Sunday, November 28, 2010

ಕಾರ್ನಾಡರನ್ನು ಪ್ರೀತಿಸುತ್ತಾ...

ನಮಗೆ ವಚನಗಳೆಂದರೆ ಪ್ರೀತಿ. ನೀತಿ ಪಾಠ ಹೇಳುವವರು ಸಿಕ್ಕರಂತೂ ಅತೀವ ಸಂತೋಷ. ಹೀಗೆ ಮಾಡು, ಹಾಗಿರು, ಇದು ಬದುಕಿನ ರೀತಿ, ಇದು ತಪ್ಪು, ಇದು ನಿಷಿದ್ಧ ಎಂದು ಹೇಳುವ ಲೇಖಕರು ಶ್ರೇಷ್ಠರು. ಸಾಹಿತ್ಯ ಎಂದರೆ ಬದುಕುವುದನ್ನು ಕಲಿಸುವಂಥ ಕಲೆ. ಅದರಲ್ಲೊಂದು ಸಂದೇಶ ಇರಲೇಬೇಕು. ಬೇಕೋ ಬೇಡವೋ, ನಮಗಂತೂ ಸಂದೇಶ ಬೇಕು,
ಸಿನಿಮಾ ನಿರ್ದೇಶಕರನ್ನೂ ಪತ್ರಕರ್ತರು ಹಾಗಂತ ಕೇಳುವುದುಂಟು. ನಿಮ್ಮ ಸಿನಿಮಾದ ಸಂದೇಶ ಏನು. ಸಮಾಜಕ್ಕೆ ಏನು ಸಂದೇಶ ಕೊಡುತ್ತೀರಿ, ಈ ಸಿನಿಮಾ ಕೆಟ್ಟ ಸಂದೇಶ ನೀಡುವುದಿಲ್ಲವೇ –ಹೀಗೆ ಸಾಗುತ್ತದೆ ಪ್ರಶ್ನೆಗಳ ಸರಮಾಲೆ. ಸಂದೇಶ ಕೊಡುವುದಕ್ಕೆ ಸಿನಿಮಾ ಪ್ರನಾಳಿಕೆಯೋ ಒಡಂಬಡಿಕೆಯೋ ಅಲ್ಲವಲ್ಲ. ಅದು ಬದುಕಿನ ಪ್ರತಿಬಿಂಬ ಮಾತ್ರ.ಒಂದು ಜೀವ ನಮ್ಮೆದುರು ಬದುಕಿದ್ದನ್ನು ನೋಡುವಾಗ ನಮಗೆ ಅದರಿಂದ ಏನು ಹುಟ್ಟುತ್ತದೆಯೋ ಅದಷ್ಟೇ ಸಂದೇಶ. ಏನೂ ಹುಟ್ಟದೇ ಹೋಗುವ ಸಾಧ್ಯತೆಯೂ ಉಂಟು. ಅದು ಆ ಜೀವದ ಸೋಲಂತೂ ಅಲ್ಲ. ಯಾಕೆಂದರೆ ಯಾರೂ ಸಂದೇಶ ಕೊಡುವುದಕ್ಕೆಂದೇ ಬದುಕುವುದಿಲ್ಲ.
ಮೊನ್ನೆ ಹೀಗಾಯಿತು. ಗಿರೀಶ್ ಕಾರ್ನಾಡರ ನಾಟಕಗಳ ಮಾತು ಬಂತು. ನಮ್ಮನ್ನು ಈಗಲೂ ಸೆಳೆಯುವ ನಾಟಕಕಾರ ಗಿರೀಶ್. ಅವರ ನಾಟಕಗಳ ಪಾತ್ರಗಳು ಜೀವಂತವಾಗಿರುತ್ತವೆ. ಹಲವು ವ್ಯಕ್ತಿತ್ವಗಳನ್ನು ಒಳಗೊಂಡಿರುತ್ತವೆ. ಸಂಕೀರ್ಣವಾಗಿರುತ್ತವೆ. ಸರಿತಪ್ಪುಗಳಾಚೆಗೂ ಬದುಕಬಲ್ಲ ತೀವ್ರತೆ ಇರುತ್ತವೆ. ಹೀಗೆಲ್ಲ ಮಾತಾಡುತ್ತಾ ತುಘಲಕ್ ಬಗ್ಗೆ ಮಾತಾಡುತ್ತಿರಬೇಕಾದರೆ `ತುಘಲಕ್ ನಾಟಕದ ಸಂದೇಶ ಏನು ಹೇಳು ನೋಡೋಣ’ ಎಂಬ ಸವಾಲು ಎದುರಾಯಿತು.
ಕೆಲವೊಮ್ಮೆ ವಿಚಿತ್ರ ಮುಜುಗರಗಳಾಗುತ್ತವೆ. ಸಾಹಿತ್ಯ ಕೃತಿಗಳನ್ನು ಹೀಗೇ ಅಂತ ವಿವರಿಸುವುದು ಕಷ್ಟ. ಅದು ಪ್ರೀತಿಯ ಹಾಗೆ. ನೀನು ಅವಳನ್ನೇ ಯಾಕೆ ಪ್ರೀತಿಸುತ್ತೀಯಾ ಎಂಬ ಪ್ರಶ್ನೆಗೆ ಇನ್ನೊಬ್ಬರಿಗೆ ಒಪ್ಪಿಗೆಯಾಗುವಂಥ ಉತ್ತರ ಕೊಡುವುದಂತೂ ಸಾಧ್ಯವೇ ಇಲ್ಲ. ಯಾಕೆಂದರೆ ನಾವು ಯಾಕೆ ಪ್ರೀತಿಸುತ್ತೇವೆ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಂಡಿರುವುದಿಲ್ಲ. ವಿಮರ್ಶೆ ಮತ್ತು ಮೆಚ್ಚುಗೆಗೆ ಇರುವ ವ್ಯತ್ಯಾಸ ಅದೇ. ವಿಮರ್ಶೆ ತಾರ್ಕಿಕ ನಿಲುವುಗಳನ್ನು ಬೇಡುತ್ತದೆ. ಮೆಚ್ಚುಗೆ ಬದುಕಿನಿಂದ ಹುಟ್ಟಿದ್ದಾಗಿರುತ್ತದೆ. ಸಾಹಿತ್ಯ ಜೀವಿಸುವುದು ಮೆಚ್ಚುಗೆಯಲ್ಲೇ ಹೊರತು, ವಿಮರ್ಶೆಯಲ್ಲಿ ಅಲ್ಲ.
ತುಘಲಕ್ ಕೂಡ ಹಾಗೆ ಅಕಾರಣವಾಗಿ ಪ್ರೀತಿಸಬಲ್ಲಂಥ ಕೃತಿ. ಗಿರೀಶ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕ ಲೇಖಕರು ಅವರು ಕೇವಲ ನಾಟಕ ಬರೆದವರಲ್ಲವೇ? ನಾಟಕ ಬರೆದದ್ದಕ್ಕೆ ಜ್ಞಾನಪೀಠ ಪ್ರಶಸ್ತಿ ಕೊಡುವುದು ಸರಿಯೇ ಎಂದೆಲ್ಲ ಗೊಣಗಿಕೊಂಡಿದ್ದರು. ಇವತ್ತೂ ಆ ಪ್ರಶ್ನೆಯನ್ನು ಕೇಳುವ ಯುವ ಲೇಖಕರಿದ್ದಾರೆ.
ಅದಕ್ಕೊಂದು ಕಾರಣವೂ ಇದೆ. ನಾಟಕ ಓದಿಕೊಳ್ಳುವ ಸಾಹಿತ್ಯ ಪ್ರಕಾರ ಅಲ್ಲ. ಅದು ರಂಗಕ್ರಿಯೆಯಲ್ಲಿ ಮೈತಳೆಯಬೇಕಾದದ್ದು. ಹಾಗೆ ರಂಗದ ಮೇಲೆ ಪ್ರದರ್ಶಿತಗೊಳ್ಳುವ ಸೌಭಾಗ್ಯ ಎಲ್ಲ ನಾಟಕಗಳಿಗೂ ಸಿಗುವುದಿಲ್ಲ. ಮತ್ತು ಪ್ರದರ್ಶಿತಗೊಂಡ ನಾಟಕಗಳನ್ನು ನೋಡುವ ಅವಕಾಶ ಎಲ್ಲ ಪ್ರದೇಶದ ಮಂದಿಗೂ ಲಭ್ಯವಾಗುವುದಿಲ್ಲ. ಹೀಗಾಗಿ ರಾಜಧಾನಿಯಲ್ಲಿ ತುಂಬ ಜನಪ್ರಿಯತೆ ಗಳಿಸಿದ ನಾಟಕ, ಗ್ರಾಮೀಣ ಪ್ರದೇಶಗಳ ಮಂದಿಗೆ ಗೊತ್ತೇ ಇರುವುದಿಲ್ಲ. ಕಾರ್ನಾಡರ ವಿಚಾರದಲ್ಲಿ ಆದದ್ದೂ ಅದೇ, ಅವರ ಅತ್ಯಂತ ಜನಪ್ರಿಯ ನಾಟಕಗಳು ನಮ್ಮೂರಿನ ಮಂದಿಗೆ ಗೊತ್ತಿಲ್ಲ. ಕಾರಂತರ ಕಾದಂಬರಿಗಳ ಹಾಗೆ ಅವು ಓದಿಸಿಕೊಳ್ಳಲಿಲ್ಲ. ಕುವೆಂಪು ಕವಿತೆಗಳ ಹಾಗೆ ಹಾಡಿಗೆ ಸಿಲುಕಲಿಲ್ಲ. ಮಾಸ್ತಿಯವರ ಕತೆಗಳಂತೆಯೋ ಅನಂತಮೂರ್ತಿಯವರ ಮಾತು-ಕೃತಿಗಳಂತೆಯೋ ಬೇಂದ್ರೆಯವರ ಕಾವ್ಯದ ಹುಚ್ಚಿನಂತೆಯೋ ಕಾರ್ನಾಡರು ಎಲ್ಲರಿಗೂ ಒದಗಲಿಲ್ಲ.
ಅವರ ಕುರಿತಾದರೂ ಯಾರಿಗೆ ಗೊತ್ತಿತ್ತು ಹೇಳಿ. ಉಡುಪಿ ಕುಂದಾಪುರದ ನಡುವಿರುವ ಕಾರ್ನಾಡು, ಗಿರೀಶರ ಊರು ಎಂದೇ ಅನೇಕರು ಭಾವಿಸಿದ್ದೆವು. ಕಾರ್ನಾಡು ಸದಾಶಿವರಾಯರು ಗಿರೀಶರ ಸಂಬಂಧಿ ಎಂದುಕೊಂಡಿದ್ದೆವು. ಗಿರೀಶ ಕಾರ್ನಾಡರು ಯಾವತ್ತೂ ತನ್ನ ಬಗ್ಗೆ ಹೇಳಿಕೊಂಡವರೂ ಅಲ್ಲ, ಬರೆದುಕೊಂಡವರೂ ಅಲ್ಲ. ವಿವೇಕ ಶಾನುಭಾಗರ ಕೃಪೆಯಿಂದ ಅವರ ಆತ್ಮಚರಿತ್ರೆಯ ಎರಡು ಅಧ್ಯಾಯಗಳು ಓದಲಿಕ್ಕೇ ಸಿಕ್ಕಿದುವಲ್ಲ, ಆಗಲೇ ಅವರ ಬಾಲ್ಯ ಯೌವನಗಳ ಕುರಿತು ನಮಗೊಂದಷ್ಟು ವಿವರಗಳು ಸಿಕ್ಕಿದ್ದು.
ಅದಕ್ಕೂ ಮುಂಚೆ ಕಾರ್ನಾಡರು ಪರಿಚಿತರಾದದ್ದು ಅವರ ನಾಟಕ, ಸಿನಿಮಾಗಳ ಮೂಲಕ. ಒಂದಾನೊಂದು ಕಾಲದಲ್ಲಿ, ಕಾಡು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಅವರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯಂತೆ ಉಳಿದದ್ದು ಪ್ರಾಣೇಶಾಚಾರ್ಯರ ಪಾತ್ರದಲ್ಲಿ. ನಾರಣಪ್ಪ ಸತ್ತನೆಂದು ಗೊತ್ತಾದ ತಕ್ಷಣ ಊಟವನ್ನು ಹಾಗೇ ಬಿಟ್ಟು ಆಪೋಶನ ತೆಗೆದುಕೊಂಡು ಏಳುವ ಚಿತ್ರವೊಂದು ಇವತ್ತಿಗೂ ನನ್ನ ಮನಸ್ಸಿನಲ್ಲಿದೆ. ಆಮೇಲೆ ಆನಂದಭೈರವಿ ಎಂಬ ಚಿತ್ರದಲ್ಲಿ ಕಾರ್ನಾಡರು ನಾಟ್ಯಾಚಾರ್ಯರಾಗಿ ನಟಿಸಿದ್ದರು. ಆ ಪಾತ್ರವೂ ಕಣ್ಮುಂದೆ ಹಸಿರು.
ಮೂಲತಃ ಪತ್ರಕರ್ತರಾದ ನಮಗೆಲ್ಲ ಕಾರ್ನಾಡರ ಮೇಲೆ ಸಿಟ್ಟು. ಅವರು ಯಾವತ್ತೂ ಹೇಳಿಕೆಗಳನ್ನು ಕೊಟ್ಟವರಲ್ಲ. ಸಾಹಿತ್ಯ ಸಮ್ಮೇಳನದ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಕೇಳಿದರೆ ನೋ ಕಾಮೆಂಟ್ಸ್ ಎಂದು ಹೇಳಿ ಫೋನಿಟ್ಟುಬಿಡುತ್ತಿದ್ದರು. ಎಷ್ಟೋ ಸಾರಿ ಫೋನಿಗೂ ಸಿಗುತ್ತಿರಲಿಲ್ಲ. ಯಾವುದಾದರೂ ಸಮಾರಂಭಕ್ಕೆ ಕರೆದರೆ ಕಠೋರವಾಗಿ ನಿರಾಕರಿಸುತ್ತಿದ್ದರು. ಏನನ್ನಾದರೂ ಬರೆದುಕೊಡಿ ಎಂದರೆ ನಾನು ಬೇರೇನೋ ಮಾಡುತ್ತಿದ್ದೇನೆ ಬಿಡುವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಅವರ ದನಿಯಲ್ಲಿ ದ್ವಂದ್ವವನ್ನು ನಾನಂತೂ ಕಂಡೇ ಇಲ್ಲ. ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆದರೂ ಅವರದು ಅದೇ ಉತ್ತರ. ನಾನು ಬರುವುದಕ್ಕಾಗುವುದಿಲ್ಲ. ಮತ್ತೆ ಫೋನಿಸುವ ಅಗತ್ಯವಿಲ್ಲ. ನಮಸ್ಕಾರ. ಹೀಗಾಗಿ ಅವರು ಸಾಹಿತ್ಯ ಜಗತ್ತಿನಿಂದ ಹೊರಗೇ ಉಳಿಯಲು ಬಯಸುತ್ತಾರೆ ಎಂದು ನಾವೆಲ್ಲ ಅವರನ್ನು ಅಸೂಯೆ ಮತ್ತು ಸಿಟ್ಟಿನಿಂದ ನೋಡುತ್ತಿದ್ದೆವು.
ಚಿತ್ರರಂಗದ ಮಿತ್ರರೂ ಅವರ ಬಗ್ಗೆ ಕತೆ ಹೇಳುತ್ತಿದ್ದರು. ವಿಪರೀತ ಸಂಭಾವನೆ ಕೇಳುತ್ತಾರೆ ಎಂಬುದು ಅಂಥ ಅಪಾದನೆಗಳಲ್ಲಿ ಪ್ರಮುಖವಾದದ್ದು. ಕನ್ನಡ ನಿರ್ಮಾಪಕರ ರೀತಿನೀತಿಗಳು ತಿಳಿದ ನಂತರ ಕಾರ್ನಾಡರು ಸರಿ ಎಂಬ ತೀರ್ಮಾನಕ್ಕೆ ನಾವು ಬರದೇ ಬೇರೆ ದಾರಿಯೇ ಇರಲಿಲ್ಲ.
ನಿರ್ಮಾಪಕರೊಬ್ಬರು ಒಂದು ಟೀವಿ ಸೀರಿಯಲ್ಲು ಆರಂಭಿಸಿದ ದಿನಗಳಲ್ಲಿ ಅದರಲ್ಲಿ ಪ್ರಮುಖ ಪಾತ್ರವಾಗಿ ನಟಿಸಲು ಕಾರ್ನಾಡರು ಒಪ್ಪಿದ್ದರು. ಅವರನ್ನು ಆಗ ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಕಾರ್ನಾಡರು ತಮ್ಮ ಎಂದಿನ ಗಡಸು ದನಿಯಲ್ಲಿ ತಮ್ಮ ಸಂಭಾವನೆಯನ್ನು ಸೂಚಿಸಿದ್ದರು. ನಾವು ಕತೆ ಹೇಳಲು ಯತ್ನಿಸಿದಾಗ, ಅದೇನೂ ಬೇಕಾಗಿಲ್ಲ. ಒಂಬತ್ತು ಗಂಟೆಗೆ ಬರುತ್ತೇನೆ. ನಿಮ್ಮ ವಸ್ತ್ರವಿನ್ಯಾಸಕನಿಗೆ ಬಂದು ಬಟ್ಟೆಯ ಅಳತೆ ತೆಗೆದುಕೊಂಡು ಹೋಗಲು ಹೇಳಿ ಎಂದಿದ್ದರು. ಕತೆ ಹೇಗಿರಬೇಕು ಎಂದು ಕೇಳಿದ್ದಕ್ಕೆ ಅದು ನಿಮ್ಮ ಜವಾಬ್ದಾರಿ, ನಾನೇ ಕತೆ ಹೇಗಿರಬೇಕು ಎಂದು ಹೇಳುವುದಾದರೆ, ನಾನೇ ಸೀರಿಯಲ್ ಮಾಡುತ್ತಿದ್ದೆ ಎಂದು ನಕ್ಕಿದ್ದರು. ಅದರ ನಿರ್ಮಾಪಕರಿಗೆ ಕಾರ್ನಾಡರ ಕುರಿತು ಏನೇನೂ ಗೊತ್ತಿರಲಿಲ್ಲ. ದೊಡ್ಡ ಮೊತ್ತದ ಸಂಭಾವನೆ ಕೊಟ್ಟ ಕಾರಣಕ್ಕೆ ಮೊದಲ ದಿನವೇ ಅವರು ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರ ತನಕ ಮೂರು ನಾಲ್ಕು ಪುಟಗಳ ಐದೋ ಆರೋ ದೃಶ್ಯಗಳನ್ನು ಚಿತ್ರೀಕರಿಸಿ ಕಾರ್ನಾಡರನ್ನು ಸುಸ್ತುಮಾಡಿಬಿಟ್ಟಿದ್ದರು. ಆವತ್ತು ಶೂಟಿಂಗಿನಿಂದ ಮರಳಿದವರು ಮತ್ತೆ ಆ ಸೆಟ್ಟಿನ ಕಡೆ ತಲೆ ಹಾಕಲಿಲ್ಲ. ನಿರ್ಮಾಪಕರನ್ನು ಕರೆದು ತೆಗೆದುಕೊಂಡ ಮುಂಗಡಹಣವನ್ನು ವಾಪಸ್ಸು ಕೊಟ್ಟು ಸುಮ್ಮನಾದರು. ಮತ್ತೆಂದೂ ಸೀರಿಯಲ್ಲು ಜಗ್ತತ್ತಿಗೆ ಕಾಲಿಡುವುದಿಲ್ಲ ಎಂದು ಆವತ್ತೇ ಅವರು ನಿರ್ಧಾರ ಮಾಡಿರಬೇಕು.
ಕಾರ್ನಾಡರ ಗೆಳೆಯರು ಯಾರು, ಆಪ್ತರು ಯಾರು, ಅವರು ಏನು ಓದುತ್ತಾರೆ, ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಾರೆ ಎಂಬುದು ಇವತ್ತಿಗೂ ನಿಗೂಢ. ಹೊಸ ಗೆಳೆಯರನ್ನು ಅವರು ಸಂಪಾದಿಸಿದಂತಿಲ್ಲ. ಹಳೆ ಗೆಳೆಯರ ಜೊತ ಜಗಳ ಕಾದ ಸುದ್ದಿಯೂ ಇಲ್ಲ. ಅವರು ಫೇಸ್ ಬುಕ್ಕಿನಲ್ಲಾಗಲೀ, ಆರ್ಕುಟ್‍ನಲ್ಲಾಗಲೀ ಸಿಗುವುದಿಲ್ಲ.
ಅವರಾಗೇ ಫೋನ್ ಮಾಡಿ ಮಾತಾಡುತ್ತಿದ್ದವರು ವೈಎನ್‍ಕೆ. ನಾನು ಗಿರೀಶ್ ಎಂದು ಮಾತು ಶುರು ಮಾಡುತ್ತಿದ್ದ ಗಿರೀಶರ ಪ್ರತಿಭೆಯ ಕುರಿತು ವೈಯೆನ್ಕೆ ಬಾಯ್ತುಂಬ ಮಾತಾಡುತ್ತಿದ್ದರು. ಅವರು ಹೇಳಿದ ಗಿರೀಶರ ಗುಣಗಳಲ್ಲಿ ಗಮನಾರ್ಹವಾದದ್ದು ಕಾರ್ನಾಡರಿಗಿರುವ ಏಕಾಗ್ರತೆ. ತುಂಬ ತನ್ಮಯರಾಗಿ ಅವರು ಮಾಡಬೇಕಾದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಮತ್ತು ಅದರ ಕಡೆಗೇ ಫೋಕಸ್ ಆಗಿರುತ್ತಾರೆ. ಬೇರೆ ದಿಕ್ಕಿಗೆ ಅವರ ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿಯೇ ಅವರು ಅಷ್ಟೊಂದು ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಿದ್ದರು ವೈಯೆನ್ಕೆ.
ಒಮ್ಮೆ ಕಾರ್ನಾಡರ ಮನೆಗೆ ಹೋದಾಗ ಅವರ ಪುಟ್ಟ ಆಫೀಸು ಗಮನ ಸೆಳೆದಿತ್ತು. ಒಂದು ಫೋನು, ಫ್ಯಾಕ್ಸು, ಪ್ರಿಂಟರ್ ಮತ್ತು ಕಂಪ್ಯೂಟರ್ ಇಟ್ಟುಕೊಂಡು ಓದುತ್ತಿದ್ದ ಪುಸ್ತಕಗಳನ್ನು ಪಕ್ಕದಲ್ಲಿಟ್ಟುಕೊಂಡು ಗಿರೀಶ್ ಕೂತಿದ್ದರು. ನಾವು ಯಾವುದೋ ವಿಶೇಷಾಂಕಕ್ಕೆ ಕತೆ ಕೇಳಲು ಹೋಗಿದ್ದೆವು. ವೈಯೆನ್ಕೆ ಆ ಕುರಿತು ಮೊದಲೇ ಮಾತಾಡಿದ್ದರಿಂದ ನಮಗೆ ಒಳಗೆ ಪ್ರವೇಶ ಸಿಕ್ಕಿತ್ತು. ಬರೆದಿಟ್ಟ ಕತೆಯನ್ನು ಕೊಟ್ಟು ಅವರು ಹೋಗಿ ಬನ್ನಿ ಅಂದಿದ್ದರು.
ಕಾರ್ನಾಡರ ಐವತ್ತು ವರ್ಷಗಳ ಲೇಖನಗಳ ಸಂಕಲನ ಆಗೊಮ್ಮೆ ಈಗೊಮ್ಮೆ. ಅದನ್ನು ಎರಡನೆ ಸಲ ಓದಿದಾಗ ಅಚ್ಚರಿಯಾಯಿತು. ಸ್ಪಷ್ಟ ಚಿಂತನೆಯ, ಅನ್ನಿಸಿದ್ದನ್ನು ತುಂಬ ಸರಳವಾಗಿ ಸರಾಗವಾಗಿ ಮತ್ತು ಗೊಂದಲವೇ ಇಲ್ಲದಂತೆ ಹೇಳುವ ಕಾರ್ನಾಡರ ಪರಿಚಯವನ್ನು ಈ ಸಂಕಲನ ಮಾಡಿಕೊಡುತ್ತದೆ. ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಅವರು ನಾಗರಿಕ ಮತ್ತು ಸೈನಿಕ ಪರಿಕಲ್ಪನೆಯ ಕುರಿತು ಮಾತಾಡಿದ್ದಾರೆ. ಅಲ್ಲಿ ಅವರ ನಿಲುವು ಅತ್ಯಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರು ಎಂಥ ಮಾನವತಾವಾದಿ ಎನ್ನುವುದನ್ನೂ ಆ ಭಾಷಣ ಹೇಳುತ್ತದೆ. ಅಲ್ಲಿರುವ ನಾಲ್ಕು ಸಾಲುಗಳನ್ನು ನೋಡಿ-
ಸೈನಿಕನಂತೆ ವರ್ತಿಸುವುದರಿಂದ ನಾಗರಿಕನಿಗೆ ಸಿಗುವ ಅತಿದೊಡ್ಡ ಮಾನಸಿಕ ತೃಪ್ತಿಯೆಂದರೆ ಅವನು ಎಲ್ಲ ಸಾಮಾಜಿಕ, ನೈತಿಕ ಜವಾಬುದಾರಿಗಳಿಂದ ಪಾರಾಗುತ್ತಾನೆ. ಮನುಷ್ಯತ್ವದ ಅತ್ಯಂತ ಮಹತ್ವದ ಕುರುಹು ಎಂದರೆ ಆಯ್ಕೆ ಮಾಡುವ ಸ್ವಾತಂತ್ರ್ಯ. ನನ್ನ ನೈತಿಕ ಮೌಲ್ಯಗಳನ್ನು ನಾನು ನನ್ನ ಅಂತರಂಗದಿಂದ ಸೃಷ್ಟಿಸಬೇಕು.
ಸಂದರ್ಶನ, ಲೇಖನ, ಕತೆ, ನಾಟಕದ ಕುರಿತು ಅನಿಸಿಕೆ ಇವೆಲ್ಲ ತುಂಬಿರುವ `ಆಗೊಮ್ಮೆ ಈಗೊಮ್ಮೆ’ ಕಳೆದ ಎರಡು ವಾರಗಳಿಂದ ನನ್ನನ್ನು ಹಿಡಿದಿಟ್ಟಿದೆ. ಕಾರ್ನಾಡರನ್ನು ಬೇರೆಯೇ ಆಗಿ ನೋಡುವುದನ್ನು ಕಲಿಸಿದೆ. ಗೆಳೆಯರಾದ ಸುರೇಂದ್ರನಾಥ್ ಅಚ್ಚರಿಯಿಂದ ಹೇಳುತ್ತಿರುತ್ತಾರೆ- ನನಗೆ ಕಾರ್ನಾಡರೂ ಶ್ರೀನಿವಾಸ ವೈದ್ಯರೂ ಮಾತಾಡುವುದನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ. ನೀನು ಅವನು ಅಂತ ಏಕವಚನದಲ್ಲಿ ಧಾರವಾಡ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿರುತ್ತಾರೆ. ಅಂಥ ಹಿರಿಯರಿಬ್ಬರು ಹಾಗೆ ಮಾತಾಡುವುದನ್ನು ನೋಡುವುದೇ ಒಂದು ಚಂದ.
ಕಾರ್ನಾಡರೂ ಹಿರಿಯರಾ? ಹುಡುಕಿದರೆ ಗೊತ್ತಾದದ್ದು ಕಾರ್ನಾಡರಿಗೆ ಎಪ್ಪತ್ತೆರಡು.

Sunday, November 21, 2010

ಬೇಡ

ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು. ದೇವಸ್ಥಾನದ ಮುಂದೆ ಸಿಗರೇಟು ಸೇದಬಾರದು. ಒಳಾಂಗಣದಲ್ಲಿ ಕಾಲು ಇಳಿಬಿಟ್ಟು ಕೂರಬಾರದು. ಅಂಗಿ ಬನೀನು ಹಾಕಿಕೊಂಡು ಗರ್ಭಗುಡಿಯನ್ನು ಪ್ರವೇಶಿಸಬಾರದು. ಸತ್ಯನಾರಾಯಣ ಪೂಜೆ ಪ್ರಸಾದ ನಿರಾಕರಿಸಬಾರದು. ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಕುರಿಕೋಳಿ ತಿನ್ನಬಾರದು. ರಾಘವೇಂದ್ರಸ್ವಾಮಿ ಭಕ್ತರು ಗುರುವಾರ ಊಟ ಮಾಡಬಾರದು. ಚೌಡೇಶ್ವರಿ ಆರಾಧಕರು ಶನಿವಾರ ಕುಡೀಬಾರದು. ಮನೆಬಿಟ್ಟು ಹೋಗುವಾಗ ಎಲ್ಲಿಗೆ ಅಂತ ಕೇಳಬಾರದು. ಹೆಣ್ಮಕ್ಕಳು ಬೋಳುಹಣೆಯಲ್ಲಿ ಇರಬಾರದು. ರಾತ್ರಿ ತಲೆ ಬಾಚಬಾರದು. ಬಟ್ಟೆ ಹೊಲಿಯಬಾರದು....

ನೂರೆಂಟು ರಾಮಾಯಣ. ಎಲ್ಲಿಗೆ ಹೋದರೂ ಇಂಥದ್ದೆ ನಿಯಮ, ನೀತಿ. ಒಂದಲ್ಲ ಎರಡಲ್ಲ. ಕೆಲವು ಕಾನೂನು ಕೊಟ್ಟದ್ದು, ಕೆಲವು ಪರಂಪರೆ ಬಿಟ್ಟದ್ದು, ಕೆಲವು ಅಂಧಶ್ರದ್ಧೆ ಇಟ್ಟದ್ದು.

ಆಕಾಶವಾಣಿ ಕೇಳುತ್ತಿದ್ದರೆ ಮತ್ತೊಂದಷ್ಟು ಸಲಹೆ. ಹಿಂದೆ ನೋಡಿ ಮುಂದೆ ನೋಡಿ, ಮೇಲಕ್ಕೂ ಕೆಳಕ್ಕೂ ನೋಡಿ, ಅಪರಿಚಿತರಿಗೆ ಮನೆ ಕೊಡಬೇಡಿ, ನೀರು ಪೋಲು ಮಾಡಬೇಡಿ, ಎರಡೇ ಮಕ್ಕಳು ಮಾಡಿ, ಕುಡಿದು ವಾಹನ ಓಡಿಸಬೇಡಿ, ದೊಡ್ಡ ದನಿಯಲ್ಲಿ ಮಾತಾಡಬೇಡಿ, ಸಜ್ಜನಿಕೆಯಿಂದ ವರ್ತಿಸಿ, ನಮ್ಮ ದೇಶದ ಮಾನ ಉಳಿಸಿ, ಕರೆಂಟು ಉಳಿಸಿ, ಕಾಡು ಉಳಿಸಿ, ಪ್ರಾಣಿಗಳನ್ನು ಹಿಂಸಿಸಬೇಡಿ.

ಇಷ್ಟೇ ಅಲ್ಲ. ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ, ತನ್ನ ಬಣ್ಣಿಸಬೇಡ ಎಂಬುದರಿಂದ ಹಿಡಿದು ಹುಲ್ಲಿನ ಮೇಲೆ ನಡೆಯಬೇಡಿ, ಕಂಡಕಂಡಲ್ಲಿ ಉಗುಳಬೇಡಿ, ಹೆಂಡತಿಯನ್ನು ಹೊಡೆಯಬೇಡಿ, ಹೆತ್ತವರನ್ನು ಕಡೆಗಣಿಸಬೇಡಿ, ಪರಭಾಷಾ ಸಿನಿಮಾ ನೋಡಬೇಡಿ, ಇಂಗ್ಲಿಷ್ ಕಲಿಯಬೇಡಿ, ಕನ್ನಡ ಮರೆಯಬೇಡಿ, ಆಫೀಸಿಗೆ ರಜೆ ಹಾಕಬೇಡಿ, ದುಡಿಯಲು ಸೋಮಾರಿತನ ಮಾಡಬೇಡಿ, ಹಾದರ ಮಾಡದಿರಿ, ಜವಾಬ್ದಾರಿಯಿಂದ ತಪ್ಪಿಸಿಕೊಂಡು ಓಡದಿರಿ, ಮಹಿಳೆಯರನ್ನು ಕಾಡದಿರಿ, ಕೋತಿಗಳಿಗೆ ತಿಂಡಿತಿನಿಸು ನೀಡದಿರಿ...

ಎಷ್ಟೆಲ್ಲ ಬೇಡಗಳ ಮಧ್ಯೆ ಬದುಕುತ್ತಿದ್ದೇವೆ ಎನ್ನಿಸುತ್ತಿದೆ ಅಲ್ಲವೇ? ಪ್ರಶ್ನೆ ಅದಲ್ಲ. ನಮಗೆ ಇಷ್ಟೊಂದು ಕಟ್ಟುಪಾಡುಗಳು ಬೇಕಾ? ಇದನ್ನೆಲ್ಲ ನಿರ್ಧಾರ ಮಾಡುವವರು ಯಾರು? ಕಾನೂನೇ, ವ್ಯವಸ್ಥೆಯೇ, ಧರ್ಮವೇ, ಜಾತಿಯೇ, ಆಚಾರವೇ, ಮಾನವೀಯತೆಯೇ? ನಾವು ನಿಜಕ್ಕೂ ಅಷ್ಟೊಂದು ಮೂರ್ಖರೇ?

ಸುತ್ತ ನೋಡುತ್ತಿದ್ದರೆ ಗಾಬರಿಯಾಗುತ್ತದೆ. ಬಹುಶಃ ನಾವು ಅತ್ಯಂತ ನಾಗರಿಕರಂತೆ ನಟಿಸುತ್ತಿದ್ದೇವೋ ಏನೋ? ಸಹಾನುಭೂತಿ, ಅನುಕಂಪ, ಕರುಣೆಯ ಮಾತು ಹಾಗಿರಲಿ. ರಸ್ತೆಯಲ್ಲಿ ಎಲ್ಲರಿಗೂ ತೊಂದರೆ ಆಗುವಂತೆ ವಾಹನ ನಿಲ್ಲಿಸಬಾರದು ಎನ್ನುವ ಕನಿಷ್ಟ ತಿಳುವಳಿಕೆಯನ್ನು ನೀಡುವುದಕ್ಕೂ ಕಾನೂನೇ ಬೇಕಾ? ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ಕೊಟ್ಟದ್ದೇನು? ಸಂಸ್ಕಾರ ಅನ್ನುವ ಮಾತಿಗೆ ಅರ್ಥವೇನು? ಮೊದಲ ಗುರು ತಾಯಿ, ನಂತರದ ಗುರು ತಂದೆ, ಆಮೇಲಿನ ಗುರು ಆಚಾರ್ಯ, ಇದರೊಟ್ಟಿಗೇ ರಕ್ತಗತವಾಗಿ ಬಂದಿದೆ ಎಂದು ನಂಬಲಾಗುತ್ತಿರುವ ಉತ್ತಮ ಸಂಸ್ಕಾರ- ಇವೆಲ್ಲವನ್ನೂ ಮೀರಿದ್ದು ಮೂಲಪ್ರವೃತ್ತಿಯಲ್ಲವೇ?

ಹಾಗಿದ್ದರೆ ಮೂಲಪ್ರವೃತ್ತಿ ಏನು? ಆಹಾರ, ನಿದ್ರೆ, ಮೈಥುನ. ಅಷ್ಟೇ ಸಾಕೆಂದಿದ್ದವರಿಗೆ ಹೊಸದಾಗಿ ಶುರುವಾಗಿದೆ ಬೇಸರ. ಮತ್ತೆಲ್ಲಿಗೋ ಹೋಗುವ, ಮತ್ತೇನನ್ನೋ ಮುಟ್ಟುವ ಆಸೆ. ಅನನ್ಯವಾಗುವ, ವಿಭಿನ್ನವಾಗುವ, ಬೇರೆಯೇ ಆಗುವ ಹೆಬ್ಬಯಕೆ. ಹೀಗೆ ಬೇರೆಯೇ ಆಗುವ ಆಸೆಗೆ ನೂರೆಂಟು ಹುನ್ನಾರ.

ಎಲ್ಲರೂ ಸಮಾನರು ಎಂದು ನಾವೆಷ್ಟೇ ಹೇಳಿಕೊಂಡರೂ ಅಸಾಮಾನ್ಯನಾಗುವ ಆಸೆ ಬಿಡುವುದಿಲ್ಲ. ಕುರಿಮಂದೆಯಲ್ಲಿ ನೂರು ಕುರಿಯಿರುತ್ತದೆ ಅಂತಿಟ್ಟುಕೊಳ್ಳಿ. ಪ್ರತಿಯೊಂದು ಕುರಿಗೂ ತಾನು ಕುರಿಯೆಂಬುದು ಗೊತ್ತು. ಅದು ಕುರಿಯಂತೆಯೇ ವರ್ತಿಸುತ್ತದೆ. ಕುರಿಯ ಹಾಗೇ ತಲೆತಗ್ಗಿಸಿ ನಡೆಯುತ್ತದೆ. ತುಪ್ಪಳ ಬೆಳೆಸಿ ಅದನ್ನು ಸವರಿ ಮಾರಿದರೂ ಅದಕ್ಕೆ ಆ ಕುರಿತು ಹೆಮ್ಮೆಯೂ ಇಲ್ಲ, ಬೇಸರವೂ ಇಲ್ಲ. ನಾವೂ ಅಷ್ಟೇ, ಹೆಚ್ಚು ತುಪ್ಪಳವನ್ನು ಕೊಡುವ ಕುರಿಯನ್ನು ಹೆಚ್ಚು ಗೌರವದಿಂದ ಕಾಣುತ್ತೇವಾ? ಅದೂ ಇಲ್ಲ. ಅದು ಕೂಡ ಒಂದು ಕುರಿ ಅಷ್ಟೇ.

ನಾವು ಹಾಗಲ್ಲ. ಎಲ್ಲರಿಗೂ ಮಾತು ಬರುತ್ತದೆ. ಕೆಲವರು ಚೆನ್ನಾಗಿ ಮಾತಾಡುತ್ತಾರೆ. ಎಲ್ಲರೂ ಬರೆಯುತ್ತಾರೆ, ಕೆಲವರು ಚೆನ್ನಾಗಿ ಬರೆಯುತ್ತಾರೆ. ಎಲ್ಲರೂ ಮನುಷ್ಯರೇ, ಆದರೆ ಕೆಲವರು ಸುಂದರವಾಗಿರುತ್ತಾರೆ. ಹೀಗೆ ನಮ್ಮನ್ನು ಒಡೆಯುವುದಕ್ಕೆ ಪ್ರತಿಭೆ, ಸಂಪತ್ತು, ಸೌಂದರ್ಯ, ಜಾತಿ, ಅಧಿಕಾರ ಎಂಬ ಐದು ಕೊಡಲಿಗಳು ಕಾದು ಕೂತಿವೆ. ಇವುಗಳಲ್ಲಿ ಯಾವ ಕೊಡಲಿಯನ್ನು ಕೈಗೆತ್ತಿಕೊಂಡರೂ ಸಾಕು, ಅವು ಮಾನವ ಸರಪಳಿಯನ್ನು ತುಂಡರಿಸುತ್ತವೆ. ಕ್ರಮೇಣ ಈ ಐದರ ಪೈಕಿ ಒಂದು ಗುಣ ಗುಲಗಂಜಿ ತೂಕ ಹೆಚ್ಚಿದ್ದರೂ ಕೂಡ, ಅಂಥವನು ಎತ್ತರದಲ್ಲಿ ನಿಲ್ಲುತ್ತಾನೆ. ತನ್ನವರು ತುಂಬ ಕೆಳಗಿದ್ದಾರೆ ಎಂದು ಭಾವಿಸುತ್ತಾನೆ.

ಈ ವೈಚಿತ್ರ್ಯವನ್ನು ಗಮನಿಸಿದ್ದು ಕಾಮರಾಜ ಮಾರ್ಗ’ ಕಾದಂಬರಿಯ ಪುಟಗಳನ್ನು ತಿರುವಿಹಾಕುತ್ತಾ ಹೋದಾಗ. ತುಂಬ ನಿರ್ಬಿಢೆಯಿಂದ ಸಾಗುವ ಕಾದಂಬರಿಗೆ ವಿಷಾದದ ತೆಳುವಾದ ಲೇಪವೂ ಇದ್ದಂತಿದೆ. ಅಲ್ಲಿ ತನ್ನ ಚೆಲುವನ್ನು ಬಳಸುವ ಸುಂದರಿಯರಿದ್ದಾರೆ. ಹಾಗೇ, ತನ್ನ ದೇಹವನ್ನು ಬೇರೊಬ್ಬರು ಬಳಸಿಕೊಂಡಾಗ ನರಳುವವರೂ ಎದುರಾಗುತ್ತಾರೆ. ಅಧಿಕಾರಕ್ಕೆ ಸಮೀಪ ಇರುವ ಸಲುವಾಗಿ ಸೌಂದರ್ಯ, ಜಾತಿ, ಪ್ರತಿಭೆ ಮತ್ತು ಸಂಪತ್ತನ್ನು ಒತ್ತೆಯಿಟ್ಟವರೂ ಕಾಣಸಿಗುತ್ತಾರೆ. ಅವರೆಲ್ಲರೂ ಅಂತಿಮವಾಗಿ ಸಾಧಿಸಹೊರಟಿದ್ದಾದರೂ ಏನನ್ನು ಎಂಬ ಪ್ರಶ್ನೆಯನ್ನು ಕಾಮರಾಜಮಾರ್ಗ’ ಮತ್ತೆ ಮತ್ತೆ ಕೇಳಿಕೊಳ್ಳುತ್ತದೆ.

ಏರುವ ಆಸೆ, ಜಾರುವ ಭಯ, ಆಳ ತಿಳಿಯದೆ ಧುಮುಕುವ ಹುಂಬತನ ಮತ್ತು ಸಾಹಸೀ ಪ್ರವೃತ್ತಿ, ಗೆಲ್ಲುವುದು ತನಗಷ್ಟೇ ಗೊತ್ತಿದೆ ಎಂಬ ಹಮ್ಮು, ನೀನು ಗೆದ್ದದ್ದೂ ಸುಳ್ಳು ಎಂಬಂತೆ ನಗುವ ಕನ್ನಡಿ. ಬದುಕಿಗೆ ಸೀಮೆಯಿಲ್ಲ, ಅದು ನಿಸ್ಸೀಮವೂ ಅಲ್ಲ. ಹೊಸಿಲಾಚೆಗೆ ಏನಿದೆ ಈಚೆಗೇನಿದೆ ಅನ್ನುವುದು ಹೊಸಿಲು ದಾಟುವ ಧಾವಂತದಲ್ಲಿ ನಮಗೆ ಗೊತ್ತಾಗುವುದೇ ಇಲ್ಲ. ಎಷ್ಟೋ ವರ್ಷಗಳ ನಂತರ ತಿರುಗಿ ನೋಡಿದರೆ ನಾವು ದಾಟಿದ್ದೇ ತಪ್ಪೇನೋ ಅನ್ನಿಸಿ ಬೇಸರವಾಗುತ್ತದೆ. ಆ ಕ್ಷಣದ ಜಿಗಿದು ದಾಟುವ ಹುರುಪು, ದಾಟಿದ ಹೆಮ್ಮೆ ಇವೆರಡನ್ನೂ ನೆನಪಿಸಿಕೊಳ್ಳುತ್ತಾ ಕಾಲ ಕಳೆಯುವುದಷ್ಟೇ ಉಳಿದಿರುತ್ತದೆ.

*********

ದೇವನೂರು ಮಹಾದೇವ ಕೂಡ `ಬೇಡ’ ಅಂದರು. ಕನ್ನಡದಲ್ಲಿ ಶಿಕ್ಷಣ ಕೊಡುವ ತನಕ ನೃಪತುಂಗ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಪತ್ರ ಬರೆದರು. ಅವರು ಹೇಳಿದ್ದು ಇಷ್ಟೇ:

ಅದೇನೂ ಸರ್ಕಾರಕ್ಕೆ ಆಗದ ಕೆಲಸವೇನೂ ಆಗಿರಲಿಲ್ಲ. ಪರಿಷತ್ತು ಕೂಡ ಸಾಹಿತ್ಯ ಸಮ್ಮೇಳನ ಮಾಡುವುದಿಲ್ಲ ಎಂದು ಸುಮ್ಮನಿರಬಹುದಾಗಿತ್ತು. ಆದರೆ ಪರಿಷತ್ತು ಕೂಡ ಸರ್ಕಾರವನ್ನು ಅರ್ಥ ಮಾಡಿಕೊಂಡಿದೆ. ಸಮ್ಮೇಳನ ನಡೆಸುವುದಿಲ್ಲ ಎಂದರೆ ಸರ್ಕಾರ ಬೇಡ ಬಿಡಿ’ ಎನ್ನಬಹುದು. ಒಂದು ವರ್ಷ ನಡೆಯದೇ ಹೋದರೆ ಮತ್ತೆಂದೂ ನಡೆಯದೇ ಇರಬಹುದು. ಅಲ್ಲಿಗೆ ಅನೇಕರು ನಿರುದ್ಯೋಗಿಗಳಾಗುತ್ತಾರೆ. ಕೋಟ್ಯಂತರ ರುಪಾಯಿಯ ವಹಿವಾಟು ನಿಂತುಹೋಗುತ್ತದೆ.

ಅದೆಲ್ಲವನ್ನು ಬದಿಗಿಟ್ಟು ನೋಡಿದರೂ ಬೇಸರ. ದೇವನೂರು ಮಹಾದೇವ ಅವರ ಹೇಳಿಕೆಗ ಸಾಹಿತ್ಯ ಜಗತ್ತಿನಲ್ಲಿ ದೊಡ್ಡ ಮಾನ್ಯತೆ ಸಿಗುತ್ತದೆ. ಸಾಹಿತಿಗಳೆಲ್ಲ ಒಗ್ಗೂಡುತ್ತಾರೆ. ಮಹಾದೇವ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡು ಸರ್ಕಾರದ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿದರೆ, ಬೇಸರ ಕಾದಿದೆ. ಅಂಥದ್ದೇನೂ ಆಗಿಲ್ಲ. ಬೇಡವಾದರೆ ತಗೋಬೇಡಿ ಎಂದು ಪರಿಷತ್ತು ಪ್ರಶಸ್ತಿಯನ್ನು ಸಿಪಿಕೆಯವರಿಗೆ ಕೊಟ್ಟು ಸುಮ್ಮನಾಗಿದೆ. ದೇವನೂರರ ಜೊತೆಗಿದ್ದ ಕ್ರಾಂತಿಕಾರಿಗಳೂ, ಬಂಡಾಯಗಾರರೂ, ಸೈಜುಗಲ್ಲು ಹೊತ್ತೋರೂ ಸುಮ್ಮನಿದ್ದಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಬಿಡಿ, ಒಂದು ಹೇಳಿಕೆಯೂ ಹೊರಬರಲಿಲ್ಲ. ಸರ್ಕಾರದ ಹಂಗಿನಲ್ಲಿ ಹೇಗೆ ಮಾತು ಉಡುಗಿ ಹೋಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ.

ದೇವನೂರರು ಕೂಡ ಎಲ್ಲರಂತೆ ಪ್ರಶಸ್ತಿ ಸ್ವೀಕರಿಸಿ ವಿನಯವಂತಿಕೆ ಪ್ರದರ್ಶಿಸಬಹುದಾಗಿತ್ತು. ಭಾಷೆಯ ಪ್ರಸ್ತಾಪ ಮಾಡುವ ಅಗತ್ಯ ಅವರಿಗೇನೂ ಇರಲಿಲ್ಲ. ಅವರು ಮಹಾ ಶ್ರೀಮಂತರೇನೂ ಅಲ್ಲ. ಅವರ ಹೇಳಿಕೆ, ನಿಲುವು ಮತ್ತು ದಿಟ್ಟತನ ಒಂದು ಹೋರಾಟವನ್ನೇ ಹುಟ್ಟುಹಾಕಬಹುದಾಗಿತ್ತು.

ಮಾತು ಸೋತ ಭಾರತ ಎಂಬ ಅನಂತಮೂರ್ತಿಯವರ ರೂಪಕ ನಿಜವಾಗುತ್ತಿದೆ.

Tuesday, September 28, 2010

ಬಸ್ಸು ಕೆಟ್ಟು ನಿಂತ ಹನ್ನೆರಡು ಗಂಟೆ

ಹಬ್ಬಿದಾ ಮಲೆ. ಎಲ್ಲೆಲ್ಲೂ ಹಸಿರು. ಹಸಿರು ಬಯಲಲ್ಲಿ ಉಸಿರುಬಿಗಿಹಿಡಿದು ಓಡುತ್ತಿರುವ ಪುಟ್ಟ ಹುಡುಗ. ಅವನ ಹಿಂದೆ ಏದುಸಿರು ಬಿಟ್ಟುಕೊಂಡು ಓಟ ಕಿತ್ತಿರುವ ತಾಯಿ.
ಸಂಜೆಯಾಗುತ್ತಿತ್ತು. ನಾವು ಹೋಗುತ್ತಿದ್ದ ಬಸ್ಸು ಕೆಟ್ಟುನಿಂತು ಮೂರೋ ನಾಲ್ಕೋ ಗಂಟೆಯಾಗಿತ್ತು. ಆ ರಸ್ತೆಯಲ್ಲಿ ಬೇರೆ ಯಾವ ಬಸ್ಸೂ ಬರುವುದಿಲ್ಲ ಎಂದು ಕಂಡಕ್ಟರ್ ಆತಂಕದಲ್ಲಿದ್ದ. ಬಸ್ಸಿನಲ್ಲಿದ್ದ ಮೂವತ್ತೋ ಮೂವತ್ತೈದೋ ಪ್ರಯಾಣಿಕರ ಪೈಕಿ ಅನೇಕರು ಕಂಗಾಲಾಗಿದ್ದರು. ಥರಹೇವಾರಿ ಮಂದಿ. ದೂರಪ್ರಯಾಣಕ್ಕೆ ಹೊರಟವರು. ಸಿಗರೇಟು ಸೇದಲು ಹಂಬಲಿಸುವವರು. ಸಂಜೆ ತಿಂಡಿ ತಿಂದು ಔಷಧಿ ತೆಗೆದುಕೊಳ್ಳಬೇಕಾದವರು. ಯಾರನ್ನೋ ಸೇರಲು ಹೊರಟವರು. ಯಾರನ್ನೋ ಕರೆದುಕೊಂಡು ಹೊರಟವರು. ಮಾರನೆಯ ದಿನ ಪರೀಕ್ಷೆ ಬರೆಯಬೇಕಾದವರು. ವಿನಾಕಾರಣ ಬೇಗನೇ ಊರು ಸೇರಲೆಂದು ಹಂಬಲಿಸುವವರು. ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ವ್ಯಾಪಾರ. ಒಂದೊಂದು ನಿರೀಕ್ಷೆ.
ಬಸ್ಸು ಕೆಟ್ಟು ನಿಂತ ತಕ್ಷಣ ಆ ತಾಯಿಮಗು ಹಸಿರಿಗೆ ಹೊರಟು ಬಿಟ್ಟಿದ್ದರು. ಅವರಿಗೆ ಎಲ್ಲಿಗೂ ಹೋಗುವ ನಿರೀಕ್ಷೆ ಇದ್ದಂತಿರಲಿಲ್ಲ. ಬಸ್ಸು ಕೆಟ್ಟಿತೆಂಬ ಬೇಸರವೂ ಇದ್ದಂತೆ ಕಾಣಲಿಲ್ಲ. ಬಸ್ಸು ಬೇಗ ಹೊರಡಲಿ ಎಂಬ ಆತುರವೂ ಅವರಲ್ಲಿ ಕಾಣಿಸುತ್ತಿರಲಿಲ್ಲ. ಬಸ್ಸು ನಿಂತ ತಕ್ಷಣ, ಅದು ತಮಗೋಸ್ಕರವೇ ಕೆಟ್ಟು ನಿಂತಿದೆ ಎಂಬಂತೆ, ಹಾಗೆ ಕೆಟ್ಟು ನಿಂತದ್ದೇ ವರವೆಂಬಂತೆ ಬಯಲಿಗೆ ಹೋಗು ಆಡುತ್ತಾ ಕೂತಿದ್ದರು. ಅವರದೇ ಲೋಕ ಅದು ಎಂಬಂತೆ.
ಯಾರೋ ಸಿಗರೇಟು ಸೇದಿದರು. ಯಾರೋ ಕೆಮ್ಮಿದರು, ಮತ್ಯಾರೋ ಸರ್ಕಾರವನ್ನು ಬೈದರು. ಸಾರಿಗೆ ಸಚಿವರ ಹೆಸರು ಗೊತ್ತಿದ್ದವರು ಅವರ ಜನ್ಮ ಜಾಲಾಡಿದರು. ಮತ್ಯಾರೋ ಡ್ರೈವರ್ ಜೊತೆ ವಾದಕ್ಕಿಳಿದಿದ್ದರು. ಅವನು ಬೇಸತ್ತು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಿದ್ದ. ಅವನ ಕೈಲೂ ಮೊಬೈಲು. ಅವನಂತೆ ಹಲವರು ಸಿಗದ ನೆಟ್‌ವರ್ಕ್‌ನ ನಿರೀಕ್ಷೆಯಲ್ಲಿ ಅತ್ತಿತ್ತ ಅಲೆದಾಡುತ್ತಾ ಫೋನ್ ಆನ್ ಮಾಡುತ್ತಾ ಆಫ್ ಮಾಡುತ್ತಾ ಮತ್ತೊಬ್ಬರ ನೆಟ್‌ವರ್ಕ್ ಹೇಗಿದೆ ಎಂದು ಪರೀಕ್ಷಿಸುತ್ತಾ ಚಡಪಡಿಸುತ್ತಿದ್ದರು.
ಹುಡುಗನ ಕೈಗೆ ಚೆಂಡು ಬಂದಿತ್ತು. ಹಳದಿ ಚೆಂಡು ಹಸಿರು ಬಯಲಲ್ಲಿ ಓಡುತ್ತಾ ಓಡುತ್ತಾ ಹೋಯ್ತು. ಹುಡುಗ ಅದನ್ನು ಹಿಂಬಾಲಿಸಿದ. ಅಮ್ಮನ ಕಣ್ಣಲ್ಲಿ ಪುಟ್ಟ ಕಂದ ಓಡುತ್ತಿರುವ ಖುಷಿ ತುಳುಕುತ್ತಿತ್ತು. ಜೊತೆಗೊಂದು ಹನಿ ಆತಂಕ. ಹುಲ್ಲಿನ ಮೇಲೆ ಹುಡುಗ ತೊಪ್ಪನೆ ಬಿದ್ದ. ತಿರುಗಿ ನೋಡಿದರೆ ಅಮ್ಮನ ಮುಖದಲ್ಲಿ ನೋವು. ಹುಡುಗ ಕಿಲಕಿಲ ನಕ್ಕ. ಎದ್ದು ನಿಂತು ಮತ್ತೊಮ್ಮೆ ಬಿದ್ದ. ಏಳುವುದು ಬೀಳುವುದೇ ಆಟವಾಯಿತು. ಚೆಂಡು ಕಣ್ಮರೆಯಾಗಿತ್ತು.
ದೂರದಲ್ಲೆಲ್ಲೋ ನವಿಲು ಕೇಕೆ ಹಾಕಿತು. ಹುಡುಗ ಬೆಚ್ಚಿಬಿದ್ದು ನೋಡಿದ. ತಾಯಿಯೂ ಕಿವಿಯಾನಿಸಿ ಕೇಳಿದಳು. ಕೂಗಿದ್ದು ನವಿಲು ಹೌದೋ ಅಲ್ಲವೋ ಎಂಬ ಅನುಮಾನ. ಅದು ನವಿಲು ಮಗೂ ಅಂತ ತಾಯಿ ಹೇಳಿದ್ದು ಅಸ್ಪಷ್ಟವಾಗಿ ಗಾಳಿಯಲ್ಲಿ ಬಂದು ತೇಲಿತು. ಅವಳಿಗೆ ಯಾವುದೋ ಹಳೆಯ ನೆನಪು. ನವಿಲಿನ ಕೂಗಿಗೆ ಅವಳ ಕಂಗಳು ಹೊಳಪಾದವು. ಅದೇ ಮೊದಲ ಬಾರಿಗೆ ನವಿಲಿನ ಕೇಕೆ ಕೇಳಿದ ಮಗು ಬೆಚ್ಚಿ ಅಮ್ಮನನ್ನು ತಬ್ಬಿಕೊಂಡಿತು. ತಾಯಿ ಮಗುವನ್ನು ಅವಚಿಕೊಂಡಳು.
ನಾವು ಕೂಡ ಸುತ್ತ ಹಬ್ಬಿದ ಬೆಟ್ಟವನ್ನು ಅದು ಸಂಜೆ ಬಿಸಿಲಲ್ಲಿ ಮಿರುಗುವುದನ್ನು ನೋಡುತ್ತಾ ಕೂತೆವು. ಅಂಥ ಸಂಜೆಯನ್ನು ಕಣ್ತುಂಬಿಕೊಂಡು ಎಷ್ಟೋ ದಿನವಾಗಿತ್ತು. ಅದರ ಪರಿವೆಯೇ ಇಲ್ಲವೆಂಬಂತೆ ಯಾರೋ ಕಿರುಚಿಕೊಳ್ಳುತ್ತಿದ್ದರು. ಬಸ್ಸು ಕೆಟ್ಟು ನಿಂತದ್ದು ಕೂಡ ಒಂದು ಸೌಭಾಗ್ಯ ಎಂದು ಭಾವಿಸಬೇಕು ಎಂದು ನಾವು ಮಾತಾಡಿಕೊಂಡೆವು.
ಹಾಗೆ ಎಲ್ಲರೂ ಅಂದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ನಮಗೂ ಗೊತ್ತಾಗಿತ್ತು. ಯಾರೋ ನೀರು ಬೇಕು ಎಂದು ಕಿರುಚುತ್ತಿದ್ದರು. ಮತ್ಯಾರೋ ಒಂದು ಬಾಟಲಿ ನೀರು ತಂದುಕೊಟ್ಟರು. ಮತ್ಯಾರಿಗೋ ಮಾರನೇ ದಿನ ಯಾವುದೋ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಕೆಟ್ಟು ನಿಂತ ಬಸ್ಸು ಅವರ ಅದೃಷ್ಟವನ್ನೇ ಬದಲಾಯಿಸಬಹುದಿತ್ತು. ಸಿಗಬಹುದಾಗಿದ್ದ ಕೆಲಸ ಸಿಗದೇ ಹೋಗಿ ಮತ್ತೊಂದು ಬಾಗಿಲು ಮತ್ತೆಲ್ಲೋ ತೆರೆದುಕೊಳ್ಳಬಹುದೇನೋ ಎಂಬ ನಿರೀಕ್ಷೆ ಕೂಡ ಇಲ್ಲದವರಂತೆ ಅವರು ಚಡಪಡಿಸುತ್ತಿದ್ದರು. ಮತ್ತೊಂದು ಬಾಗಿಲಿನ ನಿರೀಕ್ಷೆಯೇ ಇಲ್ಲದೆ ಬದುಕುವುದು ಕಷ್ಟವೇ.
ದೂರದಲ್ಲೆಲ್ಲೋ ಬಸ್ಸು ಬಂದ ಸದ್ದು. ಎಲ್ಲರ ಕಿವಿಯೂ ಚುರುಕಾಯಿತು. ಆ ಬಸ್ಸಿನಲ್ಲಿ ಹತ್ತಿ ಹೋಗೋಣ ಎಂದುಕೊಂಡು ಅನೇಕರು ಲಗೇಜು ಕೆಳಗಿಳಿಸಿ ಕಾದರು. ಬಸ್ಸು ಕೆಟ್ಟು ನಿಲ್ಲುವುದು, ಜನ ಕಾಯುವುದು ಹೊಸತೇನಲ್ಲ ಎಂಬಂತೆ ಆ ಬಸ್ಸು ಯಾರ ಮೇಲೂ ಕರುಣೆ ತೋರದೇ ಹೊರಟು ಹೋಯಿತು. ಮುಂದಿನ ಊರಿಗೆ ಹೋಗಿ ಫೋನ್ ಮಾಡಿ ಬೇರೆ ಬಸ್ಸು ತರಿಸುತ್ತೇನೆ ಎಂದು ಡ್ರೈವರ್ ಕೂಡ ಆ ಬಸ್ಸು ಹತ್ತಿ ಹೊರಟೇ ಬಿಟ್ಟ.
ಒಂಟಿಯಾಗಿ ಉಳಿದ ಕಂಡಕ್ಚರಿಗೆ ಸಹಸ್ರನಾಮಾರ್ಚನೆಯಾಯಿತು. ಆ ಬಸ್ಸಿನಲ್ಲಿ ಬಂದದ್ದೇ ತಪ್ಪು ಎಂದು ಅನೇಕರು ಅವನ ಮೇಲೆ ಹರಿಹಾಯ್ದರು. ಮತ್ಯಾರೋ ಪ್ರಾಣ ಹೋಗುತ್ತೆ ಎಂದು ಹಸಿವಿನಿಂದ ಚಡಪಡಿಸುತ್ತಾ ತಿನ್ನುವುದಕ್ಕೆ ಏನಾದರೂ ಕೊಡಿ ಎಂದು ಸಿಕ್ಕಸಿಕ್ಕವರನ್ನು ಕೇಳತೊಡಗಿದರು. ಅವರಿಗೆ ಡಯಾಬಿಟೀಸು ಎಂದು ಯಾರೋ ಹೇಳಿ ಅವರ ಕರುಣಾಜನಕ ಸ್ಥಿತಿಯನ್ನು ಮತ್ತಷ್ಟು ಕರುಣಾಮಯಿಯಾಗಿಸಿದರು.
ಎಷ್ಟು ಹೊತ್ತಾದರೂ ಬಸ್ಸು ಬರಲಿಲ್ಲ. ಅದು ಬಂದರೆ ಬಂತು ಬರದಿದ್ದರೆ ಇಲ್ಲ ಎಂಬಂತೆ ಆ ತಾಯಿ ಮಗು ಆಟವಾಡುತ್ತಲೇ ಇದ್ದರು. ಅವರನ್ನು ಬೆಳಗುತ್ತಿದ್ದ ಸಂಜೆ ಬಿಸಿಲು ಕ್ರಮೇಣ ಹೊಳಪು ಕಳಕೊಳ್ಳುತ್ತಿತ್ತು. ತಣ್ಣನೆ ಗಾಳಿ ಬೀಸತೊಡಗಿ ಎಲ್ಲರಿಗೂ ಹಿತವೆನ್ನಿಸಿತು. ಮೈಮನಗಳು ತಣ್ಣಗಾಗುತ್ತಿದ್ದಂತೆ ಹಲವರು ನಿಂತಲ್ಲೇ ಅಡ್ಡಾದರು. ಕೆಲವರು ರಸ್ತೆ ಬದಿಯಲ್ಲೇ ನಿದ್ದೆ ಹೋದರು.
ನಾವು ನೋಡುತ್ತಿದ್ದ ಹಾಗೆ ತಾಯಿ ಮಗು ಕತ್ತಲಲ್ಲಿ ಕರಗಿಹೋಗಿ ಅವರ ಮಾತಷ್ಟೇ ಕೇಳಿಸುತ್ತಿತ್ತು. ತಾಯಿ ಮಗನಿಗೇನೋ ಗುಟ್ಟುಹೇಳುವಂತೆ ಮಾತಾಡುತ್ತಿದ್ದಳು. ಮಗ ಇಡೀ ಜಗತ್ತಿಗೇ ಕೇಳುವಂತೆ ಕಿರುಚಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿಗೆಲ್ಲ ಮತ್ತಷ್ಟು ಕತ್ತಲು ಹಬ್ಬಿ ನಾವು ಕೂತ ಜಾಗದಿಂದ ಏನೇನೂ ಕಾಣಿಸುತ್ತಿರಲಿಲ್ಲ. ಬರೀ ತಾಯಿ ಮಗುವಿ.ನ ಮಾತುಗಳು ಬೀಸುತ್ತಿದ್ದ ತಂಗಾಳಿಯಲ್ಲಿ ಆಗಾಗ ಬಂದು ಕಿವಿಗೆ ತಾಕುತ್ತಿದ್ದವು.
ಅದು ಮುಗಿಯದ ರಾತ್ರಿಯಂತೆ ಭಾಸವಾಗುತ್ತಿತ್ತೇನೋ. ಅಷ್ಟರಲ್ಲಿ ಚಂದ್ರ ಮೂಡಿದ. ಚಂದಿರನ ತಂಬೆಳಕಲ್ಲಿ ಇಡೀ ಜಗತ್ತು ವಿಚಿತ್ರ ಹೊಳಪಿನಿಂದ ಕಂಗೊಳಿಸುತ್ತಿತ್ತು. ತಾಯಿ ಈಗ ಮಗುವಿಗೆ ಮೂಡುತ್ತಿದ್ದ ಚಂದ್ರನನ್ನು ತೋರಿಸುತ್ತಿದ್ದಳು. ಚಂದಿರನನ್ನು ನೋಡಿದ ಮಗು ನಗುತ್ತಿತ್ತು. ಅಮ್ಮನಿಲ್ಲದ ತಬ್ಬಲಿ ಚಂದಿರನೂ ನಗುತ್ತಿದ್ದ.
ನಾವು ಎಲ್ಲವನ್ನೂ ನೋಡುತ್ತಾ ಕೂತು ಬಿಟ್ಟೆವು. ಅಲ್ಲೆಲ್ಲೋ ಮತ್ತೆ ನವಿಲು ಕೂಗಿತು. ರಸ್ತೆಯ ಒಂದು ಬದಿಯಲ್ಲಿ ಆಳದ ಕಣಿವೆ. ದೂರದಲ್ಲಿ ಎಲ್ಲೋ ಮಳೆಯಾಗಿರಬೇಕು ಎಂದು ನಾವು ಊಹಿಸುತ್ತಿದ್ದಂತೆ ದೂರದಲ್ಲೆಲ್ಲೋ ಜಲಪಾತದ ಸದ್ದು ಕೇಳಿಸಿತು. ಇಷ್ಟು ಹೊತ್ತೂ ಆ ಸದ್ದು ನಮ್ಮ ಕಿವಿಗೆ ಬಿದ್ದಿರಲೇ ಇಲ್ಲವಲ್ಲ ಎಂದು ನಾವು ಅಚ್ಚರಿಪಟ್ಟೆವು.
ತಾಯಿ ಆ ಕತ್ತಲಲ್ಲೇ ರಸ್ತೆ ಪಕ್ಕದ ಗಿಡದಲ್ಲಿ ಅರಳಿದ ಹೂವು ಕೀಳುತ್ತಿದ್ದಳು. ಮಗು ಅಂಥ ಒಂದಷ್ಟು ಹೂವನ್ನು ಕೈಯಲ್ಲಿಟ್ಟುಕೊಂಡು ದೇವಲೋಕದಿಂದ ಇಳಿದ ಕಂದನಂತೆ ಕಾಣಿಸುತ್ತಿತ್ತು. ಅದೇ ಕತ್ತಲೆಯಲ್ಲಿ ತಾಯಿ ಬಸ್ಸಿಗೆ ಹತ್ತಿ ಪುಟ್ಟದೊಂದು ಬ್ಯಾಗು ತಂದು ಮಗುವಿಗೆ ಹಾಲು ಕುಡಿಸಿದಳು. ಮಗುವಿನ ತುಟಿಯ ಇಕ್ಕೆಲದಲ್ಲಿ ಇಳಿದ ಹಾಲನ್ನು ಸೆರಗಿನಿಂದ ಒರೆಸಿದಳು.
ಇನ್ನೇನು ಅವಳ ಸಹನೆ ಕೆಡುತ್ತದೆ. ಅವಳು ಕಿರುಚುತ್ತಾಳೆ. ಕನಿಷ್ಟ ಮುಖ ಕಿವಿಚುತ್ತಾಳೆ. ಮಗುವಿನ ಮೇಲೆ
ರೇಗುತ್ತಾಳೆ ಎಂದು ನಾವು ಕಾದೆವು. ಅವಳ ಮುಖದಲ್ಲಿ ಹಾಗಿದ್ದರೂ ಮಂದಹಾಸವೇ ಇತ್ತು. ಆ ಬೆಳಕಿನಲ್ಲಿ ಅದು ತನ್ನ ಪ್ರಭೆಯನ್ನು ಹೆಚ್ಚಿಸಿಕೊಂಡು ಚಂದಿರನ ಜೊತೆ ಸ್ಪರ್ಧೆಗಿಳಿದಂತೆ ಕಾಣಿಸುತ್ತಿತ್ತು.
ಇದ್ದಕ್ಕಿದ್ದಂತೆ ತಣ್ಣನೆ ಗಾಳಿ ಬೀಸಿತು. ಆ ಗಾಳಿ ಮಗುವಿನ ಕಿವಿ ಹೊಕ್ಕಿರಬೇಕು. ಮಗು ಕೇಕೆ ಹಾಕಿತು. ನವಿಲಿನ ಕೇಕೆಗಿಂತ ಇದೇ ಚೆಂದ ಅನ್ನಿಸಿತು. ಆ ಕ್ಷಣ ಮಗು ಕೂಡ ನಮಗೆ ನವಿಲಿನ ಹಾಗೆ ಕಾಣಿಸಿತು. ಅದನ್ನು ನೋಡುತ್ತಾ ನಾವು ನಮ್ಮೊಳಗೇ ನಕ್ಕೆವು.
ಬಸ್ಸುಗಳ ಓಡಾಟ ಶುರುವಾಗಿತ್ತು. ಒಂದೆರಡು ಬಸ್ಸುಗಳು ಪ್ರಖರ ಬೆಳಕು ಚೆಲ್ಲುತ್ತಾ ನಮ್ಮನ್ನು ಹಾದು ಹೋದವು. ಅವಕ್ಕೆ ಕೈ ಅಡ್ಡ ಹಿಡಿದು ಕಾಡಿ ಬೇಡಿ ಕೆಲವರು ಬಸ್ಸು ಹತ್ತಿಕೊಂಡು ಹೊರಟು ಹೋದರು. ಹೋದವರನ್ನು ನೋಡುತ್ತಾ ಅನೇಕರು ಅವರ ಅದೃಷ್ಟ ತಮಗಿಲ್ಲವಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದರು.
ಹೀಗೆ ಕಾಯುತ್ತಾ ಎಷ್ಟೊ ಹೊತ್ತು ಕಳೆದಿರಬೇಕು. ಮಗು ತಾಯಿಯ ಮಡಿಲಲ್ಲಿ ನಿದ್ದೆ ಮಾಡುತ್ತಿತ್ತು. ಆ ಮಗುವಿನ ಸಿಹಿನಿದ್ದೆಯೇ ತನ್ನ ಏಕೈಕ ಕಾಯಕ ಎಂಬಂತೆ ತಾಯಿ ಅದನ್ನು ಅವಚಿಕೊಂಡಿದ್ದಳು. ಎಲ್ಲರ ತಾಳ್ಮೆಯೂ ಕೆಟ್ಟು ನಾವೂ ಕೂಡ ಸಿಟ್ಟನ್ನು ಹೊರಹಾಕುವ ಸ್ಥಿತಿಗೆ ಬಂದು ತಲುಪಿದ್ದೆವು. ಇನ್ನೇನು ಕಂಡಕ್ಟರ್ ಮೇಲೆ ನಮ್ಮ ಸಿಟ್ಟು ವ್ಯಕ್ತವಾಗಬೇಕು ಅನ್ನುವಷ್ಟರಲ್ಲಿ ಡ್ರೈವರ್ ಮತ್ತೊಂದು ಬಸ್ಸಿನೊಂದಿಗೆ ಹಾಜರಾದ.
ಎಲ್ಲರೂ ಹೊಸ ಜೀವ ಬಂದಂತೆ ಎದ್ದು ಆ ಬಸ್ಸು ಹತ್ತಿದರು. ನಾವೂ ಬಸ್ಸು ಹತ್ತಿ ಕೂತೆವು. ಎಲ್ಲರ ಅವಸರ ಮುಗಿದ ನಂತರ ಆ ತಾಯಿ ಮಗುವನ್ನು ಅವಚಿಕೊಂಡು ಬಸ್ಸು ಹತ್ತಿ ಕೂತಳು. ಅವಳ ತುಟಿಯ ಮಂದಹಾಸ ಕಿಂಚಿತ್ತೂ ಮಾಸಿರಲಿಲ್ಲ.
ಬಸ್ಸು ಹೊರಡುತ್ತಿದ್ದಂತೆ ನಾವು ನಿದ್ದೆ ಹೋದೆವು. ಕಣ್ಣು ಬಿಡುವ ಹೊತ್ತಿಗೆ ಬೆಳಕಾಗಿತ್ತು. ಹಿಂತಿರುಗಿ ನೋಡಿದರೆ ಅಲ್ಲಿ ಆ ತಾಯಿ ಮತ್ತು ಮಗು ಮತ್ತೆ ಆಟವಾಡುತ್ತಾ ಕೂತಿದ್ದರು. ಮಗು ತಾಯಿಯ ಮುಂಗುರಳನ್ನು ತೀಡುತ್ತಿತ್ತು. ತಾಯಿ ಕಿಲಕಿಲ ನಗುತ್ತಿದ್ದಳು.
ಬೆಳಗಾಯಿತು.

Monday, September 20, 2010

ಬಂಡಾಯ; ಮಳೆ ನಿಂತರು ಮರದ ಹನಿಬಿಡದು ಎಂಬಂತೆ

ಬಂಡಾಯ ಸಾಹಿತ್ಯಕ್ಕೆ ಮೂವತ್ತು ವರ್ಷ. ಮೂವತ್ತೆಂದರೆ ದಂಗೆಯೇಳುವ ವಯೋಮಾನ ದಾಟಿ, ಮನಸ್ಸು ಹದಗೊಳ್ಳುವ ಕಾಲಾವಧಿ. ಬಂಡಾಯ ಚಳವಳಿ ಕೂಡ ಹೆಚ್ಚೂಕಮ್ಮಿ ಅದೇ ಸ್ಥಿತಿಯಲ್ಲಿದೆ. ಕೆಲವೊಮ್ಮೆ ಎಲ್ಲವನ್ನೂ ಒಪ್ಪಿಕೊಳ್ಳುವಂತೆ, ಮತ್ತೆ ಕೆಲವೊಮ್ಮೆ ಸಕಲವನ್ನು ಧಿಕ್ಕರಿಸುವಂತೆ ನಟಿಸುತ್ತಿದ್ದ ಬಂಡಾಯ ಮನೋಧರ್ಮವನ್ನು ಒಂದು ಅವಧಿಯಲ್ಲಿ ನಮ್ಮ ರಾಜಕಾರಣ ಕೈ ಹಿಡಿದು ನಡೆಸಿತ್ತು. ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದ ಅನೇಕರು ಸರ್ಕಾರದ ಆಪ್ತವಲಯದಲ್ಲಿ ಕಾಣಿಸಿಕೊಂಡಿದ್ದರು. ಅನೇಕರು ಈಗಲೂ ಅದೇ ಮೊಗಸಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾಜಕೀಯ ಅವರ ಕೈ ಹಿಡಿದು ನಡೆಸಿತೋ, ಅವರು ರಾಜಕಾರಣದ ಕೈ ಹಿಡಿದು ನಡೆಸಿದರೋ ಎಂಬುದು ಸ್ಪಷ್ಟವಿಲ್ಲ. ಇಬ್ಬರು ಪರಸ್ಪರ ಕೈ ಕೈ ಹಿಡಿದುಕೊಂಡು ನಡೆಯುವುದನ್ನು ದೂರದಿಂದ ನೋಡಿದವರಿಗೆ, ನಡೆಯುವವರು ಯಾರು, ನಡೆಸುತ್ತಿರುವವರು ಯಾರು ಎಂಬುದು ಸ್ಪಷ್ಟವಾಗುವುದಿಲ್ಲ.
ನವ್ಯಕ್ಕೂ ಬಂಡಾಯಕ್ಕೂ ಅಂಥ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ನವ್ಯ ಚಳವಳಿಯಲ್ಲಿ ಎಲ್ಲರೂ’ ಇದ್ದರು. ಬಂಡಾಯ ಚಳವಳಿ ಆರಂಭಿಸಿದಾಗ ಅಲ್ಲಿದ್ದವರು ಕೆಲವರು’ ಮಾತ್ರ. ಆ ಕೆಲವರಿಗೂ ನವ್ಯದ ಜೊತೆ ಅಂಥ ಜಗಳವೇನೂ ಇರಲಿಲ್ಲ. ಬಂಡಾಯದ ಧಾಟಿಗೂ ನವ್ಯ ಶೈಲಿಗೂ ಅಂಥ ಎದ್ದು ಕಾಣುವ ವ್ಯತ್ಯಾಸವೂ ಇರಲಿಲ್ಲ. ಕ್ರಮೇಣ ಬಂಡಾಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ದಲಿತ ಸಾಹಿತ್ಯವನ್ನೂ ತನ್ನ ಒಂದು ಕವಲು ಎಂಬಂತೆ ಭಾವಿಸಿದ್ದೂ ಇದೆ.
ನವ್ಯಚಳವಳಿಯನ್ನು ಪತ್ರಿಕೆಗಳೂ ಲೇಖಕರೂ ಪೋಷಿಸಿದಷ್ಟು ಬಂಡಾಯ ಚಳವಳಿಯನ್ನು ಪೋಷಿಸಲಿಲ್ಲ ಅನ್ನುವುದೂ ಸತ್ಯ. ಹೀಗಾಗಿ ಅದು ಕೇವಲ ತನ್ನ ಸತ್ವದಿಂದಾಗಿಯೇ ಉಳಿಯಬೇಕಾಗಿತ್ತು. ನವ್ಯಕ್ಕೆ ತನ್ನ ರೂಪರೇಷೆಗಳನ್ನು ಅಭಿವ್ಯಕ್ತಿ ವಿಧಾನಗಳನ್ನು ವಿಮರ್ಶೆಯ ಪರಿಭಾಷೆಗಳನ್ನು ಯುರೋಪ್ ಮತ್ತು ಇಂಗ್ಲಿಷ್ ಸಾಹಿತ್ಯದಿಂದ ಪಡೆದುಕೊಂಡು ತನ್ನ ಮೂಸೆಯಲ್ಲಿ ಅದನ್ನು ಬಡಿದು ಕಾಯಿಸಿ ಹೊಸ ಆಭರಣವೆಂಬಂತೆ ಧರಿಸಿಕೊಂಡಿತು. ನವ್ಯ ಕಾವ್ಯದ ಲಯಬದ್ಧತೆ, ರೂಪಕ, ಅಭಿವ್ಯಕ್ತಿಗಳಲ್ಲಿ ಇಂಗ್ಲಿಷ್ ಕವಿಗಳ, ಕಾದಂಬರಿಕಾರರ, ವಿಮರ್ಶಕರ ನೆರಳಿತ್ತು. ಬಂಡಾಯ ಆ ಹೊತ್ತಿಗೆ, ದೇಸಿ ಅಭಿವ್ಯಕ್ತಿಯಂತೆ ಕಾಣಿಸಿದ್ದಂತೂ ನಿಜ. ನಮ್ಮ ಜನಪದ, ನಮ್ಮ ನೋವು, ನಮ್ಮವರ ಶೋಷಣೆಗಳನ್ನು ಹೊತ್ತ ಕತೆ, ಕವಿತೆಗಳು ಆರಂಭದಲ್ಲಿ ಬಂಡಾಯ ಚಳವಳಿಯನ್ನು ಮುನ್ನಡೆಸಿದವು.
ಒಂದು ವಿಚಿತ್ರ ತಲ್ಲಣದೊಂದಿಗೇ ಬಂಡಾಯ ಚಳವಳಿ ಆರಂಭವಾಯಿತು ಎನ್ನಬೇಕು. ಅದಕ್ಕೆ ನವ್ಯದ ತೆಕ್ಕೆಯಿಂದ ಬಿಡಿಸಿಕೊಳ್ಳುವ ಅನಿವಾರ್ಯತೆಯಿತ್ತು. ನವ್ಯ ಸಾಹಿತ್ಯ ಅರ್ಥಪೂರ್ಣತೆಯತ್ತ ತುಡಿಯುತ್ತ, ಶ್ರೇಷ್ಠತೆಯ ವ್ಯಾಮೋಹಕ್ಕೆ ಒಳಗಾಗುತ್ತಾ ಓದುಗರಿಂದ ದೂರವಾಗುವ ಹಂತ ತಲುಪಿತ್ತು. ಕನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಕಳಕೊಂಡದ್ದು ನವ್ಯದ ಅವಧಿಯಲ್ಲೇ. ಬಂಡಾಯ ಚಳವಳಿ ಆ ಓದುಗರನ್ನು ಮರಳಿಸಲಿಲ್ಲ. ಬದಲಾಗಿ, ಹೊಸ ಓದುಗರನ್ನು ದೊರಕಿಸಿಕೊಟ್ಟಿತು.
ಆ ಹುಮ್ಮಸ್ಸಿನಲ್ಲೇ ಬಂಡಾಯ ಚಳವಳಿ, ನವ್ಯಕ್ಕಿಂತ ವಿಸ್ತಾರವೂ ವ್ಯಾಪಕವೂ ಆಗುತ್ತದೆ ಎಂದು ಆರಂಭದ ದಿನಗಳಲ್ಲಿ ನಂಬಿದವರಿದ್ದರು. ಹಾಗೆ ನೋಡಿದರೆ ಬಂಡಾಯ ಮತ್ತು ನವ್ಯ ಚಳವಳಿಗಳು ಜೊತೆಜೊತೆಯಾಗಿಯೇ ಸಾಗಬಹುದಾಗಿತ್ತೋ ಏನೋ? ಯಾಕೆಂದರೆ ನವ್ಯ ಕೂಡ ಒಂದು ಅರ್ಥದಲ್ಲಿ ಬಂಡಾಯವೇ ಆಗಿತ್ತು. ಅಲ್ಲಿ ನವೋದಯದ ವಿರುದ್ಧ ಬಂಡಾಯ ಎದ್ದ ಸೂಚನೆಯಿತ್ತು. ನವೋದಯ ಮತ್ತು ನವ್ಯದ ನಡುವಣ ಅವಧಿಯಲ್ಲಿ ಬರೆದ ಪ್ರಗತಿಶೀಲರು, ನವ್ಯ ಮತ್ತು ಬಂಡಾಯ ಎರಡರ ಸತ್ವವನ್ನೂ ತಮ್ಮೊಳಗೆ ಅವಿತಿಟ್ಟುಕೊಂಡಂತಿದ್ದರು.
ನಾಯಕರಿಲ್ಲದೇ ಹೋದರೆ ಒಂದು ಚಳವಳಿ ಹೇಗೆ ಮಾಸುತ್ತಾ ಹೋಗುತ್ತದೆ ಎನ್ನುವುದಕ್ಕಿಂತ, ಕಾಲಕ್ರಮೇಣ ಹೇಗೆ ಸಾಹಿತ್ಯದ ಆದ್ಯತೆ ಬೇರೆಯಾಗುತ್ತಾ ಹೋಗುತ್ತವೆ ಎನ್ನುವುದನ್ನು ನೋಡಬೇಕು. ಪ್ರಗತಿಶೀಲ ಲೇಖಕರು ಕೂಡ ಅಭಿವೃದ್ಧಿಯನ್ನು ಪೋಷಿಸುತ್ತಾ, ಮೂಢನಂಬಿಕೆ, ಕಂದಾಚಾರ, ಜಾತೀಯತೆಯ ವಿರುದ್ಧ ಸಿಡಿದೆದ್ದವರೇ ಆಗಿದ್ದರು. ನವ್ಯ ಅವೆಲ್ಲವನ್ನೂ ಮೀರಿದ್ದು ವ್ಯಕ್ತಿಯ ಅಂತರಂಗದ ತುಮುಲ, ತೊಳಲಾಟ. ಆ ತೊಳಲಾಟಕ್ಕೆ ಸಾಮಾಜಿಕ ಸ್ಥಿತಿಗತಿಯಷ್ಟೇ ಕಾರಣವಲ್ಲ. ವ್ಯಕ್ತಿಯ ಒಳಗಣ ತಲ್ಲಣ ಎನ್ನುವುದನ್ನು ಪ್ರತಿಪಾದಿಸುತ್ತಿರುವಂತೆ ಕಾಣಿಸಿತು. ಬಂಡಾಯ ಸಾಹಿತ್ಯಕ್ಕೆ ನೆರವಾದದ್ದು ಇದೇ.
ಬಹುಶಃ ೧೯೭೯ರಲ್ಲಿರಬೇಕು. ಧರ್ಮಸ್ಥಳದಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅದೇ ದಿನ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಬಂಡಾಯ ಮತ್ತು ನವ್ಯ ಎರಡು ವಿಭಿನ್ನ ದಿಕ್ಕುಗಳನ್ನು ಪ್ರತಿನಿಧಿಸುತ್ತಿದೆ ಎಂಬುದಕ್ಕೆ ಕಾರಣವಾದದ್ದು ಇದೇ ಅಂಶ. ಹಾಗೆ ನೋಡಿದರೆ, ದಂಗೆಯೇಳುತ್ತಲೇ ಇರಬೇಕಾಗುತ್ತದೆ ಪ್ರತಿಯೊಬ್ಬನೂ.. ಎಂದು ಮೊಟ್ಟಮೊದಲು ಬರೆದವರು ಅಡಿಗರೇ. ಅವರು ಅಂತರಂಗದ ದಂಗೆಗೆ ಒತ್ತು ಕೊಟ್ಟಿದ್ದರು. ಬಂಡಾಯ ಸಾಮಾಜಿಕ ನೆಲೆಗಟ್ಟಿನಲ್ಲಿ ಹೆಚ್ಚು ಮೂರ್ತರೂಪದಲ್ಲಿ ಪ್ರಕಟಗೊಂಡಿತು.
ಹಾಗೆ ನೋಡಿದರೆ ಬಂಡಾಯ ಒಂದು ಸಾಹಿತ್ಯ ಸಂಘಟನೆಯಾಗಿ ಆರಂಭವಾಗಲಿಲ್ಲ. ಅದು ಒಂದು ಸಾಮಾಜಿಕ ಚಳವಳಿಯೆಂಬಂತೆ ಶುರುವಾಯಿತು. ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ವಿಚಾರಧಾರೆಗಳನ್ನು ಅಂಗೀಕರಿಸಿಕೊಂಡು ಅಳವಡಿಸಿಕೊಂಡು ಬಲವಾದ ತಾತ್ವಿಕ ನೆಲೆಗಟ್ಟಿನೊಂದಿಗೆ ಬೆಳೆಯತೊಡಗಿತು. ಇದೇ ಸಂದರ್ಭದಲ್ಲಿ ನಡೆದ ಮತ್ತೊಂದು ಘಟನೆ, ಬಂಡಾಯದ ದಿಕ್ಕನ್ನು ಕೊಂಚ ಬದಲಾಯಿಸಿತು ಎನ್ನಬೇಕು.
೧೯೯೦ರಲ್ಲಿ ಆರ್ ಸಿ ಹಿರೇಮಠ್ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಅದನ್ನು ವಿರೋಧಿಸಿ ಬೆಂಗಳೂರಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಬಂಡಾಯ ಮತ್ತು ನವ್ಯ ಲೇಖಕರು ಒಟ್ಟಾದರು. ಇದ್ದಕ್ಕಿದ್ದ ಹಾಗೆ ಸಾಹಿತ್ಯದಲ್ಲಿ ಬೇರೆಲ್ಲದಕ್ಕಿಂತ ಶ್ರೇಷ್ಠತೆಯೇ ಮುಖ್ಯ ಎಂದು ಅನೇಕರು ವಾದಿಸಿದರು. ಆಗ ಶ್ರೇಷ್ಠತೆಯನ್ನು ಒಂದು ವ್ಯಸನ ಎಂದು ಕರೆದವರು ಕೆ ವಿ ಸುಬ್ಬಣ್ಣ ಒಬ್ಬರೇ. ಆ ಅವಧಿಯಲ್ಲಿ ಶ್ರೇಷ್ಠತೆಯ ವಾದ ಎಷ್ಟೊಂದು ಚರ್ಚೆಗಳಿಗೆ ಕಾರಣವಾಯಿತು ಎಂದರೆ ಸಾಹಿತ್ಯದ ಬೇರೆಲ್ಲ ಚಳವಳಿಗಳೂ ಶ್ರೇಷ್ಠತೆಯ ಚಳವಳಿಯೊಳಗೆ ಕರಗಿಹೋಗುತ್ತವೆ ಎಂಬ ಭಾವನೆ ಹುಟ್ಟುವಂತಿತ್ತು.
**********
ಮೂವತ್ತು ವರ್ಷಗಳ ನಂತರ ತಿರುಗಿ ನೋಡಿದರೆ ಬಂಡಾಯದ ಹುರುಪು, ಹುಮ್ಮಸ್ಸು, ಆರಂಭದ ದಿನಗಳಲ್ಲಿ ಬಂದ ಮೈ ನವಿರೇಳಿಸುವ ಕತೆ, ಕವಿತೆಗಳೆಲ್ಲ ಕಣ್ಮುಂದೆ ಸುಳಿಯುತ್ತವೆ. ಬರಗೂರು, ಚನ್ನಣ್ಣ ವಾಲೀಕಾರ, ಕಾಳೇಗೌಡ ನಾಗವಾರ, ಕುಂವೀ, ಚಂದ್ರಶೇಖರ ಪಾಟೀಲ, ಬೆಸಗರಹಳ್ಳಿ ರಾಮಣ್ಣ, ಬೊಳುವಾರು, ಗೀತಾ ನಾಗಭೂಷಣ, ಬಿಟಿ ಲಲಿತಾ ನಾಯಕ, ಸುಧಾಕರ- ಥಟ್ಟನೆ ನೆನಪಾಗುವ ಈ ಹೆಸರುಗಳ ಜೊತೆ ಇನ್ನಷ್ಟು ಮಂದಿ ಬಂಡಾಯ ಸಾಹಿತ್ಯ ಎಂಬ ಹಣೆಪಟ್ಟಿ ಇಲ್ಲದೆಯೂ ಮತ್ತೆ ಮತ್ತೆ ಓದಬಹುದಾದಂಥ ಕತೆ, ಕವಿತೆ, ಕಾದಂಬರಿಗಳನ್ನು ಕೊಟ್ಟರು. ಸಾಮಾಜಿಕ ಕಾಳಜಿಯ ಜೊತೆಗೆ ವೈಯಕ್ತಿಕ ಹಸಿವೂ ಇವರಲ್ಲಿದ್ದುದರಿಂದ ಅದು ಸಾಧ್ಯವಾಯಿತೆನ್ನಬೇಕು. ಅಲ್ಲದೇ, ಒಂದು ಚಳವಳಿಯನ್ನು ಕಟ್ಟಿ ಬೆಳೆಸುವ ಕಾಳಜಿ ಮತ್ತು ಬದ್ಧತೆಯೂ ಅವರಲ್ಲಿತ್ತು. ಆರಂಭದ ದಿನಗಳ ಕಸುವು, ಫಲವತ್ತತೆ ಮತ್ತು ಜೀವಂತಿಕೆಯನ್ನು ಅದು ನಂತರದ ದಿನಗಳಲ್ಲೂ ಉಳಿಸಿಕೊಂಡಿದ್ದರೆ ಬಂಡಾಯ ಚಳವಳಿ ತನ್ನ ಬಿಸುಪನ್ನು ಇವತ್ತೂ ಉಳಿಸಿಕೊಂಡಿರುತ್ತಿತ್ತೋ ಏನೋ?
ಮೂವತ್ತು ವರ್ಷದ ನಂತರವೂ ಬಂಡಾಯ ಸಾಹಿತ್ಯ ಎಂದರೆ ಬರಗೂರು, ವಾಲೀಕಾರ, ನೀರಮಾನ್ವಿ, ವೀರಭದ್ರ, ಕಾಳೇಗೌಡ, ಬೆಸಗರಹಳ್ಳಿ, ಪಾಟೀಲ ಮುಂತಾದವರೇ. ಆರಂಭದ ದಿನಗಳಲ್ಲಿ ಅವರು ಕೊಟ್ಟ ಸತ್ವಯುತ ಸಾಹಿತ್ಯ ಮತ್ತು ಚಳವಳಿಯನ್ನು ಪ್ರಭಾವಿಸಿದ ರೀತಿ ಅನನ್ಯ. ನಂತರದ ದಿನಗಳಲ್ಲಿ ಬಂಡಾಯ ಸಾಹಿತ್ಯಕ್ಕೆ ಅಷ್ಟೇ ತೀವ್ರತೆಯಿಂದ ಫಲವತ್ತು ಕೊಡುಗೆಯನ್ನು ನೀಡುವವರು ಬರಲಿಲ್ಲ. ಆನಂತರ ಬಂದ ಬಹುತೇಕ ಲೇಖಕರು ಈ ತಮ್ಮ ತಮ್ಮ ಸ್ವಂತ ನೆಲೆಯನ್ನು ಕಂಡುಕೊಳ್ಳುವಲ್ಲಿ ಉತ್ಸಾಹ ತೋರಿದರೇ ಹೊರತು, ಒಂದು ಚಳವಳಿಗೆ ನಿಷ್ಠರಾಗುವ ಆಸಕ್ತಿಯನ್ನೂ ಹೊಂದಿರಲಿಲ್ಲ. ಹೀಗಾಗಿ ಬಂಡಾಯ ಎನ್ನುವುದು ನವ್ಯ ಮತ್ತು ಪ್ರಗತಿಶೀಲದ ಹಾಗೆ ಒಂದು ಕಾಲದ ಪ್ರಖರ ಪ್ರತಿಭೆಯಂತೆ ಕಾಣಿಸುತ್ತಿದೆಯೇ ಹೊರತು, ಇವತ್ತು ಚಲಾವಣೆಯಲ್ಲಿರುವ ನಾಣ್ಯದಂತೆ ಕಾಣಿಸುತ್ತಿಲ್ಲ. ನೆನಪುಗಳ ಜೋಕಾಲಿಯಲ್ಲಿ ಅದು ಹಿಂದಕ್ಕೂ ಮುಂದಕ್ಕೂ ತನ್ನನ್ನು ಜೀಕಿಕೊಳ್ಳುತ್ತಾ, ಆ ಓಡಾಟದಲ್ಲೇ ಎರಡೂ ಕಾಲಗಳನ್ನೂ ಸ್ಪರ್ಶಿಸುವುದಕ್ಕೆ ಹಂಬಲಿಸುತ್ತಿರುವಂತೆ ತೋರುತ್ತದೆ.
**********
ಹಾಗಿದ್ದರೆ ಇವತ್ತಿನ ಸಾಹಿತ್ಯದ ನಿಲುವುಗಳೇನು? ರಹಮತ್ ತರೀಕೆರೆಯಂಥ ವಿಮರ್ಶಕರು ತಾತ್ವಿಕತೆ, ಸಾಮಾಜಿಕ ಬದ್ಧತೆಯನ್ನು ಮುಂದಿಟ್ಟುಕೊಂಡು ಸಾಹಿತ್ಯಕೃತಿಯನ್ನೂ ಲೇಖಕರನ್ನೂ ಪರಿಭಾವಿಸುವ ಉತ್ಸಾಹ ತೋರುತ್ತಿದ್ದಾರೆ. ಮತ್ತೊಂದು ಕಡೆ ವಿಚಾರವಾದ, ಬೌದ್ಧಿಕತೆ ಎರಡನ್ನೂ ಒಳಗೊಂಡ ಬರಹಗಳನ್ನು ಮೆಚ್ಚುವ ವಿಮರ್ಶಕರು ಕಾಣಿಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿ ವಿಮರ್ಶೆಯ ಹೆಸರಲ್ಲಿ ಹೊರಗಿನಿಂದ ಮತ್ತೊಂದಷ್ಟು ವಿಚಾರಗಳು ಹರಿದು ಬರುತ್ತಿವೆ. ನೋಮ್ ಚಾಮ್‌ಸ್ಕಿಯಂಥವರನ್ನು ಹಿಡಿದು ತಂದು, ನಮ್ಮ ಪರಿಸರಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಯತ್ನಗಳು ಸೋಲು ಕಂಡಿವೆ. ಇದ್ದಕ್ಕಿದ್ದ ಹಾಗೆ ಮೌಖಿಕ ಪರಂಪರೆಯೂ ಆ ಪರಂಪರೆಗೆ ನಿಷ್ಠರಾದವರೂ ಹಲವರಿಗೆ ಶ್ರೇಷ್ಠರಾಗಿ ಕಾಣಿಸುತ್ತಿದ್ದಾರೆ. ಈ ಮಧ್ಯೆ ಅಭಿಜಾತ ಸಾಹಿತ್ಯಕ್ಕಷ್ಟೇ ತನ್ನ ಮಾನ್ಯತೆ ಎನ್ನುವ ವಿಮರ್ಶಕರೂ ಇದ್ದಾರೆ. ಹಿರಿಯ ವಿಮರ್ಶಕರ ಗಡಿಯಾರ ನಿಂತು ಹೋಗಿ ದಶಕಗಳೇ ಕಳೆದಿವೆ. ಸಾಮಾಜಿಕ ಬದ್ಧತೆಗೆ ತನ್ನನ್ನು ತೆತ್ತುಕೊಂಡಂತೆ ಬರೆಯಬೇಕು ಎನ್ನುವ ಹುಸಿ ಅಪೇಕ್ಷೆಗಳನ್ನು ಹೊಂದಿದ ವಿಮರ್ಶಕರೂ ಆಗೀಗ ಎದುರಾಗುತ್ತಾರೆ.
ಇವೆಲ್ಲದರ ಮಧ್ಯೆ ಓದುಗರು ನಿಜಕ್ಕೂ ಯಾವುದರ ಪರವಾಗಿದ್ದಾರೆ? ಓದುಗರ ಪ್ರಸ್ತಾಪ ಮಾಡಿದರೆ ಸಂಸ್ಕೃತಿ ವಿಮರ್ಶೆ ಮಾಡುವವರಿಗೆ ಸಿಟ್ಟು ಬರುತ್ತದೆ. ಅವರಿಗೆ ಓದುಗರ ಸಂಖ್ಯೆ ಮಾನದಂಡವಲ್ಲ. ಟಾಪ್‌ಟೆನ್ ಪಟ್ಟಿಯಲ್ಲಿ ಒಂದು ಕೃತಿ ಕಾಣಿಸಿಕೊಂಡರೆ ಅದು ಕಳಪೆ ಕೃತಿ ಎಂಬ ಏಕಾಏಕಿ ತೀರ್ಮಾನಕ್ಕೆ ಅವರು ಬಂದುಬಿಡುತ್ತಾರೆ. ಆದರೆ ಅತ್ಯಂತ ಹೆಚ್ಚು ಓದುಗರನ್ನು ಹೊಂದಿದ್ದ ತೇಜಸ್ವಿಯವರ ವಿಚಾರದಲ್ಲಿ ಅದು ನಿಜವಲ್ಲ ಎನ್ನುವುದನ್ನೂ ಅವರೇ ಒಪ್ಪುತ್ತಾರೆ. ಈ ದ್ವಂದ್ವದಲ್ಲಿ ಹುಟ್ಟುವ ಎಡಬಿಡಂಗಿ ತಾತ್ವಿಕತೆ, ಹುಸಿ ಸಾಮಾಜಿಕ ಬದ್ಧತೆ ಮತ್ತು ಯುವ ಲೇಖಕರನ್ನು ಕಂಗಾಲುಮಾಡುವ ದೇಶಕಾಲ ಚಿಂತನೆಯಲ್ಲಿ ಇವತ್ತಿನ ಸಾಹಿತ್ಯಜಗತ್ತು ಡೋಲಾಯಮಾನವಾಗಿದೆ. ಏನೇ ಮಾತಾಡಿದರೂ ಬಸವಣ್ಣ, ಬುದ್ಧ ಮತ್ತು ಅಲ್ಲಮರನ್ನು ಎಳೆದು ತಂದು ಕೆಕ್ಕರಿಸಿ ನೋಡುವವರ ಪಡೆ ಒಂದು ದಿಕ್ಕಿನಲ್ಲಿದೆ. ಮತ್ತೊಂದು ಕಡೆ ಅಷ್ಟೇ ಅಪಾಯಕಾರಿಯಾದ, ಪ್ರಗತಿಶೀಲತೆಯನ್ನೂ ಬಂಡಾಯವನ್ನೂ ಸ್ತ್ರೀಸ್ವಾತಂತ್ರ್ಯವನ್ನೂ ಜಾತ್ಯತೀತ ನಿಲುವನ್ನೂ ಪ್ರಶ್ನಿಸುವ ನಿಲುವು ಕೂಡ ವ್ಯಕ್ತವಾಗುತ್ತಿದೆ. ಈ ಕವಲು-ದಾರಿಯಲ್ಲಿ ನಿಂತ ಓದುಗ ಕಕ್ಕಾಬಿಕ್ಕಿಯಾಗುವಷ್ಚರ ಮಟ್ಟಿಗೆ ಅವನನ್ನು ಗೊಂದಲಗೊಳಿಸುವುದಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಸಾಹಿತ್ಯದ ಹೊಸ ವಿದ್ಯಾರ್ಥಿಗಳಂತೂ ಯಾರನ್ನು ಓದಬೇಕು ಎನ್ನುವ ಕುರಿತು ನಿಜವಾದ ಗೊಂದಲದಲ್ಲಿ ತೊಳಲಾಡುತ್ತಿರುವಂತಿದೆ.
ಇಂಥ ಹೊತ್ತಲ್ಲಿ ಮೂವತ್ತರ ಹೊಸಿಲಲ್ಲಿರುವ ಬಂಡಾಯದ ಕೈಯಲ್ಲಿ ಕೆಂಪುಗುಲಾಬಿ ಕೂಡ ಬಣ್ಣ
ಕಳಕೊಂಡಂತೆ ಕಾಣುತ್ತಿದೆ.

Wednesday, September 15, 2010

ಕರ್ಣನ ನೆನೆನೆನೆದು..

ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು ಹೆಸರಾದವಳು. ಅವಳು ತೇಲಿಸಿದ ಕರ್ಣನಿಗೆ ಕೊನೆಗೂ ದಕ್ಕಿದ್ದು ಕೌಂತೇಯ, ರಾಧೇಯ, ಸೂತಪುತ್ರ ಎಂಬ ಹೆಸರು ಮಾತ್ರ.
ಎಂಥ ವಿಚಿತ್ರ ಸನ್ನಿವೇಶದಲ್ಲಿ ಕರ್ಣ ಸಿಲುಕಿಹಾಕಿಕೊಂಡ ಎನ್ನುವುದನ್ನು ನೆನೆಯಿರಿ. ಕುಂತಿ ನಿರ್ಭಾವದಿಂದ ತೊರೆದ ಕರ್ಣ, ರಥಿಕನೊಬ್ಬನ ಕೈಸೇರಿ, ತನ್ನ ಉತ್ಸಾಹ ಮತ್ತು ತೀವ್ರತೆಗೋಸ್ಕರ ಬಿಲ್ವಿದ್ಯೆ ಕಲಿತು, ದ್ರೋಣರಿಂದ ಶಾಪಗ್ರಸ್ತನಾಗಿ ಆ ಶಾಪವನ್ನು ಮೀರಬಲ್ಲೆ ಎಂಬ ಹುಮ್ಮಸ್ಸಿನಲ್ಲಿ ಬದುಕಿ, ಕೌರವನ ಆಸ್ಥಾನ ಸೇರಿ, ಅವನಿಗೂ ಪ್ರಿಯಮಿತ್ರನಾಗಿ ಬದುಕಿನಲ್ಲಿ ನೆಲೆ ಕಂಡುಕೊಂಡದ್ದು ಒಂದು ರೋಚಕ ಕತೆ. ಅವನ ಬಾಲ್ಯದ ಬಗ್ಗೆ ವಿವರಗಳೇ ಇಲ್ಲ. ಅಂಥವನ್ನು ಆ ಬಡವ ಹೇಗೆ ಬೆಳೆಸಿದ, ಕರ್ಣ ಏನೇನು ಕೇಳುತ್ತಿದ್ದ, ಏನು ಬೇಡುತ್ತಿದ್ದ, ಹೇಗೆ ಮಾತಾಡುತ್ತಿದ್ದ, ತನ್ನ ತಂದೆ ತಾಯಿ ಯಾರೆಂದು ಅವನು ಕೇಳಲೇ ಇಲ್ಲವೇ, ಅವನ ಕರ್ಣಕುಂಡಲ ಮತ್ತು ಕವಚದ ಬಗ್ಗೆ ಅವನಿಗೆ ಬೆರಗು ಮತ್ತು ಹೆಮ್ಮೆ ಇತ್ತಾ, ಅದನ್ನು ನೋಡಿದಾಗಲಾದರೂ ದ್ರೋಣನಿಗೆ ಅನುಮಾನ ಬರಲಿಲ್ಲವಾ?
ಮತ್ತೆ ನೆನಪಾಗುತ್ತಾನೆ ಭಗ್ನಪ್ರೇಮಿ ಕರ್ಣ. ಅವನು ಯಾರನ್ನು ಪ್ರೀತಿಸಿದ್ದ? ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? ಕೌರವನಂಥ ಕೌರವನಿಗೆ ಕರ್ಣನ ಸ್ನೇಹ ಯಾತಕ್ಕೆ ಬೇಕಿತ್ತು? ಕರ್ಣನ ಶೌರ್ಯವನ್ನು ನೋಡಿ ಕೌರವ ಅವನನ್ನು ಮೆಚ್ಚಿಕೊಂಡಿದ್ದನಾ? ಸ್ನೇಹ ಹುಟ್ಟುವುದು ಮೆಚ್ಚುಗೆಯಿಂದ ಅಲ್ಲ. ಅಭಿಮಾನಿಯಾಗಿದ್ದವನು ಗೆಳೆಯನಾಗಲಾರ. ಮೆಚ್ಚಿಕೊಳ್ಳುವವರು ಎತ್ತರದಲ್ಲಿರುತ್ತಾರೆ, ಮೆಚ್ಚಿಕೆಗೆ ಒಳಗಾದವರು ಕೊನೆಯ ಮೆಟ್ಟಿಲಲ್ಲಿ ನಿಂತಿರುತ್ತಾರೆ. ಗೆಳೆಯರ ನಡುವಿನ ಮೆಚ್ಚುಗೆಯಲ್ಲಿ ಮೆಚ್ಚಿಸಲೇಬೇಕೆಂಬ ಹಟವಿಲ್ಲ. ಮೆಚ್ಚಿಸುವುದು ಅನಿವಾರ್ಯವೂ ಅಲ್ಲ.
ಕರ್ಣನ ಕುರಿತು ಪ್ರೇಮ ಕತೆಗಳಿಲ್ಲ. ಹಾಗಿದ್ದರೂ ಅವನೊಬ್ಬ ಭಗ್ನಪ್ರೇಮಿಯಾಗಿದ್ದನೇನೋ ಅನ್ನಿಸುತ್ತದೆ. ಹಸ್ತಿನಾವತಿಯ ಅರಮನೆಯ ಆವರಣದಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿದ್ದ ಕರ್ಣ ಬೇರೊಬ್ಬರ ಜೊತೆ ಆಪ್ತವಾಗಿ ಮಾತಾಡಿದ ಪ್ರಸ್ತಾಪ ಕೂಡ ಮಹಾಭಾರತದಲ್ಲಿ ಇಲ್ಲ. ಅವನದೇನಿದ್ದರೂ ಏಕಾಂತವಾಸ. ಕೌರವ ಬಿಟ್ಟರೆ ಮತ್ಯಾರೂ ತನ್ನವರಲ್ಲ ಎಂದು ನಂಬಿದವನಂತೆ ಬಾಳಿ ಕರ್ಣ ಎಲ್ಲ ಸೈನಿಕರ ಹಾಗೆ ಬಾಳುತ್ತಿದ್ದ. ಅವನಿಗೂ ಮದುವೆಯಾಗಿ, ಮಕ್ಕಳಾದರು. ಕರ್ಣನಿಗೆ ಹಳೆಯದರ ನೆನಪಿರಲಿಲ್ಲ. ತನ್ನ ಹುಟ್ಟಿನ ಕುರಿತು ಜಿಜ್ಞಾಸೆಯೂ ಇರಲಿಲ್ಲ. ಅಪರಾತ್ರಿಗಳಲ್ಲಿ ಅವನು ಹಾಸಿಗೆಯಲ್ಲಿ ಎದ್ದು ಕೂತು ಏನನ್ನೋ ಹಂಬಲಿಸುವವನಂತೆ ಆಕಾಶದತ್ತ ನೋಡುತ್ತಿದ್ದ ಎಂಬುದು ಕರ್ಣನನ್ನು ಪ್ರೀತಿಸುವ ನನ್ನ ಊಹೆ ಮಾತ್ರ.
ಸೂರ್ಯ ಇದನ್ನೆಲ್ಲ ನೋಡುತ್ತಿದ್ದ. ಅವನಿಗೆ ಯಾವತ್ತೂ ಕರ್ಣನನ್ನು ಮಗನೆಂದು ಒಪ್ಪಿಕೊಳ್ಳುವ ಅಗತ್ಯ ಬರಲಿಲ್ಲ. ಅವನ ಪಾಲಿಗೆ ಕರ್ಣ ಮಗನಾದರೂ ಮಗನಲ್ಲ. ಅವನು ತಾನು ಕೊಟ್ಟ ವರ. ತನ್ನನ್ನು ಓಲೈಸಿದ, ಆರಾಧಿಸಿದ, ಸಂತೋಷಪಡಿಸಿದ ಕಾರಣಕ್ಕೆ ಮುನಿ ಕುಮಾರಿ ಕುಂತಿಗೆ ಕೊಟ್ಟ ಮಂತ್ರಕ್ಕಷ್ಟೇ ಅವನು ಬಂಧಿ. ಮಂತ್ರದ ಅಪ್ಪಣೆ ಇಷ್ಚೇ: ಕೇಳಿದಾಗ ಈ ಕುಮಾರಿಗೆ ವರ ಕರುಣಿಸು. ಅದರಾಚೆಗಿನ ಹೊರೆ, ಹೊಣೆ, ಅನುಕಂಪ ಮತ್ತು ಅಕ್ಕರೆಗೆ ಅಲ್ಲಿ ಜಾಗವಿಲ್ಲ. ಮುಂದಿನ ಮಾತುಗಳಿಗೆ ಅವನು ಕಿವುಡ. ಹೀಗಾಗಿ ಕರ್ಣ ಏನು ಮಾಡಿದರೂ ಅದು ಅವನದೇ ಜವಾಬ್ದಾರಿ. ಕುಂತಿ ಅವನನ್ನು ಗಂಗೆಯಲ್ಲಿ ತೇಲಿ ಬಿಟ್ಟಾಗಲೂ ಸೂರ್ಯ ಮೂಕಪ್ರೇಕ್ಷಕ.
ಇಂಥ ಕರ್ಣನನ್ನು ಸಂದಿಗ್ಧ ಕಾಡುವುದು ಕೇವಲ ಒಮ್ಮೆ. ಕೌರವರ ಪರವಾಗಿ ಹೋರಾಡಲು ಹೊರಟ ಕರ್ಣನನ್ನು ಕೃಷ್ಣ ಭೇಟಿಯಾಗುತ್ತಾನೆ. ಅವನಿಗೆ ಜನ್ಮರಹಸ್ಯ ಹೊತ್ತು. ಹುಟ್ಟಿನ ಗುಟ್ಟು ಬಲ್ಲವನು ಏನು ಬೇಕಾದರೂ ಮಾಡಬಲ್ಲ ಎಂದು ನಂಬಿದ್ದ ಕಾಲವಿರಬೇಕು ಅದು. ಆ ಗುಟ್ಟನ್ನು ಬಿಚ್ಚಿಟ್ಟು ಅವನು ಕರ್ಣನನ್ನು ಕಾಣುತ್ತಾನೆ.
ಕರ್ಣ ಆಗೇನು ಮಾಡಬೇಕಾಗಿತ್ತು?
ಯಾಕೋ ಕರ್ಣ ಕೊಂಚ ಮೆದುವಾದನೇನೋ ಅನ್ನಿಸುತ್ತದೆ. ಕರ್ಣ-ಕೃಷ್ಣರ ನಡುವೆ ಏನೇನು ಮಾತಾಯಿತು ಎನ್ನುವುದು ನಿಗೂಢ. ಕವಿ ಹೇಳಿದ್ದರೂ ಅದು ಅನೂಹ್ಯವೇ. ಅವರಿಬ್ಬರೂ ಏನೇನು ಮಾತಾಡಿರಬಹುದು ಎಂದು ಯೋಚಿಸುತ್ತಾ ಕೂತರೆ ನಮ್ಮ ನಮ್ಮ ಅನುಭವ ಮತ್ತು ಭಾವನೆಗೆ ತಕ್ಕಂತೆ ಉತ್ತರಗಳು ಹೊಳೆಯುತ್ತಾ ಹೋಗುತ್ತವೆ. ಕೃಷ್ಣ ನೀನೇ ಪಾಂಡವರಲ್ಲಿ ಹಿರಿಯವನು. ರಾಜ್ಯ ನಿನ್ನದೇ ಎಂದು ಕರೆಯುತ್ತಾನೆ. ಕರ್ಣ ಹೋಗಿದ್ದರೆ ಅವನಿಗೆ ರಾಜ್ಯ ಸಿಗುತ್ತಿತ್ತಾ? ಆ ಕ್ಷಣವೇ ಕರ್ಣ ಸೋಲುತ್ತಿದ್ದ. ಹೋಗದೇ ಸತ್ತ ಕರ್ಣ ಗೆದ್ದವನಂತೆ ಕಾಣುತ್ತಾನೆ. ಈ ಜಗತ್ತಿನಲ್ಲಿ ಆಮಿಷಗಳಿಗೆ ಬಲಿಯಾಗದವರೇ ನಮಗೆ ದೇವರಂತೆ ಕಾಣಿಸುತ್ತಾರೆ. ಟೆಂಪ್ಟೇಷನ್‌ಗಳನ್ನು ಮೆಟ್ಟಿನಿಲ್ಲುವುದೇ ಸಾಧನೆಯಾದರೆ, ಅಂಥ ಟೆಂಪ್ಟೇಷನ್ನುಗಳನ್ನು ಹುಟ್ಟುಹಾಕುವ ನಮ್ಮ ಮನಸ್ಸಿಗೇನು ಹೇಳೋಣ. ಆಮಿಷಗಳನ್ನು ಸೃಷ್ಟಿಸುವುದು ಮನಸ್ಸು, ಮೀರಲೆತ್ನಿಸುವುದೂ ಮನಸ್ಸು. ಮನಸೇ ಮನಸಿನ ಮನಸ ನಿಲ್ಲಿಸುವುದು.
ಕರ್ಣನನ್ನು ಕೃಷ್ಣ ಒಲಿಸುವ ರೀತಿ ವಿಚಿತ್ರವಾಗಿದೆ. ಅವನಿಗೆ ರಾಜ್ಯದ ಆಮಿಷ ಒಡ್ಡುತ್ತಾನೆ ಅವನು. ಜೊತೆಗೇ, ಧರ್ಮರಾಯ, ಭೀಮ, ಅರ್ಜುನರಂಥವರು ಸೇವೆಗೆ ನಿಲ್ಲುತ್ತಾರೆ ಎನ್ನುತ್ತಾನೆ. ಕರ್ಣನ ಮನಸ್ಸಿನಲ್ಲಿ ದ್ರೌಪದಿ ಸುಳಿದುಹೋಗಿರಬಹುದೇ ಎಂಬ ತುಂಟ ಅನುಮಾನವೊಂದು ಸುಮ್ಮನೆ ಸುಳಿಯುತ್ತದೆ; ದ್ರೌಪದಿಯ ಮನಸ್ಸಿನಲ್ಲಿ ಕರ್ಣನ ನೆರಳು ಹಾದು ಹೋದಹಾಗೆ. ಕರ್ಣನಿಗೆ ಅವೆಲ್ಲವನ್ನೂ ಧಿಕ್ಕರಿಸುವಂಥ ಧೀಮಂತ ಶಕ್ತಿ ಬಂದದ್ದಾದರೂ ಎಲ್ಲಿಂದ? ಕೌರವನ ಸ್ನೇಹದ ಬಲದಿಂದಲೇ? ಅಥವಾ ತಾನು ಕೌಂತೇಯ, ಕುಂತಿಯ ಮಗ, ಸೂರ್ಯನ ಮಗ ಎಂದು ಗೊತ್ತಾದ ನಂತರ ಕರ್ಣ ಗಟ್ಟಿಯಾಗುತ್ತಾ ಹೋದನೇ?
ಕೊನೆಗೂ ಕರ್ಣ ಅವನಿಗೊಂದು ಮಾತು ಕೊಡುತ್ತಾನೆ: ನಿನ್ನಯ ವೀರರೈವರ ನೋಯಿಸೆನು. ಈ ಮಾತನ್ನು ಕರ್ಣನಿಂದ ಹೊರಡಿಸುವಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಕೃಷ್ಣ. ಅಲ್ಲಿಗೆ ಕೌರವರ ಪಾಲಿಗೆ ಕರ್ಣ ನಿರುಪಯೋಗಿ. ಸೈನಿಕರನ್ನಷ್ಟೇ ಕೊಲ್ಲುತ್ತೇನೆ, ಪಾಂಡವರನ್ನು ಮುಟ್ಟುವುದಿಲ್ಲ ಎಂದು ಮಾತುಕೊಟ್ಟರೂ ಕೃಷ್ಣನಿಗೆ ಸಮಾಧಾನ ಇಲ್ಲ. ಅವನು ಮತ್ತೆ ಕುಂತಿಯನ್ನು ಕರ್ಣನೆಡೆಗೆ ಕಳುಹಿಸುತ್ತಾನೆ. ಕರ್ಣ ಜೀವನದ ಕರುಣಾಜನಕ ಸನ್ನಿವೇಶ ಅದು.
ಕುಮಾರವ್ಯಾಸ ನುರಿತ ಚಿತ್ರಕತೆಗಾರನಂತೆ ಆ ದೃಶ್ಯವನ್ನು ವರ್ಣಿಸುತ್ತಾನೆ. ಗಂಗಾತೀರದಲ್ಲಿ ಕರ್ಣ, ತಂದೆ ಸೂರ್ಯನ ಉಪಾಸನೆಯಲ್ಲಿರುವ ಹೊತ್ತಿಗೆ ಔದಾರ್ಯದ ಕಲ್ಪವೃಕ್ಷದಂತಿದ್ದ ಕುಂತಿ ಅಲ್ಲಿಗೆ ಬರುತ್ತಾಳೆ ಎನ್ನುವಲ್ಲಿ ಕುಮಾರವ್ಯಾಸನ ವ್ಯಂಗ್ಯ ಮೆರೆಯುತ್ತದೆ. ಕುಂತಿ ಬಂದದ್ದು ತಾನು ಹುಟ್ಟಿದ ತಕ್ಷಣವೇ ನೀರಲ್ಲಿ ತೇಲಿಬಿಟ್ಟ ಕರ್ಣನನ್ನು ಕೊಲಿಸುವುದಕ್ಕಲ್ಲವೇ?
ಅಲ್ಲಿ ಮತ್ತೊಂದು ವಿಚಿತ್ರವೂ ನಡೆಯುತ್ತದೆ. ಕುಂತಿಯನ್ನು ಕಂಡದ್ದೇ ತಡ, ಗಂಗೆ ನೀರಿನಿಂದೆದ್ದು ಬಂದು ನಿನ್ನ ಮಗನನ್ನು ನಾನು ಇಷ್ಟು ದಿನ ಕಾಪಾಡಿದೆ. ಈಗ ನಿನಗೆ ಒಪ್ಪಿಸುತ್ತಿದ್ದೇನೆ. ನೀನು ನನಗೆ ಕೊಟ್ಟ ಭಾಷೆಯನ್ನು ಉಳಿಸಿಕೊಂಡಿದ್ದೇನೆ ಎಂದು ಕರ್ಣನನ್ನು ಕುಂತಿಗೆ ಒಪ್ಪಿಸಿಹೋಗುತ್ತಾಳೆ. ಹೆತ್ತತಾಯಿ, ಪೊರೆದ ತಾಯಿ ಮತ್ತು ಆಕಾಶದಲ್ಲಿ ಹುಟ್ಟಿಸಿದ ತಂದೆ. ಈ ತ್ರಿಕೋನದ ನಡುವೆ ಏಕಾಂಗಿ ಕರ್ಣ. ಸೂರ್ಯನೂ ಆ ಕ್ಷಣ ಕರ್ಣನ ಬಳಿಗೆ ಬಂದು, ನಿಮ್ಮಮ್ಮನನ್ನು ನಂಬಬೇಡ, ಆಕೆ ಬಂದದ್ದು ನಿನ್ನ ಅಳಿವಿಗಾಗಿಯೇ ಹೊರತು, ಪ್ರೀತಿಯಿಂದಲ್ಲ ಅನ್ನುತ್ತಾನೆ. ಕರ್ಣನಿಗೆ ಪ್ರತಿಯೊಂದು ಮಾತೂ ಕರ್ಣಕಠೋರ.
ಕುಂತಿ ಕರ್ಣನನ್ನು ತನ್ನ ಜೊತೆಗೆ ಬಾ ಎಂದು ಕರೆದಾಗ ಕರ್ಣ ಹೇಳುವ ಮಾತು ಮಾರ್ಮಿಕವಾಗಿದೆ: ಇಂದೇನೋ ನಾನು ನಿನ್ನ ಮಗ ಎಂದು ನನಗೆ ಗೊತ್ತಾಯಿತು. ಆದರೆ ಇದ್ಯಾವುದೂ ಗೊತ್ತಿಲ್ಲದ ದಿನಗಳಲ್ಲಿ ನನ್ನನ್ನು ಕೌರವ ಸಲಹಿದ್ದಾನೆ. ಸ್ನೇಹಹಸ್ತ ಚಾಚಿದ್ದಾನೆ. ಅವನು ನನ್ನ ಕುಲ ನೋಡಲಿಲ್ಲ. ಅವನ್ನು ನಾನು ಬಿಟ್ಟು ಬರುವುದಿಲ್ಲ ಎನ್ನುತ್ತಾನೆ.
ಕುಂತಿ ಕೊನೆಗೂ ಕರ್ಣನಿಗೆ ಹೋದ ಬಾಣದ ಮರಳಿ ತೊಡದಿರು, ನನ್ನ ಐವರು ಮಕ್ಕಳನ್ನು ಕಾಪಾಡು’ ಎಂದು ಕೇಳಿಕೊಳ್ಳುತ್ತಾಳೆ. ಆರನೆಯ ಮಗನ ಹತ್ತಿರ ಐವರು ಮಕ್ಕಳನ್ನು ಕಾಪಾಡು ಎನ್ನುವ ಕುಂತಿಯ ಕ್ರೌರ್ಯವನ್ನು ಕೂಡ ಕರ್ಣ ಅನುಮಾನದಿಂದ ನೋಡುವುದಿಲ್ಲ. ಕರ್ಣ ನಿಜಕ್ಕೂ ನಿಷ್ಠುರನಾಗಿದ್ದರೆ? ಅವನಿಗೆ ದಾನಶೂರ ಎನ್ನಿಸಿಕೊಳ್ಳುವ ಹಂಬಲವೇ ಬಲವಾಗಿತ್ತಾ? ಕೇಳಿದ್ದನ್ನೆಲ್ಲ ಕೊಡುವುದು ಸದ್ಗುಣ ನಿಜ. ಅದು ಸದ್ಗುಣ ಎನ್ನಿಸಿಕೊಳ್ಳುವುದು ಕೇಳುವವರು ಯೋಗ್ಯರಾಗಿರುವ ತನಕ ಮಾತ್ರ. ಹಾಗಿಲ್ಲದೇ ಹೋದಾಗ ಕೊಡುವುದು ಕೊಡದಿರುವುದಕ್ಕಿಂತ ದೊಡ್ಡ ತಪ್ಪು.
ಒಮ್ಮೊಮ್ಮೆ ಹುಂಬನಂತೆ, ಮತ್ತೊಮ್ಮೆ ದಾರಿ ತಪ್ಪಿದವನಂತೆ, ಕೆಲವೊಮ್ಮೆ ಸೊರಗಿದವನಂತೆ, ಪ್ರೀತಿಗಾಗಿ ಕಾತರಿಸಿದವನಂತೆ, ಅಸಹಾಯಕನಂತೆ, ಅಬ್ಬೇಪಾರಿಯಂತೆ, ಒಳ್ಳೆಯ ಗೆಳೆಯನಂತೆ ಕಾಣಿಸುವ ಕರ್ಣ ಉದ್ದಕ್ಕೂ ತಪ್ಪುಗಳನ್ನು ಮಾಡುತ್ತಲೇ ಹೋದ. ನಿರಾಕರಿಸುವ ಶಕ್ತಿ ಕಳಕೊಂಡವನು ನಿರುಪಯುಕ್ತ ಅನ್ನಿಸುವುದು ಹೀಗೆ.
ವ್ಯಾಸರು ಸೃಷ್ಟಿಸಿದ ಪಾತ್ರಗಳ ಪೈಕಿ ಜಾಣತನ, ಕುಯುಕ್ತಿ ಇಲ್ಲದ ಬೋಳೇಸ್ವಭಾವದ ವ್ಯಕ್ತಿ ಕರ್ಣ. ಒಮ್ಮೊಮ್ಮೆ ಧರ್ಮರಾಯ ಕೂಡ ಅಧರ್ಮಿಯಂತೆ, ಸುಳ್ಳುಗಾರನಂತೆ ವರ್ತಿಸುತ್ತಾನೆ. ಕರ್ಣನೊಬ್ಬನೇ ನಮ್ಮಲ್ಲಿ ಅನುಕಂಪ ಮತ್ತು ಪ್ರೀತಿ ಉಕ್ಕಿಸುತ್ತಾನೆ.

Thursday, May 27, 2010

ಕತೆ-ಚಿತ್ರಕತೆ-ಸಂಭಾಷಣೆ (ಚಿತ್ರೀಕರಿಸಲಾಗದ ಒಂದು ವಿಫಲ ಸನ್ನಿವೇಶವು)

ಕತೆ:
ಬೆಂಗಳೂರು ಅಥವಾ ಬೆಂಗಳೂರಿನಂಥ ಒಂದೂರು. ಮುಂಜಾನೆ ಅಥವಾ ಮುಂಜಾನೆಯಂಥ ದಿನದ ಒಂದು ಅವಧಿ. ಇಪ್ಪತ್ತಮೂರು ವರ್ಷದ ಅಥವಾ ಇಪ್ಪತ್ತಮೂರು ವರ್ಷದವನಂತೆ ಕಾಣುವ ಹುಡುಗ. ಅವನ ಹೆಸರು ಕಿಟ್ಟಿ ಅಥವಾ ಬೇರೆ ಯಾವ ಹೆಸರಾದರೂ ಆಗಬಹುದು. ಅವನು ವೇಗವಾಗಿ ನಡೆಯುತ್ತಿದ್ದಾನೆ ಅಥವಾ ಓಡುತ್ತಿದ್ದರೂ ಓಡುತ್ತಿರಬಹುದು.
ತನ್ನನ್ನು ಯಾರು ಅಟ್ಟಿಸಿಕೊಂಡು ಬರುತ್ತಿದ್ದಾರೆ ಅನ್ನುವುದು ಅವನಿಗೂ ಗೊತ್ತಿಲ್ಲ. ಅವನು ಒಂದೇ ಸಮ ಓಡುತ್ತಲೇ ಇದ್ದಾನೆ. ಓಡುತ್ತಾ ಓಡುತ್ತಾ ಹೋಗಿ ಈ ಜಗತ್ತಿನ ಅಂತ್ಯವನ್ನು ತಲುಪುತ್ತಾನೆಯ ಅಲ್ಲಿಂದಾಚೆ ಓಡುವುದಕ್ಕೆ ನೆಲವಿಲ್ಲ, ಆಕಾಶವಿಲ್ಲ, ನೀರಿಲ್ಲ. ಇದ್ದಕ್ಕಿದ್ದಂತೆ ಅಲ್ಲಿಗೆ ಜಗತ್ತೇ ಮುಗಿದುಹೋದ ಹಾಗೆ.
ಜಗತ್ತು ಹಾಗೆ ಮುಗಿದು ಹೋಗುವುದಿಲ್ಲ ಎಂದು ಅವನಿಗೆ ಗೊತ್ತು. ಜಗತ್ತು ದುಂಡಗಿದೆ. ಇಡೀ ವಿಶ್ವ ಸುತ್ತಿದರೂ ಮತ್ತೆ ಹೊರಟಲ್ಲಿಗೇ ಬರುತ್ತಿರಬೇಕು ಅನ್ನುವುದು ಬಲ್ಲ ವಿಜ್ಞಾನದ ಹುಡುಗ ಅವನು. ಅವನು ಸುತ್ತುತ್ತಿರುವುದು ಈ ಜಗತ್ತನ್ನಲ್ಲ, ಒಳಜಗತ್ತನ್ನು. ಅದಕ್ಕೆ ಕೊನೆಯುಂಟು. ಜಗದ ಅಂಚಿಗೆ ಬಂದು ಇನ್ನೇನು ಕೆಳಗೆ ಬಿದ್ದೇ ಬೀಳುತ್ತೇನೆ ಎಂಬಂತೆ ಅವಚಿಕೊಂಡು ನಿಂತಾಗ ನೆನಪಾಗುವುದು ಅಮ್ಮ. ಇಷ್ಟಗಲ ಕುಂಕುಮದ, ಸುಕ್ಕುಮೋರೆಯ, ಚೂಪುಗಣ್ಣಿನ, ಅಪ್ಪನೊಡನೆ ಸದಾ ಜಗಳಾಡುವ, ಮನೆ ಮುಂದೆ ಬರುವ ಮಕ್ಕಳ ಕೈಗೆ ತುತ್ತು ಹಾಕುವ, ಸಾಕಿದ ನಾಯಿಯನ್ನು ಸಾಯಬಡಿಯುವ, ನೀನ್ಯಾಕಾದರೂ ಹುಟ್ಟಿದೆ ನನ್ನ ಹೊಟ್ಟೆ ಉರಿಸೋದಕ್ಕೆ ಎಂದು ಚೀರಾಡಿ ಅಳುವ ಅಮ್ಮ.
ಅಮ್ಮನ ನೆನಪಾದಾಗ ಕಣ್ಮುಂದೆ ಬರುವುದು ಅಪ್ಪ. ನಿರ್ಲಿಪ್ತನಂತೆ ಕೂತಿರುವ, ಮನಸ್ಸಿನಲ್ಲೇ ನೂರೆಂಟು ಕಳ್ಳದಾರಿಗಳನ್ನು ಹುಡುಕಿಕೊಳ್ಳುತ್ತಿರುವ, ಪಾರೋತಿಯ ಮನೆಗೆ ಹೋಗಿ ಅವಳನ್ನು ಮುದ್ದಾಡಿ ಬರುವ, ಗಂಗಣ್ಣನ ಗಡಂಗಿನಲ್ಲಿ ಸಾಲ ಕೇಳುವ, ಕೆಲಸ ಕೊಟ್ಟವರನ್ನು ಹೀನಾಮಾನ ಬೈಯುವ, ಬೆಳಗ್ಗೆ ಅವರ ಮುಂದೆಯೇ ಕೈ ಕಟ್ಟಿ ನಿಲ್ಲುವ, ಮಗನನ್ನು ವಾರೆಗಣ್ಣಿಂದ ಗಮನಿಸುತ್ತ, ಅವನು ತನ್ನ ಪ್ರತಿಸ್ಪರ್ಧಿ ಎಂಬಂತೆ ನೋಡುವ, ಖುಷಿಯಾದಾಗ ಹೆಗಲ ಮೇಲೆ ಕೂರಿಸಿಕೊಂಡು ಮಗಳನ್ನು ಸಂತೆಗೆ ಕರೆದೊಯ್ಯುವ ಅಪ್ಪ.
ಇವರಿಬ್ಬರ ಮಧ್ಯೆ ಅಕ್ಕ ಇದ್ದಾಳೆ. ಅವಳಿಗೊಬ್ಬ ಪ್ರೇಮಿ. ಅವನು ಕೂಡ ಇದೇ ಅಪ್ಪನಂಥ ಅಪ್ಪನಿಗೆ, ಅಮ್ಮನಂಥ ಅಮ್ಮನಿಗೆ ಹುಟ್ಟಿದವನು. ಕೆಲಸವೇನು ಎಂದರೆ ಕೆಲಸವಿಲ್ಲ. ಕೆಲಸವಿಲ್ಲ ಅಂದರೆ ಒಂದರೆಗಳಿಗೆ ಬಿಡುವಿಲ್ಲ. ಕೈಲಿ ಕಾಸಿಲ್ಲದಿದ್ದರೂ ಹೆಮ್ಮೆಯಿಂದ ಓಡಾಡುವ, ಸಿನಿಮಾ ನೋಡುವ, ಯಾರದೋ ಬೈಕು ತಂದು ಸುತ್ತಾಡುವ, ಯಾರಿಗೋ ಹೊಡೆದು ಹೊಡೆಸಿಕೊಂಡು ದಿನಗಟ್ಟಲೆ ಮನೆಯಿಂದಾಚೆ ಬರದ, ತಲೆಗೆ ಎಣ್ಣೆ ಹಾಕದ, ತಲೆ ಬಾಚಿಕೊಳ್ಳದ, ಬಣ್ಣಬಣ್ಣದ ಶರಟು ಹಾಕುವ ಹುಡುಗ ಅವಳ ಪ್ರೇಮಿ.
ಅಲ್ಲೊಂದು ಪುಟ್ಟ ನಾಯಿ, ಸುಳಿದು ಬರುವ ರೇಲು, ಅದರಿಂದ ಪ್ರತಿದಿನವೂ ಇಳಿಯುವ ಹತ್ತುವ ಜೀನ್ಸ್ ತೊಟ್ಟ ಹುಡುಗಿ, ಅವಳು ಕೆಲಸ ಮಾಡುವ ಕಲಾಸಿಪಾಳ್ಯಂನ ರೇಷ್ಮೆ ಅಂಗಡಿ, ಅವಳನ್ನು ಹಿಂಬಾಲಿಸುವ ಅಕ್ಕನ ಪ್ರೇಮಿ. ಅಕ್ಕನಿಗೂ ಆ ಬಗ್ಗೆ ಗುಮಾನಿ. ಅವಳು ಜೀನ್ಸ್ ತೊಟ್ಟ ಕಾರಣಕ್ಕೇ, ಅವನಿಗಿಷ್ಟ. ಒಂದು ದಿನ ಅಕ್ಕನೂ ಜೀನ್ಸ್ ತೊಟ್ಟುಕೊಂಡು ಬಂದು ಅವನಿಗೆ ದಾರಿಯಲ್ಲಿ ಎದುರಾಗಿ ಇಬ್ಬರೂ ಡಿಕ್ಕಿಹೊಡೆದು ಬಿದ್ದು, ಎದ್ದು ಕಣ್ತೆರೆದರೆ ಏಳು ಸಮುದ್ರದ ಆಚೆಗಿರುವ ನ್ಯೂಯಾರ್ಕ್.
ಆಮೇಲೊಂದು ಹಾಡು, ಹೊಡೆದಾಟ, ವಿರಹ, ಉಪದೇಶ, ನೀತಿಕತೆ, ಕ್ಲೈಮ್ಯಾಕ್ಸ್ ಮತ್ತು ಶುಭಂ.


ಚಿತ್ರಕತೆ:
ದೃಶ್ಯ -೧
ಹಗಲು/ಹೊರಾಂಗಣ
ಒಂದು ನಿರ್ಜನ ಬೀದಿ, ಓಡುತ್ತಿರುವ ಯುವಕ. ಅಟ್ಟಿಸಿಕೊಂಡು ಬರುತ್ತಿರುವ ಅನಾಮಿಕರು. ಹುಡುಗ ಓಡುತ್ತಾ ಹೋಗುತ್ತಿದ್ದಂತೆ ರಸ್ತೆ ಕೊನೆಯಾಗುತ್ತದೆ. ಇನ್ನು ಎತ್ತಲೂ ಓಡುವುದುಕ್ಕೆ ಜಾಗವೇ ಇಲ್ಲ ಎಂಬ ಸ್ಥಿತಿಗೆ ತಲುಪಿದಾಗ ಅಟ್ಟಿಸಿಕೊಂಡು ಬಂದವರು ಹುಡುಗನ ಮೇಲೆ ಆಕ್ರಮಣ ಮಾಡುತ್ತಾರೆ. ಹುಡುಗ ಅವರ ಮೇಲೆ ಮುಗಿಬಿದ್ದು ಹೋರಾಟ ನಡೆಸುತ್ತಾನೆ. ಆದರೆ ಬಂದವರ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಅವನು ಸೋಲುತ್ತಾನೆ. ಅವನನ್ನು ಕತ್ತರಿಸಿ ಅವರು ಹೊರಡುತ್ತಾರೆ. ಛಿಲ್ಲನೆ ಚಿಮ್ಮಿದ ರಕ್ತ. ಕೆಮರಾದ ಲೆನ್ಸಿಗೆ ಚೆಲ್ಲಿಂದಂತೆ ರಕ್ತ. ರಂಗೋಲಿಯ ಹಾಗೆ ಬಿದ್ದಿರುವ ರಕ್ತ. ಪಕ್ಕದಲ್ಲಿ ಬಿದ್ದಿರುವ ಹುಡುಗನ ದೇಹದ ಒಂದು ಭಾಗ, ಭುಜ, ಒಮ್ಮೆ ಕಂಪಿಸಿ ಸುಮ್ಮನಾಗುತ್ತದೆ.
ದೃಶ್ಯ -೨
ಹಗಲು/ಹೊರಾಂಗಣ
ಅವಳು ಒಬ್ಬಳೇ ಕೂತಿದ್ದಾಳೆ. ಅವಳ ಕಣ್ಣಲ್ಲಿ ಹನಿ ನೀರು. ಎದುರಿಗೆ ಹೊಳೆ ಹರಿಯುತ್ತಿದೆ. ಅವಳು ಎದ್ದು ಮುಖ ತೊಳೆದುಕೊಳ್ಳಲು ಹೊಳೆಗಿಳಿಯುತ್ತಾಳೆ. ಬೊಗಸೆಯೊಡ್ಡಿ ಕೈತುಂಬ ನೀರು ತುಂಬಿಕೊಂಡರೆ ಅದು ನೀರಲ್ಲ ರಕ್ತ. ಅವಳು ಬೆಚ್ಚಿಬೀಳುತ್ತಾಳೆ. ಕೈಯಲ್ಲಿದ್ದ ನೀರನ್ನು ಚೆಲ್ಲಿ ಹೊಳೆಯತ್ತ ನೋಡುತ್ತಾಳೆ. ಹೊಳೆ ತುಂಬ ರಕ್ತ, ಮಾಂಸಲಖಂಡ, ಕೈ ಕಾಲು, ರುಂಡಗಳು ತೇಲಿ ಬರುತ್ತಿವೆ. ಅವಳು ಚೀತ್ಕಾರ ಮಾಡುತ್ತಾ ಓಡೋಡಿ ಬರುತ್ತಾಳೆ.
ದೃಶ್ಯ -೩
ರಾತ್ರಿ/ಒಳಾಂಗಣ/ಹೊರಾಂಗಣ
ದೀಪದ ಮುಂದೆ ಅವ್ವ ಕೂತಿದ್ದಾಳೆ. ದೀಪದ ಕುಡಿಯ ಸಮೀಪದೃಶ್ಯ. ಕ್ರಮೇಣ ಅದು ಅವ್ವನ ಕಣ್ಣಂಚಿನಲ್ಲಿರುವ ಹನಿಯಾಗುತ್ತದೆ. ಅವಳು ಭುಜದ ಮೇಲೆ ಕೈಯಿಟ್ಟು ಮಲಗಿದ್ದಾಳೆ. ಪಕ್ಕದಲ್ಲಿ ಕೆಮ್ಮುತ್ತಾ ಕೂತಿರುವ ಅಪ್ಪ, ಅವರಿಬ್ಬರ ಪಕ್ಕದಲ್ಲಿ ಅಕ್ಕ. ಅಪ್ಪನ ಮುಖದಲ್ಲಿ ಭಯವಾಗಲೀ, ನೋವಾಗಲೀ, ಅವಮಾನವಾಗಲೀ ಇಲ್ಲ. ಅಕ್ಕನ ಮುಖದಲ್ಲಿ ಸಂಕಟ ಮತ್ತು ಸಿಟ್ಟು. ಅವ್ವನ ಕಣ್ಣಲ್ಲಿ ರೋಷ. ಅವ್ವ ತಲೆಯೆತ್ತಿ ನೋಡುತ್ತಾಳೆ. ಅಪ್ಪ ಬೀಡಿ ತುಟಿಗಿಡುತ್ತಾನೆ. ಅವ್ವ ಪಕ್ಕದಲ್ಲಿದ್ದ ಸೀಮೆಎಣ್ಣೆ ಕ್ಯಾನ್ ಎತ್ತಿಕೊಂಡು ಅಪ್ಪನ ಹತ್ತಿರ ಹೋಗಿ ಅವನ ನೆತ್ತಿಗೆ ಅದನ್ನು ಸುರಿಯುತ್ತಾಳೆ. ಬೆಂಕಿಕಡ್ಡಿಗಾಗಿ ಹುಡುಕಾಡುತ್ತಾಳೆ. ಅಪ್ಪ ಭಯಗೊಂಡು ಓಡಿ ಹೋಗುತ್ತಾನೆ. ಹಾಗೆ ಓಡಿಹೋಗುತ್ತಾ ಹೋಗುತ್ತಾ ಅವನ ಮೈಗೆ ಬೆಂಕಿ ಹತ್ತಿಕೊಳ್ಳುತ್ತದೆ. ಅವ್ವ ಓಡಿ ಹೋಗಿ ಅವನ ಕೈ ಹಿಡಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ಆ ದೇಹ ಅವಳ ಕೈಯ ದೊಂದಿಯಾಗುತ್ತದೆ. ಅವಳು ಅದನ್ನು ಹಿಡಕೊಂಡು ಓಡತೊಡಗುತ್ತಾಳೆ.
ದೃಶ್ಯ -೪
ರಾತ್ರಿ/ಹೊರಾಂಗಣ
ಒಂದು ಗುಡ್ಡದ ಮೇಲೆ ಕೂತಿರುವ ಅಕ್ಕ. ಅವಳ ಕೂದಲು ಜ್ಯಾಲೆಯಂತೆ ಉರಿಯುತ್ತಿದೆ. ಅವಳು ತಿರುಗಿ ನೋಡುತ್ತಾಳೆ. ಆ ಪ್ರೇಮಿ ಅಲ್ಲಿ ನಿಂತಿದ್ದಾನೆ. ಅವನು ಸೊಂಟಕ್ಕೊಂದು ತುಂಡು ಬಟ್ಟೆ ಸುತ್ತಿಕೊಂಡಿದ್ದಾನೆ. ಮೈಯೆಲ್ಲ ಕಾದು ಕಂಪಿಸುತ್ತಿದೆ. ಅಕ್ಕ ಅವನನ್ನು ನೋಡಿದವಳೇ ಹತ್ತಿರ ಹೋಗಿ ಅವನನ್ನು ತಳ್ಳುತ್ತಾಳೆ. ಅವನು ಕಮರಿಯಿಂದ ಬೀಳಬೇಕು ಅನ್ನುವಷ್ಟರಲ್ಲಿ ತಾನೂ ಅವನನ್ನು ಹಿಡಿದುಕೊಳ್ಳುತ್ತಾಳೆ. ಇಬ್ಬರೂ ಕಣಿವೆಗೆ ಬೀಳುತ್ತಾ ಬೀಳುತ್ತಾ ಚುಂಬಿಸುತ್ತಾರೆ. ನೋಡನೋಡುತ್ತಿದದ ಹಾಗೇ ಹಕ್ಕಿಯಾಗಿ ಹಾರುತ್ತಾರೆ. ಕಣಿವೆಯ ಕಲ್ಲಿನಾಚೆಗೆ, ಆ ಹಕ್ಕಿಗಳನ್ನು
ಗುಂಡಿಟ್ಟು ಸಾಯಿಸಲು ಕಾದು ಕೂತ ಮೀಸೆಯವನು ಗುಂಡು ಹಾರಿಸುತ್ತಾನೆ. ಗುಂಡಿನ ಸದ್ದಿನ ಬೆನ್ನಿಗೇ ಆಕಾಶ ರಕ್ತಸಿಕ್ತ ಕೆಂಪು. ಎಲ್ಲವೂ ಸ್ತಬ್ಧ.
ದೂರದಲ್ಲಿ ಎಲ್ಲೋ ಅವ್ವನ ಚೀತ್ಕಾರ ಕೇಳಿಸುತ್ತಿದೆ. ವೇಗವಾಗಿ ಚಲಿಸುತ್ತಿರುವ ಕೆಮರಾ. ಎಲ್ಲವನ್ನು ಹಿಂದಿಕ್ಕಿಕೊಂಡು ಮುಂದೆ ಸಾಗುತ್ತಾ ಸಾಗುತ್ತಾ ಥಟ್ಟನೆ ನಿಲ್ಲುತ್ತದೆ.
ಅಲ್ಲಿ ಒಂದು ಮುಚ್ಚಿದ ಬಾಗಿಲು. ಅದು ನಿಧಾನವಾಗಿ ತೆರೆದುಕೊಳ್ಳುತ್ತದೆ. ಅದರಾಚೆಗೆ ನೋಡಿದರೆ ಬರೀ ಶೂನ್ಯ. ಜನರಿಲ್ಲದ, ಕಾಡಿಲ್ಲದ, ಆಕಾಶ ಇಲ್ಲದ, ಯಾರೂ ಇಲ್ಲದ ನಾಡು.
ದೃಶ್ಯ -೫
ರಾತ್ರಿ/ಹೊರಾಂಗಣ
ಮರದ ನೆರಳು, ಚಂದಿರನ ಬೆಳಕು. ಅವರಿಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ದೇಹಗಳು ಉರುಳಾಡುತ್ತಿವೆ. ಪೊದೆಯ ಮರೆಯಿಂದ ಸರ್ಪವೊಂದು ಬಂದು ಅವರಿಬ್ಬರನ್ನೂ ಸುತ್ತಿಕೊಳ್ಳುತ್ತದೆ. ಅದರ ಪರಿವೆಯೂ ಇಲ್ಲದಂತೆ ಸರ್ಪವನ್ನು ಮೈ ಮೇಲಿನ ಬಟ್ಟೆಯಂತೆ ಭಾವಿಸುತ್ತಾ ಅವರು ಪ್ರೀತಿಮಗ್ನ. ಆಕಾಶದಲ್ಲಿ ಹಾರುತ್ತಿರುವ ಗರುಡ. ಆ ಪಕ್ಷಿ ಹಾರುತ್ತಾ ಹಾರುತ್ತಾ ಬಂದು, ಅವರಿಬ್ಬರ ಸಮೇತ ಸರ್ಪವನ್ನೂ ಎತ್ತಿಕೊಂಡು ಹೋಗುತ್ತದೆ. ಸಾಗರಗಳ ಮೇಲೆ ಹಾರುತ್ತಿರುವ ಗರುಡ.
ಇದ್ದಕ್ಕಿದ್ದಂತೆ ಗರುಡನ ಕಣ್ಣಿಗೆ ಮತ್ತೊಂದು ಸರ್ಪ ಕಾಣಿಸುತ್ತದೆ. ಕೊಕ್ಕಿನಲ್ಲಿ ಕಚ್ಚಿಕೊಂಡಿರುವ ಸರ್ಪವನ್ನು ಬಿಟ್ಟು, ಅದು ಆಗಷ್ಟೇ ಕಂಡ ಸರ್ಪದತ್ತ ಧಾವಿಸುತ್ತದೆ. ಆ ಸರ್ಪ, ಅದು ಸುತ್ತಿಕೊಂಡಿರುವ ಅವರಿಬ್ಬರು, ಆಕಾಶದಲ್ಲಿ ತೇಲುತ್ತಾ ತೇಲುತ್ತಾ ಬೇರೆ ಬೇರೆಯಾಗಿ ಎಲ್ಲೆಲ್ಲೋ ಬೀಳುತ್ತಾರೆ.
ಅವನು ಬಿದ್ದ ಜಾಗದಲ್ಲಿ ಮಹಾನಗರ. ಅವಳು ಬಿದ್ದ ಜಾಗದಲ್ಲಿ ಮಹಾರಣ್ಯ ಮತ್ತು ಸರ್ಪಬಿದ್ದ ಜಾಗದಲ್ಲಿ ಮಹಾಸಮುದ್ರವೊಂದು ಹುಟ್ಟಿಕೊಂಡು....

ಸಂಭಾಷಣೆ:

ಅವ್ವ: ಬೆಂಕಿ ಬೇಕು ನಂಗೆ. ಬೆಂಕಿ. ನನ್ನ ಮಗನ ಕಣ್ಣಲ್ಲೂ ಬೆಂಕಿಯಿಲ್ಲ, ಮಗಳ ಮೈಯಲ್ಲೂ ಬೆಂಕಿಯಿಲ್ಲ. ದರಿದ್ರ ಬಡಿದ ಜನ. ರೊಚ್ಚಿಗೇಳದ ಮನುಷ್ಯರು. ಓಡಿಹೋಗೋ ಮಂದಿ. ಬಸ್ಸು, ಕಾರು, ವಿಮಾನ, ಸೈಕಲ್ಲು, ಮೋಟರ್ ಸೈಕಲ್ಲು ಏನಾದ್ರೊಂದು ಹಿಡಕೊಂಡು ತಪ್ಪಿಸಿಕೊಳ್ಳೋಕೆ ನೋಡೋ ಶನಿಗಳು. ಇವರನ್ನು ಹುಟ್ಟಿಸೋದೇ ತಪ್ಪು.. ಬೆಳೆಸೋದೂ ತಪ್ಪು. ಕೊಚ್ಚಿ ಹಾಕ್ರೋ ಎಲ್ಲರನ್ನೂ..
ಮಗ: ಓಡ್ತಾನೇ ಇರಬೇಕು. ಓಡ್ತಾನೇ ಇರಬೇಕು. ಎಲ್ಲಿಗೆ ಹೋಗಿ ಮುಟ್ತೀನಿ ಅಂತ ಗೊತ್ತಿಲ್ಲದೇ ಇದ್ರೂ ಓಡ್ತಾನೇ ಇರಬೇಕು. ನಿಂತ್ರೆ ಭಯ ಆಗುತ್ತೆ. ನಿಂತೇಬಿಟ್ಟೆ ಅನ್ಸುತ್ತೆ. ಓಡ್ತಿದ್ರೆ ಏನೋ ಒಂದು ಸಮಾಧಾನ. ಕಾಲಿಗೆ ದಣಿವಾಗುತ್ತೆ, ನಿದ್ದೆ ಬರುತ್ತೆ. ಮತ್ತೆ ಎದ್ದು ಓಡ್ತಾ ಇರೋದು. ಕಾರಿಗಿಂತ ಬಸ್ಸಿಗಿಂತ ವಿಮಾನಕ್ಕಿಂತ ರೈಲಿಗಿಂತ ವೇಗವಾಗಿ ಓಡೋದು.
ಅಕ್ಕ: ನನ್ನ ಕೂದಲಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಹೊತ್ತಿ ಉರೀತಿದೆ. ಎಲ್ಲೂ ಒಂಚೂರು ನೀರಿಲ್ಲ, ನಾನು ತಲೆ ತೊಳ್ಕೋಬೇಕು. ನೀರಲ್ಲಿ ನೆತ್ತಿ ಅದ್ದಬೇಕು. ಬೆಂಕಿ ಆರಿಸ್ಕೋಬೇಕು. ಸುಟ್ಟು ಬೂದಿಯೂ ಆಗದ, ಹೊತ್ತಿ ಬತ್ತಿಯೂ ಆಗದ, ನೆತ್ತಿ ಭಸ್ಮವೂ ಆಗದ ಈ ಬೆಂಕಿ ಬೇಡ ನಂಗೆ.. ಆರಿಸ್ರೋ ಯಾರಾದ್ರೂ... ಯಾರೂ ಇಲ್ವೇ ಅಲ್ಲಿ..
ಪ್ರೇಮಿ; ಅವಳು ಕೇಳಿದ್ದೆಲ್ಲ ಕೊಟ್ಟೆ. ಕೇಳದೇ ಇದ್ದಿದ್ದನ್ನೂ ಕೊಟ್ಟೆ. ಮತ್ತೂ ಬೇಕು ಅಂತಿದ್ದಾಳೆ. ಖಂಡವಿದೆಕೋ ಮಾಂಸವಿದೆಕೋ ಅಂದ್ರೇನೇ ಅವಳಿಗೆ ಸಂತೋಷ. ಆದ್ರೆ ಅವಳು ಹುಲಿ ಥರ ಬೆಟ್ಟದಿಂದ ಹಾರಿ ಪ್ರಾಣ ಬಿಡಲ್ಲ. ಬೇಟೆ ಆಡ್ತಾಳೆ. ನನ್ನನ್ನೇ ಬೇಟೆ ಆಡ್ತಾಳೆ. ನನ್ನ ಮುಟ್ಟಿ ಬೇಟೆ ಆಡ್ತಾಳೆ. ಮುಟ್ಟದೇ ಬೇಟೆ ಆಡ್ತಾಳೆ. ಬೇರೆಯವರ ಜೊತೆ ನಗ್ತಾ ನಗ್ತಾ ಬೇಟೆಯಾಡ್ತಾಳೆ. ಮುನಿಸಿಕೊಂಡು ಬೇಟೆಯಾಡ್ತಾಳೆ. ಬೇಕು ಅನ್ನಿಸಿ, ಬೇಡ ಅನ್ನಿಸಿ ಬರೀ ಬೇಟೆ ಆಡ್ತಾಳೆ.
ದೇವರು: ಇಲ್ಲದೇ ಇದ್ದಿದ್ದನ್ನು ಹುಡುಕ್ತಾರೆ, ಇದ್ದಿದ್ದು ಬೇಡ ಅಂತಾರೆ. ನಾನಿದ್ದೀನೋ ಇಲ್ವೋ ಅಂತ ನಂಗೇ ಗೊತ್ತಿಲ್ಲ. ಅವರಿಗೆ ಗೊತ್ತು. ನನ್ನ ಹುಡುಕೋದಕ್ಕೆ ಜ್ಯೋತಿಷ್ಯ, ಶಾಸ್ತ್ರ, ಕುಂಡಲಿ, ಜಾತಕ, ದೇವಸ್ಥಾನ, ಬ್ರಹ್ಮಕಲಶ, ಬಲಿ, ದಾನ, ಧರ್ಮ. ನಾನೇ ಇಲ್ಲ. ನಾನು ನೀನೇ ಅಂದ್ರೆ ಕೇಳಲ್ಲ.
ಬಡ್ಡೀಮಕ್ಳಾ.. ನಾನು ಸತ್ತೋಗಿದ್ದೀನಿ ಕಣ್ರೋ....

Wednesday, May 12, 2010

ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ..

ಬೆಂಗಳೂರಿನ ಬೇಸಗೆಯ ಬಣ್ಣ ಯಾವುದು ಒಂದು ಯೋಚಿಸುತ್ತಿದ್ದೆ. ನಮ್ಮರಲ್ಲಂತೂ ಬೇಸಗೆ ಸುಡುಹಳದಿ. ಮಳೆಗಾಲ ಕಡು ಹಸಿರು. ಚಳಿಗಾಲಕ್ಕೂ ಬೇಸಗೆಗೂ ಅಂಥ ವ್ಯತ್ಯಾಸವಿಲ್ಲ. ಒಂದಷ್ಟು ಮರಗಳು ಎಲೆಯುದುರಿಸಿ ನಿಂತದ್ದು ಬಿಟ್ಟರೆ, ಹಗಲಿಡೀ ಅದೇ ಸುಡುವ ಸೂರ್ಯ ಮತ್ತು ಆ ಬೆಳಕಲ್ಲಿ ಮತ್ತಷ್ಟು ಚಪ್ಪಟೆಯಾಗಿ ಕಾಣುವ ಚಿತ್ರಗಳು.
ಆದರೆ ಬೆಂಗಳೂರಲ್ಲಿ ಹಾಗಲ್ಲ. ಅಲ್ಲಿ ಋತುಗಳು ಬದಲಾದದ್ದೇ ಗೊತ್ತಾಗುವುದಿಲ್ಲ. ಇದೀಗ ವಸಂತ ಋತು ಅನ್ನುವುದಾಗಲೀ, ಇದು ಶಿಶಿರ ಅನ್ನುವುದಾಗಲೇ ಪ್ರಕೃತಿಯಿಂದ ಗೊತ್ತಾಗಬೇಕೇ ಹೊರತು ಕ್ಯಾಲೆಂಡರಿನಿಂದಲ್ಲ. ಬೆಂಗಳೂರಿನಿಂದ ಕೊಂಚ ಆಚೆಗೆ ಹೋದರೆ ಮುಂಜಾನೆ ಹೊತ್ತಲ್ಲಿ ದಟ್ಟ ಮಂಜು ಕವಿದಿರುತ್ತದೆ. ಆದರೆ ಬೆಂಗಳೂರಲ್ಲಿ ಮಂಜು, ಮಳೆ ಮತ್ತು ಬಿಸಿಲು ಮೂರೂ ಅಕಾಲಿಕ. ಇಲ್ಲಿ ಮಳೆಯಾದರೂ ಅದು ಬ್ರೇಕಿಂಗ್ ನ್ಯೂಸ್.
ನನಗೆ ಬೇಸಗೆ ಇಷ್ಟ. ಬೇಸಗೆಯಲ್ಲಿ ಪ್ರಕೃತಿ ಉಳಿದೆಲ್ಲ ಕಾಲಕ್ಕಿಂತ ಸಮೃದ್ಧವಾಗಿರುತ್ತದೆ. ಬೇಸಗೆಯ ಆರಂಭಕ್ಕೆ ಎಲ್ಲ ಮರಗಳೂ ಹೂ ಬಿಡುತ್ತವೆ. ನಡುಬೇಸಗೆಯ ಹೊತ್ತಿಗೆ ಫಲವತಿ ಪೃಥ್ವಿ. ಮಾವಿನ ಹಣ್ಣು, ಗೇರುಹಣ್ಣು, ನೇರಳೆ, ಪೇರಲ ಮತ್ತು ಹೆಸರಿಲ್ಲದ ನೂರೆಂಟು ಹಣ್ಣುಗಳ ಸುಗ್ಗಿಕಾಲ ಅದು. ಜಂಬುನೇರಳೆಯೆಂಬ ರುಚಿರುಚಿಯಾದ ಹಣ್ಣಿಗೆ ಮನಸ್ಸು ಹಂಬಲಿಸುತ್ತದೆ. ತುಮಕೂರು, ಗುಬ್ಬಿ, ಚಿಕ್ಕಮಗಳೂರು ಮುಂತಾದ ಕಡೆ ತಾಳೆಗಿಡಗಳು ಖರ್ಜೂರದ ರುಚಿಯ ಹೊಂಬಣ್ಣದ ಹಣ್ಣನ್ನು ಮೈತುಂಬ ತುಂಬಿಕೊಂಡು ಆಕರ್ಷಿಸುತ್ತವೆ.
ಇಂಥ ಬೇಸಗೆಯಲ್ಲೇ ಎಷ್ಟೋ ಸಲ ಕಾದಂಬರಿಗೊಂದು ವಸ್ತು ಸಿಗುತ್ತದೆ. ಯಾರೋ ಬರೆದ ರುಚಿಕಟ್ಟಾದ ಕಾದಂಬರಿಯೊಂದು ಹೇಗೋ ಕೈ ಸೇರುತ್ತದೆ. ಮೊನ್ನೆ ಹಾಗೇ ಆಯ್ತು. ಯುಸುನಾರಿ ಕವಾಬಾಟ ಎಂಬ ಜಪಾನ್ ಕಾದಂಬರಿಕಾರ ಬರೆದ ಸಾವಿರ ಪಕ್ಷಿಗಳು’ ಎಂಬ ಪುಟ್ಟ ಕಾದಂಬರಿ ಹೇಗೋ ಕೈಸೇರಿತು. ಹಳೆಯ ಕಾಲದ ಕಾದಂಬರಿ ಎಂದುಕೊಂಡು ನಿರ್ಲಕ್ಷಿಸಿದ್ದನ್ನು ಸೆಕೆಗೆ ನಿದ್ದೆ ಬಾರದ ರಾತ್ರಿ ಕೈಗೆತ್ತಿಕೊಂಡಾಗ ಬೆಳಗಿನ ತನಕ ಓದಿಸಿಕೊಂಡಿತು.
ತುಂಬ ವಿಚಿತ್ರವಾಗಿ ಬರೆಯುತ್ತಾನೆ ಕವಾಬಾಟ. ಕಿಕುಜಿ ಎಂಬ ಹುಡುಗನ ಕತೆ ಅದು. ಕಾದಂಬರಿಯಲ್ಲಿ ಎಲ್ಲೂ ತುಂಬ ಅಚ್ಚರಿ ಹುಟ್ಟಿಸುವ ಚಿತ್ರಗಳು ಎದುರಾಗುವುದಿಲ್ಲ. ಆ ಪುಟ್ಟ ಹುಡುಗ ತನ್ನ ತಂದೆಯನ್ನು ಗೆಲ್ಲುವ ಕತೆ ಅದು ಅಂತ ಮುನ್ನುಡಿ ಓದಿದ ಮೇಲೆ ನನಗೂ ಅನ್ನಿಸಿತು. ಕಾದಂಬರಿಯನ್ನಷ್ಟೇ ಓದಿದಾಗ ನೆನಪಾದದ್ದು ನಮ್ಮ ಬಾಲ್ಯ. ನಮ್ಮೂರು, ನಮ್ಮೂರಿನ ರೂಪಸಿಯರು ಮತ್ತು ಎಲ್ಲರೂ ಸಿಟ್ಟಿನಿಂದ ನೋಡುತ್ತಿದ್ದ ಆದರೆ, ನಮ್ಮಂಥ ಹುಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದ್ದ ದಿಟ್ಟೆಯರು.
ಹೇಗೆ ನಮ್ಮ ಅಭಿಪ್ರಾಯಗಳು ಬದಲಾಗುತ್ತಾ ಹೋಗುತ್ತವೆ ಎಂದು ಯೋಚಿಸುತ್ತೇನೆ. ಚಿಕ್ಕವರಿದ್ದಾಗ ಈ ರೂಪಸಿಯರು ಅಮ್ಮನ ಕಣ್ಣಿಗೋ ಅತ್ತಿಗೆಯ ಕಣ್ಣಿಗೋ ಸವತಿಯರ ಹಾಗೆ, ಸ್ಪರ್ಧಿಗಳ ಹಾಗೆ ಕಾಣಿಸುತ್ತಾರೆ ಎಂದು ನಮಗೆ ಅನ್ನಿಸಿರಲೇ ಇಲ್ಲ. ಅವರ ಜೀವನೋತ್ಸಾಹ, ಗಟ್ಟಿ ನಗು, ಆತ್ಮವಿಶ್ವಾಸ, ನಾಜೂಕು ಎಲ್ಲವೂ ಇಷ್ಟವಾಗುತ್ತಿತ್ತು. ಆದರೆ ಅದನ್ನು ಅದುಮಿಡುವ, ಹೀಗಳೆಯುವ ಹೆಂಗಸರನ್ನೂ ನೋಡಿದ್ದೆ. ಒಂದು ಹೊಸ ಸ್ನೇಹ ಅರಳಬಹುದು ಎಂಬ ನಿರೀಕ್ಷೆಯಲ್ಲಿ ಗಂಡಸರೂ ಆತಂಕದಲ್ಲಿ ಹೆಂಗಸರೂ ಬದುಕುತ್ತಿರುತ್ತಾರೆ ಎಂದು ಆಮೇಲೆ ಗೊತ್ತಾಯಿತು. ಈಗ ಅಂಥ ಆತಂಕ ಹುಡುಗರಲ್ಲೂ ಮನೆ ಮಾಡಿಕೊಂಡಿದೆ. ತನ್ನನ್ನು ಪ್ರೀತಿಸುವ ಹುಡುಗಿಯನ್ನು ತನಗಿಂತ ಸುಂದರನೊಬ್ಬ ಆಕರ್ಷಿಸಬಹುದು. ಅಷ್ಟಕ್ಕೂ ಅವಳಿಗೆ ಸೌಂದರ್ಯವಷ್ಟೇ ಮುಖ್ಯವಾಗದೇ ಹೋಗಬಹುದು. ಅವನ ಮಾತು, ಸಾಂತ್ವನ, ಧಾರಾಳತನ, ಮುಗ್ಧತೆ, ಸಂಕೋಚಗಳೂ ಅವಳನ್ನು ಸೆಳೆಯಬಹುದಲ್ಲ ಎಂದು ಅನೇಕರು ಯೋಚಿಸುತ್ತಾರೆ. ಹಿಂದಿನ ಕಾಲದಲ್ಲಿ ಆಗುತ್ತಿದ್ದ ಹಾಗೆ, ಮದುವೆಯೆಂಬ ಬಂಧನ ಗಂಡನ್ನಾಗಲೀ ಹೆಣ್ಣನ್ನಾಗಲೀ ಕಟ್ಟಿಹಾಕಲಾರದು.
ಕವಾಬಾಟನ ಕಾದಂಬರಿಯಲ್ಲೂ ಅದೇ ಆಗುತ್ತದೆ. ಅವನ ಅಪ್ಪನಿಗೆ ಇಬ್ಬರು ಪ್ರೇಯಸಿಯರು: ಚಿಕಕೋ ಮತ್ತು ಓಟ. ಅವಳಲ್ಲಿ ಒಬ್ಬಳು, ಇನ್ನೊಬ್ಬಳಿಂದ ಕಿಕುಜಿಯನ್ನು ಕಾಪಾಡಲು ಹೆಣಗಾಡುತ್ತಿರುತ್ತಾಳೆ. ಕೊನೆಗೂ ಕಿಕುಜಿಯನ್ನು ಆ ಇನ್ನೊಬ್ಬಳೇ ಸೆಳೆಯುತ್ತಾಳೆ. ಅವಳ ಪ್ರೀತಿಯಲ್ಲೊಂದು ಸಹಜತೆ ಅವನಿಗೆ ಕಾಣಿಸುತ್ತದೆ. ತಾನು ತಪ್ಪು ಮಾಡುತ್ತಿದ್ದೇನೆ ಎಂದು ಆಕೆಯೇ ಹೇಳಿಕೊಂಡರು ಕೂಡ ಕಿಕುಜಿಗೆ ಪಾಪಪ್ರಜ್ಞೆ ಕಾಡುವುದಿಲ್ಲ.
ಅವನನ್ನು ಇಮುನಾರ ಎಂಬ ಹುಡುಗಿಗೆ ಕೊಟ್ಟು ಮದುವೆ ಮಾಡುವುದು ಚಿಕಕೋಳ ಉದ್ದೇಶ. ಕಿಕುಜಿಗೂ ಅವಳು ಮತ್ತು ಅವಳ ಕೈಯಲ್ಲಿರುವ ಸಾವಿರ ಕ್ರೌಂಚಪಕ್ಷಿಗಳ ಕರ್ಚೀಫು ಇಷ್ಟ. ಆದರೆ ಸಂಬಂಧಗಳ ಮಾತು ಬಂದಾಗ ಅವನು ವರ್ತಿಸುವ ರೀತಿಯೇ ಬೇರೆ. ತನ್ನ ಅಪ್ಪನನ್ನು ಸೆಳೆದುಕೊಂಡಿದ್ದ ಓಟಾಳ ಸಂಗ ಅವನಿಗೆ ಹಿತವೆನ್ನಿಸುತ್ತದೆ. ಅದಕ್ಕೆ ಕಾರಣ ಅವನಿಗೆ ಓಟಾಳ ಮೇಲಿರುವ ಪ್ರೀತಿಯೋ, ಅಪ್ಪನ ಮೇಲಿರುವ ದ್ವೇಷವೋ ಅನ್ನುವುದೂ ಅರ್ಥವಾಗುವುದಿಲ್ಲ. ಇಂಥ ಅನಿರೀಕ್ಷಿತ ಘಟನೆಗಳ ಮೂಲಕವೇ ಇಡೀ ಕತೆ ಸಾಗುತ್ತದೆ. ಅವು ನಮ್ಮ ಪಾಲಿಗೆ ಅನಿರೀಕ್ಷಿತ, ಕತೆಯ ಪಾತ್ರಕ್ಕಲ್ಲ ಎಂಬ ಕಾರಣಕ್ಕೆ ಅದು ಇಷ್ಟವಾಗುತ್ತದೆ.
ಇಂಥ ಸರಳ ಕತೆಗಳನ್ನು ಓದುವುದು ಸದ್ಯದ ಖುಷಿ. ಬೇಸಗೆಯ ಮಧ್ಯಾಹ್ನಗಳಲ್ಲಿ ಸುಮ್ಮನೆ ಕೂತಾಗ ಕಾರಂತರ ಸರಸಮ್ಮನ ಸಮಾಧಿ’ಯ ಸರಸಿ, ಸೀತಕ್ಕ ಕಣ್ಮುಂದೆ ಬರುತ್ತಾರೆ. ಅವರ ಮೂಲಕ ಕಾದಂಬರಿಯನ್ನು ನೋಡಬೇಕು ಅನ್ನಿಸುತ್ತದೆ. ಇದ್ದಕ್ಕಿದ್ದ ಹಾಗೆ ಜe-ಟಿqಡ್ಡ್ಛಿಡ್ಝ್ಟಿಟಿ ಥಿಯರಿ ನೆನಪಾಗುತ್ತದೆ. ಓದಿದ ಕತೆಯನ್ನು ಮತ್ತೊಂದು ಕ್ರಮದಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವಂತೆ ಅದು. ಲೇಖಕನ ದೃಷ್ಟಿಕೋನ ಬದಿಗಿಟ್ಟು, ಮತ್ತೊಂದು ಪಾತ್ರದ ದೃಷ್ಟಿಕೋನದಿಂದ ನೋಡಿದಾಗ ಕಾದಂಬರಿಯ ನೆಲೆಯೇ ಬದಲಾಗಬಹುದಲ್ಲ. ಉದಾಹರಣೆಗೆ ನನ್ನವಳು ನನ್ನೆದೆಯ ಹೊನ್ನಾಡನಾಳುವಳು, ಬೆಳಗುಗೆನ್ನೆಯ ಚೆಲುವೆ ನನ್ನ ಹುಡುಗಿ ಕವಿತೆಯಲ್ಲಿ ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ, ಬಂಗಾರದಂಥ ಹುಡುಗಿ ಎಂಬ ಸಾಲು ಬರುತ್ತದೆ. ಇದು ಕವಿಯ ಆಶಯವೋ ಅವಳ ಸ್ಥಿತಿಯೋ ಅನ್ನುವುದು ನಮಗೆ ಗೊತ್ತಿಲ್ಲ. ನಮಗೂ ಕೂಡ ಬಂಗಾರದೊಡವೆಗಳ ಬಯಸದ ಬಂಗಾರದಂಥ ಹುಡುಗಿ ಆ ಕ್ಷಣ ಇಷ್ಟವಾಗುತ್ತಾಳೆ. ಅದೇ, ಡಿವಿಜಿಯವರ ಅಂತಃಪುರಗೀತೆ ಏನೀ ಮಹಾನಂದವೇ’ ಕವಿತೆಯಲ್ಲಿ ಆಭರಣ ಕೊಟ್ಟುಕೊಂಡ ಸುಂದರಿಯ ವರ್ಣನೆ ಬರುತ್ತದೆ. ಆಗ ನಮಗೆ ಆಭರಣಗಳಿಂದ ಅಲಂಕೃತಳಾದ ಹುಡುಗಿ ಇಷ್ಟವಾಗತೊಡಗುತ್ತಾಳೆ. ಹೀಗೆ ನಮ್ಮೊಳದೇ ಒಂದು ಸಂಘರ್ಷವೋ ವಿರೋಧಾಭಾಸವೂ ಸೃಷ್ಟಿಯಾಗುತ್ತದೆ. ಅದನ್ನು ನಾವು ಹೇಗೆ ಮೀರುತ್ತೇವೆ ಅನ್ನುವುದು ನಿಜಕ್ಕೂ ನಮ್ಮ ಮುಂದಿರುವ ಸವಾಲು.
ಬೇಸಗೆಯಲ್ಲಿ ವಿಚಿತ್ರವಾದ ಹೂವುಗಳೂ ಅರಳುತ್ತವೆ. ಸುಗಂಧ ಬೀರುತ್ತಾ ಇಡೀ ಕಾಡನ್ನೇ ಪುಷ್ಪವತಿಯನ್ನಾಗಿ ಮಾಡುತ್ತವೆ. ಅವುಗಳತ್ತ ನಮ್ಮ ಕಣ್ಣೇ ಹಾಯುವುದಿಲ್ಲ. ತೇಜಸ್ವಿಯ ಕಾದಂಬರಿಯಲ್ಲಿ ಬರುವ ಹಕ್ಕಿಗಳ ಹೆಸರನ್ನಷ್ಟೇ ಕೇಳಿ ಖುಷಿಪಟ್ಟಿದ್ದ ಗೆಳೆಯ, ಅದ್ಭುತ ಛಾಯಾಗ್ರಾಹಕ ಸತ್ಯಬೋಧ ಜೋಶಿ, ಅವನ್ನೆಲ್ಲ ಚಾರ್ಮಾಡಿ ಘಾಟಿಯ ಉದ್ದಕ್ಕೂ ನೋಡಿದಾಗ ಬೆರಗಾದರು. ಸಾಹಿತ್ಯದಿಂದಲೋ ಸುತ್ತಾಟದಿಂದಲೋ ಏನು ಉಪಯೋಗ ಎಂದು ಕೇಳುವವರಿಗೆ ಅವರ ಮಾತು ಉತ್ತರವಾಗಬಹುದು: ಇಂಥ ಪ್ರಯಾಣ ನಂಗಿಷ್ಟ. ನನ್ನ ಮಗಳಿಗೆ ಮುಂದೆ ನಾನು ಇಂಥ ಕಡೆ ಹೋಗಿದ್ದೆ, ಇಂಥ ಹಕ್ಕಿ ನೋಡಿದ್ದೆ ಅಂತ ಹೇಳಬಹುದು. ಇಲ್ಲದೇ ಹೋದರೆ ನಾನೇನು ಹೇಳಲಿ, ನನ್ನ ಜಗತ್ತು ಯಾವುದು ಅಂತ ಹೇಗೆ ತೋರಿಸಲಿ. ನನ್ನಲ್ಲಿ ಅವಳಿಗೆ ತೋರಿಸೋದಕ್ಕೆ ದೊಡ್ಡ ಮನೆಯೋ ವೈಭವದ ಬದುಕೋ ಇಲ್ಲ. ಅವಳಿಗೆ ನಾನು ಕೊಡಬಹುದಾದದ್ದು ನನ್ನ ಇಂಥ ಅನುಭವದ ತುಣುಕೊಂದನ್ನು ಮಾತ್ರ.
ಮಕ್ಕಳಿಗೆ ಅವೆಲ್ಲ ಬೇಕಾ ಎಂಬ ಪ್ರಶ್ನೆಯೂ ಇಂಥ ಹೊತ್ತಲ್ಲಿ ಅನೇಕರನ್ನು ಕಾಡೀತು. ಆದರೆ ಎರಡೂ ಜಗತ್ತನ್ನು ಕಂಡುಕೊಳ್ಳುವುದು ಅವರವರ ಭಾಗ್ಯ. ಆದರೆ ಅದಕ್ಕೆ ಬೇಕಾದ ಅವಕಾಶವನ್ನಷ್ಟೇ ನಾವು ಕಲ್ಪಿಸಬಹುದು. ನಮ್ಮ ಬಾಲ್ಯದ
ಜಗತ್ತೂ ಹಾಗೇ ಇತ್ತೆಂದು ಕಾಣುತ್ತದೆ. ಬಹುಶಃ ಅಲ್ಲಿ ಮತ್ತಷ್ಟು ಸಂಘರ್ಷಗಳಿದ್ದವೇನೋ?
ಈ ವರ್ಷ ಮಾವಿನಮಿಡಿಯಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಮಳೆ ಸುರಿಯುತ್ತದೆ. ದೇವಸ್ಥಾನದ ಜೀರ್ಣೋದ್ಧಾರ ಆಗಿಲ್ಲ, ಭಕ್ತಾದಿಗಳು ಹೆಚ್ಚಾಗಿದ್ದಾರೆ. ದೇವರ ಮಹಿಮೆಯ ಬಗ್ಗೆ ಪ್ರಚಾರ ಬೇಕು, ದುಡ್ಡಂತೂ ಧಾರಾಳವಾಗಿ ಹರಿದು ಬರುತ್ತದೆ. ಭಕ್ತರು ಉದಾರಿಗಳಾಗಿದ್ದಾರೆ.
ಉದಾರಿಗಳಾಗಬೇಕಾದದ್ದು ಭಕ್ತರೋ ದೇವರೋ ಎಂಬ ಗೊಂದಲದಲ್ಲಿ ಅರ್ಚಕರು ನಿಂತಿದ್ದರು. ದೇವರು ಉದಾರಿಯಾದರೆ ಇಡಿ ಪ್ರದೇಶ ಸುಭಿಕ್ಷವಾಗುತ್ತದೆ. ಭಕ್ತರು ಉದಾರಿಯಾದರೆ ದೊಡ್ಡ ದೇವಸ್ಥಾನ ಕಟ್ಟುತ್ತಾರೆ. ರಾಜಮಹಾರಾಜರು ಕಟ್ಟಿಸಿದ ದೇವಾಲಯಗಳನ್ನು ಪ್ರಾಚ್ಯವಸ್ತು ಇಲಾಖೆ ಶಿಲ್ಪಕಲೆಯೆಂಬ ಹೆಸರಲ್ಲಿ ಕಾಪಾಡುತ್ತದೆ. ಅಲ್ಲಿ ದೇವರೂ ಇಲ್ಲ. ಭಕ್ತಿಯೂ ಇಲ್ಲ, ಕೇವಲ ಸೌಂದರ್ಯ ಮಾತ್ರ. ಈಗಿನ ಹೊಸ ದೇವಾಲಯಗಳಲ್ಲಿ ಸೌಂದರ್ಯವೂ ಇಲ್ಲ, ಭಕ್ತಿಯೂ ಇಲ್ಲ. ಯಾರೋ ಜ್ಯೋತಿಷಿ ಎಳ್ಳು ಕೊಡಿ, ನೀರು ಕೊಡಿ, ಉಂಗುರ ಧರಿಸಿ, ಹಾರ ಹಾಕಿಕೊಳ್ಳಿ, ಹರಕೆ ಹೇಳಿ ಎಂದು ಸಲಹೆ ಕೊಡುತ್ತಾ ಭಯಂಕರ ರಗಳೆ ಮಾಡುತ್ತಿರುತ್ತಾರೆ. ಅದನ್ನು ನಂಬಿಕೊಂಡು ಹುಡುಗ ಹುಡುಗಿಯರೂ ತಾಯಿತ ಹಾಕಿಕೊಂಡು, ಕೈಗೊಂದು ದಾರ ಕಟ್ಟಿಕೊಂಡು ಓಡಾಡುತ್ತಾರೆ.
ನಮ್ಮ ಆತ್ಮವಿಶ್ವಾಸ, ಆರೋಗ್ಯವಂತ ಉಡಾಫೆ, ತಮಾಷೆ ಮಾಡುವ ಗುಣ ಮತ್ತು ನಮ್ಮ ಮೇಲೆ ನಮಗೇ ಇರುವ ನಂಬಿಕೆ ಕೂಡ ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿಕೊಂಡಿದೆಯೇನೋ ಎಂದು ಅನುಮಾನವಾಗುತ್ತದೆ.

Tuesday, May 4, 2010

ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ

ನಾಲ್ಕಕ್ಷರದ ಪದ. ಎಡದಿಂದ ಬಲಕ್ಕೆ. ಕ್ಲೂ: ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಮೇಲಿನಿಂದ ಕೆಳಕ್ಕೆ ಮೂರಕ್ಷರದ ಪದ. ಆ ಮೂರಕ್ಷರದ ಕೊನೆಯ ಅಕ್ಷರ ನಾಲ್ಕಕ್ಷರದ ಪದದ ಮೂರನೆಯ ಅಕ್ಷರ. ಮೇಲಿನಿಂದ ಕೆಳಕ್ಕೆ ಹುಡುಕಬೇಕಾದ ಮೂರಕ್ಷರದ ಪದದ ಕ್ಲೂ: ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ.

ವ್ಯಾಸರು ಯೋಚಿಸುತ್ತಾ ಹಾಗೇ ಜಗಲಿಯಲ್ಲಿ ಅಡ್ಡಾದರು. ಮಧ್ಯಾಹ್ನ ಎಂದಿಗಿಂತ ನಿಧಾನವಾಗಿ ಸಂಜೆಯತ್ತ ಹೆಜ್ಜೆ ಹಾಕುತ್ತಿತ್ತು. ಬಿಸಿಲಲ್ಲಿ ಓಡಾಡುವುದಕ್ಕಾಗದೇ ಗಾಳಿ ಉಸಿರುಬಿಗಿ ಹಿಡಿದುಕೊಂಡು ಕೂತು ಬಿಟ್ಟಿತ್ತು. ಮನೆ ಮುಂದಿನ ಅಡಕೆ ತೋಟ, ಅದರ ಪಕ್ಕದಲ್ಲಿರುವ ಅಪ್ಪಯ್ಯ ಬಿದ್ದು ಸತ್ತ ಬಾವಿ, ಮಗ ಸಾಯುವ ಹಿಂದಿನ ದಿನದ ತನಕವೂ ಓಡಿಸುತ್ತಿದ್ದ ಸೈಕಲ್ಲು ಎಲ್ಲವೂ ಕಣ್ಣು ಕುಕ್ಕುವ ಬಿಸಿಲಿನಲ್ಲಿ ಹಳದಿ ಹಳದಿಯಾಗಿ ಕಾಣಿಸುತ್ತಿತ್ತು.

ಹಾಳಾಗಿ ಹೋಗಲಿ ಎಂದುಕೊಂಡು ವ್ಯಾಸರು ಪತ್ರಿಕೆಯನ್ನು ಮಡಿಚಿ ಗಾಳಿ ಹಾಕಿಕೊಂಡರು. ಎದೆಯುರಿ ಕಡಿಮೆಯಾಯಿತು ಅನ್ನಿಸಲಿಲ್ಲ. ಮನೆಯ ಹಿಂಬದಿಯಲ್ಲಿ ಹಸಿದ ಹಸು ಅಂಬಾ ಎಂದು ಕೂಗಿಕೊಂಡಿತು. ಮೋಹನ ಬರಲಿಲ್ಲ, ಹಸುವಿಗೆ ಹುಲ್ಲು ಹಾಕಲಿಲ್ಲ. ತಾನಾದರೂ ಹಾಕಬಹುದಿತ್ತು ಅಂದುಕೊಂಡರು. ಎದ್ದು ಹೋಗುವ ಮನಸ್ಸಾಗಲಿಲ್ಲ. ಕಣ್ಮುಚ್ಚಿ ಮಲಗಲು ಯತ್ನಿಸಿದರು. ಮತ್ತೆ ಪದಬಂಧ ಕಾಡಿತು.

ತನಗೂ ಸವಾಲಾಗುವ ಪದಬಂಧ ಇರುವುದಕ್ಕೆ ಸಾಧ್ಯವಾ? ಅಥವಾ ಬುದ್ಧಿಗೆ ಗೆದ್ದಲು ಹಿಡಿದಿದೆಯಾ? ಎಂತೆಂಥಾ ಪದಗಳನ್ನೆಲ್ಲ ಬಿಡಿಸಿಲ್ಲ ತಾನು. ಅವಧಾನಕ್ಕೆ ಕೂತಾಗ ಎಂತೆಂಥಾ ಸಮಸ್ಯೆಗಳನ್ನು ಅದೆಷ್ಟು ಸುಲಭವಾಗಿ ಪರಿಹರಿಸಿಲ್ಲ. ಅಪ್ರಸ್ತುತ ಪ್ರಸಂಗದಲ್ಲಾಗಲೀ, ಅರ್ಥವಿಲ್ಲದ ಕಾವ್ಯದ ಕೊನೆಯ ಸಾಲನ್ನು ಮುಂದಿಟ್ಟುಕೊಂಡು ಅವರು ರಚಿಸಿದ ಷಟ್ಪದಿಯಲ್ಲಿ ಕಾವ್ಯ ಕಟ್ಟುವುದನ್ನಾಗಲೀ ಎಷ್ಟು ಸೊಗಸಾಗಿ ಮಾಡಿಲ್ಲ? ಈಗ ಇದೊಂದು ಸುಡುಗಾಡು ಪದ ಅವಳ ಹಾಗೆ ಕಾಡುತ್ತಿದೆಯಲ್ಲ?

ಇಲ್ಲ, ಅದನ್ನು ಬಿಡಿಸಿಯೇ ತೀರುತ್ತೇನೆ ಎಂದುಕೊಂಡು ವ್ಯಾಸರು ಎದ್ದು ಕೂತರು. ಪ್ರೇಮದ ಅವಸ್ಥಾಂತರಗಳಲ್ಲಿ ಯಾತನೆಯದ್ದು ಯಾವುದು, ಮಧುರವಾದದ್ದು ಯಾವುದು? ಭಗ್ನಪ್ರೇಮವೇ ಯಾತನೆಯದ್ದಾಗಿರಬಹುದೇ? ಅದರಲ್ಲಿ ಮಾಧುರ್ಯ ಎಲ್ಲಿಂದ ಬರಬೇಕು? ಒಡೆದು ಹೋದದ್ದು ಯಾವತ್ತೂ ಮಧುರವಾಗಿರಲಿಕ್ಕೆ ಸಾಧ್ಯವೇ ಇಲ್ಲ. ಅವೆರಡೂ ಭಾವನೆಗಳೂ ಒಂದಾಗಿರುವಂಥ ಸ್ಥಿತಿ ಯಾವುದು ಹಾಗಿದ್ದರೆ?

ಸುಕನ್ಯೆ ಬಿರುಬಿಸಿಲಲ್ಲಿ ಪ್ರತ್ಯಕ್ಷಳಾದಳು. ವ್ಯಾಸರು ಶಾಂಭವಿನದಿಯ ತೀರದಲ್ಲಿ ಕೂತಿದ್ದರು. ಪರಾಶರರಿಗೂ ಮತ್ಯ್ಸಗಂಧಿ ಸಿಕ್ಕಿದ್ದು ಗಂಗಾತೀರದಲ್ಲೇ ತಾನೇ? ಅದು ಗಂಗಾನದಿಯೋ ಸರಯೂ ನದಿಯೋ ಮರೆತುಹೋಯಿತು. ಸುಕನ್ಯಾಳನ್ನು ನೋಡಿದ ದಿನ ತಾನು ಇದನ್ನೆಲ್ಲ ಯೋಚಿಸಿದ್ದೆನಾ? ಅವಳೊಂದು ಹೆಣ್ಣಾಗಿ, ತಾನೊಂದು ಗಂಡಾಗಿ ಅಲ್ಲಿ ಎದುರುಬದುರಾಗಿದ್ದೆವು. ಆ ಭೇಟಿಗೆ ಯಾವ ಕಾವ್ಯದ ಹಂಗೂ ಬೇಕಿರಲಿಲ್ಲ. ವಯಸ್ಸಾಗುತ್ತಾ ಆಗುತ್ತಾ ಎಲ್ಲದಕ್ಕೂ ರೆಫರೆನ್ಸುಗಳನ್ನು ಹುಡುಕುತ್ತಾ ಹೋಗುತ್ತದಲ್ಲ ಮನಸ್ಸು? ಯಾಕೆ ಬೇಕು ಅದೆಲ್ಲ, ಸಮರ್ಥನೆಗೋ, ಆ ಭೇಟಿಗೆ ಮತ್ತಷ್ಟು ಹೊಳಪು ಬರುವುದಕ್ಕೋ, ಚರಿತ್ರೆಯ ಜೊತೆಗೋ ಪುರಾಣದ ಜೊತೆಗೋ ಅದನ್ನು ತಳಕು ಹಾಕಿ ಅಜರಾಮರವಾಗಿಸುವುದಕ್ಕೋ?

ಸುಕನ್ಯೆ ಸುಮ್ಮನೆ ನಕ್ಕಿದ್ದಳು. ಕತೆ ಬರೆಯೋದಕ್ಕೆ ಬಂದು ಕೂತಿದ್ದೀರೋ ಹೇಗೆ ಎಂದು ಸಹಜವಾಗಿ ಕೇಳಿದ್ದಳು. ತಾನು ಕತೆ ಬರೆಯುತ್ತೇನೆ ಅನ್ನುವುದು ಅವಳಿಗೆ ಹೇಗೆ ಗೊತ್ತಾಯಿತೋ? ವ್ಯಾಸರು ಏನೂ ಹೇಳದೇ ಸುಮ್ಮನೆ ಅವಳನ್ನು ದಿಟ್ಟಿಸಿದ್ದರು. ತನ್ನ ಕತೆಯ ಬಗ್ಗೆ ಅವಳು ಮತ್ತಷ್ಟು ಕೇಳಲಿ, ಅವಳು ತನ್ನ ಕತೆಗಳನ್ನು ಓದಿರಲಿ ಎಂದು ಹಾರೈಸಿದ್ದರು.

ಅವಳು ಅದೇನೂ ಹೇಳದೇ ಹೊರಟು ಹೋಗಿದ್ದಳು. ಹಾಗೆ ಹೊರಟು ಹೋದವಳು ತನ್ನ ಮನಸ್ಸಿನಿಂದಾಚೆ ಹೋಗಲೇ ಇಲ್ಲವಲ್ಲ ಎಂದುಕೊಂಡರು ವ್ಯಾಸ. ಸೌಭಾಗ್ಯಳನ್ನು ಮದುವೆಯಾಗಿ ಮೂವತ್ತು ವರ್ಷವಾದ ನಂತರವೂ ಕಾಡುತ್ತಾಳೆ. ಬಿರುಬಿಸಿಲಲ್ಲಿ ನಡೆದು ಬರುತ್ತಾಳೆ. ಹೊಳೆಯ ಬದಿಗೆ ಹೋದರೆ ಪ್ರತ್ಯಕ್ಷವಾಗುತ್ತಾಳೆ. ಕತೆ ಬರೆಯೋದಕ್ಕೆ ಬಂದಿರೋ ಎಂದು ಕೇಳುತ್ತಾಳೆ. ತಾನು ಕೈಲಿರುವ ಪುಸ್ತಕ, ಪೆನ್ನು ಎಸೆದು ವಾಪಸ್ಸು ಬರುತ್ತೇನೆ. ವ್ಯಾಸರೇ, ಕತೆ ಕೊಟ್ಟಿಲ್ಲ ನೀವು. ಎಷ್ಟು ತಡಮಾಡ್ತೀರಪ್ಪ ಎಂದು ಸಂಪಾದಕರು ಫೋನು ಮಾಡುತ್ತಾರೆ. ಯಾಕೆ ತಡಮಾಡಿದೆ ಎಂದು ಹೇಳುವುದಾದರೂ ಹೇಗೆ?

ಸುಕನ್ಯೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ತಾನು ಭ್ರಮಿಸಿದ್ದಾದರೂ ಹೇಗೆ? ಅದು ಭ್ರಮೆಯೇ. ಅವಳು ಕೇಳಿದ್ದು ಒಂದೇ ಪ್ರಶ್ನೆ. ಅದಕ್ಕೆ ತಾನು ಉತ್ತರವನ್ನೂ ಕೊಟ್ಟಿರಲಿಲ್ಲ. ಹಾಗೆ ನಡೆದುಹೋದವಳು ಶಾನುಭೋಗ ಸದಾಶಿವಯ್ಯನ ಮಗಳು ಎನ್ನುವುದೂ ತನಗೆ ಆಗ ಗೊತ್ತಿರಲಿಲ್ಲ. ಅವಳು ಯಾರೆನ್ನುವುದು ಪತ್ತೆ ಮಾಡುವುದಕ್ಕೆ ತಿಂಗಳು ಹಿಡಿಯಿತು. ಎರಡನೆಯ ಸಾರಿ ಅವಳು ಎದುರಾದದ್ದು ಗುರುವಾಯನಕೆರೆಯ ದಂಡೆಯಲ್ಲಿ. ಬತ್ತಿಹೋದ ಕೆರೆಯಂಗಣದಲ್ಲಿ ಕ್ರಿಕೆಟ್ಟು ಆಡುತ್ತಾ ನಿಂತ ಹುಡುಗರನ್ನು ನೋಡುತ್ತಾ ನಿಂತವಳನ್ನು ವ್ಯಾಸರೇ ಮಾತಾಡಿಸಿದ್ದರು.

ನೀನು ಆಟ ಆಡೋದಿಲ್ವಾ?’

ಅವಳು ಮಾತನಾಡಿರಲಿಲ್ಲ. ಇಳಿದ ಹಗಲಲ್ಲಿ ಕೆರೆಯೊಳಗೆ ಇಳಿದು, ಆಟವಾಡುತ್ತಿದ್ದ ಹುಡುಗರ ನಡುವಿದ್ದ ಒಬ್ಬನನ್ನು ಕೈ ಹಿಡಿದು ಎಳಕೊಂಡು ಹೊರಟೇ ಬಿಟ್ಟಿದ್ದಳು. ಅವಳ ತಮ್ಮನಿರಬೇಕು. ಇನ್ನೂ ಆಡಬೇಕು ಎಂದು ರಚ್ಚೆ ಹಿಡಿದು ಅಳುತ್ತಿದ್ದ. ಅವಳು ದರದರ ಎಳೆದುಕೊಂಡು ಹೊರಟೇ ಬಿಟ್ಟಿದ್ದಳು; ತನ್ನನ್ನೂ.

ಮಾರನೆಯ ಬೆಳಗ್ಗೆ ರಂಜೆ ಹೂವು ಹೆಕ್ಕುತ್ತಿದ್ದಾಗ ಅವಳೇ ಕಣ್ಮುಂದೆ ಬಂದಿದ್ದಳು. ಅವಳನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿತ್ತು. ಹೊಳೆದಂಡೆಗೆ, ಕೆರೆದಂಡೆಗೆ ನಿತ್ಯವೂ ಓಡಾಡಿದ್ದಾಯಿತು. ಅವಳು ಎಷ್ಟು ತಿಣುಕಾಡಿದರೂ ಹೊರಗೆ ಬರದ ಕತೆಯ ಹಾಗೆ ಅದೆಲ್ಲೋ ಕಣ್ಮರೆಯಾಗಿದ್ದಳು. ಮತ್ತೆ ಅವಳನ್ನು ವ್ಯಾಸರು ನೋಡಿದ್ದು ಶಾನುಭೋಗರ ಜೊತೆ. ಅವರ ಹಳೆಯ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರಲ್ಲಿ ಕೂತು ಹೋಗುವಾಗ ತನ್ನನ್ನು ನೋಡಿ ಕೈ ಬೀಸಿದ್ದಳು. ಎತ್ತರದಲ್ಲಿರುವ ಹುಡುಗಿಯರು ತಗ್ಗಿನಲ್ಲಿ ನಿಂತ ಹುಡುಗರತ್ತ ಕೈ ಬೀಸುತ್ತಾರೆ.

ಅವಳು ಕೈ, ನೀಳ ಬೆರಳು, ಗಾಳಿಗೆ ಹಾರುತ್ತಿದ್ದ ಕುರುಳು, ಅವಳು ತೊಟ್ಟುಕೊಂಡಿದ್ದ ಪುಗ್ಗೆತೋಳಿನ ಅಂಗಿ, ಅವಳು ಬಿಟ್ಟುಹೋದ ನಗು ಎಲ್ಲವೂ ಸೇರಿಕೊಂಡು ಮತ್ತೊಂದು ವಿಚಿತ್ರ ಜಗತ್ತನ್ನೇ ಕಟ್ಟಿಕೊಟ್ಟ ಸಂಭ್ರಮದಲ್ಲಿ ತಾನು ಮೊದಲ ಕತೆ ಬರೆದಿದ್ದೆ. ಅದಕ್ಕೆ ಬಹುಮಾನ ಬಂದಿತ್ತು. ಅದನ್ನು ಶಾನುಭೋಗರಿಗೆ ತೋರಿಸಲಿಕ್ಕೆಂದು ಅಮ್ಮ ಹೊರಟು ನಿಂತಾಗ ತಾನೂ ಹೋಗಿದ್ದೆ. ಸುಕನ್ಯಾಳೇ ಕಾಫಿ ತಂದುಕೊಟ್ಟಿದ್ದಳು. ಕತೆ ಓದಿ ಹೇಳು ಅಂದಿದ್ದರು ಶಾನುಭೋಗರು. ತೊದಲುತ್ತಲೇ ಓದಿದ್ದೆ. ಹರೆಯದ ಬೆಚ್ಚನೆಯ ವಿವರಗಳು ಬಂದಾಗ ಸುಕನ್ಯಾಳತ್ತ ನೋಡಿದರೆ, ಆಕೆ ಮುಗುಳ್ನಗುತ್ತಿದ್ದಳು. ಹೆಮ್ಮೆಯಿಂದ ಕತೆ ಓದಿ ಮುಗಿಸುವ ಹೊತ್ತಿಗೆ ಶಾನುಭೋಗರು ಗಂಭೀರವಾಗಿದ್ದರು. ನಿನ್ನ ಮಗನಿಗೆ ಭಗತ್ ಸಿಂಗ್,ವಿವೇಕಾನಂದರ ಬಗ್ಗೆ ಬರೆಯೋದಕ್ಕೆ ಹೇಳು.. ಈ ಸುಡುಗಾಡು ಕತೆ ಯಾಕೆ ಬರೀತಾನಂತೆ‘ ಎಂದು ಎದ್ದು ಹೋಗಿದ್ದರು. ಅವರು ಹೋದ ನಂತರ ಸುಕನ್ಯಾ, ನಂಗಿಷ್ಟ ಆಯ್ತು’ ಎಂದಿದ್ದಳು.

ಆಮೇಲೆ ತಾನೇ ನಿತ್ಯವೂ ಶಾನುಭೋಗರ ಮನೆಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದದ್ದು, ಸುಮ್ಮಸುಮ್ಮನೆ ಅವರ ಮನೆಗೆ ಹೋಗುತ್ತಿದ್ದದ್ದು, ಸುಕನ್ಯಾ ಏಕವಚನದಲ್ಲಿ ಮಾತಾಡಿಸಲು ಶುರು ಮಾಡಿದ್ದು, ಅವಳಿಗೆ ಇಷ್ಟ ಎಂದು ಒಂದರ ಮೇಲೊಂದು ಕತೆ ಬರೆಯುತ್ತಾ ಹೋದದ್ದು, ಆ ಕತೆಗಳಲ್ಲಿ ಅವಳೇ ಕಾಣಿಸಿಕೊಳ್ಳುತ್ತಿದ್ದದ್ದು, ಒಂದು ಕತೆಯಲ್ಲಿ ಅವಳನ್ನು ಯಥವತ್ತಾಗಿ ಸೃಷ್ಟಿಸಿ ಅವಳಿಗೇ ಓದಲು ಕೊಟ್ಟದ್ದು. ಸುಕನ್ಯಾ ಅದನ್ನು ಓದಿ ನಕ್ಕಿದ್ದಳು. ಅದು ನಾನು ಪ್ರೀತಿಸೋ ಹುಡುಗಿ ಅಂದಿದ್ದೆ. ಅವಳು ಮತ್ತಷ್ಟು ನಕ್ಕಿದ್ದಳು. ತಾನು ಅವಳ ಕೈ ಹಿಡಿದುಕೊಂಡಿದ್ದೆ. ಅವಳು ಸರಕ್ಕನೆ ಕೈ ಹಿಂದಕ್ಕೆ ಎಳೆದುಕೊಂಡಿದ್ದಳು. ಸಿಟ್ಟಿನಿಂದ ಎದ್ದು ಹೋಗಿದ್ದಳು. ತಾನು ಎದ್ದು ಬರುವಾಗ ಇದ್ದಕ್ಕಿದ್ದಂತೆ ಬಂದು ತಬ್ಬಿಕೊಂಡಿದ್ದಳು. ಭಾನುವಾರ ಮನೆಗೆ ಬಾ, ಯಾರೂ ಇರೋಲ್ಲ ಅಂದಿದ್ದಳು.

ಭಾನುವಾರಕ್ಕೆ ಮೂರು ದಿನ ಉಳಿದಿತ್ತು

ಕ್ಲೂ: ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ. ವ್ಯಾಸರು ವಿರಹ’ ಎಂದು ಬರೆದು ಖುಷಿಯಲ್ಲಿ ನಕ್ಕರು. ನಗುವುದಕ್ಕೆ ಕಾರಣಗಳಿರಲಿಲ್ಲ ಎನ್ನುವುದು ಅವರಿಗೆ ಆಮೇಲೆ ಹೊಳೆಯಿತು.

ಭಾನುವಾರ ಬಂತು, ಬರಲಿಲ್ಲ. ಶಾನುಭೋಗರ ಮನೆಗೆ ಭಾನುವಾರ ಹೋದವನಿಗೆ ಕಂಡದ್ದು ಮುಚ್ಚಿದ ಬಾಗಿಲು. ಶಾನುಭೋಗರ ಕುಟುಂಬ ಹೈದರಾಬಾದಿಗೆ ಹೋಗಿತ್ತು. ಸುಕನ್ಯಾಳಿಗೆ ಮದುವೆ ಗೊತ್ತಾಗಿತ್ತು. ಹುಡುಗ ಅದ್ಯಾವುದೋ ದೇಶದಲ್ಲಿದ್ದನಂತೆ. ಅಲ್ಲಿಗೆ ಹೋದವರು ಮದುವೆ ಮುಗಿಸಿಕೊಂಡೇ ಮರಳಿದರು. ಹುಡುಗನಿಗೆ ಪುರುಸೊತ್ತಿರಲಿಲ್ಲ.

ತಾನು ಆಮೇಲೆ ಬರೆದ ಕತೆಗಳಲ್ಲಿ ಮದುವೆಯಾಗಿ ದೂರದೇಶಕ್ಕೆ ಹೋಗಿ, ಅಲ್ಲಿ ಏಕಾಂತದಲ್ಲಿ ನರಳುವ, ಹಿಂಸೆ ಕೊಡುವ ನಪುಂಸಕ ಗಂಡನಿಂದ ಪಡಬಾರದ ಪಾಡುಪಡುವ, ಮನೆಯೊಳಗೆ ಕೂತು ಕೂತು ನಗುವುದನ್ನೇ ಮರೆತು ಹುಚ್ಚಿಯಂತಾದ ಹೆಣ್ಮಕ್ಕಳೇ ಕಾಣಿಸಿಕೊಳ್ಳುತ್ತಿದ್ದರಲ್ಲ. ಅದು ತನ್ನ ಆಶೆಯಾಗಿತ್ತಾ, ಅವಳ ಸ್ಥಿತಿಯಾಗಿತ್ತಾ, ತಾನು ಅವಳ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಹಾಗೆ ಬರೆಯುತ್ತಿದ್ದೆನಾ?

ಅಥವಾ ನನ್ನ ಯಾತನೆಯಾಗಿತ್ತಾ ಅದು’ ವ್ಯಾಸರು ಗೊಣಗಿಕೊಂಡು ಅಂಗಳ ನೋಡಿದರು. ಕಂಬಳಿಹುಳವೊಂದು ಬಿಸಿಲಿನಿಂದ ನೆರಳಿನತ್ತ ನಿಧಾನ ತೆವಳಿಕೊಂಡು ಬರುತ್ತಿತ್ತು. ಇನ್ನೇನು ನೆರಳನ್ನು ತಲುಪಿತು ಅನ್ನುವಷ್ಟರಲ್ಲಿ ಕಾಗೆಯೊಂದು ಹಾರಿಬಂದು ಅದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋಯಿತು.

*******

ಮಧ್ಯಾಹ್ನಗಳನ್ನು ನಾನು ಪ್ರೀತಿಸುವುದಿಲ್ಲ. ನನಗೆ ಅಪರಾತ್ರಿಗಳೆಂದರೆ ಇಷ್ಟ. ಅಂಥ ಹೊತ್ತಲ್ಲಿ ಅವಳು ಮರಳಿ ಬರುತ್ತಾಳೆ. ಸತ್ತು ಹೋದ ನನ್ನ ಮಗ ಕಾಣಿಸುತ್ತಾನೆ. ಹೇಳದೇ ಕೇಳದೇ ಓಡಿಹೋದ, ಎಲ್ಲೋ ಹುಚ್ಚಿಯಂತೆ ಅಡ್ಡಾಡುತ್ತಿರುವ ನನ್ನ ಹೆಂಡತಿ ಇರುತ್ತಾಳೆ. ಅವರೆಲ್ಲ ಯಾವ ಸ್ಥಿತಿಯಲ್ಲಿದ್ದರೂ ನನಗೆ ಸಹ್ಯವೇ. ನಾನು ಒಂಟಿಯಾಗಿರಲು ಇಷ್ಟಪಡುವುದಿಲ್ಲ…

ಅಷ್ಟು ಬರೆದು ವ್ಯಾಸರು ಮುಂದೇನೂ ತೋಚದೇ ಕೂತಿದ್ದರು. ಕತೆಗಳಲ್ಲಿ ತನ್ನೊಳಗಿನ ಇಷ್ಟಿಷ್ಟನ್ನೇ ಕತ್ತರಿಸಿ ತೆಗೆದು ಹವಿರ್ಭಾಗದಂತೆ ಕಥಾಗ್ನಿಗೆ ಅರ್ಪಿಸುತ್ತಾ ಹೋಗುತಿದ್ದೇನಲ್ಲ ಅನ್ನಿಸಿತು. ಕೊನೆಗೆ ನಾನು ಏನಾಗಿ ಉಳಿಯುತ್ತೇನೆ. ಇಡೀ ಮನೆಯಲ್ಲಿ ತಾನೊಬ್ಬನೇ. ತನ್ನ ಓದುಗರ ಪಾಲಿಗಿದು ನಿಗೂಢ. ಸಂಭ್ರಮ. ಕಾಡಿನ ನಡುವಿನ ಕಟ್ಟೇಕಾಂತದಲ್ಲಿ ಕುಳಿತು ಕತೆಗಳನ್ನು ಸೃಷ್ಟಿಸುವ ಸಂತ ಎಂದು ಮೆಚ್ಚಿಕೊಳ್ಳುತ್ತಾರೆ. ಹಳದಿ ಬಿಸಿಲಲ್ಲಿ ಏನೇನೋ ಕೇಳಿಸುತ್ತದೆ. ಏನೇನೋ ಕಾಣಿಸುತ್ತದೆ, ನಾನೇ ಅಲ್ಲಿ ಇರುವುದಿಲ್ಲ.

ಪುರವಣಿ ಸಂಪಾದಕ ಶಂಕರಯ್ಯ ಬರೆದಿದ್ದ ಪತ್ರವನ್ನು ವ್ಯಾಸರು ಮತ್ತೊಮ್ಮೆ ಓದಿದರು. ವಿಶೇಷಾಂಕ

ಸಿದ್ಧವಾಗುತ್ತಿದೆ. ನಿಮ್ಮ ಕತೆಯೊಂದೇ ಬಾಕಿ. ಎರಡು ದಿನಗಳೊಳಗೆ ಕೈ ಸೇರದೇ ಹೋದರೆ ಅನಾನುಕೂಲವಾಗುತ್ತದೆ.

ಅನಾನುಕೂಲವಾಗುತ್ತದೆ’ ವ್ಯಾಸರು ಸುಮ್ಮನೆ ಗೊಣಗಿಕೊಂಡರು. ಬಾವಿಗೆ ಬಿದ್ದು ಸತ್ತ ಅಪ್ಪ, ಅಪಘಾತದಲ್ಲಿ ತೀರಿಕೊಂಡ ಮಗ, ಹುಚ್ಚಿಯಾಗಿ ಅಲೆದಾಡುತ್ತಿರುವ ಹೆಂಡತಿ, ಮೋಸ ಮಾಡಿದವರು, ಆದರ ತೋರಿ ತಿರಸ್ಕಾರ ಮಾಡಿದವರು,ವಿಕ್ಷಿಪ್ತನಂತೆ ಯೋಚಿಸುವ ತಾನು- ಎಲ್ಲರ ಕುರಿತೂ ತಾನು ಬರೆದಿದ್ದಾಗಿದೆ. ಯಾವ ಗುಟ್ಟನ್ನೂ ಮುಚ್ಚಿಟ್ಟೇ ಇಲ್ಲ. ತನ್ನ ಕನಸಿನಲ್ಲಿ ಮೆಚ್ಚುಗೆಯಾದ ಹೆಣ್ಣುಗಳು, ತನ್ನ ವಿಕೃತಿ, ಒಳಗಿನ ಅತಿರೇಖ, ಅಸಹ್ಯ, ಯಾರೂ ಮೆಚ್ಚುವುದಕ್ಕೂ ಸಾಧ್ಯವಿಲ್ಲದ ಅನಿಸಿಕೆಗಳು- ಇವೆಲ್ಲವನ್ನೂ ಕತೆಗಳಲ್ಲಿ ಬೇರೆ ಬೇರೆ ಪಾತ್ರಗಳ ಮೂಲಕ ತಂದಾಗಿದೆ. ತಾನು ಸುಖಿಸದ ಹೆಣ್ಣುಗಳು ಕೂಡ ಪರಮ ಚಂಚಲೆಯರಾಗಿ ಕತೆಗಳಲ್ಲಿ ಮೂಡಿದ್ದಾರೆ. ಅವರ ಮೂಲಕ ಯಾರ್‍ಯಾರೋ ಯಾರ್‍ಯಾರನ್ನೋ ಕಂಡುಕೊಂಡು ಮೆಚ್ಚಿಕೊಂಡು ಯಾತನೆ ಅನುಭವಿಸಿ ಪತ್ರಬರೆದು ಸಾಂತ್ವನ ಬೇಡಿದ್ದಾರೆ. ಅವರಿಗೆಲ್ಲ ಎರಡೇ ಸಾಲಿನ ಉತ್ತರ: ನಿರೀಕ್ಷೆ ಇಲ್ಲದೆ ಬದುಕು, ನೆನಪುಗಳಿಲ್ಲದೆ ಸಾಯಿ. ಕ್ರೂರ ಸಾಲುಗಳು. ಏಪ್ರಿಲ್ ತಿಂಗಳ ಹಾಗೆ, ಬೆಂಬಿಡದ ಬಿಸಿಲು, ಬಾರದ ಮಳೆ,ಬೀಸದ ಗಾಳಿ, ತಲೆದೂಗದ ತೆಂಗು. ಸಾಯದ ತಾನು.

ಮತ್ತೆ ಪದಬಂಧ ಕೈಗೆತ್ತಿಕೊಂಡರು. ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಅರ್ಥವಾಗಲಿಲ್ಲ. ಕಾಳಿದಾಸ ಕಣ್ಮುಂದೆ ಬಂದ. ಅಲ್ಲಿ ಸಂಶಯಪಟ್ಟದ್ದು ದುಶ್ಯಂತ. ಅವನು ಶಕುಂತಲೆಯನ್ನು ನಿರಾಕರಿಸಿದ. ನಾಲ್ಕಕ್ಷರ.. ನಿರಾಕರಣೆ, ಐದಕ್ಷರ, ಪರಿತ್ಯಾಗ, ಮೂರನೆಯ ಅಕ್ಷರ ಹ. ಮೇಲಿನಿಂದ ಕೆಳಕ್ಕೆ ಬಂದ ವಿರಹ ಸರಿಯಾಗಿದ್ದರೆ.

ಅಪ್ಪ ಸತ್ತದ್ದು ತನ್ನ ಮೇಲಿನ ರೇಜಿಗೆಯಿಂದಲೋ ಅಮ್ಮನ ಮೇಲಿನ ಸಿಟ್ಟಿನಿಂದಲೋ. ತನ್ನನ್ನು ಮಗ ಅಂತ ಅವರು ಒಪ್ಪಿಕೊಳ್ಳಲೇ ಇಲ್ಲ. ಮೈಮೇಲೆಲ್ಲ ಬೆಳ್ಳಗೆ ಬೆಳಗ್ಗೆ ಮಚ್ಚೆ. ವಿಕಾರವಾಗಿ ಪ್ರೇತದಂತೆ ಕಾಣುತ್ತಿದ್ದ ಅಪ್ಪನನ್ನು ಅಮ್ಮ ಕೂಡಲು ನಿರಾಕರಿಸಿ ಜಗಳಾಡುತ್ತಿದ್ದದ್ದು ಕಿವಿಗೆ ಅಪ್ಪಳಿಸಿತು. ಅಪ್ಪ ಬಾಗಿಲಿಗೆ ತಲೆ ಚಚ್ಚಿಕೊಂಡು ಗದ್ದಲ ಮಾಡುತ್ತಿದ್ದ. ಸಾಯುತ್ತೇನೆ ಅನ್ನುತ್ತಿದ್ದ. ಅಂಥ ಅಸಹಾಯಕತೆಗೆ ಅಪ್ಪನನ್ನು ಒಡ್ಡಿದ್ದಾದರೂ ಯಾಕೆ. ಅಮ್ಮನ ಕನಸೇನಿತ್ತು? ಅವಳೂ ತನ್ನ ಹಾಗೆ ಯಾರನ್ನೋ ಪ್ರೀತಿಸಿದ್ದಳಾ? ಸುಕನ್ಯಾಳೂ ಹೀಗೇ ಆಡುತ್ತಿರಬಹುದಾ?

ಮಗನೂ ತನ್ನನ್ನು ಒಂದು ದಿನವಾದರೂ ಮಾತಾಡಿಸಲಿಲ್ಲ. ದಿಟ್ಟನಂತೆ ಎದುರು ಬಂದು ನಿಲ್ಲುತ್ತಿದ್ದ. ತನ್ನ ಕತೆಗಳನ್ನೂ ಅವನೂ ಓದಿಲ್ಲ ಅಂದುಕೊಂಡಿದ್ದೆ. ಒಂದು ದಿನ ಅವನ ಪೆಟ್ಟಿಗೆಯಲ್ಲೇ ಅಷ್ಟೂ ಕತೆಗಳೂ ಸಿಕ್ಕವಲ್ಲ. ತನಗಿಷ್ಟವಾದದ್ದಕ್ಕೋ ಆಗದೇ ಇದ್ದದ್ದಕ್ಕೋ ಅಲ್ಲಲ್ಲಿ ಕೆಲವು ಸಾಲುಗಳ ಕೆಳಗೆ ಗೆರೆ ಎಳೆದಿದ್ದ. ಅಲ್ಲಿ ಅವನಿಗೆ ತನ್ನ ವಿಕೃತಿಯೇ ಕಾಣಿಸಿರಬೇಕು. ವಿರಹದ, ಯಾತನೆಯ, ಅಂಗಲಾಚಿದ ಸಾಲುಗಳೇ ಅವನಿಗೆ ಇಷ್ಟವಾಗಿದ್ದವು. ಅವನೂ ಯಾರನ್ನೋ ಪ್ರೀತಿಸುತ್ತಿದ್ದನಾ?ದೊಡ್ಡ ಮನೆ, ಒಳ್ಳೆಯ ಊಟ, ತಂಗಾಳಿ, ಕಣ್ಣಿಗೆ ಹಸಿರು, ದೂರದಲ್ಲಿ ಕಾಣುವ ಬೆಟ್ಟಸಾಲು, ಮಲಗಿದ್ದರೆ ಒಳ್ಳೆಯ ನಿದ್ದೆ,ಓದುವುದಕ್ಕೆ ಎಷ್ಟು ಬೇಕೋ ಅಷ್ಟು ಪುಸ್ತಕ. ಅಷ್ಟಿದ್ದರೂ ಪ್ರೀತಿ ಬೇಕಾಗುತ್ತಾ? ಏನು ಬೇಕಿತ್ತು ಅವನಿಗೆ. ಕುಡಿದು ಲಾರಿಯಡಿಗೆ ಸಿಕ್ಕು ಸತ್ತ ಅನ್ನುವುದು ನಿಜವಾ? ಕುಡಿದಿದ್ದು ಅವನಾ, ಲಾರಿ ಡ್ರೈವರ್ರಾ?

ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಭಾಸ ನಾಟಕಕಾರನಾ? ಮತ್ಯಾರಿದ್ದಾರೆ. ಷೇಕ್ಸ್‌ಪಿಯರ್. ದುರಂತ ನಾಟಕಕಾರ. ಅದಕ್ಕೇನನ್ನುತ್ತಾರೆ? ಟ್ರಾಜಿಡೀ, ಶೋಕನಾಟಕ, ದುರಂತನಾಟಕ. ಮೂರನೆಯ ಅಕ್ಷರ ಹ. ವಿನಾಕಾರಣ ಸಂಶಯ.

ಸೌಭಾಗ್ಯಳಿಗೆ ಯಾರ ಹುಚ್ಚು? ತಾನೇನೂ ಅವಳಿಗೆ ಅಡ್ಡಿಯಾಗಿರಲಿಲ್ಲ. ಮಗ ಸತ್ತ ದುಃಖದಿಂದ ಅವಳು ಹೊರಬರಲಿಲ್ಲ ಎಂದುಕೊಳ್ಳಲೇ? ಮಗ ಸತ್ತಿದ್ದು ತನ್ನಿಂದಲೇ ಎಂದವಳು ಭಾವಿಸಿದಂತಿತ್ತಲ್ಲ. ಅಂಥದ್ದೇನು ಮಾಡಿದ್ದೇನೆ. ಯಾಕೆ ನನ್ನ ಕುರಿತು, ನಮ್ಮ ಕುರಿತು ಬರೆಯಬಾರದು? ಬಗೆದು ಅಗೆದು ತೆಗೆಯದ ಹೊರತು ಕತೆ ಹೇಗೆ ಬಂದೀತು. ಹಾಗೆ

ಬರೆಯದೇ ಹೋದರೆ ನಾನು ಅನಾಮಿಕ. ಕತೆ ಹುಟ್ಟದ ದಿನ ಬರೀ ಹಳದಿ ಬಿಸಿಲು. ಅದಕ್ಕೊಂದು ಅರ್ಥವಿಲ್ಲ, ಪಾತ್ರವೇ ಇಲ್ಲದಿದ್ದರೆ ಮಾತುಗಳನ್ನು ಯಾರು ಆಡುತ್ತಾರೆ, ಭಾಷೆ ಯಾಕೆ ಬೇಕು? ಕವಿತೆ ಯಾರಿಗೋಸ್ಕರ.

ಹಳದಿ ಬಿಸಿಲು ಮಂದವಾಗುತ್ತಾ ಸಾಗುತ್ತಿತ್ತು. ಗುಪ್ಪೆ ಗುಪ್ಪೆಯಾಗಿ ಕಾಣಿಸುತ್ತಿದ್ದ ಕಾಡು. ರೆಂಜೆ ಹೂವಿನ ಮರದ ಮೇಲ್ಗಡೆ ಬಿಳಿಬಿಳಿಯ ಹಕ್ಕಿಗಳು ಕೂತಿದ್ದವು. ಅವು ಥಟ್ಟನೆ ಹಾರಿಹೋಗುವುದನ್ನು ಕಾಯುತ್ತಾ ವ್ಯಾಸರು ಸುಮ್ಮನೆ ಕೂತರು. ಕತೆ ಕೇಳಿ ಬರೆದ ಶಂಕರಯ್ಯನ ಪತ್ರ ಇನ್ನೊಂದಷ್ಟು ರಹಸ್ಯಗಳನ್ನು ಹೊರಗೆ ಹಾಕು, ನಿನ್ನ ಆತ್ಮವನ್ನೇ ಹವಿಸ್ಸಾಗಿ ಅರ್ಪಿಸು ಎಂದು ಕರೆಯುತ್ತಿತ್ತು.

ಸುಕನ್ಯಾ ಸುಖವಾಗಿಲ್ಲ ಎಂದು ಬರೆಯಬೇಕು ಅನ್ನಿಸಿತು. ಅವಳನ್ನು ತಾನು ಅನುಭವಿಸಿದ್ದನ್ನು ಬರೆಯಬೇಕು. ಅವಳ ಹೆಸರು ಹಾಕಿಯೇ ಬರೆಯಬೇಕು. ಏನಾಗುತ್ತೋ ಆಗಲಿ. ಅವಳು ಓದಿದರೂ ಓದಲಿ. ಓದಬೇಕು. ಅವಳಿಗೆ ಗೊತ್ತಿದ್ದವರಿಗೆ ಎಲ್ಲರಿಗೂ ಗೊತ್ತಾಗಬೇಕು. ಅವಳನ್ನು ವಿಕೃತವಾಗಿ ಸೃಷ್ಟಿಸಬೇಕು ಅಂದುಕೊಂಡರು. ಅದೇ ನಿರ್ಧಾರದಲ್ಲಿ ಎದ್ದು ಬರೆಯುವ ಕೋಣೆಗೆ ಬಂದರು. ಮರೆತು ಎತ್ತಿಕೊಂಡು ಬಂದ ಪದಬಂಧದ ಪೇಪರನ್ನು ಸಿಟ್ಟಿನಿಂದ ಎಸೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಸುಕನ್ಯೆ ಅರಳತೊಡಗಿದಳು, ಮರಳತೊಡಗಿದಳು.

*******

ಹಿಂದಿನ ದಿನ ಕೈ ಕೊಟ್ಟಿದ್ದಕ್ಕೆ ವ್ಯಾಸರು ಬೈಯುತ್ತಾರೆ ಅಂತ ಹೆದರುತ್ತಲೇ ಬಂದ ಮೋಹನ ವ್ಯಾಸರ ಬರೆಯುವ ಕೋಣೆಯ ಬಾಗಿಲು ಹಾಕಿದ್ದನ್ನು ನೋಡಿದ. ಒಳಗೆ ಕೂತು ಬರೆಯುತ್ತಿರಬೇಕು ಅಂತ ಹೊರಗೇ ನಿಂತು ಕಾದ. ಕಾದು ಕಾದು ಬೇಸರಾಗಿ ಅಲ್ಲೇ ಬಿದ್ದಿದ್ದ ಪೇಪರ್ ಕೈಗೆತ್ತಿಕೊಂಡ. ವ್ಯಾಸರು ತುಂಬಿದ ಪದಬಂಧವನ್ನು ನೋಡುತ್ತಾ ಬಂದ. ಕಷ್ಟದ ಪದಗಳನ್ನೆಲ್ಲ ಎಷ್ಟು ಸಲೀಸಾಗಿ ತುಂಬಿದ್ದಾರೆ ಎಂದು ಬೆರಗಾದ. ಒಂದು ಪದವನ್ನು ಮಾತ್ರ ಯಾಕೆ ತುಂಬದೇ ಬಿಟ್ಟಿದ್ದಾರೆ ಎಂದು ಯೋಚಿಸಿದ. ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ.

ಅರೆಕ್ಷಣ ಯೋಚಿಸಿದ ಮೋಹನ ಸಂಶಯದ ನಾಟಕಕಾರ ಸಂಸರಲ್ಲವೇ’ ಎಂದುಕೊಂಡ. ಮೇಲಿಂದ ಕೆಳಕ್ಕೆ ವಿರಹ. ಮೂರನೆಯ ಅಕ್ಷರ ಹ’.

ಆತ್ಮಹತ್ಯೆ’ ಎಂದು ಬರೆದು ಅದನ್ನು ವ್ಯಾಸರು ಮರೆತು ಬಿಟ್ಟಿರಬಹುದಾ, ಅರ್ಥವಾಗದೇ ಬಿಟ್ಟಿರಬಹುದಾ ಎಂದು ಯೋಚಿಸುತ್ತಾ ಅವರು ಬಾಗಿಲು ತೆಗೆಯುವುದನ್ನೇ ಕಾಯುತ್ತಾ ಕೂತ.

Tuesday, April 27, 2010

ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ, ಸೊಕ್ಕಿಲ್ಲ, ಮಿಕ್ಕಿಲ್ಲ, ಸಿಕ್ಕಿಲ್ಲ,

ದೂರದ ಕಾಡಲ್ಲೊಂದು
ಹಸಿರು ಗಿಳಿ.
ಅದಕ್ಕೊಂದು ಕೆಂಪು ಕೊಕ್ಕು.

ತುಟಿಗೆಂಪಿನ ಅವಳಿಗೆ
ಪ್ರತಿರಾತ್ರಿ
ಕೆಂಪುಕೊಕ್ಕಿನ ಗಿಣಿಯ
ಕನಸು.

ಗಿಣಿಗೂ ಅವಳಿಗೂ
ಕೊಕ್ಕಿನ ಕುರಿತು ಅಜ್ಞಾನ.
ಆ ಅಜ್ಞಾನದಲ್ಲೇ ಸುಖ.

ಒಮ್ಮೊಮ್ಮೆ ನಡು ಸುಡು
ಮಧ್ಯಾಹ್ನದಲ್ಲಿ
ಅವಳಿಗೆ ಕೆಂಪುಕೊಕ್ಕು
ಕುಟುಕಿದ ಹಾಗೆ ಅನ್ನಿಸಿ
ರೋಮಾಂಚನ.
ಅದು ಗಿಣಿಯ ಕೊಕ್ಕೋ
ಮುಂಗುಸಿಯ ಮೂಗೋ ಅನುಮಾನ.
ವಿಚಾರಿಸಲು ಒಳಗೊಳಗೆ
ಮುಜುಗರ
ಸಂಕೋಚ.

ಹೊರಗೆ ಬಂದು ನೋಡಿದರೆ
ಕವಲೊಡೆದ ಸಂಪಿಗೆ ಮರದ
ಟೊಂಗೆಮಧ್ಯಕ್ಕೆ ಕೊಕ್ಕು
ಮಸೆಯುತ್ತಿರುವ ಗಿಳಿರಾಯ.

ಮದುವೆಯ ಕತ್ತಲ
ಬೆತ್ತಲ ಇರುಳು
ಅದೇ ಗಿಣಿಕೊಕ್ಕು ಬಂದು
ಗುಟ್ಟನ್ನೆಲ್ಲ ಕೆದಕಿದ ನಂತರ
ಎಲ್ಲಾ ಯಥಾಪ್ರಕಾರ.


ಕೆಂಪುಕೊಕ್ಕಿನ ಗಿಣಿಗಳ
ಮೇಲಿನ ವ್ಯಾಮೋಹ ಕಳಕೊಂಡ
ಕತೆಯನ್ನು ಅವಳು ಮಗಳಿಗೆ
ಎಷ್ಟೋ ವರ್ಷದ ನಂತರ ಹೇಳಿದಳಂತೆ.

ಮಗಳು ನಕ್ಕು ನಡೆದದ್ದು
ಕಂಡು ಅವಳಿಗೆ ಅಪಾರ ದಿಗಿಲು.
ಮಧ್ಯಾಹ್ನದ ನಡು ಸುಡು
ಬಿಸಿಲು.
ಕಂಡೂ ಕಾಣಿಸದ ಹಾಗೆ
ಮಗಳು.
ಅವಳ ಮೈತುಂಬ
ಕೆಂಪುಕೊಕ್ಕಿನ ಕರಿನೆರಳು.

ದೂರದಲ್ಲಿ ಕಾಡಿಲ್ಲ,
ಹಸಿರು ಗಿಳಿಯಿಲ್ಲ
ಅದಕ್ಕೆ ಕೆಂಪುಕೊಕ್ಕಿಲ್ಲ
ಎಂದರೆ ಮಗಳು
ನಂಬಲೊಲ್ಲಳು.
ಇವಳಿಗೂ
ನಂಬಿಕೆಯಿಲ್ಲ.
ನಂಬಿಸಲೇ ಬೇಕೆಂಬ
ಹಠಕ್ಕೆ ಇದೀಗ ವಜ್ರ
ಮಹೋತ್ಸವ.

Friday, April 23, 2010

ಏಪ್ರಿಲ್ 25, 2010

ಈ ಭಾನುವಾರ ಎಲ್ಲಿಗೆ ಹೋಗುವುದು?
ಪ್ರತಿವಾರ ಕಾಡುವ ಪ್ರಶ್ನೆ ಇದು. ಆದರೆ, ಈ ವಾರ ಅದರ ಬಗ್ಗೆ ಯೋಚಿಸಬೇಕಿಲ್ಲ, ನಾನಂತೂ ರವೀಂದ್ರ ಕಲಾಕ್ಷೇತ್ರದಲ್ಲಿರುತ್ತೇನೆ.
ಆವತ್ತು, ದೇಶಕಾಲ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಜಾವೇದ್ ಅಖ್ತರ್ ವೇದಿಕೆಯಲ್ಲಿರುತ್ತಾರೆ ಎಂಬ ಖುಷಿಯ ಜೊತೆ, ನೂರಾರು ಗೆಳೆಯರು, ಸಹಲೇಖಕರು ಸಿಗುತ್ತಾರೆ ಎಂಬುದು ಮತ್ತೊಂದು ಸಂತೋಷ.
ಹಳೆಯ ದಿನಗಳು ನೆನಪಾಗುತ್ತಿವೆ. ಸಂಕೇತ್ -ನಾಗಮಂಡಲ- ನಾಟಕ ಆಡಿದಾಗ ಚಿತ್ರಕಲಾ ಪರಿಷತ್ತಿನಲ್ಲಿ ಸಂಭ್ರಮ, ಅದಕ್ಕೂ ಮುಂಚೆ ಬಿವಿ ಕಾರಂತರು ಮೂರು ನಾಟಕಗಳ ಪ್ರದರ್ಶನ ಏರ್ಪಡಿಸಿ ಥ್ರಿಲ್ ಕೊಟ್ಟಿದ್ದರು. ಆಮೇಲೆ, ಕುಸುಮಬಾಲೆ ನಾಟಕದ ಪ್ರದರ್ಶನ ನಡೆಯಿತು. ಅಡಿಗರ ಭೂಮಿಗೀತ ರಂಗಕ್ಕೆ ಬಂದಾಗೊಂದು ಸಂಭ್ರಮವಿತ್ತು. ಕಾರ್ನಾಡರ ಅಗ್ನಿ ಮತ್ತು ಮಳೆಯ ಇಂಗ್ಲಿಷ್ ಪ್ರದರ್ಶನ ಕೊಟ್ಟ ಖುಷಿಯೇ ಬೇರೆ. ಇತ್ತೀಚೆಗೆ ಸೂರಿ ನಿರ್ದೇಶಿಸಿದ ಇಬ್ಬರು ಮುದುಕರ ಕತೆ ಹೇಳುವ ನಾಟಕ ನಾ ತುಕಾರಾಮ್ ಅಲ್ಲ- ಹೀಗೆ ನಮ್ಮ ಖುಷಿಯನ್ನು ಹೆಚ್ಚಿಸುವ ಹಬ್ಬಗಳು ಆಗಾಗ ನಡೆಯುತ್ತಿರುತ್ತವೆ.
ಈ ಸಲದ ಹಬ್ಬಕ್ಕೆ ವಿವೇಕ ಶಾನಭಾಗರು ನೆಪ. ಅವರು ಅಕ್ಕರೆಯಿಂದ ರೂಪಿಸಿದ ದೇಶಕಾಲ ವಿಶೇಷ ಸಂಚಿಕೆಯ ಬಿಡುಗಡೆ ಮತ್ತೊಂದು ನೆಪ. ಬೆಳಗ್ಗೆ ಒಂಬತ್ತೂವರೆಗೆಲ್ಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿ, ಒಂದಿಷ್ಟು ಕಾಫಿ ಕುಡಿದು, ಹರಟುತ್ತಾ ನಮ್ಮ ಜ್ಞಾಪಕ ಚಿತ್ರಶಾಲೆಯನ್ನು ಅಲಂಕರಿಸಿಕೊಳ್ಳೋಣ.
ಬರ್ತೀರಲ್ಲ, ಈ ಭಾನುವಾರ ನಮ್ಮದು.

ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ..

ಬೆಂಗಳೂರಿನ ಬೇಸಗೆಯ ಬಣ್ಣ ಯಾವುದು ಒಂದು ಯೋಚಿಸುತ್ತಿದ್ದೆ. ನಮ್ಮರಲ್ಲಂತೂ ಬೇಸಗೆ ಸುಡುಹಳದಿ. ಮಳೆಗಾಲ ಕಡು ಹಸಿರು. ಚಳಿಗಾಲಕ್ಕೂ ಬೇಸಗೆಗೂ ಅಂಥ ವ್ಯತ್ಯಾಸವಿಲ್ಲ. ಒಂದಷ್ಟು ಮರಗಳು ಎಲೆಯುದುರಿಸಿ ನಿಂತದ್ದು ಬಿಟ್ಟರೆ, ಹಗಲಿಡೀ ಅದೇ ಸುಡುವ ಸೂರ್ಯ ಮತ್ತು ಆ ಬೆಳಕಲ್ಲಿ ಮತ್ತಷ್ಟು ಚಪ್ಪಟೆಯಾಗಿ ಕಾಣುವ ಚಿತ್ರಗಳು.
ಆದರೆ ಬೆಂಗಳೂರಲ್ಲಿ ಹಾಗಲ್ಲ. ಅಲ್ಲಿ ಋತುಗಳು ಬದಲಾದದ್ದೇ ಗೊತ್ತಾಗುವುದಿಲ್ಲ. ಇದೀಗ ವಸಂತ ಋತು ಅನ್ನುವುದಾಗಲೀ, ಇದು ಶಿಶಿರ ಅನ್ನುವುದಾಗಲೇ ಪ್ರಕೃತಿಯಿಂದ ಗೊತ್ತಾಗಬೇಕೇ ಹೊರತು ಕ್ಯಾಲೆಂಡರಿನಿಂದಲ್ಲ. ಬೆಂಗಳೂರಿನಿಂದ ಕೊಂಚ ಆಚೆಗೆ ಹೋದರೆ ಮುಂಜಾನೆ ಹೊತ್ತಲ್ಲಿ ದಟ್ಟ ಮಂಜು ಕವಿದಿರುತ್ತದೆ. ಆದರೆ ಬೆಂಗಳೂರಲ್ಲಿ ಮಂಜು, ಮಳೆ ಮತ್ತು ಬಿಸಿಲು ಮೂರೂ ಅಕಾಲಿಕ. ಇಲ್ಲಿ ಮಳೆಯಾದರೂ ಅದು ಬ್ರೇಕಿಂಗ್ ನ್ಯೂಸ್.
ನನಗೆ ಬೇಸಗೆ ಇಷ್ಟ. ಬೇಸಗೆಯಲ್ಲಿ ಪ್ರಕೃತಿ ಉಳಿದೆಲ್ಲ ಕಾಲಕ್ಕಿಂತ ಸಮೃದ್ಧವಾಗಿರುತ್ತದೆ. ಬೇಸಗೆಯ ಆರಂಭಕ್ಕೆ ಎಲ್ಲ ಮರಗಳೂ ಹೂ ಬಿಡುತ್ತವೆ. ನಡುಬೇಸಗೆಯ ಹೊತ್ತಿಗೆ ಫಲವತಿ ಪೃಥ್ವಿ. ಮಾವಿನ ಹಣ್ಣು, ಗೇರುಹಣ್ಣು, ನೇರಳೆ, ಪೇರಲ ಮತ್ತು ಹೆಸರಿಲ್ಲದ ನೂರೆಂಟು ಹಣ್ಣುಗಳ ಸುಗ್ಗಿಕಾಲ ಅದು. ಜಂಬುನೇರಳೆಯೆಂಬ ರುಚಿರುಚಿಯಾದ ಹಣ್ಣಿಗೆ ಮನಸ್ಸು ಹಂಬಲಿಸುತ್ತದೆ. ತುಮಕೂರು, ಗುಬ್ಬಿ, ಚಿಕ್ಕಮಗಳೂರು ಮುಂತಾದ ಕಡೆ ತಾಳೆಗಿಡಗಳು ಖರ್ಜೂರದ ರುಚಿಯ ಹೊಂಬಣ್ಣದ ಹಣ್ಣನ್ನು ಮೈತುಂಬ ತುಂಬಿಕೊಂಡು ಆಕರ್ಷಿಸುತ್ತವೆ.
ಇಂಥ ಬೇಸಗೆಯಲ್ಲೇ ಎಷ್ಟೋ ಸಲ ಕಾದಂಬರಿಗೊಂದು ವಸ್ತು ಸಿಗುತ್ತದೆ. ಯಾರೋ ಬರೆದ ರುಚಿಕಟ್ಟಾದ ಕಾದಂಬರಿಯೊಂದು ಹೇಗೋ ಕೈ ಸೇರುತ್ತದೆ. ಮೊನ್ನೆ ಹಾಗೇ ಆಯ್ತು. ಯುಸುನಾರಿ ಕವಾಬಾಟ ಎಂಬ ಜಪಾನ್ ಕಾದಂಬರಿಕಾರ ಬರೆದ ಸಾವಿರ ಪಕ್ಷಿಗಳು’ ಎಂಬ ಪುಟ್ಟ ಕಾದಂಬರಿ ಹೇಗೋ ಕೈಸೇರಿತು. ಹಳೆಯ ಕಾಲದ ಕಾದಂಬರಿ ಎಂದುಕೊಂಡು ನಿರ್ಲಕ್ಷಿಸಿದ್ದನ್ನು ಸೆಕೆಗೆ ನಿದ್ದೆ ಬಾರದ ರಾತ್ರಿ ಕೈಗೆತ್ತಿಕೊಂಡಾಗ ಬೆಳಗಿನ ತನಕ ಓದಿಸಿಕೊಂಡಿತು.
ತುಂಬ ವಿಚಿತ್ರವಾಗಿ ಬರೆಯುತ್ತಾನೆ ಕವಾಬಾಟ. ಕಿಕುಜಿ ಎಂಬ ಹುಡುಗನ ಕತೆ ಅದು. ಕಾದಂಬರಿಯಲ್ಲಿ ಎಲ್ಲೂ ತುಂಬ ಅಚ್ಚರಿ ಹುಟ್ಟಿಸುವ ಚಿತ್ರಗಳು ಎದುರಾಗುವುದಿಲ್ಲ. ಆ ಪುಟ್ಟ ಹುಡುಗ ತನ್ನ ತಂದೆಯನ್ನು ಗೆಲ್ಲುವ ಕತೆ ಅದು ಅಂತ ಮುನ್ನುಡಿ ಓದಿದ ಮೇಲೆ ನನಗೂ ಅನ್ನಿಸಿತು. ಕಾದಂಬರಿಯನ್ನಷ್ಟೇ ಓದಿದಾಗ ನೆನಪಾದದ್ದು ನಮ್ಮ ಬಾಲ್ಯ. ನಮ್ಮೂರು, ನಮ್ಮೂರಿನ ರೂಪಸಿಯರು ಮತ್ತು ಎಲ್ಲರೂ ಸಿಟ್ಟಿನಿಂದ ನೋಡುತ್ತಿದ್ದ ಆದರೆ, ನಮ್ಮಂಥ ಹುಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದ್ದ ದಿಟ್ಟೆಯರು.
ಹೇಗೆ ನಮ್ಮ ಅಭಿಪ್ರಾಯಗಳು ಬದಲಾಗುತ್ತಾ ಹೋಗುತ್ತವೆ ಎಂದು ಯೋಚಿಸುತ್ತೇನೆ. ಚಿಕ್ಕವರಿದ್ದಾಗ ಈ ರೂಪಸಿಯರು ಅಮ್ಮನ ಕಣ್ಣಿಗೋ ಅತ್ತಿಗೆಯ ಕಣ್ಣಿಗೋ ಸವತಿಯರ ಹಾಗೆ, ಸ್ಪರ್ಧಿಗಳ ಹಾಗೆ ಕಾಣಿಸುತ್ತಾರೆ ಎಂದು ನಮಗೆ ಅನ್ನಿಸಿರಲೇ ಇಲ್ಲ. ಅವರ ಜೀವನೋತ್ಸಾಹ, ಗಟ್ಟಿ ನಗು, ಆತ್ಮವಿಶ್ವಾಸ, ನಾಜೂಕು ಎಲ್ಲವೂ ಇಷ್ಟವಾಗುತ್ತಿತ್ತು. ಆದರೆ ಅದನ್ನು ಅದುಮಿಡುವ, ಹೀಗಳೆಯುವ ಹೆಂಗಸರನ್ನೂ ನೋಡಿದ್ದೆ. ಒಂದು ಹೊಸ ಸ್ನೇಹ ಅರಳಬಹುದು ಎಂಬ ನಿರೀಕ್ಷೆಯಲ್ಲಿ ಗಂಡಸರೂ ಆತಂಕದಲ್ಲಿ ಹೆಂಗಸರೂ ಬದುಕುತ್ತಿರುತ್ತಾರೆ ಎಂದು ಆಮೇಲೆ ಗೊತ್ತಾಯಿತು. ಈಗ ಅಂಥ ಆತಂಕ ಹುಡುಗರಲ್ಲೂ ಮನೆ ಮಾಡಿಕೊಂಡಿದೆ. ತನ್ನನ್ನು ಪ್ರೀತಿಸುವ ಹುಡುಗಿಯನ್ನು ತನಗಿಂತ ಸುಂದರನೊಬ್ಬ ಆಕರ್ಷಿಸಬಹುದು. ಅಷ್ಟಕ್ಕೂ ಅವಳಿಗೆ ಸೌಂದರ್ಯವಷ್ಟೇ ಮುಖ್ಯವಾಗದೇ ಹೋಗಬಹುದು. ಅವನ ಮಾತು, ಸಾಂತ್ವನ, ಧಾರಾಳತನ, ಮುಗ್ಧತೆ, ಸಂಕೋಚಗಳೂ ಅವಳನ್ನು ಸೆಳೆಯಬಹುದಲ್ಲ ಎಂದು ಅನೇಕರು ಯೋಚಿಸುತ್ತಾರೆ. ಹಿಂದಿನ ಕಾಲದಲ್ಲಿ ಆಗುತ್ತಿದ್ದ ಹಾಗೆ, ಮದುವೆಯೆಂಬ ಬಂಧನ ಗಂಡನ್ನಾಗಲೀ ಹೆಣ್ಣನ್ನಾಗಲೀ ಕಟ್ಟಿಹಾಕಲಾರದು.
ಕವಾಬಾಟನ ಕಾದಂಬರಿಯಲ್ಲೂ ಅದೇ ಆಗುತ್ತದೆ. ಅವನ ಅಪ್ಪನಿಗೆ ಇಬ್ಬರು ಪ್ರೇಯಸಿಯರು: ಚಿಕಕೋ ಮತ್ತು ಓಟ. ಅವಳಲ್ಲಿ ಒಬ್ಬಳು, ಇನ್ನೊಬ್ಬಳಿಂದ ಕಿಕುಜಿಯನ್ನು ಕಾಪಾಡಲು ಹೆಣಗಾಡುತ್ತಿರುತ್ತಾಳೆ. ಕೊನೆಗೂ ಕಿಕುಜಿಯನ್ನು ಆ ಇನ್ನೊಬ್ಬಳೇ ಸೆಳೆಯುತ್ತಾಳೆ. ಅವಳ ಪ್ರೀತಿಯಲ್ಲೊಂದು ಸಹಜತೆ ಅವನಿಗೆ ಕಾಣಿಸುತ್ತದೆ. ತಾನು ತಪ್ಪು ಮಾಡುತ್ತಿದ್ದೇನೆ ಎಂದು ಆಕೆಯೇ ಹೇಳಿಕೊಂಡರು ಕೂಡ ಕಿಕುಜಿಗೆ ಪಾಪಪ್ರಜ್ಞೆ ಕಾಡುವುದಿಲ್ಲ.
ಅವನನ್ನು ಇಮುನಾರ ಎಂಬ ಹುಡುಗಿಗೆ ಕೊಟ್ಟು ಮದುವೆ ಮಾಡುವುದು ಚಿಕಕೋಳ ಉದ್ದೇಶ. ಕಿಕುಜಿಗೂ ಅವಳು ಮತ್ತು ಅವಳ ಕೈಯಲ್ಲಿರುವ ಸಾವಿರ ಕ್ರೌಂಚಪಕ್ಷಿಗಳ ಕರ್ಚೀಫು ಇಷ್ಟ. ಆದರೆ ಸಂಬಂಧಗಳ ಮಾತು ಬಂದಾಗ ಅವನು ವರ್ತಿಸುವ ರೀತಿಯೇ ಬೇರೆ. ತನ್ನ ಅಪ್ಪನನ್ನು ಸೆಳೆದುಕೊಂಡಿದ್ದ ಓಟಾಳ ಸಂಗ ಅವನಿಗೆ ಹಿತವೆನ್ನಿಸುತ್ತದೆ. ಅದಕ್ಕೆ ಕಾರಣ ಅವನಿಗೆ ಓಟಾಳ ಮೇಲಿರುವ ಪ್ರೀತಿಯೋ, ಅಪ್ಪನ ಮೇಲಿರುವ ದ್ವೇಷವೋ ಅನ್ನುವುದೂ ಅರ್ಥವಾಗುವುದಿಲ್ಲ. ಇಂಥ ಅನಿರೀಕ್ಷಿತ ಘಟನೆಗಳ ಮೂಲಕವೇ ಇಡೀ ಕತೆ ಸಾಗುತ್ತದೆ. ಅವು ನಮ್ಮ ಪಾಲಿಗೆ ಅನಿರೀಕ್ಷಿತ, ಕತೆಯ ಪಾತ್ರಕ್ಕಲ್ಲ ಎಂಬ ಕಾರಣಕ್ಕೆ ಅದು ಇಷ್ಟವಾಗುತ್ತದೆ.
ಇಂಥ ಸರಳ ಕತೆಗಳನ್ನು ಓದುವುದು ಸದ್ಯದ ಖುಷಿ. ಬೇಸಗೆಯ ಮಧ್ಯಾಹ್ನಗಳಲ್ಲಿ ಸುಮ್ಮನೆ ಕೂತಾಗ ಕಾರಂತರ ಸರಸಮ್ಮನ ಸಮಾಧಿ’ಯ ಸರಸಿ, ಸೀತಕ್ಕ ಕಣ್ಮುಂದೆ ಬರುತ್ತಾರೆ. ಅವರ ಮೂಲಕ ಕಾದಂಬರಿಯನ್ನು ನೋಡಬೇಕು ಅನ್ನಿಸುತ್ತದೆ. ಇದ್ದಕ್ಕಿದ್ದ ಹಾಗೆ de-construction ಥಿಯರಿ ನೆನಪಾಗುತ್ತದೆ. ಓದಿದ ಕತೆಯನ್ನು ಮತ್ತೊಂದು ಕ್ರಮದಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವಂತೆ ಅದು. ಲೇಖಕನ ದೃಷ್ಟಿಕೋನ ಬದಿಗಿಟ್ಟು, ಮತ್ತೊಂದು ಪಾತ್ರದ ದೃಷ್ಟಿಕೋನದಿಂದ ನೋಡಿದಾಗ ಕಾದಂಬರಿಯ ನೆಲೆಯೇ ಬದಲಾಗಬಹುದಲ್ಲ. ಉದಾಹರಣೆಗೆ ನನ್ನವಳು ನನ್ನೆದೆಯ ಹೊನ್ನಾಡನಾಳುವಳು, ಬೆಳಗುಗೆನ್ನೆಯ ಚೆಲುವೆ ನನ್ನ ಹುಡುಗಿ ಕವಿತೆಯಲ್ಲಿ ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ, ಬಂಗಾರದಂಥ ಹುಡುಗಿ ಎಂಬ ಸಾಲು ಬರುತ್ತದೆ. ಇದು ಕವಿಯ ಆಶಯವೋ ಅವಳ ಸ್ಥಿತಿಯೋ ಅನ್ನುವುದು ನಮಗೆ ಗೊತ್ತಿಲ್ಲ. ನಮಗೂ ಕೂಡ ಬಂಗಾರದೊಡವೆಗಳ ಬಯಸದ ಬಂಗಾರದಂಥ ಹುಡುಗಿ ಆ ಕ್ಷಣ ಇಷ್ಟವಾಗುತ್ತಾಳೆ. ಅದೇ, ಡಿವಿಜಿಯವರ ಅಂತಃಪುರಗೀತೆ ಏನೀ ಮಹಾನಂದವೇ’ ಕವಿತೆಯಲ್ಲಿ ಆಭರಣ ಕೊಟ್ಟುಕೊಂಡ ಸುಂದರಿಯ ವರ್ಣನೆ ಬರುತ್ತದೆ. ಆಗ ನಮಗೆ ಆಭರಣಗಳಿಂದ ಅಲಂಕೃತಳಾದ ಹುಡುಗಿ ಇಷ್ಟವಾಗತೊಡಗುತ್ತಾಳೆ. ಹೀಗೆ ನಮ್ಮೊಳದೇ ಒಂದು ಸಂಘರ್ಷವೋ ವಿರೋಧಾಭಾಸವೂ ಸೃಷ್ಟಿಯಾಗುತ್ತದೆ. ಅದನ್ನು ನಾವು ಹೇಗೆ ಮೀರುತ್ತೇವೆ ಅನ್ನುವುದು ನಿಜಕ್ಕೂ ನಮ್ಮ ಮುಂದಿರುವ ಸವಾಲು.
ಬೇಸಗೆಯಲ್ಲಿ ವಿಚಿತ್ರವಾದ ಹೂವುಗಳೂ ಅರಳುತ್ತವೆ. ಸುಗಂಧ ಬೀರುತ್ತಾ ಇಡೀ ಕಾಡನ್ನೇ ಪುಷ್ಪವತಿಯನ್ನಾಗಿ ಮಾಡುತ್ತವೆ. ಅವುಗಳತ್ತ ನಮ್ಮ ಕಣ್ಣೇ ಹಾಯುವುದಿಲ್ಲ. ತೇಜಸ್ವಿಯ ಕಾದಂಬರಿಯಲ್ಲಿ ಬರುವ ಹಕ್ಕಿಗಳ ಹೆಸರನ್ನಷ್ಟೇ ಕೇಳಿ ಖುಷಿಪಟ್ಟಿದ್ದ ಗೆಳೆಯ, ಅದ್ಭುತ ಛಾಯಾಗ್ರಾಹಕ ಸತ್ಯಬೋಧ ಜೋಶಿ, ಅವನ್ನೆಲ್ಲ ಚಾರ್ಮಾಡಿ ಘಾಟಿಯ ಉದ್ದಕ್ಕೂ ನೋಡಿದಾಗ ಬೆರಗಾದರು. ಸಾಹಿತ್ಯದಿಂದಲೋ ಸುತ್ತಾಟದಿಂದಲೋ ಏನು ಉಪಯೋಗ ಎಂದು ಕೇಳುವವರಿಗೆ ಅವರ ಮಾತು ಉತ್ತರವಾಗಬಹುದು: ಇಂಥ ಪ್ರಯಾಣ ನಂಗಿಷ್ಟ. ನನ್ನ ಮಗಳಿಗೆ ಮುಂದೆ ನಾನು ಇಂಥ ಕಡೆ ಹೋಗಿದ್ದೆ, ಇಂಥ ಹಕ್ಕಿ ನೋಡಿದ್ದೆ ಅಂತ ಹೇಳಬಹುದು. ಇಲ್ಲದೇ ಹೋದರೆ ನಾನೇನು ಹೇಳಲಿ, ನನ್ನ ಜಗತ್ತು ಯಾವುದು ಅಂತ ಹೇಗೆ ತೋರಿಸಲಿ. ನನ್ನಲ್ಲಿ ಅವಳಿಗೆ ತೋರಿಸೋದಕ್ಕೆ ದೊಡ್ಡ ಮನೆಯೋ ವೈಭವದ ಬದುಕೋ ಇಲ್ಲ. ಅವಳಿಗೆ ನಾನು ಕೊಡಬಹುದಾದದ್ದು ನನ್ನ ಇಂಥ ಅನುಭವದ ತುಣುಕೊಂದನ್ನು ಮಾತ್ರ.
ಮಕ್ಕಳಿಗೆ ಅವೆಲ್ಲ ಬೇಕಾ ಎಂಬ ಪ್ರಶ್ನೆಯೂ ಇಂಥ ಹೊತ್ತಲ್ಲಿ ಅನೇಕರನ್ನು ಕಾಡೀತು. ಆದರೆ ಎರಡೂ ಜಗತ್ತನ್ನು ಕಂಡುಕೊಳ್ಳುವುದು ಅವರವರ ಭಾಗ್ಯ. ಆದರೆ ಅದಕ್ಕೆ ಬೇಕಾದ ಅವಕಾಶವನ್ನಷ್ಟೇ ನಾವು ಕಲ್ಪಿಸಬಹುದು. ನಮ್ಮ ಬಾಲ್ಯದ
ಜಗತ್ತೂ ಹಾಗೇ ಇತ್ತೆಂದು ಕಾಣುತ್ತದೆ. ಬಹುಶಃ ಅಲ್ಲಿ ಮತ್ತಷ್ಟು ಸಂಘರ್ಷಗಳಿದ್ದವೇನೋ?
ಈ ವರ್ಷ ಮಾವಿನಮಿಡಿಯಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಮಳೆ ಸುರಿಯುತ್ತದೆ. ದೇವಸ್ಥಾನದ ಜೀರ್ಣೋದ್ಧಾರ ಆಗಿಲ್ಲ, ಭಕ್ತಾದಿಗಳು ಹೆಚ್ಚಾಗಿದ್ದಾರೆ. ದೇವರ ಮಹಿಮೆಯ ಬಗ್ಗೆ ಪ್ರಚಾರ ಬೇಕು, ದುಡ್ಡಂತೂ ಧಾರಾಳವಾಗಿ ಹರಿದು ಬರುತ್ತದೆ. ಭಕ್ತರು ಉದಾರಿಗಳಾಗಿದ್ದಾರೆ.
ಉದಾರಿಗಳಾಗಬೇಕಾದದ್ದು ಭಕ್ತರೋ ದೇವರೋ ಎಂಬ ಗೊಂದಲದಲ್ಲಿ ಅರ್ಚಕರು ನಿಂತಿದ್ದರು. ದೇವರು ಉದಾರಿಯಾದರೆ ಇಡಿ ಪ್ರದೇಶ ಸುಭಿಕ್ಷವಾಗುತ್ತದೆ. ಭಕ್ತರು ಉದಾರಿಯಾದರೆ ದೊಡ್ಡ ದೇವಸ್ಥಾನ ಕಟ್ಟುತ್ತಾರೆ. ರಾಜಮಹಾರಾಜರು ಕಟ್ಟಿಸಿದ ದೇವಾಲಯಗಳನ್ನು ಪ್ರಾಚ್ಯವಸ್ತು ಇಲಾಖೆ ಶಿಲ್ಪಕಲೆಯೆಂಬ ಹೆಸರಲ್ಲಿ ಕಾಪಾಡುತ್ತದೆ. ಅಲ್ಲಿ ದೇವರೂ ಇಲ್ಲ. ಭಕ್ತಿಯೂ ಇಲ್ಲ, ಕೇವಲ ಸೌಂದರ್ಯ ಮಾತ್ರ. ಈಗಿನ ಹೊಸ ದೇವಾಲಯಗಳಲ್ಲಿ ಸೌಂದರ್ಯವೂ ಇಲ್ಲ, ಭಕ್ತಿಯೂ ಇಲ್ಲ. ಯಾರೋ ಜ್ಯೋತಿಷಿ ಎಳ್ಳು ಕೊಡಿ, ನೀರು ಕೊಡಿ, ಉಂಗುರ ಧರಿಸಿ, ಹಾರ ಹಾಕಿಕೊಳ್ಳಿ, ಹರಕೆ ಹೇಳಿ ಎಂದು ಸಲಹೆ ಕೊಡುತ್ತಾ ಭಯಂಕರ ರಗಳೆ ಮಾಡುತ್ತಿರುತ್ತಾರೆ. ಅದನ್ನು ನಂಬಿಕೊಂಡು ಹುಡುಗ ಹುಡುಗಿಯರೂ ತಾಯಿತ ಹಾಕಿಕೊಂಡು, ಕೈಗೊಂದು ದಾರ ಕಟ್ಟಿಕೊಂಡು ಓಡಾಡುತ್ತಾರೆ.
ನಮ್ಮ ಆತ್ಮವಿಶ್ವಾಸ, ಆರೋಗ್ಯವಂತ ಉಡಾಫೆ, ತಮಾಷೆ ಮಾಡುವ ಗುಣ ಮತ್ತು ನಮ್ಮ ಮೇಲೆ ನಮಗೇ ಇರುವ ನಂಬಿಕೆ ಕೂಡ ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿಕೊಂಡಿದೆಯೇನೋ ಎಂದು ಅನುಮಾನವಾಗುತ್ತದೆ.

Friday, March 26, 2010

ಪೇಜಾವರ

ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನನ್ನು ನಾನು ನೆನಪಿಸ್ಕೋತೇನೆ’ ಅಂತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಹೇಳಿದ್ದು ಮಾರನೆಯ ದಿನ ಪತ್ರಿಕೆಗಳಲ್ಲೂ ವರದಿಯಾಯಿತು. ಅವರು ಹೇಳಿದ ಸದಾಶಿವ ಯಾರು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವ ಆಸಕ್ತಿ ಇಂಗ್ಲಿಷ್ ಪತ್ರಿಕೆಯ ವರದಿಗಾರರಿಗೆ ಇರಲಿಲ್ಲ. ಕನ್ನಡ ಪತ್ರಿಕೆಗಳ ವರದಿಗಾರರು ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅಷ್ಟಕ್ಕೂ ಅವರಲ್ಲಿ ಅನೇಕರಿಗೆ ಇಬ್ಬರೂ ಸದಾಶಿವರಿರುವ ವಿಚಾರವೇ ಗೊತ್ತಿರಲಿಲ್ಲ.
ಆ ಸುದ್ದಿ ಪತ್ರಿಕೆಯಲ್ಲಿ ಬಂದ ದಿನವೇ, ಪೇಪರ್ ಓದುತ್ತಾ ರಸ್ತೆ ದಾಟುತ್ತಿದ್ದ ಸಾಹಿತ್ಯಾಸಕ್ತನೊಬ್ಬನ್ನು ಅಪರಿಚಿತ ವಾಹನವೊಂದು ತಡವಿಕೊಂಡು ಹೋಯಿತು. ಕೈಯಲ್ಲಿ ಪೇಪರ್ ಹಿಡಿದುಕೊಂಡೇ ಅವನು ಪ್ರಾಣಬಿಟ್ಟಿದ್ದ. ಪತ್ರಿಕೆ ಓದುತ್ತಾ ಕನ್ನಡ ಸರಸ್ವತಿಯ ಸೇವೆ ಮಾಡುತ್ತಾ ಪ್ರಾಣಬಿಟ್ಟದ್ದರಿಂದ ಅವನಿಗೆ ತಕ್ಷಣವೇ ಸ್ವರ್ಗಕ್ಕೆ ಪ್ರವೇಶ ಸಿಕ್ಕಿತು. ಪತ್ರಿಕೆ ಕಂಕುಳಲ್ಲಿಟ್ಟುಕೊಂಡೇ ಆ ಸಾಹಿತ್ಯಾಸಕ್ತ ಸ್ವರ್ಗಕ್ಕೆ ಕಾಲಿಟ್ಟ. ಅಲ್ಲಿನ ಸೊಬಗನ್ನು ನೋಡಿ ಬೆರಗಾಗುತ್ತಾ, ಪತ್ರಿಕೆಯನ್ನು ಅಲ್ಲಿದ್ದ ಅಮೃತಶಿಲೆಯ ಹಾಸಿನ ಮೇಲಿಟ್ಟು ಸ್ವರ್ಗದಲ್ಲೊಂದು ಸುತ್ತು ಹಾಕಲು ಹೊರಟ.
ಆ ಕಲ್ಲುಹಾಸಿನ ಮೇಲೆ ವಾಕಿಂಗ್ ಮುಗಿಸಿ ಬಂದ ಜಿಎಸ್ ಮತ್ತು ಕೆ ಎಸ್ ಆಸೀನರಾದರು. ಎಂದಿನಂತೆ ನವ್ಯ ಸಾಹಿತ್ಯ ಕ್ರಮೇಣ ನಶಿಸುತ್ತಿದೆ, ಬಂಡಾಯಕ್ಕೆ ಮೊದಲಿನ ದಮ್ಮಿಲ್ಲ, ದಲಿತ ಸಾಹಿತ್ಯದಲ್ಲಿ ಹೊಸ ಭರವಸೆಯ ಲೇಖಕರು ಹುಟ್ಟುತ್ತಿಲ್ಲ. ನಾನೀಗ ಅಲ್ಲಿದ್ದರೆ ಒಂದು ಅದ್ಭುತವಾದ ಕಾದಂಬರಿ ಬರೆಯುತ್ತಿದ್ದೆ ಎಂದು ಕೆಎಸ್ ಉತ್ಸಾಹದಲ್ಲಿ ಮಾತಾಡುತ್ತಿದ್ದರು. ಜಿಎಸ್ ಕೇಳಿಸಿಕೊಳ್ಳುತ್ತಿದ್ದರು.
ಅಷ್ಟು ಹೊತ್ತಿಗೆ ಜಿಎಸ್ ಕೈಗೆ ಸಾಹಿತ್ಯಾಸಕ್ತ ಬಿಟ್ಟು ಹೋಗಿದ್ದ ಪತ್ರಿಕೆ ಸಿಕ್ಕಿತು. ಅದನ್ನೆತ್ತಿಕೊಂಡು ಓದುತ್ತಾ, ಕೆಎಸ್ ಮಾತಿನ ದಾಳಿಯಿಂದ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಂತೆ ಅವರಿಗೆ ಅನಂತಮೂರ್ತಿಯವರ ಹೇಳಿಕೆ ಕಾಣಿಸಿತು. ಅದನ್ನು ಓದುತ್ತಲೇ ಖುಷಿಯಾಗಿ ಜಿಎಸ್ ನೋಡೋ ಇಲ್ಲಿ, ಅನಂತಮೂರ್ತಿ ನನ್ನ ಬಗ್ಗೆ ಹೇಳಿದ್ದಾನೆ’ ಅಂದರು ಜಿಎಸ್.
ಕೆಎಸ್ ಪತ್ರಿಕೆಯನ್ನು ಕಸಿದುಕೊಂಡು ಓದತೊಡಗಿದರು. ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಮಾತಾಡಿದ್ದು ವರದಿಯಾಗಿತ್ತು. ಈ ಬರಹಗಳು ತುಂಬಾ ಚೆನ್ನಾಗಿವೆ. ಇವನ್ನು ಓದುತ್ತಿದ್ದರೆ ನನಗೆ ಸದಾಶಿವ ನೆನಪಾಗುತ್ತಾನೆ. ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನು ನನ್ನ ಮೆಚ್ಚಿನ ಲೇಖಕ ಎಂದು ಅನಂತಮೂರ್ತಿ ಹೇಳಿದರು’ ಎಂದು ವರದಿಗಾರ ಬರೆದಿದ್ದ. ಕೆಎಸ್ ಅದನ್ನು ಓದಿ ಗಹಗಹಿಸಿ ನಕ್ಕರು. ಏನಾಯಿತು ಎಂಬಂತೆ ಜಿಎಸ್ ತಲೆಯೆತ್ತಿ ನೋಡಿದರು.
ಮೂರ್ತಿ ಹೇಳಿದ್ದು ನನ್ನ ಬಗ್ಗೆ’ ಅಂದರು ಕೆಎಸ್.
ಇಲ್ಲ, ನನ್ನ ಬಗ್ಗೆ ಹೇಳಿದ್ದು. ನಿನ್ನನ್ನು ಅವರು ಮರೆತು ಯಾವ ಕಾಲವಾಯಿತೋ ಏನೋ?’ ಎಂದು ಜಿಎಸ್ ಗಂಭೀರವಾಗಿ ಹೇಳಿದರು.
ನಾನೂ ಅನಂತೂ ಎಂಥಾ ಸ್ನೇಹಿತರು ಗೊತ್ತೇನೋ ನಿಂಗೆ. ನಾವು ಜೊತೆಗೇ ಕತೆ ಬರೀತಿದ್ದವರು. ನನ್ನ ಬಹಳಷ್ಟು ಕತೆಗಳನ್ನು ಅವನು ಪ್ರಿಂಟಾಗುವ ಮೊದಲೇ ಓದಿದ್ದ. ನಿನ್ನ ನೆನಪಿರೋ ಚಾನ್ಸೇ ಇಲ್ಲ’ ಕೆಎಸ್ ಹಳೆಯ ಸ್ನೇಹವನ್ನು ನೆನಪಿಸಿಕೊಂಡರು.
ಸರಿ ಅಂತ ಸುಮ್ಮನಾಗಲು ಹೊರಟ ಜಿಎಸ್, ಇದ್ದಕ್ಕಿದ್ದ ಹಾಗೆ ವಾದಿಸುವ ಹುರುಪು ಬಂದವರ ಹಾಗೆ ಮಾತು ಶುರುಮಾಡಿದರು. ಸಾಧ್ಯವೇ ಇಲ್ಲ, ನನ್ನ ಬಗ್ಗೇನೇ ಬರೆದದ್ದು. ನಾವಿಬ್ಬರೂ ಮೈಸೂರಲ್ಲಿ ಕಾಫಿ ಹೌಸಲ್ಲಿ ಕೂತು ಕತೆ ಬಗ್ಗೆ ಮಾತಾಡ್ತಿದ್ದೆವು. ನನ್ನ ಎಷ್ಟೋ ಕತೆಗಳನ್ನು ಅನಂತು ತುಂಬಾ ಹೊಗಳ್ತಿದ್ದ’.
ಹೀಗೆ ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. ಜಿಎಸ್ ತಾನು ಸಿಕ್ಕು’ ಕತೆ ಬರೆದ ಸಂದರ್ಭವನ್ನೂ ಅದನ್ನು ಸಿನಿಮಾ ಮಾಡಲು ಹೋರಾಡಿದ್ದನ್ನೂ ಹೇಳಿಕೊಂಡರು. ಅಪಘಾತ’ ಕತೆ ಬರೆದದ್ದು ಒಂದು ಸತ್ಯಘಟನೆ ಆಧರಿಸಿಯೇ ಅಂದರು. ಚಪ್ಪಲಿಗಳು ಕತೆ ಬರೆಯಲು ವೈಎನ್‌ಕೆ ಕಥಾವಸ್ತು ಕೊಟ್ಟದ್ದು, ಅದನ್ನೇ ಇಟ್ಟುಕೊಂಡು ಲಂಕೇಶ್ ನಾನಲ್ಲ’ ಅನ್ನೋ ಕತೆ ಬರೆದಿದ್ದು. ತನ್ನ ಕತೆಯೇ ಅತ್ಯುತ್ತಮ ಎಂದು ವೈಎನ್‌ಕೆ, ಅನಂತಮೂರ್ತಿ ಎಲ್ಲರೂ ಹೇಳಿದ್ದು- ಹೀಗೆ ಜಿಎಸ್ ಮತ್ತಷ್ಟು ಘಟನೆಗಳನ್ನು ನೆನಪು ಮಾಡಿಕೊಟ್ಟರು.
ಕೆಎಸ್ ಸುಮ್ಮನಿರಲಿಲ್ಲ. ನನ್ನ ಸಮಗ್ರ ಕತೆಗಳಿಗೆ ಅನಂತು ಒಂದು ಟಿಪ್ಪಣಿ ಬರೆದಿದ್ದಾನೆ, ಓದಿದ್ದೀಯಾ? ನಾವಿಬ್ರೂ ಸೇರಿ ಏನೇನು ಆಟ ಆಡಿದ್ದೀವಿ ಗೊತ್ತೇನೋ ನಿಂಗೆ. ಇಬ್ಬರೂ ಆ ಕಾಲಕ್ಕೆ ಬಡವರಾಗಿದ್ವಿ. ಆದರೆ ಬಡತನ ತೋರಿಸಿಕೊಳ್ತಿರಲಿಲ್ಲ. ಕ್ಷ್ವಾರ ಮಾಡಿಸೋದಕ್ಕೆ ಇಬ್ಬರೂ ಜೊತೆಗೇ ಹೋಗ್ತಿದ್ವಿ. ಒಂದ್ಸಾರಿ ನಾನು ತಮಾಷೆ ಮಾಡೋದಕ್ಕೆ ಅಂತ ನನ್ನ ತಮ್ಮ ಇವನು, ಸಣ್ಣದಾಗಿ ಕಟ್ಟಿಂಗ್ ಮಾಡು’ ಅಂದಿದ್ದೆ. ಕಟ್ಟಿಂಗ್ ಮುಗಿಸಿ ಹೊರಡ್ತಾ ದುಡ್ಡು ನಮ್ಮಣ್ಣನ ಹತ್ರ ತಗೊಳ್ಳಿ’ ಅಂತ ಅನಂತು ಹೇಳಿ ಹೊರಟು ಹೋಗಿದ್ದ. ಅಂಥಾ ತರಲೆಗಳು ನಾವು. ಯಾರಾದ್ರೂ ಬಕ್ಕತಲೆಯವರು ಕಂಡ್ರೆ ಇದ್ದಕ್ಕಿದ್ದ ಹಾಗೆ ಅನಂತು ನಿನ್ನ ಟೋಫನ್‌ಗೆ ಎಷ್ಟು ಕೊಟ್ಟೆ’ ಅಂತ ಕೇಳ್ತಿದ್ದ. ನಂದು ಟೋಫನ್ ಅಂತ ಇಬ್ಬರೂ ಸೇರಿ ಅವನನ್ನು ನಂಬಿಸಿಬಿಡ್ತಿದ್ವಿ.’
ಆದ್ರೆ ನೀನು ಪತ್ರಕರ್ತರು ಬರೆಯೋ ವರದಿ ಥರದ ಕತೆ ಬರೀತಿ ಅಂತ ಅನಂತು ನಿನ್ನ ತಿರಸ್ಕಾರದಿಂದ ಕಾಣ್ತಿದ್ದ’ ಅಂದರು ಜಿಎಸ್.
ಅದು ಆರಂಭದಲ್ಲಿ. ಆದ್ರೆ ನಾನು ನಲ್ಲಿಯಲ್ಲಿ ನೀರು ಬಂದದ್ದು’ ಬರೆದ ನಂತರ ತುಂಬಾ ದೊಡ್ಡ ಕತೆಗಾರ ಅಂತ ಮೆಚ್ಕೊಂಡಿದ್ದ. ನಿನ್ನ ಕತೆಗಳನ್ನು ಅವನು ಏಕಾಂತದಲ್ಲಿ ಮೆಚ್ಕೋತಿದ್ದ, ಅದೂ ಅನುಕಂಪದಿಂದ’
ಜಿಎಸ್‌ಗೆ ಸಿಟ್ಟು ಬಂತು. ನಿನ್ನ ರಾಮನ ಸವಾರಿ ಸಂತೆಗೆ ಹೋದದ್ದು’ ಸಿನಿಮಾ ಆಗಬೇಕು ಅಂತ ಆಶೆಯಿತ್ತು ನಿಂಗೆ. ಆಗಲಿಲ್ಲ. ನನ್ನ ಸಿಕ್ಕು’ ಸಿನಿಮಾ ಆಯ್ತು. ಅದಕ್ಕೇ ನಿಂಗೆ ಹೊಟ್ಟೆಕಿಚ್ಚು’ ಎಂದು ಕೋಪದಿಂದ ಹೇಳಿದರು. ಸಿನಿಮಾ ಆದ್ರೇನಂತೆ. ರಿಲೀಸ್ ಆಗಿಲ್ಲವಲ್ಲ’ ಎಂದು ಕೆಎಸ್ ಕೊಂಚ ಜೋರಾಗಿಯೇ ಗೊಣಗಿಕೊಂಡರು. ಮತ್ತೆ ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನೇ ಕೂತರು.
ಹೋಗ್ಲಿ ಬಿಡೋ, ಯಾರ ಬಗ್ಗೆ ಹೇಳಿದ್ರೆ ಏನಂತೆ? ಅದಕ್ಕೋಸ್ಕರ ನಾವು ಜಗಳ ಆಡೋದು ಬೇಡ ಬಿಡು. ನಿನ್ನ ಬಗ್ಗೇನೇ ಹೇಳಿದ್ದು ಅಂತಿಟ್ಕೋ. ಐ ವಿತ್‌ಡ್ರಾ’
ಅಷ್ಟು ಹೇಳಿ ಜಿ ಎಸ್ ಸುಮ್ಮನಾದರು. ಕೆ ಎಸ್‌ಗೆ ಸಮಾಧಾನವಾದಂತೆ ಕಾಣಲಿಲ್ಲ. ಎದ್ದು ಹೋಗಿ, ಸ್ವರ್ಗದ ಅಂಚಲ್ಲಿ ನಿಂತು ಕೆಳಗೆ ನೋಡಿದರು. ತಮಗೆ ಗೊತ್ತಿದ್ದವರು ಯಾರಾದರೂ ಕಾಣಿಸುತ್ತಾರೇನೋ ಎಂದು ಹುಡುಕಾಡಿದರು. ಯಾರೂ ಕಾಣಿಸಲಿಲ್ಲ. ಯಾವುದೋ ಬೀದಿಯಲ್ಲಿ ಒಂದಷ್ಟು ಮಂದಿ ಹೆಂಗಸರು ಬಿಂದಿಗೆ ಹಿಡಕೊಂಡು ನಲ್ಲಿಯಲ್ಲಿ ನೀರು ಬರಲಿಲ್ಲ ಎಂದು ಗೊಣಗುತ್ತಿದ್ದರು. ತಾನು ಕತೆ ಬರೆದು ಇಷ್ಟು ವರ್ಷಗಳಾದರೂ ಸಮಸ್ಯೆ ನೀಗಿಲ್ಲವಲ್ಲ ಎಂದುಕೊಂಡು ಮತ್ತೊಂದು ದಿಕ್ಕಿಗೆ ತಿರುಗಿ ಕಣ್ಣು ಹಾಯಿಸಿದರೆ ರಾಮನ ಸವಾರಿ ಸಂತೆಗೆ ಹೊರಟಿತ್ತು. ಮತ್ತದೇ ಕತೆ ಎಂದು ಗೊಣಗಿಕೊಂಡು ಬಂದು ಪೇಪರ್ ಕೈಗೆತ್ತಿಕೊಂಡು ಜಿಎಸ್ ಮುಖ ನೋಡಿದರು. ಅದು ಸಿಕ್ಕುಗಟ್ಟಿತ್ತು. ಇದ್ದಕ್ಕಿದ್ದಂತೆ ಕೆ. ಎಸ್. ದೊಡ್ಡದನಿಯಲ್ಲಿ ಇಲ್ನೋಡೋ’ ಅಂತ ಕೂಗಿಕೊಂಡರು. ಮತ್ತದೇ ರಗಳೆ ಎತ್ತುತ್ತಾನೆ ಅಂದುಕೊಂಡು ಜಿಎಸ್ ಪ್ರತಿಕ್ರಿಯಿಸಲಿಲ್ಲ. ನೋಡೋ ಇಲ್ಲಿ, ನಾಡಿಗ, ಚಿಮೂ, ಎನ್ನೆಸ್ಸೆಲ್ ನಾಮರ್ದಗಳು ಅಂತ ಪೇಪರಲ್ಲಿ ಬರೆದಿದ್ದಾರೆ. ಚಂಪಾ ಮಾತಾಡ್ತಾ ಹಾಗಂದಿದ್ರಂತೆ’ ಅಂತ ಕೆಎಸ್ ಹೇಳಿದರೂ ಜಿಎಸ್‌ಗೆ ಉತ್ಸಾಹ ಬರಲಿಲ್ಲ. ಏನಾದ್ರೂ ಬರ್ಕೊಳ್ಳಲಿ ಬಿಡೋ’ ಅಂತ ಜಿ ಎಸ್ ಮತ್ತೆ ಹಳೇ ಭಂಗಿಗೆ ಮರಳಿದರು.
ಹಾಗಂದ್ರೆ ಹೇಗೋ ಆಗತ್ತೆ. ಇಲ್ನೋಡೀಗ, ಎನ್ನೆಸ್ಸೆಲ್ ಅಂತ ಬರೆದಿದ್ದಾರೆ, ನಾಡಿಗ ಅಂತ ಬರೆದಿದ್ದಾರೆ. ಅವರು ಯಾರೂ ಅಂತ ಎಲ್ಲರಿಗೂ ಹೇಗೋ ಗೊತ್ತಾಗುತ್ತೆ. ನಮ್ಮದು ಇದೇ ಕೇಸು. ಸುಮ್ಮನೆ ಸದಾಶಿವ ಅಂತ ಹೇಳಿಬಿಟ್ರೆ ನೀನೋ ನಾನೋ ಅಂತ ಎಲ್ಲರಿಗೂ ಗೊತ್ತಾಗೋದು ಹೇಗೆ? ಇದನ್ನು ಸುಮ್ನೆ ಬಿಡಬಾರದು’ ಎಂದರು ಕೆಎಸ್. ಅವರು ಅದನ್ನು ಇತ್ಯರ್ಥ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬಂದಂತಿತ್ತು. ಜಿಎಸ್ ಅದನ್ನು ಮರೆಯಲು ನಿರ್ಧರಿಸಿದ್ದರು.
ಅದಾಗಿ ಒಂದು ವಾರಕ್ಕೆ ದಂತಗೋಪುರದಲ್ಲಿ ಕೂತು ಜಿಎಸ್ ದಣಿವಾರಿಸಿಕೊಳ್ಳುತ್ತಿದ್ದರು. ಅಷ್ಟು ಹೊತ್ತಿಗೆ ಕೆಎಸ್ ಓಡೋಡಿ ಬರುತ್ತಿರುವುದು ಕಾಣಿಸಿತು. ಬಂದವರೇ ಏದುಸಿರು ಬಿಡುತ್ತಾ, ಬೇಗ ಬಾ, ಒಂದು ತಮಾಷೆ ತೋರಿಸ್ತೀನಿ’ ಅಂದರು ಕೆಎಸ್. ಏನು ಅಂತ ಕೇಳುವುದರೊಳಗೆ ಜಿಎಸ್ ಕೈ ಹಿಡಕೊಂಡು ಹೊರಟೇ ಬಿಟ್ಟರು.
ಇಬ್ಬರೂ ಸ್ವರ್ಗದ ಅಂಚಿಗೆ ಬಂದು ನಿಂತರು. ಯಾರಿಗಾದ್ರೂ ನಮಗೆ ಬಂದ ಅನುಮಾನ ಬರುತ್ತೇನೋ ಅಂತ ಕಾದೆ. ಎಲ್ಲರೂ ಹಾಳುಬಿದ್ದುಹೋಗಿದ್ದಾರೆ ಕಣಯ್ಯ. ಒಬ್ಬರಿಗೂ ಸಾಹಿತ್ಯದಲ್ಲಿ ನಿಜವಾದ ಆಸಕ್ತಿ ಇಲ್ಲ. ಅನಂತು ಹಾಗೆ ಹೇಳಿದ್ದು ಯಾರ ಬಗ್ಗೆ ಅಂತ ತಿಳ್ಕೊಳ್ಳೋ ಆಸಕ್ತಿಯೂ ಇಲ್ಲ. ಅದಕ್ಕೇ ಒಂದು ಉಪಾಯ ಮಾಡಿದ್ದೀನಿ. ಅಲ್ನೋಡು, ಅಲ್ಲಿ, ನೀಲಿ ಶರ್ಟು ಹಾಕ್ಕೊಂಡಿದ್ದಾನಲ್ಲ, ಅವನ ತಲೆಯೊಳಗೆ ಈ ಪ್ರಶ್ನೆ ಬಿಟ್ಟಿದ್ದೇನೆ. ಅವನು ಅನಂತು ಮನೆಗೇ ಹೋಗ್ತಿದ್ದಾನೆ. ಈಗ ಗೊತ್ತಾಗತ್ತೆ ತಡಿ, ನೀನೋ ನಾನೋ ಅಂತ’ ಎಂದು ಹುರುಪಿನಿಂದ ಜಿಎಸ್ ಮುಖ ನೋಡಿದರು. ಜಿಎಸ್ ನಿರುತ್ಸಾಹದಿಂದ ಸುಮ್ಮನೆ ನಿಂತಿದ್ದರು.
ನೀಲಿ ಶರಟಿನ ವ್ಯಕ್ತಿ ಅನಂತಮೂರ್ತಿಯವರ ಮನೆಗೆ ಬಂದು ತನ್ನನ್ನು ಸಾಹಿತ್ಯದ ಆಸಕ್ತಿ ಇರುವ ಪತ್ರಕರ್ತ ಎಂದು ಪರಿಚಯಿಸಿಕೊಂಡಿತು. ತಪ್ಪುತಪ್ಪಾಗಿ ವರದಿ ಮಾಡ್ತೀರಯ್ಯ ನೀವೆಲ್ಲ’ ಎಂದು ಬೈಸಿಕೊಂಡಿತು. ಕೊನೆಗೆ ಧೈರ್ಯಮಾಡಿ ಪ್ರಶ್ನೆ ಕೇಳಿಯೇ ಬಿಟ್ಟಿತು.
ಸರ್, ಆವತ್ತು ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನೀವು ಸದಾಶಿವ ತುಂಬ ಒಳ್ಳೆಯ ಬರಹಗಾರ ಅಂದಿದ್ರಿ. ನೀವು ಹೇಳಿದ್ದು ಯಾವ ಸದಾಶಿವ ಬಗ್ಗೆ ಅಂತ ಗೊತ್ತಾಗ್ಲಿಲ್ಲ. ಯಾರ ಬಗ್ಗೆ ಅಂತ ಹೇಳ್ತೀರಾ?’ ಎಂದು ಕೇಳಿ ಉತ್ತರಕ್ಕಾಗಿ ಕಾದು ಕೂತಿತು.
ಜಿಎಸ್ ಸದಾಶಿವ ಮತ್ತು ಕೆ ಸದಾಶಿವ ಕಿವಿ ನಿಮಿರಿಸಿಕೊಂಡು ಉತ್ತರಕ್ಕಾಗಿ ಕಾದರು.
ಪೇಜಾವರ ಸದಾಶಿವ. ತುಂಬ ಒಳ್ಳೇ ಪದ್ಯ ಬರೀತಿದ್ದ, ನಾಟ್ಯೋತ್ಸವ ಅಂತ ಒಂದು ....’
ನೀಲಿ ಶರಟು ಮಾತ್ರ ಹುಸಿ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿತ್ತು.

Tuesday, March 9, 2010

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮುಂಗಡ ಪತ್ರ

ಟೀವಿಯಲ್ಲಿ ಆತ ಅವಸರವಸರವಾಗಿ ಏನೋ ಓದುತ್ತಿದ್ದರು. ಇನ್ಯಾರೋ ಕಿರುಚುತ್ತಿದ್ದರು. ಮತ್ಯಾರೋ ಹಿಂದೆ ನಿಂತುಕೊಂಡು ಕಿರುಚಾಡುತ್ತಿದ್ದರು. ಮತ್ತೊಂದೆಡೆ ಯಾರೋ ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೂತಿದ್ದರು. ಎಲ್ಲರಿಗೂ ಧಾವಂತ ಇನ್ನೊಬ್ಬರಿಗಿಂತ ತಾವೇ ಮೊದಲು ಪ್ರಶ್ನೆ ಕೇಳಿಬಿಡುವ ಆತುರ.
ಮೊನ್ನೆ ಮೊನ್ನೆ ತನಕ ಒದ್ದಾಟದಲ್ಲಿದ್ದ, ಎಲ್ಲೆಲ್ಲೋ ಓಡಾಡುತ್ತಿದ್ದ, ಚಿಂತಾಕ್ರಾಂತನಾಗಿ ಅಲೆದಾಡುತ್ತಿದ್ದ ವ್ಯಕ್ತಿ ಅಷ್ಟು ಬೇಗ ಇಡೀ ರಾಜ್ಯದ ಆಯವ್ಯಯ ಲೆಕ್ಕಾಚಾರವನ್ನು ಹಿಡಿದಿಡಲು ಸಾಧ್ಯವಾಗುತ್ತದಾ ಎಂದು ಯೋಚಿಸುತ್ತಿದ್ದೆ. ಅದಕ್ಕೋಸ್ಕರ ಆತ ಎಷ್ಟು ಗಂಟೆ ವ್ಯಯಿಸಿರಬಹುದು. ಆತನ ಸಹಾಯಕರು ಯಾವ ಮಾನದಂಡಗಳನ್ನು ಬಳಸಿರಬಹುದು. ಸುಲಭವಾಗಿ ಸಿಗುವ ಆದಾಯವನ್ನು ಬಾಚಿಕೊಂಡು, ಮುಂದಿನ ಚುನಾವಣೆಗೆ ನೆರವಾಗುವುದಕ್ಕೆ ಒಂದಷ್ಟು ರಿಯಾಯಿತಿ ತೋರಿಸಿ, ಅರ್ಥ ಪಂಡಿತರು ಹೇಳಿದ ಕೆಲವೊಂದು ಸಂಗತಿಗಳನ್ನು ಅಳವಡಿಸಿಕೊಂಡು, ಧರ್ಮಭೀರು ಅನ್ನಿಸಿಕೊಳ್ಳುವುದಕ್ಕೆ ವಿವಿಧ ಮಠಮಾನ್ಯಗಳಿಗೆ ದಾನ, ಅನುದಾನ ಕೊಟ್ಟು, ಪತ್ರಕರ್ತರ ಕಣ್ಣೊರೆಸಿದಂತೆ ಮಾಡಿ....
ಇಡೀ ರಾಜ್ಯವನ್ನು ಕಣ್ಮುಂದೆ ತಂದುಕೊಂಡು ಆತ ಕನಿಷ್ಠ ಒಂದು ಗಂಟೆ ಧ್ಯಾನಿಸಿರಬಹುದೇ? ಯಾರೋ ಯಾವತ್ತೋ ಸಿದ್ಧಮಾಡಿಟ್ಟು ಹೋದ ಒಂದು ಕೋಷ್ಠಕವನ್ನು ತುಂಬುವ ಕೆಲಸ ಮಾತ್ರ ಆಗುತ್ತಿದೆ ಎಂದು ಇವತ್ತಿನ ಬಜೆಟ್ ನೋಡಿದ ಯಾರಿಗಾದರೂ ಅನ್ನಿಸದೇ ಇರದು. ಕಾರು, ಪೆಟ್ರೋಲು, ಸಿಗರೇಟು, ಬಂಗಾರ, ಮದ್ಯ ತುಟ್ಟಿ. ಕಂಪ್ಯೂಟರ್ರು, ಮೊಬೈಲ್ ಅಗ್ಗ. ಅದ್ಯಾವುದ್ಯಾವುದೋ ಊರಿಗೆ ಎಕ್ಸ್‌ಪ್ರೆಸ್ ಹೈವೇ. ಚತುಷ್ಪಥ ರಸ್ತೆ. ಇಂಥದ್ದೇ ತುಂಬಿಕೊಂಡು ಹೊಸದಾಗಿ ಚಿಂತಿಸಲೂ ಆಗದ ಹಳೆಯ ತಲೆ.
ತುಂಬ ಮೆಲೋಡ್ರಾಮಾಟಿಕ್ ಆಗದೇ ಯೋಚಿಸಲು ಯತ್ನಿಸೋಣ. ಇತ್ತೀಚೆಗೆ ನಾವೊಂದಷ್ಟು ಸ್ನೇಹಿತರು ಯಾವುದೋ ಕಾರ್ಯನಿಮಿತ್ತ ಊರೂರು ಸುತ್ತುತ್ತಿದ್ದೆವು. ಚಿಕ್ಕಪುಟ್ಟ ಹಳ್ಳಿಗಳನ್ನೆಲ್ಲ ಸವರಿಕೊಂಡು ಹೋಗುತ್ತಿದ್ದೆವು. ಸೋಮನಮನೆ ಎಂಬ ಉತ್ತರ ಕನ್ನಡದ ಹಳ್ಳಿಯಿಂದ ರಾತ್ರೋ ರಾತ್ರಿ ಹೊರಟು, ಎಷ್ಟೋ ದೂರ ಸವೆಸಿದ ಮೇಲೆ ನಮಗೊಂದು ಪುಟ್ಟ ಅಂಗಡಿ ಸಿಕ್ಕಿತು. ರಾತ್ರಿ ಒಂಬತ್ತಾದರೂ ತೆರೆದೇ ಇದ್ದ ಆ ಅಂಗಡಿಯಲ್ಲಿ ಆತ ಮಾರುತ್ತಿದ್ದದ್ದು ಏನು ಎಂದು ನೋಡಿದರೆ ಆಶ್ಚರ್ಯ ಕಾದಿತ್ತು. ಮನೆಯಲ್ಲಿ ಮಾಡಿ ತಂದಿದ್ದ ಇಡ್ಲಿಗಳನ್ನು ಆತ ಒಂದಕ್ಕೆ ಒಂದು ರುಪಾಯಿಯಂತೆ ಮಾರುತ್ತಿದ್ದ. ಅಲ್ಲಿಗೆ ಇಡ್ಲಿ ತಿನ್ನುವುದಕ್ಕೆ ಬರುವವರಲ್ಲಿ ಹೆಚ್ಚಿನವರು ತೋಟದಲ್ಲಿ ಕೆಲಸ ಮಾಡುವವರು. ಅವರು ವಾರಕ್ಕೊಮ್ಮೆ ಅವನಿಗೆ ದುಡ್ಡು ಕೊಡುತ್ತಾರೆ. ಆ ಹುಡುಗರು ಅಲ್ಲೇಕೆ ಬಂದು ತಿನ್ನುತ್ತಾರೆ ಎಂದು ಯೋಚಿಸುತ್ತಿದ್ದೆ.
ಹಳ್ಳಿಗಳಲ್ಲಿ ರಾತ್ರಿಯೂಟವನ್ನು ಹೊಟೆಲ್ಲಿನಲ್ಲಿ ಮಾಡುವ ಸಂಪ್ರದಾಯವೇ ಇರಲಿಲ್ಲ. ಕೆಲಸಕ್ಕೆ ಹೋಗುವ ಕೂಲಿಯಾಳುಗಳು ಕೂಡ ಗಡಂಗಿಗೆ ಹೋಗಿ ಒಂದೆರಡು ಗ್ಲಾಸು ಶೇಂದಿ ಏರಿಸಿಕೊಂಡು ಹಾಡುತ್ತಾ ಮನೆಯ ಹಾದಿ ಹಿಡಿಯುತ್ತಿದ್ದರು. ಮನೆಯಲ್ಲಿ ಗಂಜಿ ಮತ್ತು ಮೀನಿನ ಚಟ್ನಿ ತಿಂದು ಮಲಗುತ್ತಿದ್ದರು. ಆದರೆ ಈ ಮಂದಿಯೇಕೆ ಇಲ್ಲಿಗೆ ಬರುತ್ತಿದ್ದಾರೆ ಎಂದು ವಿಚಾರಿಸಿದಾಗ, ಅವರ ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಯಾರೂ ಇಲ್ಲ ಎಂದು ಗೊತ್ತಾಯಿತು.
ಅವರಲ್ಲಿ ಬಹಳಷ್ಟು ಮಂದಿಗೆ ಮದುವೆ ಆಗಿರಲಿಲ್ಲ. ಅನೇಕರಿಗೆ ಮದುವೆಯಾಗುವ ವಯಸ್ಸು ದಾಟಿತ್ತು. ಕೂಲಿ ಕಾರ್ಮಿಕರನ್ನು ಯಾರು ತಾನೇ ಮದುವೆ ಆಗ್ತಾರೆ ಅಂತ ಅಂಗಡಿಯಾತ ಬೇಸರದಿಂದ ನಕ್ಕ. ಅವನಿಗೆ ಐವತ್ತೋ ಐವತ್ತಾರೋ ಇರಬೇಕು. ನಮ್ಮ ಮದುವೆ ಆಗಿ ಹೋಗಿದ್ದು ಪುಣ್ಯ. ಈಗಿನ ಹುಡುಗರ ಅವಸ್ಥೆ ನೋಡಿ ಅಂತ ತೋರಿಸಿದ.
ಹುಡುಗರು ಇಡ್ಲಿ ತಿಂದು, ನೀರು ಕುಡಿದು ಬೀಡಿ ಸೇದುತ್ತಾ ಮಧ್ಯರಾತ್ರಿಯ ತನಕ ಅಲ್ಲೇ ಕೂತಿದ್ದರು. ಎಷ್ಟು ದಿನ ಅಂತ ಹೀಗೇ ಬದುಕ್ತಾರೆ ಹೇಳಿ, ಒಂಚೂರು ತಲೆಕೆಟ್ಟರೆ ಕೋವಿ ಹಿಡೀತಾರೆ. ಆಮೇಲೆ ಅವರನ್ನು ಹುಡುಕೋದಕ್ಕೆ ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತೆ. ಅದರ ಬದಲು ಈಗಲೇ ಇವರಿಗೇನಾದರೂ ಮಾಡೋದಕ್ಕಾಗಲ್ವಾ ಅಂದರು. ಆ ಕ್ಷಣಕ್ಕೆ ನಮಗೆಲ್ಲ ಅದೊಂದು ಸರಳವಾದ, ಆಗದ ಹೋಗದ ಮಾತಿನಂತೆ ಕಂಡಿತ್ತು.
ಗ್ರಾಮಗಳು, ಹಳ್ಳಿಗಳೂ ಹೇಗೆ ನಗರದಿಂದ ಹೊರಗೆ ಉಳಿಯುತ್ತಲಿವೆ ಎಂದು ಯೋಚಿಸಿ. ಎಲ್ಲರೂ ಚತುಷ್ಪಥ ರಸ್ತೆಯ ಬಗ್ಗೆ ಯೋಚಿಸುತ್ತಿದ್ದಾರೆ. ಖೇಣಿಯಂಥವರು ರಸ್ತೆ ಮಾಡಿ ಅದಕ್ಕೆ ಎರಡೂ ಬದಿಯಲ್ಲಿ ಬೇಲಿ ಹಾಕಿ, ಆ ರಸ್ತೆಗೆ ಹಳ್ಳಿಯ ಮಂದಿ ಕಾಲಿಡದ ಹಾಗೆ ಮಾಡುತ್ತಾರೆ. ಇವತ್ತು ಇಲ್ಲಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಹೋಗಿ ಬರಬೇಕು ಅಂದರೆ ಇನ್ನೂರು ರುಪಾಯಿ ಟೋಲ್ ಫೀ ಕಟ್ಟಬೇಕು. ಮಂಗಳೂರು ರಸ್ತೆಯಲ್ಲಿ ವೈಷ್ಣೋದೇವಿ ಸೇತುವೆಗೆ ಶತಮಾನಗಳಿಂದ ಸುಂಕ ವಸೂಲಿ ಮಾಡುತ್ತಲೇ ಇದ್ದಾರೆ.
ಒಳ್ಳೆಯ ರಸ್ತೆಗೆಂದು ಮುಂಗಡ ಪತ್ರ ಅದೆಷ್ಟೋ ಲಕ್ಷ ಕೋಟಿ ರುಪಾಯಿಗಳನ್ನು ಎತ್ತಿಡುತ್ತದೆ. ರಸ್ತೆಯೂ ನಿರ್ಮಾಣ ಆಗುತ್ತದೆ. ಆ ರಸ್ತೆಗೆ ಮತ್ತೆ ನಾವು ಟೋಲ್ ಫೀ ಕೊಟ್ಟೇ ಓಡಾಡಬೇಕು. ಬಸ್ಸುಗಳಲ್ಲಿ ಹೋದರೂ ಟಿಕೆಟ್ಟಿಗೆ ಎರಡು ರುಪಾಯಿ ಟೋಲ್ ಫೀ.
ಮೊನ್ನೆ ಕಾರ್ಕಳ ಎಂಬ ಪುಟ್ಟ ಊರಿಗೆ ನಡುರಾತ್ರಿ ಕಳೆದ ನಂತರ ತಲುಪಿದರೆ, ಅಲ್ಲಿ ಸರ್ಕಲ್ಲಿನಲ್ಲೊಬ್ಬ ಹಿರಿಯರು ಆಮ್ಲೆಟ್ಟು ಟೀ ಮಾರುತ್ತಾ ಕೂತಿದ್ದರು. ಬ್ರೆಡು, ಆಮ್ಲೆಟ್ಟು, ಟೀ ಧಾರಾಳವಾಗಿ ಸಿಗುತ್ತಿತ್ತು. ಬೆಳಗಿನ ತನಕ ದುಡಿಯುತ್ತಾರೆ ಅಂತ ಯಾರೋ ಹೇಳಿದರು. ಅಲ್ಲೇ ಪಕ್ಕದಲ್ಲಿ ಒಂದು ಟಾಟ ಸುಮೋ ನಿಂತಿತ್ತು. ಅದರೊಳಗಿನಿಂದ ನಾಲ್ಕಾರು ಕಾಲೇಜು ಹುಡುಗರು, ಒಬ್ಬಳು ಹುಡುಗಿ ಕೆಳಗಿಳಿದರು. ಅವರು ಕಾರಲ್ಲೇ ಕುಳಿತು ಕುಡಿದು ಮುಗಿಸಿದಂತಿತ್ತು. ಅವರ ಜೊತೆಗಿದ್ದ ಹುಡುಗಿ, ಒಂದು ಬ್ರೆಡ್ಡು ಆಮ್ಲೆಟ್ಟು ತಿಂದು ರಸ್ತೆ ಪಕ್ಕ ನಿಂತಿದ್ದಳು. ಸ್ವಲ್ಪ ಹೊತ್ತಿಗೆ ಅದೇ ಟಾಟಾ ಸುಮೋ ಮರಳಿ ಬಂತು. ಅದರಲ್ಲಿ ಮತ್ತೊಂದಷ್ಟು ಹುಡುಗರು ಬಂದಿದ್ದರು. ಆಕೆಯನ್ನು ಹತ್ತಿಸಿಕೊಂಡ ಸುಮೋ ಕತ್ತಲ ರಸ್ತೆಯಲ್ಲಿ ಮರೆಯಾಯಿತು.
ನಾನಿಲ್ಲಿ ರಾತ್ರಿ ಪೂರ ದುಡಿಯುತ್ತೇನೆ. ನನ್ನ ಮಗ ಬೆಳಗ್ಗೆ ಜಬರದಸ್ತು ಮಾಡಿ ನೂರೋ ಇನ್ನೂರೋ ಕಿತ್ತುಕೊಂಡು ಹೋಗುತ್ತಾನೆ. ಅವನೂ ಹೀಗೆಯೇ ಈ ಹುಡುಗರ ಜೊತೆ ಸೇರಿ ಹಾಳಾಗಿದ್ದಾನೆ. ನಾವು ಹಳ್ಳಿಗಳು ಇದ್ದದ್ದರಲ್ಲಿ ಒಳ್ಳೇದು ಅಂತೀವಿ. ಈಗ ಹಾಗೇನಿಲ್ಲ’ ಅಂತ ತುಂಬ ಹೊತ್ತು ಅಲ್ಲೇ ಕೂತಿದ್ದ ನಮ್ಮ ಜೊತೆ ಆ ಅಂಗಡಿಯ ಹಿರಿಯರು ಹೇಳಿದರು.
ಕಾರ್ಕಳದ ರಸ್ತೆಯಲ್ಲಿ ನಿಂತು ನೋಡಿದರೆ ಕುದುರೆಮುಖದ ಇನ್ನೊಂದು ಬದಿ ಹಬ್ಬಿ ನಿಂತದ್ದು ಕಾಣಿಸುತ್ತದೆ. ಕತ್ತಲಲ್ಲಿ ಆ ಆಕಾರ ನಿಗೂಢವಾಗಿ ಕಂಡು ಹಾಗೇ ನೋಡುತ್ತಾ ನಿಲ್ಲುವ ಆಸೆಯಾಗುತ್ತದೆ. ಆ ಬೆಟ್ಟಗಳಿಗೆ ಬೇಸಗೆಯಲ್ಲಿ ಕಾಡ್ಗಿಚ್ಚು ಹತ್ತಿಕೊಂಡು ಹವಳದ ಹಾರ ತೊಡಿಸಿದಂತೆ ಕಾಣುತ್ತದೆ. ಆ ಹಿರಿಯರ ಮಾತುಗಳನ್ನು ಕೇಳಿದಾಗ ಅದನ್ನೆಲ್ಲ ನೋಡಬೇಕು ಅನ್ನಿಸಲಿಲ್ಲ. ಕೆ ಎಸ್ ನ ತುಂಬ ಹಿಂದೆ ಬರೆದ ನಾಲ್ಕು ಸಾಲುಗಳು ನೆನಪಾದವು:
ಬತ್ತಿದ ಕೆರೆಯಂಗಳದಲಿ
ಹಾಡು ಹಕ್ಕಿ ಸತ್ತಿದೆ
ಅದರ ಕತೆಯ ಕೇಳಲಿಕ್ಕೆ
ಯಾರಿಗೆ ಪುರುಸೊತ್ತಿದೆ?
*********
ಸುಮ್ಮನೆ ಯೋಚಿಸುತ್ತಿದ್ದೆ. ನಾವು ಹೇಗೆ ಬದಲಾಗುತ್ತಾ ಬಂದಿದ್ದೇವೆ. ಬಡತನವನ್ನು ಮೀರುತ್ತಾ, ದಾಟುತ್ತಾ, ಆಧುನಿಕರಾಗುತ್ತಾ, ವೈಜ್ಞಾನಿಕವಾಗಿ ಮುಂದುವರಿಯುತ್ತಾ, ಗಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲಿ ಓಡುವ ಕಾರುಗಳಲ್ಲಿ ಓಡಾಡುತ್ತಾ, ರಸಗ್ರಹಣ ಶಕ್ತಿಯನ್ನು ಮಾತ್ರ ಕಳೆದುಕೊಂಡಿದ್ದೇವೆ. ಯೂಜಿ ಕೃಷ್ಣಮೂರ್ತಿ ಹೇಳುತ್ತಿದ್ದರು. ಅಮೆರಿಕನ್ ಮಹಿಳೆ ಎಂಥ ದಡ್ಡಿಯೆಂದರೆ ಗೋಡಂಬಿ ತುಂಬಿದ ಡಬ್ಬವನ್ನು ಅಂಗಡಿಯಿಂದ ತಂದಾಗ, ಆ ಡಬ್ಬದ ಮೇಲೆ ಅದನ್ನು ತೆರೆಯುವುದು ಹೇಗೆ ಅನ್ನುವುದನ್ನೂ ಬರೆದಿರಬೇಕಾಗುತ್ತದೆ. ಇನ್‌ಸ್ಟ್ರಕ್ಷನ್ಸ್ ಟು ಓಪನ್- ಇಲ್ಲದೇ ಹೋದರೆ ಅವಳಿಗೆ ಡಬ್ಬ ತೆರೆಯುವುದು ಹೇಗೆ ಅಂತಲೂ ಗೊತ್ತಾಗುವುದಿಲ್ಲ. ಅದನ್ನೇ ಕೋತಿಯ ಕೈಗೆ ಕೊಟ್ಟರೆ ಸುಲಭವಾಗಿ ಮುಚ್ಚಳ ತೆಗೆಯುತ್ತದೆ.
ನಮಗೀಗ ಸೂಚನೆಗಳು ಬೇಕು, ಸಲಹೆ ಕೊಡುವವರು ಬೇಕು. ದಿನ ಬೆಳಗಾಗೆದ್ದು ಅರ್ಧ ಗಂಟೆ ನಡೆಯಿರಿ ಎಂದು ಹೇಳುವುದಕ್ಕೊಬ್ಬ ಡಾಕ್ಟರ್, ಎರಡು ಇಡ್ಲಿ ಜೊತೆಗೆ ಮೂರು ಕ್ಯಾರಟ್ ತುಂಡು ತಿನ್ನಿ ಎಂದು ಹೇಳುವುದಕ್ಕೆ ಒಬ್ಬ ಡಯಟೀಷಿಯನ್, ಯಾವ ಬಣ್ಣದ ಅಂಗಿ ಹಾಕಿಕೊಂಡು ಹೋಗಬೇಕು ಎಂದು ಹೇಳುವುದಕ್ಕೊಬ್ಬ ಜ್ಯೋತಿಷಿ, ಏನು ಕೆಲಸ ಮಾಡಬೇಕು ಎಂದು ಹೇಳುವುದಕ್ಕೊಬ್ಬ ಬಾಸ್, ಏನು ಕುಡಿಯಬೇಕು ಎಂದು ಹೇಳುವುದಕ್ಕೊಬ್ಬ ಬಾರ್‌ಮನ್, ಎಷ್ಟು ವೇಗದಲ್ಲಿ ಕಾರು ಓಡಿಸಬೇಕು ಎಂದು ಸೂಚಿಸುವ ಸೈನ್‌ಬೋರ್ಡ್, ಎಷ್ಟು ಗಂಟೆಗೆ ಮಲಗಬೇಕು ಎಂದು ಹೇಳುವುದಕ್ಕೆ ಒಂದು ವೆಬ್‌ಸೈಟು...
ಸತ್ಯಂ, ಶಿವಂ, ಸುಂದರಂ..

Monday, February 22, 2010

ನಿಲ್ಲಿಸದಿರು ವನಮಾಲೀ ಕೊಳಲ ಗಾನವಾ...

ಎಪ್ಪತ್ತು ಕತೆಗಳನ್ನು ಬರೆದಾದ ನಂತರ ಒಂದು ದಿನ ವೈಯನ್ಕೆಗೆ ಹೇಳಿದ್ದೆ. ಇನ್ನು ನಾನು ಬರೆಯುವುದಿಲ್ಲ, ಅವರು ಹೇಳಿದರು : ಬರೆಯುವುದನ್ನು ನಿಲ್ಲಿಸಬೇಡ, ಪ್ರಕಟಿಸುವುದನ್ನು ನಿಲ್ಲಿಸು.
ಆವತ್ತು ಡೈರಿ ಬರೆಯಲು ಆರಂಭಿಸಿದೆ. ದಿನಕ್ಕೆ ಹತ್ತು ಪುಟದಂತೆ ಬರೆಯುತ್ತಾ ಹೋದೆ. ತಿಂಗಳಲ್ಲಿ 20 ದಿನವಂತೂ ಬರೆದೇ ಬರೆಯುತ್ತಿದ್ದೆ. ಪ್ರತಿತಿಂಗಳೂ 200 ಪುಟದ ಪುಸ್ತಕದ ತುಂಬ ನಾನು ನೋಡಿದ ಸಿನಿಮಾ, ಓದಿದ ಪುಸ್ತಕ, ಆಗಷ್ಟೇ ಹುಟ್ಟಿದ ಕತೆ, ಎಲ್ಲೋ ಓದಿದ ಕತೆಯಿಂದ ಗ್ರಹಿಸಿದ್ದು, ನ್ಯೂಯಾರ್ಕ್ ಟೈಮ್ಸಲ್ಲಿ ಬಂದು ಲೇಖನದ ಅನುವಾದ- ಹೀಗೆ ಏನಾದರೊಂದು ಬರೆಯುತ್ತಿದ್ದೆ. ಬರೆಯದೇ ಊಟ ಮಾಡುವುದಿಲ್ಲ ಎಂಬುದನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದೆ. ನಾಲ್ಕು ವರ್ಷ ಹಾಗೆ ಬರೆದಿಟ್ಟದ್ದು ಸುಮಾರು 60 ಪುಸ್ತಕಗಳಲ್ಲಿ ತುಂಬಿಹೋಗಿದೆ.
ಅವನ್ನೆಲ್ಲ ಎತ್ತಿ ಅಟ್ಟಕ್ಕೆ ಹಾಕುವಾಗ ಕಣ್ಣೀರು ಬಂತು. ಪ್ರಕಟಿಸುವ ಆಸೆಯಾಯಿತು. ಎಷ್ಟಾದರೂ ನಾನೇ ಬರೆದದ್ದು. ಯಾರಾದರೂ ಪ್ರಕಾಶಕರು ಕೇಳಿದರೆ ಥಟ್ಟನೆ ಇದನ್ನು ಪ್ರಕಟಿಸಿ ಅಂತ ಕೊಟ್ಟುಬಿಟ್ಟರೆ? ಏನು ಮಾಡಲಿ ಅಂತ ವೈಯನ್ಕೆಗೆ ಕೇಳಿದೆ.
ಕಿಲ್ಯುವರ್ ಬೇಬೀಸ್ ಅಂದರು. ಮರದ ಹಾಗೆ ದಿನವೂ ಹೂವು ಅರಳಿಸುತ್ತಿರಬೇಕು. ಅವನ್ನು ಕಾಪಿಟ್ಟುಕೊಳ್ಳಲು ಹೋಗಬಾರದು. ಯೋಜನಗಂಧಿಯ ಹಾಗೆ ಹೆತ್ತ ಮಕ್ಕಳನ್ನೆಲ್ಲ ನೀರಿಗೆ ಎಸೆಯಬೇಕು. ಲೇಖಕನಿಗೂ ಆ ನಿಷ್ಠುರವಾದ ನಿಲುವು ಇರಬೇಕು. ಪ್ರಕಟಿಸಬೇಕಾದ ಪುಸ್ತಕಗಳು ಯಾವುದು, ಯಾವುದು ಪ್ರಕಟಣೆಗೆ ಅರ್ಹವಲ್ಲ ಎಂಬುದು ಗೊತ್ತಿರಬೇಕು. ಎಷ್ಟೋ ಸಲ ಪ್ರಕಟಣೆಗೆ ಅರ್ಹವಾಗಿದ್ದರೂ ಪ್ರಿಂಟು ಮಾಡಲಿಕ್ಕೆ ಹೋಗಬಾರದು. ಪ್ರಕಟಿಸುವ ಆಮಿಷವೇ ಲೇಖಕನಿಗೆ ಶತ್ರು. ಅಂಥ ಆಮಿಷ ಇಲ್ಲದವರೆಂದರೆ ಕಿ ರಂ ನಾಗರಾಜ ಮತ್ತು ಬಿವಿ ಕಾರಂತ ಅಂದಿದ್ದರು ವೈಯನ್ಕೆ.
ಅದಾಗಿ ಎಷ್ಟೋ ದಿನದ ನಂತರ ಕಿರಂ ಸಿಕ್ಕಾಗ ವೈಯನ್ಕೆ ಹೇಳಿದ್ದನ್ನು ಅವರಿಗೆ ಹೇಳಿದೆ. ಅವರು ಎಂದಿನ ಉಡಾಫೆಯಲ್ಲಿ ನಕ್ಕು, ಅಯ್ಯೋ ಯಾವನ್ರೀ ಬರೀತಾನೆ ಅಂದರು. ಬರೆದು ಏನು ಮಾಡೋದಿದೆ ಹೇಳಿ. ಅಡಿಗರು ಹೇಳಿದ್ದು ಗೊತ್ತಲ್ಲ ಅಂತ ಒಂದು ಪ್ರಸಂಗ ನೆನಪಿಸಿಕೊಂಡರು: ಸಂದರ್ಭ ಅಡಿಗರ ಹುಟ್ಟುಹಬ್ಬ. ನಡೆದದ್ದು ಜಯನಗರದ ಪ್ರಿಸಂ, ದಿ ಬುಕ್ ಶಾಪ್ನಲ್ಲಿ. “ನಾನೂ, ಅಡಿಗರು ನಡೀತಾ ಹೋಗುತ್ತಿದ್ವಿ. ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರ ಒಬ್ಬ ಹಳ್ಳಿಯ ಹುಂಬ ರಸ್ತೆ ದಾಟುತ್ತಿದ್ದ. ಅಡಿಗರು ನನ್ನನ್ನೊಂದು ಕ್ಷಣ ತಡೆದು ನಿಲ್ಲಿಸಿ, ಅವನನ್ನು ತೋರಿಸಿ ಹೇಳಿದರು. “ನೋಡಯ್ಯಾ, ನೀನು ಆ ರಸ್ತೆದಾಟುವ ಹಳ್ಳಿಯವನನ್ನು ಹೇಗೆ ನೋಡ್ತೀಯೋ, ನನ್ನನ್ನು ಕೂಡ ಹಾಗೇ ನೋಡಬೇಕು. ನಾನು ಬೇರೆಯಲ್ಲ. ಅಲ್ಲಿ ರಸ್ತೆ ದಾಟುವ ಹಳ್ಳಿಗ ಬೇರೆಯಲ್ಲ.” ನಾವೆಲ್ಲ, ಅಡಿಗರ ಥಿಂಕಿಂಗ್ ಬಗ್ಗೆ ಮೆಚ್ಚುಗೆ ಪಡುತ್ತಿರಬೇಕಾದರೆ ಕಿ.ರಂ. ಮುಂದುವರೆಸಿದರು. “...ಮತ್ತೆ ನೀನೂ ಕೂಡ ಬೇರೆಯಲ್ಲ!”
ಕಿರಂ ಸಂಯಮದ ಗುಟ್ಟೇನು ಅಂತ ನನಗೆ ಕೊನೆಗೂ ಗೊತ್ತೇ ಆಗಲಿಲ್ಲ. ನೀವೇ ಬರೆಯಿರಿ, ನಾವು ಬರೀತೀವಿ, ನೀವು ಡಿಕ್ಟೇಟ್ ಮಾಡಿ, ನೀವು ಮಾತಾಡಿದ್ದನ್ನೆಲ್ಲ ರೆಕಾರ್ಡ್ ಮಾಡಿಕೊಂಡು ಪುಸ್ತಕ ಮಾಡೋಣ ಅಂತ ನಾನೂ ಉದಯ ಮರಕಿಣಿಯೂ ಅವರಿಗೆ ನೂರಾರು ಸಲ ಹೇಳಿದ್ದೆವು. ಒಂದು ಸಲ ನೆಟ್ಟಕಲ್ಲಪ್ಪ ಸರ್ಕಲಿನ ಬಾರಲ್ಲಿ ಕೂತಾಗ ಗುಟ್ಟಾಗಿ ಕಿರಂ ಮಾತಾಡಿದ್ದನ್ನು ರೆಕಾರ್ಡು ಮಾಡಲು ನನ್ನ ಹಳೆಯ ಟೇಪ್ ರೆಕಾರ್ಡು ಒಯ್ದು ಆನ್ ಮಾಡಿ ಇಟ್ಟಿದ್ದೆ. ಪಾರ್ಟಿ ಮುಗಿಸಿ ಮನೆಗೆ ಬಂದ ರೆಕಾರ್ಡು ಹಾಕಿದರೆ ಮೆತ್ತಗೆ ಮಾತಾಡುವ ಕಿರಂ ದನಿ ದಾಖಲಾಗಿರಲೇ ಇಲ್ಲ. ನಮ್ಮ ಪಕ್ಕದ ಟೇಬಲಲ್ಲಿ ಕೂತಿದ್ದವನು ಕೆಟ್ಟ ಮಾತಲ್ಲಿ ಯಾರಿಗೋ ಬೈಯುತ್ತಿದ್ದದ್ದು, ಸಪ್ಲೈಯರ್ ಏನ್ ಕೊಡ್ಲಿ, ಚಿಕನ್ ಸುಕ್ಕಾ, ಮಟನ್ ಕೈಮ, ಪಿಷ್ ಫಿಂಗರ್ ಇದೆ ಅಂದಿದ್ದೆಲ್ಲ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅದನ್ನು ಕಿರಂಗೆ ಹೇಳಿದಾಗ ಮನಸಾರೆ ನಕ್ಕು, ಅದೇ ಅತ್ಯುತ್ತಮ ಸಾಹಿತ್ಯ ಅಂದಿದ್ದರು.
ವೈಯನ್ಕೆ 1999ರ ಅಕ್ಟೋಬರ್ 16ರಂದು ಕಾಲವಾದರು. ಅವರು ಅಮೆರಿಕಾಕ್ಕೆ ಹೋಗುವ ತಿಂಗಳ ಮುಂಚೆ ಅವರಿಗೆ ನನ್ನ ಹೊಸ ಪುಸ್ತಕದ ಹಸ್ತಪ್ರತಿ ತೋರಿಸಿದೆ. ಅವರು ಅದನ್ನು ತಮ್ಮ ಎಂದಿನ ಶರವೇಗದಲ್ಲಿ ಕಣ್ಣಾಡಿಸಿ ಓದಿದರು. ಗುಡ್ ಗುಡ್... ಅಂದರು. ರಾತ್ರಿ ಗಾಲ್ಫ್ ಕ್ಲಬ್ಬಲ್ಲಿ ನಾನೂ ಉದಯ್ ಮರಕಿಣಿ ಕೂತಿದ್ದಾಗ ಮತ್ತೆ ಪುಸ್ತಕದ ಬಗ್ಗೆ ಮಾತಾಡಿದರು.ಆ ಪುಸ್ತಕ ಪ್ರಿಂಟ್ ಮಾಡ್ಲೇಬೇಕಾ ನೀನು ಅಂತ ಕೇಳಿದ್ದರು. ಹಾಗೇನಿಲ್ಲ ಸರ್. ಚೆನ್ನಾಗಿದ್ದರೆ ಮಾಡ್ತೀನಿ ಅಂದಿದ್ದೆ. ಚೆನ್ನಾಗಿದೆ. ಅದು ನಿನಗೂ ಗೊತ್ತಿದೆ. ಚೆನ್ನಾಗಿರೋದು ಮುಖ್ಯ ಅಲ್ಲ. ನೀನು ನಿನ್ನ ಭಾಷೆಯಲ್ಲಿ ಬರೀಬೇಕು. ಆರ್ಥರ್ ಕ್ವಿಲ್ಲರ್ ಅಂತ ಒಬ್ಬ ಹುಚ್ಚ ಇದ್ದಾನೆ. ಅವನು ಜಗತ್ತಿನ ಅತ್ಯುತ್ತಮ ಇಂಗ್ಲಿಷ್ ಪದ್ಯಗಳನ್ನೆಲ್ಲ ಸಂಗ್ರಹ ಮಾಡಿದ್ದಾನೆ. ಅದನ್ನೆಲ್ಲ ಮಾಡಿದ ನಂತರ ಅವನೊಂದು ಪುಸ್ತಕ ಬರೆದ. ಚೆನ್ನಾಗಿರೋ ಪದ್ಯಗಳನ್ನು ಬರೆಯುವಾಗ, ಚೆನ್ನಾಗಿರೋ ಬರಹ ಬರೆಯುವಾಗ ಹುಷಾರಾಗಿರಬೇಕು. ನಿಮಗಿಷ್ಟವಾಗಿರೋದು ಓದುಗರಿಗೂ ಇಷ್ಟವಾಗಬೇಕಾಗಿಲ್ಲ. ಕೇಂಬ್ರಿಜ್ ಯೂನಿವರ್ಸಿಟೀಲಿ ಅವನು ಒಂದು ಸಲ ಭಾಷಣ ಮಾಡ್ತಾ ಹೇಳಿದ ‘Whenever you feel an impulse to perpetrate a piece of exceptionally fine writing, obey it—whole-heartedly—and delete it before sending your manuscript to press. Murder your darlings.’ ಅಂದ್ರೆ ಬರೆಯುವಾಗ ಚೆಂದ ಚೆಂದದ ಪದಗಳು, ಅಭಿವ್ಯಕ್ತಿಗಳು ಬರುತ್ತವೆ. ಪ್ರಕೃತಿಯ ಸೊಬಗನ್ನು ವರ್ಣಿಸೋಣ ಅನ್ನಿಸುತ್ತೆ. ಬರೆಯುವಾಗ ಅದನ್ನು ತಡೆಯೋದಕ್ಕೆ ಹೋಗಬೇಡಿ. ಬರೆದುಬಿಡಿ. ಆದರೆ ಪ್ರಿಂಟಿಗೆ ಹೋಗುವಾಗ ನೀವು ಮೆಚ್ಚಿ ಬರೆದ ಸಾಲುಗಳನ್ನು ನಿರ್ದಾಕ್ಷಿಣ್ಯಾಗಿ ಅಳಿಸಿಹಾಕಿ, ಕಿಲ್ ಯುವರ್ ಡಾರ್ಲಿಂಗ್ಸ್.
ವೈಯನ್ಕೆ ಅಷ್ಟು ಹೇಳಿದ್ದೆ ತಡ, ನಾನು ಬರೆದಿಟ್ಟಿದ್ದ ಅರವತ್ತೂ ಪುಸ್ತಕಗಳನ್ನೂ ನನ್ನ ಅಣ್ಣನ ಮನೆಗೆ ಸಾಗಿಸಿದೆ. ಅಲ್ಲಿದ್ದ ನನ್ನ ಇತರ ಪುಸ್ತಕಗಳ ನಡುವೆ ಇವೂ ಜಾಗ ಪಡೆದವು. I killed my darlings! ನಾವೇ ಮೆಚ್ಚೋದನ್ನು ನಾವು ಬರೆಯಬಾರದು ಅಂತ ತಿಳಿಸಿಕೊಟ್ಟ ವೈಯನ್ಕೆಗೆ ನಮಸ್ಕಾರ.

Tuesday, February 9, 2010

ಅಶ್ರಫ್, ಕುಂಟಿನಿ, ಮುಸ್ತಫಾ, ಮಹೇಂದ್ರ, ಕಿಶೋರ್ ಮತ್ತು ಉಪ್ಪಿನಂಗಡಿ ಎಂಬ ಪುಣ್ಯಭೂಮಿ

ಜೀವಂತವಾಗಿದ್ದಾರಾ?
ಹೂಂ.
ಕರ್ನಾಟಕದವರಾ? ಹೊರಗಿನವರಾ?
ಕರ್ನಾಟಕದವರು.
ಕಲೆ, ಧಾರ್ಮಿಕ, ಸಾಹಿತ್ಯ, ರಾಜಕೀಯ, ಸಿನಿಮಾ, ಕ್ರೀಡೆ...
ಸಾಹಿತ್ಯ.
ಪ್ರಶಸ್ತಿ ಬಂದಿದ್ಯಾ...
ಹೂಂ.
ನಮ್ಮ ದೇಶದ ಪ್ರಶಸ್ತಿಯಾ, ವಿದೇಶಿ ಪ್ರಶಸ್ತಿಯಾ?
ವಿದೇಶಿ..
ಅಡಿಗ, ಅರವಿಂದ ಅಡಿಗ.
ಎಲ್ಲರೂ ಹೋ’ ಎಂದು ಸಂಭ್ರಮಿಸಿದರು. ಕವಿಗಳು ಬೆರಗಾಗಿ ಕೂತರು.ಮತ್ಯಾರೋ ಕೈ ಕುಲುಕಿದರು. ಐದೇ ಪ್ರಶ್ನೆಗಳಲ್ಲಿ ಉತ್ತರ ಸಿಕ್ಕಿತು ಅಂದರು. ಇದು ನಮ್ಮೂರ ಹುಡುಗರ ಹೊಸ ಆಟ. ಅದಕ್ಕೆ ಅವರಿಟ್ಟ ಹೆಸರು ಅಶ್ವಮೇಧ’. ಆಟದ ನಿಯಮ ಇಷ್ಟೇ. ಒಂದು ಪುಟ್ಟ ಚೀಟಿಯಲ್ಲಿ ಒಬ್ಬ ಖ್ಯಾತನಾಮರ ಹೆಸರು ಬರೆದಿಟ್ಟುಕೊಳ್ಳಿ. ಅವರ ಬಗ್ಗೆ ಆಥ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾನೆ. ನೀವು ಇಪ್ಪತ್ತೊಂದು ಪ್ರಶ್ನೆಗಳಿಗೆ ಉತ್ತರ ಕೊಡುವ ಮೊದಲೇ ನೀವು ಬರೆದಿಟ್ಟುಕೊಂಡ ವ್ಯಕ್ತಿ ಯಾರೆಂದು ಆತ ಹೇಳುತ್ತಾನೆ. ಹಾಗೆ ಹೇಳುವವನ ಹೆಸರು ಮುಸ್ತಫಾ.
ಮೇಲ್ನೋಟಕ್ಕೆ ಇದೊಂದು ಅತ್ಯಂತ ಸರಳವಾದ ಆಟದಂತೆ ಕಾಣಿಸುತ್ತದೆ. ಆದರೆ ಒಂದು ಮಟ್ಟದ ಜನರಲ್ ನಾಲೆಜ್ ಇಲ್ಲದೇ ಹೋದರೆ, ನಿತ್ಯವೂ ಪೇಪರ್ ಓದದೇ ಇದ್ದರೆ, ಚರಿತ್ರೆಯಿಂದ ಹಿಡಿದು, ಇತ್ತೀಚಿನ ಆಗುಹೋಗುಗಳ ತನಕ ಎಲ್ಲವನ್ನೂ ತಿಳಿದುಕೊಂಡಿರದೇ ಇದ್ದರೆ ಕೇವಲ ಕೆಲವೇ ಕೆಲವು ಸೂಚನೆಗಳನ್ನು ಮುಂದಿಟ್ಟುಕೊಂಡು ಹೇಳುವುದು ಕಷ್ಟ. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್, ದಕ್ಷಿಣ ಕನ್ನಡದ ವಿಟ್ಲ ಎಂಬ ಊರಿನ ಹವ್ಯಕ ಹೆಂಗಸು ಎಂಬ ಸಣ್ಣ ವಿವರಗಳೂ ಅಲ್ಲಿ ಮುಖ್ಯ.
ಇದನ್ನು ನೋಡುತ್ತಿದ್ದರೆ ಆಶ್ಚರ್ಯವಾಯಿತು. ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ, ಕೆ ವಿ ತಿರುಮಲೇಶ್, ಯಶವಂತ ಚಿತ್ತಾಲ, ಭೀಮಸೇನ ಜೋಷಿ, ಅಷ್ಟೇನೂ ಖ್ಯಾತರಲ್ಲದ ಡಿ ಎ ಶಂಕರ್- ಹೀಗೆ ಎಲ್ಲರ ಕುರಿತು ಮಾಹಿತಿ ಇಟ್ಟುಕೊಂಡ ಮುಸ್ತಫಾ ಮತ್ತು ಗೆಳೆಯರ ಗುಂಪು ತಮ್ಮಷ್ಟಕ್ಕೇ ತಾವು ಓದುತ್ತಾ, ತಿಳಿದುಕೊಳ್ಳುತ್ತಾ, ಬೆರಗುಗೊಳ್ಳುತ್ತಾ, ಸಂಭ್ರಮಪಡುತ್ತಾ ಇರುವುದನ್ನು ನೋಡಿ ಡುಂಡಿರಾಜ್, ಸುಬ್ರಾಯ ಚೊಕ್ಕಾಡಿ, ಲಕ್ಷ್ಮಣರಾವ್ ಕೂಡ ಅಚ್ಚರಿಯಿಂದ ನೋಡತೊಡಗಿದರು. ಲಕ್ಷ್ಮಣರಾವ್ ಅವರ ಮೂವತ್ತೋ ನಲವತ್ತೋ ಕವಿತೆಗಳನ್ನು ಥಟ್ಟನೆ ಹೇಳಬಲ್ಲ ಆರೆಂಟು ಹುಡುಗರು ಅಲ್ಲಿದ್ದರು. ಎಷ್ಟೋ ವರ್ಷಗಳ ಹಿಂದೆ ಸಂತೋಷ’ ಪತ್ರಿಕೆಯಲ್ಲಿ ದೆಹಲಿಯ ಬಗ್ಗೆ ಚೊಕ್ಕಾಡಿ ಬರೆದ ಕವಿತೆಯನ್ನು ಮತ್ಯಾರೋ ನೆನಪಿಸಿದರು. ಡುಂಡಿರಾಜ್ ಎಂದೋ ಬರೆದಿದ್ದ, ಸದ್ಯಕ್ಕೆ ಯಾರೂ ನೆನಪಿಸಿಕೊಳ್ಳದ ಓಡುವವರು’ ನಾಟಕದ ಸಾಲುಗಳನ್ನು ಹೇಳಿದರು. ಹೀಗೆ ಇಡೀ ರಾತ್ರಿ ಉಲ್ಲಾಸದಿಂದ ಸರಿಯುತ್ತಿತ್ತು.
ಇದು ಉಪ್ಪಿನಂಗಡಿಯ ಕತೆ. ಅಲ್ಲಿ ಎದುರಾಗುವ ಅಶ್ರಫ್, ಮಹೇಂದ್ರ, ಶಾಹುಲ್ ಹಮೀದ್, ಕಿಶೋರ್ ಅಧಿಕಾರಿ, ಮುಸ್ತಫಾ ಮತ್ತು ಇವರೆಲ್ಲರ ಗುರುವಿನಂತಿರುವ ಗೋಪಾಲಕೃಷ್ಣ ಕುಂಟಿನಿ ಮುಂತಾದ ಗೆಳೆಯರ ಬಳಗವೊಂದು ತಣ್ಣಗೆ ತಮಗೆ ಬೇಕಾದ್ದನ್ನು ಓದಿಕೊಂಡು, ನೋಡಿಕೊಂಡು, ಮಾಡಿಕೊಂಡು ತಮ್ಮ ಆರೋಗ್ಯವನ್ನು ಅಭಿರುಚಿಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿದೆ. ನಾನು ನೋಡಿದ ಎಲ್ಲ ಪುಟ್ಟ ಊರುಗಳಲ್ಲೂ ಇಂಥದ್ದೊಂದು ಗುಂಪಿದೆ. ಅವರು ತಮಗಿಷ್ಟ ಬಂದಿದ್ದನ್ನು ಓದುತ್ತಾ, ಪತ್ರಿಕೆಯಲ್ಲಿ ಬಂದ ಪುಸ್ತಕ ತರಿಸಿಕೊಂಡು ಓದಿ ಚರ್ಚಿಸುತ್ತಾ, ಬೆಂಗಳೂರಲ್ಲಿ ಮಾತ್ರ ಒಂದೋ ಎರಡೋ ಪ್ರದರ್ಶನ ಕಾಣುವ ಕಲಾತ್ಮಕ ಚಿತ್ರಗಳ ಡೀವೀಡಿ ತರಿಸಿಕೊಂಡು ಸಿನಿಮಾ ನೋಡುತ್ತಾ, ತಮ್ಮನ್ನು ಮುಖ್ಯವಾಹಿನಿಯಿಂದ ಹೊರಗಿಟ್ಟದ್ದರ ಬಗ್ಗೆ ಬೇಸರಪಡುತ್ತಾ, ಆ ಮಿತಿಯಲ್ಲೇ ಜೀವನೋತ್ಸಾಹ ಕಂಡುಕೊಳ್ಳುತ್ತಿರುತ್ತಾರೆ. ಅಂಥವರಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಬೆಂಗಳೂರು ತಲೆಕೊಡವಿಕೊಂಡು ಇನ್ನೆಲ್ಲೋ ನೋಡುತ್ತಿದೆ.
*****

ಇವತ್ತಿನ ಚೈತನ್ಯದ ಚಿಲುಮೆಗಳು ಗ್ರಾಮೀಣ ಕರ್ನಾಟಕದಲ್ಲಿವೆ ಅನ್ನುವುದಂತೂ ಸತ್ಯ. ಬೆಂಗಳೂರಿನ ಮಟ್ಟಿಗೆ ಇವತ್ತು ದುಡಿಮೆ ಎನ್ನುವುದು ಮೂಲಮಂತ್ರ. ದುಡಿಮೆ ಒಂದು ಮೌಲ್ಯ ಮಾತ್ರವೇ ಆಗಿದ್ದ ದಿನಗಳು ಕಣ್ಮರೆಯಾಗಿ, ದುಡಿಮೆಗೆ ಇವತ್ತು ಅದಕ್ಕಿಂತ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ಕಾಯಕವೇ ಕೈಲಾಸ ಎನ್ನುವುದು ಸುಳ್ಳಾಗುತ್ತಿದೆ. ದುಡಿಮೆಯ ಜೊತೆಗೇ ಬೆಸೆದುಕೊಂಡಿದ್ದ ಸೌಖ್ಯ ಮಾಯವಾಗಿದೆ. ನಮ್ಮಲ್ಲಿ ಬಹುತೇಕ ಮಂದಿ, ನಾವು ಮಾಡಬೇಕಾದದ್ದನ್ನು ಸಂತೋಷದಿಂದ ಮಾಡುತ್ತಿಲ್ಲ. ಅದರ ಬದಲು, ಅಲ್ಲೊಂದು ಬಗೆಯ ಅನಿವಾರ್ಯ ಕರ್ಮದ ಒತ್ತಡ, ಸೂತಕದ ಛಾಯೆ ಕಾಣಿಸುತ್ತಿದೆ. ಹಾಡುತ್ತಾ ಗೆಯ್ಮೆ ಮಾಡುತ್ತಿದ್ದ, ನಾಟಿ ಮಾಡುತ್ತಾ, ಬತ್ತ ಕುಟ್ಟುತ್ತಾ, ರಾಗಿ ಬೀಸುತ್ತಾ ಆ ಕೆಲಸದ ಸಂತೋಷವನ್ನು ಅನುಭವಿಸುತ್ತಿದ್ದ ದಿನಗಳು ಇವತ್ತಿಲ್ಲ. ದಿನಕ್ಕೆ ಲಕ್ಷಾಂತರ ರುಪಾಯಿ ವ್ಯಾಪಾರ ಮಾಡುವ ಹೊಟೆಲೊಂದರ ಅಡುಗೆ ಭಟ್ಟರೊಬ್ಬರು ಹೇಳುತ್ತಿದ್ದರು; ಮೊದಲೆಲ್ಲ ನಮ್ಮ ಹೊಟೆಲಿಗೆ ನಾನು ಇಷ್ಟಪಡೋ ವ್ಯಕ್ತಿಗಳು ಬರುತ್ತಿದ್ದರು. ಸಾಹಿತಿಗಳು, ಸಂಗೀತಗಾರರು, ರಾಜಕಾರಣಿಗಳು, ಕ್ರೀಡಾಪಟುಗಳು ಬಂದು ನಾನು ಮಾಡಿದ ದೋಸೆ ತಿಂದು ಸಂತೋಷಪಡುತ್ತಿದ್ದರು. ಆಗೆಲ್ಲ ನನ್ನ ಬಗ್ಗೆ ಒಂಥರ ಖುಷಿಯಾಗುತ್ತಿತ್ತು. ಸಾರ್ಥಕತೆ ಮೂಡುತ್ತಿತ್ತು. ಇವತ್ತು ಹಾಗಿಲ್ಲ. ಆಗ ದಿನಕ್ಕೆ ನೂರಿನ್ನೂರು ದೋಸೆ ಮಾಡುತ್ತಿದ್ದೆ. ಈಗ ಎಂಟು ನೂರು ದೋಸೆ ಮಾಡುತ್ತೇನೆ. ಬರೀ ದೋಸೆ ಮಾಡುವುದಷ್ಟೇ ಜೀವನ ಎಂಬಂತಾಗಿದೆ.
ಪತ್ರಿಕೋದ್ಯಮದಲ್ಲೂ ಅದೇ ಆಗಿದೆ. ನಾವು ಸಿನಿಮಾ ಪತ್ರಿಕೋದ್ಯಮ ಆರಂಭಿಸಿದ ದಿನಗಳಲ್ಲಿ ಅಲ್ಲೊಂದು ಸಂಭ್ರಮ ಇರುತ್ತಿತ್ತು. ಸಿನಿಮಾ ನಟರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸುಮ್ಮನೆ’ ಹರಟುವಷ್ಟು ವ್ಯವಧಾನ ಇಟ್ಟುಕೊಂಡಿದ್ದರು. ವಿಷ್ಣುವರ್ಧನ್ ಜೊತೆ ಕುಳಿತರೆ, ರಾಜಕೀಯ, ಕ್ರಿಕೆಟ್, ಸಂಗೀತ, ಮತ್ಯಾವುದೋ ಇಟೆಲಿಯ ಸಿನಿಮಾದ ಬಗ್ಗೆ ಮಾತಾಗುತ್ತಿತ್ತು. ಪರಸ್ಪರರನ್ನು ಗೇಲಿ ಮಾಡಿಕೊಳ್ಳುತ್ತಾ ಅಲೆಲ್ಲ ನಗು ಹರಡುತ್ತಿತ್ತು. ಇವತ್ತು ಪತ್ರಕರ್ತರಿಗೂ ಅಷ್ಟು ಪುರುಸೊತ್ತಿಲ್ಲ. ಸಿನಿಮಾನಟರಂತೂ ಸೆಕೆಂಡುಗಳ ಲೆಕ್ಕದಲ್ಲಿ ಬದುಕುತ್ತಿದ್ದಾರೆ. ಪತ್ರಕರ್ತ ತಾನು ಕೇಳಿಸಿಕೊಂಡಿದ್ದನ್ನೋ ಶೂಟ್ ಮಾಡಿದ್ದನ್ನೋ ತಕ್ಷಣ ಜನರಿಗೆ ತಲುಪಿಸಬೇಕು ಎಂದು ಓಡುತ್ತಿರುತ್ತಾನೆ. ನಟನಿಗೋಸ್ಕರ ಮುಂದಿನ ಚಿತ್ರದ ಕತೆ ಹೇಳುವವರು ಕಾಯುತ್ತಿರುತ್ತಾರೆ.
ಇಂಥದ್ದರ ಮಧ್ಯೆ ಪ್ರಕಾಶ್ ರೈ ಬೇರೆಯೇ ಆಗಿ ನಿಲ್ಲುತ್ತಾರೆ. ಮೊನ್ನೆ ಊರಿಗೆ ಹೋಗುತ್ತಾ ಅವರ ನಾನೂ ನನ್ನ ಕನಸು’ ಶೂಟಿಂಗ್ ನಡೆಯುತ್ತಿದ್ದ ಯಜಮಾನ್ ಎಸ್ಟೇಟ್‌ಗೆ ಹೋದರೆ ಅಲ್ಲಿ ಪ್ರಕಾಶ್ ರೈ ಎಂದಿನ ಉಲ್ಲಾಸದಲ್ಲಿ ಕೂತಿದ್ದರು. ಎರಡು ಹಾಡು ನೋಡೋಣ ಎಂದರು. ಹಾಡು ಮುಗಿಯುತ್ತಿದ್ದಂತೆ ಇತ್ತೀಚೆಗೆ ಓದಿದ ಪುಸ್ತಕಗಳ ಬಗ್ಗೆ ಮಾತಾಡಿದರು. ಹಳೆಯ ಗೆಳೆಯರಾದ ಶೆಣೈ, ಮರಕಿಣಿ ಹೇಗಿದ್ದಾರೆ ಎಂದು ವಿಚಾರಿಸಿಕೊಂಡರು. ಕರ್ತವ್ಯದಲ್ಲಿ ಕಳೆದು
ಹೋಗುತ್ತಿದ್ದೀರಿ. ಸುಮ್ಮನೆ ಎಲ್ಲರೂ ಹೊರಟು ಬನ್ನಿ, ಖುಷಿಯಾಗಿ ಒಂದೆರಡು ದಿನ ಇದ್ದು ಹೋಗಿ ಎಂದರು. ಇವತ್ತು ಖುಷಿಯಾಗಿ ಒಂದೆರಡು ದಿನ ಸುಮ್ಮನೆ ಇದ್ದುಹೋಗಿ ಎನ್ನುವವರು ಸಿಕ್ಕಿದ್ದೇ ಒಂದು ಪವಾಡ ಎಂದು ನಾವೊಂದಷ್ಟು ಮಂದಿ ಮಾತಾಡಿಕೊಂಡೆವು.
ಉಲ್ಲಾಸ ತುಂಬುವ ಸಂಗತಿಗಳು ತುಂಬಾ ಕಡಿಮೆ. ಅವುಗಳನ್ನು ನಾವು ಸವಿಯದೇ ಹೋದರೆ, ಆ ರಸಬಿಂದುಗಳೂ ಬತ್ತಿಹೋಗುತ್ತವೆ. ಅನ್ನಿಸಿದ್ದೇನನ್ನೋ ಬರೆದಾಗ, ಅದನ್ನು ಆಪ್ತರ ಜೊತೆ ಹಂಚಿಕೊಳ್ಳುವುದು, ಥ್ರೀ ಈಡಿಯಟ್ಸ್ ಸಿನಿಮಾದ ದೃಶ್ಯವೊಂದನ್ನು ನೆನೆದು ಹಳೆಯ ದಿನಗಳಿಗೆ ಜಾರುವುದು, ನಾಲ್ಕಾರು ಮಂದಿ ತಿಂಗಳಿಗೊಮ್ಮೆ ಕಾವೇರಿ ಫಿಷಿಂಗ್ ಕ್ಯಾಂಪಿಗೆ ಹೋಗಿ ಗಾಳ ಹಾಕುತ್ತಾ ಕೂರುವುದು, ಪಿವಿಆರ್ ಚಿತ್ರಮಂದಿರದ ಮೆಟ್ಟಲಲ್ಲಿ ಕೂತು ಪಾಪ್‌ಕಾರ್ನ್ ತಿನ್ನುತ್ತಾ ಆ ಗದ್ದಲವನ್ನು ಸವಿಯುವುದು.. ಇವೆಲ್ಲ ಇವತ್ತಿಗೂ ಜಗತ್ತಿನಲ್ಲಿ ನಡೆಯುತ್ತಲೇ ಇದೆ. ಮೊನ್ನೆ ಮೊನ್ನೆ ಒಂದಷ್ಟು ಮಿತ್ರರು ಕೊಡಗಿನ ಪುಷ್ಪಗಿರಿಗೆ ಹೋಗಿ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ನಡೆದಾಡಿ, ಸೂರ್ಯಾಸ್ತ ನೋಡಿ ಬಂದರು. ನಾವೊಂದಷ್ಟು ಮಂದಿ ಡ್ರೈವರ್ ಮೇಲೆ ರೇಗುತ್ತಾ, ಇನ್ನೊಂದು ದಾರಿಯಲ್ಲಿ ಬಂದಿದ್ದರೆ ಅರ್ಧಗಂಟೆ ಮುಂಚೆ ತಲುಪಬಹುದು ಎಂದು ಗೊಣಗಿಕೊಳ್ಳುತ್ತಾ, ಶೂಟಿಂಗು ಮುಗಿದಿದ್ದೇ ತಡ ಮತ್ತೊಂದು ಊರಿಗೆ ಹೋಗುವ ತರಾತುರಿಯಲ್ಲಿ ಧಾವಂತ ಮಾಡಿಕೊಳ್ಳುತ್ತಿದ್ದೆವು.
ಪಯಣಿಸಿದ ಹಾದಿ, ಹೊರಟ ಜಾಗ, ತಲುಪಬೇಕಾದ ಊರು, ಅಲ್ಲಿನ ತಂಗಾಳಿ, ಸೊರಗಿದ ನದಿ, ಮುಂಜಾವದ ಮಂಜು, ಹಳೆಯ ಗುಡಿ, ಕತ್ತಲ ಸುರಂಗ, ನೀರು ಜಿನುಗಿಸುವ ಗುಹೆ- ಎಲ್ಲವನ್ನೂ ಕರ್ತವ್ಯ ನಿಷ್ಠರಂತೆ ನೋಡುತ್ತಿದ್ದೆವು.
ವಾಪಸ್ಸು ಬರುವ ದಾರಿಯಲ್ಲಿ ಕೌದಿ ಹೊದ್ದುಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತಿದ್ದ ಅರುವತ್ತು ದಾಟಿದಂತಿದ್ದ ಮುದುಕನೊಬ್ಬನ ಕಣ್ಣುಗಳು, ಬೆಂಕಿಬೆಳಕಿಗೆ ಪ್ರಜ್ವಲಿಸುತ್ತಿದ್ದವು. ಆ ಕಾಡಿನ ಮಧ್ಯೆ ಕೂತುಕೊಂಡು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಕಲ್ಪನೆಯೇ ಇಲ್ಲದೇ ಕಾಲಾಂತರದಲ್ಲಿ ಲೀನನಾದ ಅವನಂತೆ ಬದುಕಬೇಕು ಎಂದು ಆಸೆಯಾಯಿತು.
ನಡುರಾತ್ರಿ ಸಾಗರದ ಹೊಟೆಲ್ಲಿಗೆ ಕಾಲಿಟ್ಟರೆ, ನಿದ್ದೆಗಣ್ಣಿನ ಹುಡುಗನೊಬ್ಬ ರಿಜಿಸ್ಟರ್ ಮುಂದಿಟ್ಟು ತುಂಬಿ’ ಅಂದ. ಅದರಲ್ಲಿ ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎಂಬ ಪ್ರಶ್ನೆಗಳಿದ್ದವು. ಆ ಅಪರಾತ್ರಿಯಲ್ಲಿ ಅವು ನನಗೆ ಬದುಕಿನ ಬಹುಮುಖ್ಯ ಪ್ರಶ್ನೆಗಳಾಗಿ ಕಾಣಿಸಿದವು.

Tuesday, February 2, 2010

ಎಂದೋ ಕೇಳಿದ ಒಂದು ಹಾಡಿನ ನೆನಪಲ್ಲಿ...

ನಂಗೆ ಟಿ ಕೆ ರಾಮರಾವ್ ಇಷ್ಟ, ಎನ್ ಟಿ ರಾಮರಾವ್ ಸಿನಿಮಾ ಇಷ್ಟ, ಜೋಸೈಮನ್ ಇಷ್ಟ, ಜಿಂದೆ ನಂಜುಂಡಸ್ವಾಮಿ ಎಂದರೆ ಪ್ರಾಣ, ಮುಸ್ಸಂಜೆಯ ಕಥಾಪ್ರಸಂಗ ಮತ್ತೆ ಮತ್ತೆ ಓದಬೇಕೆನ್ನಿಸುತ್ತೆ, ಪರಸಂಗದ ಗೆಂಡೆತಿಮ್ಮನ ಬೀದಿ ಕಣ್ಮುಂದೆ ಸುಳಿದರೆ ಸಂತೋಷವಾಗುತ್ತದೆ. ಭುಜಂಗಯ್ಯನ ದಶಾವತಾರಗಳು ಎಂಬ ಟೈಟಲ್ಲೂ ಮೆಚ್ಚುಗೆ. ನಮ್ಮೂರಿನಲ್ಲಿದ್ದ ಪುಟ್ಟ ಹೊಟೆಲಿನಲ್ಲಿ ಸಿಗುತ್ತಿದ್ದ ಕೇಟಿ ಮತ್ತು ಮೊಸರವಲಕ್ಕಿ ಇಷ್ಟ.
ಹಾಗಂತ ಇವತ್ತಿಗೂ ನಾನು ಅಂದುಕೊಂಡಿದ್ದೇನೆ. ಅದು ನಿಜಕ್ಕೂ ನನಗಿಷ್ಟ ಎಂದು ನಾನು ಮೊನ್ನೆ ಮೊನ್ನೆಯವರೆಗೂ ನಂಬಿದ್ದೆ. ಅದೇ ಹುಮ್ಮಸ್ಸಿನಲ್ಲಿ ಎನ್ ಟಿ ರಾಮರಾವ್ ಸಿನಿಮಾ ನೋಡಲು ಯತ್ನಿಸಿದೆ. ಐದು ನಿಮಿಷ ನೋಡುವಷ್ಟರಲ್ಲಿ ಯಾಕೋ ಹಿಂಸೆಯಾಗತೊಡಗಿತು. ಮತ್ತೊಂದು ದಿನ ಟಿ ಕೆ ರಾಮರಾವ್ ಕಾದಂಬರಿ ಓದಲು ಕುಳಿತೆ. ಮೂರು ಪುಟ ಮುಗಿಸುವ ಹೊತ್ತಿಗೆ ಸಾಕಾಗಿಹೋಯಿತು.ಜಿಂದೆ ನಂಜುಂಡಸ್ವಾಮಿ ಕಾದಂಬರಿಯನ್ನು ಕೈಗೆತ್ತಿಕೊಳ್ಳಲಾಗಲೇ ಇಲ್ಲ. ಭುಜಂಗಯ್ಯನ ದಶಾವತಾರಗಳು ಯಾಕೋ ಹಿಂದಿನ ಹುಮ್ಮಸ್ಸು ತುಂಬಲಿಲ್ಲ. ನಮ್ಮೂರಿನ ಪುಟ್ಟ ಶೆಣೈ ಹೋಟೆಲಿನ ಅವಲಕ್ಕಿ ಮೊಸರು ಸ್ವಾದ ಕಳಕೊಂಡಿದೆ ಅನ್ನಿಸತೊಡಗಿತು.
ಆಮೇಲೆ ಯೋಚಿಸಿದೆ; ನಿಜಕ್ಕೂ ಕೆಟ್ಟಿರುವುದು ನನ್ನ ಬಾಯಿರುಚಿಯೋ, ಶೆಣೈ ಹೊಟೆಲ್ಲಿನ ಮೊಸರವಲಕ್ಕಿಯ ರುಚಿಯೋ?
ಹಿಂದೆಂದೋ ಸುಳಿದಾಡಿದ, ಜೀವಿಸಿದ ಜಾಗಗಳಿಗೆ ಮತ್ತೆ ಮತ್ತೆ ಹೋಗಬೇಕು ಅನ್ನಿಸುವುದು ನಮ್ಮ ಮನಸ್ಸಿನ ಅದಮ್ಯ ಆಶೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಅದನ್ನು ಪ್ರತ್ಯಭಿಜ್ಞಾನ ಅನ್ನುತ್ತಾರಾ? ನನಗೆ ಗೊತ್ತಿಲ್ಲ, ಪ್ರತ್ಯಬಿಜ್ಞಾನ ಅಂದರೆ ಗೊತ್ತಿದ್ದದ್ದನ್ನು ಮತ್ತೆ ತಿಳಿದುಕೊಳ್ಳುವುದು. ಹಾಗೆ ನಮಗೆ ಗೊತ್ತಿರುವುದು, ನಮಗೆ ಪ್ರಿಯವಾಗಿರುವುದು ಕ್ರಮೇಣ ನಮ್ಮ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನವೊಂದನ್ನು ಪಡೆದುಕೊಳ್ಳುತ್ತದೆ. ಆ ನಲ್ದಾಣದಲ್ಲಿ ಮತ್ತೆ ಮತ್ತೆ ಹೋಗಬೇಕು ಎಂದು ಮನಸ್ಸು ಆಶಿಸುತ್ತದೆ. ಹಾಗೆ ಹೋದಾಗ ಅಲ್ಲಿ ನಮಗೆ ಸಿಗುವ ಸ್ವಾಗತ, ಸಂತೋಷ ಮತ್ತು ಖುಷಿಯ ಹೇಗಿರುತ್ತದೆ. ನಾವು ನಿಜಕ್ಕೂ ಅದನ್ನೆಲ್ಲ ಸವಿಯುತ್ತೇವಾ?
ಬಹುಶಃ ಇಲ್ಲ. ನಮ್ಮ ಅನುಭವದ ಒಂದು ಭಾಗವಾಗಿರುವ ಸಂಗತಿಗಳೆಲ್ಲ ಕೇವಲ ಮನಸ್ಸಿನಲ್ಲಿದ್ದಾಗಷ್ಟೇ ಸಂತೋಷಕೊಡುತ್ತವೆ. ನಾವು ಬದಲಾಗಿರುತ್ತೇವೆ. ನಮ್ಮ ವಯಸ್ಸು ಮತ್ತು ಅನುಭವ ನಮ್ಮನ್ನು ಮಾಗಿಸಿ ಮತ್ತೆಲ್ಲೋ ತಂದು ನಿಲ್ಲಿಸಿರುತ್ತವೆ. ವರ್ತಮಾನದ ಗಳಿಗೆಗಳನ್ನು ನಮ್ಮ ನೋಟವನ್ನು ಬದಲಾಯಿಸಿರುತ್ತವೆ. ಈ ಕ್ಷಣವನ್ನು ನಿರಾಕರಿಸಲು ಹೊರಡುವ ನಾವು, ಹಿಂದೆ ಎಂದೋ ಸವಿದದ್ದು ಸೊಗಸಾಗಿತ್ತು ಎಂದುಕೊಳ್ಳುತ್ತಿರುತ್ತೇವೆ. ಅದನ್ನೆ ಮತ್ತೊಮ್ಮೆ ಸವಿಯುವುದಕ್ಕೆ ಮನಸ್ಸು ಹಾತೊರೆಯುತ್ತದೆ. ಆದರೆ ಆ ಹಾತೊರೆಯುವಿಕೆಗೆ ಸ್ಥಾನ ಇರುವುದು ಕೇವಲ ಮನಸ್ಸಿನಲ್ಲಿ ಮಾತ್ರ.
ಬದಲಾಗಿರುವುದು ಶೆಣೈ ಹೊಟೆಲ್ಲಿನ ಅವಲಕ್ಕಿಯ ರುಚಿಯಲ್ಲ. ನಮ್ಮ ನಾಲಗೆ ರುಚಿ. ರುಚಿಕೆಡಿಸಿಕೊಂಡು ಕೂತ ನಮಗೆ ಎಂದೋ ತಿಂದ ಅವಲಕ್ಕಿಯೇ ಸೊಗಸಾಗಿರಬಹುದು ಅನ್ನಿಸಿರುತ್ತದೆ. ಅದು ಕೂಡ ಕೇವಲ ಮನೋವ್ಯಾಪಾರ. ತುಂಬಾ ಕಾಡಿದ ಅವಳ ಕಣ್ಣೋಟ, ಮನಸ್ಸಲ್ಲಿ ನಾವು ಗುನುಗುವ ಹಳೆಯ ಹಾಡು, ನಾವು ಸುತ್ತಾಡಿದ ತಾಣ, ನಮ್ಮ ಹಳೆಯ ಸ್ಕೂಲುಗಳೆಲ್ಲ ಎಲ್ಲೀ ತನಕ ನಮ್ಮ ನೆನಪುಗಳಲ್ಲಿ ಮಾತ್ರ ಎದುರಾಗುತ್ತದೆಯೋ ಅಲ್ಲೀ ತನಕ ಸೊಗಸಾಗಿರುತ್ತದೆ. ಅದನ್ನು ನಾವು ಮತ್ತೆ ಕಂಡಾಗ ಅದು ಅಷ್ಟೊಂದು ಖುಷಿ ಕೊಡುವುದಿಲ್ಲ. ಅದು ಮನಸ್ಸಿಗಿರುವ ಶಕ್ತಿ, ಮಿತಿ ಮತ್ತು ನಮ್ಮ ಅತ್ಯಂತ ದೊಡ್ಡ ಯಾತನೆ.
ಅದನ್ನೇ ಮುಂದಿಟ್ಟುಕೊಂಡು ನಾನೇನನ್ನು ಮೆಚ್ಚುತ್ತೇನೆ ಎಂದು ನೋಡುತ್ತಾ ಕುಳಿತೆ. ಸದ್ಯಕ್ಕೆ ನಾನು ಮೆಚ್ಚುವ ಕತೆ
ಹೇಗಿರಬೇಕು, ನಾನು ಮೆಚ್ಚುವ ಹಾಡು ಯಾರದ್ದು, ಇವತ್ತಿಗೂ ಕೆ ಎಸ್ ನರಸಿಂಹಸ್ವಾಮಿಯ ಹಾಡನ್ನೇ ನಾನೇಕೆ ಮೆಚ್ಚುತ್ತಿದ್ದೇನೆ, ನನ್ನ ತರುಣ ಮಿತ್ರರಿಗೆ ಯಾಕೆ ಕೆ ಎಸ್‌ನರಸಿಂಹಸ್ವಾಮಿ ಇಷ್ಟವಾಗುವುದಿಲ್ಲ. ಇಷ್ಟವಾದರೂ ಯಾಕೆ ಕೆಎಸ್‌ನ ಅವರ ಸಹಜ ಆಯ್ಕೆಯಲ್ಲ. ರಾಜ್‌ಕುಮಾರ್ ನಟಿಸಿದ ’ಮಯೂರ’, ಶಂಕರ್ ಗುರು ಸಿನಿಮಾಗಳು ನನ್ನನ್ನು ಆವರಿಸಿದಷ್ಟು ಆಪ್ತವಾಗಿ ಅವರನ್ನೇಕೆ ಆವರಿಸಿಕೊಂಡಿಲ್ಲ ಎಂದೆಲ್ಲ ಯೋಚಿಸಿದೆ. ನಾನು ಅದ್ಬುತ ಎಂದು ವರ್ಣಿಸಿದ ಶಂಕರ್‌ಗುರು ಸಿನಿಮಾ ನೋಡುತ್ತಾ ನನ್ನ ಯುವ ಮಿತ್ರನೊಬ್ಬ ಆಕಳಿಸತೊಡಗಿದ.
ಆದರೆ, ಅವನಿಗೆ ಕುವೆಂಪು ಕಾದಂಬರಿ ಮಲೆಗಳಲ್ಲಿ ಮದುಮಗಳು’ ಮೆಚ್ಚುಗೆಯಾಯಿತು, ರಾಶೋಮನ್ ಸಿನಿಮಾ ಇಷ್ಟವಾಯಿತು. ಕ್ಲಾಸಿಕ್ ಮತ್ತು ಜನಪ್ರಿಯತೆಗೆ ಇರುವ ವ್ಯತ್ಯಾಸ ಇದೇ ಇರಬಹುದಾ ಎಂಬ ಗುಮಾನಿ ನನ್ನಲ್ಲಿ ಮೊಳೆಯಲು ಆರಂಭಿಸಿದ್ದೇ ಆಗ.
ಜನಪ್ರಿಯ ಸಂಗತಿಯೊಂದು ಆಯಾ ಕಾಲದಲ್ಲಿ, ಆಯಾ ದೇಶದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗಿರುತ್ತದೆ. ಫ್ಯಾಷನ್ನಿನಂತೆ ಅದು ನಮ್ಮನ್ನು ಮುದಗೊಳಿಸಿರುತ್ತದೆ. ಆಗ ನಮ್ಮನ್ನು ಸಂತೋಷಗೊಳಿಸಿದ ಆ ಕೃತಿ ಕೊನೆಯವರೆಗೂ ನಮ್ಮ ಮನಸ್ಸಿನ ಅಂಗಳದಲ್ಲಿ ಹೂ ಬಿಟ್ಟ ಸುಂದರ ವೃಕ್ಷವಾಗಿಯೇ ಉಳಿದಿರುತ್ತದೆ. ಹತ್ತಾರು ವರ್ಷಗಳ ನಂತರವೂ ನಾವು ನಮ್ಮ ಮನಸ್ಸಿನಲ್ಲಿ ಹಿಂದಕ್ಕೆ ಹೋಗಿ ಆ ಮಾಧುರ್ಯವನ್ನು ಸವೆಯಬಲ್ಲವರಾಗಿರುತ್ತೇವೆ. ಆದರೆ, ನಮಗಿಂತ ಕಿರಿಯರಾದವರ ಪಾಲಿಗೆ ಅಂಥ ಮಾಧುರ್ಯವನ್ನು ನೀಡುವ ಸಂಗತಿ ಮತ್ತೇನೋ ಆಗಿರುತ್ತದೆ. ಪ್ರತಿಯೊಬ್ಬನೂ ತನ್ನ ಪರಿಸರ ಮತ್ತು ಸಂಭ್ರಮಕ್ಕೆ ಒಪ್ಪುವಂಥ ಒಂದು ಖುಷಿಯ ಸೆಲೆಯನ್ನು ಕಂಡುಕೊಂಡಿರುತ್ತಾನೆ.
ಇದು ನಮ್ಮ ವರ್ತಮಾನದ ಅಭಿರುಚಿಯನ್ನೂ ನಿರ್ಧಾರ ಮಾಡುತ್ತದೆ ಅಂದುಕೊಂಡಿದ್ದೇನೆ. ಹದಿನೆಂಟನೇ ವಯಸ್ಸಿಗೆ ಟಾಲ್‌ಸ್ಟಾಯ್ ಇಷ್ಟವಾಗುವುದಿಲ್ಲ, ಕಾನೂರು ಹೆಗ್ಗಡಿತಿ ಅಷ್ಟಾಗಿ ಪಥ್ಯವಾಗುವುದಿಲ್ಲ. ಕುಮಾರವ್ಯಾಸನನ್ನು ಓದಬೇಕು ಅನ್ನಿಸುವುದಿಲ್ಲ. ಆದರೆ, ಮತ್ತೊಂದು ಹಂತ ತಲುಪುತ್ತಿದ್ದಂತೆ ಎಲ್ಲವೂ ಬದಲಾಗಿರುತ್ತದೆ ಎಂದು ನಮಗೇ ಅನ್ನಿಸತೊಡಗುತ್ತದೆ.
ಸುಬ್ರಾಯ ಚೊಕ್ಕಾಡಿ ಬರೆದ ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂಥ ದಿನಗಳವು ಇನ್ನೆಂದೂ ಬಾರವು..ಎನ್ನುವ ಕವಿತೆಯನ್ನು ಓದಿದಾಗ ಅನ್ನಿಸುವುದು ಅದೇ ಆದರೆ, ಆ ಮಿಂಚಂಥಾ ದಿನಗಳ ಮಿಂಚು ನಮ್ಮ ತರುಣ ಮಿತ್ರರನ್ನೂ ಸ್ಪರ್ಶಿಸುತ್ತದೆಯಾ ಎನ್ನುವುದಷ್ಟೇ ಪ್ರಶ್ನೆ. ಅದು ಎಂದಿಗೂ ಅವರನ್ನು ಮುಟ್ಟಲಾರದು ಎಂಬ ಸತ್ಯದಲ್ಲೇ ಸಾತತ್ಯವಿದೆ, ಬೆಳವಣಿಗೆಯಿದೆ. ಹೊಸತನವಿದೆ ಮತ್ತು ಯೌವನವಿದೆ.
*******
ಈ ವಾರ ನಿಜಕ್ಕೂ ನಾನು ಬರೆಯಲು ಹೊರಟದ್ದು ಯೇಟ್ಸ್ ಕವಿತೆಗಳ ಕುರಿತು. ಯು ಆರ್ ಅನಂತಮೂರ್ತಿಯವರ ಉಜ್ವಲ ಅನುವಾದದಲ್ಲಿ ಅವು ಹೊಸ ಹೊಳಪು ಪಡಕೊಂಡಿವೆ. ಅದರ ಪೈಕಿ ವೃದ್ದಾಪ್ಯಕ್ಕೊಂದು ಪ್ರಾರ್ಥನೆ ಕವಿತೆ, ವೃದ್ದಾಪ್ಯದ ಕುರಿತು ಹೊಸ ಹೊಳಹೊಂದನ್ನು ನೀಡುವಂತಿದೆ. ನನ್ನನ್ನು ಪ್ರಬುದ್ದನಾದ ಚಿಂತನೆಗಳು ತುಂಬಿದ ಗಾಢವಾದ ವಿಚಾರಧಾರೆಗಳಿರುವ ಮುದುಕನನ್ನಾಗಿ ಮಾಡಬೇಡ. ಹುಂಬತನ ಮತ್ತು ವ್ಯಾಮೋಹ ಇನ್ನೂ ಹಾಗೇ ಉಳಿದಿರುವ ಮುದುಕನಾಗಿ ಉಳಿಸು ಎಂದು ಯೇಟ್ಸ್ ಕೇಳಿಕೊಳ್ಳುತ್ತಾನೆ.
ನನಗೆ ಅಂಥ ಮುದುಕರು ಇಷ್ಟ, ಅದೇ ಕಾರಣಕ್ಕೆ ಖುಷ್‌ವಂತ್ ಸಿಂಗ್ ಇಷ್ಟ. ಎಪ್ಪತ್ತು ದಾಟುತ್ತಿದ್ದರೂ ಉಲ್ಲಾಸದಿಂದ ಓಡಾಡುವ, ನಮ್ಮ ಓರಗೆಯವರೇ ಅನ್ನಿಸುವ, ಯಾವುದೋ ಜಗತ್ತಿನಲ್ಲಿದ್ದಾರೆ ಅನ್ನಿಸದ, ನಮ್ಮಂತೆಯೇ ಯೋಚಿಸುವ, ಅವರ ಕಾಲದ ಬಗ್ಗೆ ಮತಾಡಿ ಬೋರು ಹೊಡೆಸದ ತುಂಟ ವೃದ್ಧರ ಪಟ್ಟಿಯಲ್ಲಿ ಎ ಎಸ್ ಮೂರ್ತಿ, ಸುಬ್ರಾಯ ಚೊಕ್ಕಾಡಿ ಮುಂತಾದವರಿದ್ದಾರೆ. ಅನಂತಮೂರ್ತಿಯವರನ್ನು ನೋಡುತ್ತಿದ್ದರೆ, ಅವರಿಗೆ ಅಷ್ಟು ವಯಸ್ಸಾಗಿದೆ
ಎಂದು ಅನ್ನಿಸುವುದೇ ಇಲ್ಲ. ಕೆಲವರು ನಮ್ಮ ಕಣ್ಣಮುಂದೆ, ನಮ್ಮ ಕಲ್ಪನೆಯಲ್ಲಿ ಹರೆಯದವರಾಗಿಯೇ ಇರುತ್ತಾರೆ. ಬಿ ಆರ್ ಲಕ್ಷ್ಮಣರಾವ್ ಅವರಿಗೆ ಅರವತ್ತಮೂರು ವಯಸ್ಸು ಎಂದು ಯಾರಾದರೂ ಹೇಳಿದರೆ, ಅದನ್ನು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತದೆ. ನಮಗಿನ್ನೂ ಅವರು ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರಲ್ಲೊಬ್ಬರಾಗಿಯೇ ಕಾಣಿಸುತ್ತಾರೆ. ಮಹಡಿಯಲ್ಲಿ ನಿಂತ ಸುಂದರಿಯ ಮಿಂಚುವ ಮೀನ ಖಂಡಗಳನ್ನು ನೋಡಿ ಚಕಿತವಾಗುವ ಕಣ್ಣುಗಳಷ್ಟೇ ನಮ್ಮ ಪ್ರಜ್ಞೆಯಲ್ಲಿ ದಾಖಲಾಗಿರುತ್ತದೆ.
ವಯಸ್ಸು ಮತ್ತು ಅನುಭವ ಹೀಗೆ ನಮ್ಮನ್ನು ಮಾಗಿಸುತ್ತಾ ಹೋದ ಹಾಗೇ, ನಮ್ಮ ಸ್ಮೃತಿಯಲ್ಲಿ ಯೌವನದ ಕಂಪು, ಹೊಳಪು, ಉಲ್ಲಾಸ, ತೀವ್ರತೆ ಮತ್ತು ಬಿರುಸನ್ನು ಹಾಗೇ ಉಳಿಸಿರುತ್ತದೆ. ಅದೇ ನಮ್ಮನ್ನು ಜೀವಂತವಾಗಿ ಇಡುವ ಶಕ್ತಿ ಎಂದು ನಾನು ನಂಬಿದ್ದೇನೆ.
ಇಲ್ಲದೇ ಹೋದರೆ, ನಾವು ಹುತ್ತಗಟ್ಟಿದ, ಹೊರದಾರಿಗಳಿಲ್ಲದ ಕೋಟೆಯಲ್ಲಿ ಬಂದಿಗಳಾಗಿ ಉಳಿದೇ ಬಿಡುತ್ತೇವೇನೋ ?
ಇದೂ ಒಂದು ಭ್ರಮೆಯೇ ಇರಬಹುದು. ಬದುಕನ್ನು ಪ್ರೀತಿಸುವ ರೀತಿ ಇರಬಹುದು. ಅಥವಾ ಬದುಕನ್ನು ನಾನು ತೀವ್ರವಾಗಿ ಪ್ರೀತಿಸುತ್ತಿದ್ದೇನೆ ಎಂದು ನಂಬಲು ನಾನು ಕಂಡುಕೊಂಡ ಒಂದು ಮಾರ್ಗವೂ ಇರಬಹುದು.

Sunday, January 17, 2010

ನಾನೂ ಅವನು ಮತ್ತು ಹೇಳದೇ ಉಳಿದ ಕತೆ

ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು’ ಎಂಬ ಒಂದೇ ಒಂದು ಸಾಲು ಬರೆದು ನಾನು ಸುಮ್ಮನೆ ಕೂತಿದ್ದೆ. ಮುಂದಿನ ಸಾಲುಗಳಿಗಾಗಿ ಮನಸ್ಸು ತಡಕಾಡುತ್ತಿತ್ತು.
ಇನ್ನು ಸ್ವಲ್ಪ ಹೊತ್ತಿಗೆಲ್ಲ ಕತ್ತಲಾಗುತ್ತದೆ. ಕತ್ತಲಲ್ಲಿ ಏನೂ ಹೊಳೆಯುವುದಿಲ್ಲ. ಅದಕ್ಕೂ ಮುಂಚೆ ಬರೆದು ಮುಗಿಸಿಬಿಡು ಅಂತ ಅವನು ಹೇಳಿದ. ಅವನೂ ಕೂಡ ಬರೆಯುವುದಕ್ಕೆ ಹೊಂಚು ಹಾಕುತ್ತಿದ್ದಾನೆ ಎಂದು ನನಗೆ ಅನ್ನಿಸುತ್ತಿತ್ತು. ನನಗೆ ಬರೆಯುವುದರಲ್ಲಿ ಆಸಕ್ತಿಯಿಲ್ಲ. ನೋಡುವುದು, ಓದುವುದು, ಅನುಭವಿಸುವುದು ಮಾತ್ರ ಖುಷಿ ಕೊಡುವ ಸಂಗತಿ. ಬರೆಯುವುದು ಹಿಂಸೆ’ ಅಂತ ಅವನು ಘೋಷಿಸಿಬಿಟ್ಟಿದ್ದ. ಅದಕ್ಕೋಸ್ಕರವೇ ಇರಬೇಕು, ಬೇಗ ಕತೆ ಬರೆದು ಮುಗಿಸು, ನಾನು ಓದಬೇಕು ಎಂದು ಒಂದೇ ಸಮ ಪೀಡಿಸುತ್ತಿದ್ದ.
ಅವನಿಗೆ ಯಾವ ಕತೆ ಇಷ್ಟವಾಗಬಹುದು ಎಂದು ನಾನು ಯೋಚಿಸುತ್ತಾ ಕೂತೆ. ಸುಂದರವಾದ ಒಂದು ಪ್ರೇಮಕತೆಯನ್ನು ಕಟ್ಟಿಕೊಡುವುದು ನನಗೇನೂ ಕಷ್ಟದ ಕೆಲಸ ಆಗಿರಲಿಲ್ಲ. ನಾನು ನೂರಾರು ಪ್ರೇಮಕತೆಗಳನ್ನು ಬರೆದಿದ್ದೆ, ನೂರಾರು ಪ್ರೇಮಪ್ರಸಂಗಗಳನ್ನು ನೋಡಿದ್ದೆ. ಅವನೂ ಅವಳೂ ಮಾತಾಡುತ್ತಾ ಕೂತಿದ್ದನ್ನು ನೋಡಿದರೆ ಸಾಕು, ನನ್ನೊಳಗೆ ಮುಂದಿನದೆಲ್ಲ ಸೃಷ್ಟಿಯಾಗುತ್ತಿತ್ತು. ಅವನು ನೇಕಾರರ ಹುಡುಗನಾಗುತ್ತಿದ್ದ, ಅವಳು ಲಿಂಗಾಯತರ ಹುಡುಗಿಯಾಗುತ್ತಿದ್ದಳು. ಇಬ್ಬರ ಮದುವೆಗೂ ಜಾತಿ ಅಡ್ಡಿ ಬರುತ್ತಿತ್ತು. ಕೊನೆಗೆ ನೇಕಾರರ ಹುಡುಗನ ಸಾವಿನಲ್ಲಿ ಆ ಪ್ರೇಮ ಕೊನೆಯಾಗುತ್ತಿತ್ತು. ಹೀಗೆ ತುಂಬ ವರ್ಷ ಬರೆದ ನಂತರ ನಾನು ಮತ್ತೊಂದು ಆಯಾಮದ ಬಗ್ಗೆ ಚಿಂತಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದೆ. ಈ ಬಾರಿ ಹುಡುಗಿಯೂ ಹುಡುಗನೂ ಒಂದೇ ಜಾತಿಗೆ ಸೇರಿದವರಾಗಿದ್ದರು. ಎಲ್ಲವೂ ಸರಿಹೋಗುತ್ತದೆ ಎನ್ನುವ ಹೊತ್ತಿಗೆ ಅವಳ ಕಣ್ಣಿಗೆ ಮತ್ತೊಬ್ಬ ಹುಡುಗ ಕಾಣಿಸಿಕೊಳ್ಳುತ್ತಿದ್ದ. ಅವಳ ಪ್ರೇಮ ಆ ಹೊಸ ಹುಡುಗನತ್ತ ಹರಿಯುತ್ತಿತ್ತು. ತಾನು ಪ್ರೀತಿಸಿದವನನ್ನು ಮದುವೆಯಾದರೂ ಹೊಸ ಹುಡುಗನತ್ತ ವಾಲುವ ಅವಳ ಮನಸ್ಸು, ಹಂಬಲ ಮತ್ತು ವಾಂಛೆಗಳನ್ನು ನಾನು ದಾಖಲಿಸಿದ್ದೆ. ಅದನ್ನು ನನಗೆ ಗೊತ್ತಿರುವ ಹುಡುಗರು ಅಸಹನೆಯಿಂದ ನಿರಾಕರಿಸಿದ್ದರು. ಹೆಣ್ಮಕ್ಕಳು ನಿಜವಾಗಿಸಲು ಯತ್ನಿಸಿದ್ದರು.
ಈ ಕತೆಗಳನ್ನೆಲ್ಲ ಅವನು ಓದಿದ್ದಾನೆ ಎಂಬ ಅರಿವು ನನಗೂ ಇತ್ತು. ನನ್ನೆದುರು ಕೂತ ಅವನಿಗೆ ಹೊಸ ಶೈಲಿಯ ಕತೆಗಳನ್ನು ನಾನು ಹೇಳಬೇಕಾಗಿತ್ತು. ಒಂದು ವೇಳೆ ಅಂಥ ಕತೆಗಳನ್ನು ಹೇಳದೇ ಹೋದರೆ ನನ್ನನ್ನು ಅವನು ನಿರಾಕರಿಸುತ್ತಾನೆ ಎಂಬ ಭಯವೂ ನನ್ನನ್ನು ಕಾಡುತ್ತಿತ್ತು. ಆ ಕಲ್ಪನೆಯೇ ನನ್ನನ್ನು ಸಾಕಷ್ಟು ಬಾರಿ ಕಂಗೆಡಿಸಿದೆ. ಓದುಗನ ಕಣ್ಣಲ್ಲಿ ಅಪ್ರಸ್ತುತನಾಗುವ ಬರಹಗಾರನ ಆಯಸ್ಸು ಮುಗಿದಂತೆಯೇ ಎಂದು ನಾನು ನಂಬಿದ್ದೆ.
ಸೂರ್ಯಕಿರಣಗಳೇ ಬೀಳದ ಧ್ರುವಪ್ರದೇಶದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಇಬ್ಬರು ತರುಣರ ಕತೆ ಹೇಳುತ್ತೇನೆ ಎಂದೆ. ಅವನಿಗೆ ಅದು ಇಷ್ಟವಾಗಲಿಲ್ಲ. ನನ್ನ ಪರಿಸರಕ್ಕೂ ಆ ಕತೆಗಳಿಗೂ ಸಂಬಂಧವಿಲ್ಲ. ಯಾರದೋ ಕತೆ ಕಟ್ಟಿಕೊಂಡು ನಾನೇನು ಮಾಡಲಿ. ನನಗೆ ಹತ್ತಿರವೆನ್ನಿಸುವ ಕತೆಗಳನ್ನು ಕೊಡು’ ಎಂದು ಅವನು ಕಟ್ಟುನಿಟ್ಟಾಗಿ ಹೇಳಿದ. ಅವನ ದನಿಯಲ್ಲಿ ಎದ್ದು ಕಾಣುತ್ತಿದ್ದ ಒರಟುತನ, ನಿರ್ದಾಕ್ಷಿಣ್ಯ ಒಂದು ಕ್ಷಣ ನನ್ನನ್ನು ಸಿಟ್ಟಿಗೆಬ್ಬಿಸಿತು. ಸುಮ್ನೆ ಕೇಳಿಸ್ಕೋ, ನಾನು ಹೇಳಿದ್ದೇ ಕತೆ. ನಿನಗೆ ಬೇಕಾದ ಕತೆಗಳನ್ನು ಹೇಳುವುದಕ್ಕೆ ನಾನಿಲ್ಲ’ ಎಂದು ಬೈದು ಅವನನ್ನು ಓಡಿಸಿಬಿಡಬೇಕು ಅನ್ನಿಸಿತು. ಆದರೆ ಒಬ್ಬ ಓದುಗನನ್ನು ಕಳೆದುಕೊಳ್ಳುವುದು ಅಷ್ಟು ಖುಷಿಯ ಸಂಗತಿಯೇನೂ ಆಗಿರಲಿಲ್ಲ. ಮತ್ತೊಬ್ಬ ಹೊಸ ಓದುಗನನ್ನು ಹುಡುಕುವ ವ್ಯವಧಾನ ನನ್ನ ಕತೆಗಳಿಗಿವೆ ಎಂಬ ನಂಬಿಕೆಯೂ ನನಗಿರಲಿಲ್ಲ.
ಬೇಗ ಕತೆ ಹೇಳು, ಇಲ್ಲದೇ ಹೋದರೆ ನಾನು ಹೊರಟು ಹೋಗುತ್ತೇನೆ’ ಎಂಬಂತೆ ಅವನು ನನ್ನ ಮುಖ ನೋಡಿದ. ಮುಸ್ಸಂಜೆಯೊಳಗೆ ಇರುಳು ಬೆರೆಯುತ್ತಿತ್ತು. ಕತ್ತಲು ಬೆಳೆಯುತ್ತಿತ್ತು.ದೂರದಲ್ಲಿ ಯಾರೋ ಕೊಳಲೂದುತ್ತಿರುವ ಸದ್ದು ಕೇಳಿಸಿತು. ಅದರಾಚೆಗೆ ಹೆಸರು ಗೊತ್ತಿಲ್ಲದ ಬೆಟ್ಟ. ಆ ಬೆಟ್ಟದ ತಪ್ಪಲಲ್ಲಿ ಸೋಲಿಗರ ಹುಡುಗರು ರಾಗವಾಗಿ ಏನನ್ನೋ ಹಾಡುತ್ತಿದ್ದರು.
ನಾಗರಿಕತೆಯ ಕತೆ ಹೇಳಲಾ?’
ಅವನು ತಲೆಯಾಡಿಸಿದ. ಅಂಥ ಕತೆಗಳನ್ನು ನಾನೂ ತುಂಬ ಓದಿದ್ದೇನೆ. ಹಳೇ ಕಾಲದ ಕತೆಗಳವು. ಚರಿತ್ರೆ ನಿನಗೇನು ಗೊತ್ತಿದೆ? ಯಾರೋ ಬರೆದಿಟ್ಟ ಇತಿಹಾಸದ ವಿವರಗಳನ್ನು ಎತ್ತಿಕೊಂಡು ಅದನ್ನೊಂದಷ್ಟು ತಿರುಚಿ ಕತೆ ಹೇಳಲು ಆರಂಭಿಸುತ್ತಿ. ಅದು ಚರಿತ್ರೆಯೂ ಅಲ್ಲ, ಕಲ್ಪನೆಯೂ ಅಲ್ಲದ ಸ್ಥಿತಿಯಲ್ಲಿರುತ್ತೆ. ಅಂಥ ಹಾಳುಮೂಳು ಸಂಗತಿಗಳಲ್ಲಿ ನನಗೆ ಕಿಂಚಿತ್ತೂ ಆಸಕ್ತಿಯಿಲ್ಲ’ ಎಂದು ಅವನು ದೊಡ್ಡದಾಗಿ ಆಕಳಿಸಿದ.
ಅವನನ್ನು ಸಂತೋಷಪಡಿಸಲು ಇನ್ನೇನು ಹೇಳಬಹುದು ಎಂದು ಯೋಚಿಸಿದೆ. ಜನಾಂಗೀಯ ಕದನ, ಮೇಲು ಕೀಳಿನ, ಕಲ್ಯಾಣದ ಕ್ರಾಂತಿ, ಅರಮನೆಯಲ್ಲಿ ದಾಸಿಯರು ಲೈಂಗಿಕ ಶೋಷಣೆಗೆ ಒಳಗಾದದ್ದು, ಜಮೀನ್ದಾರರು ಬಡವರನ್ನು ಹುರಿದು ಮುಕ್ಕಿದ್ದು, ಪುರೋಹಿತರು ಮಂತ್ರಬಲದಿಂದ ಮುಕ್ಕೋಟಿ ಶೂದ್ರರನ್ನು ಮುಷ್ಟಿಯಲ್ಲಿಟ್ಟುಕೊಂಡದ್ದು, ಮದುವೆ ಮನೆಯಿಂದಲೇ ಪದ್ಮಿನಿಯನ್ನು ಪೃಥ್ವೀರಾಜ ಹಾರಿಸಿಕೊಂಡು ಹೋದದ್ದು, ತಾಳೀಕೋಟೆಯ ಯುದ್ಧದಲ್ಲಿ ವಿಜಯನಗರದ ಕೊನೆಯ ಅರಸ ಪ್ರಾಣಕಳಕೊಂಡದ್ದು.. ಹೀಗೆ ಕಣ್ಮುಂದೆ ಕತೆಗಳು ಸಾಲುಸಾಲಾಗಿ ಹರಿದುಹೋದವು. ಅವುಗಳಲ್ಲಿ ಅವನಿಗೆ ಆಸಕ್ತಿ ಇರಲಾರದು ಅನ್ನಿಸಿತು.
ಅವನ ನಿರೀಕ್ಷೆ ನನ್ನನ್ನು ಕಂಗೆಡಿಸುತ್ತಿತ್ತು. ನಾನು ಕುತೂಹಲ ಹುಟ್ಟಿಸುವ ಏನನ್ನೋ ಹೇಳಲಿದ್ದೇನೆ ಎಂಬಂತೆ ಅವನು ಕಾಯುತ್ತಾ ಕೂತಿದ್ದ. ಅವನ ನಿರೀಕ್ಷೆಗೆ ಸಮನಾದದ್ದನ್ನು ನಾನು ಹೇಳದೇ ಹೋದರೆ ಅವನು ಎದ್ದು ಹೋಗುತ್ತಾನೆ ಮತ್ತು ಎಂದಿಗೂ ಮರಳಿ ನನ್ನ ಬಳಿ ಬರುವುದಿಲ್ಲ ಎಂಬ ಆತಂಕದಲ್ಲಿ ನಾನು ಕೂತಿದ್ದೆ. ನನ್ನ ನೆನಪುಗಳನ್ನು ಬಗೆಯುತ್ತಿದ್ದೆ. ಅವನನ್ನು ಹಿಡಿದಿಡಬಹುದಾದ ಕತೆಯೊಂದನ್ನು ಹುಡುಕುತ್ತಿದ್ದೆ.
ದೇವರ ಕತೆಗಳನ್ನು ಹೇಳುತ್ತೇನೆ ಎಂದು ಅವನ ಮುಖ ನೋಡಿದೆ. ಸಾಕಾಗಿ ಹೋಗಿದೆ. ದೇವರ ಕತೆಗಳೂ ಗೊತ್ತು, ವ್ಯಥೆಗಳೂ ಗೊತ್ತು. ನೂರಾರು ವರ್ಷಗಳಿಂದ ಅದನ್ನೇ ಕೇಳಿಕೊಂಡು ಬಂದಿದ್ದೇನೆ. ದೇವರು, ದೆವ್ವ, ಭೂತ, ಪ್ರೇತ, ಪಿಶಾಚಿಗಳೆಲ್ಲವೂ ಬೋರು ಹೊಡೆಸುತ್ತವೆ. ನಿನಗೆ ಗೊತ್ತಿಲ್ಲದ್ದರ ಬಗ್ಗೆ ಹೇಳಬೇಡ’ ಎಂದು ಅಸಹನೆಯಿಂದ ಹೇಳತೊಡಗಿದ. ನನಗೂ ಸಿಟ್ಟು ಬಂತು.
ಗೊತ್ತಿಲ್ಲದ್ದರ ಬಗ್ಗೆ ಹೇಳಿದರೇ ಅದು ಕತೆ. ಗೊತ್ತಿದ್ದದ್ದನ್ನು ಹೇಳಿದರೆ ಅದು ವರದಿ. ವರದಿ ಒಪ್ಪಿಸುವುದರಲ್ಲಿ ನನಗೆ ಆಸಕ್ತಿಯಿಲ್ಲ’ ಎಂದು ನಾನೂ ಗೊಣಗಿದೆ. ಇಂಥ ಸುಳ್ಳುಗಳನ್ನು ಹೇಳಿಕೊಂಡು ಬಹಳ ಕಾಲದಿಂದ ಬಚಾವಾಗುತ್ತಿದ್ದೀರಿ. ಕತೆ ಹೇಳುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕು, ಕತೆ ಒಳಗೆ ಹರಳುಗಟ್ಟಬೇಕು. ಒಂದು ಅನುಭವ ಕತೆಯ ರೂಪ ತಾಳುವುದಕ್ಕೆ ಕಾದು ಕೂರಬೇಕು. ಅದು ಸುಲಭದಲ್ಲಿ ಸಿದ್ಧಿಸುವ ಸ್ಥಿತಿಯಲ್ಲ’ ಎಂದು ಏನೇನೋ ಸುಳ್ಳುಗಳನ್ನು ಹೇಳುತ್ತಿದ್ದೀರಿ. ಎಲ್ಲವೂ ಬರೀ ಬೊಗಳೆ. ನಿಮಗೆ ಕತೆ ಹೇಳುವುದಕ್ಕೆ ಬರೋದಿಲ್ಲ, ಅಷ್ಟೇ ಸತ್ಯ’ ಎಂದು ಎಲ್ಲರ ಮೇಲೂ ಸಿಟ್ಟು ಕಾರಿಕೊಂಡ. ನಾನು ಅದನ್ನು ನಿರಾಕರಿಸುವ ಹಾಗಿರಲಿಲ್ಲ.
ಕತ್ತಲು ಮತ್ತಷ್ಟು ದಟ್ಟವಾಯಿತು. ಅವನು ಮತ್ತೊಮ್ಮೆ ಆಕಳಿಸಿದ. ಇನ್ನೇನು ಸ್ವಲ್ಪ ಹೊತ್ತಿಗೆಲ್ಲ ಅವನು ನಿದ್ದೆ ಹೋಗುತ್ತಾನೆ. ನನಗೂ ನಿದ್ದೆ ಬರುತ್ತದೆ. ನಾನು ಏಳುವ ಹೊತ್ತಿಗೆ ಅವನು ಎದ್ದು ಹೊರಟು ಹೋಗಿರುತ್ತಾನೆ. ಅವನು ಕಣ್ಮುಚ್ಚುವ ಮುಂಚೆ ಕತೆ ಹೇಳಬೇಕು. ಕತೆ ಹೇಳಿ ಅವನನ್ನು ಉಳಿಸಿಕೊಳ್ಳಬೇಕು ಎಂದು ನಾನು ಯೋಚಿಸುತ್ತಿದ್ದೆ.
ಯಾಕೋ ಅವನ ನಿರೀಕ್ಷೆ ಅತಿಯಾಯಿತು ಅನ್ನಿಸತೊಡಗಿತು. ನಾನೇಕೆ ಇಷ್ಟೊಂದು ಕಷ್ಟಪಟ್ಟುಕೊಂಡು ಅವನಿಗೆ ಕತೆ ಹೇಳಬೇಕು. ಅವನಿಗೆ ಕತೆ ಹೇಳುತ್ತೇನೆ ಅಂತೇನೂ ನಾನು ಮಾತು ಕೊಟ್ಟಿಲ್ಲವಲ್ಲ. ಅಷ್ಟಕ್ಕೂ ಕತೆ ಬೇಕಾಗಿರುವುದು ಅವನಿಗೆ. ಕತೆ ಹೇಳದೇ ನಾನು ಬದುಕಿರಬಲ್ಲೆ, ಕತೆ ಕೇಳದೇ ಅವನು ಬದುಕಿರೋದಕ್ಕೆ ಸಾಧ್ಯವಾ? ಯಾರಿಗೆ ಅದು ಜೀವನ್ಮರಣದ ಪ್ರಶ್ನೆ. ಯಾರ ತುರ್ತು ದೊಡ್ಡದು. ನನ್ನದೋ ಅವನದೋ?
ಹಾಗೆಲ್ಲ ಯೋಚಿಸುತ್ತಾ ಸಿಟ್ಟು ಉಕ್ಕತೊಡಗಿತು. ನಾನು ಇದೇ ಕತೆಯನ್ನು ಹೇಳೋದು. ಹೀಗೇ ಹೇಳೋದು. ಬೇಕಿದ್ದರೆ ಕೇಳಿಸಿಕೋ ಇಲ್ಲದೇ ಹೋದರೆ ಎದ್ದು ಹೋಗು ಎಂದು ಹೇಳಬೇಕು ಅನ್ನಿಸಿತು. ಅಷ್ಟೊಂದು ಸಿಟ್ಟು ಒಳ್ಳೆಯದಲ್ಲ ಎಂದು ವಿವೇಕ ಹೇಳಿತು. ಕತೆ ಹೇಳುವವನಿಗೆ ವಿವೇಕ ಇರಬೇಕಾ ಎಂದು ಮತ್ತೊಮ್ಮೆ ಅನ್ನಿಸಿತು. ವಿವೇಕವಂತ ಲೋಕಕ್ಕೆ ಇಷ್ಟವಾಗುವ ಸಂಗತಿಗಳನ್ನು ಹೇಳುತ್ತಾನೆ. ಜ್ಞಾನಿ ಪರಲೋಕ ಆಪ್ತವಾಗುವಂಥ ಸಂಗತಿಗಳನ್ನು ಹೇಳುತ್ತಾನೆ. ಅವರೆಲ್ಲರೂ ಸ್ವೀಕರಿಸಿದ ನಂತರ ಕೊಡಲು ಹೊರಟವರು. ಆದರೆ ನಾನು ಹಾಗಲ್ಲ, ನಾನು ಕತೆ ಹೇಳುವವನು. ಅಲ್ಲಿ ವಿವೇಕಕ್ಕಿಂತ ಕಲ್ಪನೆ ಹೆಚ್ಚಿಗಿರಬೇಕು. ಈ ಲೋಕದ, ಆ ಲೋಕದ ಕತೆಗಳನ್ನು ಹೇಳುವುದು ನನ್ನ ಕೆಲಸ ಅಲ್ಲ. ನಾನು ಮತ್ತೊಂದು ಲೋಕವನ್ನು ಸೃಷ್ಟಿಸಬೇಕು. ಆ ಲೋಕದಲ್ಲಿ ನಾನೂ ಅವನೂ ಇಬ್ಬರೇ ಇರಬೇಕು. ಉಳಿದವರೆಲ್ಲ ಹೊಸಬರಾಗಿ ಕಾಣಿಸಬೇಕು. ಅವನು ಕಂಡು ಮಾತಾಡಿದ ಜನರೂ ಅವನಿಗೆ ಅಪರಿಚಿತವಾಗಿ ಕಾಣಬೇಕು.
ಉತ್ತರ ದಿಕ್ಕಿನಿಂದ ಮಂಜುಗಡ್ಡೆಯ ಮೇಲೆ ಹಾದು ಬಂದ ಗಾಳಿ ನಮ್ಮಿಬ್ಬರನ್ನೂ ಸವರಿಕೊಂಡು ಹೋಯಿತು. ನಾನು ತತ್ತರಿಸಿಹೋದೆ. ಅವನು ಏನೂ ಆಗಿಲ್ಲವೆಂಬಂತೆ ಕೂತಿದ್ದ. ಅವನ ಇಡೀ ಭಂಗಿ ಒಂದೊಳ್ಳೇ ಕತೆ ಹೇಳು’ ಎಂದು ಬೇಡಿಕೊಳ್ಳುವಂತಿತ್ತು. ಅದು ಕೇವಲ ಬೇಡಿಕೆಯಲ್ಲ, ಆದೇಶ, ಆಜ್ಞೆ, ಕಟ್ಟಪ್ಪಣೆ ಎಂಬಂತೆ ನನಗೆ ಭಾಸವಾಯಿತು.
ನನ್ನ ದರ್ಪ, ಕತೆ ಹೇಳಬಲ್ಲೆ ಎಂಬ ಅಹಂಕಾರ, ಅವನನ್ನು ಮೆಚ್ಚಿಸುವುದು ಸುಲಭ ಎಂಬ ಉಡಾಫೆ ಎಲ್ಲವೂ ಆ ಕ್ಷಣ ಕರಗಿಹೋಯಿತು. ಅವನನ್ನು ಕತೆ ಹೇಳಿ ಮೆಚ್ಚಿಸಬೇಕು ಎಂಬ ಆಸೆ ಕೂಡ ಭಗ್ನವಾಯಿತು. ನೀನ್ಯಾರೋ ನನಗೆ ಗೊತ್ತಿಲ್ಲ ಎಂಬಂತೆ ನಾನೂ ಸ್ವಲ್ಪ ಹೊತ್ತು ಕೂತಿದ್ದೆ. ಆಕಾಶದಲ್ಲಿ ಚಂದ್ರನಿರಲಿಲ್ಲ. ನಕ್ಷತ್ರಗಳ ಬೆಳಕಲ್ಲಿ ಆಕಾಶ ಝಗಮಗಿಸುತ್ತಿತ್ತು.
ನನ್ನ ಮುಂದೆ ಅವನಿದ್ದಾನೆ ಅನ್ನುವುದನ್ನೆ ಮರೆತು ನಾನು ಕತೆ ಹೇಳಲು ಆರಂಭಿಸಿದೆ. ಅದು ನನ್ನ ಕತೆ ಅನ್ನುವ ಅರಿವೂ ನನಗಿರಲಿಲ್ಲ. ನನ್ನ ಅವಮಾನದ ಕ್ಷಣಗಳು, ಸಂಭ್ರಮದ ಗಳಿಗೆಗಳು, ಪ್ರೇಮಿದ ಪಿಸುಮಾತುಗಳು, ವಿರಹದ ತಲ್ಲಣಗಳು, ನೋಯಿಸಿದ ಘಟನೆಗಳು, ವಂಚನೆಯ ಪ್ರಕರಣಗಳು, ಸುಳ್ಳಿನ ಕಂತೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತಾ ಬಂದವು. ನಾನು ನಾನಾಗಿಬಿಟ್ಟಿದ್ದೆ ಹಾಗೂ ಅದನ್ನು ಮರೆತೂ ಬಿಟ್ಟಿದ್ದೆ.
ತನ್ಮಯನಾಗಿ ಕತೆ ಹೇಳುತ್ತಾ ಕುಳಿತವನು, ಅಚಾನಕ್ ಮುಂದೆ ಕಣ್ಣು ಹಾಯಿಸಿದರೆ ಅವನು ತನ್ನ ಇಡೀ ಬಳಗವನ್ನೇ ಕರೆದುಕೊಂಡು ಬಂದಿದ್ದ. ಅವನನ್ನೇ ಹೋಲುವ ಸಾವಿರ ಸಾವಿರ ಮಂದಿ ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಕೂತು ಕತೆ ಕೇಳಿಸಿಕೊಳ್ಳುತ್ತಿದ್ದರು.
ನಾನು ಭಯವಾಗಿ ಕಣ್ಮುಚ್ಚಿಕೊಂಡೆ. ಕತೆ ಮುಂದುವರಿಸಿದೆ.