್ನು ಧ್ಯಾನಿಸಿದ್ದು ಬಹಳ ಕಾಲ ನಮಗೆ ನಗು ತರಿಸಿತ್ತು.ಕೊರೆವ ಛಳಿಯಲ್ಲಿ ಥಂಡಿ ಹಿಡಿದು ನಾನು ವಾರ ಕಾಲ ಜ್ವರ ಹಿಡಿದು ಮಲಗಿದ್ದು ಈಗಲೂ ನನ್ನನ್ನು ಅಣಕಿಸುತ್ತದೆ,ಆದರೆ ಜೋಗಿ ಮಾತ್ರಾ ಅವನ ಕೃತಿಗಳಲ್ಲಿ ಗಡಾಯಿಕಲ್ಲಿನ ತಿರುಳನ್ನು ಢಾಳಾಗಿ ತಂದು ಕೊಡುತ್ತಿದ್ದಾನೆ.
ಪೇಜಾವರ ಮಠದ ವತಿಯಿಂದ ನಡೆದ ಸಾಹಿತ್ಯ ಸ್ಫರ್ಧೆಯಲ್ಲಿ ಜೋಗಿಗೆ ಮೊದಲ ಬಹುಮಾನ.ಆ ಪೇಜಾವರ ಸ್ವಾಮೀಜಿ ಅವರು ಸನ್ಮಾನ ಮಾಡಿ ಕೊಟ್ಟ ಎಂಟುನೂರು ರೂಪಾಯಿಯನ್ನು ಮಂಗಳೂರಿನಲ್ಲಿ ಬೀರ್ ಕುಡಿದು ಮುಗಿಸಿ ಉಳಿದ ಹಣದಲ್ಲಿ ನನಗೆ ಆತ ಆಕ್ಸ್‌ಫರ್ಡ್ ಡಿಕ್ಷನರಿ ಕೊಡಿಸಿದ್ದ.

ಜೋಗಿ ತಂದೆ ಇಂದಿರಾಗಾಂಧಿಯನ್ನು ದೇವರೇ ಎಂದು ನಂಬಿದ್ದರು,ಮಗನನ್ನು ಅಪಾರವಾಗಿ ಪ್ರೀತಿಸುತ್ತಿದ್ದರು,ಮಗ ಮಾಡಿದ್ದೆಲ್ಲವೂ ಸರಿಯಾಗಿದೆ ಎಂದುಕೊಂಡಿದ್ದರು.ಹಾಗಾಗಿ ಅವರೆಂದೂ ಮಗನನ್ನು ತಿದ್ದಿತೀಡಲು ಹೋಗಲೇ ಇಲ್ಲ.ಹಾಗೇನಾದರೂ ಮಾಡಿದ್ದರೆ ಪ್ರಮಾದವಾಗುತ್ತಿತ್ತು.ಜೋಗಿ ತನಗೆ ಇಷ್ಟವಾಗುವಂತೆ ತಾನು ಬೆಳೆದ.ಒಮ್ಮೆ ರೈಲಲ್ಲಿ ಅಪ್ಪ ಮಗ ಹೋಗುತ್ತಿದ್ದರು.ಜೋಗಿ ಮಲಗಿ ನಿದ್ರಿಸಿದ್ದ.ದಾವಣಗೆರೆ ದಾಟಿ ರೈಲು ಹೋಯಿತು.ಜೋಗಿಗೆ ಎಚ್ಚರವಾದಾಗ ಐವತ್ತು ಮೈಲಿ ಮುಂದೆ ಹೋಗಿದ್ದಾಗಿತ್ತು.ಏಕೆ ಎಂದು ತಂದೆಯನ್ನು ಕೇಳಿದರೆ "ನೀನು ನಿದ್ದೆ ಮಾಡ್ತಿದ್ದೆ.ಏಕೆ ಎಬ್ಬಿಸೋದು ಅಂತ ಸುಮ್ಮನಾದೆ.ಏನೀಗ ವಾಪಾಸು ಹೋದರಾಯಿತು ಅಷ್ಟೇ" ಎಂದರು ಆ ಪುಣ್ಯಾತ್ಮ್ಮ!
1989 ಅಕ್ಟೋಬರ 31 ಜೋಗಿ ನನ್ನ ಬಿಟ್ಟು ಹೋದ. ಅವನು ಹೊರಟಿದ್ದು ಬೆಂಗಳೂರಿಗೆ. ಖುಲ್ಲಂಖುಲ್ಲಂ ಬದುಕನ್ನು ಕಟ್ಟುವುದಕ್ಕೆ.ಮುಂದಿನ ಜೀವನದ ರೂಬುರೂಬಿಗೆ.ಆ ರಾತ್ರಿ ಅವನನ್ನು ಕೆಂಪು ಬಸ್ಸು ಏರಿಸಿ ವಾಪಾಸ್ಸು ಬಂದ ನಾನು ವಿಷಣ್ಣನಾಗಿದ್ದೆ.ಮನಸ್ಸು ಭಾರವಾಗಿ ಬಿದ್ದಿತ್ತು.ಜೋಗಿ ಇಲ್ಲದೇ ನಾನು ಊರಿನಲ್ಲಿ ಏನು ಮಾಡೋದು ಸಾಧ್ಯ ಎಂದು ಚಿಂತಿಸಿದೆ.ಅಳು ಬರುವುದೇ ಬಾಕಿ.ಮನೆಗೆ ಬಂದು ಟೇಬಲ್ಲು ಡ್ರಾವರ್ ಎಳೆದರೆ ಒಂದು ಪತ್ರ.
ಅದು ಜೋಗಿ ನನಗೆ ಬರೆದಿಟ್ಟು ಹೋದದ್ದು.
ಅದರಲ್ಲಿ ಬರೆದ ಒಂದೇ ವಾಕ್ಯ."ಹೊಸ ಬದುಕಿನ ಹಾದಿ ಹಿಡಿಯುವುದು ನನಗೆ ಅಗತ್ಯ.ನಿನ್ನ ಬಿಟ್ಟುಹೋಗುವ ಸಂಕಟ ನನ್ನ ಕೊರೆಯುತ್ತಿದೆ.ಏನು ಮಾಡೋಣ ರಕ್ತದೊಂದಿಗೆ ಲಾಳ ಬಡಿಯುತ್ತೇನೆ.ಗೆದ್ದರೆ ನಿನಗೆ ಸಿಗುತ್ತೇನೆ,ಸೋತರೆ ಜಗತ್ತಿಗೇ ವಿದಾಯ!"
ಜೋಗಿ ಗೆದ್ದ.ಕನ್ನಡಿಗರಿಗೆಲ್ಲಾ ಸಿಕ್ಕ,ನನಗೆ ಮಾತ್ರವೇ ಅಲ್ಲ.ಥ್ಯಾಂಕ್ಸ್ ಟು ಬೆಂಗಳೂರ್!
ಜೋಗಿಯ 21 ನೇ ಪುಸ್ತಕ ಇದು.ಅವನು ಬರೆದ ಮೊದಲ ಕಥೆ ನನಗೆ ಗೊತ್ತಿದೆ.ಅದು ಒಂದು ಯುವಕನ ಕಥೆ.ಆ ಕಾಲದ ಆ ಯುವಕನ ಹಂಬಲ ಮತ್ತು ತಹತಹ ಕಥೆಯಲ್ಲಿ ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ನಿರೂಪಿತವಾಗುತ್ತದೆ.ಆ ಯುವಕ ಅಕ್ಕಿ ಮಂಡಿ ಮೇಲೆ ಕುಳಿತು ಗೋಣಿಚೀಲದಿಂದ ಒಂದೊಂದೇ ಅಕ್ಕಿ ಕಾಳನ್ನು ಬಾಯಿಗೆ ಎಸೆಯುತ್ತಾ ಇರುತ್ತಾನೆ.ಒಂದು ಅಕ್ಕಿ ಕಾಳು ಅವನ ಹಲ್ಲಿನ ಕುಳಿಯೊಳಗೆ ಸಿಕ್ಕು ಅವನಿಗೆ ಅಸಾಧ್ಯ ನೋವಾಗಿ,ಅದನ್ನು ಕುಳಿಯಿಂದ ಎಬ್ಬಿಸಲು ಪ್ರಯತ್ನ ಪಡುತ್ತಾನೆ. ಆ ಕ್ಷಣಕ್ಕೆ ಅವನಿಗೆ ತಾನೂ ಒಂದು ಅಕ್ಕಿ ಕಾಳೇ ಎಂದನಿಸುತ್ತದೆ.ಯಾರದೋ ಕುಳಿಯಲ್ಲಿ ಕುಳಿತ ಹಾಗೇ ಅನಿಸುತ್ತದೆ.ಅದೇ ಅವನನ್ನು ಮುಂದಿನ ಹೋರಾಟಕ್ಕೆ ಕಟ್ಟುತ್ತದೆ.ಈ ಕಥೆಯನ್ನು  ಯಾವುದೋ ಮಾಸಿಕ ಪ್ರಕಟಿಸಿದ್ದು,ಅದೇ ಕಥೆ ಆ ತಿಂಗಳ ಬಹುಮಾನಿತ ಕತೆಯಾಗಿ ಪ್ರಶಸ್ತಿ ಪಡೆದದ್ದು ,ಕಾಲೇಜಿನಲ್ಲಿ ನನಗೆ ಹೊಟ್ಟೆ ಉರಿದದ್ದು ನೆನಪು.
ಜೋಗಿಯ ಶಕ್ತಿ ಅಥವಾ ವಿಮರ್ಶೆಯ ಪರಿಭಾಷೆಯಲ್ಲಿ ಹೇಳುವುದಾದರೆ ಸೃಜನಾತ್ಮಕ ಸಾಧ್ಯತೆಗಳು ಆ ತರುಣ ವಯಸ್ಸಿಗೇ ಕೆನೆಗಟ್ಟಿದ್ದವು.ಆದರೆ ಅವುಗಳಿಗೆ ರೂಪ ಸಿಗಲು ಆತ ಬೆಂಗಳೂರಿಗೇ ಹೋಗಬೇಕಾಯಿತು.ಜೋಗಿ ಬೆಂಗಳೂರಿಗೆ ಹೋದದ್ದೂ ಅದಕ್ಕಾಗಿ ಏನಲ್ಲ.ಅವನಿಗೆ ರೊಟ್ಟಿ ಬೇಕಾಗಿತ್ತು.ರೊಟ್ಟಯೇ ಅವನ ಗುರಿ ಈಗಲೂ ಅಲ್ಲ.ಚೆನ್ನಾಗಿ ಬದೋಕೋದು ಅವನು ಕಲಿತ ಜೀವನ ಕಲೆ.ವೈಎನ್ಕೆ ಜೋಗಿಯ ವಿದ್ವತ್‌ಪ್ರತಿಭೆಯನ್ನು ಮೊದಲಾಗಿ ಗುರುತಿಸಿದರು.ಯಾರ ಕೈಗೆ ಸಿಗಬೇಕಿತ್ತೋ ಅವರ ಕೈಗೇ ಜೋಗಿ ಸಿಕ್ಕ.ಆಮೇಲೆ ಅವನು ಬೆಳೆದ ರೀತಿಯನ್ನು ಕರ್ನಾಟಕ ಕಂಡಿದೆ.
ವೈಎನ್ಕೆ ಗರಡಿಯಲ್ಲಿ ಬೆಳೆದ ಜೋಗಿ ಇಂದು ಕನ್ನಡದ ವಿಶಿಷ್ಟ ಬಗೆಯ ಸಾಹಿತಿ.ಅವನು ಕನ್ನಡಕ್ಕೆ ತನ್ನದೇ ಛಾಪಿನ ಹೊಸ ಭಾವ ನೀಡಿದ್ದಾನೆ.ಹಾಗೆಂದು ಹೇಳುವಾಗ ಜೋಗಿಯ ಬರಹಗಳ ತುಂಟತನ ನನ್ನನ್ನು ಅಟ್ಟಾಡಿಸುತ್ತದೆ.ಅವನ ಪ್ರತೀ ಮಾತುಗಳಲ್ಲಿ ಕಾಣುವ ತುಂಟತನ ಅವನ ಯಾವತ್ತೂ ಬರಹಗಳಲ್ಲಿ ಬಂದು ನಮ್ಮನ್ನು ಮುದಗೊಳಿಸುತ್ತದೆ.
ಒಮ್ಮೆ  ಭೈರಪ್ಪನವರ ಬಗ್ಗೆ ಅವನು ಯವುದೋ ವೆಬ್‌ನಲ್ಲಿ ಬರೆದ ಬರಹಕ್ಕೆ ಭೈರಪ್ಪ ಅಭಿಮಾನಿಗಳು ಅವನನ್ನು ಗಂಡಾಗುಂಡಿ ಮಾಡಿದ್ದರು.ಕಾಮೆಂಟ್‌ಗಳ ಮಹಾಪೂರದಲ್ಲಿ ಜೋಗಿ ಕೊಚ್ಚಿಹೋಗುವುದೇ ಬಾಕಿ.ಕೊನೆಯಲ್ಲಿ ಜೋಗಿಯೇ ಆ ಟೀಕಾಸರಣಿಗೆ ಒಂದು ಕಾಮೆಂಟ್ ಹಾಕಿ ಮುಕ್ತಾಯ ಮಾಡಿದ್ದ.ಹೇಗೆಂದರೆ,"ಎಷ್ಟು ಬೇಕಾದರೂ ಬೈರಪ್ಪಾ".
ಅವನ ತುಂಟತನಕ್ಕೆ ಇಂಥ ನೂರಾರು ಉದಾಹರಣೆಗಳನ್ನು ಕಾಣುತ್ತೇವೆ.
"ದಪ್ಪಗಾಗಿದ್ದೀಯಾ, ವೆಜ್ ಮಾತ್ರಾ ತಿನ್ನು,ವಾಕ್ ಮಾಡು" ಎಂದು ಯಾರೋ ಸಲಹೆ ನೀಡಿದರೆ, "ಆನೆ ಪ್ಯೂರ್ ವೆಜ್,ಅದು ಎಷ್ಟು ವಾಕ್ ಮಾಡುತ್ತದೆ ಅಲ್ವಾ, ಸಣ್ಣಗಾಗಿದ್ದು ನೋಡಿದ್ದೀರಾ? ಎಂದು ಕೇಳಿ ಕೇಳಿದವರನ್ನು ಗರ ಬಡಿಸಿದ್ದ.ವೀರಪ್ಪ ಮೊಯ್ಲಿ ಅವರ ಕಾವ್ಯಕ್ಕೆ ಅವನ ವಿಮರ್ಶೆ, "ಮೊಯ್ಲಿ ಕಾವ್ಯ(ದಿಂದ)ಮೈಲಿ ದೂರ".ಶಿಲ್ಪಾಶೆಟ್ಟಿಯನ್ನು ಕನ್ನಡದಲ್ಲಿ ಅವನು ಪರಿಚಯಿಸಿದ್ದು,"ಇವಳ ಕಾಲೇ ಕಂಬ".ನಾನೊಮ್ಮೆ ಬೈಕ್‌ನಿಂದ ಬಿದ್ದು ಕೈ ಮುರಿಸಿಕೊಂಡಾಗ ಅವನು ಕಳುಹಿಸಿದ ಸಂತಾಪ."ಹೇಗಿದ್ದಿಯೋ "ಏಕೈಕ" ಕನ್ನಡಿಗಾ".
ಒಮ್ಮೆ ಭೀಕರವಾಗಿ ಮಾತನಾಡುವವರು ನಮ್ಮ ಜೊತೆ ಕುಳಿತು ಸಾಯೋ ಬಡಿವ ಹಾಗೇ ಮಾತನಾಡಿದರು.ಮಾತೆತ್ತಿದರೆ ನಾನು ನಿಮ್ಮ ಅಭಿಮಾನಿ ಎಂದು ಪಟ್ಟಾಗಿ ಕುಳಿತುಬಿಟ್ಟಿದ್ದರು. ಅವರು ಹೋದ ಮೇಲೆ ಜೋಗಿ ಹೇಳಿದ್ದು,ಇವರು ಅಭಿಮಾನಿ ನಿಜ.ಆದರೆ ಇವರು ಎಲ್ಲಿ ಸಿಗಬೇಕು ಎಂದರೆ "ನಾವು ಹೋಗುತ್ತಿದ್ದ ಹಡಗು ಒಡೆದು ಚಿಂದಿಯಾಗಿ ಯಾವುದೋ ದ್ವೀಪಕ್ಕೆ ಹೋಗಿ ಬಿದ್ದು,ಅಲ್ಲಿ ನಾವು ಮತ್ತೊಂದು ಹಡಗಿಗೆ ಕಾಯುತ್ತಾ ಇರುವಾಗ ಇವರು ಸಿಗಬೇಕು, ಇಲ್ಲಿ ಅಲ್ಲ."
ಜೋಗಿಯ ಅಭಿಮಾನಿಯೊಬ್ಬರು ಅವನ ಬರಹಗಳ ಬಗ್ಗೆ ಹೇಳಿದ ಒಂದು ಮಾತು ಇಲ್ಲಿ ಕೋಟ್ ಮಾಡಲೇಬೇಕು,"ಜೋಗಿ ಅವರ ಬರಹಗಳು ನಮ್ಮ ಮನೆಯ ಬೆಕ್ಕಿನ ಹಾಗೇ ಸಾರ್.ನಮ್ಮನ್ನು ಸವರಿಕೊಂಡು ತಾನೂ ಅನುಭವಿಸುತ್ತಾ ನಮಗೂ ಅನುಭವ ನೀಡುತ್ತಾ ಹೋಗುತ್ತವೆ"
"ಪಾಪಿ ಇಷ್ಟೊಂದು ಪುಸ್ತಕ ಅದೆಂತು ಬರೆಯುತ್ತಿಯೋ" ಎಂದು ನಮ್ಮ ಊರಿನ ಗೆಳೆಯರ ಅವನು ಬಂದಾಗಲೆಲ್ಲಾ ಹಿಡಿ ಶಾಪ ಹಾಕುತ್ತಾರೆ.ಅವನು ಹ್ಹೋ ಹ್ಹೋ ಎಂದು ಅಬ್ಬರಿಸಿ ಬೊಬ್ಬಿರಿದು ನಗುತ್ತಾನೆ.ಅವನ ಗೆಳತಿಯರು ಅವನನ್ನು ಕಾಡುವ ಪರಿ ನೋಡಿ ನಮ್ಮೂರಿನ ಗೆಳೆಯರು ದಂಗಾಗುತ್ತಾರೆ.
"ಈ ಪರಿಯ ಬೆಡಗಾ ಆವ ದೇವರಲೂ ನಾ ಕಾಣೆ" ಎಂದು ನಾನು ಅವರ ನಡುವೆ ಅರ್ಥಗರ್ಭಿತವಾಗಿ ಹಾಡುತ್ತೇನೆ.
ಅವನ ಯಶಸ್ಸಿನ ಫಾರ್ಮುಲಾ ಕೇಳಬೇಕೆಂದು ಅವನಿಗೆ ದುಂಬಾಲು ಬಿದ್ದವರು,ಆವನಂತೆ ಆಗಬೇಕೆಂದು ನಿರ್ಧಾರ ಮಾಡಿ ಬೆಂಗಳೂರು ಬಸ್ಸು ಹತ್ತಿದವರು,ಅವನ ಗರಡಿಯಲ್ಲಿ ಇರಬೇಕೆಂದು ಬೇಡಿದವರು ಅವನು ಕೊನೆಗೂ ಅರ್ಥವಾಗದೇ ಮರಳುತ್ತಾರೆ.
ಅದೇ ಜೋಗಿ.ಅವನನ್ನು ಅವನೊಳಗೆ ಹುಡುಕಿ ಹಿಡಿಯೋದೇ ಒಂದು ಸವಾಲು.ಸೀರಿಯೆಲ್ಲು, ಸಿನಿಮಾ ಮಂದಿಗೆ ಈ ಕಾರಣಕ್ಕೆ ಅವನ ಸಹವಾಸ ಸಾಕು-ಬೇಕು ಮಾಡುವುದು ಇದೇ ಕಾರಣಕ್ಕೆ.
ಈ ಕತೆಗಳ ಮೂಲಕ ನಿಮಗೆ ಕಾಣಿಸುವ ಈ ಕಥೆಗಾರ ನಿಮ್ಮನ್ನು ಯಾವಜ್ಜೀವ ಪಕ್ಕದಲ್ಲಿ ಕೂರಿಸಿಕೊಂಡು ಹೇಳುತ್ತಿರುವುದು ಅದೇ ಜೋಗಿ ಎಂಬ ಅನಾವರಣವನ್ನೇ.ಅವನನ್ನು ಪೂರ್ತಿ ಅರ್ಥ ಮಾಡಿಕೊಂಡ ಅಹಂಕಾರದಲ್ಲಿ ಈ ಮಾತುಗಳನ್ನು ನಾನು ಪೆಗ್ಗಿಲ್ಲದೇ ಎಗ್ಗಿಲ್ಲದೇ ಒಪ್ಪಿಸಿದ್ದೇನೆ.
ಇಂತು,
ಅವನ ಗೋಪಿ
ಮತ್ತು
ನಿಮ್ಮ ಗೋಪಾಲಕೃಷ್ಣ ಕುಂಟಿನಿ


ಪ್ರತಿಭಾ ನಂದಕುಮಾರ್ ಪ್ರೀತಿಗೆ ಕೃತಜ್ಞನಾಗುತ್ತಾ...

Shhh... The writing machine is at work
Jogi, one of the most read contemporary writers, intrigues by saying that his latest book has ‘stories that are not stories’



Ever wondered why some writers have a large fan following and some don’t? Ask Girish Rao Hatwar, who writes under the pen name Jogi and is one of the most read contemporary writers, and he shrugs with a ‘I don’t know’ look.
But his contribution to the Kannada literary world is indisputably among those of the greatest significance in recent times. Hence, readers (also writers) extend unconditional love and affection to him.
There is something about Jogi that makes him stand out among his colleagues, many of them hungry for fame, in the current Kannada scene.
He is described as a ‘writing machine’ though he has published only 22 books, unlike some of the ‘pop’ writers who publish ‘a novel a month’ and still remain unread. “Despite penning only six novels, six collections of short stories and nine collections of column writings, which is not a huge number, people have this feeling that I write a lot.
“Maybe because most of my columns are picked up and republished or the link is given in other blogs as well. My blog Jogi Mane (which has now become jogeemane) has a good number of loyal readers. My column in a popular weekly gets posted in several portals. Hence, people think I write a lot.”
The way Jogi, and his colleague/friend Udaya Marakini, brought about a change in Sunday supplements is fit for analysis. Jogi turned the dull and dreary content of supplements to trendy, crisp, contemporary and introduced many new talents, which brought in new readers. His eye for the extraordinary has never failed him.
He has written the story, screenplay and dialogues for 12 daily soaps for Kannada TV channels. Starting with Yashwanth Chital’s Shikari, the then most popular Guptagamini and Preeti Illada Mele, he brought in a fresh outlook to TV serials. His stories create a warm world in the minds of the readers and his characters seem familiar. I always feel Jogi understands contemporary women better than anybody else, at least in Kannada.
His story Kada Beladingalu was made into a film by Lingadevaru and got the state award for best story and screenplay. When Jogi switched from writing to the visual media, everybody thought that he would create wonders in that field too.
However, they were disappointed. “The visual media does not need a writer. I felt I was not needed there and immediately quit. I returned to the world of the written words where I feel at home.”
Jogi has written novels, short stories, scripts and various columns, but what about poems?
“I am a fan of poetry but not a poet,” he says with a smile.
Ask him what ails the current Kannada literary scene, he is quick to point out that “nobody reads the works of others. Nobody writes about other writers. Each one is engrossed in his or her own world. Earlier, writers used to read, write and discuss other writers. Even the write-ups one sees in newspapers and magazines are typically journalistic in nature.
“They write about the book launch, but never about the contents of the book. When did you last read an in depth analysis of a book? Forget analytical writing, there are no introductions to a book. Literary appreciation is fast becoming a rare thing.”
This Sunday, his new book FACEBOOK.COM/Manasa Joshi (publisher: Ankita Pustaka) is being released. “I am experimenting with the story form. You can call them stories that are not stories,” he says.
It has raised expectations like few books have in recent times. If you want to be among the first to know what he has come up with this time, be at the Indian Institute of World Culture on Sunday at 10.30 am.


(PRATHIBHA NANDAKUMAR Poet, writer, playwright and documentary filmmaker)
Jogi’s new book FACEBOOK.COM/Manasa Joshi will be released on Sunday

Saturday, March 12, 2011

ಪತ್ತೇದಾರ ಪುರುಷೋತ್ತಮ (ಒಂದು ಕತೆ)

ಎಂ ಎಸ್ ಪುಟ್ಟಣ್ಣಯ್ಯ `ಮಾಡಿದ್ದುಣ್ಣೋ ಮಹಾರಾಯ’, `ಮುಸುಕು ತೆಗೆಯೇ ಮಾಯಾಂಗನೆ’ ಮುಂತಾದ ಕಾದಂಬರಿಗಳನ್ನು ಬರೆದು ಅಜರಾಮರರಾದರು. ಕಾದಂಬರಿ ಪ್ರಕಾರದ ಹರಿಕಾರರೆಂದು ಹೆಸರಾದರು. ಆ ನಂತರ ಅನೇಕರು ಕಾದಂಬರಿ ಪ್ರಕಾರಕ್ಕೆ ನೀರೆರೆದು ಬೆಳೆಸಿದರು. ಬೇರೆ ಬೇರೆ ಪ್ರಕಾರದ ಕಾದಂಬರಿಗಳು ಬಂದವು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಪತ್ತೇದಾರಿ, ರೋಮಾಂಚಕ, ಪ್ರಣಯ- ಹೀಗೆ ಒಂದೊಂದು ಪ್ರಕಾರಗಳಲ್ಲಿ ಒಬ್ಬೊಬ್ಬರು ಅತ್ಯುತ್ತಮವಾದ ಸಾಧನೆ ಮಾಡಿ ಹೆಸರಾದರು.

ಕನ್ನಡದ ಓದುಗರನ್ನು ಆ ಕಾಲಕ್ಕೆ ಸೆಳೆದವರು ಅನೇಕರು. ತ್ರಿವೇಣಿ, ಎಂಕೆ ಇಂದಿರಾ, ಟಿಕೆ ರಾಮಾರಾವ್, ಭಾರತೀಪ್ರಿಯ, ಭಾರತೀಸುತ, ಕೆ.ಟಿ ಗಟ್ಟಿ ಮುಂತಾದ ಲೇಖಕರು ಒಂದಕ್ಕಿಂತ ಒಂದು ಸೊಗಸಾದ ಕಾದಂಬರಿಗಳನ್ನು ಬರೆದುಕೊಟ್ಟು ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದರು.

ಇವರ ಮಧ್ಯೆ ಎಸ್ ಎಲ್ ಭೈರಪ್ಪ, ಶಿವರಾಮ ಕಾರಂತ ಮುಂತಾದವರು ತಮ್ಮದೇ ಮಾರ್ಗದಲ್ಲಿ ನಡೆದು, ತಮ್ಮದೇ ಶೈಲಿಯ ಕಾದಂಬರಿಗಳನ್ನು ಬರೆದು ಓದುಗರ ತಿಳುವಳಿಕೆಗೂ ಭಾವಶ್ರೀಮಂತಿಕೆಗೂ ಕಾರಣರಾದರು. ಅನೇಕ ಅನುವಾದಿತ ಕಾದಂಬರಿಗಳೂ ಬಂದವು. ಇಂಗ್ಲಿಷ್, ಫ್ರೆಂಚ್, ಐರಿಷ್, ಝೆಕ್- ಹೀಗೆ ಹಲವು ದೇಶಭಾಷೆಯ ಕಾದಂಬರಿಗಳೂ ಕನ್ನಡಕ್ಕೆ ಬಂದವು. ಇಷ್ಟೆಲ್ಲ ಬಂದರೂ ಓದುಗರ ಹಸಿವು ಹಿಂಗಿದಂತೆ ಕಾಣಲಿಲ್ಲ. ಪ್ರತಿಯೊಂದು ಹೊಸ ಕಾದಂಬರಿಯೂ ಸಾವಿರಾರು ಪ್ರತಿ ಮಾರಾಟವಾಗುತ್ತಿತ್ತು. ತರಾಸು, ರಾಮಮೂರ್ತಿ ಮುಂತಾದ ಲೇಖಕರು ಲಕ್ಷಾಂತರ ಪ್ರತಿಗಳನ್ನು ಮಾರಿದ್ದೂ ಇದೆ. ಕನ್ನಡದ ಓದುಗರ ಮನಸ್ಸಿನಲ್ಲಿ ನೆಲೆಸಿದ್ದೂ ಆರಂಭದ ದಿನಗಳಲ್ಲಿ ಬಂದ ಕಾದಂಬರಿಗಳೇ. ಇವತ್ತಿಗೂ ಕಾದಂಬರಿಕಾರ ಎಂದರೆ ಥಟ್ಟನೆ ನೆನಪಾಗುವುದು ಶಿವರಾಮ ಕಾರಂತರು. ಇವತ್ತಿಗೂ ಬರೆಯುತ್ತಿರುವವರ ಪೈಕಿ ಭೈರಪ್ಪನವರು. ಅಕ್ಷರ ಪ್ರೀತಿ ಇರುವ ಎಲ್ಲರೂ ಭೈರಪ್ಪನವರ, ಕಾರಂತರ ಒಂದೊಂದು ಕಾದಂಬರಿಯನ್ನಾದರೂ ಓದಿಯೇ ಇರುತ್ತಾರೆ.

ಧಾರಾವಾಹಿಗಳ ಜನಪ್ರಿಯತೆಯನ್ನು ಕಂಡ ಪತ್ರಿಕೆಗಳು ಧಾರಾವಾಹಿಯನ್ನು ಪ್ರಕಟಿಸತೊಡಗಿದವು. ಎಲ್ಲ ಜನಪ್ರಿಯ ಲೇಖಕರ ಕಾದಂಬರಿಗಳೂ ಧಾರಾವಾಹಿಯಾಗಿ ಪ್ರಕಟಗೊಂಡವು. ವಾರಪತ್ರಿಕೆಗಳಲ್ಲಿ ಕಂತುಕಂತಾಗಿ ಪ್ರಕಟವಾಗುತ್ತಿದ್ದ ಕಾದಂಬರಿಗಳನ್ನು ಓದಲು ಓದುಗರು ಮುಗಿಬಿದ್ದರು. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳಂತೂ ಮಾರಾಟದಲ್ಲಿ ದಾಖಲೆ ನಿರ್ಮಿಸಿದವು

ಈ ಮಧ್ಯೆ ಓದುವುದಕ್ಕೆ ಆಗಷ್ಟೇ ಆರಂಭಿಸಿದವರನ್ನು ಸೆಳೆದದ್ದು ಪತ್ತೇದಾರಿ ಕಾದಂಬರಿಗಳು.. ಪತ್ರೇದಾರಿ ಕಾದಂಬರಿ ಎಂದಾಗ ನೆನಪಾಗುವ ಮೊದಲ ಹೆಸರು ಎನ್. ನರಸಿಂಹಯ್ಯ. ಅವರು ಮುನ್ನೂರೋ ನಾನ್ನೂರೋ ಕಾದಂಬರಿಗಳನ್ನು ಬರೆದು ಪ್ರಖ್ಯಾತಿ ಪಡೆದರು. ಅವರ ಜೊತೆಗೇ ಜಿಂದೆ ನಂಜುಂಡಸ್ವಾಮಿ, ಸುದರ್ಶನ ದೇಸಾಯಿ ಮುಂತಾದವರೂ ರೋಚಕ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಎಚ್ ಕೆ. ಅನಂತರಾಮ್ ರಾಜಕೀಯದ ಸ್ಪರ್ಶವಿರುವ ಕಾದಂಬರಿಗಳಿಂದ ಮನೆಮಾತಾದರು. ಇವರೆಲ್ಲರನ್ನು ಓದುತ್ತಿದ್ದ ಕನ್ನಡದ ಓದುಗವರ್ಗದ ಅಭಿರುಚಿಯನ್ನು ಬದಲಾಯಿಸುವಂಥ ಘಟನೆಗಳು ತೊಂಬತ್ತರ ದಶಕದಲ್ಲಿ ನಡೆದವು.

೧೯೯೦ರ ಸುಮಾರಿಗೆ ಕನ್ನಡ ಜನಪ್ರಿಯ ಸಾಹಿತ್ಯಲೋಕಕ್ಕೆ ಯಂಡಮೂರಿ ವೀರೇಂದ್ರನಾಥ್ ಕಾಲಿಟ್ಟರು. ವಾರಪತ್ರಿಕೆಗಳು ಯಂಡಮೂರಿ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸತೊಡಗಿದವು. ತೆಲುಗಿನಲ್ಲಿ ದಂಡಿಯಾಗಿ ಬರೆಯುತ್ತಿದ್ದ ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳು ಯಾವ ಮಟ್ಟದ ಜನಪ್ರಿಯತೆ ಗಳಿಸಿತು ಎಂದರೆ ಉಳಿದೆಲ್ಲ ಲೇಖಕರು ಒಂದೇ ಏಟಿಗೆ ಮೂಲೆಗುಂಪಾಗಿ ಹೋದರು.

ಯಂಡಮೂರಿ ವೀರೇಂದ್ರನಾಥರ ಜೊತೆಗೇ ಮಲ್ಲಾದಿ ವೆಂಕಟಕೃಷ್ಣ, ಅಬಿದ್ ಸುರತಿ ಮುಂತಾದವರು ಬರೆಯಲು ಆರಂಭಿಸಿದರು. ಆ ಹೊತ್ತಿಗಾಗಲೇ ಟಿಕೆ ರಾಮರಾವ್ ಕಣ್ಮರೆಯಾಗಿದ್ದರು. ಉಳಿದ ಲೇಖಕರು ಕ್ರಮೇಣ ಮಾಸುತ್ತಾ ಹೋದರು. ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ರೋಚಕತೆಯನ್ನು ಕಾಯ್ದಿರಿಸುವ ಮೂಲಕ ಅವರು ಇನ್ನಿಲ್ಲದ ಜನಪ್ರಿಯತೆಯನ್ನು ಸಂಪಾದಿಸಿದರು. ಪ್ರಕಾಶನ ಸಂಸ್ಥೆಗಳು ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳಿಗೆ ಮುಗಿಬಿದ್ದರು. ಅವರ ನಂತರದ ದಿನಗಳಲ್ಲಿ ಆ ಮಟ್ಟಿನ ಜನಪ್ರಿಯತೆಯನ್ನು ಗಳಿಸಿದ್ದು ರವಿ ಬೆಳಗೆರೆ ಕಾದಂಬರಿಗಳೇ ಅನ್ನಬೇಕು.

ಯಾವಾಗ ಯಂಡಮೂರಿ ಬರೆಯಲು ಆರಂಭಿಸಿದರೋ, ಆ ಹೊತ್ತಿಗೆ ಕೇವಲ ಲೇಖಕರು ಮಾತ್ರ ನಿರುದ್ಯೋಗಿಗಳಾಗಲಿಲ್ಲ. ಕೆಲಸ ಕಳೆದುಕೊಂಡು ಸುತ್ತಾಡುತ್ತಿದ್ದ, ಹೊಸ ಕೆಲಸಕ್ಕಾಗಿ ಹಾತೊರೆಯುತ್ತಿದ್ದ, ತಮ್ಮ ಪ್ರತಿಭೆಯ ಪ್ರದರ್ಶನಕ್ಕಾಗಿ ಕಾಯುತ್ತಿದ್ದವರ ಪಟ್ಟಿಯಲ್ಲಿ ಇನ್ನೂ ಕೆಲವರಿದ್ದಾರೆ. ಅವರ ಹೆಸರು ಅರಿಂಜಯ ಮತ್ತು ಪುರುಷೋತ್ತಮ.

-೨-

ಸುಮಾರು ನೂರಕ್ಕೂ ಹೆಚ್ಚು ಕೊಲೆ ಪ್ರಕರಣಗಳನ್ನು ಬೇದಿಸಿದ, ಸಾವಿರಾರು ಅಪರಾಧಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಅಪ್ರತಿಮ ಧೈರ್ಯಶಾಲಿ ಪುರುಷೋತ್ತಮ ಖಿನ್ನನಾಗಿ ಕೂತಿದ್ದ. ತನಗೆ ಇಂಥದ್ದೊಂದು ಸ್ಥಿತಿ ಬರುತ್ತದೆ ಅನ್ನುವ ಸಣ್ಣ ಕಲ್ಪನೆಯೂ ಅವನಿಗಿರಲಿಲ್ಲ. ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿತ್ತು. ದಿನಕ್ಕೆ ನೂರಾರು ಮಂದಿ ವಿವಿಧ ಕಾರಣಗಳಿಗೋಸ್ಕರ ಕೊಲೆಯಾಗುತ್ತಿದ್ದವು. ಹೆಂಡತಿಯನ್ನು ಗಂಡ ಕೊಲೆ ಮಾಡುತ್ತಿದ್ದ. ಗಂಡನನ್ನು ಹೆಂಡತಿ ಕೊಲೆ ಮಾಡುತ್ತಿದ್ದಳು. ಮಾಲೀಕನನ್ನು ಉದ್ಯೋಗಿ ಕೊಲೆ ಮಾಡುತ್ತಿದ್ದ. ಯಾವುದೇ ಸುಳಿವಿಲ್ಲದೆ ಹರೆಯದ ಹೆಣ್ಣೊಬ್ಬಳು ಕಣ್ಮರೆಯಾಗುತ್ತಿದ್ದಳು.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗುವುದನ್ನು ಪುರುಷೋತ್ತಮ ನೋಡುತ್ತಿದ್ದ. ಎಷ್ಟೋ ಪ್ರಸಂಗಗಳನ್ನು ಅವನು ತನ್ನ ಕುತೂಹಲಕ್ಕೆಂಬಂತೆ ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದ. ಆಗೆಲ್ಲ ಅವನಿಗೆ ಅಪರಾಧಿ ಯಾರೆಂಬುದು ಅರಿವಿಗೆ ಬರುತ್ತಿತ್ತು. ಅದನ್ನು ಪೊಲೀಸರಿಗೆ ಹೇಳಬೇಕು ಅಂತ ಎಷ್ಟೋ ಸಲ ಅಂದುಕೊಳ್ಳುತ್ತಿದ್ದ. ಆದರೆ ಪೊಲೀಸರು ತಮಗೆ ಅದರಲ್ಲಿ ಆಸಕ್ತಿಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದರು. ಒಂದು ಸಲ ಫೋನ್ ಮಾಡಿದಾಗ ಇನ್ಸ್‌ಪೆಕ್ಟರ್ ಒಬ್ಬ ರೇಗಿದ್ದ: ನಮಗೆ ಖಾಸಗಿ ಪತ್ತೇದಾರರು ಬೇಕಾಗಿಲ್ಲ. ಯಾವುದಾದರೂ ಸೆಕ್ಯೂರಿಟಿ ಏಜೆನ್ಸಿ ತೆರೆಯಿರಿ. ಅದೇ ನಿಮ್ಮ ಯೋಗ್ಯತೆ’ ಎಂದಿದ್ದ. ಆವತ್ತಿನಿಂದ ಪುರುಷೋತ್ತಮ ಪೊಲೀಸರಿಗೆ ಫೋನು ಮಾಡುವುದನ್ನು ಬಿಟ್ಟುಬಿಟ್ಟಿದ್ದ.

ಕೊಲೆಯಾದವರ ಸಂಬಂಧಿಕರು ಕೂಡ ಪುರುಷೋತ್ತಮನನ್ನು ಸಂಪರ್ಕಿಸುತ್ತಿರಲಿಲ್ಲ. ಅವನ ಆಫೀಸು ಅದೇ ಜಾಗದಲ್ಲಿ ಆದೇ ಸ್ಥಿತಿಯಲ್ಲಿದ್ದರೂ ಅದರೊಳಗೆ ಯಾರೂ ಕಾಲಿಡುತ್ತಿರಲಿಲ್ಲ. ಹಾಗಾದಾಗ ಎಷ್ಟೋ ಸಲ ಅವನಿಗೆ ಅನುಮಾನ ಬರುತ್ತಿತ್ತು. ಹೆಂಡತಿ ಕೊಲೆಯಾದಾಗ ಗಂಡ, ಮಗ ಕೊಲೆಯಾದಾಗ ಅಪ್ಪ ತನ್ನನ್ನು ಸಂಪರ್ಕಿಸಬೇಕಾಗಿತ್ತು. ಕೊಲೆಗಾರನನ್ನು ಹಿಡಿದುಕೊಡಿ ಎಂದು ಕೇಳಿಕೊಳ್ಳಬೇಕಾಗಿತ್ತು. ಆದರೆ ಅಂಥ ಯಾವ ಉತ್ಸಾಹವೂ ಬದುಕಿರುವವರಲ್ಲಿ

ಯಾಕಿಲ್ಲ ಎಂದು ಅಚ್ಚರಿಗೊಳ್ಳುತ್ತಿದ್ದ. ಅವನು ನೋಡಿದ ಪ್ರಕಾರ, ಈ ಕಾಲದಲ್ಲಿ ಅತ್ಯಂತ ಹೆಚ್ಚು ಜಾಣ್ಮೆಯಿಂದ ಕೊಲೆಗಳನ್ನು ಅಪರಾಧಗಳನ್ನು ಪತ್ತೆ ಮಾಡುತ್ತಿದ್ದವನು ಪತ್ತೇದಾರ ಅಲ್ಲ, ಒಬ್ಬ ವಕೀಲ. ಸಿ ಎಸ್ ಪಿ ಎಂಬ ವಕೀಲ ಮಾತ್ರ ಅಪರಾಧಗಳನ್ನು ಪತ್ತೆ ಹಚ್ಚುವ ಕಲೆಯಲ್ಲಿ ನಿಷ್ಣಾತನಾದಂತೆ ಕಾಣಿಸುತ್ತಿದ್ದ. ಅವನನ್ನೂ ಪೊಲೀಸರು ಬಳಸಿಕೊಳ್ಳುತ್ತಿರಲಿಲ್ಲ. ರಾಜಕಾರಣಿಗಳು ಅವನ ವಿರೋಧಿಗಳಾಗಿದ್ದರು. ಸಹಜವಾಗಿ ಪೊಲೀಸರಿಗೂ ಅವನ ಮೇಲೆ ಸಿಟ್ಟಿತ್ತು. ಒಮ್ಮೊಮ್ಮೆ ಪೊಲೀಸ್ ಅಧಿಕಾರಿಗಳ ಭ್ರಷ್ಟತೆಯನ್ನೂ ಅವನು ಬಯಲಿಗೆಳೆಯುತ್ತಿದ್ದ.

ಇವೆಲ್ಲವನ್ನೂ ನೋಡುತ್ತಿದ್ದಂತೆ ಪುರುಷೋತ್ತಮನಿಗೊಂದು ಅನುಮಾನ ಕಾಡುತ್ತಿತ್ತು. ಕೇವಲ ತನ್ನನ್ನು ಮಾತ್ರ ಈ ನಿರುದ್ಯೋಗ ಕಾಡುತ್ತಿದೆಯಾ ಅಥವಾ ಬೇರೆ ಪತ್ತೇದಾರರೂ ಹೀಗೇ ಕಷ್ಟ ಅನುಭವಿಸುತ್ತಿದ್ದಾರಾ ಎಂದು ತಿಳಿದುಕೊಳ್ಳುವ ಆಸೆಯಾಯಿತು. ಹಾಗೆ ಹುಡುಕುತ್ತಾ ಹೋದವ ಹೇಗೋ ಮಾಡಿ ಪತ್ತೇದಾರ ಅರಿಂಜಯನ ಪತ್ತೆ ಮಾಡಿ, ಅವನನ್ನು ಒಂದು ದಿನ ಭೇಟಿಯಾದ.

ಅವನ ಪರಿಸ್ಥಿತಿಯೂ ಪುರುಷೋತ್ತಮನದಕ್ಕಿಂತ ಉತ್ತಮವಾಗೇನೂ ಇರಲಿಲ್ಲ. ಅವನಿಗೂ ಕೇಸು ಬರದೇ ವರ್ಷಗಳೇ ಆಗಿದ್ದವು. ಅವನೂ ಕೂಡ ಪುರುಷೋತ್ತಮ ಕೇಳಿಕೊಂಡಂಥ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಕೂತಿದ್ದ. ಅವರಿಬ್ಬರ ಮಧ್ಯೆ ಒಂದಷ್ಟು ಮಾತಾಯಿತು:

ಪುರುಷೋತ್ತಮ: ಕೊಲೆಯಾಯಿತು, ರಕ್ತಪಾತವಾಯಿತು ಎಂಬ ವಿಚಾರದಲ್ಲಿ ಇರುವಷ್ಟು ಆಸಕ್ತಿ, ಯಾರು ಕೊಲೆ ಮಾಡಿದರು, ಯಾಕೆ ಕೊಲೆ ಮಾಡಿದರು, ಕೊಲೆಗಾರನಿಗೆ ಶಿಕ್ಷೆಯಾಯಿತೇ ಎಂದು ತಿಳಿದುಕೊಳ್ಳುವ ವಿಚಾರದಲ್ಲಿ ಇಲ್ಲ.

ಅರಿಂಜಯ: ನಾನೂ ಗಮನಿಸಿದ್ದೇನೆ. ಈಗಿನ ಮಂದಿಗೆ ಕೊಲೆಗಾರ ಮುಖ್ಯವೇ ಅಲ್ಲ.

ಪುರುಷೋತ್ತಮ: ಕೊಲೆಯ ರೋಚಕತೆ, ಅಪರಾಧದ ರೋಚಕತೆಯನ್ನಷ್ಟೇ ಅವರು ನೋಡುತ್ತಾರೆ. ಆಮೇಲೇನಾಯಿತು ಎಂದು ಅವರು ಗಮನಿಸುವುದಕ್ಕೆ ಹೋಗುವುದೇ ಇಲ್ಲ.

ಅರಿಜಂಯ: ನಾನೂ ನೋಡ್ತಾ ಇದ್ದೆ. ಸಿಕ್ಕಾಪಟ್ಟೆ ಕೊಲೆಗಳು, ಕಳ್ಳತನಗಳು, ದರೋಡೆಗಳು ನಡೆಯುತ್ತಿವೆ. ನಮಗೆ ಕೈತುಂಬ ಕೆಲಸ ಸಿಗುತ್ತದೆ ಅಂತ ಸಣ್ಣ ಸಂತೋಷವೂ ಇತ್ತು. ಆದರೆ ಈಗ ನಿರಾಸೆಯಾಗಿದೆ.

ಪುರುಷೋತ್ತಮ: ಈಗ ಕೊಲೆಯಾಗುವುದು ಅಂಥ ಬೆಚ್ಚಿಬೀಳಿಸುವ ಸಂಗತಿ ಅಲ್ಲವೇ ಅಲ್ಲ. ಅದೊಂದು ಸಹಜ ವ್ಯಾಪಾರ. ಕೊಲೆಗಾರ ಯಾರು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಅದು ಗೊತ್ತಿದ್ದ ಮೇಲೆ ಪತ್ತೆ ಮಾಡುವಂಥದ್ದೇನಿದೆ. ನಮ್ಮ ವರದಿ, ತನಿಖೆ ಯಾರಿಗೆ ಬೇಕು.

ಅರಿಂಜಯ: ಈಗ ನಾವೇನು ಮಾಡಬಹುದು ಅಂತ ನಿನಗನ್ನಿಸುತ್ತದೆ.

ಪುರುಷೋತ್ತಮ: ಯಾವ ಸಮಾಜದಲ್ಲಿ ಕೆಲವೇ ಕೆಲವು ಅಪರಾಧಿಗಳಿರುತ್ತಾರೋ, ಎಲ್ಲಿ ಶಿಕ್ಷೆಯ ಬಗ್ಗೆ ಭಯ ಇರುತ್ತದೋ, ಎಲ್ಲಿ ಮಂದಿಗೆ ಅವಮಾನ ಆಗುತ್ತದೋ ಅಲ್ಲಿ ನಮಗೂ ಕೆಲಸ ಇರುತ್ತೆ. ಆದರೆ ಈ ಕಾಲದಲ್ಲಿ ಬಹುತೇಕರು ಅಪರಾಧಿಗಳೇ, ಶಿಕ್ಷೆಯ ಭಯ ಯಾರಿಗೂ ಇಲ್ಲ, ಅಪರಾಧಿ ಎಂದು ಸಾಬೀತಾದರೂ ಯಾರಿಗೂ ಅವಮಾನ ಆಗುವುದಿಲ್ಲ. ಅಂದ ಮೇಲೆ ನಮಗೆ ಕೆಲಸ ಇಲ್ಲ.

ಅರಿಂಜಯ: ನಮಗೇ ಇಲ್ಲವೆಂದ ಮೇಲೆ ನಮ್ಮ ಸೃಷ್ಟಿಕರ್ತನಿಗೆ.

-೩-

ಎನ್ . ನರಸಿಂಹಯ್ಯನವರು ಪತ್ತೇದಾರಿ ಕಾದಂಬರಿ ಬರೆಯುವುದನ್ನು ನಿಲ್ಲಿಸಿ ವರ್ಷಗಳೇ ಆಗಿವೆ.