Friday, April 23, 2010

ಏಪ್ರಿಲ್ 25, 2010

ಈ ಭಾನುವಾರ ಎಲ್ಲಿಗೆ ಹೋಗುವುದು?
ಪ್ರತಿವಾರ ಕಾಡುವ ಪ್ರಶ್ನೆ ಇದು. ಆದರೆ, ಈ ವಾರ ಅದರ ಬಗ್ಗೆ ಯೋಚಿಸಬೇಕಿಲ್ಲ, ನಾನಂತೂ ರವೀಂದ್ರ ಕಲಾಕ್ಷೇತ್ರದಲ್ಲಿರುತ್ತೇನೆ.
ಆವತ್ತು, ದೇಶಕಾಲ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಜಾವೇದ್ ಅಖ್ತರ್ ವೇದಿಕೆಯಲ್ಲಿರುತ್ತಾರೆ ಎಂಬ ಖುಷಿಯ ಜೊತೆ, ನೂರಾರು ಗೆಳೆಯರು, ಸಹಲೇಖಕರು ಸಿಗುತ್ತಾರೆ ಎಂಬುದು ಮತ್ತೊಂದು ಸಂತೋಷ.
ಹಳೆಯ ದಿನಗಳು ನೆನಪಾಗುತ್ತಿವೆ. ಸಂಕೇತ್ -ನಾಗಮಂಡಲ- ನಾಟಕ ಆಡಿದಾಗ ಚಿತ್ರಕಲಾ ಪರಿಷತ್ತಿನಲ್ಲಿ ಸಂಭ್ರಮ, ಅದಕ್ಕೂ ಮುಂಚೆ ಬಿವಿ ಕಾರಂತರು ಮೂರು ನಾಟಕಗಳ ಪ್ರದರ್ಶನ ಏರ್ಪಡಿಸಿ ಥ್ರಿಲ್ ಕೊಟ್ಟಿದ್ದರು. ಆಮೇಲೆ, ಕುಸುಮಬಾಲೆ ನಾಟಕದ ಪ್ರದರ್ಶನ ನಡೆಯಿತು. ಅಡಿಗರ ಭೂಮಿಗೀತ ರಂಗಕ್ಕೆ ಬಂದಾಗೊಂದು ಸಂಭ್ರಮವಿತ್ತು. ಕಾರ್ನಾಡರ ಅಗ್ನಿ ಮತ್ತು ಮಳೆಯ ಇಂಗ್ಲಿಷ್ ಪ್ರದರ್ಶನ ಕೊಟ್ಟ ಖುಷಿಯೇ ಬೇರೆ. ಇತ್ತೀಚೆಗೆ ಸೂರಿ ನಿರ್ದೇಶಿಸಿದ ಇಬ್ಬರು ಮುದುಕರ ಕತೆ ಹೇಳುವ ನಾಟಕ ನಾ ತುಕಾರಾಮ್ ಅಲ್ಲ- ಹೀಗೆ ನಮ್ಮ ಖುಷಿಯನ್ನು ಹೆಚ್ಚಿಸುವ ಹಬ್ಬಗಳು ಆಗಾಗ ನಡೆಯುತ್ತಿರುತ್ತವೆ.
ಈ ಸಲದ ಹಬ್ಬಕ್ಕೆ ವಿವೇಕ ಶಾನಭಾಗರು ನೆಪ. ಅವರು ಅಕ್ಕರೆಯಿಂದ ರೂಪಿಸಿದ ದೇಶಕಾಲ ವಿಶೇಷ ಸಂಚಿಕೆಯ ಬಿಡುಗಡೆ ಮತ್ತೊಂದು ನೆಪ. ಬೆಳಗ್ಗೆ ಒಂಬತ್ತೂವರೆಗೆಲ್ಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿ, ಒಂದಿಷ್ಟು ಕಾಫಿ ಕುಡಿದು, ಹರಟುತ್ತಾ ನಮ್ಮ ಜ್ಞಾಪಕ ಚಿತ್ರಶಾಲೆಯನ್ನು ಅಲಂಕರಿಸಿಕೊಳ್ಳೋಣ.
ಬರ್ತೀರಲ್ಲ, ಈ ಭಾನುವಾರ ನಮ್ಮದು.

1 comment:

Anantha said...

ಜೋಗಿಯವರೆ,

ದೇಶ ಕಾಲಕ್ಕೆ ಚಂದಾದಾರರಾಗುವುದು ಹೇಗೆ? ಇಂಟರ‍್ನೆಟ್‍ನಲ್ಲಿ ಹುಡುಕಾಡಿದೆ, ಏನೂ ಮಾಹಿತಿ ಸಿಗಲಿಲ್ಲ. ದಯವಿಟ್ಟು ತಿಳಿಸಿ..