Sunday, January 17, 2010

ನಾನೂ ಅವನು ಮತ್ತು ಹೇಳದೇ ಉಳಿದ ಕತೆ

ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು’ ಎಂಬ ಒಂದೇ ಒಂದು ಸಾಲು ಬರೆದು ನಾನು ಸುಮ್ಮನೆ ಕೂತಿದ್ದೆ. ಮುಂದಿನ ಸಾಲುಗಳಿಗಾಗಿ ಮನಸ್ಸು ತಡಕಾಡುತ್ತಿತ್ತು.
ಇನ್ನು ಸ್ವಲ್ಪ ಹೊತ್ತಿಗೆಲ್ಲ ಕತ್ತಲಾಗುತ್ತದೆ. ಕತ್ತಲಲ್ಲಿ ಏನೂ ಹೊಳೆಯುವುದಿಲ್ಲ. ಅದಕ್ಕೂ ಮುಂಚೆ ಬರೆದು ಮುಗಿಸಿಬಿಡು ಅಂತ ಅವನು ಹೇಳಿದ. ಅವನೂ ಕೂಡ ಬರೆಯುವುದಕ್ಕೆ ಹೊಂಚು ಹಾಕುತ್ತಿದ್ದಾನೆ ಎಂದು ನನಗೆ ಅನ್ನಿಸುತ್ತಿತ್ತು. ನನಗೆ ಬರೆಯುವುದರಲ್ಲಿ ಆಸಕ್ತಿಯಿಲ್ಲ. ನೋಡುವುದು, ಓದುವುದು, ಅನುಭವಿಸುವುದು ಮಾತ್ರ ಖುಷಿ ಕೊಡುವ ಸಂಗತಿ. ಬರೆಯುವುದು ಹಿಂಸೆ’ ಅಂತ ಅವನು ಘೋಷಿಸಿಬಿಟ್ಟಿದ್ದ. ಅದಕ್ಕೋಸ್ಕರವೇ ಇರಬೇಕು, ಬೇಗ ಕತೆ ಬರೆದು ಮುಗಿಸು, ನಾನು ಓದಬೇಕು ಎಂದು ಒಂದೇ ಸಮ ಪೀಡಿಸುತ್ತಿದ್ದ.
ಅವನಿಗೆ ಯಾವ ಕತೆ ಇಷ್ಟವಾಗಬಹುದು ಎಂದು ನಾನು ಯೋಚಿಸುತ್ತಾ ಕೂತೆ. ಸುಂದರವಾದ ಒಂದು ಪ್ರೇಮಕತೆಯನ್ನು ಕಟ್ಟಿಕೊಡುವುದು ನನಗೇನೂ ಕಷ್ಟದ ಕೆಲಸ ಆಗಿರಲಿಲ್ಲ. ನಾನು ನೂರಾರು ಪ್ರೇಮಕತೆಗಳನ್ನು ಬರೆದಿದ್ದೆ, ನೂರಾರು ಪ್ರೇಮಪ್ರಸಂಗಗಳನ್ನು ನೋಡಿದ್ದೆ. ಅವನೂ ಅವಳೂ ಮಾತಾಡುತ್ತಾ ಕೂತಿದ್ದನ್ನು ನೋಡಿದರೆ ಸಾಕು, ನನ್ನೊಳಗೆ ಮುಂದಿನದೆಲ್ಲ ಸೃಷ್ಟಿಯಾಗುತ್ತಿತ್ತು. ಅವನು ನೇಕಾರರ ಹುಡುಗನಾಗುತ್ತಿದ್ದ, ಅವಳು ಲಿಂಗಾಯತರ ಹುಡುಗಿಯಾಗುತ್ತಿದ್ದಳು. ಇಬ್ಬರ ಮದುವೆಗೂ ಜಾತಿ ಅಡ್ಡಿ ಬರುತ್ತಿತ್ತು. ಕೊನೆಗೆ ನೇಕಾರರ ಹುಡುಗನ ಸಾವಿನಲ್ಲಿ ಆ ಪ್ರೇಮ ಕೊನೆಯಾಗುತ್ತಿತ್ತು. ಹೀಗೆ ತುಂಬ ವರ್ಷ ಬರೆದ ನಂತರ ನಾನು ಮತ್ತೊಂದು ಆಯಾಮದ ಬಗ್ಗೆ ಚಿಂತಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದೆ. ಈ ಬಾರಿ ಹುಡುಗಿಯೂ ಹುಡುಗನೂ ಒಂದೇ ಜಾತಿಗೆ ಸೇರಿದವರಾಗಿದ್ದರು. ಎಲ್ಲವೂ ಸರಿಹೋಗುತ್ತದೆ ಎನ್ನುವ ಹೊತ್ತಿಗೆ ಅವಳ ಕಣ್ಣಿಗೆ ಮತ್ತೊಬ್ಬ ಹುಡುಗ ಕಾಣಿಸಿಕೊಳ್ಳುತ್ತಿದ್ದ. ಅವಳ ಪ್ರೇಮ ಆ ಹೊಸ ಹುಡುಗನತ್ತ ಹರಿಯುತ್ತಿತ್ತು. ತಾನು ಪ್ರೀತಿಸಿದವನನ್ನು ಮದುವೆಯಾದರೂ ಹೊಸ ಹುಡುಗನತ್ತ ವಾಲುವ ಅವಳ ಮನಸ್ಸು, ಹಂಬಲ ಮತ್ತು ವಾಂಛೆಗಳನ್ನು ನಾನು ದಾಖಲಿಸಿದ್ದೆ. ಅದನ್ನು ನನಗೆ ಗೊತ್ತಿರುವ ಹುಡುಗರು ಅಸಹನೆಯಿಂದ ನಿರಾಕರಿಸಿದ್ದರು. ಹೆಣ್ಮಕ್ಕಳು ನಿಜವಾಗಿಸಲು ಯತ್ನಿಸಿದ್ದರು.
ಈ ಕತೆಗಳನ್ನೆಲ್ಲ ಅವನು ಓದಿದ್ದಾನೆ ಎಂಬ ಅರಿವು ನನಗೂ ಇತ್ತು. ನನ್ನೆದುರು ಕೂತ ಅವನಿಗೆ ಹೊಸ ಶೈಲಿಯ ಕತೆಗಳನ್ನು ನಾನು ಹೇಳಬೇಕಾಗಿತ್ತು. ಒಂದು ವೇಳೆ ಅಂಥ ಕತೆಗಳನ್ನು ಹೇಳದೇ ಹೋದರೆ ನನ್ನನ್ನು ಅವನು ನಿರಾಕರಿಸುತ್ತಾನೆ ಎಂಬ ಭಯವೂ ನನ್ನನ್ನು ಕಾಡುತ್ತಿತ್ತು. ಆ ಕಲ್ಪನೆಯೇ ನನ್ನನ್ನು ಸಾಕಷ್ಟು ಬಾರಿ ಕಂಗೆಡಿಸಿದೆ. ಓದುಗನ ಕಣ್ಣಲ್ಲಿ ಅಪ್ರಸ್ತುತನಾಗುವ ಬರಹಗಾರನ ಆಯಸ್ಸು ಮುಗಿದಂತೆಯೇ ಎಂದು ನಾನು ನಂಬಿದ್ದೆ.
ಸೂರ್ಯಕಿರಣಗಳೇ ಬೀಳದ ಧ್ರುವಪ್ರದೇಶದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಇಬ್ಬರು ತರುಣರ ಕತೆ ಹೇಳುತ್ತೇನೆ ಎಂದೆ. ಅವನಿಗೆ ಅದು ಇಷ್ಟವಾಗಲಿಲ್ಲ. ನನ್ನ ಪರಿಸರಕ್ಕೂ ಆ ಕತೆಗಳಿಗೂ ಸಂಬಂಧವಿಲ್ಲ. ಯಾರದೋ ಕತೆ ಕಟ್ಟಿಕೊಂಡು ನಾನೇನು ಮಾಡಲಿ. ನನಗೆ ಹತ್ತಿರವೆನ್ನಿಸುವ ಕತೆಗಳನ್ನು ಕೊಡು’ ಎಂದು ಅವನು ಕಟ್ಟುನಿಟ್ಟಾಗಿ ಹೇಳಿದ. ಅವನ ದನಿಯಲ್ಲಿ ಎದ್ದು ಕಾಣುತ್ತಿದ್ದ ಒರಟುತನ, ನಿರ್ದಾಕ್ಷಿಣ್ಯ ಒಂದು ಕ್ಷಣ ನನ್ನನ್ನು ಸಿಟ್ಟಿಗೆಬ್ಬಿಸಿತು. ಸುಮ್ನೆ ಕೇಳಿಸ್ಕೋ, ನಾನು ಹೇಳಿದ್ದೇ ಕತೆ. ನಿನಗೆ ಬೇಕಾದ ಕತೆಗಳನ್ನು ಹೇಳುವುದಕ್ಕೆ ನಾನಿಲ್ಲ’ ಎಂದು ಬೈದು ಅವನನ್ನು ಓಡಿಸಿಬಿಡಬೇಕು ಅನ್ನಿಸಿತು. ಆದರೆ ಒಬ್ಬ ಓದುಗನನ್ನು ಕಳೆದುಕೊಳ್ಳುವುದು ಅಷ್ಟು ಖುಷಿಯ ಸಂಗತಿಯೇನೂ ಆಗಿರಲಿಲ್ಲ. ಮತ್ತೊಬ್ಬ ಹೊಸ ಓದುಗನನ್ನು ಹುಡುಕುವ ವ್ಯವಧಾನ ನನ್ನ ಕತೆಗಳಿಗಿವೆ ಎಂಬ ನಂಬಿಕೆಯೂ ನನಗಿರಲಿಲ್ಲ.
ಬೇಗ ಕತೆ ಹೇಳು, ಇಲ್ಲದೇ ಹೋದರೆ ನಾನು ಹೊರಟು ಹೋಗುತ್ತೇನೆ’ ಎಂಬಂತೆ ಅವನು ನನ್ನ ಮುಖ ನೋಡಿದ. ಮುಸ್ಸಂಜೆಯೊಳಗೆ ಇರುಳು ಬೆರೆಯುತ್ತಿತ್ತು. ಕತ್ತಲು ಬೆಳೆಯುತ್ತಿತ್ತು.ದೂರದಲ್ಲಿ ಯಾರೋ ಕೊಳಲೂದುತ್ತಿರುವ ಸದ್ದು ಕೇಳಿಸಿತು. ಅದರಾಚೆಗೆ ಹೆಸರು ಗೊತ್ತಿಲ್ಲದ ಬೆಟ್ಟ. ಆ ಬೆಟ್ಟದ ತಪ್ಪಲಲ್ಲಿ ಸೋಲಿಗರ ಹುಡುಗರು ರಾಗವಾಗಿ ಏನನ್ನೋ ಹಾಡುತ್ತಿದ್ದರು.
ನಾಗರಿಕತೆಯ ಕತೆ ಹೇಳಲಾ?’
ಅವನು ತಲೆಯಾಡಿಸಿದ. ಅಂಥ ಕತೆಗಳನ್ನು ನಾನೂ ತುಂಬ ಓದಿದ್ದೇನೆ. ಹಳೇ ಕಾಲದ ಕತೆಗಳವು. ಚರಿತ್ರೆ ನಿನಗೇನು ಗೊತ್ತಿದೆ? ಯಾರೋ ಬರೆದಿಟ್ಟ ಇತಿಹಾಸದ ವಿವರಗಳನ್ನು ಎತ್ತಿಕೊಂಡು ಅದನ್ನೊಂದಷ್ಟು ತಿರುಚಿ ಕತೆ ಹೇಳಲು ಆರಂಭಿಸುತ್ತಿ. ಅದು ಚರಿತ್ರೆಯೂ ಅಲ್ಲ, ಕಲ್ಪನೆಯೂ ಅಲ್ಲದ ಸ್ಥಿತಿಯಲ್ಲಿರುತ್ತೆ. ಅಂಥ ಹಾಳುಮೂಳು ಸಂಗತಿಗಳಲ್ಲಿ ನನಗೆ ಕಿಂಚಿತ್ತೂ ಆಸಕ್ತಿಯಿಲ್ಲ’ ಎಂದು ಅವನು ದೊಡ್ಡದಾಗಿ ಆಕಳಿಸಿದ.
ಅವನನ್ನು ಸಂತೋಷಪಡಿಸಲು ಇನ್ನೇನು ಹೇಳಬಹುದು ಎಂದು ಯೋಚಿಸಿದೆ. ಜನಾಂಗೀಯ ಕದನ, ಮೇಲು ಕೀಳಿನ, ಕಲ್ಯಾಣದ ಕ್ರಾಂತಿ, ಅರಮನೆಯಲ್ಲಿ ದಾಸಿಯರು ಲೈಂಗಿಕ ಶೋಷಣೆಗೆ ಒಳಗಾದದ್ದು, ಜಮೀನ್ದಾರರು ಬಡವರನ್ನು ಹುರಿದು ಮುಕ್ಕಿದ್ದು, ಪುರೋಹಿತರು ಮಂತ್ರಬಲದಿಂದ ಮುಕ್ಕೋಟಿ ಶೂದ್ರರನ್ನು ಮುಷ್ಟಿಯಲ್ಲಿಟ್ಟುಕೊಂಡದ್ದು, ಮದುವೆ ಮನೆಯಿಂದಲೇ ಪದ್ಮಿನಿಯನ್ನು ಪೃಥ್ವೀರಾಜ ಹಾರಿಸಿಕೊಂಡು ಹೋದದ್ದು, ತಾಳೀಕೋಟೆಯ ಯುದ್ಧದಲ್ಲಿ ವಿಜಯನಗರದ ಕೊನೆಯ ಅರಸ ಪ್ರಾಣಕಳಕೊಂಡದ್ದು.. ಹೀಗೆ ಕಣ್ಮುಂದೆ ಕತೆಗಳು ಸಾಲುಸಾಲಾಗಿ ಹರಿದುಹೋದವು. ಅವುಗಳಲ್ಲಿ ಅವನಿಗೆ ಆಸಕ್ತಿ ಇರಲಾರದು ಅನ್ನಿಸಿತು.
ಅವನ ನಿರೀಕ್ಷೆ ನನ್ನನ್ನು ಕಂಗೆಡಿಸುತ್ತಿತ್ತು. ನಾನು ಕುತೂಹಲ ಹುಟ್ಟಿಸುವ ಏನನ್ನೋ ಹೇಳಲಿದ್ದೇನೆ ಎಂಬಂತೆ ಅವನು ಕಾಯುತ್ತಾ ಕೂತಿದ್ದ. ಅವನ ನಿರೀಕ್ಷೆಗೆ ಸಮನಾದದ್ದನ್ನು ನಾನು ಹೇಳದೇ ಹೋದರೆ ಅವನು ಎದ್ದು ಹೋಗುತ್ತಾನೆ ಮತ್ತು ಎಂದಿಗೂ ಮರಳಿ ನನ್ನ ಬಳಿ ಬರುವುದಿಲ್ಲ ಎಂಬ ಆತಂಕದಲ್ಲಿ ನಾನು ಕೂತಿದ್ದೆ. ನನ್ನ ನೆನಪುಗಳನ್ನು ಬಗೆಯುತ್ತಿದ್ದೆ. ಅವನನ್ನು ಹಿಡಿದಿಡಬಹುದಾದ ಕತೆಯೊಂದನ್ನು ಹುಡುಕುತ್ತಿದ್ದೆ.
ದೇವರ ಕತೆಗಳನ್ನು ಹೇಳುತ್ತೇನೆ ಎಂದು ಅವನ ಮುಖ ನೋಡಿದೆ. ಸಾಕಾಗಿ ಹೋಗಿದೆ. ದೇವರ ಕತೆಗಳೂ ಗೊತ್ತು, ವ್ಯಥೆಗಳೂ ಗೊತ್ತು. ನೂರಾರು ವರ್ಷಗಳಿಂದ ಅದನ್ನೇ ಕೇಳಿಕೊಂಡು ಬಂದಿದ್ದೇನೆ. ದೇವರು, ದೆವ್ವ, ಭೂತ, ಪ್ರೇತ, ಪಿಶಾಚಿಗಳೆಲ್ಲವೂ ಬೋರು ಹೊಡೆಸುತ್ತವೆ. ನಿನಗೆ ಗೊತ್ತಿಲ್ಲದ್ದರ ಬಗ್ಗೆ ಹೇಳಬೇಡ’ ಎಂದು ಅಸಹನೆಯಿಂದ ಹೇಳತೊಡಗಿದ. ನನಗೂ ಸಿಟ್ಟು ಬಂತು.
ಗೊತ್ತಿಲ್ಲದ್ದರ ಬಗ್ಗೆ ಹೇಳಿದರೇ ಅದು ಕತೆ. ಗೊತ್ತಿದ್ದದ್ದನ್ನು ಹೇಳಿದರೆ ಅದು ವರದಿ. ವರದಿ ಒಪ್ಪಿಸುವುದರಲ್ಲಿ ನನಗೆ ಆಸಕ್ತಿಯಿಲ್ಲ’ ಎಂದು ನಾನೂ ಗೊಣಗಿದೆ. ಇಂಥ ಸುಳ್ಳುಗಳನ್ನು ಹೇಳಿಕೊಂಡು ಬಹಳ ಕಾಲದಿಂದ ಬಚಾವಾಗುತ್ತಿದ್ದೀರಿ. ಕತೆ ಹೇಳುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕು, ಕತೆ ಒಳಗೆ ಹರಳುಗಟ್ಟಬೇಕು. ಒಂದು ಅನುಭವ ಕತೆಯ ರೂಪ ತಾಳುವುದಕ್ಕೆ ಕಾದು ಕೂರಬೇಕು. ಅದು ಸುಲಭದಲ್ಲಿ ಸಿದ್ಧಿಸುವ ಸ್ಥಿತಿಯಲ್ಲ’ ಎಂದು ಏನೇನೋ ಸುಳ್ಳುಗಳನ್ನು ಹೇಳುತ್ತಿದ್ದೀರಿ. ಎಲ್ಲವೂ ಬರೀ ಬೊಗಳೆ. ನಿಮಗೆ ಕತೆ ಹೇಳುವುದಕ್ಕೆ ಬರೋದಿಲ್ಲ, ಅಷ್ಟೇ ಸತ್ಯ’ ಎಂದು ಎಲ್ಲರ ಮೇಲೂ ಸಿಟ್ಟು ಕಾರಿಕೊಂಡ. ನಾನು ಅದನ್ನು ನಿರಾಕರಿಸುವ ಹಾಗಿರಲಿಲ್ಲ.
ಕತ್ತಲು ಮತ್ತಷ್ಟು ದಟ್ಟವಾಯಿತು. ಅವನು ಮತ್ತೊಮ್ಮೆ ಆಕಳಿಸಿದ. ಇನ್ನೇನು ಸ್ವಲ್ಪ ಹೊತ್ತಿಗೆಲ್ಲ ಅವನು ನಿದ್ದೆ ಹೋಗುತ್ತಾನೆ. ನನಗೂ ನಿದ್ದೆ ಬರುತ್ತದೆ. ನಾನು ಏಳುವ ಹೊತ್ತಿಗೆ ಅವನು ಎದ್ದು ಹೊರಟು ಹೋಗಿರುತ್ತಾನೆ. ಅವನು ಕಣ್ಮುಚ್ಚುವ ಮುಂಚೆ ಕತೆ ಹೇಳಬೇಕು. ಕತೆ ಹೇಳಿ ಅವನನ್ನು ಉಳಿಸಿಕೊಳ್ಳಬೇಕು ಎಂದು ನಾನು ಯೋಚಿಸುತ್ತಿದ್ದೆ.
ಯಾಕೋ ಅವನ ನಿರೀಕ್ಷೆ ಅತಿಯಾಯಿತು ಅನ್ನಿಸತೊಡಗಿತು. ನಾನೇಕೆ ಇಷ್ಟೊಂದು ಕಷ್ಟಪಟ್ಟುಕೊಂಡು ಅವನಿಗೆ ಕತೆ ಹೇಳಬೇಕು. ಅವನಿಗೆ ಕತೆ ಹೇಳುತ್ತೇನೆ ಅಂತೇನೂ ನಾನು ಮಾತು ಕೊಟ್ಟಿಲ್ಲವಲ್ಲ. ಅಷ್ಟಕ್ಕೂ ಕತೆ ಬೇಕಾಗಿರುವುದು ಅವನಿಗೆ. ಕತೆ ಹೇಳದೇ ನಾನು ಬದುಕಿರಬಲ್ಲೆ, ಕತೆ ಕೇಳದೇ ಅವನು ಬದುಕಿರೋದಕ್ಕೆ ಸಾಧ್ಯವಾ? ಯಾರಿಗೆ ಅದು ಜೀವನ್ಮರಣದ ಪ್ರಶ್ನೆ. ಯಾರ ತುರ್ತು ದೊಡ್ಡದು. ನನ್ನದೋ ಅವನದೋ?
ಹಾಗೆಲ್ಲ ಯೋಚಿಸುತ್ತಾ ಸಿಟ್ಟು ಉಕ್ಕತೊಡಗಿತು. ನಾನು ಇದೇ ಕತೆಯನ್ನು ಹೇಳೋದು. ಹೀಗೇ ಹೇಳೋದು. ಬೇಕಿದ್ದರೆ ಕೇಳಿಸಿಕೋ ಇಲ್ಲದೇ ಹೋದರೆ ಎದ್ದು ಹೋಗು ಎಂದು ಹೇಳಬೇಕು ಅನ್ನಿಸಿತು. ಅಷ್ಟೊಂದು ಸಿಟ್ಟು ಒಳ್ಳೆಯದಲ್ಲ ಎಂದು ವಿವೇಕ ಹೇಳಿತು. ಕತೆ ಹೇಳುವವನಿಗೆ ವಿವೇಕ ಇರಬೇಕಾ ಎಂದು ಮತ್ತೊಮ್ಮೆ ಅನ್ನಿಸಿತು. ವಿವೇಕವಂತ ಲೋಕಕ್ಕೆ ಇಷ್ಟವಾಗುವ ಸಂಗತಿಗಳನ್ನು ಹೇಳುತ್ತಾನೆ. ಜ್ಞಾನಿ ಪರಲೋಕ ಆಪ್ತವಾಗುವಂಥ ಸಂಗತಿಗಳನ್ನು ಹೇಳುತ್ತಾನೆ. ಅವರೆಲ್ಲರೂ ಸ್ವೀಕರಿಸಿದ ನಂತರ ಕೊಡಲು ಹೊರಟವರು. ಆದರೆ ನಾನು ಹಾಗಲ್ಲ, ನಾನು ಕತೆ ಹೇಳುವವನು. ಅಲ್ಲಿ ವಿವೇಕಕ್ಕಿಂತ ಕಲ್ಪನೆ ಹೆಚ್ಚಿಗಿರಬೇಕು. ಈ ಲೋಕದ, ಆ ಲೋಕದ ಕತೆಗಳನ್ನು ಹೇಳುವುದು ನನ್ನ ಕೆಲಸ ಅಲ್ಲ. ನಾನು ಮತ್ತೊಂದು ಲೋಕವನ್ನು ಸೃಷ್ಟಿಸಬೇಕು. ಆ ಲೋಕದಲ್ಲಿ ನಾನೂ ಅವನೂ ಇಬ್ಬರೇ ಇರಬೇಕು. ಉಳಿದವರೆಲ್ಲ ಹೊಸಬರಾಗಿ ಕಾಣಿಸಬೇಕು. ಅವನು ಕಂಡು ಮಾತಾಡಿದ ಜನರೂ ಅವನಿಗೆ ಅಪರಿಚಿತವಾಗಿ ಕಾಣಬೇಕು.
ಉತ್ತರ ದಿಕ್ಕಿನಿಂದ ಮಂಜುಗಡ್ಡೆಯ ಮೇಲೆ ಹಾದು ಬಂದ ಗಾಳಿ ನಮ್ಮಿಬ್ಬರನ್ನೂ ಸವರಿಕೊಂಡು ಹೋಯಿತು. ನಾನು ತತ್ತರಿಸಿಹೋದೆ. ಅವನು ಏನೂ ಆಗಿಲ್ಲವೆಂಬಂತೆ ಕೂತಿದ್ದ. ಅವನ ಇಡೀ ಭಂಗಿ ಒಂದೊಳ್ಳೇ ಕತೆ ಹೇಳು’ ಎಂದು ಬೇಡಿಕೊಳ್ಳುವಂತಿತ್ತು. ಅದು ಕೇವಲ ಬೇಡಿಕೆಯಲ್ಲ, ಆದೇಶ, ಆಜ್ಞೆ, ಕಟ್ಟಪ್ಪಣೆ ಎಂಬಂತೆ ನನಗೆ ಭಾಸವಾಯಿತು.
ನನ್ನ ದರ್ಪ, ಕತೆ ಹೇಳಬಲ್ಲೆ ಎಂಬ ಅಹಂಕಾರ, ಅವನನ್ನು ಮೆಚ್ಚಿಸುವುದು ಸುಲಭ ಎಂಬ ಉಡಾಫೆ ಎಲ್ಲವೂ ಆ ಕ್ಷಣ ಕರಗಿಹೋಯಿತು. ಅವನನ್ನು ಕತೆ ಹೇಳಿ ಮೆಚ್ಚಿಸಬೇಕು ಎಂಬ ಆಸೆ ಕೂಡ ಭಗ್ನವಾಯಿತು. ನೀನ್ಯಾರೋ ನನಗೆ ಗೊತ್ತಿಲ್ಲ ಎಂಬಂತೆ ನಾನೂ ಸ್ವಲ್ಪ ಹೊತ್ತು ಕೂತಿದ್ದೆ. ಆಕಾಶದಲ್ಲಿ ಚಂದ್ರನಿರಲಿಲ್ಲ. ನಕ್ಷತ್ರಗಳ ಬೆಳಕಲ್ಲಿ ಆಕಾಶ ಝಗಮಗಿಸುತ್ತಿತ್ತು.
ನನ್ನ ಮುಂದೆ ಅವನಿದ್ದಾನೆ ಅನ್ನುವುದನ್ನೆ ಮರೆತು ನಾನು ಕತೆ ಹೇಳಲು ಆರಂಭಿಸಿದೆ. ಅದು ನನ್ನ ಕತೆ ಅನ್ನುವ ಅರಿವೂ ನನಗಿರಲಿಲ್ಲ. ನನ್ನ ಅವಮಾನದ ಕ್ಷಣಗಳು, ಸಂಭ್ರಮದ ಗಳಿಗೆಗಳು, ಪ್ರೇಮಿದ ಪಿಸುಮಾತುಗಳು, ವಿರಹದ ತಲ್ಲಣಗಳು, ನೋಯಿಸಿದ ಘಟನೆಗಳು, ವಂಚನೆಯ ಪ್ರಕರಣಗಳು, ಸುಳ್ಳಿನ ಕಂತೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತಾ ಬಂದವು. ನಾನು ನಾನಾಗಿಬಿಟ್ಟಿದ್ದೆ ಹಾಗೂ ಅದನ್ನು ಮರೆತೂ ಬಿಟ್ಟಿದ್ದೆ.
ತನ್ಮಯನಾಗಿ ಕತೆ ಹೇಳುತ್ತಾ ಕುಳಿತವನು, ಅಚಾನಕ್ ಮುಂದೆ ಕಣ್ಣು ಹಾಯಿಸಿದರೆ ಅವನು ತನ್ನ ಇಡೀ ಬಳಗವನ್ನೇ ಕರೆದುಕೊಂಡು ಬಂದಿದ್ದ. ಅವನನ್ನೇ ಹೋಲುವ ಸಾವಿರ ಸಾವಿರ ಮಂದಿ ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಕೂತು ಕತೆ ಕೇಳಿಸಿಕೊಳ್ಳುತ್ತಿದ್ದರು.
ನಾನು ಭಯವಾಗಿ ಕಣ್ಮುಚ್ಚಿಕೊಂಡೆ. ಕತೆ ಮುಂದುವರಿಸಿದೆ.

Saturday, January 16, 2010

ಚಂದ್ರ

ನೋಡ
ನೋಡುತ್ತಿದ್ದಂತೆ ಇರುಳಾಗಿದೆ.
ಚಂದ್ರ ಸಪ್ಪೆಮೋರೆ
ಹಾಕಿಕೊಂಡು ಕಾಣಿಸಿಕೊಂಡ.
ಅವನ ಸುಳಿವೇ ಇಲ್ಲ.
ಸೌಗಂಧಿಕಾದ ಪರಿಮಳ
ತಣ್ಣನೆಯ ಗಾಳಿ, ಪಟಪಟಿಸುವ ರೆಕ್ಕೆ,
ಮಿಟುಕಿಸದೇ ದಿಟ್ಟಿಸುವ ಕಣ್ಣು
ಅವನು ಬರದ ಹಾದಿ.
ಬೆಳದಿಂಗಳೂ ಕಂಬನಿಯನ್ನು
ಒಣಗಿಸುತ್ತದೆ ಎಂದು
ದೇವರಾಣೆಗೂ ಗೊತ್ತಿರಲಿಲ್ಲ.

Sunday, January 10, 2010

ಅಹಂಕಾರ ಮಮಕಾರದ ನಡುವೆ ವಿಷ್ಣು ಏಕಾಂಗಿ

ನಮ್ಮಪ್ಪ ರಾಜ್‌ಕುಮಾರ್ ವಿರೋಧಿಯಾಗಿದ್ದವರು. ಸುಮಾರು ವರ್ಷ ಮದ್ರಾಸಿನಲ್ಲಿದ್ದ ಕಾರಣಕ್ಕೋ ಏನೋ ಅಪ್ಪಟ ಎಂಜಿಆರ್ ಅಭಿಮಾನಿ ಬೇರೆ. ನಮ್ಮೂರಿನಲ್ಲಿ ಎಂಜಿಆರ್ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ. ಮಂಗಳೂರಿಗೆ ಹೋಗಿಯಾದರೂ ಅಪ್ಪ ಎಂಜಿಆರ್ ಸಿನಿಮಾ ನೋಡಿ ಬರಬೇಕು. ನಮಗೋ ತಮಿಳು ಅರ್ಥವೇ ಆಗುತ್ತಿರಲಿಲ್ಲ. ಅಪ್ಪ ಮಾತ್ರ ನಾಡೋಡಿ ಮನ್ನನ್, ಎಂಗ ವೀಟ್ಟು ಪಿಳ್ಳೈ, ಅಡಿಮೈ ಪೆಣ್ ಎಂದು ಯಾವ್ಯಾವುದೋ ಸಿನಿಮಾದ ಹೆಸರು ಹೇಳುತ್ತಿದ್ದರು. ಅಡಿಮೈ ಪೆಣ್ ಮಾತ್ರ ಆಗ ನನಗೆ ಯಾವುದೋ ಅಶ್ಲೀಲ ಚಿತ್ರದ ಟೈಟಲ್ಲು ಅನ್ನಿಸಿಬಿಟ್ಟಿತ್ತು. ಆ ಟೈಟಲ್ಲನ್ನು ನಾನು ಕನ್ನಡದಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೂ ಅದು ಅಶ್ಲೀಲ ಅನ್ನಿಸುವುದಕ್ಕೆ ಕಾರಣವಿರಬಹುದು. ಹೀಗೆ ಎಂಜಿಆರ್ ಸಿನಿಮಾಗಳನ್ನು ನೋಡುತ್ತಿದ್ದ ಕಾರಣಕ್ಕೇ ಅವರಿಗೆ ರಾಜ್‌ಕುಮಾರ್ ಹೆಸರು ಕೇಳಿದರೆ ಕೆಂಡಕೋಪ. ಹೀಗಾಗಿ ನಮ್ಮನ್ನು ಅವರು ವಿಷ್ಣುವರ್ಧನ್ ಮತ್ತು ಶ್ರೀನಾಥ್ ಸಿನಿಮಾಗಳಿಗೆ ಮಾತ್ರ ಕರೆದೊಯ್ಯುತ್ತಿದ್ದರು. ಹೀಗಾಗಿ ನಾವು ಗೆಳೆಯರ ಜೊತೆ ಸಿನಿಮಾ ನೋಡುವುದಕ್ಕೆ ಶುರು ಮಾಡುವ ತನಕ ರಾಜ್‌ಕುಮಾರ್ ಸಿನಿಮಾಗಳನ್ನೂ ನೋಡಿರಲಿಲ್ಲ.
ಹೀಗಾಗಿ ಬಾಲ್ಯದಿಂದಲೇ ನಮಗೆ ವಿಷ್ಣುವರ್ಧನ್ ಅಂದರೆ ಅಚ್ಚುಮೆಚ್ಚು. ಬಂಧನ ಸಿನಿಮಾ ಬಿಡುಗಡೆಯಾಗುವ ಮೊದಲೇ ನನ್ನ ಗೆಳೆಯ ಸುಬ್ರಾಯ ನೂರೊಂದು ನೆನಪು, ಎದೆಯಾಳದಿಂದ’ ಚಿತ್ರದ ಹಾಡನ್ನು ಎಲ್ಲೋ ಕೇಳಿಕೊಂಡು ಬಂದು ಅದನ್ನು ಪರಮ ವಿಷಾದದಲ್ಲಿ ಹಾಡುತ್ತಿದ್ದ. ಆ ಸಿನಿಮಾ ಗೆಲ್ಲೋದಿಲ್ಲ ಎಂದೂ ವಿಷ್ಣುವರ್ಧನ್ ಕೊನೆಯಲ್ಲಿ ಸಾಯುವ ದೃಶ್ಯವಿದೆಯೆಂದೂ ಹೇಳುತ್ತಿದ್ದ. ನಾವೆಲ್ಲ ಸೇರಿ ಆ ಚಿತ್ರದ ನಿರ್ದೇಶಕರಿಗೆ ಪತ್ರ ಬರೆದು ವಿಷ್ಣುವರ್ಧನ್ ಸಾಯಕೂಡದು ಎಂದು ಹೇಳಬೇಕು ಎಂದೂ ನಿರ್ಧಾರ ಮಾಡಿದ್ದೆವು. ನಮ್ಮ ಅಸಂಖ್ಯಾತ ನಿರ್ಧಾರಗಳಂತೆ ಅದೂ ಕಾರ್ಯರೂಪಕ್ಕೆ ಬರಲಿಲ್ಲ. ಬಂಧನ’ ಗೆಲುವು ಕಂಡಿತು.
ಅದಕ್ಕೂ ಆರೇಳು ವರ್ಷ ಮುಂಚೆ ನಾವು ಉಪ್ಪಿನಂಗಡಿಯಲ್ಲೊಂದು ವಿಷ್ಣು ಅಭಿಮಾನಿ ಸಂಘ ಆರಂಭಿಸಿದ್ದೆವು. ಆ ಸಂಘದಲ್ಲಿದ್ದ ಸದಸ್ಯರು ಏಳು ಮಂದಿ ಎಂದು ನನಗೆ ನೆನಪು. ಅವರ ಪೈಕಿ ಸುಬ್ರಾಯ ಸಂಘದ ಅಧ್ಯಕ್ಷ. ಆಗ ಕೈಲಿ ದುಡ್ಡಿದ್ದದ್ದು ಅವನ ಬಳಿಯೇ. ಬರೆಯಲು ಗೊತ್ತಿದ್ದ ನಾನು ಕಾರ್ಯದರ್ಶಿ. ಉಳಿದವರು ಸಾಮಾನ್ಯ ಸದಸ್ಯರು. ನಾವೆಲ್ಲರೂ ದಕ್ಷಿಣ ಕನ್ನಡದಲ್ಲಿ ಎಲ್ಲೇ ವಿಷ್ಣುವರ್ಧನ್ ಸಿನಿಮಾ ಬಿಡುಗಡೆಯಾದರೂ ತಪ್ಪದೇ ಹೋಗಿ ನೋಡುತ್ತಿದ್ದೆವು. ಒಂದೇ ಗುರಿ’ ಸಿನಿಮಾ ಬಿಡುಗಡೆ ಆದಾಗ ನಾವೆಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಯಾಂಪಿನಲ್ಲಿದ್ದೆವು. ನಮ್ಮ ಮೇಷ್ಟ್ರು ನಮ್ಮನ್ನು ಕ್ಯಾಂಪಿನಿಂದ ಹೊರಗೆ ಹೋಗುವುದಕ್ಕೆ ಬಿಡುತ್ತಿರಲಿಲ್ಲ. ರಾತ್ರಿ ಹತ್ತು ಗಂಟೆಗೆ ತಾವೇ ಸ್ವತಃ ಪ್ರತಿಯೊಂದು ರೂಮಿಗೂ ಬಂದು ಹಾಜರಾತಿ ತೆಗೆದುಕೊಳ್ಳುತ್ತಿದ್ದರು. ಆ ರಾತ್ರಿ ಒಂಬತ್ತು ಗಂಟೆಗೆ ಅವರ ರೂಮಿಗೆ ಹೊರಗಿನಿಂದ ಬೀಗ ಜಡಿದು, ನಾವೊಂದಷ್ಟು ಮಂದಿ ಸಿನಿಮಾ ನೋಡೋದಕ್ಕೆ ಹೊರಟು ಹೋಗಿದ್ದೆವು. ನಡು ರಾತ್ರಿ ನಾವು ಮರಳುವ ಹೊತ್ತಿಗೆ ಆ ವಿಚಾರ ಎಲ್ಲರಿಗೂ ಗೊತ್ತಾಗಿತ್ತು. ನಮಗೆ ಸರಿಯಾಗಿ ಪೂಜೆ ಆಗುತ್ತದೆ ಎಂದುಕೊಂಡು ಉಳಿದ ಹುಡುಗರೆಲ್ಲ ಖುಷಿಯಾಗಿದ್ದರು. ನಾವು ಸಿನಿಮಾ ನೋಡಿದ ಹುಮ್ಮಸ್ಸಿನಲ್ಲಿ ಏನು ಮಾಡುತ್ತಾರೆ ಮಹಾ, ನಾಲ್ಕೇಟು ಹೊಡೀತಾರೆ ಅಷ್ಟೇ ತಾನೇ. ಹೆಚ್ಚೆಂದರೆ ಮನೆಗೆ ಕಳಿಸಬಹುದು’ ಎಂದೆಲ್ಲ ಮಾತಾಡಿಕೊಳ್ಳುತ್ತಾ ಕೂತಿದ್ದೆವು. ಅಷ್ಟು ಹೊತ್ತಿಗೆ ಮೇಷ್ಟ್ರು ನಮ್ಮನ್ನು ಅವರ ರೂಮಿಗೆ ಕರೆಸಿಕೊಂಡರು.
ಇನ್ನೇನು ಬೈಗಳು ಶುರು ಅಂದುಕೊಳ್ಳುತ್ತಿರುವಾಗ ಅವರು ನಮ್ಮನ್ನೆಲ್ಲ ಕೂರಿಸಿ ಹೇಗಿತ್ತು ಸಿನಿಮಾ, ಕತೆ ಏನು?’ ಎಂದು ಸಹಜವಾಗಿ ಕೇಳಿ, ಇಡೀ ಸಿನಿಮಾದ ಕತೆ ಕೇಳಿ ತಿಳಿದುಕೊಂಡು ಎಂಪಿ ಶಂಕರ್ ಕೂಡ ನಟಿಸಿದ್ದಾರೆ ಎಂದು ಖುಷಿಯಾಗಿ ರಾಮಕೃಷ್ಣ ಮತ್ತು ವಿಷ್ಣು ಹಾಡುವ ಈ ಭಾವಗೀತೆ ನಿನಗಾಗಿ ಹಾಡಿದೆ’ ಹಾಡಿನಿಂದ ಪುಳಕಿತರಾಗಿ ಇನ್ನೂ ಎಷ್ಟು ದಿನ ಓಡಬಹುದು ಎಂದು ತಿಳಿದುಕೊಂಡು, ನಂತರ ನಮ್ಮನ್ನು ಬೈದಂತೆ ನಟಿಸಿದ್ದರು.
******
ಬಿಗುಮಾನ, ಸಿಟ್ಟು, ಸಹನೆ, ನಗು, ನಿರ್ಲಕ್ಷ್ಯ, ವೈರಾಗ್ಯ, ಹಂಬಲ, ಕೀಳರಿಮೆ, ಆತಂಕ, ಭಯ, ಅಭಯ, ಹುಡುಕಾಟ- ಇಷ್ಟೂ ವಿಭಿನ್ನ ಭಾವಗಳನ್ನು ಬೆನ್ನಿಗೆ ಕಟ್ಟಿಕೊಂಡು ಗೊತ್ತಿಲ್ಲದ ಹಾದಿಯಲ್ಲಿ ಗೊತ್ತಿಲ್ಲದ ಊರಿಗೆ ಪ್ರಯಾಣ ಹೊರಟ ಅಪರಿಚಿತನಂತೆ ಕಾಣುತ್ತಿದ್ದ ವಿಷ್ಣುವರ್ಧನ್, ಬಹುಶಃ ಯಾರಿಗೂ ಇಡಿಯಾಗಿ ದಕ್ಕಲೇ ಇಲ್ಲ. ತುಂಬ ನಗಿಸುತ್ತಿದ್ದರು ಎಂದು ಅಂಬರೀಷ್, ಒಂಟಿಯಾಗಿರುತ್ತಿದ್ದರು ಎಂದು ಕೀರ್ತಿ, ಸಿಟ್ಟಿನಲ್ಲಿರುತ್ತಿದ್ದರು ಎಂದು ನಿರ್ದೇಶಕರು, ಯಾರಿಗೂ ಯಾವತ್ತೂ ಬೈದಿಲ್ಲ ಎಂದು ಡ್ರೈವರ್ ರಾಧಾಕೃಷ್ಣ, ಏನನ್ನೂ ಬಯಸುತ್ತಿರಲಿಲ್ಲ ಎಂದು ಅಡುಗೆಯ ಶ್ರೀಧರ್, ಎಂಬತ್ತೊಂದು ಲಕ್ಷಕ್ಕಿಂತ ಒಂದು ಪೈಸೆ ಕಡಿಮೆ ಆದ್ರೂ ಒಪ್ಪೋಲ್ಲ ಅಂತಿದ್ರು ಎಂದು ನಿರ್ಮಾಪಕ ಅವರನ್ನು ಬಗೆಬಗೆಯಾಗಿ ವರ್ಣಿಸುತ್ತಿದ್ದರು. ಪತ್ರಕರ್ತರು ಮೂಡಿ ಫೆಲೋ ಎಂದು ಬರೆದು ಸುಮ್ಮನಾಗುತ್ತಿದ್ದರು. ಬಾಲ್ಯದ ಗೆಳೆಯರು ವಿಷ್ಣು ಮೊದಲಿನಿಂದಲೂ ಹಾಗೇನೇ ಅಂತ ಫರ್ಮಾನು ಹೊರಡಿಸಿ, ಅದೊಂದು ಮಾತಾಡುವ ವಿಚಾರವೇ ಅಲ್ಲ ಎಂದು ತಳ್ಳಿ ಹಾಕುತ್ತಿದ್ದರು.
ಬೇಕು ಎಂದರೆ ಬೇಕು, ಬೇಡ ಎಂದರೆ ಬೇಡ ಎಂಬಂತೆ ಬದುಕಿದವರು ವಿಷ್ಣುವರ್ಧನ್. ಅವರಿಗೆ ತುಂಬ ಹತ್ತಿರವಾಗಲು ಯತ್ನಿಸಿ ಸೋತವರಿದ್ದಾರೆ. ಅವರ ಮನಸ್ಸೆಂಬ ಏಳು ಸುತ್ತಿನ ಕೋಟೆಯ ಕೊನೆಯ ಸುತ್ತನ್ನು ಹೊಕ್ಕವರು ಬಹುಶಃ ಯಾರೂ ಇರಲಿಕ್ಕಿಲ್ಲ. ಇನ್ನೇನು ವಿಷ್ಣುವರ್ಧನ್ ವಿಶ್ವರೂಪ ದೊರಕಿತು ಎನ್ನುವಷ್ಟರಲ್ಲಿ ಅವರು ಕಣ್ಮರೆಯಾಗುತ್ತಿದ್ದರು. ಮತ್ತೊಂದು ಬಾರಿ ಕಂಡಾಗ ಮತ್ತೆ ಮೊದಲನೆ ಬಾಗಿಲಿನಿಂದಲೇ ಆರಂಭಿಸಬೇಕು. ಹಳೆಯ ಮಾತುಗಳಿಗೆ ಅರ್ಥವಿಲ್ಲ. ಪರಿಚಯಕ್ಕೂ ಸ್ನೇಹಕ್ಕೂ ಸಂಬಂಧವಿಲ್ಲ. ಪ್ರತಿಬಾರಿಯೂ ಅವರೂ ಹೊಸಬರು, ಭೇಟಿಯಾಗಲೂ ಹೋದವನೂ ಹೊಸಬ. ಕೈಕುಲುಕಲು ಹಸ್ತ ಚಾಚಿದರೆ, ಕಿರುಬೆರಳನ್ನು ಮುಂದಕ್ಕೆ ಚಾಚುತ್ತಿದ್ದವರು ಅವರು.
ವಿಷ್ಣು ವಿರಕ್ತ ಎಂದು ಕರೆಯವುದು ಸರಿಯಲ್ಲ. ಅನುರಕ್ತ ಅನ್ನುವುದೂ ತಪ್ಪು. ಗುಂಪಿನಿಂದ ದೂರ ಉಳಿಯಲು, ಸಂಬಂಧಗಳಿಂದ ಪಾರಾಗಲು, ಹೊಸ ಸ್ನೇಹಿತರನ್ನು ದೂರವಿಡಲು ಅವರು ಸಾವಿರ ಕಾರಣಗಳನ್ನು ಹುಡುಕುತ್ತಿದ್ದರು. ಕೆಲವೊಮ್ಮೆ ಉತ್ಸಾಹ ಬಂದರೆ ತಾವೇ ಫೋನ್ ಮಾಡಿ ಕರೆಸಿಕೊಳ್ಳುವುದೂ ಇತ್ತು.
ಕನ್ನಡದ ನಟರಲ್ಲಿ ಸಾಮಾನ್ಯವಾಗಿರುವ ಒಂದು ದುರ್ಗುಣವನ್ನು ಇಲ್ಲಿ ಪ್ರಸ್ತಾಪಿಸಬೇಕು. ನನಗೆ ಪ್ರಚಾರ ಬೇಕಾಗಿಲ್ಲ. ನನ್ನ ಬಗ್ಗೆ ಯಾರೂ ಬರೆಯಬೇಕಾಗಿಲ್ಲ. ಬರೆದರೆ ನಾನು ಹೇಳಿದ್ದನ್ನು ಮಾತ್ರ ಬರೆಯಬೇಕು ಎಂದು ಅವರು ನಿರೀಕ್ಷಿಸುತ್ತಿದ್ದರು. ಕನ್ನಡದ ನಟರು ವಿಮರ್ಶೆಯನ್ನೂ ಕಿಂಚಿತ್ತೂ ಸಹಿಸುತ್ತಿರಲಿಲ್ಲ, ಈಗಲೂ ಸಹಿಸುವುದಿಲ್ಲ. ಅಷ್ಟೇ ಅಲ್ಲ, ಅವರಿಗೆ ತಾವು ನಟಿಸುತ್ತಿರುವ ಚಿತ್ರದ ಬಗ್ಗೆ ಮಾತಾಡಬೇಕು ಅಂತಲೂ ಅನ್ನಿಸುವುದಿಲ್ಲ. ತಾನು ನಟಿಸುತ್ತಿರುವ ಚಿತ್ರ ತನ್ನದು ಎಂಬ ಪ್ರೀತಿಯನ್ನು ಪ್ರಕಾಶ್ ರೈ, ಅವಿನಾಶ್, ರವಿಚಂದ್ರನ್, ರಮೇಶ್ ಮುಂತಾದ ಕೆಲವು ನಟರನ್ನು ಬಿಟ್ಟರೆ ಬೇರೆ ಯಾರಲ್ಲೂ ನಾನು ಕಂಡಿಲ್ಲ. ನಾವು ಮಾತಾಡುವುದು ನಿಮ್ಮ ಸೌಭಾಗ್ಯ ಎಂಬ ಧಾಟಿಯಲ್ಲೇ ಅವರು ಮಾತಾಡುತ್ತಿದ್ದರು. ಯಾವತ್ತೂ ತನ್ನ ಸಿನಿಮಾ ನೂರು ದಿನ ಓಡಿತು ಎಂಬ ಸಂತೋಷಕ್ಕೆ ಒಬ್ಬ ಕಲಾವಿದ ಎಲ್ಲರನ್ನೂ ಕರೆದು ಒಂದು ಪಾರ್ಟಿ ಕೊಟ್ಟದ್ದಿಲ್ಲ. ಸಂತೋಷಕೂಟಕ್ಕೆ ಕರೆದದ್ದಿಲ್ಲ. ಅದೇನಿದ್ದರೂ ನಿರ್ಮಾಪಕರ ಕರ್ಮ ಎಂದೇ ಅವರೆಲ್ಲ
ಭಾವಿಸಿಕೊಂಡಿದ್ದವರು.
ವಿಷ್ಣುವರ್ಧನ್ ಕೂಡ ಸಿನಿಮಾದ ವಿಚಾರಕ್ಕೆ ಬಂದರೆ ಹಾಗೇ ಇದ್ದವರು. ಮುಹೂರ್ತದ ದಿನವಾಗಲೀ, ಶೂಟಿಂಗ್ ರೌಂಡಪ್‌ಗೆ ಹೋದಾಗಲಾಗಲೀ, ಚಿತ್ರ ಬಿಡುಗಡೆಯ ನಂತರವಾಗಲೀ ಅವರು ಜಾಸ್ತಿ ಮಾತಾಡುತ್ತಿರಲಿಲ್ಲ. ಆದರೆ, ಕೆಲವೊಮ್ಮೆ ಸುಮ್ಮನೆ ಎಲ್ಲರನ್ನೂ ಕರೆದು ಜೊತೆಗೆ ಊಟ ಮಾಡೋಣ ಅನ್ನುತ್ತಿದ್ದರು. ಸಂಜೆ ಮನೆಗೆ ಬನ್ನಿ ಅಂತ ಕರೆದು ಒಳ್ಳೆಯ ಊಟ ಹಾಕಿಸುತ್ತಿದ್ದರು. ಆಮೇಲೆ ಎಷ್ಟೋ ದಿನಗಳ ತನಕ ಮಾತೇ ಇರುತ್ತಿರಲಿಲ್ಲ.
ವಿಷ್ಣುವರ್ಧನ್ ಹಾಗಾಗುವುದಕ್ಕೆ ಕಾರಣ ಅವರ ಮೇಲಿದ್ದ ಒತ್ತಡ ಅನ್ನುವವರಿದ್ದಾರೆ. ತನ್ನನ್ನು ಹೊರಗಿಡುವುದಕ್ಕೆ ಇಡೀ ಉದ್ಯಮ ಯತ್ನಿಸಿತು ಎಂಬ ಕೊರಗು ಅವರನ್ನು ಕೊನೇ ತನಕ ಕಾಡುತ್ತಿತ್ತು. ನಾನು ಮಾತಾಡುವುದಿಲ್ಲ, ಮಾತಾಡಿದರೆ ಎಂತೆಂಥಾ ಸತ್ಯಗಳು ಹೊರಬೀಳುತ್ತವೋ ಗೊತ್ತಿಲ್ಲ. ದೊಡ್ಡವರು ಅಂದುಕೊಂಡವರ ಬಂಡವಾಳ ಎಲ್ಲವನ್ನೂ ಹೊರಗೆ ಹಾಕಬಲ್ಲೆ. ಆದರೆ ನಾನು ಮಾತಾಡುವುದಿಲ್ಲ ಎಂದು ಗುರುಗಳಿಗೆ ಮಾತು ಕೊಟ್ಟಿದ್ದೇನೆ’ ಎಂದು ವಿಷ್ಣು ಅನೇಕ ಸಾರಿ ಹೇಳಿಕೊಂಡಿದ್ದರು.
ಅವರನ್ನು ನೂರೋ ನೂರೈವತ್ತು ಸಲವೋ ಭೇಟಿ ಮಾಡಿದ ಮೇಲೂ ಮೊದಲ ಸಾರಿ ಭೇಟಿಯಾದಾಗ ಎಲ್ಲಿರುತ್ತಿದ್ದೆವೋ ಅಲ್ಲೇ ಇರುತ್ತಿದ್ದೆವು. ಅವರಿಗೆ ಹತ್ತಿರಾಗುವ ಎಲ್ಲಾ ಹುನ್ನಾರಗಳೂ ವ್ಯರ್ಥ ಎನ್ನಿಸುತ್ತಿದ್ದವು. ಹತ್ತಿರವಾಗಿದ್ದೇವೆ ಅಂದುಕೊಂಡವರೂ ಕ್ರಮೇಣ ಇದು ತಮ್ಮಿಂದ ಸಾಧ್ಯವಾಗದ ಮಾತು ಎಂದು ದೂರ ಸರಿಯುತ್ತಿದ್ದರು. ಅದು ಕಲ್ಲುವೀಣೆಯನ್ನು ನುಡಿಸುವ ಪ್ರಯತ್ನದಂತೆ ಎಂಬುದು ನಿಧಾನವಾಗಿ ಅರಿವಾಗುತ್ತಾ ಹೋಗುತ್ತಿತ್ತು.
ಇತ್ತೀಚೆಗೆ ಅವರನ್ನು ನೋಡಿದಾಗ, ಸಿನಿಮಾ ಸಾಕು ಅನ್ನಿಸಿ ಬರೆಯುವುದಕ್ಕೆ ಶುರುಮಾಡಿದ್ದೇನೆ ಅಂದಿದ್ದರು ವಿಷ್ಣು. ತಡೀರಿ ತೋರಿಸ್ತೀನಿ ಎಂದು ಹೇಳಿ ರಾಧಾಕೃಷ್ಣನ ಹತ್ತಿರ ಸೂಟ್‌ಕೇಸ್ ತರಿಸಿ, ಅದರೊಳಗಿಂದ ಡೈರಿ ತೆಗೆಸಿ, ತಾವು ಬರೆದಿಟ್ಟ ಸಾಲುಗಳನ್ನು ತೋರಿಸಿದ್ದರು. ಅದರಲ್ಲಿ ಒಂದು ಸಾಲು ಹೀಗಿತ್ತು:
ಹಗಲಿಡೀ ಅಹಂಕಾರ, ಮನೆಗೆ ಬಂದೊಡನೆ ಮಮಕಾರ’
ಹಾಗಂದರೆ ಏನು ಅನ್ನುವುದನ್ನೂ ಅವರೇ ವಿವರಿಸಿದ್ದರು. ಇಡೀ ದಿನ ಹೊರಗಿರ್ತೀವಿ. ನಾನು ವಿಷ್ಣು, ನಾನು ಸಾಹಸಸಿಂಹ, ನನಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ, ನಾನು ಏನು ಬೇಕಾದರೂ ಮಾಡಬಲ್ಲೆ ಅನ್ನೋ ಅಹಂಕಾರ ಆವರಿಸಿಕೊಂಡಿರುತ್ತೆ. ಆದರೆ ಸಂಜೆ ಮನೆಗೆ ಬಂದಾಕ್ಷಣ ಅಹಂಕಾರ ಕರಗಿ ಮಮಕಾರ ಮೂಡುತ್ತೆ. ನನ್ನ ಮಕ್ಕಳು, ನನ್ನ ಮನೆಯವರು ಅನ್ನುವ ಭಾವನೆ ಮೂಡುತ್ತಿದ್ದಂತೆ ನಾನು ಅವರಂತೆಯೇ, ಅವರಿಗಿಂತ ಸಣ್ಣವನು ಎಂಬ ಭಾವನೆ ಮೂಡುತ್ತೆ ಎಂದಿದ್ದರು.
ಅಹಂಕಾರ ಮತ್ತು ಮಮಕಾರಗಳ ನಡುವೆ ಅವರು ಸದಾ ತುಯ್ದಾಡುತ್ತಿದ್ದರು ಎಂದು ಕಾಣುತ್ತದೆ. ಬಹುಶಃ ಎಲ್ಲಾ ಪ್ರತಿಭಾವಂತರದೂ ಇದೇ ಕತೆಯೇನೋ?
ವಿಷ್ಣು ಇನ್ನಿಲ್ಲ ಎಂಬುದು ನಾನು ಇತ್ತೀಚೆಗೆ ಕೇಳಿದ ನಂಬಲಾಗದ ಸತ್ಯಸುದ್ದಿಗಳಲ್ಲಿ ಒಂದು ಅನ್ನುವುದಂತೂ ನಿಜ.

Tuesday, January 5, 2010

ಒಳ್ಳೇ ಲೇಖಕ ಒಳ್ಳೇ ಮನುಷ್ಯನೂ ಆಗಿರ್ತಾನೆ ಅಲ್ವಾ?

ಎಲ್ಲವನ್ನೂ ಪ್ರೀತಿಯಿಂದ ನೋಡು; ಅನುಮಾನದಿಂದ ನೋಡು; ಉಡಾಫೆಯಿಂದ ನೋಡು; ಅಗೌರವದಿಂದ ನೋಡು; ಅಕ್ಕರೆಯಿಂದ ನೋಡು ಅಂದವರು ವೈಎನ್‌ಕೆ. ಒಮ್ಮೆ ಅವರು ಸಾಹಿತಿಯೊಬ್ಬರ ಬಗ್ಗೆ ಮಾತಾಡುತ್ತಾ ಅವನು ಕೆಟ್ಟ ಬರಹಗಾರ’ ಎಂದು ರೇಗಿದರು. ಆದರೆ ಒಳ್ಳೆ ಮನುಷ್ಯ’ ಅಂತ ನಾನು ವಾದಿಸಿದೆ. ನಾನು ಓದುಗ. ಅವನು ಒಳ್ಳೆ ಮನುಷ್ಯ ಅನ್ನಿಸಿಕೊಂಡು ನನಗೇನೂ ಆಗಬೇಕಾಗಿಲ್ಲ. ನನಗವನು ಒಳ್ಳೆಯ ಲೇಖಕ ಆಗಿರಬೇಕು ಅಷ್ಟೇ. ಕುರ್ಚಿ ಟೇಬಲ್ಲು ಮಾಡಿಸುವವನು ಒಳ್ಳೇ ಕಸಬುದಾರ ಬಡಗಿಗಾಗಿ ಹುಡುಕುತ್ತಾನೆಯೇ ಹೊರತು, ಅವನ ಒಳ್ಳೇತನವನ್ನು ನೋಡುವುದಿಲ್ಲ’ ಎಂದು ನನ್ನ ವಾದವನ್ನು ಸಾರಾಸಗಟು ತಿರಸ್ಕರಿಸಿದರು. ಲೇಖಕನಿಗೂ ಬರಹಕ್ಕೂ ಸಂಬಂಧ ಇಲ್ಲ. ಲೇಖಕ ಸತ್ತು ಹೋಗ್ತಾನೆ. ಮುಂದಿನ ತಲೆಮಾರಿಗೆ ಉಳಿಯೋದು ಬರಹ ಮಾತ್ರ. ಷೇಕ್ಸ್‌ಪಿಯರ್ ಒಳ್ಳೆಯವನೋ ಕೆಟ್ಟವನೋ ಅನ್ನೋದು ಯಾರಿಗೆ ಬೇಕು, ಕಾಳಿದಾಸ ಸಜ್ಜನನೋ ದುರ್ಜನನೋ ಅನ್ನೋದನ್ನು ಯಾರು ಕೇಳ್ತಾರೆ. ಒಳ್ಳೇತನ, ಕೆಡುಕು ನಮ್ಮ ಸುತ್ತಲಿರುವ ಹತ್ತಾರು ಮಂದಿಗೆ ತಿಳಿಯುತ್ತದೆ ಅಷ್ಟೇ. ಅದನ್ನು ಮೀರಿ ನಿಂತು ಬರೆಯೋದು ಕಲೀಬೇಕು ಎಂದು ಇಡೀ ದಿನ, ನೆನಪಾದಾಗ ಆದಾಗಲೆಲ್ಲ ಹೇಳುತ್ತಲೇ ಇದ್ದರು. ದೊಡ್ಡವರ ಸಣ್ಣತನ, ಸಣ್ಣವರ ದೊಡ್ಡತನ ಎರಡನ್ನೂ ಕೇಳಿ, ನೋಡಿ ಗೊತ್ತಿದ್ದವರು ಹೀಗೆ ಮಾತಾಡುವುದು ಕೇಳಿ ನನಗೆ ಆಶ್ಚರ್ಯವಾಗಿತ್ತು.
ತುಂಬ ವರ್ಷಗಳ ಕಾಲ ಅದರ ಬಗ್ಗೆಯೇ ಯೋಚಿಸಿದೆ. ಒಳ್ಳೆಯ ಲೇಖಕ, ಒಳ್ಳೆಯ ಮನುಷ್ಯ- ಇವೆರಡರ ನಡುವಿನ ಗೊಂದಲ ಆಗಲೂ ಪರಿಹಾರ ಆಗಿರಲಿಲ್ಲ. ಮುಂದೊಂದು ದಿನ ಪೂರ್ಣಚಂದ್ರ ತೇಜಸ್ವಿ ಸಿಕ್ಕಾಗ ಇದರ ಪ್ರಸ್ತಾಪ ಮಾಡಿದ್ದೆ: ಯಾಕೋ ಒಳ್ಳೆಯವನಾಗಬೇಕು ಅಂತ ಸಾಯ್ತೀಯಾ? ಹೋಗ್ಲಿ ಯಾರ ಕಣ್ಣಲ್ಲಿ ಒಳ್ಳೆಯವನಾಗ್ತೀಯ ಹೇಳು? ಒಬ್ಬರಿಗೆ ಬೇಕಾದೋನಾದ್ರೆ ಇನ್ನೊಬ್ಬರಿಗೆ ಬೇಡದೋನಾಗ್ತೀಯ? ಸುಮ್ನೆ ಬದುಕೋದು ಕಲಿ. ಬರೀಬೇಕು ಅನ್ನಿಸಿದಾಗ ಬರಿ. ತುಂಬ ಬರೀತೀಯಾ ಅಂತಾರೆ. ಅವರಿಗೇನು ಹೋಗಬೇಕು? ಈ ಓದುಗರು, ಪ್ರಿಂಟಿಂಗ್ ಉದ್ಯಮ, ಮಾರಾಟಜಾಲ, ಓದೋ ಹುಚ್ಚು ಎಲ್ಲಾ ನಿಂತಿರೋದು ತುಂಬಾ ಬರೆಯೋರಿಂದಲೇ. ವರ್ಷಕ್ಕೆ ಒಂದೇ ಪುಸ್ತಕ ಬರೀಬೇಕು. ಬುದ್ದಿವಂತರು ಮಾತ್ರ ಬರೀಬೇಕು ಅನ್ನೋ ಹಾಗಿದ್ರೆ ಸಂಸ್ಕೃತದ ಹಾಗೆ, ಕನ್ನಡವೂ ಯಾವತ್ತೋ ಸತ್ತು ಹೋಗ್ತಿತ್ತು’ ಅಂತ ಉಪದೇಶ ಮಾಡಿದರು.
ಒಳ್ಳೇ ಲೇಖಕ ಒಳ್ಳೇ ಮನುಷ್ಯನೂ ಆಗಿರ್ತಾನೆ ಅಲ್ವಾ?

Sunday, January 3, 2010

ಕಾವ್ಯವೀಗ ಮೃಣ್ಮಯ, ಬರುವನೇನು ಚಿನ್ಮಯ

ಕೊಳಲು ಕಳೆದುಹೋಗಿದೆ.

ಎನ್ನುವ ರೂಪಕವೂ ಒಡೆದು ಬಿದ್ದ ಕೊಳಲು ನಾನು ಎಂಬ ಅಡಿಗರ ಕವಿತೆಯ ಸಾಲೂ ನಾಲ್ಕೈದು ದಿನದಿಂದ ಪೀಡಿಸುತ್ತಿವೆ. ಅಶ್ವತ್ಥ ಕಾಯಿಲೆ ಬಿದ್ದಿದ್ದಾರೆ, ಅವರು ಬದುಕಿ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಗೊತ್ತಾದ ದಿನದಿಂದ ಕಾಡುತ್ತಿರುವ ಸಾಲುಗಳಿವು. ಅವರ ಕಣ್ಮರೆಗೂ ರೂಪಕವೊಂದು ಬೇಕಾ? ಯಾರದೋ ಕವಿತೆಯ ಸಾಲು ಬೇಕಾ?

ನಂಗೇನೂ ಬರೆಯೋದಕ್ಕೆ ತೋಚುತ್ತಿಲ್ಲ. ನನ್ನದೂ ಅವನದೂ ಖಾಸಗಿ ಅನುಭವಗಳು. ಏನಂತ ಹೇಳಲಿ, ಶೂನ್ಯ ಆವರಿಸಿಕೊಂಡಿದೆ. ಒಂದಕ್ಷರ ಬರೆಯೋದಕ್ಕೆ ಆಗ್ತಿಲ್ಲ. ಅದು ಈ ಕಾಲದ ಸಮಸ್ಯೆಯೋ ನನ್ನೊಳಗಿನ ಆತಂಕವೋ ಎಲ್ಲರೂ ಹೀಗೇ ಆಗಿದ್ದಾರೋ ಒಂದೂ ಗೊತ್ತಾಗುತ್ತಿಲ್ಲ. ಅತ್ಯಂತ ನಿರುತ್ಸಾಹದ ದಿನಗಳಿವು. ಅಶ್ವತ್ಥ್ ಹೋದ ದಿನ ಬೆಳಗ್ಗಿನಿಂದ ಸಂಜೆ ತನಕ ಅವನ ಮುಂದೆ ಕೂತಿದ್ದೆವು. ಅಷ್ಟೇ ನೆನಪಿರೋದು’ ಎಂದು ಗೆಳೆಯ ಸೂರಿ ಮನಸ್ಸಿನಲ್ಲಿರೋದಕ್ಕೆ ಮಾತು ಕೊಡಲಾರದೆ ಕೂತರು.

ಅಶ್ವತ್ಥ್ ನಮಗ್ಯಾರಿಗೂ ಕೇವಲ ಗಾಯಕರೋ ಸಂಗೀತ ನಿರ್ದೇಶಕರೋ ಸ್ವರ ಸಂಯೋಜಕರೋ ಆಗಿರಲಿಲ್ಲ. ಅವರೊಂದು ಪವಾಡ. ತಿಂಗಳಾನುಗಟ್ಟಲೆ ಫೋನೂ ಇಲ್ಲ, ಮಾತೂ ಇಲ್ಲ. ಯಾರು ಎಲ್ಲಿದ್ದಾರೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಫೋನೆತ್ತಿಕೊಂಡರೆ ನಾನ್ರೀ ಅಶ್ವತ್ಥ್’ ಎಂಬ ದೊರಗು ದನಿ. ನಿನ್ನೆ ಬಿಜಾಪುರಕ್ಕೆ ಹೋಗಿದ್ದೆ. ಅಲ್ಲಮನ ವಚನಗಳನ್ನು ಹಾಡಿದೆ. ಏನು ಜನ ಅಂತೀರಿ. ನಂಗೇ ಆಶ್ಚರ್ಯ ಆಗುತ್ತೆ. ಅಷ್ಟೊಂದು ಜನ ಹಾಡು ಕೇಳೋಕೆ ಬರ್ತಾರಾ ಅಂತ. ಮೂವತ್ತು ಸಾವಿರ ಜನ ಸೇರಿದ್ರು. ಕಾರ್ಯಕ್ರಮದ ಸ್ಥಳ ಬದಲಾಯಿಸಬೇಕಾಗಿ ಬಂತು. ಅದ್ಭುತ, ಅಶ್ವತ್ಥ್‌ಗೆ ಮಾತ್ರ ಇದು ಸಾಧ್ಯ’ ಅಂತ ತಾನು ಅಶ್ವತ್ಥ್ ಅಲ್ಲವೇನೋ ಎಂಬಂತೆ ಕಾರ್ಯಕ್ರಮದ ಸೊಗಸನ್ನು ವಿವರಿಸತೊಡಗುತ್ತಿದ್ದರು. ಬೇರೆ ಯಾರೇ ಅದನ್ನು ಹೇಳಿದರೂ ಅದು ತುತ್ತೂರಿ ಅನ್ನಿಸುತ್ತಿತ್ತು. ಆದರೆ ಅಶ್ವತ್ಥರು ಅದನ್ನು ಕೂಡ ಎಷ್ಟು ಸಹಜವಾಗಿ ಹೇಳುತ್ತಿದ್ದರೆಂದರೆ ಬೇರೆ ಯಾರೋ ಅದನ್ನು ಹೇಳುತ್ತಿದ್ದಾರೆ ಎಂಬ ಬೆರಗಲ್ಲಿ ನಾವು ಅದನ್ನು ಕೇಳಿಸಿಕೊಳ್ಳುತ್ತಿದ್ದೆವು.

ಅಶ್ವತ್ಥರ ಎಪ್ಪತ್ತನೆಯ ಹುಟ್ಟುಹಬ್ಬದ ಅಭಿನಂದನಾ ಗ್ರಂಥಕ್ಕೆ ಮತ್ತೊಬ್ಬ ಗೆಳೆಯ ಸುರೇಶ್ಚಂದ್ರ ಒಂದು ಲೇಖನ ಬರೆದುಕೊಟ್ಟಿದ್ದರು. ಅದನ್ನು ಓದಿದ್ದೇ ತಡ ಅಶ್ವತ್ಥ್ ಫೋನೆತ್ತಿಕೊಂಡರು. ಸುರೇಶ್ಚಂದ್ರ ಮೆಚ್ಚುಗೆಯ ಮಾತುಗಳ ನಿರೀಕ್ಷೆಯಲ್ಲಿದ್ದಿರಬೇಕು. ಅಶ್ವತ್ಥ್ ಸುರೇಶ್ಚಂದ್ರ. ನಿನ್ನ ಲೇಖನ ಬಂತು. ಓದಿದೆ. ತಿಪ್ಪೆಗೆ ಹಾಕೋದಕ್ಕೆ ಯೋಗ್ಯವಾಗಿದೆ. ಏನು, ಕಸದ ಬುಟ್ಟಿಗಲ್ಲ, ಸೀದಾ ತಿಪ್ಪೆಗೆ ಹಾಕಬೇಕು, ಹಾಗಿದೆ. ನನ್ನ ಬಯೋಡಾಟ ಬರೆಯೋದಕ್ಕೆ ನೀನು ಬೇಕೇನಯ್ಯ, ನಂಗೊತ್ತಿಲ್ವಾ ಅದು. ನಾನೇನು ಓದಿದ್ದೀನಿ, ಎಷ್ಟು ಕೆಸೆಟ್ ಮಾಡಿದ್ದೀನಿ. ಎಷ್ಟು ಸಿನಿಮಾ ಮಾಡಿದ್ದೀನಿ ಅಂತ ಅಂಕಿಅಂಶ ನೀನು ಕೊಡಬೇಕಾ’ ಎಂದು ಒಂದೇ ಸಮ ರೇಗಿ, ನಂತರ ಬೇರೆ ಬರೆದುಕೊಡು’ ಅಂದರು. ಸುರೇಶ್ಚಂದ್ರ ಮೂರು ದಿನಗಳ ನಂತರ ಮತ್ತೊಂದು ಲೇಖನ ಕಳಿಸಿಕೊಟ್ಟರು.

ಅದಾಗಿ ಒಂದು ವಾರಕ್ಕೆ ಯಾವುದೋ ಕಾರ್ಯಕ್ರಮದಲ್ಲಿ ಸುರೇಶ್ಚಂದ್ರ-ಅಶ್ವತ್ಥ ಎದುರಾದರು. ಅಶ್ವತ್ಥರು ತಕ್ಷಣವೇ ಸುರೇಶ್ಚ್ರಂದ್ರನನ್ನು ತಬ್ಬಿ ಮುದ್ದಾಡಿ, ಎಷ್ಟು ಚೆನ್ನಾಗಿ ಬರೀತೀಯೋ... ನಿಂಗೆ ಚೆನ್ನಾಗಿ ಬರೆಯೋ ಶಕ್ತಿ ಇದೆ. ಆದ್ರೆ ಅಶ್ವತ್ಥನಿಗೆ ಇಷ್ಟು ಸಾಕು ಅನ್ನೋ ಉಡಾಫೆ. ಅದೆಲ್ಲ ಆಗೋಲ್ಲ. ನೀನು ಚೆನ್ನಾಗಿ ಬರೀತೀಯ ಅಂತ ಗೊತ್ತಿದ್ದೇ ದಬಾಯಿಸ್ದೆ. ಈಗ ಬರೆದಿರೋದು ನೋಡು. ಅದ್ಭುತ’ ಎಂದು ಕೊಂಡಾಡಿದರು.
ಅದು ಅಶ್ವತ್ಥ್. ಸಿಟ್ಟೂ ಕ್ಷಣಿಕ, ಪ್ರೀತಿ ನಿರಂತರ. ತನ್ನ ಬಗ್ಗೆ ಬರೀಬೇಕು, ಮಾತಾಡಬೇಕು ಎಂಬ ಉತ್ಸಾಹದ ನಡುವೆಯೇ ಬರೆಯೋದು ಮುಖ್ಯ ಅಲ್ಲ ಅನ್ನುವುದೂ ಅವರಿಗೆ ಗೊತ್ತಿತ್ತು. ಜನಪ್ರಿಯನಾಗಬೇಕು ಅನ್ನುವ ಹಪಹಪಿಯ ಆಚೆಗೆ ಜನಪ್ರಿಯತೆ ಪೊಳ್ಳು ಅನ್ನುವುದನ್ನೂ ಅರ್ಥ ಮಾಡಿಕೊಂಡಿದ್ದರು. ಲಕ್ಷಾಂತರ ಮಂದಿಗೆ ಹಾಡಿದಷ್ಟೇ ಉತ್ಸಾಹದಿಂದ ನಾಲ್ಕೈದು ಮಂದಿಯ ಗುಂಪಿಗೂ ಹಾಡುತ್ತಿದ್ದರು. ಹಾಡು ಅವರ ಅಭಿವ್ಯಕ್ತಿ ಮಾಧ್ಯಮ. ಆಡಿದರೂ ಹಾಡಿದರೂ ಅದರಲ್ಲೊಂದು ಅಶ್ವತ್ಥ ಛಾಯೆ. ಅವರ್ಣನೀಯ ಕಾಂತಿ.
ಕನ್ನಡ ಕವಿತೆಗಳನ್ನು ಇಡೀ ನಾಡಿಗೆ ತಲುಪಿಸಿದ್ದು, ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದು, ಸಿನಿಮಾಗಳಿಗೆ ಸಂಗೀತ ನೀಡಿದ್ದು, ಮೈಸೂರು ಮಲ್ಲಿಗೆ ಮತ್ತು ಶಿಶುನಾಳ ಶರೀಫ ಎಂಬೆರೆಡು ಚಿತ್ರಗಳನ್ನು ತನ್ನ ಸಂಗೀತದ ಬಲದಿಂದಲೇ ಗೆಲ್ಲಿಸಿದ್ದು, ಅದೇ ಸಂಗೀತದ ಬಲದಿಂದ ಸಿಂಗಾರೆವ್ವ’ಳನ್ನು ಸೋಲಿಸಿದ್ದು- ಹೀಗೆ ಅವರದು ನಿರಂತರದ ಶ್ರದ್ಧೆ. ತಾನು ಮಾಡುತ್ತಿರುವುದು, ಹಾಡುತ್ತಿರುವುದು, ಆಡುತ್ತಿರುವುದು ಸರಿಯಾ ತಪ್ಪಾ ಎಂದು ಅವರು ಯಾವತ್ತೂ ವಿಮರ್ಶೆ ಮಾಡಿಕೊಂಡವರಲ್ಲ. ನಿಮಗೆ ಸಂಗೀತ ನಿರ್ದೇಶನ ಬರೋಲ್ಲ ಅಂದರೆ ನನ್ನದು ಸ್ವರ ಸಂಯೋಜನೆ ಅಂದರು. ಕವಿತೆಗಳನ್ನು ಹೀಗೆ ಹಾಡಬೇಕು. ಅಲ್ಲಿ ಲೆಕ್ಕಾಚಾರ ಮುಖ್ಯವಲ್ಲ. ಸ್ವರ ಪ್ರಸ್ತಾರ ಮುಖ್ಯವಲ್ಲ, ಲಯಬದ್ಧತೆ ಮುಖ್ಯವಲ್ಲ. ಹಾಡುವ ರೀತಿಯಲ್ಲಿ ಭಾವ ಹೊರಹೊಮ್ಮಬೇಕು. ದೂರದಿಂದಲೇ ಎಂಬ ಸಾಲನ್ನು ದೂsssssರದಿಂದಲೇ ಎಂದು ಹಾಡಬೇಕು. ಹಾಗೆ ಹಾಡುವಾಗಲೇ ಅದು ದೂರದಿಂದ ಎನ್ನುವುದು ಹೊಳೆಯಬೇಕು. ಆ ದೂರ ಈ ಕಾವ್ಯದಲ್ಲಿ ಮೈತಾಳಬೇಕು ಎಂದು ಪ್ರತಿಪಾದಿಸುವುದು ಅವರಿಗೆ ಗೊತ್ತಿತ್ತು. ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಎಂಬುದನ್ನು ಶಾಸ್ತ್ರೀಯವಾಗಿ ಹಾಡಿದಾಗ ಅಶ್ವತ್ಥ್ ಗೇಲಿ ಮಾಡುತ್ತಿದ್ದರು. ಬಾಗಿಲೊಳು ಕೈ ಮುಗಿದು ಒಳಗೆ ಬಾ ಅನ್ನುವುದನ್ನು ಎಷ್ಟು ನಿಧಾನವಾಗಿ ಹಾಡುತ್ತಾರೆ ಅಂದರೆ ಹೊರಗೆ ನಿಂತವನನ್ನು ಒಳಗೆ ಬರುವುದಕ್ಕೇ ಇವರು ಬಿಡುವುದಿಲ್ಲ ಎಂದು ಕಾಲೆಳೆಯುತ್ತಿದ್ದರು. ಶ್ರುತಿಯೇ ಇಲ್ಲ ಅಶ್ವತ್ಥರಿಗೆ ಎಂದು ಅವರು ರೇಗುತ್ತಿದ್ದರು. ಕಾವ್ಯ ಪ್ರೀತಿಯೇ ಇಲ್ಲ ಅವರಿಗೆ ಎಂದು ಅಶ್ವತ್ಥ್ ಗುಟುರು ಹಾಕುತ್ತಿದ್ದರು.

ಕನ್ನಡ ಕಾವ್ಯ ವಾಚಕರ ಕೈಗೆ ಸಿಕ್ಕಿ ಸೊರಗಿ, ತನ್ನ ಅರ್ಥಗಳನ್ನು ನೀಗಿಕೊಂಡು ಬೆಕ್ಕಸಬೆರಗಾಗಿ ನಿಂತ ದಿನಗಳಲ್ಲಿ, ಅದನ್ನು ಸಂಗೀತದ ಮೊರದಲ್ಲಿಟ್ಟು ರಸಿಕರಿಗೆ ಬಾಗಿನ ಕೊಟ್ಟವರು ಅಶ್ವತ್ಥ್. ಕೆ ಎಸ್ ನರಸಿಂಹಸ್ವಾಮಿ, ಬಿಆರ್ ಲಕ್ಷ್ಮಣರಾವ್, ಎಚ್ ಎಸ್ ವೆಂಕಟೇಶ ಮೂರ್ತಿ ಮುಂತಾದವರೆಲ್ಲ ಓದುಬಾರದ, ಓದಲಾಗದ ಮಂದಿಗೆ ದಕ್ಕಿದ್ದು ಅಶ್ವತ್ಥರಿಂದಲೇ. ಕಾವ್ಯಕ್ಕೆ ಇರುವ ಮೂವತ್ತಮೂರೂವರೆ ಓದುಗರ ಬಡಾವಣೆಯಿಂದ ಕವಿತೆಗಳು ಹೊರಬಂದದ್ದೇ ಆಗ.

ಅಶ್ವತ್ಥರು ಭಾವಗಾಯನ ಸಂಸ್ಥಾನದ ಕೊನೆಯ ಅರಸ. ಕಾಳಿಂಗರಾವ್, ಅನಂತಸ್ವಾಮಿ ಮತ್ತು ಅಶ್ವತ್ಥ್- ತಮ್ಮ ತಮ್ಮ ಜೀವಿತಾವಧಿಯಲ್ಲಿ ಕಾವ್ಯವನ್ನು ಪೊರೆಯುತ್ತಾ ಬಂದವರು. ಅಶ್ವತ್ಥರು ಒಂದು ಹೆಜ್ಜೆ ಮುಂದೆ ಹೋಗಿ, ಕವಿಗಳ ಜೊತೆಗೆ ಕೂತು ತಾವೇ ಹಠದಿಂದ ಕವಿತೆಗಳನ್ನು ಬರೆಸಿ ಸಂಗೀತ ಸಂಯೋಜಿಸಿ ಹಾಡಲು ಆರಂಭಿಸಿದರು. ಹೀಗಾಗಿ ಸಾಕಷ್ಟು ಕವಿತೆಗಳು ಅಶ್ವತ್ಥರಿಗಾಗಿಯೇ ಹುಟ್ಟಿಕೊಂಡವು, ಅಥವಾ ಬದಲಾವಣೆ ಕಂಡವು. ಲಕ್ಷ್ಮಣರಾವ್ ಅವರ ನವ್ಯ ಕವಿತೆಗಳು ಅಶ್ವತ್ಥರಿಗಾಗಿ ಲಯಬದ್ಧ ಸಾಲುಗಳಾದವು. ಕೃಷ್ಣನ ಮೇಲೆ ಎಚ್‌ಎಸ್‌ವಿ ಒಂದಷ್ಟು ಪದ್ಯಗಳನ್ನು ಬರೆದು ಅಶ್ವತ್ಥ್ ಮುಂದಿಟ್ಟರೆ, ಅಶ್ವತ್ಥರು ಅದನ್ನು ತೂಗುಮಂಚದಲ್ಲಿಟ್ಟು ತೂಗಿದರು. ರಾಗರಥದಲ್ಲಿಟ್ಟು ಬೀಗಿದರು.

ಒಂದೊಂದು ಸಾಲನ್ನೂ ಒಂದೊಂದು ಪದವನ್ನೂ ಹೇಳಿ, ಹೇಗಿದೆ ನೋಡಿ ಈ ಪದ ಎಂದು ಬೆರಗಾಗುತ್ತಾ ಆಗುತ್ತಾ ರಾಗಸಂಯೋಜನೆ ಮಾಡುವ ಶಕ್ತಿ ಅವರಿಗಿತ್ತು. ಅದು ಶಕ್ತಿಯಲ್ಲ, ಪ್ರೀತಿ. ಅವರಿಗೆ ಕವಿತೆ ತನ್ನ ರಾಗಕ್ಕೊಪ್ಪುವ ಪದಗಳ ನಿರರ್ಥಕ ಪುಂಜವಷ್ಟೇ ಆಗಿರಲಿಲ್ಲ. ತನ್ನನ್ನು ಆವಾಹಿಸಿಕೊಂಡು ರೂಪಾಂತರಗೊಳಿಸಬಲ್ಲ ಅಪೂರ್ವ ಶಕ್ತಿ ಕಾವ್ಯಕ್ಕಿದೆ ಎಂದು ಅವರಿಗೂ ಗೊತ್ತಿತ್ತು. ಸರಳವಾದ, ಕಳಪೆಯಾದ ರಚನೆಗಳು ಅವರ ಕೈಯಲ್ಲಿ ಯಾವತ್ತೂ ಅಪೂರ್ವ ತೇಜಸ್ಸನ್ನು ಪಡೆದುಕೊಳ್ಳುತ್ತಲೇ ಇರಲಿಲ್ಲ. ಒಂದು ಸಾರಿ ಒಬ್ಬರೇ ಕೂತು ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ’ ಹಾಡನ್ನು ಕೇಳಿನೋಡಿ. ಆ ಹಾಡು ನಿಮ್ಮಲ್ಲೂ ಸಂಭವಿಸದೇ ಹೋದರೆ ಅಶ್ವತ್ಥ್ ಹಾಡಿದ್ದೇ ಸುಳ್ಳು, ರಾಗ ಸಂಯೋಜನೆ ಮಾಡಿದ್ದೇ ಸುಳ್ಳು.

ಅಶ್ವತ್ಥ್ ನಂತರ ಯಾರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಫಲ್ಗುಣ, ಉಪಾಸನಾ ಮೋಹನ್ ಮುಂತಾದವರು ಭಾವಗೀತೆಯನ್ನು ಕಲಿಸುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ. ಎಂ. ಡಿ. ಪಲ್ಲವಿ ಕವಿತೆಯ ಅರ್ಥವನ್ನೆಲ್ಲ ಹೀರಿಕೊಂಡು, ತನ್ನೊಳಗೆ ಅದನ್ನು ರೂಪಾಂತರಿಸಿ ದಾಟಿಸುವ ಅಪರೂಪದ ಗಾಯಕಿಯಾಗಿದ್ದಾರೆ. ಹೊಸಬರೂ ಅಲ್ಲದ ಹಳಬರೂ ಅಲ್ಲದ ಯಶವಂತ್ ಹಳೀಬಂಡಿ, ಸುಪ್ರಿಯಾ ಆಚಾರ್ಯ, ದಿವ್ಯಾ ರಾಘವನ್ ಮುಂತಾದವರಿದ್ದಾರೆ. ಅವರನ್ನು ಮುನ್ನಡೆಸುವುದಕ್ಕೆ ಕಿಕ್ಕೇರಿ ಕೃಷ್ಣಮೂರ್ತಿಯಿದ್ದಾರೆ. ಗುರಿ ತೋರುವುದಕ್ಕೆ ಮುದ್ದು ಕೃಷ್ಣ ಇದ್ದಾರೆ.

ಆದರೆ ಇವರು ಯಾರೂ ಅಶ್ವತ್ಥರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರವಲ್ಲ. ಅವರೆಲ್ಲ ಅಶ್ವತ್ಥರ ಜತೆಗೇ ಹಾಡುತ್ತಿದ್ದವರು. ಅವರ ಸಮಕಾಲೀನರು. ಅಶ್ವತ್ಥರ ಪ್ರತಿಭೆಯನ್ನೂ ಮೀರಿಸಿದ ಜನಪ್ರಿಯತೆಯ ಪ್ರಭಾವಳಿಯನ್ನು ಮೀಟಿ ಹೊರಬರುವುದು ಇವರೆಲ್ಲರಿಗೂ ಕಷ್ಟದ ಕೆಲಸ. ಅಶ್ವತ್ಥರ ಪ್ರತಿಭೆಯನ್ನು ಹೋಲುವ ಯಾರೂ ಇಲ್ಲಿಲ್ಲ ಎಂದು ನಾವೆಲ್ಲ ನಂಬಿಕೊಂಡಾಗಿದೆ. ಅದು ಎಲ್ಲಾ ಕ್ಷೇತ್ರಗಳಲ್ಲೂ ಸಹಜ.

ಒಳ್ಳೆಯ ಕವಿತೆಯೊಂದನ್ನು ಓದಿದಾಗ ಅದನ್ನು ಯಾರಾದರೂ ಹಾಡಬೇಕಿತ್ತು ಎಂಬ ಭಾವವೇನೂ ನನ್ನಲ್ಲಿ ಮೂಡುವುದಿಲ್ಲ. ಆದರೆ ಮನಮುಟ್ಟುವಂತೆ ಹಾಡಿದಾಗ, ಈ ಕವಿತೆಯನ್ನು ನಾನು ಓದಿದ್ದೆ ಎಂಬುದು ನೆನಪಾಗುತ್ತದೆ. ಭಾವಪೂರ್ಣವಾಗಿ ಹಾಡಿ ನಮಗೆ ಆ ಕವಿತೆ ಓದುವಾಗ ಹೊಳೆದ ಅರ್ಥಕ್ಕಿಂತ ಹೆಚ್ಚಿನ ಅರ್ಥವನ್ನು ಹೊಳಯಿಸಿದರೆ ಸಂತೋಷವಾಗುತ್ತದೆ.

ಅಶ್ವತ್ಥರು ಎಷ್ಟೋ ಕವಿತೆಗಳಲ್ಲಿ ಅಂಥ ಪವಾಡ ಮಾಡಿದ್ದಾರೆ. ಚಂದ್ರನಲಿ ಚಿತ್ರಿಸಿದ ಚೆಲುವಿನನೊಳಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೇ’ ಎಂಬ ಸಾಲಿನ ಕೊನೆಗೆ ಪ್ರಶ್ನಾರ್ಥಕ ಚಿನ್ಹೆಯಿದೆಯಾ, ಆಶ್ಚರ್ಯ ಸೂಚಕ ಇದೆಯಾ, ಪೂರ್ಣ ವಿರಾಮ ಇದೆಯಾ ಎಂದು ಅಶ್ವತ್ಥರನ್ನೊಮ್ಮೆ ಕೇಳಿದ್ದೆ. ಅವರು ಆ ಮೂರೂ ಭಾವವೂ ಹೊರಹೊಮ್ಮುವಂತೆ ಆ ಸಾಲನ್ನು ಹಾಡಿ ತೋರಿಸಿದ್ದರು.

ಅದು ಅವರ ಕಾವ್ಯಪ್ರೀತಿ ಮತ್ತು ನಮ್ಮ ಕಾಲದ ಪುಣ್ಯ. ಸದ್ಯಕ್ಕಂತೂ ಕಾವ್ಯ ಮೃಣ್ಮಯ. ಅದನ್ನೆತ್ತಿಕೊಳುವ ಧೀರ ಬಂದಾಗ ಚಿನ್ಮಯ.

Tuesday, September 22, 2009

ಕಾವ್ಯ, ಆಧ್ಯಾತ್ಮ ಮತ್ತು ಒಂಚೂರು ಕಾಮ!

ದಿನನಿತ್ಯದ ಜಂಜಾಟಗಳಿಂದ ಪಾರಾಗುವುದಕ್ಕೆ ಇರುವ ಮಾರ್ಗಗಳು ಮೂರು; ಲೋಲುಪತೆ, ಕಾವ್ಯ, ಆಧ್ಯಾತ್ಮ. ಲೋಲುಪತೆಗೂ ಕಾವ್ಯಕ್ಕೂ ಹತ್ತಿರದ ಸಂಬಂಧವುಂಟು. ಹಾಗೆ ನೋಡಿದರೆ ಕಾವ್ಯವನ್ನು ಕಲೆಗೂ ವಿಸ್ತರಿಸಬಹುದು. ಆಧ್ಯಾತ್ಮಕ್ಕೂ ಕಲೆಗೂ ಹತ್ತಿರದ ಸಂಬಂಧವಿದೆ. ಲೋಲುಪತೆಯ ತುತ್ತುತುದಿಯಲ್ಲೇ ಆಧ್ಯಾತ್ಮದ ಕಿರಣವೊಂದು ಕಂಡು ನಮ್ಮನ್ನು ಬೆಚ್ಚಿ ಬೀಳಿಸಬಹುದು. ಅಥವಾ ಈ ಮೂಳೆ ಮಾಂಸದ ದೇಹದ ನಶ್ವರತೆ ಅರಿತವನು, ಅದನ್ನು ಬೇಕಾಬಿಟ್ಟಿ ಬಳಸಿ ಎಸೆದು ಹೋಗಬಹುದು. ಈ ದೇಹ ಮುಖ್ಯವಲ್ಲ, ಆತ್ಮ ಮುಖ್ಯ ಎಂದು ವಾದಿಸುವವನಿಗೆ ದೇಹದ ಬಗ್ಗೆ ಗೌರವವಾಗಲೀ, ಪ್ರೀತಿಯಾಗಲಿ ಇರುವುದಕ್ಕೆ ಸಾಧ್ಯವಿಲ್ಲವಲ್ಲ. ಅದೊಂದು ಆಯುಧ ಮಾತ್ರ. ಅದನ್ನೂ ಹರಿತವಾಗಿ ಇಟ್ಟುಕೊಂಡರೆ ಸಾಕು.
ಅಷ್ಟಕ್ಕೂ ಕಲೆ ಮತ್ತು ಆಧ್ಯಾತ್ಮದ ದಾಹ ನಿಜಕ್ಕೂ ನಮ್ಮನ್ನು ಅಷ್ಟೊಂದು ತೀವ್ರವಾಗಿ ಕಾಡುತ್ತದಾ? ಅದೊಂದು ಭ್ರಮಾಲೋಕಕ್ಕೆ ಒಯ್ದು ನಮ್ಮನ್ನು ಪಲಾಯನವಾದಿಗಳನ್ನಾಗಿಸುವ ಹುನ್ನಾರವಾ? ನಂಬದಿರು ಈ ದೇಹ ನಿತ್ಯವಲ್ಲ ಎಂದು ಹಾಡಿಕೊಳ್ಳುವ ಆಧ್ಯಾತ್ಮಕ್ಕೂ, ನಮ್ಮನ್ನು ನಮ್ಮ ಜಂಜಾಟಗಳಿಂದ ಅರೆಕ್ಷಣವಾದರೂ ಬಿಡುಗಡೆ ಮಾಡಿಸುವ ಕಲೆಗೂ ಎಷ್ಟು ಹತ್ತಿರದ ಸಂಬಂಧವಿದೆ ನೋಡಿ. ಸುಮ್ಮನೆ ನೆನಪಿಸಿಕೊಂಡರೆ ಹಳೆಯದೊಂದು ಜನಪದ ಗೀತೆ ನೆನಪಾಗುತ್ತದೆ:
ಸುಖ ಎಲ್ಲರಿಗೆಲ್ಲೈತವ್ವ
ದುಃಖ ತುಂಬ್ಯಾವ ಮನಶ್ಯಾದ ಮ್ಯಾಲ
ಎಂದು ಶುರುವಾಗುವ ಈ ಹಾಡಿನಲ್ಲಿ ಧರ್ಮರಾಯ ಕಾಡಿಗೆ ಹೋದದ್ದು, ರಾಮ ವನವಾಸಕ್ಕೆ ಹೋದದ್ದೆಲ್ಲ ಪ್ರಸ್ತಾಪವಾಗುತ್ತದೆ. ಅವರ ಗತಿಯೇ ಹೀಗಾದ ಮೇಲೆ ನಮ್ಮದೇನು ಎಂಬ ಅರಿವಿನಲ್ಲಿ ನಾವು ಬದುಕನ್ನು ಒಪ್ಪಿಕೊಳ್ಳುತ್ತಾ, ಸಹಿಸಿಕೊಳ್ಳುತ್ತಾ ಹೋಗುತ್ತೇವಾ? ಅದು ಕೂಡ ಒಂದು ರೀತಿಯಲ್ಲಿ ನಮಗೆ ನಂಬಿಕೆಯನ್ನು ಕೊಡುವಂಥ ಶಕ್ತಿಯಾ? ಅದರಾಚೆಗೂ ನಮ್ಮನ್ನು ಸಂತೋಷಪಡಿಸುವಂಥದ್ದು ಮತ್ತೇನಾದ್ರೂ ಇದೆಯಾ?
ಸಾಹಿತ್ಯವನ್ನು ಪ್ರಜ್ಞಾಪೂರ್ವಕವಾಗಿ ಓದುವವರ ಮಾತು ಬಿಟ್ಟುಬಿಡೋಣ. ಅದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾ, ಅದನ್ನು ಅರಿವಿಲ್ಲದೆಯೇ ತಮ್ಮ ಹಾಡಾಗಿ ಮಾಡಿಕೊಂಡವರು ಎಲ್ಲೆಂದರಲ್ಲಿ ಎದುರಾಗುತ್ತಾರೆ. ಲಂಕೇಶರ ಕಾದಂಬರಿಯಲ್ಲಿ ಸಾವಂತ್ರಿಯ ಅವ್ವ ಪಾಂಡವರ ಥರ ಹಾಳಾಗಿ ಹೋಗ್ತೀರಿ’ ಅಂತ ಬೈಯುವ ಪ್ರಸಂಗ ಬರುತ್ತದೆ. ಅದು ಆಕೆ ಅರ್ಥ ಮಾಡಿಕೊಂಡ ಮಹಾಭಾರತ. ಹೀಗೆ ಏಕಕಾಲಕ್ಕೆ ಆಧ್ಯಾತ್ಮವನ್ನೂ ಕಾವ್ಯವನ್ನೂ ನೀಡುತ್ತಾ ಬಂದಿರುವ ಉದಾಹರಣೆ ನಮಗೆ ಸಿಗುವುದು ಬಹುಶಃ ಭಾರತೀಯ ಸಾಹಿತ್ಯದಲ್ಲಿ ಮಾತ್ರವೇ ಏನೋ? ಮಹಾಭಾರತ ಮತ್ತು ರಾಮಾಯಣದ ಪಾತ್ರಗಳಷ್ಟೇ ಅಲ್ಲ, ಉಪನಿಷತ್ತಿನ ಕತೆಗಳಲ್ಲಿ ಬರುವ ನಚಿಕೇತನಂಥವರೂ ನಮ್ಮೆಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಕಲೆ, ನಾಟಕ, ಯಕ್ಷಗಾನ, ಗೀತೆ.
ದೇವರನ್ನು ಸ್ತುತಿಸುವ ಸ್ತೋತ್ರ ಮತ್ತು ಭಜನೆಗಳು ಕೂಡ ಕಾವ್ಯವಾಗಿಯೇ ನಮ್ಮನ್ನು ತಲುಪುತ್ತಾ ಹೋಯಿತು ಅನ್ನುವುದನ್ನೂ ನಾವು ಮರೆಯುವಂತಿಲ್ಲ. ಶೃಂಗಾರವಾಗಿಹುದು ಶ್ರೀಹರಿಯ ಮಂಚ ಎಂಬ ಪುರಂದರದಾಸರ ಭಜನಾಪದ ಯಾವ ಕವಿಗೂ ಕಡಿಮೆಯಿಲ್ಲದಂತೆ ರೂಪಕಗಳ ಮೂಲಕ ಹರಿಯ ಮಂಚವನ್ನು ವಿವರಿಸುತ್ತಾ ಹೋಗುತ್ತದೆ. ಏಕಕಾಲಕ್ಕೆ ಭಕ್ತಿ ಮತ್ತು ಕಾವ್ಯರಸ- ಎರಡರ ಅನುಭವವನ್ನೂ ಕೊಡುತ್ತವೆ.
ಇದು ಅಕ್ಷರ ಬಲ್ಲವರ ಮಾತಾಯಿತು. ಕಾವ್ಯಾಸ್ವಾದನೆಯಿಂದ ದೂರವೇ ಉಳಿದವರಿಗೆ ಇಂಥ ಪ್ರೇರಣೆ ಎಲ್ಲಿಂದ ಸಿಗುತ್ತದೆ. ಗುಡ್ಡಗಾಡುಗಳಲ್ಲಿ ಇದ್ದುಕೊಂಡು ಕವಿತೆ, ಹಾಡು, ಆಧ್ಯಾತ್ಮ ಮತ್ತು ಅಂಥ ಅನುಭವಗಳಿಂದ ದೂರ ಉಳಿದವರು ಹೇಗೆ ಅವನ್ನೆಲ್ಲ ತಮ್ಮದಾಗಿಸಿಕೊಳ್ಳುತ್ತಾರೆ. ತನಗೆ ಅನ್ನಿಸಿದ್ದನ್ನು ಹೇಳಿಕೊಳ್ಳಬೇಕು ಅನ್ನುವ ತುರ್ತು ಹುಟ್ಟುವುದು ಅಕ್ಷರಾಭ್ಯಾಸದ ಜೊತೆಗೇನಾ? ಹರಪ್ಪ ಮೊಹೆಂಜೋದಾರೋಗಳಲ್ಲಿ ಗೋಡೆಯ ಮೇಲೆ ಕೆತ್ತಿಟ್ಟ ಚಿತ್ರಗಳು ಹಾಗಿದ್ದರೆ ಏನು?
ಸುಮ್ಮನೆ ಯೋಚಿಸಿ ನೋಡಿ: ಏಕಾಂತದಲ್ಲಷ್ಟೇ ಸಾಧ್ಯವಾಗುವ ಕ್ರಿಯೆ ಬರಹ. ಒಂಟಿಯಾಗಿ ಕುಳಿತು ಬರೆದದ್ದನ್ನು ಮತ್ತೊಬ್ಬರು ಒಂಟಿಯಾಗಿದ್ದಾಗ ಓದಿಕೊಳ್ಳುತ್ತಾರೆ. ಹೀಗೆ ನಮ್ಮನ್ನು ಏಕಾಂಗಿಯಾಗಿ ಮಾಡಿಯೂ ಎಲ್ಲರ ಜೊತೆ ಬೆರೆಸುವ ಶಕ್ತಿ ಇರುವುದು ಬರಹಕ್ಕೆ ಮಾತ್ರ.
ಈ ಪವಾಡವನ್ನು ನೆನೆಯುತ್ತಾ ಕುಳಿತಾಗ ಹೊಳೆದದ್ದು ಈ ಪುಟ್ಟ ಪ್ರಸಂಗ:
ಅವನಿಗೆ ಇಪ್ಪತ್ತೊಂಬತ್ತು. ಇನ್ನೂ ಮದುವೆ ಆಗಿಲ್ಲ. ಅವನು ಬಾಲ್ಯದಲ್ಲಿ ನೋಡುತ್ತಿದ್ದ ಹುಡುಗಿಯರೆಲ್ಲ ದೊಡ್ಡವರಾಗಿ ಮದುವೆ ಮಾಡಿಕೊಂಡು ಪಟ್ಟಣ ಸೇರಿಕೊಂಡಿದ್ದಾರೆ. ಈತನಿಗೆ ಊರು ಬಿಟ್ಟು ಹೋಗುವ ಹಾಗಿಲ್ಲ. ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುವ ಅವನಿಗೆ ಅಲ್ಲಿ ಅಸಾಧ್ಯ ಗೌರವವಿದೆ. ಅವನ ಮಾತುಗಳನ್ನು ನಂಬುತ್ತಾರೆ. ಮಗಳ ಮದುವೆಗೆ ಹೊತ್ತು ಗೊತ್ತು ನೋಡಲು ಅವನಲ್ಲಿಗೆ ಜನ ಬರುತ್ತಾರೆ. ಆಗೆಲ್ಲ ಅವನಿಗೆ ತನಗಿನ್ನೂ ಮದುವೆ ಆಗಿಲ್ಲ ಎಂಬುದು ನೆನಪಾಗುತ್ತದೆ.
ಅವನ ಅಮ್ಮ ಅವನಿಗಾಗಿ ಹಲವಾರು ಹುಡುಗಿಯರನ್ನು ನೋಡಿ ಸೋತಿದ್ದಾರೆ. ಅವರ್ಯಾುರಿಗೂ ದೇವಾಲಯ ಅರ್ಚಕ ವೃತ್ತಿ ಮಾಡಿಕೊಂಡಿರುವ ಹುಡುಗ ಬೇಕಾಗಿಲ್ಲ. ಹಳ್ಳಿಯಲ್ಲಿದ್ದುಕೊಂಡು ಪೂಜೆ ಭಟ್ಟ ಎಂದು ಕರೆಸಿಕೊಳ್ಳುವ ಹುಡುಗನ ಜೊತೆ ಸಂಸಾರ ಮಾಡುವುದಕ್ಕೆ ಅವರ್ಯಾಲರಿಗೂ ಇಷ್ಟವಿಲ್ಲ.
ಇದರಿಂದ ಪಾರಾಗುವ ಏಕೈಕ ಉಪಾಯವೆಂದರೆ ಆತ ಅರ್ಚಕ ವೃತ್ತಿಯನ್ನು ಬಿಟ್ಟು ಬೇರೇನಾದರೂ ಮಾಡಬೇಕು. ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರಬೇಕು. ಆದರೆ ಅವನಿಗೆ ಅದು ಇಷ್ಟವಿಲ್ಲ. ಅವನು ಹೊರಟು ಹೋದರೆ ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ಯಾರೂ ಸಿಗುವುದಿಲ್ಲ ಎನ್ನುವುದು ಗೊತ್ತು.
ಹಾಗಿದ್ದರೂ ಅವನು ಊರು ಬಿಡುತ್ತಾನೆ. ನಗರ ಸೇರಿಕೊಂಡು ಒಂದು ಸಣ್ಣ ಸಂಸ್ಥೆಯಲ್ಲಿ ಸಣ್ಣದೊಂದು ಉದ್ಯೋಗ ಆರಂಭಿಸುತ್ತಾನೆ. ಐದಾರು ವರುಷಗಳಲ್ಲಿ ಕಂಪೆನಿ ಬದಲಾಯಿಸಿ ಕೈ ತುಂಬ ಸಂಬಳ ಬರುವ ಕೆಲಸ ಹಿಡಿಯುತ್ತಾನೆ. ಮೂವತ್ತನಾಲ್ಕನೆಯ ವಯಸ್ಸಿಗೆ ಅವನಿಗೆ ಮದುವೆಯಾಗುತ್ತದೆ.
ಮದುವೆಯಾಗಿ ಹೆಂಡತಿಯನ್ನು ಕರೆದುಕೊಂಡು ಅವನು ಹಳ್ಳಿಗೆ ಬಂದು ನೋಡಿದರೆ, ಅಲ್ಲಿನ ದೇವಸ್ಥಾನ ಪಾಳು ಬಿದ್ದಿದೆ. ಅವನು ಹೋದಾಗಿನಿಂದ ಆ ಗುಡಿಯಲ್ಲಿ ಪೂಜೆ ನಡೆಯುತ್ತಿಲ್ಲ. ತಾನು ಅರ್ಚಿಸುತ್ತಿದ್ದ ದೇವಾಲಯ ಪಾಳು ಬಿದ್ದದ್ದು ಅವನನ್ನು ಕಾಡತೊಡಗುತ್ತದೆ. ಮತ್ತೆ ಹಳ್ಳಿಯಲ್ಲೇ ಉಳಿಯುವ ನಿರ್ಧಾರ ಮಾಡುತ್ತಾನೆ. ಆದರೆ ಆ ನಿರ್ಧಾರವನ್ನು ಅವನ ಹುಡುಗಿ ಒಪ್ಪುವುದಿಲ್ಲ. ಮತ್ತೆ ಅವನು ನಗರಕ್ಕೆ ಮರಳಬೇಕಾಗುತ್ತದೆ.
ಆವತ್ತಿನಿಂದ ಅವನ ಕನಸಿನಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ. ಚಿತ್ರವಿಚಿತ್ರವಾದ ಕನಸುಗಳು ಬೀಳತೊಡಗುತ್ತವೆ. ಅನಾಥನಾಗಿ ಕುಳಿತ ಜನಾರ್ದನಸ್ವಾಮಿ ಮತ್ತೆ ಮತ್ತೆ ಕಾಡುತ್ತಾನೆ. ಮದುವೆಯಾಗಬೇಕು ಎಂಬ ಏಕೈಕ ಆಸೆಯಿಂದಾಗಿ ಭಗವಂತನನ್ನು ಬಿಟ್ಟು ಬಂದೆ ಎಂಬ ಪಾಪಪ್ರಜ್ಞೆಯಿಂದ ನರಳುತ್ತಾನೆ.
ದೇವರು ಮುಖ್ಯವಾ ಸಂಸಾರ ಮುಖ್ಯವಾ ಎಂಬ ಪ್ರಶ್ನೆ ಕಾಡತೊಡಗುತ್ತದೆ. ದಾಂಪತ್ಯ ಸಾಧ್ಯವಾಗುವುದಿಲ್ಲ. ರಾತ್ರಿ ಮಲಗಿದಾಗೆಲ್ಲ ದೇವರ ಮುಖವೇ ಕಣ್ಮುಂದೆ ಬರುತ್ತದೆ. ಒಂದು ಬಗೆಯ ಅತಂತ್ರ ಸ್ಥಿತಿ ಅವನನ್ನು
ಆವರಿಸಿಕೊಳ್ಳುತ್ತದೆ. ಒಂದು ಬೆಳಗ್ಗೆ ಅವನು ಇದ್ದಕ್ಕಿದ್ದಂತೆ ಹೊರಟು ಹಳ್ಳಿಗೆ ಬಂದು ದೇವಸ್ಥಾನದ ಬಳಿಗೆ ಬರುತ್ತಾನೆ. ಅದನ್ನು ಚೊಕ್ಕಟ ಮಾಡಿ ಮತ್ತೆ ಪೂಜೆ ಆರಂಭಿಸುತ್ತಾನೆ.
ಅಷ್ಟು ಹೊತ್ತಿಗೆ ಹಳ್ಳಿಯ ಮಂದಿ ದೇವರನ್ನು ಮರೆತಿದ್ದಾರೆ. ಗುಡಿಗೆ ಬರುತ್ತಿದ್ದ ಹಿರಿಯರ ಪೈಕಿ ಅನೇಕರು ತೀರಿಕೊಂಡಿದ್ದಾರೆ. ಉಳಿದವರು ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ. ನಂತರದ ತಲೆಮಾರಿಗೆ ಸೇರಿದವರಿಗೆ ದೇವರು ಬೇಕಾಗಿಲ್ಲ. ದೇವರಿಲ್ಲದ ಜಗತ್ತಿನಲ್ಲಿ ಬದುಕುತ್ತಿರುವವರ ಮಧ್ಯೆ ದೇವರಿಗಾಗಿ ಬದುಕು ಬಿಟ್ಟು ಬಂದ ಅವನು ವಿಚಿತ್ರವಾಗಿ ವಿಕ್ಷಿಪ್ತನಂತೆ ಹುಚ್ಚನಂತೆ ಕಾಣತೊಡಗುತ್ತಾನೆ.
ಅವನನ್ನು ಕಂಡಾಗ ನನಗೆ ಹಲವಾರು ಅನುಮಾನಗಳು ಮೂಡಿದವು. ಅರ್ಚಕವೃತ್ತಿ ಅವನಿಗೆ ಅನಿವಾರ್ಯವಾಗಿತ್ತಾ? ಅವನು ದೇವರನ್ನು ಪೂಜಿಸುತ್ತಿದ್ದದ್ದು ಭಕ್ತಿಯಿಂದಲೇ? ಅಭ್ಯಾಸ ಬಲದಿಂದಲೇ? ಆ ಮಟ್ಟಿಗೆ ಏಕಾಗ್ರತೆ ಅವನಿಗೆ ನಿಜಕ್ಕೂ ಸಾಧ್ಯವಾಗಿತ್ತಾ? ಅವನನ್ನು ಮತ್ತೆ ಅಲ್ಲಿಗೆ ಎಳೆತಂದದ್ದು ವೃತ್ತಿಯಲ್ಲಿರುವ ಸುಖವಾ? ಸಂಸಾರದ ದುಃಖವಾ?
ಇಂಥ ವಿಚಿತ್ರಗಳಿಗೆ ನಮ್ಮಲ್ಲಿ ಸುಲಭವಾಗಿ ಉತ್ತರ ಸಿಗುವುದಿಲ್ಲ. ನಡವಳಿಕೆಗಳಿಗೆ ಉತ್ತರ ಹುಡುಕುತ್ತಾ ಹೋಗುವುದು ಕೂಡ ಕಷ್ಟ. ನಾನು ಬಲ್ಲ ಹುಡುಗನೊಬ್ಬ ಬಾಲ್ಯದ ಸಂಗತಿಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದನ್ನು ನಾನು ನೋಡಿದ್ದೆ. ಅವನು ಅದರಿಂದ ಬಿಡಿಸಿಕೊಳ್ಳಲು ಇವತ್ತಿನ ತನಕವೂ ಸಾಧ್ಯವಾಗಿರಲೇ ಇಲ್ಲ.
ನಾನು ಮತ್ತು ಗೆಳೆಯ ಕುಂಟಿನಿ ಇತ್ತೀಚೆಗೆ ಮಾತಾಡುತ್ತಾ ಕೂತಿದ್ದೆವು. ನಮ್ಮ ನೆನಪುಗಳಿಗೆ ಹೇಗೆ ವಯಸ್ಸಾಗುವುದಿಲ್ಲ ಎಂದು ಯೋಚಿಸುತ್ತಿದ್ದೆವು. ಪಿಯೂಸಿ ಓದುತ್ತಿದ್ದಾಗ ನಮ್ಮ ಕಣ್ಣೆದುರು ಸುಳಿದಾಡಿ ಒಂಥರ ಖುಷಿ ಕೊಡುತ್ತಿದ್ದ ನಮ್ಮ ತರಗತಿಯ ಹುಡುಗಿಯನ್ನು ನಾವು ಆಮೇಲೆ ಭೇಟಿಯಾಗಲೇ ಇಲ್ಲ. ಆದರೆ ಈಗಲೂ ಅವಳ ಅದೇ ಮುಖ ಕಣ್ಮುಂದೆ ಸುಳಿಯುತ್ತದೆ. ಆಕೆಗೆ ನಮ್ಮ ನೆನಪಿನಲ್ಲಿ ವಯಸ್ಸೇ ಆಗಿಲ್ಲ. ಈಗಲೂ ಅವಳ ಹೊಳೆಯುವ ಕಣ್ಣುಗಳು, ಮೊಡವೆ ಮೊಳೆಯುತ್ತಿದ್ದ ಮುಖ, ತುಟಿಯಂಚಿನಲ್ಲಿ ಕಂಡೂ ಕಾಣದಂತಿದ್ದ ನಗು ಯಾವುದನ್ನೂ ಕಾಲ ಅಳಿಸಿಹಾಕಿಲ್ಲ. ಬಹುಶಃ ಆಕೆಯನ್ನು ಮತ್ತೆ ಎದುರಾದರೆ ನೆನಪು ಮತ್ತು ವಾಸ್ತವ ಮುಖಾಮುಖಿಯಾಗಬಹುದೋ ಏನೋ?
ಎಂದೋ ಓದಿದ ಪುಸ್ತಕ, ಯಾವತ್ತೋ ಕೇಳಿದ ಕವಿತೆ, ಎಲ್ಲೋ ಕಂಡ ಮುಖ, ಅಪರಾತ್ರಿಯಲ್ಲಿ ಸುರಿದ ಮಳೆ, ಎಲ್ಲೋ ಆದ ಅವಮಾನ ಇವೆಲ್ಲವೂ ಹೀಗೆಯೇ. ನಮ್ಮ ಮನಸ್ಸಿನೊಳಗೆ ಕೂತು ನಮ್ಮನ್ನು ಮುದಗೊಳಿಸುತ್ತಾ, ಗಾಬರಿ ಬೀಳಿಸುತ್ತಾ, ಎಚ್ಚರಿಸುತ್ತಾ, ತಲ್ಲಣಕ್ಕೆ ತಳ್ಳುತ್ತಾ ಇರುತ್ತದೆ. ಅದರ ಮಧುರ ನೆನಪಿನಲ್ಲಿ ನಾವು ಕಳೆದುಹೋಗುತ್ತೇವೆ.
ಅದು ಎಲ್ಲರಿಗೂ ಹಾಗಾಬೇಕು ಅಂತೇನಿಲ್ಲ. ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಎಂಬ ಸಾಲನ್ನು ನಾನು ಮೆಚ್ಚಿಕೊಂಡಾಡುತ್ತಿರುವ ಹೊತ್ತಿಗೇ, ಹೊಸ ತಲೆಮಾರಿನ ಹುಡುಗಿ ಹೇಳಿದಳು; ಎಲ್ಲಿದೆ ಸಾರ್ ಮೌನ. ಭೇಟಿ ಆಗೋದಕ್ಕೆ ಮುಂಚೇನೇ ಗಂಟಾನುಗಟ್ಟಲೆ ಮಾತಾಡಿರ್ತೀನಿ. ನೋಡಿರ್ತೀನಿ, ಜೊತೆಗೇ ಓಡಾಡಿರ್ತೀನಿ. ಮತ್ತೆ ಮೌನ ಎಲ್ಲಿ, ಅಳುವೆಲ್ಲಿ? ಅದಕ್ಕೆ ಅವಳ ಅಕ್ಕ ಹೇಳಿದಳಂತೆ: ಮೊದಲ ಸಾರಿ ಎಲ್ಲಿ ಭೇಟಿಯಾಗ್ತೀವೋ ಅಲ್ಲಿ ಮೌನ ಇರುತ್ತೆ. ಇರೋಲ್ಲ, ಇರುತ್ತೆ ಅಂತ ಅವರಿಬ್ಬರೂ ಮಾತಾಡಿಕೊಂಡರಂತೆ.
ಅಷ್ಟಕ್ಕೂ ಮೌನ ಮತ್ತು ತುಟಿಗೆ ಬಂದ ಅಳು ಒಳಗೆಲ್ಲೋ ಇದ್ದರೆ ಸಾಕು. ಅದು ಅವನನ್ನು ಭೇಟಿಯಾದಾಗ ಎದುರಾಗುವ ಮೌನವಲ್ಲವೇ ಅಲ್ಲ. ನಾವಿದ್ದ ಪರಿಸರ, ಪರಿಸ್ಥಿತಿ ಎರಡೂ ಬದಲಾದಾಗ ತುಂಬಿಕೊಳ್ಳುವ ಅಗತ್ಯ ಅನಿವಾರ್ಯ ಮೌನ ಅಲ್ಲವೇ ಎಂದು ಯೋಚಿಸತೊಡಗಿದೆ.
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು ಕೇಳಿಸದೇ ಹೋದರೆ ಎಂದು ಭಯವಾಗತೊಡಗಿತು.